ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 28 March, 2011

ಸುಮ್ಮನೆ ನೋಡಿದಾಗ...೧೯

ಬೆಳಿಗ್ಗೆ ನೇಹಾ ಮತ್ತು ನಾನು ಏಳುವ ಹೊತ್ತಿಗೆ ಅಮ್ಮ ಹೊರಡುವ ತಯಾರಿಯಲ್ಲಿದ್ದರು. ಸುಮುಖ್ ಅಂಕಲ್ ಏನೋ ಗಂಭೀರ ಯೋಚನೆಯಲ್ಲಿದ್ದರು. ನಳಿನಿ ಅಂಟಿ ಅಡುಗೆಮನೆಯಲ್ಲಿ ಅಮ್ಮನನ್ನು ತಿಂಡಿ ಮುಗಿಸಿಯೇ ಹೋಗೆನ್ನುವ ಹುನ್ನಾರದಲ್ಲಿ ಕಟ್ಟುತ್ತಿದ್ದರು. ಹಾಲಿನವಳು ಹೊರಬಾಗಿಲಲ್ಲಿ ಕರೆದಾಗ ಆಂಟಿ ಓಡಿದರು; ನಮ್ಮನೆಗೂ ಅವಳೇ ಹಾಲು ತರುವವಳಾದ್ದರಿಂದ ನಮ್ಮ ಪಾಲಿನ ಹಾಲನ್ನೂ ಇಲ್ಲೇ ತೆಗೆದುಕೊಂಡರು ಆಂಟಿ. ಅಲ್ಲಿಗೆ ಒಂದು ನೆಪ ನಿವಾರಣೆಯಾಯ್ತು. ತಿಂಡಿಯ ತಯಾರಿಯಲ್ಲಿದ್ದ ನಳಿನಿ ಅಂಟಿಗೆ ಸಹಾಯಕ್ಕೆಂದು ಅಮ್ಮ ಇದ್ದ ಕಾರಣ ನೇಹಾ ಮತ್ತು ನಾನು ಮತ್ತೊಮ್ಮೆ ಕೋಣೆ ಸೇರುವುದರಲ್ಲಿದ್ದೆವು. ಆಗಲೇ ಸುಮುಖ್ ಅಂಕಲ್ ನಮ್ಮನ್ನು ಕರೆದರು, ‘ಇಬ್ಬರೂ ಇಲ್ಲಿ ಬನ್ನಿ.’

ನಿನ್ನೆ ರಾತ್ರೆಗಿಂತಲೂ ಸುಮುಖ್ ಅಂಕಲ್ ಗಂಭೀರವಾಗಿದ್ದರು. ಏನೋ ಒಳಕಾರಣ ಇಲ್ಲದೆ ಇಷ್ಟು ಗಂಭೀರವಾಗಿ ಇರುವುದು ಅವರ ಸ್ವಭಾವವಲ್ಲ. ಯಾವುದೋ ಹುಳ ಅವರ ತಲೆ ಕೊರೆಯುತ್ತಿರಬೇಕು. ಅದನ್ನು ನಮ್ಮ ಮುಂದೆ ಬಿಚ್ಚಿಡಬಹುದಾ? ಇಲ್ಲವಾ? ಯಾವುದೇ ಊಹೆಗೂ ಹೋಗದೆ ಅಂಕಲ್ ಮುಂದಿನ ಸೋಫಾದಲ್ಲಿ ಕೂತೆವು.

ನಮ್ಮಿಬ್ಬರಿಗೂ ಕಾಫಿ ಲೋಟ ಕೊಡುತ್ತಾ ನಳಿನಿ ಆಂಟಿ ಮೆಲ್ಲಗೆ ಕಣ್ಣು ಮಿಟುಕಿಸಿ, ‘ಬಿ ರೆಡಿ’ ಅಂದರು. ನೋಟಗಳ ವಿನಿಮಯವಾಗಿ ಭುಜಗಳು ಗಾಳಿಯಲ್ಲಿ ಮೇಲೆಕೆಳಗೆ ಏರಿಳಿದು ನಿಂತವು.

‘ನಿಮ್ಮ ಕಾಲೇಜ್ ಇನ್ನೇನು ಮುಗ್ದಾಯ್ತು ಅಂತಲೇ ಹೇಳ್ಬಹುದು. ಮುಂದೇನ್ ಮಾಡ್ತೀರಿ?’
‘ನಾನು ಎಮ್.ಎಸ್ಸಿ. ಮಾಡ್ತೇನೆ ಅಂಕಲ್. ಸಾಧ್ಯ ಆದ್ರೆ ರೀಸರ್ಚ್. ಇಲ್ಲದಿದ್ರೆ ಯಾವುದಾದ್ರೂ ಒಳ್ಳೇ ಕಾಲೇಜಲ್ಲಿ ಟೀಚಿಂಗ್...’ ಯಾವುದೇ ತಡವಿಲ್ಲದೆ ಹೇಳಿದೆ.
‘ನಾನೇನೂ ಯೋಚನೆ ಮಾಡ್ಲೇ ಇಲ್ಲ ಪಪ್ಪಾ. ನೀವಿದ್ದೀರಲ್ಲ, ನನ್ನ ದಾರಿ ತೋರಿಸಿಕೊಡ್ಲಿಕ್ಕೆ...’ ನೇಹಾ ಮುದ್ದುಗರೆದಳು.
‘ನೀನು ಎಮ್.ಎಸ್ಸಿ. ಮಾಡ್ಲಿಕ್ಕೆ ಅಪ್ಪಣೆ ಕೊಟ್ಟವರು ಯಾರು? ಯಾರನ್ನು ಕೇಳಿ ಅದನ್ನು ಡಿಸೈಡ್ ಮಾಡಿದ್ದೀ?’ ಅಮ್ಮನ ಸ್ವರ ಅಡುಗೆಮನೆಯಿಂದಲೇ ಗುಡುಗಿತು.
‘ನೀವು ಸುಮ್ನಿರಿ ಹರಿಣಿ. ಮಕ್ಕಳ ಅಭಿಪ್ರಾಯ ಏನೂಂತ ನೋಡ್ಬೇಕು ಮೊದ್ಲು. ನಂತ್ರ ನಮ್ಮ ಯೋಚನೆಗಳನ್ನು ಅವ್ರ ತಲೆಗೆ ತುಂಬಿಸುವಾ. ಅಲ್ಲಿ ಜಾಗ ಉಂಟಾ ಇಲ್ವಾ ನೋಡ್ಬೇಕಲ್ವಾ? ನೀವು ತಲೆಕೆಡಿಸ್ಕೊಳ್ಬೇಡಿ. ನಾನು ನೋಡಿಕೊಳ್ತೇನೆ, ಆಯ್ತಾ?’ ಅಂಕಲ್ ಅಮ್ಮನಿಗೆ ಭರವಸೆಯಿತ್ತರು. ನಮ್ಮನ್ನು ನೋಡ್ತಾ, ‘ಶಿಶಿರಾ, ನೀನು ಎಮ್.ಎಸ್ಸಿ. ಮಾಡುದಾದ್ರೆ ಮಾಡು. ನನ್ನ ಸಪೋರ್ಟ್ ನಿಂಗೇನೇ. ನೇಹಾ, ನೀನು ನನ್ನ ಮಾತು ಕೇಳುವವಳಾದ್ರೆ ಇದೇ ವರ್ಷ ನಿಂಗೆ ಮದುವೆ ಮಾಡುದಾ ಅಥವಾ ಯಾವುದಾದ್ರೂ ಕೆಲಸಕ್ಕೆ ಹೋಗ್ತೀಯಾ?’
‘ಕೆಲ್ಸ ಎಲ್ಲ ಬೇಡ ಪಪ್ಪಾ. ಒಂದು ವರ್ಷ ಮನೆಯಲ್ಲೇ ಇರ್ತೇನೆ, ಆಯ್ತಾ?’
‘ಕೆಲ್ಸ ಬೇಡ ಅಂತಾದ್ರೆ ಮದುವೆ. ಒಳ್ಳೇ ಹುಡುಗ ಇದ್ದಾನೆ. ಏನ್ ಹೇಳ್ತೀ?’
‘ನಂಗೊತ್ತಿಲ್ಲ ಪಪ್ಪಾ. ಅಮ್ಮ ಮತ್ತು ನೀವು ಹೇಳಿದ ಹಾಗೆ...’
‘ಆಲ್ ರೈಟ್. ಹಾಗಾದ್ರೆ ನನ್ನದೇ ಡಿಸಿಷನ್. ಗುಡ್. ನೀವೇನ್ ಹೇಳ್ತೀರಿ ಹರಿಣಿ?’ ಸಂಭಾಷಣೆಯ ಮಧ್ಯೆ ಯಾವಾಗಲೋ ನಡುಮನೆಗೆ ಬಂದು ನಿಂತ ಅಮ್ಮನ ಕಡೆ ನೋಟ.
‘ನೇಹಾ ನಿಮ್ಮದೇ ಮಗಳು. ನನ್ನ ಅಭಿಪ್ರಾಯ ಏನೂ ಇಲ್ಲ ಇಲ್ಲಿ. ಹುಡುಗ ಯಾರೂಂತ ಕೇಳ್ತೇನೆ, ಅಷ್ಟೇ...’
‘ಹುಡುಗ ಬರುವಾಗ ನಿಮ್ಗೆಲ್ಲಾ ಗೊತ್ತಾಗ್ತದೆ. ಅಷ್ಟೊತ್ತು ಸಸ್ಪೆನ್ಸ್.’

ಇಬ್ಬರೂ ಸೋಫಾದಿಂದ ಏಳುವಾಗಲೇ ಅಮ್ಮ ಬಾಗಿಲ ಹತ್ತಿರ ಹೋಗಿ ನಿಂತರು. ‘ಹೋಗುವಾ ಮನೆಗೆ, ಹೊರಡು’
‘ಸಾಕು ಮಾರಾಯ್ತಿ ದೊಡ್ಡಸ್ತಿಕೆ. ತಿಂಡಿ ತಿಂದೇ ಹೋಗಿ...’ ನಳಿನಿ ಆಂಟಿಯ ಒತ್ತಾಸೆ ಕೊನೆಗೂ ಪರಿಣಾಮ ಬೀರಿತು. ಆಂಟಿಯ ಇಷ್ಟದ ‘ಪುಂಡಿಗಟ್ಟಿ’ಯನ್ನು ತಿಂದು ಮೊಸರು ಹಾಲು ಹೊತ್ತ ಡಬ್ಬಗಳನ್ನು ಕಟ್ಟಿಕೊಂಡು ಹೊರಟೆವು.
‘ಊಟಕ್ಕೇ ಇಲ್ಲಿಗೆ ಬನ್ನಿ...’ ನಳಿನಿ ಅಂಟಿಯ ಮತ್ತೊಂದು ಬಾಣ, ಗುರಿ ತಪ್ಪಿತು. ಮೂರೂವರೆಗೆ ಇಲ್ಲಿಗೆ ಬಂದು ಸೇರುವ ಆಶ್ವಾಸನೆಯ ಜೊತೆಗೆ ಮನೆಯ ಗೇಟ್ ದಾಟಿದೆವು.

ಸಂಜೆ ಮೂರೂವರೆಗೆ ಸರಿಯಾಗಿಯೇ ನಳಿನಿ ಆಂಟಿಯ ಮನೆ ಸೇರಿದ್ದಾಯ್ತು. ವಾಂಗೀಭಾತ್, ಕ್ಯಾರೆಟ್ ಹಲ್ವ ಕಾಯುತ್ತಿದ್ದವು. ಗೆಣಸಿನ ಪೋಡಿ (ಭಜಿ!!) ತಯಾರಾಗುತ್ತಿತ್ತು ಬಾಗಿಲ ಕರೆಗಂಟೆ ಸದ್ದಾದಾಗ. ಸುಮುಖ್ ಅಂಕಲ್ ಬಾಗಿಲು ತೆರೆದು ಸರೋಜಾಂಟಿ ಮತ್ತು ಹರ್ಷಣ್ಣನನ್ನು ಒಳಗೆ ಕರೆದರು. ಸರೋಜಾಂಟಿಯ ಕೈಯಲ್ಲಿ ಹೂ ಹಣ್ಣುಗಳ ಪುಟ್ಟ ಬುಟ್ಟಿ. ನೇಹಾಳ ಮುಖ ಕೆಂಪೇರಿತು.

ಸಾಮಾನ್ಯ ಮಾತುಗಳಾದ ಮೇಲೆ, ಕಾಫಿ-ತಿಂಡಿ. ಅದೂ ಲೋಕಾಭಿರಾಮದಲ್ಲೇ ಮುಗಿದಾಗ ನನ್ನೊಳಗೆ ಏನೋ ತಳಮಳ. ಅನಾವಶ್ಯಕ ಕಿರಿಕಿರಿ ಭಾವನೆ. ತಟ್ಟೆ ಲೋಟಗಳನ್ನೆತ್ತಿಕೊಂಡು ನಳಿನಿ ಅಂಟಿ ಹೊರಟಾಗ ನೇಹಾ ಮತ್ತು ನಾನು ಎತ್ತಿಕೊಂಡೆವು. ಇಬ್ಬರೂ ಅಡುಗೆಮನೆಗೆ ಹೋಗಿದ್ದೇವಷ್ಟೇ, ಸರೋಜ ಆಂಟಿಯ ಗಂಟಲು ಕೆಮ್ಮಿ ಸ್ವರ ಸರಿಮಾಡಿಕೊಂಡಿತು. ನಮ್ಮಿಬ್ಬರಲ್ಲೂ ನಡುಕ, ವಿನಾಕಾರಣ.

ಯಾವುದೇ ಪೀಠಿಕೆಯಿಲ್ಲದೆ ಸರೋಜಾಂಟಿ ನೇರವಾಗಿ ಪ್ರಸ್ತಾಪವಿಟ್ಟರು, ‘ಈ ಇಬ್ಬರಲ್ಲಿ ಒಬ್ಬಳು ನನ್ನ ಸೊಸೆ. ಯಾರಾಗಬಹುದೂಂತ ನೀವೇ ನಿರ್ಧರಿಸಿ ಹೇಳಿ...’
ನಡುಮನೆಯಲ್ಲಿ ಯಾವ ಮುಖದಲ್ಲಿ ಯಾವ ಭಾವವಿತ್ತೋ ಗೊತ್ತಿಲ್ಲ. ನಮ್ಮಿಬ್ಬರ ಮುಖ ಎಲ್ಲಾ ಬಣ್ಣಗಳನ್ನೂ ಕಳೆದುಕೊಂಡವು.
ಅಮ್ಮ ನನ್ನ ಹೆಸರೇ ಹೇಳಿದರೆ? ದೇವರೇ....

Monday 21 March, 2011

ಸುಮ್ಮನೆ ನೋಡಿದಾಗ...೧೮

ಸರೋಜ ಆಂಟಿ, ಹರ್ಷಣ್ಣ, ನಳಿನಿ ಆಂಟಿ, ಸುಮುಖ್ ಅಂಕಲ್, ಅಮ್ಮ- ಎಲ್ಲರೂ ನಡುಮನೆಯ ಸೋಫಾದಲ್ಲೇ ಕೂತರು. ರೂಮೊಳಗೆ ಹೋಗುತ್ತಿದ್ದ ನಮ್ಮನ್ನು ಸರೋಜ ಆಂಟಿ ಕರೆದರು, ‘ಇಲ್ಲೇ ಬನ್ನಿ ಹುಡುಗ್ಯರೇ. ನೀವೂ ಇಲ್ಲಿರಿ’.

ಮತ್ತೆ ಅವರೇ ಅಮ್ಮನನ್ನು ನೋಡ್ತಾ, ‘ವಿನ್ಯಾಸ್ ತೀರಿಹೋಗಿದ್ದಾನೆ. ಇವತ್ತಿಗೆ ಮೂರನೇ ದಿನ, ನಿಂಗೆ ಗೊತ್ತಿರಬೇಕಲ್ಲ ಹರಿಣಿ?’
‘ಹೌದಕ್ಕ, ನಂಗೆ ಗೊತ್ತಾಗಿದೆ; ನಿನ್ನೆ ಸಂಜೆ ಗೊತ್ತಾಗಿದೆ.’
‘ಸುಮುಖ ರಾಯರೇ, ನಳಿನಿ, ನಿಮಗೆ ಈ ಸುದ್ದಿ ಗೊತ್ತುಂಟಾ? ಮಕ್ಕಳಿಗೆ ಹೇಳಿದ್ದೀರಾ?’
ಆ ಕ್ಷಣ ನನಗನಿಸಿತು, ಈ ಸುದ್ದಿಯಲ್ಲಿ ಇವರಿಗೇಕೆ ಅಷ್ಟು ಆಸಕ್ತಿ?
ಗೆಳತಿಯರು ಮುಖ ಮುಖ ನೋಡಿಕೊಳ್ತಿದ್ದಾಗ ಸುಮುಖ್ ಅಂಕಲ್ ನಮ್ಮ ಪರವಾಗಿ ಮಾತೆತ್ತಿದರು, ‘ಸರೋಜಕ್ಕ, ನಮಗೆಲ್ಲರಿಗೂ ಈ ವಿಷಯ ಗೊತ್ತುಂಟು. ನಮಗೆ ಇವತ್ತೇ ಗೊತ್ತಾದದ್ದು. ಮಕ್ಕಳಿಗೆ ವಿನ್ಯಾಸ್ ಯಾರೂಂತ ನಿನ್ನೆಯಷ್ಟೇ ಗೊತ್ತಾಗಿದೆ, ಇವತ್ತು ಅವನು ಸತ್ತ ಸುದ್ದಿ ಗೊತ್ತಾಗಿದೆ. ಇದ್ರಲ್ಲಿ ಅವರನ್ನು ಎಳೆದುತರುವ ಅಗತ್ಯ ನಂಗೆ ಕಾಣುದಿಲ್ಲ. ಈಗ ಯಾವ ವಿಷಯ ಮಾತಾಡ್ಲಿಕ್ಕೆ ಬಂದಿದ್ದೀರಿ? ವಿನ್ಯಾಸನ ವಿಷಯ ಆಗಿದ್ರೆ, ಅದ್ರಲ್ಲಿ ನಮಗ್ಯಾರಿಗೂ ಯಾವುದೇ ಆಸಕ್ತಿ ಇಲ್ಲಕ್ಕ, ಕ್ಷಮಿಸಿ.’

ಸರೋಜ ಅಂಟಿಯ ಮುಖ ಸಪ್ಪಗಾಯ್ತು. ಒಂದೇ ಕ್ಷಣ. ಚೇತರಿಸಿಕೊಂಡರು.
‘ನೀವು ಕ್ಷಮಿಸಿ ರಾಯರೇ. ಅವನು ನನ್ನ ಸೋದರ ದಾಯಾದಿಯಿರಬಹುದು. ಆದರೆ ಹೋಗಿಬರುವ ನಂಟಸ್ತಿಕೆ ಅವನೇನೂ ಉಳಿಸಿಕೊಂಡಿರಲಿಲ್ಲ. ಅವನ ವಿಷಯ ಎತ್ತಿ ನಿಮಗೆಲ್ಲ ನೋವು ಕೊಡುವ ಉದ್ದೇಶ ಇಲ್ಲ, ಬಿಡಿ. ಅವನ ಸುದ್ದಿಯೇ ಬೇಡ. ಏನ್ ಹೇಳ್ತಿ ಹರಿಣಿ?’
‘ನಿನ್ನೆ ಇವತ್ತು ನನ್ನ ತಲೆ ಮನಸ್ಸು ಗೋಜಲಾಗಿದ್ದದ್ದು ನಿಜ. ಅವನ ಸಾವನ್ನು ಮಕ್ಕಳಿಗೆ ಹೇಳ್ಬೇಕೋ ಬೇಡ್ವೋ, ಹೇಗೆ ಹೇಳುದು, ಅಂತೆಲ್ಲ ಯೋಚಿಸಿ ತಲೆಕೆಟ್ಟಿತ್ತು ಹೊರತು ಅವನ ಸಾವಿಗಾಗಿ ಅಲ್ಲ. ಯಾವತ್ತು ಅವನು ನನಗೆ ಆಸರೆಯಾಗಿ ನಿಲ್ಲದೆ ಸಂಬಂಧ ಕಡಿದುಕೊಂಡನೋ ಅಲ್ಲಿಗೇ ಅವನ ಋಣ ಹಂಗು ಎರಡೂ ತೀರಿತು ಅಂದುಕೊಂಡಿದ್ದೇನೆ. ಇಷ್ಟಕ್ಕೂ ನಮಗೂ ಅವನಿಗೂ ಯಾವ ಸಂಬಂಧ? ಅವನೇನೂ ನನ್ನನ್ನು ಮದುವೆ ಆಗಿರ್ಲಿಲ್ಲ. ಬಾಂಧವ್ಯ ಇಲ್ಲದಲ್ಲಿ ಯಾವ ಬಂಧನ ಹೇಳಿ ಸರೋಜಕ್ಕ?’ ಯಾವುದೇ ಭಾವನೆಗಳಿಲ್ಲದೆ ತಣ್ಣಗೆ ಅಮ್ಮ ಹೇಳಿದ ಮಾತುಗಳು ನನ್ನ ಬೆನ್ನಹುರಿಯಲ್ಲಿ ಛಳಿ ಹುಟ್ಟಿಸಿದವು. ಅಮ್ಮನಲ್ಲಿ ಇಷ್ಟೂ ನಿರ್ಭಾವುಕತೆ ಸಾಧ್ಯವಾ?

‘ಅಮ್ಮ, ವಿನ್ಯಾಸ್ ಮಾಮನ ಸುದ್ದಿ ಸಾಕು. ಅವನ ಮುಖವನ್ನೇ ನೋಡಿರದವರೇ ಇಲ್ಲಿ ಎಲ್ಲರೂ, ನಿನ್ನನ್ನು ಚಿಕ್ಕತ್ತೆಯನ್ನು ಬಿಟ್ರೆ. ನೀನವನನ್ನು ಕೊನೆಯ ಸಾರಿ ನೋಡಿದ್ದು ನಿನ್ನ ಮದುವೆಯಲ್ಲಿ. ಅಷ್ಟು ಹಿಂದಿನ ಸುದ್ದಿಗಳಿಗೆಲ್ಲ ಈಗ ಮನ್ನಣೆ ಬೇಕಾಗಿಲ್ಲ. ಇಷ್ಟನ್ನೇ ಮಾತಾಡ್ಲಿಕ್ಕೆ ಇಲ್ಲಿ ಬರ್ಬೇಕು ಅಂತ ನೀನು ಹೇಳಿದ್ದಾದ್ರೆ ಮನೆಗೆ ಹೋಗುವಾ. ಸಾಕು ಮಾತು.’ ಹರ್ಷಣ್ಣ ಗಡುಸಾಗಿಯೇ ಹೇಳಿದ.

‘ಇದಷ್ಟೇ ಅಲ್ಲ ಮಾರಾಯ. ನಂಗೆ ಬೇರೆ ಕೆಲ್ಸ ಉಂಟು. ಆದ್ರೆ ಅದಕ್ಕೆ ಈಗ ಸಂದರ್ಭ ಅಲ್ಲ. ನಾಳೆ ಆದಿತ್ಯವಾರ. ನೀವೆಲ್ಲ ಪುರುಸೊತ್ತು ಮಾಡಿಕೊಂಡು ಒಂದೆರಡು ಗಂಟೆ ಹೊತ್ತು ನಮಗಾಗಿ ಕೊಡಬಹುದಾ? ನಿಮ್ಮೆಲ್ಲರ ಹತ್ರ ಮಾತಾಡ್ಲಿಕ್ಕುಂಟು ನಂಗೆ. ಅದನ್ನು ಕೇಳ್ಲಿಕ್ಕೇ ಈ ರಾತ್ರೆಯೇ ಬಂದೆ. ಏನು ರಾಯರೇ? ಪುರುಸೊತ್ತು ಉಂಟಾ ಹೇಗೆ?’

‘ಧಾರಾಳ ಬನ್ನಿ ಸರೋಜಕ್ಕ. ಎಷ್ಟೊತ್ತಿಗೆ ಬರ್ತೀರಿ? ವಿಷ್ಯ ಏನೂಂತ ಕೇಳ್ಬಹುದಾ?’
‘ಸಂಜೆ ನಾಲ್ಕು ಗಂಟೆಗೆ ಬರ್ತೇವೆ. ವಿಷ್ಯ ನಾಳೆಯೇ ಹೇಳ್ತೇನೆ. ಗಡಿಬಿಡಿ ಏನಿಲ್ಲ. ಎಲ್ಲ ನೆಮ್ಮದಿಯಿಂದ ನಿದ್ದೆ ಮಾಡಿ. ನಾವೀಗ ಹೊರಡ್ತೇವೆ. ಗುಡ್ ನೈಟ್ ಎಲ್ರಿಗೂ...’
‘ಎಷ್ಟೋ ಸಮಯದ ನಂತ್ರ ನಮ್ಮನೆಗೆ ಬಂದಿದ್ದೀರಿ. ಹಾಗೇ ಹೋಗುವ ಹಾಗಿಲ್ಲ ಸರೋಜಕ್ಕ. ಒಂದ್ಲೋಟ ಹಾಲಾದ್ರೂ ಕುಡೀರಿ. ತರ್ತೇನೆ, ಈಗ ಬಂದೆ...’ ನಳಿನಿ ಆಂಟಿ ಅಡುಗೆಮನೆಗೆ ಓಡಿದರು. ಹಿಂದೆಯೇ ನೇಹಾ, ಅವಳ ಹಿಂದೆ ನಾನು. ಎರಡೇ ನಿಮಿಷಗಳಲ್ಲಿ ಎರಡು ಲೋಟ ನಸುಬೆಚ್ಚಗಿನ ಬಾದಾಮಿ ಹಾಲು ನಡುಮನೆಯಲ್ಲಿ ಅತಿಥಿಗಳ ಕೈಯಲ್ಲಿತ್ತು. ಮತ್ತೆರಡು ನಿಮಿಷಗಳಲ್ಲಿ ಉಳಿದವರ ಕೈಗಳಲ್ಲೂ ಒಂದೊಂದು ಲೋಟ. ಸುಮ್ಮನೇ ಕಾಡುಹರಟೆಯ ಹತ್ತುನಿಮಿಷಗಳನ್ನು ಹಾಲಿನ ನೆಪದಲ್ಲಿ ಕಳೆದು ಸರೋಜಾಂಟಿ ಹರ್ಷಣ್ಣ ಹೊರಟರು, ಮರುದಿನ ಸಂಜೆ ಮತ್ತೆ ಬರುವ ಒಸಗೆಯ ಜೊತೆಗೆ.

‘ನೀವಿಲ್ಲಿಗೆ ಬರುದಲ್ವಾ ಸರೋಜಕ್ಕ. ನಾನು ಇರಬೇಕಾಗಿಲ್ವಲ್ಲ’ ಮೆಲ್ಲ ಅಮ್ಮ ಹೇಳಿದ್ದು ಸರೋಜಕ್ಕನ ಗಮನ ಸೆಳೆಯದೇ ಇರಲಿಲ್ಲ.
‘ನೀನೂ ನಿನ್ನ ಮಗಳೂ ಇರ್ಲೇ ಬೇಕು ಮಾರಾಯ್ತಿ. ತಪ್ಪಿಸ್ಬೇಡಿ. ಈಗ ಹೊರಡ್ತೇವೆ.’ ಅನ್ನುತ್ತಾ ಮೆಟ್ಟಲಿಳಿದು ಅಂಗಳ ದಾಟಿ ಗೇಟ್ ದಾಟಿದರು ಹರ್ಷಣ್ಣನ ಕಣ್ಣುಗಳು ಬಾಗಿಲಲ್ಲಿ ಕೀಲಿಸಿದ್ದವೇನೋ. ಅರ್ಧ ಹಿನ್ನಡೆ ಹಾಕುತ್ತಿದ್ದವ ತನ್ನಮ್ಮನಿಗೆ ಢಿಕ್ಕಿ ಹೊಡೆದ. ‘ನೋಡಿ ನಡಿ ಮಾರಾಯ’ ಅಂತ ಬೆನ್ನಿಗೊಂದು ಗುದ್ದಿದರು ಆಂಟಿ. ನಗುತ್ತಾ ಅಮ್ಮನ ಹೆಗಲು ಬಳಸಿ ರಸ್ತೆಗಿಳಿದವನನ್ನೇ ಒಂದು ನೋಟ ಹಿಂಬಾಲಿಸಿದ್ದು ಯಾರ ದೃಷ್ಟಿಯಿಂದಲೂ ಮರೆಯಾಗಲಿಲ್ಲ. ನಗುತ್ತಾ ನಗಿಸುತ್ತಾ ನಾವೆಲ್ಲ ಮನೆಯೊಳಗೆ ಸೇರಿಕೊಂಡಾಗ ಆದಿತ್ಯವಾರ ಒಳಗೆ ಹೆಜ್ಜೆಯಿಡಲು ಹೊಸ್ತಿಲಲ್ಲೇ ಕೂತಿತ್ತು. ಅದನ್ನಲ್ಲೇ ಬಾಗಿಲು ಕಾಯಲು ಬಿಟ್ಟು ನಾವೆಲ್ಲ ಮೂರು ಕೋಣೆಗಳೊಳಗೆ ಸೇರಿಕೊಂಡೆವು. ಇನ್ನು ಹದಿನಾರು-ಹದಿನೇಳು ಗಂಟೆಗಳಲ್ಲಿ ಏನಾಗಬಹುದೆನ್ನುವ ಊಹೆಯಿದ್ದರೂ ನಿರೀಕ್ಷೆ ಅದನ್ನೂ ಮೀರಿ ಬೆಳೀತಿತ್ತು.

ನಾಳೆ ಸಂಜೆ ಯಾವಾಗಾದೀತು?

Monday 7 March, 2011

ಸುಮ್ಮನೆ ನೋಡಿದಾಗ...೧೭

ಅಷ್ಟರಲ್ಲಾಗಲೇ ಅಮ್ಮನ ಮೂಡ್ ಸರಿಯಾಗಿತ್ತು (ಆಗದಿರಲು ಹೇಗೆ ಸಾಧ್ಯ? ಸುಮುಖ್ ಅಂಕಲ್, ನಳಿನಿ ಆಂಟಿ ಇದ್ದರಲ್ಲ; ಇಬ್ಬರು ಜಾದೂಗಾರರು!). ಅವರಿಬ್ಬರ ವಕಾಲತ್ತಿನಂತೆ ಅಂದು ರಾತ್ರಿಯ ಊಟ ನಮ್ಮೂರಿನ ಒಂದೇ ಒಂದು ಭವ್ಯ ಹೋಟೆಲ್- ‘ಶ್ಯಾಮಿಲಿ’ಯಲ್ಲಿ. ಎರಡು ಜೋಡಿ ಹೃದಯಗಳ ಜೊತೆಗೆ ಎರಡು ಒಂಟಿ ಹೃದಯಗಳು, ಅವುಗಳಲ್ಲೊಂದು ನೋವಿನಲ್ಲಿ ಮತ್ತೊಂದು ನಲಿವಿನಲ್ಲಿ ಅದ್ದಿದ್ದವು. ಊಟ ಮುಗಿಸಿ ಹೋಟೆಲಿಂದ ಹೊರಗೆ ಬರುತ್ತಿದ್ದ ಹಾಗೆಯೇ ನನಗೆ ಒಳಗೊಳಗೇ ದಿಗಿಲಾಗತೊಡಗಿತು. ಮನೆಗೆ ಹೋದ ಮೇಲೆ ನಾವಿಬ್ಬರೇ. ಈ ಅಮ್ಮನನ್ನು ಹೇಗೆ ಸುಧಾರಿಸಿಕೊಂಡೇನು? ಪೇಟೆಯಿಂದ ಒಂದು ಕಿಲೋಮೀಟರ್ ದೂರ ನಳಿನಿ ಅಂಟಿ ಮನೆ. ಅಲ್ಲಿಂದ ಅರ್ಧ ಕಿಲೋಮೀಟರ್ ನಮ್ಮನೆ. ‘ನಡೆದೇ ಹೋಗುವಾ, ತಿಂದದ್ದು ಕರಗ್ತದೆ’ ಅಂದರು ಸುಮುಖ್ ಅಂಕಲ್. ಒಂಬತ್ತು ಗಂಟೆಯ ನಿರ್ಜನ ರಸ್ತೆಯಲ್ಲಿ ಆರೂ ಜನ ಅಡ್ಡ ಸಾಲಿನಲ್ಲಿ ಸಾಗಿದೆವು.

ಮೊದಲಿಗೆ ಹರ್ಷಣ್ಣನ ಮನೆಗೆ ತಿರುಗುವ ರಸ್ತೆ. ಅಲ್ಲಿ ಕೆಲವು ನಿಮಿಷ ನಿಂತು ಮಾತು ಮುಗಿಸಿದರು ಅಂಕಲ್ ಮತ್ತು ಹರ್ಷಣ್ಣ. ನಾವು ಮಹಿಳೆಯರು ಮುಂದೆ ಸಾಗುತ್ತಿದ್ದರೆ ಗೆಳತಿಯರ ಎರಡು ಜೋಡಿ ಬೇರೆಬೇರೆಯಾಗಿತ್ತು. ನೇಹಾ ಮತ್ತು ನಾನು ಹಿಂದಿನಿಂದ ನಿಧಾನವಾಗಿ ಹೆಜ್ಜೆ ಅಳೆಯುತ್ತಿದ್ದಾಗ ಅಂಕಲ್ ನೇಹಾಳ ಬೆನ್ನಿಗೊಂದು ಹದವಾಗಿ ಗುದ್ದಿ, ‘ಒಳ್ಳೇ ಹುಡುಗ’ ಅಂದರು. ‘ಥ್ಯಾಂಕ್ಸ್ ಪಪ್ಪಾ’ ಉಲಿಯಿತು ಹಾಡುಹಕ್ಕಿ.

ಎರಡೇ ನಿಮಿಷ, ನೇಹಾ ಮನೆಯ ಗೇಟಿನೆದುರು ನಿಂತಿದ್ದೆವು. ನಾನು ನೇಹಾಳಿಗೆ ಕಣ್ಣು ಹೊಡೆದು ‘ಸ್ವೀಟ್ ಡ್ರೀಮ್ಸ್’ ಅನ್ನುವಾಗಲೇ ಸುಮುಖ್ ಅಂಕಲ್, ‘ಇವತ್ತು ಇಲ್ಲೇ ಇರಿ. ಕೆಲವೊಂದು ವಿಷಯಗಳನ್ನು ಮಾತಾಡಲೇ ಬೇಕು. ನಾಳೆ ಹೇಗೂ ಆದಿತ್ಯವಾರ. ಯಾರಿಗೂ ಯಾವ ಗಡಿಬಿಡಿಯೂ ಇಲ್ಲ. ಬನ್ನಿ ಒಳಗೆ’ ಎನ್ನುತ್ತಾ ಗೇಟ್ ತೆರೆದು ನಿಂತರು. ಅಮ್ಮನ ಕೈಹಿಡಿದು ನಳಿನಿ ಅಂಟಿ ಮತ್ತು ನನ್ನ ಕೈಹಿಡಿದು ನೇಹಾ ಎಳೆಯುತ್ತಿದ್ದರೆ ಅಮ್ಮ ಚಡಪಡಿಸುತ್ತಿರುವುದು ನನ್ನ ಗಮನಕ್ಕೆ ಬಂತು. ನಳಿನಿ ಅಂಟಿಯೂ ಇದನ್ನೇ ಕಂಡರೇನೋ, ‘ಬಾ ಮಾರಾಯ್ತಿ. ನಿನ್ನ ಮನೆ ಎಲ್ಲಿಗೂ ಹೋಗುದಿಲ್ಲ. ಆಗ ಹೊರಡುವ ಮೊದಲು ಸರಿಯಾಗಿ ಬೀಗ ಹಾಕಿದ್ದೀ, ನಾ ನೋಡಿದ್ದೇನೆ. ನಿನಗೂ ನಿನ್ನ ಮಗಳಿಗೂ ನಾಳೆ ಬೆಳಗ್ಗೆ ಹಲ್ಲುಜ್ಜಲಿಕ್ಕೆ ಮಾವಿನೆಲೆ, ಗೇರೆಲೆ ಬೇಕಾದಷ್ಟು ಇದ್ದಾವೆ. ಬ್ರಶ್ಷೇ ಬೇಕಾದ್ರೆ ನನ್ನತ್ರ ಹೊಸತ್ತು ಇದ್ದೀತು. ಸುಮ್ನೇ ಬಾ...’ ಅಂಕಲ್ ತೆರೆದಿಟ್ಟ ಬಾಗಿಲೂ ದಾಟಿ ಎಳೆದುಕೊಂಡೇ ಮನೆಯೊಳಗೆ ಹೋದರು. ನಾನಾಗಲೇ ನೇಹಾಳ ಕೋಣೆ ಸೇರಿಕೊಂಡೆ. ಇಬ್ಬರೂ ಬಾಗಿಲು ಓರೆ ಮಾಡಿ ಖುಷಿಯ ಕಿಲಿಕಿಲಿ ಎಬ್ಬಿಸಿದೆವು. ನಾನಿಲ್ಲಿ ರಾತ್ರಿ ಕಳೆಯದೆ ವರ್ಷವೇ ಕಳೆದಿರಬೇಕು. ಇವತ್ತು ಇಬ್ಬರಿಗೂ ನಿದ್ದೆಯೇ ಬರ್ಲಿಕ್ಕಿಲ್ಲ. ಓಹ್, ವಸಂತ್ ವಿಚಾರ ಇವಳಿಗೆ ಈಗಲೇ ಹೇಳುದೋ ಬೇಡವೋ? ಹೇಳುದಾದರೂ ಹೇಗೆ? ಎಲ್ಲಿಂದ ಶುರುಮಾಡುದು? ನನ್ನೊಳಗೆ ಗೊಂದಲ ಗೂಡುಕಟ್ಟತೊಡಗಿತು.

ನನ್ನ ಈ ಪ್ರಶ್ನೆಗಳಿಗೂ ಮೀರಿದ, ನನ್ನೊಳಗೆ ಆಳದಲ್ಲಿ ಕಾಡುತ್ತಿದ್ದ ಪ್ರಶ್ನೆಗಳಿಗೆ ಅಂದು ಅಲ್ಲಿ ಉತ್ತರ ಸಿಗುವುದಿದೆಯೆಂದು ಯಾವ ಹಲ್ಲಿಗೂ ಶಕುನ ಗೊತ್ತಿದ್ದಿರಲಾರದು. ನಾವೆಲ್ಲ ಸುಮ್ಮನೇ ಕಾಡುಹರಟೆಯಲ್ಲಿ ಒಂದರ್ಧ ಗಂಟೆ ಕಳೆದಿರಬಹುದು, ಬಾಗಿಲು ಟಕಟಕಿಸಿತು. ಅಂಕಲ್ ಬಾಗಿಲು ತೆರೆದಾಗ ಒಳಬಂದವರು ನಮ್ಮಲ್ಲಿ ಅಚ್ಚರಿಯನ್ನೇ ಮೂಡಿಸಿದರು. ನೇಹಾಳ ಕೆನ್ನೆಗಳು ರಂಗೇರಿದವು. ನಾನು ಮಿಶ್ರ ಭಾವದಲ್ಲಿದ್ದರೆ ಅಂಕಲ್, ಆಂಟಿ, ಅಮ್ಮ ಅಚ್ಚರಿಯ ಪರಿಧಿಯೊಳಗೆ ಕಳೆದುಹೋಗಿದ್ದರು.

‘ನೀವಿಲ್ಲೇ ಇರ್ತೀರಿ, ನಿಮ್ಮನೆಗೆ ಹೋಗಿರುದಿಲ್ಲ ಅಂತ ಅಮ್ಮ ಹೇಳಿದ್ದು ಸರಿಯೇ, ಚಿಕ್ಕತ್ತೇ. ನಿಮ್ಮೆಲ್ಲರ ಹತ್ರ ಒಟ್ಟಿಗೇ ಮಾತಾಡ್ಲಿಕ್ಕೆ ಒಳ್ಳೇದೇ ಆಯ್ತು. ಅದ್ಕೇ ನಾವಿಬ್ರೂ ಇಲ್ಲಿಗೇ ಮೊದ್ಲು ಬಂದದ್ದು. ಅಲ್ವಾ ಅಮ್ಮ.’- ಹರ್ಷಣ್ಣನ ದನಿಯಲ್ಲಿ ಸಂತಸದ ಜೊತೆಗೇ ಅಚ್ಚರಿಯೂ ಅವನಮ್ಮನ ಮೇಲೆ ಮೆಚ್ಚುಗೆಯೂ ಸೇರಿದ್ದವು. ಆದರೆ, ಇವರಿಗೇನಿರಬಹುದು ನಮ್ಮೆಲ್ಲರ ಹತ್ರ ಈ ರಾತ್ರಿಯಲ್ಲು ಮಾತಾಡುವಂಥ ವಿಷಯ? ಅಮ್ಮನ ಮುಖ ಯಾಕೆ ಪೆಚ್ಚಾಯ್ತು? ಹರ್ಷಣ್ಣನ ಅಮ್ಮ, ಸರೋಜ ಅಂಟಿಯ ಕಣ್ಣು ತಪ್ಪಿಸುತ್ತಿದ್ದಾರೆ ಅಮ್ಮ, ಯಾಕೆ? ನನ್ನ ಕುತೂಹಲದ ನೈದಿಲೆ ರಾತ್ರೆಯ ಕತ್ತಲಲ್ಲಿ ಮೆಲ್ಲನೆ ಕಣ್ತೆರೆಯಿತು. ಹೊಸದೇನೋ ತಿಳಿಯುತ್ತದೆನ್ನುವ ಉತ್ಸಾಹ ನನ್ನ ನಿದ್ದೆಯನ್ನೂ ಗೊಂದಲವನ್ನೂ ಒಟ್ಟಿಗೇ ಓಡಿಸಿತು.