ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 22 May, 2008

ಧಾರಿಣಿಗೆ....

Sunday, January 27, 2008

[ಹಿಂದಿನ ಕವನ "(ಅನು)ಕಂಪನ" ಬರೆದ ಎರಡು ದಿನಗಳಲ್ಲೇ ಹುಟ್ಟಿಕೊಂಡದ್ದು...]

ವಿಜ್ಞಾನ ಯುಗಧರ್ಮವಾಗಿರುವುದೀಗ-
ಸುಜ್ಞಾನದರ್ಥವೂ ಕಳೆದು ಹೋದಾಗ;
'ಅಜ್ಞಾನಿ'ಗಿರುವಂಥ ಮೃದು ಮಾತು-ನಡತೆ-
ಈ 'ಜ್ಞಾತ'ಗಿಲ್ಲದಿರಲದುವೆ ಬಹು ಕೊರತೆ.

'ನಾ ಬಲ್ಲೆಯೆಲ್ಲವನು' ಎಂಬ ಹೆಗ್ಗಳಿಕೆ,
'ಈ ಬುವಿಯು ತನದು' ಎಂಬ ಅಗ್ಗಳಿಕೆ,
ಅಬ್ಬರದ ಆವೇಶ, ಮನದೊಳಗೆ ರೋಷ,
ದುರ್ಭರವು ಸೌಜನ್ಯ, ಯಾರದೀ ದೋಷ?

ಅಣುಯುಗದ ಅಂಚಲ್ಲಿ ನವ ಸಹಸ್ರಮಾನ,
ಕಣ್ಣ ಪರಿಧಿಯ ಅಳತೆ ಮೀರಿದ ಯಾನ,
ಸಣ್ಣದೆನಿಸಿದೆ ವಿಶ್ವ, ನೀನು ಸಣ್ಣವಳೆ?
ಕಣದೊಳಗೂ ಕಂಡಿಹರು, ಕಂಡಿಲ್ಲ ನಾಳೆ!

ಅಮ್ಮನೆಂದು, ದೇವಿಯೆಂದು ಕರೆದೆವು ನಿನ್ನ,
ನಮಿಸಿ, ಪೂಜಿಸಿ ಇತ್ತೆವು ಪರಶು-ಗುದ್ದಲಿಯನ್ನ,
ದಿಮ್ಮಿಯಲಿ ಗೊಂಬೆ ಕೊರೆದು ಪೀಠವೇರಿಸಿದೆವು
ಧರ್ಮದಾಂತರ್ಯವನು ಅರಿಯದೇ ನಡೆದೆವು.

'ಬಹಳವಾಯ್ತೀ ಮೌನ' ಎಂದು ನಿರ್ಧರಿಸಿ,
ಸಹನೆ ಕಟ್ಟೆಯ ಬಿರುಕ ಮತ್ತಷ್ಟು ಬಿರಿಸಿ,
ಮಹತ್ತಾದ ಹೊರೆಭಾರದಿಂದೊಮ್ಮೆ ನಡುಗಿ,
'ಅಹಮಿಕೆ'ಯ ಅನರ್ಥ ತೋರಿದೆ ಗುಡುಗಿ.

ಬಡತನದ ಬವಣೆಗೆ ಬಳಲಿದೆಯ ಬೆಂದು?
ಕೆಡುತನದ ಕೀಳ್ಗತೆಗೆ ತೊಳಲಿದೆಯ ನೊಂದು?
ಅಡಗಿಸಿದೆ ಉಡಿಯಲ್ಲಿ, ಮಾತೃ ಮಾತ್ಸಲ್ಯವೆ?
ಉಡುಗಿಸಿದೆ ಆಟೋಪ, ಕಡೆಗಣಿಸಿ ಒಲವು.
(೩೧-ಜನವರಿ-೨೦೦೧)
(೨೬-ಜನವರಿ-೨೦೦೧-ರಂದು ಗುಜರಾತನ್ನು ನಡುಗಿಸಿದ ಭೂಕಂಪದ ಹಿನ್ನೆಲೆಯಲ್ಲಿ)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 11:25 PM
Labels:

10 ಪತ್ರೋತ್ತರ:

Nagesamrat said...
ನಗುವು ಸಹಜದ ಧರ್ಮ ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
ವಿಳಾಸ: http://nagenagaaridotcom.wordpress.com/ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.
ನಗೆ ಸಾಮ್ರಾಟ್
January 28, 2008 3:00 AM

ಸಿಂಧು Sindhu said...
...'ನಾ ಬಲ್ಲೆಯೆಲ್ಲವನು' ಎಂಬ ಹೆಗ್ಗಳಿಕೆ,
'ಈ ಬುವಿಯು ತನದು' ಎಂಬ ಅಗ್ಗಳಿಕೆ,
ಅಬ್ಬರದ ಆವೇಶ, ಮನದೊಳಗೆ ರೋಷ,
ದುರ್ಭರವು ಸೌಜನ್ಯ, ಯಾರದೀ ದೋಷ?...

ಎಷ್ಟು ಅರ್ಥಪೂರ್ಣ ಸಾಲುಗಳು. ಭೂಕಂಪನದ ಭೀಕರನೆನಪುಗಳಿಗಿಂತಲೂ ನಮ್ಮ ಅಜ್ಞಾನದ ದೌರ್ಜನ್ಯ ಜಾಸ್ತಿ ಹಿಂಡುತಾ ಇದೆ. ಹೀಗೆ ತುಂಬ ಬರೀರಿ.
ಪ್ರೀತಿಯಿಂದ
ಸಿಂಧು
January 28, 2008 7:40 PM

suptadeepti said...
ಧನ್ಯವಾದಗಳು ಇಬ್ಬರಿಗೂ.
January 28, 2008 8:34 PM

ಅರುಣ್ ಮಣಿಪಾಲ್ said...
ಬಡತನದ ಬವಣೆಗೆ ಬಳಲಿದೆಯ ಬೆಂದು?
ಕೆಡುತನದ ಕೀಳ್ಗತೆಗೆ ತೊಳಲಿದೆಯ ನೊಂದು?
ಅಡಗಿಸಿದೆ ಉಡಿಯಲ್ಲಿ, ಮಾತೃ ಮಾತ್ಸಲ್ಯವೆ?
ಉಡುಗಿಸಿದೆ ಆಟೋಪ, ಕಡೆಗಣಿಸಿ ಒಲವು.
bhava poornavada salugalu chennagide..:-)..
nanna blog odidakke thnk u//:-)
January 29, 2008 7:22 PM

suptadeepti said...
ಧನ್ಯವಾದ ಅರುಣ್.
January 29, 2008 7:39 PM

ಶಾಂತಲಾ ಭಂಡಿ said...
suptadeeptiಯವರೆ...
೧) ಅಜ್ಞಾನ-ಸುಜ್ಞಾನ- ಅಜ್ಞಾತಿ- ಈ ಜ್ಞಾತ. ದೀಗ-ದಾಗ ನಡತೆ-ಕೊರತೆ
೩)ಅಣು-ಕಣ್ಣ-ಸಣ್ಣ-ಕಣಮಾನ-ಯಾನ ಸಣ್ಣವಳೆ- ನಾಳೆ
೨)ಅಬ್ಬರ-ದುರ್ಭರಹೆಗ್ಗಳಿಕೆ-ಅಗ್ಗಳಿಕೆ ರೋಷ-ದೋಷ
೪)ಅಮ್ಮ-ನಮಿಸಿ-ದಿಮ್ಮಿ-ಧರ್ಮನಿನ್ನ-ಯನ್ನ
೫)ನಿರ್ಧರಿಸಿ-ಬಿರಿಸಿ ನಡುಗಿ-ಗುಡುಗಿ
ಬಡತನ-ಕೆಡುತನ ಅಡಗಿಸಿದೆ-ಉಡುಗಿಸಿದೆ
ಬೆಂದು-ನೊಂದು ಮಾತ್ಸಲ್ಯವೆ-ಒಲವು
ಆದಿಪ್ರಾಸ, ಅಂತ್ಯಪ್ರಾಸ, ಮಧ್ಯಪ್ರಾಸಗಳನ್ನೆಲ್ಲ ಒಳಗೊಂಡ ನಿಮ್ಮ ಈ ಕವನ ಅದ್ಭುತ ಸಾಹಿತ್ಯದೊಂದಿಗೆ ಸುಂದರ ಸಂದೇಶವನ್ನೊಳಗೊಂಡು ನಮ್ಮನ್ನೆಲ್ಲ ಕರೆಯುತ್ತಿದೆ ಅನಿಸಿತು. ತುಂಬಾ ಚೆನ್ನಾಗಿದೆ, ಎಲ್ಲ ಸಾಲುಗಳೂ ಇಷ್ಟವಾದವು.
January 29, 2008 9:22 PM

suptadeepti said...
ಧನ್ಯವಾದ ಶಾಂತಲಾ.
January 30, 2008 11:05 AM

D.M.Sagar said...
Dear Deepthi,
I am a layman in poetry and hence can't understand the exact chchandassu!, however, the followin line attracted me.
ಸಣ್ಣದೆನಿಸಿದೆ ವಿಶ್ವ, ನೀನು ಸಣ್ಣವಳೆ?
This is an ultimate comparison between this material world and our psychological world. ಸಣ್ಣದೆನಿಸಿದೆ ವಿಶ್ವ, yes, nowadays the world is sinking to a nanosize but ನೀನು ಸಣ್ಣವಳೆ? phrase depicts many things.However hard we convince ourselves that we are tiny, minute, insiginificant [all are eastern passions!], albiet our pains, our pleasures haunt us as long as we live.
Regards
D.M.Sagar
January 31, 2008 4:58 PM

suptadeepti said...
ಸಾಗರ್, ಧನ್ಯವಾದ.
ನೀವು ಎತ್ತಿಕೊಂಡ ಸಾಲಿನಲ್ಲಿ ಉದ್ದೇಶಿತ "ನೀನು" ಧಾರಿಣಿಗೆ; ಧರಣಿ, ಧರಿತ್ರಿ ಅನ್ನಿಸಿಕೊಂಡ ಭೂದೇವಿಗೆ. ವಿಶ್ವ ಅನ್ನುವಾಗಲೂ ಭೂಮಿ ಸೇರಿಸಿಯೇ ಹೇಳುತ್ತೇವೆ. Global village ಕಲ್ಪನೆಯನ್ನು "ಸಣ್ಣದೆನಿಸಿದೆ ವಿಶ್ವ" ಪದಗಳಲ್ಲಿ ಸೂಚಿಸಿ, "ದೇವೀ, ನೀನು ಸಣ್ಣವಳೆ?" ಅನ್ನುವ ಪ್ರಶ್ನೆ ಕೇಳಿದ್ದೇನೆ. ಈ ಪೂರ್ಣ ಕವನ ನಮ್ಮ ಸ್ತರದಿಂದ ದೇವಿಯನ್ನು ಉದ್ದೇಶಿತ ಸಂವಾದ. ಆ ವ್ಯಾಪಿಯಿಂದ ಹೊರಗೆ ನೋಡಿದರೆ, ಕವನಕ್ಕಿರುವ ಅರ್ಥ ವಿಪರೀತವಾಗಿ ಬಿಡುತ್ತದೆ.
January 31, 2008 6:07 PM

Sagar said...
I believe the main difference between prose and poetry is - a poetry gives many meanings whereas the prose gives only the intended meaning. For instance, science is prose, and life is poetry.I believe!
D.M.Sagar
February 1, 2008 3:32 PM

No comments: