ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 10 January, 2011

ಸುಮ್ಮನೆ ನೋಡಿದಾಗ...೧೧

ಮರುದಿನ ಯಾವತ್ತಿನ ಹಾಗೆ ಆಫೀಸಿಗೆ ಹೊರಟವರನ್ನು ತಡೆದು ಕೇಳಿದೆ, ‘ನಿನ್ನೆ ಹರಿಣಿ ಹತ್ರ ಏನು ಮಾತಾಡಿದ್ರಿ? ಏನು ಹೇಳಿದ್ಲು?’
ಮತ್ತದೇ ಮಿಂಚಿನ ತುಂಟನಗೆ ಹೊಮ್ಮಿಸಿದರು. ರೇಗಿತು.
‘ಹಾಗೆ ನೆಗಾಡಿದ್ರೆ ನನ್ಗೆ ಉತ್ರ ಸಿಗುದಿಲ್ಲ. ಏನ್ ಕೇಳಿದ್ರಿ? ಏನೂಂತ ಹೇಳಿದ್ಲು?’
‘ನಿನ್ಗೆ ಬೇಕಾದ ಉತ್ರ ಅವ್ಳ ಹತ್ರ ನೀನೇ ಕೇಳಿಕೋ. ನನ್ಗೆ ಬೇಕಾದ್ದು ಕೇಳಿದ್ದೇನೆ, ಕೊಟ್ಟಿದ್ದಾಳೆ. ಈಗ ನಾನ್ ಹೊರಟೆ. ಟಾಟಾ...’
ಕೋಪಶಿಖರದ ತುದಿಯಲ್ಲಿದ್ದವಳನ್ನು ಮತ್ತೆ ಮನೆಯೊಳಗೆ ತಂದವಳು ಹರಿಣಿಯೇ.
ಮುದ್ದುಮುದ್ದಾಗಿದ್ದ ಮಗಳನ್ನು ನನ್ನ ಕೈಯಲ್ಲಿಟ್ಟಳು. ‘ಇವಳನ್ನು ನೋಡಿಕೋ’.
ಇವಳು ಸ್ನಾನಕ್ಕೋ ಮತ್ತೆಂತದಕ್ಕೋ ಹೋಗುವವಳಿದ್ದಾಳೆ. ಲಚ್ಚಮ್ಮ ಇನ್ನೊಂದು ಮುದ್ದಿನ ಮುದ್ದೆಯನ್ನು ಮುತ್ತಿಕ್ಕುತ್ತಿರಬೇಕು. ಇವಳ ಇಬ್ಬರು ಮಕ್ಕಳನ್ನೂ ನಾವೆಲ್ಲ ಸದಾ ನೋಡಿಕೊಳ್ಳಬೇಕು. ಇವಳಿಗೆ ಯಾವ ಕರ್ತವ್ಯ, ಜವಾಬ್ದಾರಿ ಇಲ್ವಾ?- ನನ್ನ ತಲೆಯಲ್ಲಿ ಕುರುಕುರುಕೀಟ ಗುರುಗುಟ್ಟಿತು. ಮಗುವನ್ನು ನಾನು ಕೈಗೆತ್ತಿಕೊಂಡ ಕ್ಷಣವೇ ಹರಿಣಿ ರೂಮಿಗೆ ಹೋಗಿಬಿಟ್ಟಳು.

ಲಚ್ಚಮ್ಮ ಅಡುಗೆಕೋಣೆಯಿಂದ ಬಂದರು, ‘ನಳಿನಿ, ಮಧ್ಯಾಹ್ನಕ್ಕೆ ಅಡುಗೆ ಏನ್ ಮಾಡ್ಲಿ? ತರಕಾರಿ ಏನುಂಟು ಒಳಗೆ?’
ಅವರ ಸ್ವರ ಕೇಳಿದ್ದೇ ಕೈಯಲ್ಲಿದ್ದ ಗೊಂಬೆ ಉಲಿಯೆತ್ತಿತು. ಅವರ ಮಡಿಲಿಗೇ ಮಗುವನ್ನು ಕೊಟ್ಟು ನಾನು ಹರಿಣಿಯ ಕೋಣೆಗೆ ನುಗ್ಗಿದೆ. ತನ್ನ ಬಟ್ಟೆಗಳನ್ನೆಲ್ಲ ಜೋಡಿಸಿಕೊಂಡು ಚೀಲ ತುಂಬಿಸುತ್ತಿದ್ದಳು. ನಿಧಾನವಾಗಿ ನನ್ನೊಳಗಿನ ಮಂಜು ಕರಗಿ ಚಿತ್ರ ಸ್ಪಷ್ಟವಾಯ್ತು. ಬಟ್ಟೆ ಮಡಚಿ ಚೀಲದೊಳಗೆ ಇಡುತ್ತಿದ್ದವಳನ್ನು ಹಾಗೇ ತಬ್ಬಿಕೊಂಡು ಅತ್ತುಬಿಟ್ಟೆ.
‘ಎಲ್ಲೂ ಹೋಗ್ಬೇಡ ಹರಿಣಿ. ಇಲ್ಲೇ ಇದ್ದುಬಿಡು. ನಾವು ಮೂವರೂ ಸೇರಿ ಈ ಇಬ್ಬರನ್ನು ಬೆಳೆಸುವಾ. ನಮ್ಮ ಸ್ನೇಹ ಉರುಳಾಗುದಿಲ್ಲ ನಿನ್ಗೆ, ನೆರಳಾಗ್ತದೆ. ಇಲ್ಲಿಯೇ ಇರು...’
ನಾನು ಮಾತಾಡ್ತ ಇದ್ದ ಹಾಗೆಯೇ ಲಚ್ಚಮ್ಮ ಒಳಗೆ ಬಂದ್ರು.
‘ನಳಿನಿ, ಹರಿಣಿ ಬೇರೆಲ್ಲಿಗೂ ಹೋಗುದಿಲ್ಲ ಮಾರಾಯ್ತಿ. ಇಲ್ಲೇ ಹಿಂದಿನ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ಇರ್ತಾಳೆ. ಇವತ್ತೇ ನಾವಲ್ಲಿಗೆ ಹೋಗುದು ಅಂತ ನಿರ್ಧಾರ ಆಗಿದೆ, ನಿನ್ನೆ ರಾತ್ರೆ...’
‘ಅಂದ್ರೆ... ಇದೆಲ್ಲ ನನ್ಗೆ ಯಾಕೆ ಹೇಳ್ಲಿಲ್ಲ? ಸುಮುಖ್ ಕೂಡಾ ನನ್ನಿಂದ ಗುಟ್ಟು ಮಾಡಿದ್ದು ಯಾಕಂತೆ? ಇದ್ರೊಳಗೆ ಬೇರೇನು ಕಥೆ ಸೇರಿದೆ? ಯಾಕೆ ನಂಗೆ ಹೇಳ್ಲಿಲ್ಲ?’
‘ನಿಂಗೆ ಹೇಳ್ಬಾರ್ದು ಅಂತ ಅವ್ರೇ ನಮ್ಗೆ ತಾಕೀತು ಮಾಡಿ ಹೋಗಿದ್ದಾರೆ. ನಂಗೆ ಮನೆ ನೋಡಿ ಮಾತಾಡಿ ಬಂದದ್ದೇ ಅವ್ರು, ಮೊನ್ನೆಯೇ. ನಿಂಗೆ ಯಾಕೆ ಹೇಳ್ಲಿಲ್ವೋ ಗೊತ್ತಿಲ್ಲ, ಹೇಳ್ಬೇಡಿ ಅಂತಂದ್ರು. ಅದ್ಕೇ ನಾವು ಹೇಳ್ಲಿಲ್ಲ...’
‘ನಿಂಗೆ ಸರ್‌ಪ್ರೈಸ್ ಮಾಡ್ಬೇಕು ಅಂತ ಏನನ್ನೂ ಹೇಳ್ಲಿಲ್ಲ ಮಾರಾಯ್ತಿ...’ ತಲೆಯಲ್ಲೊಂದು ತೊಟ್ಟಿಲು ಹೊತ್ತು ನಿಂತ ಸುಮುಖ್ ನನ್ನೊಳಗೆ ನಗುವನ್ನೂ ಕೋಪವನ್ನೂ ಒಟ್ಟಿಗೇ ಉಕ್ಕಿಸಿದರು. ಅವರ ಹಿಂದೆಯೇ ಇನ್ನೊಂದು ತೊಟ್ಟಿಲು ಹೊತ್ತ ಒಬ್ಬ ಆಳು.

‘ನೀವು ಆಫೀಸಿಗೆ ಹೊರಟದ್ದಲ್ವಾ? ಇದೆಲ್ಲ ಕಿತಾಪತಿ ಯಾಕೆ ಅಂತ? ನಂಗೆ ಹೇಳಿದ್ರೆ ಏನಾಗ್ತಿತ್ತು?’
‘ನಿಂಗೆ ಮೊನ್ನೆಯೇ ಹೇಳಿದ್ರೆ ನೀನು ಮೊನ್ನೆಯಿಂದಲೇ ಅಳ್ತಾ ಇರ್ತಿದ್ದಿ. ಎರಡು ದಿನದ ಕಣ್ಣೀರು ಉಳಿತಾಯ ಆಯ್ತು ಈಗ, ಅಷ್ಟೇ.’ ಮತ್ತೊಂದು ಮಿಂಚುನಗು. ಅದೀಗ ನನ್ನ ಕಣ್ಣಬಿಂದುಗಳಲ್ಲಿ ಪ್ರತಿಫಲಿಸಿತು. ಕೆನ್ನೆಗಳಲ್ಲಿ ಇಳಿಯಿತು. ಹರಿಣಿ ತಬ್ಬಿಕೊಂಡಳು.
‘ಎರಡು ದಿನಗಳಿಂದ ಕಟ್ಟಿಕೊಂಡ ನನ್ನ ದುಃಖದಕಟ್ಟೆ ಇವತ್ತೀಗ ಹರೀತದೆ, ನಳಿನಿ...’
‘ಬಕೆಟ್ ತನ್ನಿ ಲಚ್ಚಮ್ಮ...’
‘ಅಯ್ಯಾ, ಬಕೆಟ್ ಮತ್ತೆ ತರ್ಲಿ, ಈ ತೊಟ್ಟಿಲು ಎಲ್ಲಿಡ್ಲಿ ಹೇಳಿ ಮೊದ್ಲು...’
ಎಲ್ಲರ ನಗುವಿನ ನಡುವೆ ಮಕ್ಕಳೂ ಮೆಲ್ಲ ರಾಗ ಎತ್ತಿದರು. ನಾನು ವಾಸ್ತವಕ್ಕೆ ಬಂದೆ. ಮುಖ ಒರಸಿಕೊಂಡೆ.
‘ಏನಿದೆಲ್ಲ ಒಳಸಂಚು? ಈಗ್ಲಾದ್ರೂ ಹೇಳ್ತೀರಾ? ಸುಮುಖ್, ನೀವೇ ಹೇಳ್ಬೇಕು, ದೊಡ್ಡ ಕಿಲಾಡಿ ಆಗಿದ್ದೀರಿ ನೀವು. ನೀವೇ ತಪ್ಪೊಪ್ಪಿಗೆ ಹೇಳಿಕೆ ಕೊಟ್ರೆ ಕ್ಷಮೆ ಸಿಗ್ಬಹುದು.’
‘ಒಂದೊಳ್ಳೆ ಕಡಕ್ ಚಾ ಸಿಕ್ಕಿದ್ರೆ ತಪ್ಪೊಪ್ಪಿಗೆ ಹೇಳಿಕೆ ಕೊಡುವ ಬಗ್ಗೆ ಯೋಚನೆ ಮಾಡಬಹುದೇನೋ...’
‘ನೀವೆಲ್ಲ ಮಾತಾಡ್ತಾ ಕೂತ್ಕೊಳ್ಳಿ. ಕಡಕ್ ಚಾ ನಾನ್ ಮಾಡಿ ತರ್ತೇನೆ.’ ಲಚ್ಚಮ್ಮ ಒಳಗೆ ಹೋದ್ರು. ನಾವು ಇಬ್ಬರು ಮಕ್ಕಳನ್ನೂ ಎತ್ತಿಕೊಂಡು ನಡುಮನೆಯ ಸೋಫಾಗಳಲ್ಲಿ ಕೂತೆವು. ಎರಡು ಜೋಡಿ ಕಣ್ಣುಗಳು ಸುಮುಖ್ ಮುಖದಲ್ಲಿ ನೆಲೆಯಾದವು.