ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 11 September, 2008

ಆಧಾರ ಸೂತ್ರ

ನಿನ್ನ ನೆನಪು ಮೂಡಿ ಬರಲು ಹಗುರವಾಯ್ತು ಜೀವ
ಕಣ್ಣು ತುಂಬಿ ಕಲಕಿದಾಗ ಕರಗಿತೆಲ್ಲ ಭಾವ

ಅಲ್ಲಿ ಇಲ್ಲಿ ದಿಕ್ಕು ಹುಡುಕಿ ಬಿಕ್ಕುತಿರಲು ತಾನು
ಬಲ್ಲರಾರು ಏನು, ಎತ್ತ; ಮಂಜೊಳು ಬುವಿ-ಬಾನು
ಎಲ್ಲಿ ಇದ್ದೆ, ಎಲ್ಲಿ ಎದ್ದೆ, ಅರಿಯದಿರುವ ಚಿಣ್ಣ
ಸಲ್ಲಲಹುದು ಕೆಸರಿನಲ್ಲಿ ಹೊಂದಾವರೆ ಬಣ್ಣ

ಜೀವಕೋಟಿ ಚರಾಚರದೊಳಗೆ ಮನುಜ ಭ್ರಷ್ಟ
ಭಾವಲೋಕ ಭುವನದಲ್ಲಿ ನಿತ್ಯ ಕಷ್ಟ-ನಷ್ಟ
ಕಾವ ಸತ್ಯವೊಂದೆ ಅರಿಯೊ, ಇರಲು ಸತ್ವದರಿವು
ಆವ ಬಲವು ಬೇಕಿದೆಯೊ, ಬೆಳೆಯಲಾತ್ಮ ಛಲವು!

ಪಾಂಚಜನ್ಯ ಮೊಳಗಲೀಗ- ನಡುಗಲಳ್ಳೆದೆಯು
ಸುಪ್ರಬೋಧ ಬೆಳಗಲೀಗ- ಅಡಗಲಜ್ಞತೆಯು
ತೇಜಃಪುಂಜ ಹೊಳೆಯಲೀಗ- ಉಡುಗಲೆಲ್ಲ ಕ್ರೌರ್ಯ
ಮೌಢ್ಯತೆಯನು ಕಳೆಯಲೀಗ- ಪೊಡವಿಗಾಚಾರ್ಯ

(೧೦-ಸೆಪ್ಟೆಂಬರ್-೨೦೦೧; ರಾತ್ರೆ ೧:೪೮)

(ಮಲಗಿದ್ದವಳನ್ನು ನಿದ್ರಿಸಗೊಡದೆ, ಎಬ್ಬಿಸಿ, ಈ ಕವನ "ತನ್ನನ್ನು ತಾನು ಬರೆಸಿಕೊಂಡ" ಮರುಬೆಳಗ್ಗೆಯೇ ಜಗತ್ತನ್ನು ನಡುಗಿಸಿದ ಘಟನೆ ನಡೆದದ್ದು ನನಗಿನ್ನೂ ಅರಗಿಸಿಕೊಳ್ಳಲಾಗದ ವಿಸ್ಮಯ)

Friday 5 September, 2008

ಶಿಕ್ಷಕ

ಭಾಗ ೧:-- ಶಿಕ್ಷಕ ಹೀಗಾದರೆ?

ಶಿಕ್ಷಕ ತಕ್ಷಕನಾದರೆ ಮನುಕುಲಕ್ಕೆ-
ಅಮೃತವುಣಿಸುವವರಾರು?
ಶಿಕ್ಷಕ ಭಕ್ಷಕನಾದರೆ ಬೆಳೆವ-
ಸಿರಿಯ ಮೊಳಕೆಗೆ ರಕ್ಷಕರಾರು?

ಶಿಕ್ಷಕ ವಂಚಕನಾದರೆ ನವಯುಗದ-
ಭವಿತವ್ಯದ ಹಿತಚಿಂತಕರಾರು?
ಶಿಕ್ಷಕ ಅಚೇತನನಾದರೆ ಭಾರತಮಾತೆಯ-
ಕೀರ್ತಿಪತಾಕೆಯ ಚೈತನ್ಯವಾರು?

ಭಾಗ ೨:-- ಶಿಕ್ಷಕ ಹೇಗಿರಬೇಕು?

ತಕ್ಷಕನಾಗಿ ಭಕ್ಷಕರನ್ನು ಎದುರಿಸಿ ನಿಲಬೇಕು,
ರಕ್ಷಕನಾಗಿ ನವಯುವಶಕ್ತಿಗೆ ಧೈರ್ಯವ ಕೊಡಬೇಕು.

ಚೇತನವಾಗಿ ಮುಗ್ಧ ಮನಸಿಗೆ ಜಾಗೃತಿ ತರಬೇಕು,
ಚಿಂತನಶೀಲ ತರುಣಗಣಕ್ಕೆ ಪ್ರಣತಿಯಾಗಬೇಕು.

ಮಮತೆ, ಕರುಣೆ, ವಾತ್ಸಲ್ಯಗಳ ಚಿಲುಮೆಯಾಗಬೇಕು,
ಭಾರತಮಾತೆಯ ಕೀರ್ತಿಪತಾಕೆಗೆ ಭದ್ರ ಬುನಾದಿಯಾಗಬೇಕು.
(ಆಗಸ್ಟ್-೧೯೯೨)

(ಬೆಂಗಳೂರಿನ ವಿಜಯಾ ಶಿಕ್ಷಕರ ತರಬೇತಿ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ನನ್ನ ಸಹಪಾಠಿಗಳ ಧೋರಣೆ, ಸುತ್ತಮುತ್ತಲ ಶಾಲೆಗಳಿಗೆ ಕಲಿಕೆ-ಪಾಠಗಳಿಗೆಂದು ಹೋಗುತ್ತಿದ್ದಾಗ ಅಲ್ಲಿನ ಶಿಕ್ಷಕರ ಧೋರಣೆ ಕಂಡು ಬೇಸರದಿಂದಲೂ ಹತ್ತಿರ ಬರುತ್ತಿದ್ದ ಶಿಕ್ಷಕರ ದಿನಾಚರಣೆಯ ಸಂದರ್ಭವೆಂತಲೂ ಗೀಚಿಕೊಂಡದ್ದು. ಈಗ ಮತ್ತೊಮ್ಮೆ, ಈ ಕವನದ ಮೂಲಕ ನಮ್ಮೆಲ್ಲಾ ಶಿಕ್ಷಕವರ್ಗಕ್ಕೆ ವಂದನೆಗಳು.)