ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday 1 January, 2010

ಮತ್ತೊಂದು ಹೊಸತು

ಓದುಗರಿಗೆಲ್ಲ ಹೊಸವರ್ಷದ ಶುಭಾಶಯಗಳು.

ಯಾರನ್ನೂ ಯಾವುದನ್ನೂ ಲೆಕ್ಕಿಸದ ಕಾಲದ ಲೆಕ್ಕದಲ್ಲಿ ಇನ್ನೂ ಒಂದು ಅಂಕೆ ಸವೆದಿದೆ. ಕಳೆದ ಕಾಲವೆಲ್ಲವನ್ನೂ ಕಳೆದುಕೊಳ್ಳದೆ ಕಲಿತುಕೊಳ್ಳುತ್ತಾ ಮುಂದೆ ಸಾಗುವುದರಲ್ಲಿ ಸಮಯದ ಸಾರ್ಥಕತೆಯನ್ನು ಕಂಡುಕೊಂಡರೆ ಮನುಜಮತಕ್ಕೇ ಹಿತವಲ್ಲವೆ?

ಹೊಸತೊಂದರ ಆರಂಭ ಎಲ್ಲ ಹಿತ ಸುಖಗಳಿಗೆ ನಾಂದಿಯಾಗಲಿ. ಜಗಜೀವನ ಮಂಗಳವಾಗಲಿ.

ಎಲ್ಲ ಗದ್ದಲಗಳ ನಡುವೆಯೂ
ಮತ್ತದೇ ಸೂರ್ಯ, ಹಗಲು, ಬೆಳಕು;
ಗೋಡೆ ಮೇಲಿನ ಚಿತ್ರ ಮಾತ್ರ ಹೊಸದು
ಸುತ್ತೆಲ್ಲ ಅದೇ ರಾಗ, ಅದೇ ತಾಳ, ಅದೇ ಹಾಡು
ಪಲ್ಲವಿಯಲ್ಲೇ ತಿರುಗಣೆ

ಮುಂದೇನು? ಪ್ರಶ್ನೆಗಳಿವೆ ಹಲವಾರು
ಕೇಳಿದವರಿಗಂತೂ ಉತ್ತರ ತಿಳಿಯದು
ಕೇಳಿಸಿಕೊಂಡವರಿಗೆ ಅವರದೇ ತಲೆನೋವು
ತರಾವರಿ ಗುಳಿಗೆಗಳು ಮಾರಾಟಕ್ಕಿವೆ, ಕೊಳ್ಳುವವರಿಲ್ಲ

ಹೊಸತನದ ಗಾಳಿಯಲ್ಲಿ ಗುಂಡುಗಳ ಹಾರಾಟ
ಮೂಗಿನೊಳಗೆ ಗೊಂದಲದ ಹೊಗೆ
ಉಸಿರಿನ ವಿಷ ಬೆನ್ನಲ್ಲಿ ಕಾಣದು
ಕೊಪ್ಪರಿಗೆಯೊಳಗೇ ಕ್ರೂರಿಗಳ ಸಾಮ್ರಾಜ್ಯ
ಕೊಳ್ಳುಬಾಕನ ಹೆಣದಡಿಯಲ್ಲೂ ಹೂಳುವ ಗುತ್ತಿಗೆ
ಕತ್ತಿ ಹಿಡಿದವನ ಕೈ ಕಾಣದ ಸಾಮಾನ್ಯ ಕುತ್ತಿಗೆ

ಎಷ್ಟು ನೋವಿಗೆ ಎಷ್ಟು ನಲಿವು
ಲೆಕ್ಕ ಇಟ್ಟವರಿದ್ದೀರಾ?
ಎಲ್ಲಿಯ ಸ್ವಾರ್ಥಕ್ಕೆ ಎಲ್ಲಿಯ ಬಲಿ
ಸೂತ್ರ ಹಿಡಿದವರಿದ್ದೀರಾ?
ಯಾರ ನೆರಳಿಗೆ ಯಾರ ಜೀವ
ಸೂಕ್ಷ್ಮ ಕಂಡವರಿದ್ದೀರಾ?

ಗಾಳಿಗೋಪುರದಂಥ ಅರಗಿನರಮನೆಗಳು
ನೆಲಕಚ್ಚಿದಾಗಿಂದ ಕೆಚ್ಚಿನ ಕೆಸರಲ್ಲೂ
ಕುಸಿದದ್ದೇ ಬಂತು, ಕಿಸಿದದ್ದೇ ಬಂತು
ಜಾರಿದವರೆಲ್ಲ ಜಾಣರಾಗಲಿಲ್ಲ
ಎದ್ದ ಜಾಣರ ಹೆಸರು ಕಾಣಲೇ ಇಲ್ಲ

ಸುಖನಿದ್ರೆ ಎಲ್ಲರ ಸೊತ್ತಲ್ಲ
ಮತ್ತದೇ ಚಂದ್ರ, ಇರುಳು, ಕತ್ತಲು

ಅಷ್ಟಾದರೂ, ಕಂಡಷ್ಟೇ ಆಕಾಶದಲ್ಲಿ
ದಿಟ್ಟಿಸಿ ಎಣಿಸಲು ಚುಕ್ಕಿಗಳಿದ್ದಾವೆ

(೦೨-ಜನವರಿ-೨೦೦೯)