ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 27 December, 2010

ಸುಮ್ಮನೆ ನೋಡಿದಾಗ...೦೯

ಎಷ್ಟೋ ಹೊತ್ತಿನ ನಂತ್ರ ಸುಮುಖ್ ಮಿಂಚಿನ ಹಾಗೆ ನಕ್ಕರು. ಹುಬ್ಬು ಹಾರಿಸಿ ಸಿಳ್ಳೆ ಹಾಕಿದರು.
‘ಏನು? ಇಷ್ಟು ಖುಷಿಯಾಗುವಂಥಾದ್ದು ಏನಾಯ್ತೀಗ?’
‘ಅಮ್ಮ ಹೇಗೂ ಇನ್ನು ಒಂದು ವರ್ಷ ಇಲ್ಲಿಗೆ ಬರೋದಿಲ್ಲ...’
‘ಅದ್ಕೇ...?!’
‘ಅದ್ಕೇ, ಹರಿಣಿ ಇಲ್ಲೇ ಇರ್ಲಿ...’ ಈಗ ಮಿಂಚು ನನ್ನ ಕಣ್ಣಲ್ಲಿ, ಮನದಲ್ಲಿ. ‘ನಾನೂ ಇದನ್ನೇ ನಿರ್ಧರಿಸಿದ್ದೆ’ ಎಂದೆ.
‘ಅಷ್ಟೇ ಅಲ್ಲ ಮಾರಾಯ್ತಿ. ಅವಳಿಲ್ಲೇ ಇದ್ದುಕೊಂಡು ಮಗು ಹೆರಲಿ. ಆಮೇಲೆ... ಅವಳಿಗೆ ಮಗು ಬೇಡವಾಗಿದ್ರೆ...’
‘...ನಮಗಿರಲಿ...’
‘ಹೇಗೂ ಅವ್ಳು ನಿನ್ನ ಪ್ರಾಣಸ್ನೇಹಿತೆ. ಸಮಯ ನೋಡಿ ಹೇಳಿದನ್ನು ಅವಳಿಗೆ. ನಮಗೇನು? ಅಮ್ಮ ಮತ್ತೆ ಇಲ್ಲಿ ಬರುವ ಹೊತ್ತಿಗೆ ಒಂದು ಮಗು ಇದ್ರೆ ಖುಷಿಯಾಗ್ತಾಳೆ. ನಿನ್ನ ಮೇಲೆ ರೇಗಾಡುದೂ ನಿಲ್ತದೆ. ಆಗ್ದಾ?’
‘ಹಾಗಲ್ಲ ಸುಮುಖ್, ಇದೆಲ್ಲ ನಾವು ಅಂದುಕೊಳ್ಳುವಷ್ಟು ಸರಳ ಅಲ್ಲ. ಯಾವುದಕ್ಕೂ ನಾನು ಹರಿಣಿ ಹತ್ರ ಮಾತಾಡ್ತೇನೆ. ನೋಡುವಾ. ನೀವು ಹೇಳಿದ ವಿಚಾರ ಆಗ್ಲೇ ನನ್ನ ತಲೆಯಲ್ಲಿ ಬಂದಿತ್ತು. ನಿಮಗೆ ಹೇಳ್ಲಿಲ್ಲ, ನೀವೇನು ಅಂದ್ಕೊಳ್ತೀರೋಂತ....’
‘ನೋಡಿದ್ಯಾ? ನಮ್ಮಿಬ್ರ ಯೋಚನೆಯೂ ಒಂದೇ ಅಂತಾಯ್ತು. ಚಿಂತಿಸ್ಬೇಡ, ಆಯ್ತಾ? ಎಲ್ಲ ಸರಿಯಾಗ್ತದೆ. ಎಲ್ಲ ಸುಸೂತ್ರ ಆಗ್ತದೆ. ಹಾಗಂತ ನನ್ ಮನಸ್ಸು ಹೇಳ್ತಾ ಉಂಟು. ಈಗ ನಾನು ಒಂದು ಸಣ್ಣ ನಿದ್ದೆ ಮಾಡ್ಬಹುದಾ...’
‘ಮಾಡಿ ಮಾರಾಯ್ರೆ. ಸಣ್ಣದ್ಯಾಕೆ, ದೊಡ್ಡ ನಿದ್ದೆಯೇ ಮಾಡಿ. ಸಂಜೆ ಟೀ ಮಾಡಿ ಎಬ್ಬಿಸ್ತೇನೆ. ಮಲಗಿ.’

ಹರಿಣಿ ಹೇಳಿದ ಪ್ರಕಾರ ಅವಳಿಗೀಗ ಎರಡು ತಿಂಗಳಷ್ಟೇ. ಆಗಲೇ ಎಲ್ಲ ನಿರ್ಧಾರ ಮಾಡಿ ಬಂದಿದ್ದಾಳೆ. ಇನ್ನು ಆರೇಳು ತಿಂಗಳು ಹೆರಿಗೆಗೆ, ಮತ್ತೆ ಮೂರ್ನಾಲ್ಕು ತಿಂಗಳು ಬಾಣಂತನ. ಅಂತೂ ಅತ್ತೆ ಎಲ್ಲ ಮಕ್ಕಳ ಮನೆ ಟೂರ್ ಮುಗಿಸಿ ಬರುವ ಹೊತ್ತಿಗೆ ಮನೆಗೊಂದು ಪುಟ್ಟ ಕಂದಮ್ಮ ಬಂದಿರ್ತದೆ. ಆದ್ರೆ... ಹರಿಣಿಗೆ ಇದನ್ನು ಹೇಳುದು ಹೇಗೆ? ಹೆತ್ತ ತಾಯಿಯ ಹತ್ರ ನಿನ್ನ ಮಗುವನ್ನು ನನಗೆ ಕೊಡು ಅಂತ ಕೇಳುದು ಹೇಗೆ? ಇನ್ನೂ ಸಮಯ ಉಂಟಲ್ಲ. ನೋಡಿದ್ರಾಯ್ತು... ಲೆಕ್ಕಾಚಾರ ಹಾಕ್ತಿದ್ದೆ. ಅದೇ ಹೊತ್ತಿಗೆ ತನ್ನ ನಿದ್ದೆ ಮುಗಿಸಿ ಹರಿಣಿ ನಡುಮನೆಗೆ, ಊಟದ ಟೇಬಲ್ ಹತ್ರ ಬಂದು ನಿಂತಳು, ಏನೋ ಹೇಳುವವಳ ಹಾಗೆ.

‘ಕಾಫಿ ಮಾಡ್ಲಾ ಟೀ ಆದೀತಾ?’ ಕೇಳಿದೆ.
‘ಯಾವುದಾದ್ರೂ ಸರಿ. ನಿನ್ನ ಸ್ವರ ಯಾಕೆ ಹಾಗುಂಟು? ಸುಮುಖ್ ಹತ್ರ ಜಗಳಾಡಿದ್ಯಾ ನನ್ನ ವಿಷ್ಯ? ನಿಮಗೆ ಕಷ್ಟ ಆಗ್ಬಹುದಲ್ವಾ? ನಾನು ನಾಳೆಯೇ ಇಲ್ಲಿಂದ ಹೋಗ್ತೇನೆ. ಯೋಚಿಸ್ಬೇಡ...’ ಬಡಬಡಾಯಿಸಿದಳು.
ಅವಳನ್ನು ಕೈ ಹಿಡಿದು ಎಳೆದು ನನ್ನ ಬದಿಯ ಕುರ್ಚಿಯಲ್ಲಿ ಕುಳ್ಳಿರಿಸಿದೆ. ‘ಹಾಗೇನೂ ಇಲ್ಲ ಮಾರಾಯ್ತೀ. ಜಗಳವೂ ಇಲ್ಲ ಏನೂ ಇಲ್ಲ. ನೀನು ಇಲ್ಲೇ ಇರೂಂತ ಅವರೂ ಹೇಳಿದ್ರು.’
‘ನಿನ್ನತ್ತೆ...?!’
‘ಅತ್ತೆ ಎಲ್ಲ ಮಕ್ಕಳ ಮನೆಗಳಿಗೆ ಟೂರ್ ಹೊರಟಿದ್ದಾರೆ. ಎಲ್ಲಾ ಕಡೆ ಸುತ್ತಾಡಿ ಇಲ್ಲಿ ಬರುವಾಗ ಒಂದು ವರ್ಷವೇ ಆಗ್ತದೆ. ಅಷ್ಟೊತ್ತಿಗೆ ನಿನ್ನ ಹೆರಿಗೆ ಆಗಿ ಮೂರ್ನಾಲ್ಕು ತಿಂಗಳೂ ಆಗಿರ್ತದೆ, ಅಲ್ವಾ? ನೀನೇನೂ ಚಿಂತೆ ಮಾಡುದೇ ಬೇಡ. ಎಲ್ಲ ಇಲ್ಲಿಯೇ ಆಗ್ಲಿ. ಇಲ್ಲೇ ಇರು ನೀನು.’
ದೀರ್ಘವಾದ ನಿಟ್ಟುಸಿರು ಬಿಟ್ಟು ಕುರ್ಚಿಯಲ್ಲಿ ಆರಾಮವಾಗಿ ಕೂತಳು ಹರಿಣಿ.

ನಾನು ಟೀ ಮಾಡಿ ತಂದು ಇವರನ್ನು ಎಬ್ಬಿಸಿದೆ. ಮೂವರೂ ಜೊತೆಯಾಗಿ ಟೀ ಹೀರುತ್ತಿರುವಾಗ ಸುಮುಖ್ ನೇರವಾಗಿ ಅವಳನ್ನೇ ನೋಡಿ, ‘ಹರಿಣಿ, ನಿಮ್ಮನ್ನು ನನ್ನ ಸ್ನೇಹಿತೆ ಅಂತಲೂ ತಿಳಿದಿದ್ದೇನೆ. ನಮ್ಮಿಬ್ಬರ ಸ್ನೇಹ ನಿಮಗೆ ಕಹಿ ಆಗಲಾರದು. ಹೊರೆ ಆಗಲಾರದು ಅಂದುಕೊಳ್ತೇನೆ. ನೀವಿಲ್ಲೇ ಇರಿ ಅಂತ ನಮ್ಮಾಸೆ. ಇಲ್ಲ ಅಂತ ಹಠಕ್ಕೆ ಬೀಳ್ಬೇಡಿ. ಮೂರು ಜೀವಗಳಿಗೆ ನೋವಾಗ್ತದೆ. ಇದಕ್ಕಿಂತ ಹೆಚ್ಚಾಗಿ, ನಿಮ್ಮ ಅಮ್ಮನ ಮನೆಗೇ ಹೋಗುವ ಹಾಗಿದ್ರೆ ನನ್ನ ಅಭ್ಯಂತರ ಇಲ್ಲ. ಯೋಚನೆ ಮಾಡಿ.’ ಅಂದರು.

ಟೀ ಲೋಟದ ಹೊಗೆ ಸುರುಳಿಯೊಳಗೆ ಏನನ್ನೋ ಹುಡುಕುತ್ತಿದ್ದಳು ಹರಿಣಿ.

Monday 20 December, 2010

ಸುಮ್ಮನೆ ನೋಡಿದಾಗ...೦೮

ಮಧ್ಯಾಹ್ನದ ಊಟ ಮುಗಿಸಿ ಹರಿಣಿ ನಿದ್ದೆಗೆ ಜಾರಿದಳು. ತಂಗಿ ಶಂಕರಿಯ ಮನೆಯಲ್ಲಿ ಅಮ್ಮನನ್ನು ಬಿಟ್ಟು ಬಂದಿದ್ದ ಸುಮುಖ್ ಹರಿಣಿಯನ್ನು ಇಲ್ಲಿ ನೋಡಿ ಹುಬ್ಬೇರಿಸಿದ್ದರು, ಅಷ್ಟೇ. ಕುರ್ಚಿಯಲ್ಲೇ ನಡುಹಗಲಿನ ಸಿಹಿನಿದ್ದೆಗೆ ಜಾರಬೇಕೂಂತ ಅಂದಾಜು ಮಾಡ್ತಾ ಪೇಪರ್ ಹಿಡಿದವರನ್ನು ರೂಮಿಗೆ ಕರೆದೆ. ಮತ್ತೊಮ್ಮೆ ಹುಬ್ಬು ಹಾರಿಸುತ್ತಾ ಕಳ್ಳ ನಗುವಿನ ಒಟ್ಟಿಗೆ ಸಣ್ಣಗೆ ಸಿಳ್ಳೆ ಹಾಕುತ್ತಾ ಒಳಗೆ ಬಂದವರ ಬೆನ್ನಿಗೊಂದು ಗುದ್ದಿ ಹೇಳಿದೆ, ‘ಸರಸಕ್ಕೆ ಕರ್ದದ್ದೇ ಅಲ್ಲ ನಾನು. ವಿಷಯ ಗಂಭೀರವಾಗಿದೆ. ಸ್ವಲ್ಪ ಗಮನ ಇಟ್ಟು ಕೇಳಿ, ಆಯ್ತಾ?’

ನನ್ನ ಸೀರಿಯಸ್ ಸ್ವರ ಅವರ ರೋಮಿಯೋನನ್ನು ಓಡಿಸಿತ್ತು. ಮಕ್ಕಳೇ, ನಿಮ್ಮ ಮುಂದೆ ಇದೆಲ್ಲ ಹೇಳ್ಲಿಕ್ಕೆ ನಂಗೇನೂ ತೊಂದ್ರೆ ಇಲ್ಲ. ಯಾಕಂದ್ರೆ, ನಾಳೆ ನಾಳೆ ಅನ್ನುವಾಗ ನೀವೂ ಇದೇ ದಾರಿಯಲ್ಲಿ ಬರುವವರು. ಆದ್ರಿಂದ ನಂಗೇನೂ ನಾಚಿಕೆ ಇಲ್ಲ, ಇದನ್ನೆಲ್ಲ ಬಿಚ್ಚಿಡ್ಲಿಕ್ಕೆ. ಕೇಳಿ. ನನ್ನ ಸೀರಿಯಸ್ ಸ್ವರ ಕೇಳಿ, ಅವರೂ ಗಂಭೀರವಾದರು. ಹರಿಣಿ ಹಿಂದಿನ ರಾತ್ರೆಯೆಲ್ಲ ನಿರೂಪಿಸಿದ ಅವಳ ಐದು ವರ್ಷದ ಜೀವನವನ್ನು ಸುಮುಖ್ ಮುಂದೆ ಬಿಚ್ಚಿಟ್ಟೆ.

“ಚಿನ್ಮಯ್ ಕನ್ಸಲ್ಟೆನ್ಸಿಯ ಮ್ಯಾನೇಜರ್, ಹರಿಣಿಯ ಮಾವನ ಪರಿಚಯಸ್ಥ ಚಿದಾನಂದ. ಇವಳನ್ನು ಪಿ.ಎ. ಆಗಿ ನೇಮಿಸಿಕೊಂಡಿದ್ದ. ಮೊದಮೊದಲು ಎಲ್ಲವೂ ಸುಸೂತ್ರವಾಗಿಯೇ ಇತ್ತು. ಏಳೆಂಟು ತಿಂಗಳು ಕಳೆಯುವಾಗ ಆಫೀಸಿನ ಎಲ್ಲರ ಸ್ನೇಹ ಗಳಿಸಿಕೊಂಡಿದ್ದಳು. ಅಲ್ಲೇ ಇನ್ನೊಬ್ಬ ಮ್ಯಾನೇಜರ್ ವಿನ್ಯಾಸ್. ಇವಳ ಬಗ್ಗೆ ವಿಶೇಷ ಅಕ್ಕರೆ ತೋರಿಸ್ತಿದ್ದ. ಸುಮಾರು ಒಂದು ವರ್ಷದ ವರೆಗೂ ಇವಳಿಗದು ಗಮನಕ್ಕೇ ಬಂದಿರಲಿಲ್ಲ. ಒಂದು ದಿನ ಚಿದಾನಂದ್ ನೇರವಾಗಿ ಹರಿಣಿಯನ್ನು ಕರೆದು ವಿನ್ಯಾಸ್ ಅವಳನ್ನು ಇಷ್ಟ ಪಟ್ಟಿರುವುದಾಗಿ ತಿಳಿಸಿದ. ಬಾಸ್ ಬಾಯಿಂದ ಇಂಥ ಅನಿರೀಕ್ಷಿತ ಸುದ್ದಿ, ಇವಳ ದೃಢ ಮನಸ್ಸನ್ನು ಕದಡಿತು. ಸಮಯಾವಕಾಶ ಕೇಳಿ ರಜೆ ಹಾಕಿ ಊರಿಗೆ ಹೋದಳು. ಅಮ್ಮ, ಅಜ್ಜಿ, ಮಾವ, ಅತ್ತೆ- ಎಲ್ಲರ ಅಭಿಪ್ರಾಯವೂ ಒಂದೇ. ಒಂದು ವಾರ ಊರಲ್ಲಿದ್ದು, ತಲೆ ಕೆಡಿಸಿಕೊಂಡು ಮತ್ತೆ ಬೆಂಗಳೂರಿಗೆ ಬಂದಾಗ ಅಚ್ಚರಿ ಕಾದಿತ್ತು. ಅವಳು ಊರಿಗೆ ಹೋಗುವ ಮೊದಲೇ ವಿನ್ಯಾಸ್ ತನ್ನ ಮುಖಾಂತರ ಊರಿಗೆ ಪತ್ರ ಬರೆಸಿದ ವಿಷಯ ಚಿದಾನಂದ್ ತಿಳಿಸಿದರು. ಅದಕ್ಕೇ ಅವರೆಲ್ಲರೂ ಒಮ್ಮತದಲ್ಲಿದ್ದರು ಎನ್ನುವುದು ಅವಳಿಗೆ ಹೊಳೆಯಿತು. ಅರೆಮನಸ್ಸಿನಿಂದಲೇ ವಿನ್ಯಾಸ್ ಜೊತೆ ಮದುವೆಗೆ ಒಪ್ಪಿಕೊಂಡಳು.

ಒಪ್ಪಿಗೆ ಕೊಟ್ಟದ್ದೇ ಸಾಕೆನ್ನುವ ಹಾಗೆ ವಿನ್ಯಾಸ್ ಆಕೆಯನ್ನು ಓಲೈಸತೊಡಗಿದ. ಅವನ ಮೃದು ಮಾತು, ನಾಜೂಕು ನಡವಳಿಕೆ, ಪ್ರೀತಿ ಪ್ರವಾಹ, ಔಟಿಂಗ್ ಔತಣ, ರೊಮ್ಯಾಂಟಿಕ್ ರೋಮಾಂಚನ... ಎಲ್ಲದರ ಹೊನಲಲ್ಲಿ ತೇಲಿ ಮುಳುಗಿ ಕಳೆದೇ ಹೋದಳು ಸಿಡಿಗುಂಡು ಹರಿಣಿ. ಅವಳ ಕೋಪಾಟೋಪ ಎಲ್ಲವೂ ಶಾಂತಸಾಗರದಲ್ಲಿ ಲೀನ. ತನ್ನ ಹಿರಿಯರನ್ನು ಒಪ್ಪಿಸಿಯೇ ತಾನು ಮದುವೆಯಾಗುವುದು ಅಂತಲೇ ಮದುವೆಯ ಮಾತನ್ನು ಮುಂದೂಡುತ್ತಾ ಬಂದವನ ಕಣ್ಣಲ್ಲಿ ಕಣ್ಣಿಟ್ಟು ತನ್ನ ನೋಟದ ಗುರಿ ತಪ್ಪಿಸಿಕೊಂಡಳು. ಹೀಗೇ ಎರಡು ವರ್ಷಗಳೇ ಕಳೆದವು. ಇಷ್ಟಾದರೂ ಇವಳ ಅಮ್ಮ, ಅಜ್ಜಿ, ಮಾವನಾಗಲೀ ವಿನ್ಯಾಸನ ಮನೆಯವರಾಗಲೀ ಮದುವೆಯ ಬಗ್ಗೆ ಯಾವುದೇ ಮಾತೆತ್ತಲಿಲ್ಲ. ಪ್ರೇಮದಲ್ಲಿ ಈಜುತ್ತಿದ್ದವಳಿಗೆ ತಾನೆಲ್ಲಿದ್ದೇನೆನ್ನುವ ಅರಿವು ಇರಲಿಲ್ಲ. ಎತ್ತ ಸಾಗುತ್ತಿದ್ದೇನೆನ್ನುವುದು ಗಮನಕ್ಕೇ ಬರಲಿಲ್ಲ. ತನ್ನ ರೂಮ್ ಖಾಲಿಮಾಡಿ ಆತನ ಜೊತೆಯಾಗಿ ಬಾಡಿಗೆ ಮನೆಯನ್ನೂ ಮಾಡಿದ್ದಾಯ್ತು.

ಒಂದೇ ಮನೆಯಿಂದ ಒಂದೇ ಆಫೀಸಿಗೆ ಅವನ ಬೈಕಿನಲ್ಲಿ ಹೋಗಿಬರುವ ಯಾವುದೋ ಘಳಿಗೆಯಲ್ಲಿ ವಿನ್ಯಾಸ್ ತನ್ನವನು ಅನ್ನಿಸಿತ್ತು ಹರಿಣಿಗೆ. ತಾನೂ ಅವನವಳಾಗುವ ಹಂಬಲ ಚಿಮ್ಮಿತು. ಬಯಕೆಯ ಕೋಡಿ ಒಡೆಯಲು ಅಷ್ಟೇ ಸಾಕಾಗಿತ್ತು. ಇಬ್ಬರಿಗೂ ಅದೇ ಬೇಕಾಗಿತ್ತು; ಬೆರೆತರು. ಬಂಧವಿಲ್ಲದ ಬಂಧನದಲ್ಲಿ ಸೆರೆಯಾದರು. ಸಮಯ ಯಾರನ್ನೂ ಕೇಳಲಿಲ್ಲ, ಕಾಯಲಿಲ್ಲ. ಪ್ರಕೃತಿ ತನ್ನ ಕೆಲಸ ಮುರಿಯಲಿಲ್ಲ. ಮುಂಜಾಗರೂಕತೆ ಮಾಡಿಯೂ ಹರಿಣಿಯ ಲೆಕ್ಕ ನೆಲೆ ತಪ್ಪಿತ್ತು. ಅಮ್ಮನಿಗೆ ಫೋನ್ ಮಾಡಿದಳು. ‘ಹಾದಿ ತಪ್ಪಿದ ನೀನು ನನ್ನ ಮಗಳೇ ಅಲ್ಲ. ನೀನಿಲ್ಲಿಗೆ ಬಂದು ನನ್ನ ತೌರಲ್ಲಿ ನನ್ನ ಮರ್ಯಾದೆ ತೆಗೀಬೇಡ’ ಅಂದುಬಿಟ್ಟರು ಆ ಮಹಾತಾಯಿ. ಅಮ್ಮನೇ ಹಾಗಂದಮೇಲೆ ಇನ್ನು ಯಾರನ್ನೂ ನೆಚ್ಚಿಕೊಂಡು ಫಲವಿಲ್ಲ ಅನ್ನಿಸಿ ವಿನ್ಯಾಸ್ ಜೊತೆಗೇ ಮಾತೆತ್ತಿದಳು. ನಿನ್ನ ಹಿರಿಯರು ಒಪ್ಪುವ ಹೊತ್ತಿಗೆ ನಾವಿಬ್ರೂ ಅಜ್ಜ-ಅಜ್ಜಿ ಆಗಿರ್ತೀವೇನೋ. ಈಗ್ಲಾದ್ರೂ ದೇವಸ್ಥಾನದಲ್ಲಿ ಮದುವೆ ಆಗೋಣ ಅಂದಳು. ಸಾಧ್ಯವೇ ಇಲ್ಲ. ಹೀಗೇ ಮುಂದುವರಿಯೋದಕ್ಕೂ ಸಾಧ್ಯವಿಲ್ಲ. ತೆಗೆಸಿಕೋ ಅಂದುಬಿಟ್ಟ. ಚಿದಾನಂದ್ ಕೈಚೆಲ್ಲಿದ. ನಿಮ್ಮ ಸಮಸ್ಯೆಯಲ್ಲಿ ನನ್ನದೇನು ಸಾರಥ್ಯ ಅಂತ ಚಾಟಿಯೆತ್ತಿದ. ವಿನ್ಯಾಸ್ ಜೊತೆಯಾಗಿ ಇನ್ನು ಬದುಕುವುದರಲ್ಲಿ ಅರ್ಥವಿಲ್ಲ ಅಂತನ್ನಿಸಿ ಸೀದಾ ನಮ್ಮನೆಗೇ ಬಂದಿದ್ದಾಳೆ. ಈಗೇನ್ ಮಾಡೋದು ಹೇಳಿ...’’ ದೀರ್ಘ ಮೌನ ನಮ್ಮಿಬ್ಬರ ನಡುವೆ ಹಬ್ಬಿಕೊಂಡಿತು.

Monday 13 December, 2010

ಸುಮ್ಮನೆ ನೋಡಿದಾಗ...೦೭

ಇಷ್ಟಾಗುವಾಗ ಗಂಟೆ ಮೂರೂವರೆಯ ಆಸುಪಾಸು. ಆಂಟಿ ಸುಮ್ಮನೇ ಕಣ್ಣುಮುಚ್ಚಿ ಧ್ಯಾನಿಸುತ್ತಿದ್ದರು. ಬೇಗ ಹೇಳಬಾರದಾ ಕಥೆಯನ್ನು? ಅವರು ಹೇಳುದನ್ನು ಕೇಳಿ, ನನ್ನ ಕೋಪವನ್ನು (ಅವರು ಹೇಳಿದ ಹಾಗೆ ಕೋಪ ಬಂದ್ರೆ!) ಸರಿಯಾದ ದಾರಿಯಲ್ಲಿ ಹರಿಬಿಟ್ಟು ಸಮಾಧಾನವಾಗಿ ಮನೆಗೆ ಹೋಗಬೇಕಲ್ಲ! ಅದಕ್ಕೆ ಸಮಯ ಬೇಕಲ್ಲ! ನನ್ನ ಚಿಂತೆಯಲ್ಲಿ ನಾನಿದ್ದೆ. ನೇಹಾಳ ಕಂಗಳಲ್ಲಿ ಗೊಂದಲ, ಕುತೂಹಲ ಎರಡರ ಬೆರಕೆ.
***

ಆಂಟಿ ಶುರು ಮಾಡಿದರು -
ಮೂವತ್ತು ವರ್ಷ ಹಿಂದಿನ ಮಾತು ಅಂತ ಹೇಳಿದ್ನಲ್ಲ. ಅದೂ ನಿಖರ ಅಲ್ಲ. ಅದಕ್ಕೂ ಹಿಂದೆಯೇ ನನ್ನ ಮತ್ತು ಹರಿಣಿಯ ಸ್ನೇಹ ಆಗಿತ್ತು. ನಿಮ್ಮಿಬ್ಬರ ಹಾಗೆಯೇ ನಾವಿಬ್ರೂ ಒಟ್ಟಿಗೇ ಶಾಲೆಗೆ, ಕಾಲೇಜಿಗೆ ಹೋದವರು. ಆಚೀಚೆ ಮನೆಗಳಲ್ಲಿದ್ದು ಅವಳಿಗಳ ಹಾಗೆ ಬೆಳೆದವರು. ಆದ್ರೂ ನಮ್ಮಿಬ್ಬರ ಸ್ವಭಾವ ಮಾತ್ರ ತದ್ವಿರುದ್ಧ. ಅವಳನ್ನು ನಾನ್ಯಾವಾಗಲೂ ‘ಸಿಂಹಿಣಿ’ ‘ವ್ಯಾಘ್ರಿಣಿ’ ಅಂತೆಲ್ಲ ಛೇಡಿಸ್ತಿದ್ದೆ. ಅಷ್ಟೂ ಕೋಪ ಅವಳಿಗೆ. ನಮ್ಮ ಸ್ನೇಹಿತೆಯರೆಲ್ಲ ‘ನಳಿನಿ ತಂಪು - ಹರಿಣಿ ಕೆಂಪು’ ಅಂತ ಮಾತಾಡಿಕೊಳ್ತಿದ್ರು. ನಮ್ಮ ಮುಂದೆಯೂ ಹೇಳಿ ಹರಿಣಿಯಿಂದ ಬೈಸಿಕೊಂಡು ಪೆಟ್ಟು ತಿಂದು ಬೇಜಾರು ಮಾಡಿಕೊಂಡವರೂ ಕಡಿಮೆಯಿಲ್ಲ. ಆದ್ರೂ ನಮ್ಮ ಸ್ನೇಹ ಮಾತ್ರ ಅದು ಹೇಗೋ ಮುಂದುವರೀತು. ಎಲ್ಲರಿಗೂ ಆಶ್ಚರ್ಯ, ನನಗೂ. ಅವಳಿಗೆ ಮಾತ್ರ ನನ್ನ ಶಾಂತ ಸ್ವಭಾವದಿಂದ ತುಂಬಾ ಅನುಕೂಲ ಆಗ್ತಿತ್ತು. ಅವಳ ತಾಂಡವವನ್ನು ಕಂಟ್ರೋಲ್ ಮಾಡ್ಲಿಕ್ಕೆ ನನ್ನಿಂದ ಮಾತ್ರ ಸಾದ್ಯ ಅಂತ ಶಾಲೆಯಲ್ಲೆಲ್ಲ ಮಾತಿತ್ತು.

ಕಾಲೇಜಿನ ಎರಡನೇ ವರ್ಷದಲ್ಲಿರುವಾಗ ಅವಳಪ್ಪ ಆಸ್ತಿ ವ್ಯಾಜ್ಯದಲ್ಲಿ ಕೊಲೆಯಾದರು. ಅವಳಮ್ಮ ತೌರಿಗೆ ಹೊರಟು ನಿಂತ್ರು. ಕಾಡಿಬೇಡಿ ಹರಿಣಿ ಉಪವಾಸ ಕೂತು ಅಮ್ಮನನ್ನು ಒಪ್ಪಿಸಿ ಅದೊಂದು ವರ್ಷ ನಮ್ಮ ಮನೆಯಿಂದಲೇ ಕಾಲೇಜಿಗೆ ಹೋದಳು. ಕೊನೆಯ ವರ್ಷವನ್ನು ಬೇರೊಂದು ಕಾಲೇಜಿಗೆ ಟ್ರಾನ್ಸ್ಫ಼ರ್ ಮಾಡಿಸಿಕೊಂಡರು ಅವಳಜ್ಜಿ ಮನೆಯವರು. ನಮ್ಮಿಬ್ಬರ ನಡುವೆ ಪತ್ರ ವ್ಯವಹಾರ ಮಾತ್ರ ಉಳೀತು, ಅದೂ ಸ್ವಲ್ಪ ಸಮಯ ಮಾತ್ರ. ಅವಳ ಸೋದರ ಮಾವ ಹದ್ದಿನ ಕಣ್ಣಿನ ಗೂರ್ಖಾ ಅಂತ ನಾವಿಬ್ರೂ ತಮಾಷೆ ಮಾಡಿಕೊಂಡಿದ್ದೆವು ಕಾಗದದಲ್ಲಿ. ಅವಳ ಕೋಪಾಟೋಪ ಎಲ್ಲಿಂದ ಬಂತೂಂತ ಗೊತ್ತಾಯ್ತು ಅಂದಿದ್ದೆ ನಾನು. ಕಾಲಕ್ರಮೇಣ ಮಾವನ ಅಂಕೆಯೊಳಗೆ ಕಾಗದ ಬರೆಯುವುದೂ ನಿಂತಿತು. ಒಂದೂವರೆ ವರ್ಷ ಕಾಲ ಅವಳ ಸುದ್ದಿಯೇ ಇರಲಿಲ್ಲ.

ನನ್ನ ಮದುವೆಯ ಸುದ್ದಿ ಕೇಳಿ ಹಿಂದಿನ ದಿನವೇ ಬಂದವಳು ನನ್ನ ಒಟ್ಟಿಗೇ ಇದ್ದಳು. ಮದುವಣಗಿತ್ತಿಯ ಜೊತೆಗಾತಿಯಾಗಿ ನನ್ನತ್ತೆ ಮನೆಗೂ ಬಂದಳು. ನನ್ನ ಸುಮುಖ್ ಕೂಡಾ ಇವಳನ್ನು ಸ್ನೇಹಿತೆಯಾಗಿ ಆದರಿಸಿ ಮೆಚ್ಚಿಕೊಂಡರು. ಎರಡು ದಿನ ಅಲ್ಲಿದ್ದು ನಂತರ, ‘ಬೆಂಗಳೂರಲ್ಲಿ ಕೆಲ್ಸ ಸಿಕ್ಕಿದೆ, ಚಿನ್ಮಯ್ ಕನ್ಸಲ್ಟೆನ್ಸಿಯಲ್ಲಿ ಮ್ಯಾನೇಜರ್ ನಮ್ಮಾವನ ಪರಿಚಯ. ಪಿ.ಎ. ಆಗಿ ತಗೊಂಡಿದಾರೆ. ಅವ್ರ ಹಂಗು ಬೇಡಾಂತ ಅನ್ನಿಸಿದ್ರೂ ಒಮ್ಮೆ ಅಜ್ಜಿ ಮನೆಯಿಂದ ಹೊರಗೆ ಬರ್ಬೇಕು ಅಂತ ಒಪ್ಪಿಕೊಂಡೆ. ಇನ್ನು ಕಾಗದ ಬರೀತಿರ್ತೇನೆ, ಆಯ್ತಾ?’ ಅಂದಳು. ಮರುದಿನವೇ ಬೆಂಗಳೂರಿಗೆ ಹೋಗಿದ್ದಳು.

ನಾನು ಈ ಊರಲ್ಲೇ ನೆಲೆಸಿದೆ. ಬೆಂಗಳೂರಿಂದ ವಾರಕ್ಕೊಮ್ಮೆ ಬರುವ ಅವಳ ಕಾಗದಗಳಲ್ಲಿ ಅಲ್ಲಿನ ವೈಶಿಷ್ಟ್ಯಗಳೇ ತುಂಬಿರುತ್ತಿದ್ದವು. ಅವಳ ವೈಯಕ್ತಿಕ ವಿಷಯ ಅಷ್ಟೇನೂ ಬರೀತಿರಲಿಲ್ಲ. ನಾನಾಗಿ ಕೇಳಿದ್ರೆ, ‘ಹೇಳಿಕೊಳ್ಳುವಂಥಾದ್ದೇನೂ ಇಲ್ಲ. ಎಲ್ಲ ಮಾಮೂಲು. ಬೆಳಗ್ಗಿಂದ ಸಂಜೆ ತನ್ಕ ಬಾಸ್ ಹೇಳಿದ ಕೆಲ್ಸ ಮಾಡಿಕೊಂಡಿರುದು. ಸಂಜೆ ರೂಮಿಗೆ ಬಂದು ರೇಡಿಯೋ ಕೇಳುದು. ಅಡುಗೆ, ಪಾತ್ರೆ, ಬಟ್ಟೆ, ಎಲ್ಲ ಕೆಲ್ಸಗಳನ್ನು ಮಾಡ್ಕೊಳ್ಳುದು. ಅದೇ ಜೀವನ. ಅದನ್ನೇನು ಬರಿಯುದು’ ಅಂತಿದ್ಳು.

ಸುಮಾರು ಐದು ವರ್ಷದ ನಂತ್ರ ಒಂದು ಬೆಳಿಗ್ಗೆ ನಮ್ಮನೆ ಬಾಗಿಲಲ್ಲಿ ಕೆಂಪುಕಣ್ಣಿನಲ್ಲಿ ನೀರು ಹರಿಸುತ್ತಾ ಪ್ರತ್ಯಕ್ಷ ಆದ್ಳು. ಬೆಂಗಳೂರಿಂದ ಸೀದಾ ಇಲ್ಲಿಗೇ ಬಂದಿದ್ಳು. ಒಳಗೆ ಕರೆದು ಸಮಾಧಾನ ಮಾಡುವ ಹೊತ್ತಿಗೆ ನಂಗೆ ಸಾಕೋಸಾಕಾಗಿತ್ತು. ಆದ್ರೂ ಅಳು ಯಾಕೆ ಅನ್ನುದನ್ನು ಮಾತ್ರ ಬಾಯಿ ಬಿಡಲೇ ಇಲ್ಲ, ಸಂಜೇತನ್ಕ. ಆವತ್ತು ಸುಮುಖ್ ಅವ್ರ ತಂಗಿಯ ಮನೆಗೆ ಹೋಗಿದ್ರು. ರಾತ್ರೆಯೆಲ್ಲ ಅವಳ ಕಥೆ ಕೇಳಿ ಬೆಳಗಾದಾಗ ನಮ್ಮಿಬ್ಬರ ಕಂಗಳೂ ಕೆಂಪು ಕೆಂಪು. ಮಧ್ಯಾಹ್ನ ಸುಮುಖ್ ಬರುವ ಹೊತ್ತಿಗೆ ನಾನೊಂದು ನಿರ್ಧಾರಕ್ಕೆ ಬಂದಿದ್ದೆ. ಅದನ್ನು ಅವರಿಗೆ ಹೇಳಲಿಕ್ಕೆ ಸಮಯ ಕಾಯುತ್ತಿದ್ದೆ. ಮನೆಯಲ್ಲಿ ಬಿರುಗಾಳಿ ಏಳಬಹುದೆನ್ನುವ ಊಹೆಯಿಂದ ಏನೇನೋ ಕಾಲ್ಪನಿಕ ತಡೆಗೋಡೆಗಳನ್ನು ಸಿದ್ಧಮಾಡಿಕೊಂಡೆ. ಶಾಂತವಾಗಿರುತ್ತಿದ್ದ ನಳಿನಿ ಅಂದು ಅಶಾಂತಿಯ ನೆಲೆಯಾಗಿದ್ದೆ.

Sunday 5 December, 2010

ಸುಮ್ಮನೆ ನೋಡಿದಾಗ...೦೬

ಊಟ ಮುಗಿಸಿ ಕೂತ ಗೆಳತಿಯರ ನಡುವೆ ಅಗಾಧ ಮೌನ. ನನ್ನ ಕೆನ್ನೆಯ ರಂಗಿನಿಂದಲೇ ಇಂದು ಜಾಜಿಮೊಗ್ಗುಗಳು ಇನ್ನಷ್ಟು ಕೆಂಪಾಗಿದ್ದವು. ನೇಹಾ ನನ್ನತ್ತ ಆಗಾಗ ನೋಟ ಹರಿಸಿ ಮತ್ತೆ ಬಳ್ಳಿಯ ನಡುವೆ ಕಾಣುವ ಆಕಾಶ ದಿಟ್ಟಿಸುತ್ತಿದ್ದಳು. ಎಷ್ಟನೆಯ ಬಾರಿಗೋ ಅವಳು ಆಕಾಶ ನೋಡಿದಾಗ ನನಗೆ ನಗುವೇ ಬಂತು, ‘ಏನುಂಟಾ ಅಲ್ಲಿ? ಯಾಕೆ ನೋಡ್ತಿದ್ದೀ?’

‘ಮಳೆ ಬರ್ತದಾ ಅಂತ ಲೆಕ್ಕ ಹಾಕ್ತಿದ್ದೇನೆ’
‘ಯಾಕೆ?’
‘ನಿನ್ನೆದೆಯಲ್ಲಿ ಮೋಡ ಕಟ್ಟಿಕೊಳ್ತಾ ಉಂಟಲ್ಲ. ಅಲ್ಲಿಂದ ಅಥವಾ ಇಲ್ಲಿಂದ ಸುರಿದೀತು. ಎಲ್ಲಿಂದ ಮೊದಲು ಬಂದೀತೂಂತ ನೋಡ್ತಿದ್ದೆ. ಸರಿಯಾಗಿ ಒಂದು ಜಡಿಮಳೆ ಹೊಡೆದ್ರೆ ಒಮ್ಮೆ ತಂಪಾದೀತಲ್ಲ ಅಂತ ಕಾಯ್ತಿದ್ದೇನೆ. ನೀ ಸುರಿಸ್ತೀಯಾ? ಆಕಾಶರಾಯನನ್ನು ಕೇಳ್ಬೇಕಾ?’
‘ಈಗಲೇ ನಿಂಗೆ ತಾಂಪಾಗುವ ಯೋಚನೆಯಾ? ಈಗಿನ್ನೂ ಜನವರಿ’
‘ಜನವರಿಯಲ್ಲೇ ಇಷ್ಟು ಉರೀಲಿಕ್ಕೆ ಶುರುವಾದ್ರೆ ಮೇ ತಿಂಗಳ ಗತಿಯೇನು ಅಂತ!’
‘ಈಗೆಲ್ಲಿಯಾ ಉರಿ? ಎಂತ ಮಾತಾಡ್ತಿ ನೀನು?’
‘ನೀನಂತೂ ಏನೂ ಮಾತಾಡ್ತಾ ಇಲ್ಲ. ನಾನಾದ್ರೂ ಏನಾದ್ರೂ ಹೇಳ್ತೇನೆ; ಕೇಳು ಬೇಕಾದ್ರೆ. ಇಲ್ಲಾಂದ್ರೆ ನಿನ್ನೊಳಗೆ ಮುಳುಗು, ನಂಗೇನು?’
‘ಮುಳುಗಿದ್ದಲ್ಲ ಮಾರಾಯ್ತಿ...’
‘ಮತ್ತೆಂತ? ಕಳೆದುಹೋಗಿದ್ಯಾ?’
‘ಹ್ಮ್!’
‘ನನ್ನ ಗೆಳತಿಯನ್ನು ಈ ರೀತಿ ಹಾರಿಸಿಕೊಂಡು ಹೋದವರು ಯಾರೋ? ಹರ್ಷಣ್ಣ ಅಂತೂ ಅಲ್ಲ. ಮತ್ತೆ?...’
‘ಮತ್ತೆ ಎಂತದೂ ಇಲ್ಲ! ಯಾರೂ ಇಲ್ಲ. ನಾನು ಅದೇ ಕಥೆಯ ಗುಂಗಿನಲ್ಲೇ ಇದ್ದೇನೆ, ಅಷ್ಟೇ...’
‘ಹ್ಮ್, ಅದು ಗೊತ್ತಾಗ್ತದೆ. ಕಥೆಯ ಗುಂಗು ತಲೆಯಿಂದ ಹೃದಯಕ್ಕೆ ಇಳಿದಿದೆ ಅಂತ...’
‘ಎಲ್ಲಿಗೂ ಇಳೀಲಿಲ್ಲಪ್ಪ. ಸುಮ್ನೇ ಏನೇನೋ ಹೇಳ್ಬೇಡ...’
‘ನೀನು ಏನೇನೋ ಕತೆ ನನ್ನ ಹತ್ರ ಹೆಣೀಬೇಡ. ನಿನ್ನನ್ನು ಇವತ್ತಲ್ಲ ನೋಡುದು ನಾನು. ಒಂದನೇ ಕ್ಲಾಸಿಂದಲೂ ಒಟ್ಟಿಗೇ ಓದಿದವ್ರು ನಾವಿಬ್ರೇ ಅನ್ನುದನ್ನು ಮರ್ತಿದ್ಯಾ ಹೇಗೆ?’
‘ಅಮ್ಮಾ, ಮಹಾತಾಯಿ! ನಾನ್ಯಾವುದನ್ನೂ ಮರೀಲಿಲ್ಲಮ್ಮ...’
ಅಷ್ಟರಲ್ಲೇ ನಳಿನಿ ಅಂಟಿ ನಮ್ಮ ಕಡೆಗೇ ಬಂದ್ರು. ನಮ್ಮ ಮಾತಿನ ಮಂಟಪದಲ್ಲಿ ಮುಗುಳುಗಳು ಅರಳಿದವು.

ಆದರೆ, ಅವರ ಮುಖ ಗಂಭೀರವಾಗಿತ್ತು. ಬಂದವರೇ, ‘ನೇಹಾ, ನಮ್ಮೆಲ್ರಿಗೂ ಕಾಫಿ ಮಾಡಿ ತಾ, ಹೋಗು.’ ಎಂದು ನೇಹಾಳನ್ನು ಕಳಿಸಿ ಅವಳ ಸ್ಥಾನದಲ್ಲಿ ನನ್ನ ಬದಿಗೆ ತಾನು ಕೂತರು.
‘ಶಿಶಿರಾ, ನಿನಗೊಂದು ಮುಖ್ಯ ವಿಚಾರ ತಿಳಿಸಬೇಕಿತ್ತು. ತಪ್ಪು ತಿಳೀಬೇಡ ನನ್ನನ್ನು. ಈಗ, ನೀನು ಬರೆದ ಕಥೆ ನೇಹಾನ ಪುಸ್ತಕಗಳ ಒಟ್ಟಿಗೆ ಇದ್ದದ್ದು ನನ್ನ ಕಣ್ಣಿಗೆ ಬಿತ್ತು. ಓದಿದೆ. ತುಂಬಾ ಚೆಂದ ಬರ್ದಿದ್ದೀ. ವಯಸ್ಸಿಗೆ ಸಹಜವಾದ ಭಾವನೆ, ಬರವಣಿಗೆಯ ಹಿಡಿತ, ಎರಡೂ ಚೆನ್ನಾಗುಂಟು. ಆದರೆ, ಇದನ್ನು ನಿನ್ನಮ್ಮ ನೋಡದ ಹಾಗೆ ಜಾಗ್ರತೆ ಮಾಡಮ್ಮ. ನಿನಗಾಗಿ ಈ ಮಾತನ್ನು ಹೇಳ್ತಿದ್ದೇನೆ.’
‘ಥ್ಯಾಂಕ್ಸ್ ಅಂಟಿ, ಕಥೆಯನ್ನು ಮೆಚ್ಚಿಕೊಂಡದ್ದಕ್ಕೆ. ಆದ್ರೆ ಅದು ನನ್ನ ಕಥೆ ಅಂತ ಹೇಗೆ ಗೊತ್ತಾಯ್ತು? ನೇಹಾದ್ದು ಅಂತ ಅನ್ನಿಸ್ಲಿಲ್ವಾ?’
‘ನೇಹಾ ಕಥೆ ಎಲ್ಲಿ ಬರೀತಾಳೆ? ಅದೆಲ್ಲ ಏನಿದ್ರೂ ನಿಂದೇ. ನಿನ್ನನ್ನು ನಾನು ಇವತ್ತು ನೋಡುದಾ?’ (ಇದೇ ಮಾತನ್ನು ಅವಳೂ ಹೇಳಿದ್ದಲ್ವಾ? ಏನಾಗಿದೆ? ಅಂದುಕೊಂಡೆ.)
ಆಂಟಿಯ ಮುಖ ನೋಡಿ ಗಂಭೀರವಾಗಿ ಕೇಳಿದೆ, ‘ಯಾಕೆ ಆಂಟಿ ಅಮ್ಮನಿಗೆ ಗೊತ್ತಾಗಬಾರ್ದು?’
ದೊಡ್ಡದಾಗಿ ಉಸಿರು ಬಿಟ್ಟು ಒಮ್ಮೆ ಆಕಾಶ ನೋಡಿ, ಮತ್ತೆ ಮೆಲ್ಲಗೆ ಆಂಟಿ ಹೇಳಿದ್ರು, ‘ಅದೊಂದು ದೊಡ್ಡ ಕಥೆ. ನಮ್ಮ ಬಾಲ್ಯದ್ದು. ಇನ್ನೊಮ್ಮೆ ಯಾವತ್ತಾದ್ರೂ ಹೇಳ್ತೇನೆ, ಬಿಡು...’
‘ಇಲ್ಲ ಅಂಟಿ, ಇವತ್ತೇ ಹೇಳಿ, ಪ್ಲೀಸ್. ಇವತ್ತು ನಂಗೇನೂ ಕಾಲೇಜ್ ಕೆಲ್ಸ ಇಲ್ಲ. ಅಮ್ಮ ಸಂಜೇವರೆಗೆ ಮನೇಗೆ ಬರುದಿಲ್ಲ ಅಂತ ಬೆಳಗ್ಗೇನೇ ಹೇಳಿ ಹೋಗಿದ್ದಾರೆ. ಮಹಿಳಾ ಸಮಾಜದ ಪಿಕ್‌ನಿಕ್ ಅಂತೆ. ಅಂದ್ರೆ ಇನ್ನು ಬರುದು ಆರು ಆರೂವರೆಯ ಮೇಲೆಯೇ. ನಂಗೆ ಪುರ್ಸೊತ್ತು ಉಂಟು. ಹೇಳಿ ಇವತ್ತೇ..’
ಆಗಲೇ ನೇಹಾ ಮೂರು ಲೋಟ ಕಾಫಿ ತಗೆದುಕೊಂಡು ಬಂದಳು. ಅವಳು ಇರಬೇಕೋ ಬೇಡವೋ ಅನ್ನುವ ಹಾಗೆ ಅವಳನ್ನೇ ಎರಡು ಕ್ಷಣ ದಿಟ್ಟಿಸಿದ ಆಂಟಿ ಪುನಃ ನಮ್ಮಿಬ್ಬರನ್ನೂ ನೋಡಿ ನೇಹಾಳನ್ನು ಅವರ ಇನ್ನೊಂದು ಬದಿಗೆ ಕುಳಿತುಕೊಳ್ಳಲು ಹೇಳಿದರು. ಕಾಫಿ ಹೀರುತ್ತಾ ಯೋಚನೆಯೊಳಗೆ ಮುಳುಗಿಹೋದರು. ಲೋಟದಿಂದೇಳುತ್ತಿದ್ದ ಹೊಗೆ ಮರೆಯಾದಾಗ ಅವರ ಒಳಗಿಂದಲೇ ಹೊಗೆ ಬರುತ್ತಿರುವ ರೀತಿಯಲ್ಲಿ ನಿಟ್ಟುಸಿರು ಹೊರಬಿತ್ತು.
‘ಶಿಶಿರಾ. ಈ ಕಥೆ ನಿಮಗಿಬ್ಬರಿಗೂ ನೋವು ಕೊಡಬಹುದು. ಮೂವತ್ತು ವರ್ಷ ಹಳೇ ಕಥೆ ಇದು. ಆದರೂ ಇದನ್ನು ತಿಳಿಯುವ ಅರ್ಹತೆ ನಿಮಗಿಬ್ಬರಿಗೂ ಉಂಟೂಂತ ನಾನಿದನ್ನು ಹೇಳ್ತೇನೆ. ನಿಮ್ಮನ್ನು ನೀವು ಸಂಭಾಳಿಸಿಕೊಳ್ಳುವ ಶಕ್ತಿ ನಿಮಗುಂಟು. ನಿಮ್ಮೊಟ್ಟಿಗೆ ನಾನಿದ್ದೇನೆ. ಕಥೆ ಕೇಳಿ ನಿನ್ನ ಅಮ್ಮನ ಮೇಲೆ, ನನ್ನ ಮೇಲೆ ಕೋಪಿಸಿಕೊಳ್ಳುವ ಹಕ್ಕೂ ನಿಮಗುಂಟು. ಕೋಪ ಬಂದ್ರೆ ಅದನ್ನು ಅದುಮಿಟ್ಟುಕೊಳ್ಳದೆ, ಹೇಗೆ ಹೊರಗೆ ಹಾಕ್ತೀರಿ ಅನ್ನುದು ಮಾತ್ರ ಬುದ್ಧಿವಂತಿಕೆಯ ವಿಷಯ, ನೆನಪಿರ್ಲಿ. ಆಯ್ತಾ...?’

ಆಂಟಿಯನ್ನು ದಾಟಿ ನಮ್ಮಿಬ್ಬರ ಗೊಂದಲಮಯ ಕಣ್ಣುಗಳು ಸಂಧಿಸಿದವು.

Monday 29 November, 2010

ಸುಮ್ಮನೆ ನೋಡಿದಾಗ...೦೫

ಮರುದಿನ ಹೊಸ ಕಥೆಯನ್ನು ನೇಹಾಳ ಕೈಗೆ ರವಾನಿಸಿದೆ. ಮಧ್ಯಾಹ್ನದ ಊಟ ಮುಗಿಸಿ ಮೈದಾನದ ಮರದಡಿಗೆ ಸಾಗಿದೆವು. ಹೊಸ ಕಥೆಯ ಓದುವಿಕೆಯಲ್ಲಿ ಅಲ್ಲಿನ ಅಳಿಲು ಮತ್ತು ಗುಬ್ಬಚ್ಚಿಗಳೂ ಭಾಗಿಯಾದವು. ಎಲ್ಲೋ ಕಳೆದುಹೋಗಿದ್ದ ಎರಡು ಮನಸ್ಸುಗಳನ್ನು ಅಳಿಲು ಕಿಚಕಿಚ ಕಿರುಚಾಡಿ ಎಚ್ಚರಿಸಿತು. ಮೈದಾನದಲ್ಲಿ ಕ್ರಿಕೆಟ್ ಆಡಲು ಹುಡುಗರ ಗುಂಪು ಬರುತ್ತಿತ್ತು. ಕ್ಲಾಸುಗಳೆಲ್ಲ ಮುಗಿದೇಹೋಗಿದ್ದವು. ಸಂಜೆ ಐದಾಗಿತ್ತು. ಮೊತ್ತ ಮೊದಲ ಬಾರಿಗೆ ನಾವಿಬ್ಬರೂ ತರಗತಿಗಳಿಗೆ ಚಕ್ಕರ್ ಹಾಕಿದ್ದೆವು.

ನೇಹಾ ಕಿಚಾಯಿಸಿದಳು: ‘ನೋಡಿದ್ಯಾ ರೊಮ್ಯಾಂಟಿಕ್ ಲಹರಿ ಹೇಗಿರ್ತದೇಂತ? ಈವರೆಗೂ ಕ್ಲಾಸ್ ತಪ್ಪಿಸದ ನಾವಿಬ್ರೂ ಅದ್ರ ಹೊನಲಲ್ಲಿ ಮುಳುಗಿಹೋಗಿದ್ದೆವು ಅಂದ್ರೆ ಇನ್ನು ಅದೇ ಗುಂಗಿನಲ್ಲಿ ಹಾರಾಡುವವರ ಗತಿಯೇನು? ಗೊತ್ತಾಯ್ತಾ? ಅದ್ಕೇ ಹೇಳಿದ್ದು ರೊಮ್ಯಾಂಟಿಕ್ ಬರೀ ಅಂತ...’ ಸುಮ್ಮನೇ ಕೋಲೇಬಸವನ ಹಾಗೆ ತಲೆಹಾಕಿ ಹೆಜ್ಜೆ ಹಾಕಿದೆ. ನಿಜವಾಗಿಯೂ ನನ್ನ ಒಂದು ಭಾಗವನ್ನು ನಾನು ಕಥೆಯೊಳಗೆ ಕಳೆದುಕೊಂಡಿದ್ದೆ. ಇದನ್ನು ಬರೆದವಳು ನಾನೇನಾ? ನಂಬಿಕೆಯಿರಲೇ ಇಲ್ಲ.

ಯಾವುದೋ ಭ್ರಮಾಲೋಕದಲ್ಲಿ ತೇಲುತ್ತಾ ಮನೆಹೊಕ್ಕಿದವಳಿಗೆ ಮಾಮೂಲು ಸ್ವಾಗತ ಕಾದಿತ್ತು.
‘ಯಾಕಿಷ್ಟು ತಡ? ಎಲ್ಲಿ ಅಲೆದಾಡ್ತಿದ್ದಿ ಇಷ್ಟೊತ್ತು ಬೀದಿ ಬಸವಿ ಥರಾ? ನಿಂಗೇನು ಹೇಳುವವ್ರು ಕೇಳುವವ್ರು ಯಾರೂ ಇಲ್ವಾ? ಮರ್ಯಾದೆಯಿಂದ ಕಾಲೇಜ್ ಬಿಟ್ಟ ಕೂಡ್ಲೇ ಮನೆಗೆ ಬರಬಾರ್ದಾ? ರಸ್ತೆ ಗಸ್ತು ಹೊಡೀಲಿಕ್ಕೆ ಯಾರ್ ಹೇಳಿದ್ರು?...’
ಮುಂದುವರೀತಾ ಇತ್ತು ನಿರರ್ಗಳ ‘ಬೌಗುಳ’. ಅಮ್ಮನಿಗೆ ಹೀಗೆಲ್ಲ ಹೇಳಬಾರದು ಅನ್ನುವ ವಿವೇಚನೆ ಇದ್ದರೂ ಕೆಲವಾರು ವರ್ಷಗಳಿಂದ ಅವರ ಅವ್ಯಾಹತ ಬೌಬೌಬೈಗಳನ್ನು ಕೇಳೀಕೇಳೀ ರೋಸಿಹೋಗಿತ್ತು ಮನಸ್ಸು. ಅದ್ಕೇ ನನ್ನೊಳಗಿನ ಸ್ವತಂತ್ರ ಸ್ವಂತಿಕೆ ಕಥೆಯೊಳಗೆ ಬಿಚ್ಚಿಕೊಂಡಿತ್ತೆನ್ನುವುದು ಹೊಳೆಯಿತು. ‘ಅದಕ್ಕಾಗಿಯಾದರೂ ಅಮ್ಮನಿಗೆ ಥ್ಯಾಂಕ್ಸ್ ಹೇಳ್ಬೇಕು ನೀನು’ ಅಂತ ನೇಹಾ ಹೇಳಬಹುದು ಎನ್ನುವ ಊಹೆಯಿಂದ ನಗುವೇ ಬಂತು. ಬಚ್ಚಲುಮನೆಯಲ್ಲಿ ಕೈಕಾಲು ತೊಳೆಯುತ್ತಿದ್ದ ಕಾರಣ ನನ್ನ ನಗು ಅಮ್ಮನಿಗೆ ಕಾಣಲಿಲ್ಲ. ಇನ್ನೊಂದು ಅವಾಂತರಕ್ಕೆ ಅವಕಾಶವಾಗಲಿಲ್ಲ.

ರಾತ್ರೆಯೆಲ್ಲ ಮತ್ತೆ ಅದೇ ಕನಸು. ಕಥಾನಾಯಕಿಯೇ ನಾನಾದಂತೆ... ಹರ್ಷಣ್ಣ ನನಗಾಗಿ ಗುಲಾಬಿ ರಂಗಿನ ಚಿತ್ತಾರವುಳ್ಳ ಬಿಳೀ ಸಲ್ವಾರ್ ಬಾಂಬೇಯಿಂದ ತಂದಂತೆ... ಅದನ್ನು ಧರಿಸಿ ನಾನು ಮೋಡಗಳಲ್ಲಿ ತೇಲುತ್ತಾ ಸುಂದರ ರಾಜಕುಮಾರನೊಬ್ಬನನ್ನು ಭೇಟಿಯಾದಂತೆ... ಅರೇ... ಅವನು ನನ್ನ ಕ್ಲಾಸ್‍ಮೇಟ್ ಶರತ್‍ನ ಕಸಿನ್ ಅಲ್ವಾ? ಶಿವಮೊಗ್ಗದವನು! ಅವನ ಹೆಸರೇನು?...

‘ಏ ಕತ್ತೆ! ಏಳು. ಮನೆಕೆಲ್ಸ ಮಾಡ್ಲಿಕ್ಕೆ ನಿನ್ನತ್ತೆ ಬರ್ತಾಳಾ? ಏಳು ಮೇಲೆ...’
ಅಮ್ಮನ ಪಾದ ನನ್ನ ಎಡಗೈಯನ್ನು ತಿವಿಯುತ್ತಿತ್ತು. ನೇಹಾ ಮತ್ತು ಶರತ್ ನನ್ನ ಮನಸ್ಸಿನಲ್ಲಿ ಅಡಗಿಕೊಂಡರು. ಅವರಿಬ್ಬರ ಬೆನ್ನ ಹಿಂದೆ ನನ್ನ ರಾಜಕುಮಾರ. ಅವನನ್ನು ಸಂಪರ್ಕಿಸಲೇ? ಹೇಗೆ? ಯಾಕೆ? ನನ್ನ ಭ್ರಾಂತಿಯೊಳಗೆ ಅವನ್ಯಾಕೆ ತೆರೆದುಕೊಂಡ? ಮೊದಲೇ ನನ್ನ ಮನಸ್ಸಿನಲ್ಲಿ ಅವನಿದ್ದನೆ? ಕಳೆದ ವರ್ಷ ಕಾಲೇಜ್ ಡೇ ಸಂದರ್ಭದಲ್ಲಿ ಅವನನ್ನು ನೋಡಿದ್ದೇನೋ ನಿಜ. ಅಲ್ಲಿಗೇ ನಿಂತಿತ್ತು ಅದು. ಮಂಗಳೂರಲ್ಲಿ ಅಲೋಶಿಯಸ್ ಕಾಲೇಜಿನಲ್ಲಿ ಕೆಮಿಸ್ಟ್ರಿ ಲೆಕ್ಚರರ್ ಆತ.

‘ವಸಂತ್’! ಬೆಳಕೊಂದು ಮನದೊಳಗೆ ನುಗ್ಗಿತೆ? ಪಾದಗಳಿಗೆ ಗೆಜ್ಜೆ ಯಾರು ಕಟ್ಟಿದರು? ಖಾಲಿ ಜಡೆಯ ಬುಡದಲ್ಲಿ ಮಲ್ಲಿಗೆಯ ಘಮ ಎಲ್ಲಿಂದ? ಹೊಸಗಾಳಿಯ ಅಲೆಯೇರಿ ಮನೆಗೆಲಸ ಮುಗಿಸಿಕೊಂಡು ಕಾಲೇಜಿಗೆ ಬಂದಾಗ ನೇಹಾ ನನ್ನತ್ತ ನೋಡಿದ ನೋಟಕ್ಕೆ ಏನಾದರೂ ಬೇರೆ ಅರ್ಥವಿದೆಯೆ? ಮಾಮೂಲಿನಂತೆ ಇರುವ ಪ್ರಯತ್ನ ವಿಫಲವಾಗುತ್ತಿತ್ತು. ಶರತ್ ಕಡೆ ಕಣ್ಣು ಹಾಯಿಸಲೂ ಸಾಧ್ಯವಾಗುತ್ತಿಲ್ಲ, ಅವನ ಕಸಿನ್ ನನ್ನೊಳಗೆ ಇರುವುದನ್ನು ಅವನೇ ಕಂಡರೆ?. ನೋಟ್ಸ್ ಕೇಳುತ್ತಾ ನನ್ನೆದುರು ನಿಂತವನಿಗೆ ನನ್ನ ಕೊಡೆ ಕೊಟ್ಟು ನಗೆಗೀಡಾದೆ. ಇವತ್ತು ಶುಕ್ರವಾರ. ಮಧ್ಯಾಹ್ನದ ನಂತ್ರ ನಮಗೆ ಯಾವುದೇ ಕ್ಲಾಸಸ್ ಇಲ್ಲ. ಬೆಳಗಿನ ತರಗತಿಗಳನ್ನು ಮುಗಿಸಿ ನೇಹಾ ಮನೆಗೇ ಹೋಗುವ ಪರಿಪಾಠ. ನಿಟ್ಟುಸಿರು ಬಿಟ್ಟು ಪಾಠಗಳ ಕಡೆ ಗಮನ ಕೊಡಲು ಪ್ರಯತ್ನಿಸಿದೆ. ಒಳಗಿನ ಕಾವು ಉಸಿರುಗಳಲ್ಲಿ ಹೊರಹರಿದು ಕೆನ್ನೆಗಳಿಗೆ ಜ್ವರವೇರುತ್ತಲೇ ಇತ್ತು. ನೇಹಾಳ ಮನೆ ತಲುಪಿದಾಗ ಜಾಜಿ ಮಂಟಪದ ನೆರಳೂ ಉಸಿರ್ಗರೆಯುತ್ತಿತ್ತೆ?

Monday 22 November, 2010

ಸುಮ್ಮನೆ ನೋಡಿದಾಗ...೦೪

ಈ ಬೆಳಗು ನನಗೆ ಎಂದಿನಂತಿಲ್ಲ. ನನ್ನ ಉತ್ಸಾಹಕ್ಕೆ ಕಾರಣ ಹುಡುಕಬೇಕಿರಲಿಲ್ಲ. ಅಮ್ಮನ ವಕ್ರನೋಟ ನನ್ನನ್ನು ತಾಗಲೇ ಇಲ್ಲ. ಕಾಲೇಜಿನ ಕಡೆಗೆ ಕುಣಿಹೆಜ್ಜೆ ಹಾಕಿದೆ. ಪಾದದ ಸುತ್ತ ಇಲ್ಲದ ಗೆಜ್ಜೆಸದ್ದು ಎದೆಯಲ್ಲಿ. ಕಥೆಯ ಹಸ್ತಪ್ರತಿ ಕೈಯಲ್ಲಿ- ಸಸ್ಯಶಾಸ್ತ್ರದ ರೆಕಾರ್ಡ್ ಪುಸ್ತಕದೊಳಗೆ ಅಡಗಿದ್ದ ಹಾಳೆಗಳನ್ನು ಬೇರಾರಿಗೂ ತಿಳಿಯದಂತೆ ನೇಹಾಳ ಕೈಗೆ ಹೇಗೆ ರವಾನಿಸುವುದೆನ್ನುವ ಯೋಜನೆ ಹಾಕುವಷ್ಟರಲ್ಲಿ ಕಾಲೇಜಿನ ಮೆಟ್ಟಲೇರಿದೆ.

ಬೆಳಗಿನ ತರಗತಿಗಳಲ್ಲಿ ನನ್ನ ಗಮನವಿಲ್ಲ. ಜೀವಶಾಸ್ತ್ರದ ಅಧ್ಯಾಪಕರು ಸಮಯ ಮೀರಿ ಪಾಠ ಮಾಡುತ್ತಿದ್ದುದು ವಾಚಿನ ಮೇಲೆ ಸುಮ್ಮನೇ ಬೆರಳಾಡಿಸುತ್ತಿದ್ದ ನನ್ನ ಅರಿವಿಗೆ ಬರಲೇ ಇಲ್ಲ. ನಮ್ಮನ್ನೆಲ್ಲ ತೀಕ್ಷ್ಣವಾಗಿ ನೋಡುತ್ತಾ ಪಾಠ ಮಾಡುವ ಅವರಿಗೆ ಮಾತ್ರ ನನ್ನ ಬೆರಳುಗಳಾಟ ಕಿರಿಕಿರಿಯಾಗಿ, ‘ಹ್ಮ್, ಐ ನೋ! ಐ ನೋ ಮೈ ಟೈಮ್. ಲೆಟ್ ಮಿ ಫ಼ಿನಿಷ್ ದಿಸ್ ಕಾನ್ಸೆಪ್ಟ್ ಮೇಡಮ್!’ ಅಂದರು ಗಂಭೀರವಾಗಿಯೇ. ನನ್ನ ಅದೃಷ್ಟಕ್ಕೆ ಅವರು ಯಾರಿಗಾಗಿ ಈ ಮಾತು ಹೇಳಿದರೆನ್ನುವುದು ಯಾರಿಗೂ ಗೊತ್ತಾಗಲೇ ಇಲ್ಲ. ನನ್ನೊಳಗು ಎಚ್ಚತ್ತುಕೊಂಡಿತು, ಅಷ್ಟೇ.

ಊಟದ ಸಮಯ ಕಥೆ ಬರೆದ ವಿಷಯವನ್ನು ನೇಹಾಳಿಗೆ ಸೂಕ್ಷ್ಮವಾಗಿ ತಿಳಿಸಿದೆ. ಸ್ಫೂರ್ತಿಯಾದ ಸಂದರ್ಭ ಮಾತ್ರ ಸದ್ಯಕ್ಕೆ ನನ್ನಲ್ಲೇ ಇರಲಿ ಅಂದುಕೊಂಡೆ. ಅಪರಾಹ್ನದ ಮೊದಲ ತರಗತಿ ಇರಲಿಲ್ಲವಾದ್ದರಿಂದ ಮೈದಾನದ ಮೂಲೆಯ ಮರದ ನೆರಳಿಗೆ ಸಾಗಿದೆವು. ಕಥೆಯೊಳಗೆ ಇಳಿದುಹೋದವು ಎರಡು ಜೊತೆ ಕಣ್ಣುಗಳು. ಓದಿ ಮುಗಿಸಿದ ನೇಹಾ ಕೆಲವೊಂದು ಸಲಹೆಗಳನ್ನೂ ನೀಡಿದಳು. ಮುಖ್ಯವಾಗಿ ಇದನ್ನು ರಮ್ಯಗಾನದತ್ತ ವಾಲಿಸಬೇಕೆನ್ನುವ ಕೋರಿಕೆಯನ್ನಿತ್ತಳು. ಈಗಿರುವಂತೆ ಸರಳ ನೇರ ಅಣ್ಣ-ತಂಗಿಯ ಸುತ್ತ ಸಾಗುವ ನಿರೂಪಣೆ ನಮ್ಮ ಕಾಲೇಜ್ ವಾರ್ಷಿಕ ಸಂಚಿಕೆಯ ಓದುಗರಿಗೆ ಬೇಕಾಗಿಲ್ಲವೆಂದೂ ರೊಮ್ಯಾಂಟಿಕ್ ಕಥೆಯೇ ಈ ವಯೋಮಾನದ ಉದ್ಯಾನವೆಂದೂ ಬುದ್ಧಿ ಹೇಳಿದಳು. ನಾಜೂಕಾಗಿಯೇ ನಾನೊಬ್ಬ ಮೊದ್ದು ಎಂದಳು. ಇಬ್ಬರೂ ನಕ್ಕೂ ನಕ್ಕೂ ಕಣ್ಣಲ್ಲಿ ನೀರಿಳಿಸಿಕೊಂಡೆವು. ಸಂಜೆಯ ಕ್ಲಾಸುಗಳನ್ನು ಮುಗಿಸಿಕೊಂಡು ಮನೆಗೆ ಬರುತ್ತಾ ಮತ್ತೊಂದಷ್ಟು ಚರ್ಚೆಗಳಾದವು. ಕೊನೆಗೂ ಅವಳಿಗಾಗಿ ಈ ಕಥೆಯನ್ನು ತಿದ್ದಿ ಬರೆಯುವುದಕ್ಕೆ ಒಪ್ಪಿಕೊಂಡು ಮನೆ ಸೇರಿಕೊಂಡೆ.

ಅಮ್ಮನ ಮೂಡ್ ಮತ್ತೆ ಕೆಟ್ಟಿತ್ತು. ನನಗದರ ಬಿಸಿ ತಟ್ಟದಷ್ಟು ನನ್ನ ಹೃದಯ-ಮನಸ್ಸು ಕಥೆಯ ಹೊಸ ಹಂದರದೊಳಗೆ ಹುದುಗಿಹೋಗಿದ್ದವು.

Monday 15 November, 2010

ಸುಮ್ಮನೆ ನೋಡಿದಾಗ...೦೩

ಆಕರ್ಷಕ ಯುವಕನೊಬ್ಬ ಕುರ್ಚಿಯಲ್ಲಿ ಕೂತಿದ್ದ. ನಾನು ಒಳಗೆ ಹೆಜ್ಜೆಯಿಟ್ಟೊಡನೆಯೇ, "ಹಲೋ, ಗುಡ್ ಈವ್‍ನಿಂಗ್ ಯಂಗ್ ಲೇಡಿ" ಅಂದ. ಮಾತಿನಲ್ಲಿನ ಗಾಂಭೀರ್ಯಕ್ಕೆ ಪದಗಳ ನಾಜೂಕಿಗೆ ತಬ್ಬಿಬ್ಬಾದ ನಾನು ಅವನಿಗುತ್ತರಿಸದೆಯೇ ತಲೆ ತಗ್ಗಿಸಿಕೊಂಡು ನೇರವಾಗಿ ನನ್ನ ಕೋಣೆಗೆ ಸಾಗಿದೆ. ಪುಸ್ತಕಗಳನ್ನು ಮೇಜಿನ ಮೇಲಿಟ್ಟು ಬಚ್ಚಲುಮನೆಗೆ ಹೋಗಿ ಮುಖ-ಕೈಕಾಲು ತೊಳೆದುಕೊಂಡು ಅಡುಗೆಮನೆಗೆ ಬರುವಷ್ಟರಲ್ಲಿ ಅವನೂ ಊಟದ ಮೇಜಿನ ಮುಂದಿದ್ದ. ಅಮ್ಮ ಅಡುಗೆಕಟ್ಟೆಯ ಬದಿಯಲ್ಲಿದ್ದಳು. ಒಲೆಯಲ್ಲಿ ಸಾರು ಬಿಸಿಯಾಗುತ್ತಿತ್ತು. ಯಾರಿವನು?

"ಏನಾ, ಗೊತ್ತಾಗಲಿಲ್ವಾ?" ಅವನೇ ಕೇಳಿದ. ಇಲ್ಲವೆನ್ನುವಂತೆ ತಲೆಯಾಡಿಸಿದೆ.

ಅಮ್ಮನೇ ಹೇಳಿದಳು, "ನೀನು ಚಿಕ್ಕವಳಿದ್ದಾಗ ನಾವು ‘ಅಕಳಂಕ’ ಮನೆಯ ಬದಿಯಲ್ಲಿ ಬಾಡಿಗೆಗಿದ್ದೆವಲ್ಲ. ಆಗೆಲ್ಲ ನಿನ್ನನ್ನು ಎತ್ತಿ ಆಡಿಸಿ ಶಾಲೆಗೆ ಹೋಗುತ್ತಿದ್ದ ಆಚೆ ಮನೆಯ ಹರ್ಷ. ಈಗ ಬಾಂಬೆಯಲ್ಲಿ ಕೆಲಸದಲ್ಲಿದ್ದಾನೆ. ನಾವು ಮತ್ತೆ ಇದೇ ಊರಿಗೆ ಬಂದದ್ದು ಗೊತ್ತಾಯ್ತಂತೆ. ನಮ್ಮನ್ನು, ಅದ್ರಲ್ಲೂ ನಿನ್ನನ್ನು ನೋಡ್ಲಿಕ್ಕೇಂತಲೇ ಬಂದಿದ್ದಾನೆ. ನೀನು ಏನೂ ಮಾತಾಡದೇ ಒಳಗೆ ಓಡಿ ಬರುದು ಸರಿಯಾ? ಅತಿಥಿಗೆ ಮರ್ಯಾದೆ ತೋರಿಸ್ಲಿಕ್ಕೂ ಗೊತ್ತಿಲ್ವಾ ನಿಂಗೆ? ಅವನಿಗೆ..."

ಅಮ್ಮನ ಮಾತುಗಳು ಮುಗಿದಿರಲೇ ಇಲ್ಲ, ಹರ್ಷ ನಮ್ಮ ಬದಿಗೇ ಬಂದು ನಿಂತ. ನನ್ನ ತಲೆ ನೇವರಿಸುತ್ತ, "ನನ್ನ ಶಾಲಾ ದಿನಗಳ ಬಣ್ಣದ ಗೊಂಬೆ ಈಗ ಎಷ್ಟು ದೊಡ್ಡೋಳಾಗಿದಾಳೆ ಅಂತ ನೋಡ್ಲಿಕ್ಕೆ ಬಂದದ್ದು ಹೌದು. ಜೊತೆಗೆ ಅವಳ ನಾಚಿಗೆ, ದಾಕ್ಷಿಣ್ಯದ ರೀತಿಯೂ ನೋಡಿದ್ದಾಯ್ತು. ಚಿಕ್ಕತ್ತೆ, ಮಗಳನ್ನು ಚಂದ ಮಾಡಿ ಬೆಳ್ಸಿದ್ದೀರಿ. ಬಾಂಬೆಯ ಬಿಂದಾಸ್ ಹುಡುಗಿಯರನ್ನು ನೋಡೀ ನೋಡೀ ಬೇಜಾರಾಗಿತ್ತು. ಇವಳನ್ನು ನೋಡಿ ಕಣ್ಣು ಮನಸ್ಸು ತಂಪಾಯ್ತು. ಸುಖವಾಗಿರು ಗೊಂಬೇ..." ಹರಸುವಂತೆ ಮತ್ತೆ ತಲೆ ನೇವರಿಸಿದ.

ಹರ್ಷನ ನೆನಪೇ ಇಲ್ಲದ ನನಗೆ ಈ ನಡವಳಿಕೆ ಮತ್ತಷ್ಟು ಮುದುಡುವಂತೆ ಮಾಡಿತು. ಆದರೂ ಆತ ತಂಗಿಯಂತೆ ನನ್ನ ಆದರಿಸಿದ್ದು ಖುಷಿಯೂ ಕೊಟ್ಟಿತು. ಇಂಥ ಸುಂದರ ಸ್ಫುರದ್ರೂಪಿ ಅಣ್ಣನಿಗಾಗಿ ನಾನೆಷ್ಟು ಹಂಬಲಿಸಿಲ್ಲ? ಸಿನಿಮಾಗಳಲ್ಲಿನ ರಾಜ್‍ಕುಮಾರ್, ವಿಷ್ಣುವರ್ಧನ್ ಅವರಂತೆ ಅಣ್ಣಂದಿರು ಇರಬೇಕು ಎನ್ನುತ್ತಿದ್ದ ನನ್ನನ್ನು ನೇಹಾ ಮತ್ತು ಸುಜಾ ಛೇಡಿಸುತ್ತಿದ್ದರು. ಇದೀಗ ಸಿನೆಮಾ ಹೀರೋನಂತಿರುವ ಅಣ್ಣನೊಬ್ಬ ಬಾಂಬೆಯಿಂದ ನನಗಾಗಿ ಬಂದಿಳಿದಿದ್ದಾನೆ. ಇಂದು ಸಂತಸದಿಂದ ನಿದ್ದೆಯೇ ಬಾರದೆಂದು ಅನ್ನಿಸತೊಡಗಿತು. ನೇಹಾಳೊಂದಿಗೆ ಹೇಳಿಕೊಳ್ಳಬೇಕು, ಆದರೆ ಬೆಳಗಿನವರೆಗೆ ಕಾಯಬೇಕಲ್ಲ. ಅಥವಾ... ಇದನ್ನೊಂದು ಕಥೆಯಾಗಿಸಿದರೆ? ಹ್ಮ್! ಅದೇ ಸರಿ. ಇವತ್ತೇ ಕಥೆಯಾಗಿಸುತ್ತೇನೆ. ಹೇಗೂ ಕಾಲೇಜಿನ ಮನೆಗೆಲಸವೇನೂ ಇಲ್ಲ.

ಹರ್ಷನ ಜೊತೆಗೆ ಹರಟುತ್ತಾ ಊಟ ಮುಗಿಸಿ ಯಾವತ್ತಿನ ಹಾಗೆ ಅಡುಗೆಮನೆ ಎಲ್ಲ ಸ್ವಚ್ಛಗೊಳಿಸಿ, ಪಾತ್ರೆ ತೊಳೆದಿಟ್ಟೆ. ತನ್ನ ಮನೆಗೆ ಹೊರಟ ಹರ್ಷನನ್ನು ಗೇಟಿನತನಕ ಕಳಿಸಿಕೊಟ್ಟೆವು. ಅಮ್ಮ ಮಲಗಿದ ಮೇಲೆ ನನ್ನ ಕೋಣೆಯಲ್ಲಿ ತಡರಾತ್ರೆಯವರೆಗೂ ದೀಪವುರಿಯಿತು....

Monday 8 November, 2010

ಸುಮ್ಮನೆ ನೋಡಿದಾಗ...೦೨

ಕಾಲೇಜಿಗೆ ಸಾಗಿದ್ದೇನೋ ಸರಿ, ನಡೆದ ಹಾದಿಯ ನೆನಪೇ ಇಲ್ಲ. ಕಾಲೇಜಲ್ಲೂ ಪಾಠಗಳತ್ತ ಗಮನವಿಲ್ಲ. ಗೆಳತಿ ನೇಹಾ ಏನೇನೆಲ್ಲ ಕಸರತ್ತು ಹೂಡಿದರೂ ನನ್ನ ಅನ್ಯಮನಸ್ಕತೆ ದೂರಾಗಲಿಲ್ಲ. ಸಂಜೆಯ ಹೊತ್ತಿಗೆ ಮನೆಗೆ ಹೋಗುವ ಮೂಡ್ ಇರಲೇ ಇಲ್ಲದ ನನ್ನನ್ನು ತನ್ನ ಮನೆಗೆ ಆಹ್ವಾನಿಸಿದಳು ನೇಹಾ. ನಮ್ಮಮ್ಮ ಅವಳಮ್ಮನ ಗೆಳತಿಯಾದ್ದರಿಂದ ಅದೊಂದು ಮನೆಗೆ ಹೋಗಲು ನನಗೆ ಅಮ್ಮನ ಅನುಮತಿಯಿತ್ತಷ್ಟೇ. ಹೋದೆ. ನಳಿನಿ ಆಂಟಿ ಪ್ರೀತಿಯಿಂದ ಬರಮಾಡಿಕೊಂಡರು. ಅವರು ಕೊಟ್ಟ ಟೀ ಹೀರಿ ಬಿಸ್ಕೆಟ್ ತಿಂದು ನಾವಿಬ್ಬರೂ ಅಂಗಳದ ಮೂಲೆಯ ಜಾಜಿಯ ಚಪ್ಪರದಡಿಗೆ ತಲುಪಿದ್ದಷ್ಟೇ ನೆಪವಾಗಿ ಜಾಜಿಬಳ್ಳಿಯ ಎಲೆಗಳೆಲ್ಲ ನನ್ನ ಬೆರಳುಗಳಲ್ಲಿ ಸೇರಿಕೊಳ್ಳತೊಡಗಿದವು. ಒಂದೊಂದಾಗಿ ಬಿದ್ದ ಸಣ್ಣೆಲೆಗಳನ್ನು ಅಲ್ಲೇ ಅಂಟಿಸಿಡಲು ಮಳೆಯಿಲ್ಲದೆ ಹನಿಗಳು ಇಳಿದು ಬಂದವು. ನೇಹಾ ಜಾಜಿ ಮೊಗ್ಗು ಕೊಯ್ಯುವ ನೆಪದಲ್ಲಿ ಯಾರಾದರೂ ಕಂಡಾರೆನ್ನುವ ಅವಲೋಕನ ಮುಗಿಸಿ ಚಪ್ಪರದ ಇನ್ನೊಂದು ಬದಿಗಿದ್ದ ಬೆಂಚಿನಲ್ಲಿ ನನ್ನನ್ನು ಕುಳ್ಳಿರಿಸಿ ತಾನೂ ಕೂತಳು. ಕರ್ಚೀಫಿಗೇಕೆ ಒದ್ದೆಯಾಗುವ ಶಿಕ್ಷೆಯೆಂದು ಹನಿಗಳು ನೆಲಸೇರುತ್ತಿದ್ದವು. ಸಣ್ಣೆಲೆಗಳು ಅವನ್ನೆಲ್ಲ ಮುತ್ತಿಡುತ್ತಿದ್ದವು.

ನಮ್ಮನೆಯ ಕಥೆ ನೇಹಾಳಿಗೆ ಹೊಸದಲ್ಲ. ನೆಲಕ್ಕೆ ನನ್ನ ಕಣ್ಣೀರೂ ಹೊಸದಲ್ಲ. ಅಮ್ಮನ ಹಾರಾಟ, ರೇಗಾಟ ಕಂಡು ಕೇಳಿದವಳು ನನ್ನ ಒಳಗಿನ ತುಮುಲ ಒಮ್ಮೆ ಹೊರಬಿದ್ದರೆ ಸರಿಯಾಗುತ್ತೇನೆಂದು ಅರಿತವಳು ಸುಮ್ಮನಿದ್ದಳು, ನನ್ನ ಕೈಯನ್ನು ತನ್ನ ಕೈಯಲ್ಲಿ ಬೆಸೆದುಕೊಂಡು. ಅವಳೊಳಗಿನ ಬೆಚ್ಚನೆಯ ಸಾಂತ್ವನ ನನ್ನೊಳಗೆ ಹರಿದು ಬಂದದ್ದನ್ನು ಕಂಡ ಹನಿಗಳು ಹಿಂಜರಿದವು. ಸಣ್ಣೆಲೆಗಳು ಗಾಳಿಯಲ್ಲಿ ಆಡ್ಡಾಡಲು ಜಾರಿಕೊಂಡವು.

ನಿನ್ನೆ ರಾತ್ರೆ ಎಲ್ಲದರಂತಿರಲಿಲ್ಲ ಎನ್ನುವುದನ್ನು ನೇಹಾಳಿಗೆ ಹೇಳಲೇಬೇಕಿತ್ತು. ಪದಗಳಿಗಾಗಿ ಹುಡುಕುತ್ತಿದ್ದೆ. ಸಣ್ಣೆಲೆಯೊಂದು ಹಾರಿ ಬಂದು ಮಡಿಲಲ್ಲಿ ಇಳಿಯಿತು. ಒಂದು ತೊಟ್ಟಿನಲ್ಲಿ ಮೂಡಿದ ಪುಟ್ಟಪುಟ್ಟ ಏಳು ಬಿಲ್ಲೆಗಳಲ್ಲಿ ಒಂದಾಗಿದ್ದಿರಬಹುದಾದ ಪುಟಾಣಿ ಹಸಿರು. ನೇವರಿಸಿದೆ. ನಿನ್ನೆಯ ನೆನಪು ನಿಚ್ಚಳವಾಯ್ತು. ಇದೇ ರೀತಿಯ ಸಣ್ಣೆಲೆಗಳ ಗಿಡವೊಂದನ್ನು ಹರ್ಬೇರಿಯಂಗಾಗಿ ದಿನಪತ್ರಿಕೆಯೊಳಗೆ ಬಿಡಿಸಿಟ್ಟದ್ದನ್ನು ತೆರೆದು ನೋಡಿ ಪತ್ರಿಕೆ ಬದಲಿಸುತ್ತಿದ್ದೆ. ಇದೇ ವರ್ಷದ ಕೊನೆಗೆ ಇಪ್ಪತ್ತಾದರೂ ಹರ್ಬೇರಿಯಂ ತಯಾರಾಗಬೇಕಿತ್ತು. ಒಮ್ಮೆ ಇಡುವಾಗ ಒಂದೇ ಜಾತಿಯ ಗಿಡದ ಐದಾರು ಗೆಲ್ಲುಗಳನ್ನು ಹರ್ಬೇರಿಯಂ ಮಾಡುವುದು ನನ್ನ ಕ್ರಮ. ಇದೂ ಹಾಗೇ. ತನ್ನ ಹಚ್ಚನೆಯನ್ನು ಹದವಾಗಿ ಬಾಡಿಸಿಕೊಂಡು ಮಸುಕು ಹಸಿರಾಗುತ್ತಿದ್ದ ಎಲೆಗಳನ್ನು ನೇವರಿಸಿ ಮಡಿಕೆಗಳನ್ನು ಬಿಡಿಸಿ ಹೂವಿನ ಎಸಳುಗಳ ಮುದುರನ್ನು ಅರಳಿಸಿ ನೇವರಿಸಿ ಅವುಗಳನ್ನು ನನ್ನೊಳಗೆ ಆವಿರ್ಭವಿಸುತ್ತಿದ್ದೆ.

"ಇಷ್ಟೆಲ್ಲ ಒಣಪುರಲು ಯಾರಿಗೆ?" ಅಮ್ಮನ ಪ್ರಶ್ನೆ, ಎಂದಿನಂತೆ. ಗಂಟೆ ಹನ್ನೆರಡೂವರೆ. ಮಾಮೂಲು ಬಾಣಗಳು ಬರುತ್ತವೆಂದು ಮನದ ಸುತ್ತ ಗುರಾಣಿ ಕಟ್ಟಿಕೊಳ್ಳುತ್ತಿದ್ದೆ. ಉತ್ತರಿಸದೇ ಇರಲಾಗದಲ್ಲ.
"ನೇಹಾ, ಅಖೀ, ಸುಜಾ, ರಾಜೀವ್, ಶೇಖರ್, ಇವ್ರೆಲ್ಲ ಬೇಕೂಂತ ಹೇಳಿದ್ದಾರೆ. ಇದು ನಂಗೆ ಮಾತ್ರ ಸಿಕ್ಕಿದ್ದು. ಪೇಟೆಯ ಅವ್ರಿಗೆಲ್ಲ ಗುಡ್ಡೆಯ ಗಿಡ ಸಿಗುದಿಲ್ಲ. ಅದ್ಕೇ..."
"ಅವ್ರಿಗೆಲ್ಲ ನೀನ್ಯಾಕೆ ಮಾಡ್ಕೊಡ್ಬೇಕು? ನಿಂಗೇನು ಸಂಬಂಧ ಅವ್ರ ಹತ್ರ? ನೇಹಾಗೇನಂತೆ ಧಾಡಿ ಮಾಡ್ಕೊಳ್ಳಿಕ್ಕೆ?"
"ಅವ್ಳು ಬೇರೆ ಗಿಡದ ಹರ್ಬೇರಿಯಂ ಮಾಡ್ತಿದ್ದಾಳೆ, ನಮ್ಗೆಲ್ರಿಗೂ..."
"ನಿಮ್ಮಿಬ್ರಿಗೂ ಬೇರೆ ಕೆಲ್ಸ ಇಲ್ವಾ? ಹೇಳಿದ್ದು ಅರ್ಥ ಆಗದ ಕತ್ತೆಗಳು ನೀವು. ಬೀದಿ ನಾಯಿಗಳ ಹಾಗೆ ಹುಡುಗರ ಒಟ್ಟಿಗೆ ಸೇರಿ ಅವ್ರಿಗೆ ಬೇಕಾದ್ದನ್ನು ಮಾಡಿ ಕೊಡ್ತೀರಲ್ಲ. ಅವ್ರೇನು ಆಗ್ಬೇಕು ನಿಮಗೆ?"
"ಅಮ್ಮ...!" ಮುಂದೆ ಮಾತು ಹೊರಟಿರಲಿಲ್ಲ. ಇವಳಿಗೇ ನನ್ನ ಮೇಲೆ ನಂಬಿಕೆಯಿಲ್ಲದಿದ್ದ ಮೇಲೆ ಯಾವ ರೀತಿಯ ಉತ್ತರವೂ ಉಪಯೋಗವಿಲ್ಲ ಎನ್ನುವುದು ನನಗೀಗಾಲೇ ಅರಿವಾಗಿತ್ತು. ಸುಮ್ಮನಿದ್ದೆ.
"ಹೌದು ನಿನ್ನಮ್ಮನೇ ಹೇಳುದು. ಹುಡುಗಿ ಅಂತ ಮುದ್ದು ಮಾಡಿದೆ ನೋಡು, ಅದ್ಕೇ ಈಗ ಬೇಕಾಬಿಟ್ಟಿ ಬೆಳ್ದಿದ್ದೀ. ಯಾರ ಜೊತೆ ಹೇಗಿರ್ಬೇಕು ಅಂತ ಗೊತ್ತಿಲ್ಲ. ಹೇಳಿದ್ರೆ ಕೇಳುದಿಲ್ಲ. ಮಾನ ಮರ್ಯಾದೆ ಇಲ್ಲದ ನಿನಗೆ ಹೇಗೆ ಮದುವೆ ಮಾಡುದೋ ಗೊತ್ತಿಲ್ಲ. ಭಗವಂತಾ, ಇದನ್ನು ನೋಡ್ಲಿಕ್ಕೆ ನನ್ನನ್ನಿನ್ನೂ ಇಟ್ಟಿದ್ದೀಯಲ್ಲಪ್ಪ..." ಕಾಣದ ದೇವರಿಗೆ ಬಯ್ಯುತ್ತಾ ಬಾತ್ರೂಮಿಗೆ ನಡೆದಳು.
ಅವಳು ಹಿಂದೆ ಬರುವಾಗಲೂ ಲೈಟ್ ಇದ್ರೆ ಮತ್ತೆ ಪುರಾಣ ಸುರುವಾಗುವ ಸಂಶಯ ಇದ್ದದ್ದರಿಂದ ದೀಪ ಆರಿಸಿ ತೆಪ್ಪಗೆ ಕೂತೆ. ಅವಳು ರೂಮಿಗೆ ಹೋಗಿ ಮಲಗಿದ ನಂತ್ರ ದೀಪ ಹಾಕಿ ನನ್ನ ಕೆಲಸ ಮುಗಿಸಿ ಒಂದೂವರೆಯ ಸುಮಾರಿಗೆ ಮಲಗಿದ್ದೆ.

ಇದನ್ನೆಲ್ಲ ಕೇಳಿಸಿಕೊಂಡ ನೇಹಾ ನಿಟ್ಟುಸಿರಿಟ್ಟಳು. "ಇನ್ನೊಂದು ಆರು ತಿಂಗಳು. ಫೈನಲ್ ಬಿ.ಎಸ್ಸಿ. ಮುಗಿದ್ರೆ ಮತ್ತೆ ಮನೆಯಲ್ಲಿ ಇರುದಿಲ್ಲ ನೇಹಾ. ನನ್ನ ಕಾಲ ಮೇಲೆ ನಿಂತು ಕೆಲ್ಸ ಸೇರಿ ಒಬ್ಳೇ ಆರಾಮಾಗಿರ್ತೇನೆ ಹೊರ್ತು ಅಮ್ಮನ ಜೊತೆ ಮಾತ್ರ ಇರುದಿಲ್ಲ ಮಾರಾಯ್ತಿ. ಸಾಧ್ಯವೇ ಇಲ್ಲ."
"ಈಗಲಾದ್ರೂ ಯಾಕಲ್ಲಿರ್ತೀ? ನಮ್ಮನೆಗೆ ಬಾ. ನಮ್ಮಮ್ಮ, ಪಪ್ಪ ಎಷ್ಟು ಖುಷಿ ಪಡ್ತಾರೆ ಗೊತ್ತುಂಟಾ? ನಂಗಂತೂ ಸ್ವರ್ಗವೇ ಬಿಡು. ಬಂದ್ಬಿಡು, ಪ್ಲೀಸ್..."
"ಇಲ್ಲಮ್ಮ. ಬರುದಿಲ್ಲ. ಇಪ್ಪತ್ತು ವರ್ಷಗಳೇ ಮುಗಿದಾಯ್ತು. ಇನ್ನಾರು ತಿಂಗಳೇನು ಮಹಾ? ಅಷ್ಟು "ಬೌಗುಳ" ಸಾಲ ತೀರಿಸಿಯೇ ಹೊರಗೆ ಬರ್ತೇನೆ. ಕೆಲ್ಸ ಸಿಕ್ಕಿದ ಮೇಲೆ ನಾವಿಬ್ರೂ ಎಲ್ಲಾದ್ರೂ ಟೂರ್ ಹೋಗಿ ಬರುವಾ, ಆಯ್ತಾ? ಈಗ ಹೊರಡ್ತೇನೆ. ಇಲ್ಲದಿದ್ರೆ ಮನೆಯಲ್ಲಿ ಮಹಾಕಾಳಿ ಅವತಾರ ಆಗಿರ್ತದೆ, ಗೊತ್ತುಂಟಲ್ಲ."

ನಳಿನಿ ಆಂಟಿಗೆ ಹೇಳಿ ಅಲ್ಲಿಂದ ಹೊರಟಾಗ ಮನಸ್ಸು ಒಂದಿಷ್ಟು ಹಗುರಾಗಿದ್ದು ಹೌದು. ಜೊತೆಗೇ ಯೋಚನೆಗಳು... ‘ಅಮ್ಮ ಹೇಳಿದ ಹಾಗೆ ನನ್ನ ಕ್ಲಾಸ್ಮೇಟ್ಸ್ ಪೈಕಿ ಯಾರನ್ನಾದ್ರೂ ಲವ್ ಮಾಡ್ಬಾರ್ದು ಯಾಕೆ? ನಂಗೀವರೆಗೂ ಯೋಚನೆಯೇ ಬಂದಿರ್ಲಿಲ್ಲ. ಅಮ್ಮನೇ ಐಡಿಯಾ ಕೊಟ್ಟಿದ್ದಾಳಲ್ಲ. ಯಾರಾದೀತು? ಅವ್ನು ಬೇಡ. ಇವ್ನು ಆಗುದಿಲ್ಲ. ಅವ ಮೊಂಡ. ಇವ ಒರಟ. ಅವನಿಗೆ ತಲೆಯೇ ಇಲ್ಲ. ಇವನಿಗೆ ತಲೆ ನಿಲ್ಲುದೇ ಇಲ್ಲ. ಇಲ್ಲಪ್ಪ, ನನ್ನ ಪರಿಚಯದಲ್ಲಿ ನನ್ನ ಮೆಚ್ಚುಗೆ ಪಡೆದವ ಯಾರೂ ಇಲ್ಲ. ಹಾಗಾದ್ರೆ? ಸದ್ಯಕ್ಕಂತೂ ಬೇಡ ಯೋಚನೆ...’ ಮನೆಯ ಗೇಟಿನಲ್ಲೇ ನಿಂತಿದ್ದ ಅಮ್ಮ ಮಹಾಕಾಳಿಯಾಗಿರಲಿಲ್ಲ ಅನ್ನುವ ಸಮಾಧಾನದಲ್ಲೇ ಒಳಹೊಕ್ಕಿದವಳಿಗೆ ಅಲ್ಲೇ ಆಶ್ಚರ್ಯ ಕಾದಿತ್ತು.

Monday 1 November, 2010

ಸುಮ್ಮನೆ ನೋಡಿದಾಗ...೦೧

ಬೆಳಗ್ಗೆ ಎದ್ದಾಗಲೇ ಗಂಟೆ ಏಳು. ತಲೆ-ಎದೆ ಭಾರ ಭಾರ. ಶೀತವಾಗುತ್ತದೇನೋ ಅಂದುಕೊಂಡರೆ ಮೂಗು ಗಂಟಲು ಸರಿಯಾಗಿಯೇ ಇವೆ. ಮನಸ್ಸೇಕೋ ಸಹಕರಿಸುತ್ತಿಲ್ಲ. ನಿನ್ನೆ ರಾತ್ರಿಯ ನೆನಪು ಮತ್ತೆ ಮತ್ತೆ ಮೂಡಿ ಕಣ್ಣುಗಳು ಮಂಜಾಗುತ್ತಿವೆ. ಯಾಕೆ ಹಾಗಂದಳು ಅಮ್ಮ? ಅವಳಿಗೆ ನನ್ನ ಮೇಲೆ ಅದೇಕೆ ದ್ವೇಷ? ಕೆಲಸದ ಒತ್ತಡವಿದ್ದಾಗ ತಡರಾತ್ರೆಯವರೆಗೂ ಎದ್ದಿದ್ದರೆ ಅವಳಿಗೇನೋ ಆತಂಕ. ಅದೇ ನೆಪದಲ್ಲಿ ಸದಾ ಸಿಡಿಮಿಡಿ.

ಮೊನ್ನೆಮೊನ್ನೆಯಂತೂ ನಡುರಾತ್ರೆಗೊಮ್ಮೆ ಎದ್ದವಳು ನನ್ನ ಕೋಣೆಯ ದೀಪ ಕಂಡು ಪಡಸಾಲೆಯ ಕಿಟಕಿಯ ಬದಿಯಿಂದಲೇ ಕಿರುಚಾಡಿದಳಲ್ಲ, "ಎಂತದ್ದಾ ನಿನ್ನ ಅವತಾರ. ನಡುರಾತ್ರೆ ಇದೆಂಥ ಕೆಲಸ ನಿಂದು? ಬೇಡಾಂತ ಹೇಳಿದ್ದನ್ನೇ ಮಾಡುವ ನಿಂಗೆ ನಾಚಿಕೆ ಮಾನ ಮರ್ಯಾದೆ ಏನೊಂದೂ ಇಲ್ವಾ? ಏಳು, ಹೋಗಿ ಮಲಕ್ಕೋ. ಈಗಲೇ, ಈ ಕ್ಷಣವೇ. ಹ್ಙೂಂ!"

ಮರುದಿನ ಪಕ್ಕದ ಮನೆಯ ಬೊಂಬಾಯಿ ಆಂಟಿ ಕೇಳೇ ಕೇಳಿದ್ದರು, "ನಿನ್ನೆ ರಾತ್ರೆ ಏನು ಮಾಡ್ತಿದ್ದಿ? ಯಾಕೆ ಅಮ್ಮ ಮಾನ-ಮರ್ಯಾದೆ ಅಂತೆಲ್ಲ ಕೂಗಾಡ್ತಿದ್ದರು? ಅವ್ರು ಗೌರವದಿಂದ ಜೀವನ ಮಾಡಿದವ್ರು, ಆಯ್ತಾ? ಅವ್ರ ಹೆಸರಿಗೆ ಮಸಿ ಬಳೀಬೇಡ ಮಾರಾಯ್ತಿ. ಮೈಮೇಲೆ ಎಚ್ಚರ ಇರ್ಲಿ." ಇದಕ್ಕೆ ಹೇಗೆ ಉತ್ತರಿಸಬೇಕೋ ತಿಳಿಯದೆ ತಬ್ಬಿಬ್ಬಾಗಿ ಕಾಲೇಜಿಗೆ ಸಾಗಿದ್ದೆ.

(ಕಣ್ಣೀರು ತಡೆಯುತ್ತಿದೆ. ಮತ್ತೆ ಬರೀತೇನೆ...)

Friday 1 October, 2010

ಅನಾಮಿಕ

ಅಂದು ಪ್ರಾಕ್ಟಿಕಲ್ ಮುಗಿಸಿ ಕಾಲೇಜಿಂದ ಮನೆಗೆ ಹೊರಟಾಗ ತಡವಾಗಿತ್ತು. ನಮ್ಮ ಮನೆಯ ಕಡೆ ಬರುವ ಇತರ ಹುಡುಗಿಯರು ಆಗಲೇ ಹೋಗಿಯಾಗಿತ್ತು. ಸುಮಾರು ಒಂದು ಮೈಲಿ ದೂರ. ದೊಡ್ಡ ಮಾತೇನಲ್ಲ. ಅಂತೆಯೇ ನಡೆದೇ ಹೊರಟೆ. ಯಾರೊಂದಿಗೂ ಮಾತಿಗೆ ಸಿಲುಕಬಾರದೆಂದು ಕೆನ್ನೆಗೆ ತಗಡು ಕಟ್ಟಿಸಿಕೊಂಡ ಕುದುರೆಯಂತೆ ಮೂಗಿನ ನೇರಕ್ಕೇ ನೋಡುತ್ತಾ ಸರಸರ ಹೆಜ್ಜೆ ಹಾಕುತ್ತಿದ್ದೆ, ಮುಖ್ಯರಸ್ತೆ ಬಿಟ್ಟು ತಿರುಗುತ್ತಲೇ ಬಳಿಯಲ್ಲಿ ಇನ್ನೊಂದು ಹೆಜ್ಜೆ ಸದ್ದು. ಎದೆ ಒಮ್ಮೆ ಕಂಪಿಸಿತು. ಅಷ್ಟರಲ್ಲೇ "ಹಲೋ ಮಿಸ್" ಎಂದ ಮಧುರ ದನಿಗೆ ಕಂಪಿಸುತ್ತಿದ್ದ ಎದೆ ಧಸಕ್ಕೆಂದಿತು. "ಹಾ! ದೇವರೇ! ಹನುಮಂತಪ್ಪಾ, ಕಾಪಾಡಪ್ಪಾ!" ಎಂದು ನಾನು ಕಾಣದ ಮಾರುತಿಯನ್ನು ಮೊರೆಹೋದೆ.

ಯಾರೆಂದು ನೋಡುವ ಹುಚ್ಚು ಚಪಲ. ತಲೆ ತಿರುಗಿಸಿ ದೃಷ್ಟಿಸಿದೆ. ಗುರುತರಿಯದ ಗಂಭೀರ ಸುಂದರ ಗಂಡು ಮುಖ. ನಯನ ಆ ಮೊಗದಿಂದ ನೋಟ ಜಾರಿಸಿ ಕೆಳಗಿಳಿಯುತ್ತಾ ಹೋಯಿತು. ಚಂದದ ಕಡುಕಂದು ಸೂಟಿನಲ್ಲಿ ಅಂದದ ಗೋಧಿಯ ಮೈಬಣ್ಣ- ನೀಲಿ ಹಾಕಿದ ಬಿಳಿಬಟ್ಟೆಯಂತೆ. ಪಾದಗಳನ್ನು ಮುಚ್ಚಿ ಮಿರಮಿರನೆ ಮಿಂಚುವ ಬೂಟುಗಳು. ಆಗಲೇ ಆತ, "ಗುರುತಾಗಲಿಲ್ವಾ? ನಾನು ನಿಮ್ಮನ್ನು ನಿಮ್ಮಕ್ಕನ ಮದುವೆಯ ದಿನ ನೋಡಿದ್ದೆ. ನಿಮ್ಮ ಭಾವ ನವನೀತ್ ನಮ್ಮನ್ನು ಪರಿಚಯ ಮಾಡಿಸಿದ್ರು...." ನಾನು ಯೋಚಿಸಿದೆ. ಅಕ್ಕನ ಮದುವೆ ವರ್ಷದ ಹಿಂದೆ. ನನಗಂತೂ ಈತನನ್ನು ನೋಡಿದ ನೆನಪಿಲ್ಲ. ಹೆಸರು ಮೊದಲೇ ಗೊತ್ತಿಲ್ಲ. ಹೇಗೆ ಪ್ರತಿಕ್ರಿಯಿಸಬೇಕೆನ್ನುವ ಗೊಂದಲದಲ್ಲಿರುವಾಗಲೇ ಸುಂದರ ಮುಖದ ಮೃದು ಮಾತಿನ ನಯವಂಚಕರ ನೆನಪಾಯ್ತು. ಒಳಗೊಳಗೇ ನಡುಗಿಹೋದೆ. ಆತನಿಗೆ ಉತ್ತರಿಸದೇ, ಆ ಕಡೆಗೂ ನೋಡದೇ ಹೆಜ್ಜೆ ಚುರುಕುಗೊಳಿಸಿದೆ. ಇನ್ನೂ ಹತ್ತು ನಿಮಿಷದ ನಿರ್ಜನ ಹಾದಿ. ಏನು ಮಾಡಲೂ ಆತನಿಗೆ ಸಾಧ್ಯವಿದೆ, ಸಮಯವಿದೆ. ಈ ಯೋಚನೆಯಿಂದ ತತ್ತರಿಸಿದೆ. ಆತನೂ ನನ್ನ ಸಮನಾಗಿ ಹೆಜ್ಜೆ ಹಾಕುತ್ತಿದ್ದ. ಧೀರ ಗಂಭೀರ ನಡಿಗೆ, ನಯದ ಮಾತು, ಏನೋ ಎಂತೋ ಎಂದುಕೊಂಡೆ.

"ಇನ್ನೂ ನನ್ನ ನೆನಪಾಗಲಿಲ್ವಾ ಸವಿತಾ?" ಎಂದ. "ಅಯ್ಯೋ ದೇವ್ರೇ... ನನ್ನ ಹೆಸರೂ ಗೊತ್ತುಂಟಾ ಇವನಿಗೆ!" ಇನ್ನಷ್ಟು ಬೆಚ್ಚಿದೆ. ಆದರೂ ಕೆಟ್ಟ ಮೊಂಡು ಧೈರ್ಯ. "ಓಯ್ ಮಿಸ್ಟರ್, ನಾನು ಸವಿತಾ ಅಲ್ಲ. ನಿಮ್ಮ ಆ ಹುಡುಗಿ ನಾನಲ್ಲ. ಬೇರೆ ಯಾರೋ ಇನ್ನೆಲ್ಲೋ ಇರ್ಬೇಕು. ಸುಮ್ಮನೆ ನನ್ಹಿಂದೆ ಬರ್ಬೇಡಿ. ನಿಮ್ಮ ಪಾಡಿಗೆ ಹೋಗಿ" ಎಂದೇ ಉಸಿರಿಗೆ ಹೇಳಿ ಓಡು ನಡಿಗೆ ಹಾಕಿದೆ. ನೆನಪಿಸಿಕೊಳ್ಳುವ ಪ್ರಯತ್ನ ಕೈಬಿಟ್ಟೆ.

"...ಸವಿತಾ, ನೀವೇನೂ ಹೆದರ್ಬೇಡಿ. ನಾನು ನಿಮ್ಗೇನೂ ಮಾಡುದಿಲ್ಲ. ನಿಮ್ಮ ಮನೇವರೆಗೆ ಬರುವ ಅವಕಾಶ ಕೊಡಿ. ಈ ನಿರ್ಜನ ದಾರಿಯಲ್ಲಿ ನಿಮಗೆ ಬೆಂಗಾವಲಾಗಿಯಾದರೂ ಬರುತ್ತೇನೆ" ಎಂದಂದ ನಾಟಕೀಯ ಶೈಲಿಯ ಮಾತಿನಲ್ಲಿ ನಗೆಯ ಲೇಪನ ಧಾರಾಳವಾಗಿತ್ತು. ನನಗೆ ರೇಗಿಹೋಯ್ತು. "ಈ ದಾರಿ ನನಗೇನೂ ಹೊಸದಲ್ಲ. ನೀವು ಬರುವ ಅಗತ್ಯವಿಲ್ಲ. ಹೋಗಿ, ಹೊರಟು ಹೋಗಿ." ಬಿರುಸಾಗಿ ನುಡಿದೆ; ಅಷ್ಟೇ ಬಿರುಸಾಗಿ ನಡೆದೆ. ಆತನ ಬೂಟಿನ ಸದ್ದು ನನ್ನ ಚಪ್ಪಲಿಯ ಸದ್ದನ್ನು ಏಕತಾನದಿಂದ ಅನುಸರಿಸುತ್ತಿತ್ತು. ಆ ಏಕತಾನ ಕಿವಿಗೆ ಹಿತವೆನ್ನಿಸಿದರೂ ಭಯದ ನೆರಳಲ್ಲಿ ಮನಸ್ಸಿಗೆ ಯಾವುದೂ ಬೇಡವಾಗಿತ್ತು. "ಯಾರಾದರೂ ಪರಿಚಯದವರು ಸಿಗಬಾರದೇ, ದೇವರೇ... ಪ್ಲೀಸ್..." ಅಂದುಕೊಳ್ಳುತ್ತಿರುವಾಗಲೇ ಹಿಂದಿನಿಂದ ಮೋಟಾರ್ ಬೈಕಿನ ಸದ್ದು ಕೇಳಿಸಿತು. ತಿರುಗಿ ನೋಡಿದಾಗ ಅಣ್ಣನೆಂದು ತಿಳಿದು ಕಣ್ಣಲ್ಲಿ ನೀರುಕ್ಕಿತು. "ಈ ಖದೀಮನಿಗೆ ಈಗ ಬುದ್ಧಿ ಕಲಿಸಬೇಕು" ಎಂದೂ ಮನ ಮುದಗೊಂಡಿತು.

ಅಣ್ಣ ಹತ್ತಿರ ಬಂದವನೇ ಬೈಕ್ ನಿಲ್ಲಿಸಿ, ಆತನ ಕಡೆ ನೋಡಿ, "ಏನೋ ಮಹರಾಯ, ಯಾವಾಗ ಬಂದಿ ನಮ್ಮೂರಿಗೆ? ಪರಿಚಯ ಆಗಿ ವರ್ಷದ ಮೇಲಾಯ್ತು, ಈಗ ನೆನಪಾಯ್ತನಾ?" ಎಂದು ಕೇಳಿದಾಗ ನಾನು ತಲೆತಿರುಗಿ ಬೀಳುವುದೊಂದೇ ಬಾಕಿ. ಅಣ್ಣ ಆತನ ಉತ್ತರಕ್ಕೂ ಕಾಯದೇ ನನ್ನೆಡೆಗೆ ತಿರುಗಿ, "ಸವಿತಾ, ಇವ ನಿನಗೆಲ್ಲಿ ಸಿಕ್ಕಿದ? ಆಟೋರಿಕ್ಷಾದಲ್ಲಿ ಬರುದು ಬಿಟ್ಟು ನಡ್ಕೊಂಡು ಬಂದದ್ದು ಯಾಕೆ?" ಎಂದಾಗ ಇನ್ನಷ್ಟು ತಬ್ಬಿಬ್ಬಾದೆ. "ಆಟೋ ಮಾಡಿ ಕರ್ಕೊಂಡು ಹೋಗುವಷ್ಟು ಹತ್ತಿರದವನೇ ಆತ?" ಎನ್ನುವ ಯೋಚನೆಗೊಳಗಾದೆ.

ಆ ಸುಂದರಾಂಗನ ನಗು ಎಚ್ಚರಿಸಿತು. "ಏಯ್ ರವೀಂದ್ರ..." ಎಂದು ಆತ ಅಣ್ಣನೊಡನೆ ಮಾತಿಗಿಳಿದಾಗ ಕಿವಿಗೊಟ್ಟೆ. "...ಇವ್ರು ನಿನ್ನ ತಂಗಿ ಸವಿತಾ ಹೌದಾ ಅಲ್ವಾಂತ ಇನ್ನೊಮ್ಮೆ ನೋಡಿ ಮತ್ತೆ ಮಾತಾಡು. ಇಲ್ಲಾಂದ್ರೆ... ‘ನನ್ಹಿಂದೆ ಬರ್ಬೇಡಿ, ಹೋಗಿ’ ಅಂತ ಬೈಸ್ಕೊಳ್ತೀ ನೋಡು. ನಾನು ಮಾತಾಡ್ಸಿದಾಗ, ‘ನಾನು ಸವಿತಾ ಅಲ್ಲ. ನಿಮ್ಮ ಹುಡುಗಿ ಬೇರೆ ಯಾರೋ ಇರ್ಬೇಕು’ ಅಂದು ಬಿಟ್ರು. ಸರಿಯಾಗಿ ನೋಡಿ ಮಾತಾಡಪ್ಪ..." ಮಾತುಗಳು ಕಿವಿಯೊಳಗೆ ಬೀಳುತ್ತಿದ್ದ ಹಾಗೇ ಗಂಟಲಲ್ಲಿ ಕಹಿ ಇಳಿದಿಳಿದು ಸಿಕ್ಕಿಕೊಂಡ ಅನುಭವ. ಪರಿಸ್ಥಿತಿ ಏರುಪೇರಾಗಿದೆಯೆಂದು ನನ್ನ ಕಣ್ಣಂಚಿನ ನೀರಿನಿಂದ ಕಂಡುಕೊಂಡ ಅಣ್ಣ, "ಏಯ್ ರಾಜಕುಮಾರ, ಇಲ್ಲಿ ಮಾತಾಡುದು ಬೇಡ. ನಡಿ ಮನೆಗೆ ಹತ್ತು ಗಾಡಿ" ಅಂದರೆ ಆತ, "ನಾನು ಬರುದಿಲ್ಲಪ್ಪ. ಇವ್ರನ್ನೇ ಕರ್ಕೊಂಡು ಹೋಗು. ಇಲ್ಲದಿದ್ರೆ ಎಲ್ಲಾದ್ರೂ ತಲೆತಿರುಗಿ ಬಿದ್ದುಬಿಟ್ಟಾರು" ಎನ್ನಬೇಕೆ? ಕೊನೆಗೂ ಅವರಿಬ್ಬರೂ ಬೈಕ್ ಏರಿ ಹೊರಟರು. ನಾನು ಹೆಜ್ಜೆಯ ಮೇಲೆ ಹೆಜ್ಜೆ ಹಾಕಿ ದಾರಿ ಸವೆಸತೊಡಗಿದೆ.

ಹಾದಿಯುದ್ದಕ್ಕೂ ತಲೆತುಂಬ ಗೋಜಲು ಯೋಚನೆಗಳು- ಯಾರವರು?, ಅವರ ಹೆಸರೇ ತಿಳಿಯಲಿಲ್ಲವಲ್ಲ! ಆತನ ಮೃದು ಮಾತು ನಡತೆಗೆ ನನ್ನ ಒರಟು ವರ್ತನೆ ನೆನೆದು ಕೆಡುಕೆನಿಸಿತು. ‘ಹಾಲಲ್ಲಿ ಹುಳಿ ಹಿಂಡಿದಂತೆ ನಡೆದುಕೊಂಡೆ’ ಎನ್ನಿಸಿತು. ಎಷ್ಟು ನೆನಪಿಸಿಕೊಂಡರೂ ಕವಿತಕ್ಕನ ಮದುವೆಯ ಸಮಯ ಈತನನ್ನು ನೋಡಿದ ನೆನಪಿಲ್ಲ. ನವನೀತ ಭಾವನ ಸಂಬಂಧಿಕರ ಪೈಕಿಯೂ ಇಂತಹ ಸುಂದರಾಂಗ ಇಲ್ಲ ಎಂದು ಒಪ್ಪಿಕೊಂಡ ಮನಸ್ಸು ಮನೆ ತಲುಪುವ ಹೊತ್ತಿಗೆ ಮಳೆಗಾಲದ ಆಗಸದಂತಾಗಿತ್ತು. ಅದರ ಪ್ರತಿಬಿಂಬ ಕಣ್ಣು.

ಗೇಟು ತೆರೆಯುತ್ತಿದ್ದ ಹಾಗೆಯೇ ಕವಿತಕ್ಕ ಓಡಿ ಬಂದಳು. "ಸವಿತಾ..." ಎಂದು ತಬ್ಬಿಕೊಂಡಳು. "ಏನು ರಂಪಾಟ ಮಾಡಿದ್ದೀ ಮಾರಾಯ್ತೀ. ನಿನ್ನ ಭಾವನ ಗೆಳೆಯ ಅವ್ರು. ನಮ್ಮ ಮದುವೆಯಲ್ಲಿ ನಿನ್ನನ್ನು ನೋಡಿ ಮೆಚ್ಚಿ ಈಗ ಪಪ್ಪ-ಅಮ್ಮನ ಹತ್ರ ಮಾತಾಡ್ಲಿಕ್ಕೆ ಅಂತ ನಮ್ಮ ಒಟ್ಟಿಗೇ ಬಂದವರು ಪೇಟೆಯಲ್ಲಿ ಏನೋ ಕೆಲ್ಸ ಉಂಟೂಂತ ನಿಂತಿದ್ದರು. ಬರ್ತಾ ನಿನಗೆ ಸಿಕ್ಕಿದ್ರಂತಲ್ಲಾ. ಏನೇನೋ ಮಾತಾಡಿದ್ಯಂತೆ? ಅವರೂ ರವಿಯೂ ಹೊಟ್ಟೆ ಹಿಡ್ದು ನಗಾಡ್ತಿದ್ದಾರೆ." ಎಂದಾಗ ಕಣ್ಣ ಕಾರ್ಮೋಡದಲ್ಲಿ ಮಿಂಚು ಸುಳಿದು ಮಳೆ ಸುರಿಯಿತು. ಅಕ್ಕ ಭಾವ ಬಂದ ಖುಷಿಯೂ ಹಿತವೆನಿಸಲಿಲ್ಲ. ಇಷ್ಟೆಲ್ಲ ತಿರುಳುಗಳಿದ್ದುದು ನನಗೆ ತಿಳಿದಿರಲಿಲ್ಲ.

ಆಗಲೇ ಹೊರಬಂದ ಭಾವ ಮಾತ್ರ, "ಏನು ನಡೀತಾ ಉಂಟು ನಿಮ್ಮೊಳಗೆ? ಗೇಟಿನ ಬದಿಯಲ್ಲೇ ಏನು ಹೇಳಿ ಅವ್ಳನ್ನು ಅಳಿಸ್ತಿದ್ದೀ ಕವಿತಾ? ಕಾಲೇಜಿಂದ ಸುಸ್ತಾಗಿ ಬರ್ತಿದ್ದಾಳೆ ಅಂತ ನಿನ್ಗೂ ಯೋಚ್ನೆ ಬೇಡ್ವಾ? ಬಾ ಸವಿತಾ, ಯೋಚಿಸ್ಬೇಡ. ಎಲ್ಲಾ ಸರಿಯಾಗ್ತದೆ. ಒಳಗೆ ಬಾ..." ಎಂದು ವೇದಾಂತಿಯಂತೆ ಹೇಳಿದಾಗ ಅತ್ತಿತ್ತ ನೋಡದೆ ನೇರವಾಗಿ ನನ್ನ ರೂಮಿಗೆ ಹೋಗಿ ಬಾಗಿಲು ಹಾಕಿ ಮಂಚದ ಮೇಲೆ ಬೋರಲು ಬಿದ್ದು ಅಳತೊಡಗಿದೆ. ಬಾಗಿಲು ತೆರೆದ ಸದ್ದಾಯ್ತು. ಅಮ್ಮ ಬಂದಿರಬೇಕು ಅಂದುಕೊಂಡು ಏಳಬೇಕು ಅನ್ನುವಷ್ಟರಲ್ಲೇ ನನ್ನೆರಡೂ ಭುಜಗಳನ್ನು ಹಿಡಿದೆತ್ತಿದ ಆತ ಮೃದುವಾಗಿ, "ಸವಿತಾ, ನನ್ನ ಸವಿತಾ, ಅಳ್ಬೇಡ. ನಾನು, ನಿನ್ನ ಅವಿನಾಶ್ ಹೇಳ್ತಿದ್ದೇನೆ, ಅಳ್ಬೇಡ ಪ್ಲೀಸ್..." ಎಂದಾಗ ತಲೆಯೆತ್ತಿ ಆತನ ಮುಖ ನೋಡಿದೆ. ನಿರ್ಮಲ ವಾತ್ಸಲ್ಯಭರಿತ ಕಣ್ಣುಗಳನ್ನು ಎದುರಿಸಲಾರದೇ ಮುಖ ತಗ್ಗಿಸಿ ಬಿಕ್ಕಳಿಸುತ್ತಾ, "ನನ್ನನ್ನ ಕ್ಷಮಿಸಿ. ಆಗ ನಾನು ಮಾತಾಡಿದ್ದನ್ನೆಲ್ಲಾ ಮರ್ತು ಬಿಡಿ. ಪ್ಲೀಸ್, ಕ್ಷಮಿಸಿ..." ಎಂದೆ. ಹಗುರವಾಗಿ ನನ್ನ ಗಲ್ಲ ಹಿಡಿದೆತ್ತಿದ ಅವರು, "ನನ್ನ ಸವಿತಾ ಅಂತ ಕರೆದ ಮೇಲೂ ಕ್ಷಮೆಯ ಮಾತು ಬೇಕಾ?" ಎಂದು ನಕ್ಕಾಗ ನನ್ನ ನಗುವನ್ನು ಮರೆಸಲು ಕೋಣೆಯಿಂದ ಹೊರಗೆ ಓಡಿದೆ. ಬಾಗಿಲಲ್ಲೇ ನಿಂತಿದ್ದ ಅಣ್ಣನಿಗೂ ಢಿಕ್ಕಿ ಹೊಡೆದು ಅಡುಗೆಮನೆಗೆ ನುಗ್ಗಿದಾಗ ಅವರಿಬ್ಬರ ಗಲಗಲ ನಗು ನನ್ನನ್ನಟ್ಟಿಸಿಕೊಂಡು ಬಂದು ಮುತ್ತಿಕೊಂಡಿತು.

(ನನ್ನ ಮೊತ್ತ ಮೊದಲ ಕಟ್ಟು ಕಥೆ, ಬರೆದದ್ದು ೧೯೮೫ ಅಕ್ಟೋಬರ್/ ನವೆಂಬರಲ್ಲಿ. ಇದಕ್ಕೂ ನನ್ನ ಜೀವನಕ್ಕೂ ಯಾವುದೇ ಸಂಬಂಧವಿಲ್ಲ, ಇದನ್ನು ಬರೆದದ್ದು ನಾನು ಎನ್ನುವುದನ್ನು ಬಿಟ್ಟರೆ! ಆದ್ದರಿಂದ ಯಾವುದೇ ಖಾಸಗಿ ಪ್ರಶ್ನೆಗಳನ್ನು ಗೌರವಿಸಲಾಗುವುದಿಲ್ಲ.)

Wednesday 1 September, 2010

ಅವನ ಕರೆ

ಅವನೆ ಕರೆದ ಮೇಲೆ ಹೋಗದಿರಲಿ ಹೇಗೆ?
ಅವನ ಕರೆಯ ಮೀರಿ ನಿಲ್ಲಬಲ್ಲೆನೆ?

ಬೆಳಕು ಮೂಡುವಲ್ಲಿ ನಿಂತು ಆಡುವವನ
ಬೆಳಕ ಗೋಳದೊಳಗೆ ಎಡವಿ ಬಿದ್ದೆನೆ

ಹಾಲುಗಡಲಿನಲ್ಲಿ ಲೀಲೆ ತೋರುವವನ
ಹಾಲುಗೆನ್ನೆಯನ್ನು ಕಂಡು ನಿಂದೆನೆ

ಬೆಟ್ಟವೆತ್ತಿ ನಿಂದು ಮಳೆಯ ತಡೆಯುವವನ
ಬೆಟ್ಟದೇರಿನಲ್ಲಿ ಅಟ್ಟಿ ಸೋತೆನೆ

ಕಂದಕರುಗಳೊಡನೆ ಮಲೆಯಲಾಡುವವನ
ಕಂದಪಾದಗಳನು ಹಿಡಿದುಕೊಂಡೆನೆ

ಕಾಡಜೇನು ಮೆಲುವ ಅವಳ ರಮಿಸುವವನ
ಕಾಡಿಬೇಡಿ ಬಯಸಿ ಮೋಡಿಗೊಂಡೆನೆ

ಕರುಣೆ ಕಣ್ಣಿನಲ್ಲಿ ನೋಟ ಹರಿಸುವವನ
ಕರುಣರಸದ ಹನಿಯ ಸವಿಯ ಉಂಡೆನೆ

(೨೨-ಮಾರ್ಚ್-೨೦೦೮/ ೨೩-ಸೆಪ್ಟೆಂಬರ್-೨೦೦೯)
(‘ಸಮ್ಮೋಹನ ಚಿಕಿತ್ಸಾ ತರಬೇತಿ’ಯಲ್ಲಿ ಸಹಾಧ್ಯಾಯಿಯೊಂದಿಗೆ ಅಭ್ಯಾಸ ಮಾಡುತ್ತಿರುವಾಗ ಸಮ್ಮೋಹಿತ ಸ್ಥಿತಿಯಲ್ಲಿ "ಕಂಡು ಅನುಭವಿಸಿದ" ದೃಶ್ಯವೊಂದರ ಭಾವಪ್ರವಾಹ ಎಚ್ಚತ್ತ ನಂತರ ಅಕ್ಷರಗ್ರಹಿಕೆಗೆ ದಕ್ಕಿದ್ದಿಷ್ಟು)

(ಮತ್ತೆ ಬಂದಿದೆ ಆ ದೇವನ ಜನ್ಮಾಷ್ಟಮಿ ಸಂಭ್ರಮ. ಅದೇ ನೆಪದಲ್ಲಿ ಅವನ ನೆನಕೆ.)

Sunday 1 August, 2010

ಕನ್ನಡ ತಪಸ್ವಿಗೆ ಅಭಿವಾದನ

ಸುಮಾರು ಎಂಟು ವರ್ಷಗಳ ಹಿಂದೆ, ಅಮೆರಿಕದ ದೈಹಿಕ ನಂಟನ್ನು ಸರಿಸಿಕೊಂಡು ಮೈಸೂರಿನಲ್ಲಿ ಬೇರೂರಲು ಹೊರಟಿದ್ದ ಹಿರಿಯರಿಗೆ ಪ್ರೀತಿ ಅಭಿಮಾನದಿಂದ ವಂದಿಸಲು ನಾನು "ಗುರುವಂದನ" ಕವನ ಬರೆದಾಗ ಹರಿಹರೇಶ್ವರ ಮತ್ತು ನಾಗಲಕ್ಷ್ಮಿಯವರ ಮೇಲೆ ನನಗಿದ್ದ ಗೌರವ ಮತ್ತು ಪೂಜ್ಯ ಭಾವನೆ ಆಮೇಲಿನ ವರ್ಷಗಳಲ್ಲಿ ಇನ್ನಷ್ಟು ಗಾಢವಾಗಿ ಬೆಳೆದಿದೆ.

ಈ ಅಪರೂಪದ ಅನುರೂಪ ದಂಪತಿಯ ಪರಿಚಯ ನನಗಾಗಿದ್ದು ಬಹುಶಃ ೧೯೯೪ ಅಥವಾ ೧೯೯೫ರಲ್ಲಿ. ನಮ್ಮ ಕನ್ನಡ ಕೂಟದ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಪುಟ್ಟ ಕಥೆಯೊಂದನ್ನು ಓದಿ ಕರೆ ಮಾಡಿ ಅಭಿನಂದಿಸಿದ ಸಹೃದಯರು ಹರಿ ಹಾಗೂ ನಾಗೂ ಅಕ್ಕ. ಅವರ ಪ್ರೀತಿ, ಔದಾರ್ಯ, ಪಾಂಡಿತ್ಯದ ಬಗ್ಗೆ ಎಲ್ಲರೂ ಹೇಳುತ್ತಾರೆ, ಹೇಳಿದ್ದಾರೆ. ಹಾಗೆಯೇ, ಹರಿಯವರು ತೋರಿಸುತ್ತಿದ್ದ ತಂದೆಯಂತಹ ಹಠ, ಕೋಪ, ಶಿಸ್ತು, ಕಾಠಿಣ್ಯ- ಇವನ್ನೆಲ್ಲ ಹತ್ತಿರದಿಂದ ಕಂಡಿದ್ದೇನೆ, ಕೆಲವೊಮ್ಮೆ ಅನುಭವಿಸಿದ್ದೇನೆ. ಅವರ ಪ್ರೀತಿಭರಿತ ಒತ್ತಾಸೆ, ಛಲ ತುಂಬಿದ ಪ್ರೋತ್ಸಾಹ, ಸ್ನೇಹಪೂರ್ಣ ಆಗ್ರಹ, ಅಕ್ಕರೆಯ ಬೆಂಬಲ- ಇವೆಲ್ಲವೂ ನಾವಿಂದು ಸಾಮಾನ್ಯವಾಗಿ ಕಾಣದ ಗುಣಗಳು. ಇವನ್ನೆಲ್ಲ ಹರಿಯವರಿಂದ ನಾವೆಲ್ಲರೂ ಪಡೆದಿದ್ದೇವೆ. ಅವರಿಂದ ಲೇಖನವೊಂದರ ಬರವಣಿಗೆಗೆ ಆಹ್ವಾನಿತರಾಗಿಯೂ ಉದಾಸೀನ ಮಾಡಿದಾಗ ಅವರು ಯಾವುದೇ ಮುಲಾಜಿಲ್ಲದೆ ಪದೇ ಪದೇ ಕರೆ ಮಾಡಿ ಬರಹದಲ್ಲಿ ತೊಡಗಿಕೊಳ್ಳಲು ಆದೇಶಿಸುತ್ತಿದ್ದರು. "ಅಬ್ಬಾ, ಪುಣ್ಯಾತ್ಮ. ಬಿಡೋದೇ ಇಲ್ವಲ್ಲ. ಒಮ್ಮೆ ಬರೆದು ಕೊಟ್ಟು ಬಿಡೋಣ" ಅಂತಂದುಕೊಂಡು ಹರಿಯವರು ಕೇಳಿದ ಲೇಖನ ಮುಗಿಸಿ ಕಳಿಸಿದ್ದುಂಟು. "ತುಂಬಾ ಚೆನ್ನಾಗಿ ಬರೆದಿದ್ದೀರಿ. ಈ ಲೇಖನದ ಇಂಥ ಸಂದರ್ಭದಲ್ಲಿ ಆ ಮಾತನ್ನು ಈ ರೀತಿ ಹೇಳಿದರೆ ಹೇಗೆ? ಇನ್ನೊಂದು ಹೇಳಿಕೆಯನ್ನು ಬೇರೆ ಥರ, ಪ್ರಶ್ನಾರ್ಥಕವಾಗಿ ಮಾಡಿದರೆ ಚೆನ್ನಾಗಿರಬಹುದಲ್ಲ! ಬದಲಾಯಿಸಿ ನೋಡಿ" ಎಂದೆಲ್ಲ ಅವರು ಸೂಚಿಸುತ್ತಿದ್ದ ತಿದ್ದುಪಡಿ ಮಾಡಿ ಕೊನೆಗೆ ಅವರಿಂದಲೇ ಮೊದಲ ಶಹಾಬ್ಬಾಸ್‍ಗಿರಿ ಪಡೆದದ್ದೂ ಇದೆ. ಇನ್ಯಾರಾದರೂ ಹೀಗೆ, ಅಷ್ಟೊಂದು ಸದಾಶಯದಿಂದ, ನಮ್ಮ ಬೆನ್ನ ಹಿಂದೆ ಬೆತ್ತ ಹಿಡಿದಂತೆ ನಿಂತು, ಬರೆಸುವುದು ಸಾಧ್ಯವಿದೆಯಾ? ಹರಿಗೆ ಹರಿಯೇ ಸರಿ.

ಅವರು ಒಬ್ಬ ವ್ಯಕ್ತಿಯಲ್ಲ; ಹಲವು ವ್ಯಕ್ತಿತ್ವಗಳ ಉತ್ಕೃಷ್ಟ ಸಂಗಮ. ವಿಜ್ಞಾನಿ, ಪಂಡಿತ, ಮೇಧಾವಿ, ಜಿಜ್ಞಾಸು, ಸುಸಂಸ್ಕೃತ, ಜ್ಞಾನದ ಭಂಡಾರವೇ ತಾನಾದರೂ ವಿನಯಶೀಲ ಸಜ್ಜನ. ಅವರ ಪರಿಚಯದ ಪರಿಧಿಯೊಳಗೆ ಬಂದವರು ಯಾರೂ ಸಾಹಿತ್ಯದ ಗಂಧಸೇಚನವಾಗದೆ ಉಳಿಯುವಂತಿಲ್ಲ. ಎಲ್ಲರಿಗೂ ಯಾವುದಾದರೊಂದು ಪುಸ್ತಕವನ್ನು ನೀಡಿ, "ತಗೊಳ್ಳಿ, ಇದು ನಿಮಗೆ. ಓದಿ, ಆನಂದಿಸಿ. ಇದರ ಬಗ್ಗೆ ಇನ್ನಷ್ಟು ಜನರಿಗೆ ತಿಳಿಸಿ" ಎಂದೇ ಕನ್ನಡ ಸರಸತಿಯ ಸೇವೆ ಮಾಡುತ್ತಾ ಬಂದ ಉಪಾಸಕ.

ಹರಿ ಸರ್.
-ಹಾಗೆಂದೇ ನಾನವರನ್ನು ಕರೆಯುತ್ತಿದ್ದೆ. ಸಂಪೂರ್ಣವಾಗಿ ಅವರೊಬ್ಬ ಗುರು. ಅಮೆರಿಕನ್ನಡ ಸಾಹಿತ್ಯದ ಅಧ್ಯಯನ ನಡೆಸುವ ಉದ್ದೇಶವನ್ನು ನಾನು ವ್ಯಕ್ತಪಡಿಸಿದ್ದಾಗ ಅತ್ಯಂತ ಹರ್ಷಿಸಿ ಬೆನ್ನು ತಟ್ಟಿದವರಲ್ಲಿ ಹರಿ ಸರ್ ಮೊದಲಿಗರು. ಒಂದು ಸಂಜೆ ಅದಕ್ಕಾಗಿ ಮೀಸಲಿರಿಸಿ, ನೆನಪಿನ ಖಜಾನೆ ಶೋಧಿಸಿ, ಜಾಲಾಡಿಸಿ ನೂರಾರು ಅಮೆರಿಕನ್ನಡಿಗರನ್ನು ನನ್ನ ಅಧ್ಯಯನದ ವ್ಯಾಪ್ತಿಯೊಳಗೆ ಸೇರಿಸಿದವರು. ತಾವು ನಡೆಸುತ್ತಿದ್ದ ಅಮೆರಿಕನ್ನಡ ದ್ವೈಮಾಸಿಕ ಪತ್ರಿಕೆಗೆ ಬರೆಯುತ್ತಿದ್ದ ಅನೇಕರ ಫೋನ್ ನಂಬರ್, ವಾಸವಿರುವ/ ಇದ್ದ ಪ್ರದೇಶ- ಇವನ್ನೆಲ್ಲ ಮೆದುಳಿನ ಗಣಿಯಿಂದ ಅಗೆದು ತೆಗೆದು ಪೇಪರಿಗಿಳಿಸಿದರು. ಅವರ ಅಗಾಧ ಜ್ಞಾಪಕಶಕ್ತಿಗೆ ಬೆರಗಾಗುತ್ತಾ ಪುಟ ಸೇರಿಸುತ್ತಾ ಅಪರಾಹ್ನವನ್ನು ಇಳಿಸಂಜೆಯಾಗಿಸಿದ್ದೆ ಅಂದು- ತುಂಬಾ ಹಿಂದೆ. ಕಾರಣಾಂತರಗಳಿಂದ ಆ ಯೋಜನೆ ಅರ್ಧದಲ್ಲಿ ನಿಂತು ಹೋಯಿತು. ಪದವಿಯ ಪೀಠ ಈಗ ಬೇಡೆನಿಸಿದರೂ ವಿಷಯದ ನಂಟು ಬಿಟ್ಟಿಲ್ಲ. ಅಮೆರಿಕನ್ನಡಿಗರ ಸೃಜನಾತ್ಮಕ ಸಾಹಿತ್ಯದ ಕುರಿತಾಗಿ ಒಂದು ಹೊತ್ತಗೆಯನ್ನು ಹೊರತರುವ ತಯಾರಿಯಲ್ಲಿರುವಾಗಲೇ ಅದರ ಮೂಲ ಆಕರ ಆಗಸಕ್ಕೇರಿದೆ. ಕನ್ನಡಮ್ಮನ ಹೃದಯ ಸೇರಿದ ಈ ಕನ್ನಡ ಚೇತನಕ್ಕೆ ಆ ಕೃತಿ ಮೀಸಲು. ಸ್ನೇಹ-ಸೇತುವಾಗಿ ಅಮೆರಿಕದ ಕನ್ನಡಿಗರ ನಡುವೆ ಭಾಷೆ, ಸಾಹಿತ್ಯದ ಬಾಂಧವ್ಯ ಬಿಗಿದ ಹರಿ ಸರ್‌ಗೆ ಈ ಮೂಲಕ ನನ್ನ ಅಭಿವಾದನ. "ಅಮೆರಿಕನ್ನಡ ಸಾಹಿತ್ಯ"ದ ಕುರಿತಾದ ಆ ಪುಸ್ತಕ ಪ್ರಕಟವಾಗುವಾಗ ಹರಸಲು ಬಂದೇ ಬರುತ್ತಾರೆನ್ನುವ ನಂಬಿಕೆಯೊಂದಿಗೆ ಇದೀಗ ಅವರನ್ನು ಬೀಳ್ಕೊಡುತ್ತೇನೆ.

Friday 23 July, 2010

ಗುರುವಂದನ

ಈಗ ಸುಮಾರು ಒಂದೂವರೆ ಗಂಟೆಯ ಹಿಂದಷ್ಟೇ ನಮ್ಮನ್ನಗಲಿದ ಹಿರಿಯ ಚೇತನ ಶ್ರೀ ಹರಿಹರೇಶ್ವರ ಅವರ ಕನ್ನಡಾತ್ಮಕ್ಕೆ ಶಾಂತಿ ಕೋರುತ್ತಾ... ಎಂಟು ವರ್ಷಗಳ ಹಿಂದೆ ಶ್ರೀ ಹರಿಹರೇಶ್ವರ-ನಾಗಲಕ್ಷ್ಮಿ ದಂಪತಿ ಅಮೆರಿಕೆಯನ್ನು ತೊರೆದು ಮೈಸೂರಿಗೆ ಹೊರಟು ನಿಂತಾಗ ಬರೆದಿದ್ದ ವಂದನಗೀತ...

ವಯೋವೃದ್ಧ ಜ್ಞಾನವೃದ್ಧ ಪ್ರೀತಿಬದ್ಧರು
ಕಣ್ಣ ಬೆಳಕ ಹೃದಯದೊಳಗೆ ಇಳಿಸಿಬಿಡುವರು

ಮಾತೆ-ಮಮತೆ, ಅನ್ನಪೂರ್ಣೆ, ಒಲವ ಕೊಡುವರು
ತಂದೆ-ಶಿಸ್ತು, ಮಾರ್ಗದರ್ಶಿ, ಬಲವ ಬೆಳೆವರು

ಕೈಯ ಹಿಡಿದು ಹೆಜ್ಜೆಯಿರಿಸಿ ಗುರಿಯ ತೋರ್ವರು
ಸಾಧನೆಯಲಿ ಸಂಗ ನೀಡಿ ಗರಿಯನೀವರು

ಅಂತರಂಗ ಸಖ್ಯಕೊಂದು ಅರ್ಥವಿತ್ತರು
ಆತ್ಮದೌನ್ನತ್ಯದಾ ದಾರಿ ತೆರೆದರು

ಕನ್ನಡತನ ಕನ್ನಡಮನ ಕನ್ನಡವುಸಿರು
ಕಂಡವರಿಗೆ ಸುಜ್ಞಾನವ ಉಣಿಸುವ ಬೇರು

ಬಿಟ್ಟರಿಲ್ಲ ಇವರಿಗೆ ಸಮ, ಯಾವ ದೇಶ ಊರು
ನಂದಿನಿ ಮಿಗೆ ಸುಮನೆಯರಿಗೆ ಹನಾಸುನಂ ತೌರು

ಹರಿಗೆ ಲಕ್ಷ್ಮಿ, ಹರಗೆ ನಾಗ, ಈಶ ಪಂಡಿತ
ನಮನಯೋಗ್ಯರಿವರು- ಜೋಡು ಶಾರದಾಂಕಿತ
(೧೦-೧೦-೨೦೦೨)

Thursday 15 July, 2010

ಪುನರ್ಜೀವ

ಎಲ್ಲಿ ಏನು ಹೇಳಬೇಕೆ ಕೃಷ್ಣ ರಾಧೆಗೆ
ಬರಿಗಾಲಿನಲ್ಲೆ ಓಡಿ ಬಂದೆ ಯಮುನೆ ತೀರಕೆ

ಸಲುಗೆ ಸ್ನೇಹ ಬೆಳೆದ ಪ್ರೀತಿ
ಬೆಸೆದ ಮನದ ರೀತಿಯು
ನಿನ್ನ ನನ್ನ ಭೇದ ಮರೆತು
ಒಂದೆ ಭಾವ ನೀತಿಯು
ಜೀವ ಮುರಳಿಯೂದಲು ಜಗವೇ ನಲಿವುದು
ನಾನೇ ಗೋಪಿಕೆ... ನೀನೆ ನನ್ನ ಗಿರಿಧರ...

ಬೇರೆ ಮಣ್ಣಿನಲ್ಲಿ ನಮ್ಮ
ಬೇರು ನೆಲೆಸಬೇಕಿದೆ
ದಾರಿ ಯಾವುದೆಂದು ಹುಡುಕಿ
ಮನೆಯ ಸೇರಬೇಕಿದೆ
ಒಲವ ತಂತಿ ಮೀಟಲು ನೆಲವೇ ಮಿಡಿವುದು
ನೀನೇ ವನಮಾಲಿ... ನಾನೇ ನಿನ್ನ ಪ್ರೇಮಿಕೆ...
(೧೦-ಜುಲೈ-೧೯೯೮)

Tuesday 15 June, 2010

ಲಗೋರಿ

ಬೇಸ್ ಬಾಲ್, ಫುಟ್ ಬಾಲ್,
ಸಾಕರ್, ಸ್ಕೇಟಿಂಗ್,... ಇಂಥವೇ
ಇತ್ಯಾದಿ ಆಟಗಳನ್ನು ಕಂಡು
ಬೆಳೆದ ಹತ್ತರ ವಯಸಿನ ಮಗ
ಊರಿಗೆ ಬಂದು ಕೆಲವಾರು ತಿಂಗಳುಗಳಲ್ಲೇ
ಕ್ರಿಕೆಟ್ಟಿನ ಒಳಹೊರಗನ್ನು ಅರಿತಿದ್ದಾನೆ
ಗೆಳೆಯರೊಡನೆ ಖ್ಖೋ-ಖ್ಖೋ ಆಡುತ್ತಾನೆ
ಕಬಡ್ದಿಯ ಪರಿಚಯವೂ ಆಗುತ್ತಿದೆ

ಮೊನ್ನೆ ನಮ್ಮ ಬಾಲ್ಯದ
ಕಥೆಗಳನ್ನು ಹೇಳುತ್ತಿದ್ದಾಗ...
"ಅಮ್ಮ, ಲಗೋರಿ ಅಂದ್ರೇನು?"
ಉತ್ತರ ವಿವರಿಸಿ ಹೇಳಿದರೆ
ಸ್ವಾರಸ್ಯವಿಲ್ಲೆನಿಸಿತು;
"ಈ ಸಲ ಹಳ್ಳಿಗೆ ಹೋದಾಗ
ಎಲ್ಲರೂ ಸೇರಿ ಆಡೋಣ,
ನಿಮಗೆ ಸರಿಯಾಗಿ ಅರ್ಥವಾಗಲಿ..."

ರಜೆಯೂ ಬಂದು ಹಳ್ಳಿಗೆ ಹೋಗಿ
ಅಲ್ಲೊಂದು ಸಮಾರಂಭಕ್ಕೆಂದು
ಮನೆಮಂದಿಯೆಲ್ಲ ಸೇರಿದ ಸಂದರ್ಭ;
ಊಟ ಮುಗಿಸಿ ಪಟ್ಟಾಗಿ ತೇಗಿ
ವೀಳ್ಯ ತಿಂದವರೂ
ಮಿತ ವೇಗದಲ್ಲಿ ಸಾಗುತ್ತಿದ್ದಾಗ-
ಎಲ್ಲರ ಗಮನ ಸೆಳೆದೆ-
"ಲಗೋರಿ ಆಡುವನಾ?"

ಎಲ್ಲ ನಿಶ್ಶಬ್ದ.
೧-೨- - - -೬-೭
ಪ್ರತೀ ಮುಖದಲ್ಲೂ ಗೆಲುವು
ಮೆಲುವಾಗಿ ಗುಸು ಗುಸು
ಪಿಸು ಪಿಸು ಶುರುವಾಗಿ
ಗಾಢವಾಗಿ ಹರಡಿ "ಯೇ...ಏ..ಏ..ಸ್ಸ್"ನಲ್ಲಿ
ತಾರಕಕ್ಕೇರಿದಾಗ ಮಗನಿಗೂ ನನಗೂ
ಅತ್ಯಾನಂದ; ಅನಿರೀಕ್ಷಿತ ಘಟಿಸಿತ್ತು.
ಸುಲಭವಾಗಿ ಗುಂಪು ವಿಭಜನೆ-
"ಗಂಡಸರೆಲ್ಲ ಒಂದು ಕಡೆ, ಹೆಂಗಸರೊಂದು"
ಚೆಂಡು, ಏಳು ಪಲ್ಲೆ-ಕಲ್ಲುಗಳು
ಆಗಲೇ ತಯಾರಿದ್ದವು;
ಗದ್ದೆಯಂಗಳವೂ ತೆರೆದಿತ್ತು.

ಅರುವತ್ತೈದು, ಎಪ್ಪತ್ತರ ಅಜ್ಜ-ಅಜ್ಜಿಯರು,
ನಲ್ವತ್ತು ನಲ್ವತ್ತೈದರ ಅಪ್ಪ-ಅಮ್ಮ,
ಮೂವತ್ತರ ಹುರುಪಿನ ಹುರುಯಾಳುಗಳು,
ಹದಿನೈದು ಇಪ್ಪತ್ತರ ಅಕ್ಕ-ತಮ್ಮ,
ಕೊನೆಗೆ ಹನ್ನೆರಡು ಹತ್ತು ಎಂಟುಗಳು;
ಎಲ್ಲರಲ್ಲೂ ಹೊಸ ಹುರುಪು
‘ಸರಿಯಾಗಿ ತಯಾರಾಗಲು’
ವಿಭಜಿಸಿ ನಿಂತಿದ್ದ ಗುಂಪುಗಳೊಳಗೆ
ಪಿಸುಮಾತು, ಕಿವಿಮಾತು,
ಎದುರಾಳಿಯ ಸೋಲಿಸಲು ಯೋಜನೆಗಳು.
ಪಲ್ಲೆಗಳೇಳು ಗದ್ದೆಯ ನಡುವೆ
ಗೋಪುರ, ಕಾದಿತ್ತು ಚೆಂಡು.
"ಅವರೆಲ್ಲ ಶೂ-ಚಪ್ಲಿ ಹಾಕ್ತಿದ್ದಾರೆ..."
ಪತ್ತೇದಾರಿ ಮಾಡಿದಳು ಏಳರ ಮಗಳು.

ಇನ್ನೇನು ಆಟ ಶುರುವಾಗಬೇಕು,
ಇಪ್ಪತ್ತರ ಒಬ್ಬ ತಕರಾರೆತ್ತಿದ-
"ನೀವು ಹೆಂಗಸರ ಗುಂಪಲ್ಲಿ
ಜಾಸ್ತಿ ಜನ ಇದ್ದೀರಿ, ಸರಿಯಲ್ಲ"
ತಲೆಲೆಕ್ಕವಾಗಿ, ಕೊನೆಗೆ
ನಾವೈದು ಜನ ಹೆಚ್ಚು.
ಇಬ್ಬರು ನಿರ್ಣಾಯಕರಾದರು,
ಇಬ್ಬರು ಕಾಫಿ ಮಾಡಲು ಹೋದರು,
ಒಬ್ಬಳು ತಿಂಗಳ ಬಾಣಂತಿ-
ಆಗಷ್ಟೇ ಗಮನಕ್ಕೆ ಬಂದಳು.
ಗುಂಪುಗಳ ಲೆಕ್ಕ ಸರಿತೂಗಿತು;
ಆಟದ ನಿಯಮ ಸಾರಲಾಯಿತು.

ಆಗಲೇ ನಮ್ಮೊಳಗಿನೊಂದು ದನಿ-
"ನಿನ್ನವನೆಲ್ಲಿ? ಕಾಣ್ತಾ ಇಲ್ಲ?"
ದಿಗಿಲಾಗಿ ಕಣ್ಣುಗಳು ಹುಡುಕಿದವು.
ಹುರುಪು ಸೋರಿತು, ಅಳುಕು
ಮನೆ ಮಾಡಿ ಆಳಲಾರಂಭಿಸಿತು.
ನನ್ನವನಿಗಾಗಿ ಸುತ್ತಲೂ ನೋಡಿದೆ,
ಮನೆಯೊಳಗೆಲ್ಲ ಓಡಿದೆ,
ಈಚೆ ಬಂದಾಗ ಚಾವಡಿಯಲ್ಲಿ
ಗಂಟೆ ಬಾರಿಸಿತು. ಲೆಕ್ಕ ಆರು.
ತಲೆಯೊಳಗೆ ಚಿಕ್ಕ ಹಕ್ಕಿ
ಚಿಲಿಪಿಲಿ, ಸುತ್ತ ನೋಡಿದರೆ-
ಮಬ್ಬುಗತ್ತಲು, ಒಂಟಿತನದರಿವು...
ನೆಲದ ಚಾಪೆಯ ಮೇಲಿಂದ
ವಾಸ್ತವದ ಮುಂಜಾನೆಗೆ ಮುಖ ಮಾಡಿದ್ದೆ.

ನೆನಪುಗಳ ಹಂದರ ಸ್ಪಷ್ಟವಾಯಿತು.
ಕೆಲಸದ ನಿಮಿತ್ತ ದೂರ ಹೋದ
ನಲ್ಲನ ಮುಖ ನಗೆ ಬೀರಿತು.
ಜೊತೆಗೇ ಕಂಡವು ಜವಾಬ್ದಾರಿಗಳ
ಒಂದೊಂದೇ ನೆಲೆಗಳು-
ಆ ಬಿಲ್ಲು, ಈ ಬಿಲ್ಲುಗಳು,
ಬ್ಯಾಂಕು, ಪೋಸ್ಟಾಫೀಸುಗಳು,
ಹಣ್ಣು-ತರಕಾರಿ-ಬ್ರೆಡ್-ಜ್ಯಾಮುಗಳು,
ಮಗ-ಮಗಳ ಶಾಲೆ, ಪರೀಕ್ಷೆಗಳು,
ಮುಗಿಯದ ಮನೆಗೆಲಸಗಳು,
ಬಂದು ಹೋಗುವ ನೆಂಟರಿಷ್ಟರು,
ಇವೆಲ್ಲದರ ಜೊತೆಗೆ ನನ್ನ ಓದು...

ಗದ್ದೆಯಂಗಳದ ನಡುವಿಂದ ಯಾರೋ
"ಏಳು ಕಲ್ಲುಗಳ ಲ...ಗೋ...ರೀ..." ಅಂದರು.
(೧೦-ಮಾರ್ಚ್-೨೦೦೦)

Saturday 15 May, 2010

ಅಜ್ಞಾತನಿಗೆ...

ಅತಿಥಿಯೇ ನೀನು?
ಕರೆಯದೇ ಬಂದವ; ಅಭ್ಯಾಗತ!
ಬಯಸಿ ಬಯಸಿ ಕೂಗಿ ಕರೆದು
ಕರೆಯೋಲೆ ನೀಡಿದರೂ...
ಬಾರದೇ ಇರಬಲ್ಲ ಕಟುಹೃದಯಿ ನೆಂಟ;
ಅಗೋ ಬಂದೆಯಲ್ಲ,
ಯಾರೂ ನೋಡದ ಹೊತ್ತು,
ಯಾರಿಗೂ ನೀನು ಬೇಡದ ಹೊತ್ತು.
ಮತ್ತೆ, ಹೊತ್ತು-ಗೊತ್ತಿಲ್ಲದೆ
ಹೊತ್ತುಕೊಂಡು ಹೋಗಬೇಕಾದ ಕರ್ಮ
ನಮ್ಮ ತಲೆಗೆ ಕಟ್ಟಿಟ್ಟು-
ಮೌನವಾಗಿ ಬಿಡುತ್ತೀ!

ನಿನ್ನ ಮೌನದಲ್ಲೂ ಭೀಕರ ಗದ್ದಲ;
ಯಾರೂ ಕಾಣದಂತೆ
ಎಲ್ಲರೆದುರಿಗೇ ಕೀಳುತ್ತಿರುತ್ತಿ-
ಅರಿಯದ ಕರುಳನ್ನು,
ತಿಳಿಯದ ಕುರುಳನ್ನು,
ಮರೆಯದ ಮನವನ್ನು,
ತೊರೆಯಲಾರದ ಮನೆಯನ್ನು!
ಮುರಿಯುವ, ತುಳಿಯುವ, ಅಳಿ-
-ಸುವ ಕೆಲಸದ ನಿನಗೆ
ಸಮಾಧಾನ ನೆಮ್ಮದಿ ಕೊಡಿಸುವ
ಬಯಕೆ ಬರುವುದೇಕೆ ವಿರಳ?
ಆಹ್ವಾನಗಳಿಗೆ ಬಿಡುವಿಲ್ಲದ ಕ್ರೂರಿ ನೀನು!

ಒಂಟರಬಡುಕ ಸುಂಟರಗಾಳಿ
ನಿನಗೆ ಯಾರೂ ಜತೆಗಾರರಿಲ್ಲ,
ನೀನು ಯಾರಿಗೂ ಜೊತೆಗಾರ-
ನಲ್ಲ; ಧುತ್ತೆಂದು ಬಂದು-
ಥಟ್ಟನೆ ತಬ್ಬಿ
ಅಲ್ಲೇ ಇಲ್ಲವಾಗುವ ನಿನಗೆ
ಭಾವನೆಗಳ ಪರಿಚಯವಿಲ್ಲ,
ಕಾಮನೆಗಳು ಬೇಕಾಗಿಲ್ಲ,
ಸಂಬಂಧ, ವಾವೆ-ವರಸೆಗಳ
ಅರಿವು ಸುಳಿವು ಇಲ್ಲವೇ ಇಲ್ಲ.

ಎಂದಾದರೂ ಇನ್ನೊಬ್ಬರ ಜವಾಬ್ದಾರಿಯ-
ಹೊರೆ ಹೊತ್ತು ನೋಡಿದ್ದೀಯ?
ಯಾವಾಗ ಯಾರ ಮೇಲಾದರೂ ಅದನ್ನು
ಹೇರಿಸುತ್ತೀಯಲ್ಲ; ಭಾರ ಎತ್ತಿದ್ದೀಯ?
ಎತ್ತದ ಕತ್ತಿನ ರಣಭಾರದಿ ಅತ್ತಿದ್ದೀಯ?
ಬಾಳಿ, ಬದುಕಿನ ಬವಣೆ ಅರಿತಿದ್ದೀಯ?
ನ್ಯಾಯಾನ್ಯಾಯಗಳ ಫಲ ಉಂಡಿದ್ದೀಯ?
ಇಲ್ಲೇ ನಮ್ಮ ಸುತ್ತ ಮುತ್ತಲೇ
ಸುಳಿದಾಡುತ್ತಿರುತ್ೀ, ಆದರದರ
ಅರಿವು ಕೂಡ ನಮಗಾಗದಂತೆ;
ಎಲ್ಲೋ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗುತ್ತೀ,
ನಿನ್ನನ್ನು ಮರೆತುಬಿಡದಂತೆ!

ಯಾರಯ್ಯ, ಯಾರು ನೀನು?
ಎಲ್ಲೆಲ್ಲೋ ಬಲೆಬೀಸಿ ಬೇಟೆ-
ಯಾಡುವ ಕರಾಳ ಭಯಾನಕ-
ಕಿರಾತಕನೆ? ಕಂಡವರಿಲ್ಲ ನಿನ್ನ.
ಆದರೂ ಕೇಳಯ್ಯ ಒಂದು ಮಾತು-
ನೀನೇ ಭೀಷಣ ಪಾಷಾಣ ಹೃದಯಿ
ಅಂದುಕೊಳ್ಳಬೇಡ; ನೋಡಲ್ಲೇ-
ನಿನ್ನ ದಪ್ಪ ಮೂಗಿನಡಿಯ ಕಪ್ಪು
ದಟ್ಟ ಮೀಸೆಯೆಡೆಯಲ್ಲೇ(?)
ಅಡಗಿರುವರು ನರಕುಲಾಂತಕ ನರರು!

ಏಕಚಕ್ರಾಧಿಪತಿ ನೀನೆಂದು-
ಕೊಂಡೆಯ? ನಿನಗದು ಸಲ್ಲ!
ಯಾರಿಗೆ ಹೊಂಚು ಹಾಕುತ್ತಿರುವೆಯೀಗ?
ಬೇಗ ಯಾರಾದರೂ ಬೇಕೆಂದಿದ್ದರೆ-
ಕದಲು ಇಲ್ಲಿಂದ, ಆ ಕಡೆಗೆ
ಅಲ್ಲಿ ಕಾದಿದೆ ನಿನ್ನ ‘ಕಾಯ’ದ ಕದನ,
ಅದೇ ಅನಿವಾರ್ಯವೀಗ, ಹೋಗಲ್ಲಿ.
ಅವಿರತ ನಿನ್ನ ಭಯದಲ್ಲಿ,
ನಿನ್ನ ತೊಲಗಿಸಲರಿಯದೆ
ಬಾಗಿ ಕಾದು ಕದ್ದು
ಅವಿತಿರುವುದನರಿತೂ ನೀ
ಮತ್ತೆ ಇತ್ತ ಮುತ್ತಿಕ್ಕ ಬಂದರೆ
ನಾನೆನ್ನಬಹುದು-
‘ತೊಲಗಾಚೆ’! ಅಷ್ಟೇ!
(೦೨-ಡಿಸೆಂಬರ್-೧೯೯೯)

Thursday 15 April, 2010

ವೇಷ

ದೇವಸ್ಥಾನದೆದುರಿನ ಖಾಲಿ ಗದ್ದೆಯಲ್ಲಿ
ಯಕ್ಷಗಾನ ಬಯಲಾಟದ ಬಣ್ಣ
ದೊಡ್ಡ ವೇದಿಕೆ, ರಂಗಿನ ದೀಪ
ಊರಿನವರಿಗೆ ಏನೋ ಖುಷಿಯಣ್ಣ
ಸಂಜೆಯ ಪೂಜೆಗೆ ವಿಶೇಷ ದಕ್ಷತೆ
ಊರ ಹಿರಿಯಗೆ ಮೊದಲ ಪ್ರಸಾದ
ನಮ್ಮಜ್ಜನಿಗೇ ಇಲ್ಲಿ ಆದ್ಯತೆ
ಅವನಿಲ್ಲದೆ ಊರಲಿ ನಡೆಯದಾರ ಪಾದ.

ಉತ್ಸವದ ದಿನ ಬೆಳಗು ಎದ್ದುಬಂದ
ಎಂದಿನಂತಲ್ಲ; ಗೊಣಗಿಗೂ ಉತ್ಸಾಹ
ಮನೆಮಕ್ಕಳಿಗಾಯ್ತು ಅಪ್ಪಣೆಯ ವರದಾನ
ಹೆಂಗಳೆಯರ ಕೆಲಸ ಇನ್ನೂ ದುಸ್ಸಹ

ಅದಾಗಬೇಕು, ಇದಾಗಬೇಕು, ಹಾಗಿರಬೇಕು, ಹೀಗಿರಬೇಕು
ಏನಿಲ್ಲ ಏನುಂಟು ಅವನ ಪಟ್ಟಿಯಲ್ಲಿ
ಅಜ್ಜಿಯಿಲ್ಲದ ನೆನಪು ಅವನ ಕಾಡಲೇ ಇಲ್ಲ
ನಮಗಿತ್ತು ಹೊದಿಕೆ ಅವಳ ನಗುವಿನಲ್ಲಿ
ಕಳೆದ ಇರುಳುಗಳಿಗೆ ಬೆನ್ನಿತ್ತು ನಡೆದವನು
ಇಂದಿಗೆ ಮುಖತೋರಿ ನಿಂತಿದ್ದಾನೆ
ನಿನ್ನೆಗಳ ಹಂಗಿನಲಿ ಗೀರುಗಳ ಹೊತ್ತವನು
ಮತ್ತೊಮ್ಮೆ ಹೆಗಲೊರಸಿಕೊಂಡಿದ್ದಾನೆ

ಮನೆಯೊಳಗೆ ಅಧಿಕಾರ, ಮೂರಾಬಟ್ಟೆ ಸರಕಾರ
ಊರಬೀದಿಗೆ ಮಾತ್ರ ರಾಜತಂತ್ರ
ಅವರಿವರ ಹೊಗಳಿಕೆಗೆ ಕಿವಿಯಾಗುವವನಿಗೆ
ಮನೆಯ ಮಕ್ಕಳ ಪ್ರೀತಿ ಬರೀ ಕುತಂತ್ರ
ಎಲ್ಲವನು ತನ್ನದೇ ಕೈಯಲಿರಿಸುವ ಛಲ
ಬೇಡವಗೆ ತನ್ನವರ ಆಸೆಗಳ ನೆರಳು
ಅವನ ಛಾಯೆಯ ಕೆಳಗೆ ಬೆಳೆಯದಾಗಿದೆ ಹುಲ್ಲು
ಊರೊಳಗೆ ಅವನಿಗೇ ಹೆಸರು, ಮಖಮಲ್ಲು

ಯಕ್ಷಗಾನದ ಬಯಲ ರಂಗಮಂಟಪದಲ್ಲಿ
ಅವನನ್ನು ಕೂರಿಸಿ ಆಡಿದರು ನೂರು
ಇನ್ನೇನು ಶತಕವನೆ ಕಾಣುವ ತಾತನನು
ಶಾಲು-ಹಾರಗಳಲ್ಲಿ ಮೆರೆಸಿದರು ಅವರು

ಬಯಲಾಟ ಮುಗಿದಾಗ ಬರಿದಾದ ಗದ್ದೆಯಲಿ
ನಡೆದಿದ್ದೆ ಸುಮ್ಮನೇ ನೋಟ ಹರಿಸುತ್ತಾ
ಖಾಲಿ ಗದ್ದೆಯಲಿದ್ದ ಖಾಲಿ ಬಿರುಕುಗಳಲ್ಲಿ
ತಿಂದು ಬಿಸುಟೆದ್ದವರ ಖಾಲಿ ಮೊತ್ತ
ಮನೆಗೆ ಬರಲಾಗದೆ ದೇವಳದ ಎದುರಿನಲಿ
ಗರುಡಗಂಬದ ಕಡೆಗೆ ಕಣ್ಣು ನೆಟ್ಟೆ
ಏರಿ ತೊನೆಯುತ್ತಿದ್ದ ಗರುಡಪಟ ಗಾಳಿಯಲಿ
ಅತಂತ್ರ ನೆನಪಿಸಿದ, ಮನೆಗೆ ಹೊರಟೆ.

ದೇವ ವಾಹನನಾದ ಗರುಡನೇ ತೂಗಿರಲು
ನನ್ನದೇನಿದೆ ಅಂಥ ಘನ ಜೀವನ?
ಅಜ್ಜನ ಆಳ್ವಿಕೆಯ ಕೆಲವಾರು ದಿನಗಳನು
ಕಳೆದ ಮೇಲೆನಗೆ ನಿಜ ವಿಮೋಚನ

ಬದುಕಿದ್ದ ದಿನಗಳಲಿ ಅಜ್ಜ ಬಾಳಿದ್ದನ್ನು
ಇಂದು ನೆನೆದರೆ ಸಾಕು, ಪಾಠ ನನಗೆ
ಹೇಗೆ-ಹೇಗಿರಬೇಕು ಎನುವ ಮೌಲ್ಯಕ್ಕಿಂತ
ಮಾಡಬಾರದ್ದನ್ನು ಅರಿತೆ ಒಳಗೆ
(೧೦-ಎಪ್ರಿಲ್-೨೦೦೮)

Friday 9 April, 2010

ಹರಳೆಣ್ಣೆ

ಒಂದೆರಡು ಚಮಚ ಗಂಟಲಿಗಿಳಿಸಿದರೆ-
ಉದ್ದ ಕೊಳವೆಯ ಉದ್ದಕ್ಕೂ
ಗೊಂದಲ ಕೋಲಾಹಲ;
ತಳಮಳ, ತಲ್ಲಣ.
ಕಿವುಚಿ, ಕುಲುಕಿ, ಮಸಕಿ,
ಸೋಸಿ, ಜಾಡಿಸಿ, ತೊಳಸಿ,
ಕೆಲಸ ಮುಗಿಸಿದಾಗ-
ನಿರುಂಬಳ ಹಗುರ ಭಾವ.

ಒಂದೆರಡು ಚಮಚ ನೆತ್ತಿಸವರಿದರೆ-
ಮಿಳಮಿಳ, ಪಿಚಪಿಚ,
ಜಿಡ್ಡು, ಜಿಗುಟು, ಅಂಟು.
ನೆನೆಸಿ, ಕಾಯಿಸಿ, ತೋಯಿಸಿ,
ಬಿಸಿಬಿಸಿ ಎರೆದು ಉಜ್ಜಿ,
ಕೆಲಸ ಮುಗಿಸಿದಾಗ-
ನಿರುಂಬಳ ಹಗುರ ಭಾವ.

ಒಂದೆರಡು ಚಮಚ ಲೇಪಿಸಿಕೊಂಡರೆ-
ಕಳವಳ, ಕಿರಿಕಿರಿ.
ಸವರಿ, ನೀವಿ, ಮರ್ದಿಸಿ,
ಬೆಚ್ಚಗೆ ಸುರಿದು ತಿಕ್ಕಿ,
ಕೆಲಸ ಮುಗಿಸಿದಾಗ-
ನಿರುಂಬಳ ಹಗುರ ಭಾವ.
(೦೮-ಎಪ್ರಿಲ್-೨೦೦೯)

Saturday 3 April, 2010

ಸತ್ತ ಮೀನಿನ ಸುತ್ತ..... (ಅಭಿನವ ಮತ್ಸ್ಯಗಂಧಾವೃತ ಕಥನ)

ಅಂದು- `ಎಪ್ರಿಲ್ ಒಂದು', ಎರಡು ಸಾವಿರದ ನಾಲ್ಕು. ಜಾಗತಿಕವಾಗಿ ಮೂರ್ಖರ ದಿನ. ಯಾರ್ಯಾರೋ ಇನ್ಯಾರನ್ನೋ ಮೂರ್ಖರನ್ನಾಗಿಸುವ ಸುದ್ದಿ ಹೊಸದೇನಲ್ಲ. ಹಾಗೆಂದು ಇತರರನ್ನು ಛೇಡಿಸಿ, ಪೀಡಿಸಿ, ಫ಼ೂಲ್ ಮಾಡಿ ಪಡೆವ ಥ್ರಿಲ್ ಹಳೆಯದಾಗುವುದೂ ಇಲ್ಲ. ಇಂಥ ಸುದಿನವಾದ ಅಂದು ನನ್ನ ಪ್ರತೀ ಉಸಿರಾಟವೂ ಸತ್ತ ಮೀನಿನ ಸುತ್ತಲೇ ಸುತ್ತಿದ್ದು ಕಾಕತಾಳೀಯವೋ ಗೊತ್ತಿಲ್ಲ. ಅಂದು ಬೆಳಗ್ಗೆ ಏಳರಿಂದ ನಾನೇ ಮತ್ಸ್ಯಗಂಧಿಯಾಗಬೇಕಾದ ಕಥನ ಕೋಲಾಹಲ ಕೇಳುವಿರಾ? ಆದರೆ, ಅದಕ್ಕೆ ಮುನ್ನ ಒಂದು ಉಪಸೂಚನೆ: ಈ ಸಂದರ್ಭದಲ್ಲಿ ಯಾವುದೇ ಮನುಷ್ಯ ಮಾತ್ರರನ್ನು ದೂಷಿಸದೇ ನಾಯಿಯೋ, ಬೆಕ್ಕೋ, ಹದ್ದೋ, ಕಾಗೆಯೋ- ಈ `ವಾಸನಾವತಾರ'ಕ್ಕೆ ಕಾರಣೀಭೂತರೆಂದು ಹೇಳಿಕೊಂಡು ನನ್ನ "ಮತ್ಸ್ಯ ಪುರಾಣ" ಆರಂಭಿಸುತ್ತೇನೆ.

ಕನಸಿನರಮನೆಯಲ್ಲದಿದ್ದರೂ ಮಣಿಪಾಲದಲ್ಲಿರುವ ನಮ್ಮ ಮನೆಯಲ್ಲಿ, ಅಂದು ಬೆಳಗ್ಗೆ ಏಳುತ್ತಿದ್ದಂತೆಯೇ ತಲೆ ಓಡಿತು- "ಹಾ! ಇವತ್ತಿನಿಂದ ಎರಡು ತಿಂಗಳು ಮಕ್ಕಳನ್ನು ಶಾಲೆಗೆ ಹೊರಡಿಸಬೇಕಾದ ಗಡಿಬಿಡಿಯಿಲ್ಲ. ಬೇಸಗೆ ರಜೆಯ ಕೆಲದಿನ ನಮ್ಮೊಡನೆ ಕಳೆಯಲು ಬಂದಿರುವ ಸೊಸೆಯರಿಬ್ಬರನ್ನೂ (ನನ್ನ ನಾದಿನಿಯ ಮಕ್ಕಳು) ನನ್ನ ಮಕ್ಕಳನ್ನೂ ಎಲ್ಲಾದರೂ- ಬಹುಶಃ ಮಲ್ಪೆ ಸಮುದ್ರ ತೀರಕ್ಕೆ- ಕರೆದೊಯ್ಯಬೇಕು. ನಾಲ್ಕಾರು ದಿನಗಳ ಮೇಲೆ ಈ ನಾಲ್ವರನ್ನೂ ಊರಿಗೆ ಕರೆದೊಯ್ದು ಬಿಟ್ಟು ಬರಬೇಕು. ಮತ್ತೆ, ಹದಿಮೂರನೇ ತಾರೀಖು ನನ್ನವರು ಅಮೆರಿಕಾದಿಂದ ಬಂದ ಮೇಲೆ, ಅತ್ತೆಯವರನ್ನೊಮ್ಮೆ ಒಳ್ಳೆಯ ಡಾಕ್ಟರರ ಹತ್ತಿರ ಕರೆದುಕೊಂಡು ಹೋಗಬೇಕು, ಅವರ ಕಾಲುನೋವು ಹೆಚ್ಚಾಗುತ್ತಿದೆ...." ಲೆಕ್ಕಾಚಾರ ಹಾಕಿದೆ; ಅಷ್ಟೇ! ಸಿಹಿತಿಂಡಿ ಅತಿಯಾಗಿ ಮೆದ್ದ ಆಸೆಬುರುಕ ಮಗುವಿಗೆ ಅಜೀರ್ಣವಾಗುವ ಹಾಗೆ ನನ್ನ ನಸೀಬು ತಿರುಗಿದ್ದು ನನಗೆ ಅರಿವಾಗಲು ತುಸು ಹೊತ್ತು ಹಿಡಿಯಿತು. ಕೋಣೆಯಿಂದ ಹೊರಬಂದು ಮುಖ ತೊಳೆದು ಕಾಫಿಗೆ ಶಾಂತಕ್ಕನ ಮುಂದೆ ನಿಂತಾಗ ಅವರ ಮುಖ ಶಾಂತವಾಗಿರಲಿಲ್ಲ. "ಏನಾಯ್ತು ಶಾಂತಕ್ಕ?" ಎಂದೆ. "ನೀವು ಕಾಫಿ ಕುಡೀರಿ, ಮತ್ತೆ ಹೇಳ್ತೇನೆ" ಅಂದರು. ನನಗೆ ಗಾಬರಿ ಹತ್ತಿತು. "ಯಾಕೆ? ಏನಾಯ್ತು? ಹೇಳಿ..." ಒತ್ತಾಯಿಸಿದೆ. ಅವರೂ ಪಟ್ಟು ಬಿಡಲಿಲ್ಲ, "ನೀವು ಮೊದ್ಲು ಕಾಫಿ ಕುಡೀರಿ, ಮತ್ತೆ ಹೇಳ್ತೇನೆ..." ಸರಿ, ಹಿರಿಯರಾದ ಅವರ ಮಾತಿಗೆ ಬೆಲೆ ಕೊಟ್ಟೆ, ಕಾಫಿ ಹೊಟ್ಟೆಗೆ ಇಳಿಬಿಟ್ಟೆ.

ಈಗ ಶಾಂತಕ್ಕನ ಮುಖದ ಬಣ್ಣ ಬದಲಾಯಿತು, ಅಸಹ್ಯ ಕಂಡಂತೆ ಇದ್ದರು. ಮತ್ತೊಮ್ಮೆ ಕೇಳಿದೆ, "ಏನಾಯ್ತು, ಈಗ್ಲಾದರೂ ಹೇಳಿ..." "ಹೊರಗೆ ಬನ್ನಿ, ನೋಡಿ..." ಅನ್ನುತ್ತಾ ಮುಂಬಾಗಿಲಿಗೆ ಕರೆದೊಯ್ದರು. ವೆರಾಂಡದ ಮೆಟ್ಟಿಲುಗಳ ಮೇಲೆ ಮೂರ್‍ನಾಲ್ಕು ಕಡೆ ಹೊಲಸು ಬಿದ್ದಿತ್ತು. ಕೆಟ್ಟನಾತ! ಏನೆಂದು ನೋಡುತ್ತಿರುವಾಗಲೇ ಶಾಂತಕ್ಕನ ವಿವರಣೆ ಬಂತು, "ಇವತ್ತು ಏಕಾದಶಿ. ನನ್ನ ಸ್ನಾನ ಮುಗಿಸಿ, ಹೊಸ್ತಿಲು ಬರೆದು ತುಳಸಿಗೆ ನೀರು ಹಾಕಲಿಕ್ಕೆ ಬರುವಾಗ ನೋಡಿದೆ. ವಾಂತಿ ಬರುವ ಹಾಗಾಯ್ತು. ಹಿಂದಿನ ಬಾಗಿಲಿಂದ ಬಂದು ತುಳಸಿಗೆ ನೀರು ಹಾಕಿದೆ. ನನ್ನ ಸ್ನಾನ ಆಗಿಲ್ಲದಿದ್ದರೆ ನಾನೇ ತೆಗೆಯುತ್ತಿದ್ದೆನೋ ಏನೋ..." ದನಿ ಅಡಗುತ್ತಿತ್ತು. ಅವರನ್ನು ಮನೆಯೊಳಗೆ ಕರೆತರುತ್ತಾ ಹೇಳಿದೆ, "ಅದನ್ನು ನಾನು ತೆಗೀತೇನೆ, ಅದೇನೂ ಪರವಾಗಿಲ್ಲ. ನೀವು ಕಾಫಿ ಕುಡ್ದಿದ್ದೀರಾ? ಏಕಾದಶಿ ಅಂತ ಇವತ್ತು ಇಡೀ ದಿನ ಬೇರೇನೂ ತಿನ್ನುದಿಲ್ಲ ನೀವು..." "ಸೇರುದಿಲ್ಲ ಈಗ" ಅಂದರು. ನಾನೇ ಒತ್ತಾಯಿಸಿ ಕಾಫಿ ಮಾಡಿ ಕೊಟ್ಟೆ, ಕುಡಿದರು. ಬೆಳಗ್ಗಿನ ತಿಂಡಿಗೆ ತಯಾರು ಮಾಡ್ತೇನೆ ಅಂದರು. ಸರಿಯೆಂದು ನಾನು ಮತ್ತೆ ಹೊರಗೆ ಬಂದೆ, ಒಂದಿಷ್ಟು ಸಲಕರಣೆಗಳೊಂದಿಗೆ.

ಎಂಟ್ಹತ್ತು ಬಕೆಟ್ ನೀರು, ಅರ್ಧ ಬಾಟಲ್ ಡೆಟ್ಟಾಲ್, ಮತ್ತೊಂದಿಷ್ಟು ಹವಾ-ಸುಗಂಧಕಾರಕ (ಅಮೆರಿಕಾದಿಂದ ಒಯ್ದಿದ್ದ ಏರ್-ಫ್ರೆಶ್‍ನರ್)... ಎಲ್ಲವನ್ನೂ ಬಳಸಿ ಅಲ್ಲಿದ್ದ `ಪ್ರಾಣಿ-ಮುಖ-ವಿಸರ್ಜಿತ'ವನ್ನು ತೊಳೆಯುವಷ್ಟರಲ್ಲಿ ನನಗೂ ಅದೇ ವಾಸನೆ ಹತ್ತಿಕೊಂಡಂತಿತ್ತು. ಎಲ್ಲಿಯೋ ಮೀನಿನ ಊಟ ತಿಂದ ಬೀಡಾಡಿ ನಾಯಿಗೆ (ಅಥವಾ ಬೆಕ್ಕಿಗೂ ಇರಬಹುದು) ನಮ್ಮ ಅಮೃತಶಿಲೆಯ ಮೆಟ್ಟಲ ಮೇಲೆ ಯಾಕೆ ಕಣ್ಣು ಬಿತ್ತೋ ತಿಳಿಯಲಿಲ್ಲ. ಎಪ್ರಿಲ್ ಒಂದರ ಮಹಿಮೆ, ಅಂದುಕೊಂಡು ಸ್ನಾನಕ್ಕೆ ಹೋದೆ. ಅಲ್ಲಿಯೂ ನೀರಿಗೆ ಮೀನಿನ ವಾಸನೆಯಿದೆಯೇನೋ ಅನಿಸುತ್ತಿತ್ತು. ನಾನು ಹೊರಗೆ ಬರುವಷ್ಟರಲ್ಲಿ ಇನ್ನೊಂದು ಬಚ್ಚಲುಮನೆಯಿಂದ ಮಗ ಸ್ನಾನ ಮುಗಿಸಿ ಬಂದ. "ಅಮ್ಮ, ನೀರು ಒಂಥರಾ ಉಂಟು. ಏನೋ ವಾಸನೆ...." ಮುಖ ಕಿವುಚುತ್ತಾ ದೇವರ ಮನೆಗೆ ನಡೆದ. ಅದಾಗಲೇ ಎದ್ದು ಮುಖ ತೊಳೆದ ನಾದಿನಿಯ ಮಕ್ಕಳು ಮತ್ತು ನನ್ನ ಮಗಳ ಕಡೆ ನೋಡಿದೆ. ಹೆಣ್ಣು ಮಕ್ಕಳು ಕಣ್ಣು ತಪ್ಪಿಸಿದರು; ಗೋಡೆ, ಟೀವಿ ನೋಡಿದರು. ಅಷ್ಟಕ್ಕೇ ಬಿಟ್ಟೆ.

ಸುಮಾರು ಒಂಭತ್ತು ಘಂಟೆಯ ಹೊತ್ತಿಗೆ ಹೆಣ್ಣು ಮಕ್ಕಳೂ ಸ್ನಾನ ಮುಗಿಸಿದರು. ಮಗಳು ನನ್ನನ್ನು ಕೋಣೆಗೆ ಕರೆದೊಯ್ದು ಗುಟ್ಟಿನಲ್ಲಿ "ಅಮ್ಮ, ನೀರು ವಾಸನೆ ಬರ್ತದೆ, ಮೀನಿನ ವಾಸನೆ.... ವಾಂತಿ ಬರುವ ಹಾಗಾಯ್ತು ಸ್ನಾನ ಮಾಡುವಾಗ...." ಅಂದಳು. ದೊಡ್ಡ ಹೆಣ್ಣುಮಕ್ಕಳಿಬ್ಬರೂ ಮೆತ್ತಗೆ ಇದನ್ನು ಒಪ್ಪಿಕೊಂಡರು. ನೀರಿಗೆ ಏನೋ ಆಗಿದೆ, ಖಚಿತವಾಯ್ತು. ನಳ್ಳಿಯ ತುದಿಗಿದ್ದ ತಿರುಪು ಬಿಚ್ಚಿ ಅದರ ಜಾಲರಿ ಪರೀಕ್ಷಿಸಿದೆ. ಅಡುಗೆ ಮನೆಯ ನಳ್ಳಿ ಸ್ವಚ್ಛವಾಗಿತ್ತು. ಮುಖ್ಯ ಬಚ್ಚಲುಮನೆಯ ನಳ್ಳಿ ಮತ್ತು ಕೈ-ತೊಟ್ಟಿಯ ನಳ್ಳಿ, ಎರಡರಲ್ಲೂ ಒಂದಿಷ್ಟು ಬಿಳಿ-ಬಿಳಿ ಕಸ ಸಿಕ್ಕಿತು. ಜೀವಶಾಸ್ತ್ರ ಪದವೀಧರೆಯ ಕಣ್ಣಿಗೆ ಮೀನಿನ ಮೂಳೆಯ ಚೂರುಗಳು ಕಂಡವು. ಮಕ್ಕಳ ಕೋಣೆಯ ಬಚ್ಚಲುಮನೆಯ ನಳ್ಳಿಯಲ್ಲೂ ಕೆಲವು ಚೂರುಗಳು ಸಿಕ್ಕಿದವು. ನೀರಿನಲ್ಲಿ ಮೀನಿನ ಮೂಳೆಯಿದೆ... ಖಾತ್ರಿಯಾಯ್ತು. ಎಲ್ಲಿಂದ? ಗೊತ್ತಾಗಲಿಲ್ಲ. ತಾರಸಿ (ಟೆರೇಸ್) ಹತ್ತಿ ನೀರಿನ ಸಿಂಟೆಕ್ಸ್ ಟ್ಯಾಂಕ್ ಇಟ್ಟಿದ್ದ ಹತ್ತಡಿ ಎತ್ತರದ ಅಟ್ಟಳಿಗೆ ಹತ್ತಿ ನಾಲ್ಕಡಿ ಎತ್ತರದ ಟ್ಯಾಂಕಿನ ಮುಚ್ಚಳ ತೆರೆದು ಹಾಗೂ ಹೀಗೂ ಕೈ-ಕಾಲು ನಡುಗಿಸಿಕೊಳ್ಳುತ್ತಾ ಒಳಗೆ ಬಗ್ಗಿ ನೋಡಿದೆ, ಸ್ವಚ್ಛವಾಗಿತ್ತು. ಅಂದರೆ, ಇಲ್ಲಿ ಏನೂ ಇಲ್ಲ. ಹಾಗಾದ್ರೆ, ಮತ್ತೆಲ್ಲಿಂದ ಮೀನುಮೂಳೆ ಬಂತು? ಸೋಲಾರ್-ವಾಟರ್-ಹೀಟರ್ ಕಡೆ ಗಮನ ಹೋಯ್ತು. ಸಾಧ್ಯವಿಲ್ಲ ಅಂತಲೂ ಅಂದುಕೊಂಡೆ. ಸೋಲಾರ್ ಹೀಟರಿನ ಟ್ಯಾಂಕ್ ಎರಡೆರಡು ಪದರ ಇನ್ಸುಲೇಶನ್ ಪಡೆದಿದೆ. ಅದಕ್ಕೆ ನೀರು ಒಳಹೋಗುವ ಮತ್ತು ಅಲ್ಲಿಂದ ಹೊರಬರುವ ಕೊಳವೆಗಳು ಎಲ್ಲೂ ತೆರೆದುಕೊಂಡಿಲ್ಲ. ಹಾಗಾದ್ರೆ ಇದೇನು ವಿಚಿತ್ರ? ಗೋಜಲು ಹರಿಯಲಿಲ್ಲ. ಮತ್ತೆ ಮನೆಯೊಳಗೆ ಹೋಗಿ ಎಲ್ಲ ನಳ್ಳಿಗಳಲ್ಲೂ ತಣ್ಣೀರು ಮಾತ್ರ ಹರಿಸಿದೆ. ಒಂದು ಹತ್ತು ನಿಮಿಷಗಳ ಹರಿವಿನ ನಂತರ ನಳ್ಳಿಗಳ ಜಾಲರಿ ನೋಡಿದಾಗ, ಎಲ್ಲವೂ ಕ್ಲೀನ್. ಮತ್ತೊಮ್ಮೆ ಎಲ್ಲದರಲ್ಲೂ ಬಿಸಿನೀರು ಮಾತ್ರ ಹರಿಯಬಿಟ್ಟೆ. ಜಾಲರಿಗಳಲ್ಲಿ ಕಳ್ಳ ಸಿಕ್ಕಿಬಿದ್ದ. ಅಂದರೆ ಬಿಸಿನೀರಿನಲ್ಲಿ ಮೀನಿನ ಕಸ. ಹೇಗೆ? ಗೊತ್ತಾಗಲಿಲ್ಲ. ಆದರೆ, ಇಷ್ಟರಲ್ಲಿ ಮನೆಯೆಲ್ಲ ವಾಸನಾಭರಿತವಾಗಿದ್ದು ಗೊತ್ತಾಗದಿರಲಿಲ್ಲ. ಯಾರೂ ಈಗ ಮನೆಗೆ ಬಾರದಿರಲಪ್ಪ, ದೇವರೇ ಅಂತ ಬೇಡಿಕೊಂಡೆ.

ನಮ್ಮ ಪ್ಲಂಬರ್ ಶಂಕರನಿಗೆ ಫೋನ್ ಮಾಡಿದೆ, ಅವನಿರಲಿಲ್ಲ. ಸರಿ; ನನ್ನ ಪತ್ತೇದಾರಿಕೆಯನ್ನೇ ಮುಂದುವರಿಸಿದೆ, ತಾರಸಿಯಲ್ಲಿ. ಸೋಲಾರ್ ಹೀಟರಿಗೆ ಎಷ್ಟನೆಯದೋ ಪ್ರದಕ್ಷಿಣೆ ಬರುತ್ತಿರುವಾಗ ಮತ್ಸ್ಯದೇವ ದರ್ಶನ ಕೊಟ್ಟ. ಹೀಟರಿನಿಂದ ಬಿಸಿನೀರು ಕೆಳಗೆ ಮನೆಗೆ ಬರುವ ಕೊಳವೆಯ ಇನ್ನೊಂದು ತುದಿಯನ್ನು `ಏರ್-ವೆಂಟ್' ಎಂದು ಹದಿನೈದಡಿ ಎತ್ತರಕ್ಕೆ ಏರಿಸಿ, ಟಿ-ಕೊಳವೆ ಜೋಡಿಸಿ, ಗಾಳಿಯಾಡಲು ಬಿಟ್ಟಿದ್ದರು. ಆ `ಟಿ'ಯ ಒಂದು ತುದಿಯಲ್ಲಿ ಏನೋ ಇಣುಕುತ್ತಿರುವುದು ಕಂಡಿತು. ಅಷ್ಟರಲ್ಲಿ ಸುಮಾರು ಹತ್ತೂವರೆ ಗಂಟೆ. ಬಿಸಿಲು ಕಣ್ಣಿಗೆ ರಾಚುತ್ತಿತ್ತು. ಆದರೂ ಕಂಡದ್ದನ್ನು ಪರಾಂಬರಿಸದೆ ಬಿಡಬಾರದು. ಕೊಳವೆಯನ್ನು ಅಲುಗಾಡಿಸಿಯಾಯ್ತು, ಪ್ರಯೋಜನವಾಗಲಿಲ್ಲ. ಇನ್ನೊಂದು ಪ್ಲಾಸ್ಟಿಕ್ ಕೊಳವೆ ತಂದು ಅದರಿಂದ ಕುಟ್ಟಿ ಬೀಳಿಸುವ ಪ್ರಯತ್ನವೂ ಆಯ್ತು, ಉಪಯೋಗವಾಗಲಿಲ್ಲ. ಬಿಸಿಲಿಗೆ ಕೆಂಪಾದ, ವಿಫಲ ಯತ್ನಕ್ಕೆ ಕಪ್ಪಾದ ದುಮು-ದುಮು ಮುಖದಿಂದ ಕೆಳಗಿಳಿದು ಬಂದೆ. ತಣ್ಣೀರಲ್ಲಿ ಮುಖ ತೊಳೆದು, ಕೋಣೆಗೆ ಹೋಗಿ ನೈಟಿ ತೆಗೆದಿರಿಸಿ, ಚೂಡಿದಾರ್ ಹಾಕಿಕೊಂಡೆ. ಶಾಲನ್ನು ಸೊಂಟಕ್ಕೆ ಸುತ್ತಿ ಬಿಗಿದೆ. ಹತ್ತಡಿ ಎತ್ತರದ ಅಲ್ಯೂಮಿನಿಯಮ್ ಏಣಿಯನ್ನು ಹೊತ್ತು ಮೇಲೆ ತಂದೆ. ಇಷ್ಟಾಗುವಾಗ ಮಕ್ಕಳೆಲ್ಲ ನನ್ನನ್ನು ಬೆರಗಾಗಿ ನೋಡುತ್ತಿದ್ದರೆ, ಶಾಂತಕ್ಕ ಸರ್ಕಸ್ ಪ್ರಾಣಿಯನ್ನು ನೋಡುವಂತೆ ನೋಡಿದರು. "ಇದೆಂಥಾ ಹೆಣ್ಣಪ್ಪಾ?" ಅನ್ನುವ ಭಾವ ಅವರ ಕಣ್ಣಲ್ಲಿತ್ತು. ನನ್ನ ಹಿಂದೆ ತಾರಸಿಗೆ ಬರುತ್ತಿದ್ದ ಅವರನ್ನು ಬೇಡವೆಂದು ತಿರುಗಿ ಕಳುಹಿದೆ.

ತಾರಸಿಯಲ್ಲಿ, ಏಣಿಯನ್ನು ಬೇರೆಲ್ಲೂ ಆಧರಿಸಿ ನಿಲ್ಲಿಸುವಂತಿರಲಿಲ್ಲ, ಸೋಲಾರ್ ಹೀಟರಿಗೇ ಆನಿಸಿಟ್ಟೆ. ಎರಡು ಮೆಟ್ಟಿಲು ಹತ್ತುವಷ್ಟರಲ್ಲಿ ಸೋಲಾರ್ ಟ್ಯಾಂಕ್ ಒಂದಿಂಚು ಅತ್ತ ಜರುಗಿತು. ಇನ್ನು ಅದನ್ನು ನಂಬುವಂತಿರಲಿಲ್ಲ. ಮತ್ತೆ ಕೆಳಗೆ ಹೋಗಿ ನಾಲ್ಕು ಮಕ್ಕಳನ್ನೂ ಬರಹೇಳಿದೆ. ಅಂಜುತ್ತಾ ಬಂತು ಮಕ್ಕಳ `ಮರಿ'ಸೈನ್ಯ. ಏಣಿಯನ್ನು ನಾನು ಆಧರಿಸಿ ಹಿಡಿದು, ಮಗನನ್ನು ಏಣಿ ಹತ್ತಿ ಅದನ್ನು ಪೇಪರಿನಲ್ಲಿ ಹಿಡಿದು ತೆಗೆಯಲು ಹೇಳಿದೆ. ನಡುಗುತ್ತಿರುವ ಏಣಿಯನ್ನು ಇನ್ನೂ ನಡುಗುತ್ತಾ ಹತ್ತಿ, ಮೂರನೇ ಮೆಟ್ಟಿಲಿಗೇ ಸಾಕಾಗಿ ಕೆಳಗಿಳಿದ. ಎಷ್ಟಾದರೂ ಅತಿಥಿಗಳಾಗಿ ಬಂದ ಮಕ್ಕಳೆಂದು ಉಳಿದಿಬ್ಬರಿಗೂ ಇಂಥಾ ಕೆಲಸ ಹೇಳಲು ನನಗೇ ಸಂಕೋಚ. ಆದರೂ ಅವರಲ್ಲಿ ಕಿರಿಯಳು ಹತ್ತುತ್ತೇನೆಂದಳು. ಅಷ್ಟಕ್ಕೆ ನನ್ನ ಮಗಳಿಗೆ ಉತ್ಸಾಹ ಉಕ್ಕಿತು. ತಾನೇ ಹತ್ತಿದಳು. ಏಳನೇ ಮೆಟ್ಟಿಲು ಹತ್ತಿದಾಗ ತನಗೆ ಸಿಗದೆಂದು ಅರಿವಾಗಿ ಕೆಳಗಿಳಿದಳು. ಅಷ್ಟರಲ್ಲಿ ಫೋನ್ ಕರೆ ಬಂತೆಂದು ಶಾಂತಕ್ಕ ಕರೆದರು. ಮಕ್ಕಳನ್ನು ಒತ್ತಾಯದಿಂದ ಮನೆಯೊಳಗೆ ಕರೆದುಕೊಂಡು ಬಂದದ್ದಾಯ್ತು. ಗಂಟೆ ಹನ್ನೊಂದೂಕಾಲು.

ಫೋನಿಗೆ ಉತ್ತರಿಸಿ, ಒಂದೊಂದು ಟೀ ಕುಡಿದೆವು. ಶಾಂತಕ್ಕನ ಹೊರತಾಗಿ ಎಲ್ಲರೂ ಮತ್ತೊಮ್ಮೆ ತಾರಸಿಗೆ ಹೋದೆವು. ಇಬ್ಬಿಬ್ಬರು ಮಕ್ಕಳು ಒಂದೊಂದು ಕಡೆ ನಿಂತು ಏಣಿ ಹಿಡಿಯುವಂತೆ ಅಪ್ಪಣೆಯಾಯ್ತು. ಆಗಷ್ಟೇ ಸಿಕ್ಕಿದ ಉದ್ದದ ಸರಿಗೆಯೊಂದನ್ನು ಹಿಡಿದು ನಾಲ್ಕು ಮೆಟ್ಟಿಲು ಹತ್ತಿದೆ. ಮಕ್ಕಳ ತಲೆಯ ಮಟ್ಟದಲ್ಲಿ ನನ್ನ ಕಾಲ್ಗಳು. ಮಕ್ಕಳು ಕೋರಸ್‍ನಲ್ಲಿ `ಹೋ....' ಅಂದರು. ಗಾಬರಿಯಾಯ್ತು. "ಇಳೀಬೇಕಾ?" ಅಂದೆ. "ಕಾಲು ವಾಸನೆ ಬರ್ತದಾ?" ಪ್ರಶ್ನೆ ಬಾಯಿಂದ ಹೊರಗೆ ಬರಲಿಲ್ಲ. "ಇಲ್ಲ, ಪರವಾಗಿಲ್ಲ; ಆಚೆ-ಈಚೆ ಅಲ್ಲಾಡಬೇಡಿ. ಏಣಿ ಗಟ್ಟಿಯಾಗಿ ಹಿಡಿದಿದ್ದೇವೆ.... ಆದ್ರೆ ಇನ್ನು ಹತ್ತಬೇಡಿ...." ಅಂದರು, ಸರಿ.



ಅಲ್ಲಿಂದಲೇ ಕೈ ಎತ್ತರಿಸಿ ಸರಿಗೆಯನ್ನು ಚಾಚಿದಾಗ ಒಂದಿಷ್ಟು ತಗಲಿದ ಹಾಗಾಯ್ತು. "ಇನ್ನೊಂದೇ ಮೆಟ್ಟಲು ಹತ್ತಿದ್ರೆ, ಆಚೆಯಿಂದ ಕುಟ್ಟಿ ಬಿಡಬಹುದು, ಈಚೆ ಬದಿಗೆ ಅದು ಬಿದ್ದರೂ ಬೀಳಬಹುದು, ಹತ್ತಲಾ....?" ಕೇಳಿದೆ. "ಸ್ವಲ್ಪ ಇಳೀರಿ...." ಅಂದಿತು ಕೋರಸ್. ಇಳಿದೆ. ಹತ್ತು ನಿಮಿಷ ಸುಧಾರಿಸಿಕೊಂಡಿತು ಸೈನ್ಯ. "ಜೂಸ್ ಬೇಕು...." "ನೀರು ಬೇಕು...." "ಬಾತ್‍ರೂಮಿಗೆ ಹೋಗಬೇಕು...." ಕೋರಿಕೆಗಳು ಬಂದವು. ಸರಿ, ಎಲ್ಲರೂ ಮತ್ತೆ ಕೆಳಗೆ ಬಂದೆವು.

ಇನ್ನೊಮ್ಮೆ ಪ್ಲಂಬರ್ ಶಂಕರನಿಗೆ ಫ಼ೋನ್ ಮಾಡಿದೆ. ಅವನಿರಲಿಲ್ಲ, ಆದರೆ ಅವನ ಸೆಲ್-ಫೋನಿನ ಸಂಖ್ಯೆ ಸಿಕ್ಕಿತು. ಕರೆ ಮಾಡಿದೆ. ಎಲ್ಲೋ ಒಂದು ಕಡೆ, ಇಪ್ಪತ್ತು ಮೈಲಿಯಾಚೆ ಕೆಲಸದಲ್ಲಿದ್ದ. ಸಂಜೆ ಸುಮಾರು ಆರರ ಹೊತ್ತಿಗೆ ಬರುತ್ತೇನೆಂದ. ಸರಿಯೆಂದೆ, ಬೇರೇನೂ ದಾರಿಯಿಲ್ಲದೆ. ಮತ್ತೆ ನಮ್ಮ ಮರಿಸೈನ್ಯ ತಾರಸಿಗೆ ದಂಡಯಾತ್ರೆ ಹೊರಟಿತು. ಊಟಕ್ಕೆ ಮೊದಲು ಈ ಕೆಲಸ ಮುಗಿಸಬೇಕು ಅಂತ ಸೈನ್ಯಕ್ಕೆ ಆಜ್ಞೆ ಮಾಡಿದೆ. ಮುಖ-ಮುಖ ನೋಡಿಕೊಂಡವು ಮರಿಗಳು. ಇಬ್ಬಿಬ್ಬರು ಒಂದೊಂದು ಬದಿಗೆ ನಿಂತು ಏಣಿಯನ್ನು ಹಿಡಿದರು, ಐದನೇ ಮೆಟ್ಟಲಿಗೆ ನಾನೇರಿದೆ. ಸರಿಗೆಯ ತುದಿಯನ್ನು ಅಂಕೆ-ಏಳರ ಹಾಗೆ ಬಗ್ಗಿಸಿದ್ದೆ. ಹದವಾಗಿ `ಟಿ' ಸಂಧಿಯ ಆಚೆ ಕಡೆಯಿಂದ ಕುಟ್ಟಿದೆ, ತುಣುಕು ಈ ಕಡೆಗೇ ಬೀಳಬಹುದೆಂದು. ಸಫಲವಾಗಲಿಲ್ಲ; ಏನೂ ಆಗಲಿಲ್ಲ. ಇಲ್ಲಿ ಕಾಣುವ ತುಣುಕಿಗೆ ಸರಿಗೆಯ ತುದಿ ತಗಲುತ್ತಿದೆಯೋ ಇಲ್ಲವೋ ತಿಳಿಯಲಿಲ್ಲ. ಇಲ್ಲಿಂದಲೇ ದೂಡಿಬಿಡೋಣವೆಂದು ಇನ್ನೇನು ಕೊಳವೆಯ ತುದಿಯಲ್ಲಿ ಕಾಣುವ ತುಣುಕಿಗೆ ಕುಟ್ಟಬೇಕು.... ಒಂದು ಮರಿಗೆ ಸೀನು ಬಂತು... ಏಣಿ ಓಲಾಡಿತು. ಬೀಳುವ ಮೊದಲು ಹೇಗೋ ಕೆಳಗೆ ಹಾರಿದೆ. ಎಲ್ಲ ಸ್ಥಿರವಾದ ಮೇಲೆ ಮತ್ತೊಮ್ಮೆ ಹತ್ತಿದೆ. ಈ ಬಾರಿ, ಅಂದಾಜು ಮಾಡದೆ, ಸರಿಗೆಯ ತುದಿಯಿಂದ ಜೋರಾಗಿ ಕುಟ್ಟಿಬಿಟ್ಟೆ. ತುಣುಕು ಸರಿಯಾಗಿ ಒಳಗೆ ಸೇರಿಹೋಯಿತು. ಆ ಕಡೆಯಿಂದ ಹೊರಗೆ ಬರಲೇ ಇಲ್ಲ. ಕೆಲಸ ಇನ್ನಷ್ಟು ಕೆಟ್ಟಿತು.

ಎಲ್ಲರೂ ಪೆಚ್ಚುಮುಖ ಮಾಡಿಕೊಂಡು ಕೆಳಗೆ ಬಂದೆವು. ಎಲ್ಲ ನಳ್ಳಿಗಳಲ್ಲಿ ಮತ್ತೊಮ್ಮೆ ಬಿಸಿನೀರು ಹರಿಸಿದೆ. ಅಡುಗೆ ಮನೆಯಲ್ಲಿ ತಣ್ಣೀರು ಮಾತ್ರ ಬರುವ ಹಾಗೆ, ಬಿಸಿನೀರಿನ ನಳ್ಳಿಯನ್ನು ಹೊರಗಿನಿಂದಲೇ ತಿರುಪು ಮುಚ್ಚಿ ಇರಿಸಿದೆ. ಹಾಗೇ ಎಲ್ಲ ಕೈ-ತೊಟ್ಟಿಗಳಿಗೂ ಬಿಸಿನೀರು ನಿಲ್ಲಿಸಿದೆ. ಎರಡು ಬಚ್ಚಲುಮನೆಗಳಲ್ಲಿ ಮಾತ್ರ ಬಿಸಿನೀರು ಬರುತ್ತಿತ್ತು. ಸೋಲಾರ್ ತೊಟ್ಟಿಯ ನೀರನ್ನು ಪೂರ್ತಿ ಹೊರಗೆ ಹರಿಸುವ ಯೋಚನೆಗೆ ಬಲವಂತವಾಗಿ ಕಡಿವಾಣ ಹಾಕಬೇಕಾಯಿತು. ಬೇಸಗೆಯ ದಿನಗಳಲ್ಲಿ ಇನ್ನೂರು ಲೀಟರ್ ನೀರನ್ನು ಹಾಗೇ ಹರಿಸಿ ವ್ಯಯ ಮಾಡಲು ನನಗಾವ ಹಕ್ಕಿದೆ? ಮನಸ್ಸಿಗೆ ಕಡಿವಾಣ ಹಾಕಿ ಮೂಲೆಗೆ ನೂಕಲಾಯಿತು. ಮನೆ, ಮೈ ಮಾತ್ರವಲ್ಲ ಮನದೊಳಗೂ ಮತ್ಸ್ಯಗಂಧ ಆವೃತವಾಯಿತು. ಸಂಜೆ ಮಲ್ಪೆಗೆ ಹೋಗುವ ಸಾಧ್ಯತೆಗೂ ಕಲ್ಲು ಬಿದ್ದಿತ್ತು. ಊಟ ಮಾಡಿ ಮಕ್ಕಳು ತಮ್ಮಷ್ಟಕ್ಕೆ ಏನೇನೋ ಆಡಲು ತೊಡಗಿಕೊಂಡರು. ನನ್ನ ತಲೆಯಲ್ಲಿ ಕೊರೆತ- ಇದನ್ನು ಹೇಗೆ ಪರಿಹರಿಸುವುದು? ಸಂಜೆ ಶಂಕರ್ ಬಂದಾಗ ಸಮಸ್ಯೆ ಪರಿಹಾರವಾಗದಿದ್ದಲ್ಲಿ, ಮರುದಿನದಿಂದ ಮನೆಮಂದಿಯೆಲ್ಲರ ಸ್ನಾನಕ್ಕೆ ಬಚ್ಚಲೊಲೆಗೆ ಬೆಂಕಿ ಹಾಕುವ ತೀರ್ಮಾನಕ್ಕೆ ಬಂದೆ. ಹಂಡೆಗೆ ನೀರು ತುಂಬಿಸಿಟ್ಟೆ. ಹಾಗೂ ಹೀಗೂ ಸಂಜೆ ಐದಾಗುತ್ತಿದ್ದಂತೆ, ಶಂಕರನಿಗೆ ಮತ್ತೆ ಫೋನ್ ಮಾಡಿ ನೆನಪಿಸಿದೆ.

ಶಂಕರ್ ಅವನ ಸಹಚರ ಗೋಪು ಜೊತೆ ಆರೂಮುಕ್ಕಾಲಿಗೆ ಬಂದ. ಗೋಪು ಆರಡಿ ಎತ್ತರದ ತುಂಬಾ ಸಣಕಲ ವ್ಯಕ್ತಿ. ಅವನು ಬೆಳಗ್ಗೇನೇ ಬರಬಾರದಿತ್ತೇ ಅನ್ನಿಸಿ ಅವನ ಮೇಲೇ ಕೋಪ ಬಂತು. ಆದದ್ದನ್ನೆಲ್ಲ ವಿವರಿಸಿ, ನನ್ನ ಕೋಪವನ್ನೂ ತೋರಿಸಿಕೊಂಡೆ. "ಬೆಳಗ್ಗೆನೇ ನೀವಿಬ್ಬರು ಬಂದಿದ್ದರೆ ನಾವು ಕಸರತ್ತು ಮಾಡಿ ಆ ತುಣುಕನ್ನು ಕೊಳವೆಯೊಳಗೆ ಬೀಳಿಸುತ್ತಿರಲಿಲ್ಲ" ಅಂದೆ. "ನಾವು ಬರುತ್ತೇವೇಂತ ಹೇಳಿದ ಮೇಲೂ ನೀವೇ ಏನೋ ಮಾಡಬೇಕೂಂತ ನಿಮಗಿದ್ದರೆ ನಾವೇನು ಮಾಡ್ಲಿಕ್ಕೆ ಆಗ್ತದೆ? ನಮಗೆ ಬೇರೆ ಕೆಲಸ ಇಲ್ವ?" ಗೋಪು ದಬಾಯಿಸಿದ. ಶಂಕರ ಮೆತ್ತನೆಯ ಹುಡುಗ, ಸುಮ್ಮನೆ ನಕ್ಕ. ಇಬ್ಬರೂ ಮಸುಕು ಬೆಳಕಿನಲ್ಲಿ ತಾರಸಿಗೆ ಹೊರಟಾಗ, ಅವರಿಗೆ ಟೀ ಮಾಡಲು ಶಾಂತಕ್ಕನಿಗೆ ಹೇಳಿ, ನಾನೂ ಹೋದೆ. ಸೋಲಾರ್‍ ಹೀಟರಿನ `ಟಿ' ಸಂಧಿಯಲ್ಲಿ ತುಣುಕು ಇಣುಕುತ್ತಿದ್ದ ರೀತಿಯನ್ನೂ, ನಮ್ಮ ಸಾಹಸವನ್ನೂ ಮತ್ತೆ ವಿವರಿಸಿದೆ. ಏಣಿ ಪುನಃ ಮೇಲೆ ಬಂತು. ಶಂಕರ ಮತ್ತು ನಾನು ಹಿಡಿದೆವು. ಗೋಪು ಮೇಲೆ ಹತ್ತಿ ಕೊಳವೆಯೊಳಗೆ ಬೆರಳು ತೂರಿಸಿ ಒಂದು ಚೂರು ಮೀನನ್ನು ಹೊರಗೆಳೆದ. ಇನ್ನೊಂದು ಚೂರು ತುಂಡಾಗಿ ಕೊಳವೆಯೊಳಗೇ ಬಿತ್ತು ಅಂದ. ಬೆಳಗ್ಗೇನೇ ಇವನು ಬಂದಿದ್ದರೆ ಪೂರ್ತಿ ತೆಗೆಯಲು ಸಿಗುತ್ತಿತ್ತು- ಅಂದುಕೊಂಡೆ. ನನ್ನ ನಾನೇ ಶಪಿಸಿಕೊಂಡೆ (ಬೇರೆ ಯಾರೂ ಸಿಗಲಿಲ್ಲ).

ಮೀನಿನ ಚೂರು ಅಲ್ಲಿಗೆ ಹೋಗಿ ಸೇರಿದ್ದು ಹೇಗೆ ಅನ್ನುವ ಸಿದ್ಧಾಂತವನ್ನು ಚರ್ಚಿಸುತ್ತಾ ಮೂವರೂ ಕೆಳಗೆ ಬಂದೆವು. ಚಹಾದಲ್ಲಿ ನನ್ನ ಪಾಲೂ ಇತ್ತು. ಹೀರುತ್ತ, ಚರ್ಚೆ ಮುಂದುವರಿದಾಗ, ಶಂಕರ "ಮೇಡಮ್, ಅದು ಮೀನು ಅಂತ ನಿಮಗೆ ಗೊತ್ತಾದದ್ದು ಹೇಗೆ?" ಕೇಳಿದ. "ಮೂಗು ಸರಿಯಾಗಿದೆಯಪ್ಪಾ..." ಅಂದೆ. ಮತ್ತೊಮ್ಮೆ ಎಲ್ಲ ಬಿಸಿನೀರಿನ ನಳ್ಳಿಗಳ ಜಾಲರಿಗಳಲ್ಲಿ ಬಿಳಿ ಕಸಗಳಿದ್ದದ್ದನ್ನು ತಿಳಿಸಿದೆ. ಗೋಪು ಬಚ್ಚಲುಮನೆ ನಳ್ಳಿಯ ಜಾಲರಿ ತೆಗೆಯಲು ಹೋದ. ಶಂಕರನೆಂದ, "ಮೇಡಮ್, ನೀವು ಬ್ರಾಹ್ಮಣರು. ಮೀನು ತಿನ್ನುದಿಲ್ಲ. ಆದ್ರೆ, ಇವತ್ತು ಎಲ್ಲರೂ ಮೀನಿನ ಸಾರಿನಲ್ಲೇ ಸ್ನಾನ ಮಾಡಿದ್ರಲ್ಲ...." ಅಂತ ನಕ್ಕ. "ಅದು ಸಾರಲ್ಲ, ಅದರಲ್ಲಿ ಮಸಾಲೆ ಇರಲಿಲ್ಲ" ಅಂದೆ ನಾನು (`ಕೆಳಗೆ ಬಿದ್ದರೂ ಮೀಸೆಗೆ ಮಣ್ಣಾಗಲಿಲ್ಲ' ಅಂತ ಸಾಧಿಸುವ ಅಪ್ಪನ ಮಗಳು, ತಮ್ಮಂದಿರ ಅಕ್ಕ, ಗಂಡನ ಹೆಂಡತಿ, ಮಗನ ಅಮ್ಮ... ಈ ಎಲ್ಲವೂ ನಾನೇ). "ಕುದಿಯುವ ಮಸಾಲೆ ನೀರಿಗೆ ಮೀನು ಹಾಕಿದ್ರೆ ಮೀನಿನಸಾರು ತಯಾರು, ನನಗ್ಗೊತ್ತು. ಆದ್ರೆ, ಇವತ್ತು ಸೋಲಾರ್ ಟ್ಯಾಂಕಿಯ ಬಿಸಿನೀರಿಗೆ ಮಸಾಲೆ ಯಾರೂ ಹಾಕಿರಲಿಲ್ಲ. ಅಥವಾ.... ಎಪ್ರಿಲ್ ಫೂಲ್ ಮಾಡ್ಲಿಕ್ಕೆ ಅಂತ... ನೀವೇನಾದ್ರೂ.... ನಿನ್ನೆ ರಾತ್ರೆ ಆ ಕೆಲಸ ಮಾಡಿದ್ದೀರ...?" ಶಂಕರನನ್ನೇ ಛೇಡಿಸುತ್ತಾ ಕೇಳಿದೆ. ನನ್ನ ಧ್ವನಿ ತುಂಟವಾಗಿತ್ತು. ಅವನು ನನ್ನನ್ನು ಛೇಡಿಸಿದ್ದಕ್ಕೆ ಪ್ರತಿಯೇಟಿದು. "ಇಲ್ಲ, ಮೇಡಮ್. ಹಾಗೆಲ್ಲ ಮಾಡುದಿಲ್ಲ ನಾವು" ಅಂದ. ಅಷ್ಟರಲ್ಲಿ ಗೋಪು, ಮತ್ತೊಂದಿಷ್ಟು ಬಿಳಿ ಕಸ ಅಂಗೈಯಲ್ಲಿ ಹಾಕಿಕೊಂಡು ಬಂದ. ಮೀನಿನ ಮೂಳೆಗಳೇ ಎಂದು ಪರಿಣತರಿಬ್ಬರೂ ಪ್ರಮಾಣೀಕರಿಸಿದರು. ಇನ್ನೂ ಒಂದೆರಡು ದಿನಗಳಲ್ಲಿ ಎಲ್ಲ ಚೂರುಗಳೂ ಹೊರಬರಬಹುದು. ನಳ್ಳಿಯೇನಾದರೂ ಕಟ್ಟಿಕೊಂಡರೆ, ನೀರೇ ಬರದಿದ್ದರೆ, ಮತ್ತೆ ಕರೆಯಲು ಹೇಳಿ ಇಬ್ಬರೂ ಹೊರಟರು. ಗೇಟು ದಾಟುತ್ತಾ ಶಂಕರ ಗೋಪುನೊಡನೆ, "ಇಂಥಾ ಹೆಂಗಸನ್ನು ಎಲ್ಲೂ ನಾನು ನೋಡಿಲ್ಲ... ಎಲ್ಲರ ಹಾಗಲ್ಲ ಇವರು, ಅಸಾಧ್ಯ ಜನ" ಅಂದದ್ದು ಕೇಳಿ ಮೆಟ್ಟಲಿಂದ ನಾನು "ಥಾಂಕ್ಸ್" ಅಂತ ಕೂಗಿಕೊಂಡೆ. "ಓಯ್, ನೀವು ಒಳಗೆ ಹೋಗ್ಲಿಲ್ವಾ?" ಅಂದ. ಗೋಪು ಕಡೆ ತಿರುಗಿ, "ಹೀಗೇ..." ಅನ್ನುತ್ತಾ ಏನೋ ಹೇಳಿಕೊಂಡು ಅವನನ್ನೂ ಕೂರಿಸಿಕೊಂಡ ಸ್ಕೂಟರ್ ಚಲಾಯಿಸಿಕೊಂಡು ಹೋಗಿಬಿಟ್ಟ.

ಮತ್ತೂ ನಾಲ್ಕು ದಿನಗಳವರೆಗೆ ಬಿಸಿನೀರಿನ ನಳ್ಳಿಯಿಂದ ದಿನಕ್ಕೆರಡು ಬಾರಿ ಹತ್ಹತ್ತು ನಿಮಿಷ ಬಿಸಿನೀರು ಹರಿಸಿ ಜಾಲರಿ ಬಿಡಿಸಿ ಮೀನುಮೂಳೆಗಳನ್ನು ತೆಗೆಯುವ ಜಾಡಮಾಲಿ ಕೆಲಸ ಮಾಡಿದೆ. ಐದನೆಯ ದಿನ ನೀರಿನ ವಾಸನೆಯೂ ಬಹಳಷ್ಟು ಕಡಿಮೆಯಾಗಿತ್ತು. ಮಕ್ಕಳನ್ನೆಲ್ಲ ಊರಲ್ಲಿ, ಅವರೆಲ್ಲರ ಅಜ್ಜಿ ಮನೆಯಲ್ಲಿ ಬಿಟ್ಟು ಬಂದಿದ್ದೆ. ಶಾಂತಕ್ಕನ ಮುಖ ಮತ್ತೆ ಶಾಂತವಾಗತೊಡಗಿತ್ತು (ಈ ಐದು ದಿನಗಳಲ್ಲಿ ಏನೋ ಅಸಮಾಧಾನ ಕಾಣಿಸುತ್ತಿತ್ತು, ಅದು ಸಹಜ ಅಂದುಕೊಳ್ಳುತ್ತೇನೆ). ಕೊನೆಗೂ ಒಂದು ವಾರದ ಮೇಲೆ, ಎಲ್ಲ ಬಿಸಿನೀರಿನ ನಳ್ಳಿಗಳೂ ಮತ್ತೆ ತೆರೆದುಕೊಂಡವು. ಅಡುಗೆಮನೆಗೆ ಮೀನಿನ ನೀರು ಪ್ರವೇಶಿಸಿರಲಿಲ್ಲ ಅಂತ ಶಾಂತಕ್ಕ ನಂಬಿದ್ದರು. ನಾನಂತೂ ಮತ್ತೂ ಒಂದೆರಡು ದಿನ ಹೊರಗೆ ಹೋಗುವ ಮೊದಲು ಮತ್ತೆ ಮತ್ತೆ ಮೈ ವಾಸನೆ ಇದೆಯೇ ಎಂದು ನೋಡಿಕೊಳ್ಳುತ್ತಿದ್ದೆ. ಧಾರಾಳವಾಗಿ, ಮೈತುಂಬ ಶ್ರೀಗಂಧದ ಪೌಡರನ್ನು ಸುರಿದುಕೊಳ್ಳುತ್ತಿದ್ದೆ. ಹಲ್ಲುಜ್ಜಲು, ಮುಖ ತೊಳೆಯಲು ಬಿಸಿನೀರು ಬಳಸುತ್ತಿರಲಿಲ್ಲ (ಕೊರೆಯುವ ಛಳಿ ಹೇಗೂ ಇರಲಿಲ್ಲ).

ಇದೆಲ್ಲ ಘಟಿಸಿ ನಾನಿದನ್ನು ಬರೆಯುವ ಹೊತ್ತಿಗೆ, ಮೂವತ್ತಮೂರು ತಿಂಗಳುಗಳೇ ಕಳೆದರೂ ಒಮ್ಮೊಮ್ಮೆ ಆ ಮೀನಿನ ವಾಸನೆ ಮೂಗಿಗೆ ಅಡರುತ್ತದೆ. ನೆನಪು ಹಿಂದೆ ಹೋಗುತ್ತದೆ. ಏಣಿಯಲ್ಲಿ ನಿಂತಾಗಿನ ಕಾಲ್ನಡುಕ ಎದೆ ನಡುಗಿಸುತ್ತದೆ. ಪ್ರಶ್ನೆ ಹೆಡೆಯಾಡುತ್ತದೆ: "ಕೊಳವೆಯ ಆ ತುದಿಯೊಳಗೆ ಸತ್ತ ಮೀನು ಸೇರಿಕೊಂಡದ್ದು ಹೇಗೆ?" ಈ ಯಕ್ಷ ಪ್ರಶ್ನೆಗೆ (ಬೇತಾಳ ಪ್ರಶ್ನೆಯೆಂದರೂ ಸರಿ, ಸತ್ತ ಮೀನಿನ ಬಗ್ಗೆಯಲ್ಲವೆ...!) ಉತ್ತರ ತಿಳಿದವರು ಹೇಳದೇ ಇದ್ದರೆ ನೀವು ವಾಸನಾವತಾರದ ಪ್ರಕೋಪಕ್ಕೆ ಗುರಿಯಾಗುವಿರೆಂದು ತಿಳಿಯಪಡಿಸುತ್ತೇನೆ. ಇಲ್ಲಿಗೆ "ಅಭಿನವ ಮತ್ಸ್ಯಗಂಧಾವೃತ ಕಥನ" ಪರಿಸಮಾಪ್ತವಾದುದು.
(೧೦-ಜನವರಿ-೨೦೦೭)
(ಕೆ.ಕೆ.ಎನ್.ಸಿ.ಯ ವಾರ್ಷಿಕ ಸಂಚಿಕೆ ಸ್ವರ್ಣಸೇತು ೨೦೦೭ರಲ್ಲಿ ಪ್ರಕಟಿತ)

Tuesday 30 March, 2010

ಅದೃಶ್ಯ

ಕಾರ್ಗಡಲ ಅಲೆ ಹೆಪ್ಪುಗಟ್ಟಿ
ಕರಗಲಾರದೆ ಕೊರಗಿದಾಗ
ತುಳುಕಲಾರದ ಕೊಳದಲ್ಲಿ
ಸಿಡಿಲು-ಗುಡುಗು

ಕಾಣದ ಮಿಂಚಿನ ಸೆಳೆಗೊಡ್ಡಿ
ಅಂಚು ಕೊಂಚ ಹಸಿಯಾದಾಗ
ಕಟ್ಟೆಕೊನೆಯ ಏರಿಯಲ್ಲಿ
ಒಸರು-ಕೆಸರು

ಸಿಡಿಲ ಮರಿ ಹುಟ್ಟಿ ಬಂತೆಂದು
ಕಲ್ಲಣಬೆ ಆರಿಸುವಾಗ
ಬುಟ್ಟಿಯೊಳು ಮಿಡಿಹೆಡೆಯಲ್ಲಿ
ಉಸಿರು-ಹೆಸರು

ಬೆಳ್ನೊರೆಯ ಸೋಗಿನಲಿ ತೆರೆದು
ಎದೆಯ ಹೆಬ್ಬಂಡೆ ಹರಿದಾಗ
ಕಿಬ್ಬದಿಯ ಜೋಳಿಗೆಯಲ್ಲಿ
ಹಸಿವು-ಅಳಲು
(೨೨-ಮಾರ್ಚ್-೨೦೦೯)
(ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು ಆಯೋಜಿಸಿದ್ದ "ಯುಗಾದಿ ಕವನ ಸ್ಪರ್ಧೆ"ಯಲ್ಲಿ ದ್ವಿತೀಯ ಬಹುಮಾನಕ್ಕೆ ಪಾತ್ರವಾದ ಕವನ. ಇದರ ಅರ್ಥ, ಸಂದೇಶ ಏನಿರಬಹುದೆಂದು ನಿರ್ಣಾಯಕರು ಸುಮಾರು ಮುಕ್ಕಾಲು ಗಂಟೆ ಕಾಲ ಚರ್ಚಿಸಿದರಂತೆ. ನಿಮಗೇನನ್ನಿಸುತ್ತದೆ? ತಿಳಿಸುವಿರಲ್ಲ.)

Wednesday 24 March, 2010

ಅವಳಳಲು

ರಾಮನವಮಿಯ ಹಿಂದೆ ನನ್ನ ರಾಮನ ಮುಂದೆ
ಸೆರಗೊಡ್ಡಿ ಬೇಡಿದ್ದೆ ಮಾಣು ಎಂದು
ಆಗದೆಂದನು ರಾಮ, ಸತ್ಯನಿಷ್ಠನು ಸೋಮ
ಪ್ರಜೆಗಳಾಣತಿಯೊಂದೆ ಧಾರ್ಯವೆಂದು

"ರಘುವಂಶ ಕುಲಜಾತ, ಜನಕನಿಗೆ ಜಾಮಾತ
ಆಗಿಹುದು ಧರ್ಮಪಥ ನನ್ನ ಪಾತ್ರ
ಎಳೆಯ ಬಾಲೆಯರಿರಲಿ ಮುದಿಯ ಮಾನಸರಿರಲಿ
ನನ್ನ ಛತ್ರದ ನೆರಳು ಏಕಮಾತ್ರ"

ಹೀಗೆಂದನೇ ರಾಮ, ನನ್ನ ಉಸಿರಿನ ಧಾಮ
ಅವನ ನೆರಳಲ್ಲಿ ನಾ ಸುಖಿಯೆಂದೆನೆ
ಮೂವರತ್ತೆಯರೊಡನೆ ಅರಮನೆಯ ಅಂಗಳದಿ
ಊರ್ಮಿಳೆಯ ನಗುವಿನಲಿ ನಗುವಾದೆನೆ

ಧರ್ಮರಾಜ್ಯದ ಕಾರ್ಯ ಜಗವೆಲ್ಲ ಮೊಳಗಿರಲು
ರಾಮನಂಕಿತ ನಿತ್ಯ ಬೆಳಗುತಿರಲು
ಬಂತದೋ ಬರಸಿಡಿಲು ಮುಂಗಾರ ಕರಿ ಮುಗಿಲು
ರಾಮನಂಘ್ರಿಯ ಅಶ್ರು ತೋಯಿಸುವೊಲು

ಎಳೆಯ ಬಾಲೆಯು ಅಲ್ಲ, ಮುದಿಯು ನಾ ಮೊದಲಲ್ಲ
ಕ್ಷುದ್ರ ಕಣ್ಣಿನ ಪಿಸುರು ಪೀತ ನೋಟ
ಬಳಸಿ ಮಾತೇ ಇಲ್ಲ, ಬಳಲದಿರು ಎನಲಿಲ್ಲ
ಕಳುಹಿದನೆ ವನಕೆನ್ನ, ಮೃಗಕೆ ಊಟ

ರಾಮನವಮಿಯ ನೆಪದಿ ಋಷಿಪುಂಗವನ ಮುಂದೆ
ಸೆರಗೊಡ್ಡಿ ಬೇಡಿದೆನು ಮಾಣಿರೆಂದು
ಇನ್ನು ಇಂತಹ ಗಾಥೆ ಬರೆಯಬೇಡಿರಿ ತಂದೆ
ತಾಳೆಗರಿ ಕಂಟಗಳ ತೊರೆಯಿರೆಂದು

(ಮಾಣ್, ಮಾಣು= ತಡೆ, ನಿಲ್ಲು, ನಿಲ್ಲಿಸು)
(ಕಂಟ= ತಾಳೆಗರಿಗಳ ಮೇಲೆ ಬರೆಯಲು ಬಳಸುವ ಉಕ್ಕಿನ ಲೇಖನಿ)
(`ರಾಮನವಮಿ'ಯನ್ನು ಶ್ರೀರಾಮ ಪಟ್ಟಾಭಿಷೇಕದ ದಿನವೆಂಬ ನೆಲೆಯಲ್ಲಿ ಪರಿಗಣಿಸಲಾಗಿದೆ, ಜನ್ಮದಿನೋತ್ಸವ ಎಂದಲ್ಲ)
(೦೫-ಎಪ್ರಿಲ್-೨೦೦೯)

Tuesday 16 March, 2010

ಲಭ್ಯ

ಹೇಳಬೇಕೆಂದುಕೊಂಡದ್ದು ಒಂದು
ಬಿಸಿಯುಸಿರಿನ ಒತ್ತಡಕ್ಕೆ ಪಕ್ಕಾಗಿ
ಮುತ್ತು ಮುತ್ತಾಗಿ ಚಿಮ್ಮಿ ಉದುರಿ
ತೋಟದೆಡೆಯಲ್ಲಿ ಬಿತ್ತಿದ್ದು ಮೊಳಕೆಯೊಡೆದು
ಅಕ್ಷರಕ್ಷರ ಪದಪದ ಸಾಲುಗಳೆಲ್ಲ
ಒಂದಕ್ಕೊಂದು ಬೆಸೆದು ಗೋಜಲು ಗೋಜಲು
ಬಿಸಿಲಿಗೆ ಹಚ್ಚನೆ ಹರಡಿ ಬೆಳೆದು
ಹಿತ್ತಿಲ ತುಂಬೆಲ್ಲ ಕಣ್ಣಿಗೆ ತಂಪು
ಕಾಲ್ತೊಡಕುವ ಕುಂಬಳ ಬಳ್ಳಿ
ದಟ್ಟ ಬಣ್ಣ ನಳನಳಿಸುವ ದೊರಗು
ಎಲೆಗಳ ನಡುವೆ ಹೂವಾಗಿದ್ದೂ ಕಾಣದೆ
ಕಿರುಕಾಯಾಗಿ ಎಳಸು ಮಾಗಿ
ಪಕ್ವವಾದಾಗ ಹಸುರಿನ ಮರೆಯಲ್ಲಿ
ಬೂದುಬಿಳುಪೋ ಚೆಂದಗೆಂಪೋ, ಅಂತೂ
ಬಳ್ಳಿಗೆ ನಿಸ್ವಾರ್ಥ ಸಫಲ ಧರ್ಮ
ಮಾಲಿಗೆ ಅಧಿಕಾರವಿಲ್ಲದ ಕರ್ಮ

(೨೪-ಜೂನ್-೨೦೦೯)

(09-08-09ರಂದು ಕನ್ನಡ ಪ್ರಭ ಸಾಪ್ತಾಹಿಕದಲ್ಲಿ ಪ್ರಕಟಿತ. ಸಂಪಾದಕರಿಗೆ ವಂದನೆಗಳೊಂದಿಗೆ ಧನ್ಯವಾದಗಳು. ಡಾ. ವಸಂತಕುಮಾರ್ ಪೆರ್ಲ ಅವರು ಸಂಪಾದಿಸುತ್ತಿರುವ "ಕಾವ್ಯ ೨೦೦೯"ರಲ್ಲಿಯೂ ಸೇರ್ಪಡೆಯಾಗುತ್ತಿದೆ; ಅವರಿಗೂ ಸಸ್ನೇಹ ನಮನಗಳು.)

Monday 8 March, 2010

ಸ್ವರಾಭಾರ

ಎಂಟು ಕಣ್ಣಿನ ಬಿದಿರುಗೋಲಿಗೆ
ಎಂಟು ದಿಕ್ಕಿನ ಉಸಿರ ಶಕ್ತಿ
ಒಂದೆ ಉಸಿರಿಗೆ ಭಿನ್ನ ಹೆಸರನು
ಒಂದೆ ಹೊರಳಲಿ ಕೊಡುವ ಶಕ್ತಿ

ಪೂರ್ಣ ತುಂಬಿದ ಮಣ್ಣ ಕುಡಿಕೆಗೆ
ಚಿಣ್ಣಕೋಲದು ಕುಣಿದು ಶಕ್ತಿ
ಅರ್ಧಮರ್ಧದ ವಿವಿಧ ಸೊಗಸಲಿ
ಪೂರ್ಣ ರೂಪದ ಅಲೆಯ ಶಕ್ತಿ

ನಾಕು ತಂತಿಯ ನಾಲ್ಕು ನೆಲೆಯಲಿ
ನಾಕ ತೋರುವ ಲೋಕ ಶಕ್ತಿ
ಹರಿದು ಹಾಯುತ ಮೀಟಿ ಆಯುತ
ಹರಿಸಿ ಸುರಿಸುವ ಮೋದ ಶಕ್ತಿ

ಏಳು ಸ್ವರಗಳು ಏಳು ನೆಲೆಗಳು
ಏಳು ಎಳೆಗಳ ಕೇಳು ಶಕ್ತಿ
ಮೂರು ಸ್ತರದಲಿ ಮೈಯ ಮರೆಯಲು
ಮೇಲು ಇಲ್ಲದ ಮೇಳ ಶಕ್ತಿ

(೧೭-ಎಪ್ರಿಲ್-೨೦೦೯)

Friday 26 February, 2010

ಹಿಮದ ಹೂವು (ಸ್ನೋ ಫ್ಲೇಕ್)

ಹಾಗೇ ತೆಳುವಾಗಿ ಹಗುರಾಗಿ ಸುಳಿದಾಡಿ ಇಳಿದದ್ದು
ನಿನ್ನ ಹೆಸರಿನ ಒಂದು ತುಣುಕಂತೆ, ಹೌದೆ?
ಸಣ್ಣನೆ ಗುನುಗಾಗಿ ಹಿತವಾಗಿ ಧಾರೆಯಲಿ ಬೆಳೆದದ್ದು
ನಿನ್ನ ಉಸಿರಿನ ಪಲುಕು ಮೆಲುಕಂತೆ, ಹೌದೆ?

ಅಲ್ಲಿಯೆ ಸುರಿದದ್ದು ಹರಿದದ್ದು ನೆರೆದದ್ದು ಮೊರೆದದ್ದು
ನಿನ್ನ ನೆನಪಿನ ರಸದ ಸುಮವಂತೆ, ಹೌದೆ?
ಮೆಲ್ಲನೆ ಉಸುರಿದ್ದು ಕೊಸರಿದ್ದು ಬೆಸೆದದ್ದು ಹೊಸೆದದ್ದು
ನಿನ್ನ ಇರವಿನ ಕ್ಷಣದ ಮರುಳಂತೆ, ಹೌದೆ?

ಅಂಚಿಗೆ ಬಂದಾಗ ಹನಿಯಾಗಿ ಮಣಿಯಾಗಿ ಹೊಳೆದದ್ದು
ನಿನ್ನ ಕಂಗಳ ಜೋಡು ಬೆಳಕಂತೆ, ಹೌದೆ?
ಬಾಗಿಲಲಿ ನಿಂದಾಗ ರಂಗಾಗಿ ಗುಂಗಾಗಿ ಸೆಳೆದದ್ದು
ನಿನ್ನ ನಗುವಿನ ಮಾಟ ಕುಲುಕಂತೆ, ಹೌದೆ?

ಬಾನಿಗೆ ಮೊಗವಿಟ್ಟು ಕಿವಿಯಿಟ್ಟು ಎದೆಯಿಟ್ಟು ಕರೆದದ್ದು
ನಿನ್ನ ಕಾಣುವ ಅನಿತು ಅಳಲಂತೆ, ಹೌದೆ?
ಕಿನ್ನರಿ ನಿನಗಾಗಿ ದನಿಯಾಗಿ ಮನವಾಗಿ ಒಲಿದದ್ದು
ನಿನ್ನ ಬೆರೆಯುವ ಸ್ನಿಗ್ಧ ಸುಖಕಂತೆ, ಹೌದೆ?

(೧೩-ಫೆಬ್ರವರಿ-೨೦೦೯)

Tuesday 16 February, 2010

ಪಯಣ

ನೆತ್ತಿಗೆ ಮುತ್ತಿತ್ತವರ ಅತ್ತ ಕಳಿಸಿ ಬಂದಾಗ
ಮನೆಯೆಲ್ಲ ಭಣಭಣ ಮನವೆಲ್ಲ ಒಣಒಣ
ಭಾವಗಳ ಒಸರು ಮತ್ತೆ ಪಸೆಯಾಗಿ ಹನಿದು
ಧಾರೆಯಾಗಲು ಬೇಕು ಕ್ಷಣ-ಕ್ಷಣ ದಿನ-ದಿನ

ಕಾಲವೇನು ಸಾಗುತ್ತದೆ ಯಾರ ಹಂಗಿಲ್ಲದೆ
ಮುಳ್ಳುಗಳ ಗುಂಗಿಲ್ಲದೆ ನಲಿವುಗಳ ರಂಗಿಲ್ಲದೆ
ನಮ್ಮ ಬಾಳು ನಮ್ಮದು ಒಲವ ಪಥದೊಳಗೆ
ನಗುನಗುತ ಕೈಹಿಡಿದು ಸಾರಥ್ಯ ಮಾಡುವಾಗ

ಜೊತೆಯೆಂದ ಮಾತ್ರಕ್ಕೆ ಭಿನ್ನವಿಲ್ಲದೆಯಿಲ್ಲ
ಬಣ್ಣಗಳ ಸಮರಸವೇ ಒಂದು ಸುಂದರ ಚಿತ್ರ
ಬದುಕು ಹೀಗೇ ಎಂದು ಯಾರು ಕಂಡವರಿಲ್ಲ
ನಮ್ಮ ಬಟ್ಟೆಯ ನಾವೆ ಕಂಡು ಕಟ್ಟಿಕೊಳಬೇಕು

ಹಿಂಚೆ-ಮುಂಚೆಗಳ ಸುಳಿ ಧೂಳಗೋಪುರವೆತ್ತಲು
ಧೃತಿಗೆಡದೆ ಸಾಗುವುದು ಛಲಬಲ್ಲವರ ಬಂಡಿ
ಸಾಕು-ಬೇಕುಗಳೊಳಗೆ ಸರಿಯುತಿರೆ ಕನಸುಗಳು
ನೆಮ್ಮದಿಯ ಸೆಲೆ ನಿಲುಕಿ ನಮ್ಮದೇ ಒಂದು ಬಿಂದು

ತೂಗುಲೋಲಾಕಿನ ಲಾಸ್ಯ ನಡೆಯಂತೆ ಜಗ
ಎದ್ದ ಅಲೆ ಇಳಿದೆದ್ದು ಸೂರ್ಯ ತಾರಗೆ ಚಂದ್ರ
ಅರಿಯದುದ ಅರಿತಂದು ನಮ್ಮ ಗುರಿ ನಿಚ್ಚಳವು
ಅರಿವಿನತ್ತಲೆ ಗಮನ ಇಡಲು ಸುಗಮವು ಪಯಣ
(೧೦-ಸೆಪ್ಟೆಂಬರ್-೨೦೦೯)

Monday 8 February, 2010

ವಿನಂತಿ

ನಿನ್ನ ನೆನೆಯದೆ ದಿನಗಳಾಗಿವೆ ಮರೆತೆನೆಂದು ಅರಿಯದಿರು
ಬೆಳಗು ಮಂಜಿನ ಬೈಗು ತಂಪಿನ ಸ್ನಿಗ್ಧತೆಯಲಿ ಕಾಣುವೆ

ನಿನ್ನ ಕರೆಯದೆ ದಿನಗಳಾಗಿವೆ ಮುನಿದೆನೆಂದು ಕೊರಗದಿರು
ಹಕ್ಕಿಗೊರಳಲಿ ಮಗುವ ನಗುವಲಿ ಹೆಸರ ಮಾಟವ ಕೇಳುವೆ

ನಿನ್ನ ಕಾಡದೆ ದಿನಗಳಾಗಿವೆ ವ್ಯಸ್ತನೆಂದು ಮರುಗದಿರು
ಬಿರುಸು ಬಿಸಿಲಲಿ ಬೀಳು ಮಳೆಯಲಿ ಕಾಡುವಾಟಕೆ ಕೊಸರುವೆ

ನಿನ್ನ ಸೇರದೆ ದಿನಗಳಾಗಿವೆ ತೊರೆದೆನೆಂದು ತೊಳಲದಿರು
ಉಸಿರು ಹೊರಳಲು ನಾಡಿ ಮಿಡಿಯಲು ಏಕತೆಯನನುಭವಿಸುವೆ

ನಿನ್ನ ಬೇಡದೆ ದಿನಗಳಾಗಿವೆ ಬೆಳೆದೆನೆಂದು ಬೆಚ್ಚದಿರು
ಇಡುತ ಹೆಜ್ಜೆಯ ಹಳ್ಳ ತಿಟ್ಟಲಿ ಹೆಗಲಿನಾಸರೆ ಪಡೆಯುವೆ
(೦೬/೦೭-ಫೆಬ್ರವರಿ-೨೦೦೮)

Thursday 28 January, 2010

ಕನಸ ಕಿನ್ನರಿ

"ಅಳುವ ಕಂದನ ತುಟಿಯು ಹವಳಾದ ಕುಡಿ ಹಂಗ"
ಮತ್ತೆ ಅಳುವಿನ ಮಾಟ ಕುಣಿವ ಮಣಕನ ಹಾಂಗ
ಅಳದೆ ಸೊರಗದೆ ಮಲಗಿ ಚಣವೊಂದು ಚಣದಲ್ಲಿ
ನಿದಿರೆ ಜೊತೆ ಬರುವವಳು, ಕನಸ ಕಿನ್ನರಿಯು

ಆಟವಾಡಿದ ಕನಸು, ಮತ್ತೆ ಓಡಿದ ಕನಸು
ಗೆಳೆಯರೆಲ್ಲರ ಕೂಡಿ ಈಜು ಹೊಡೆದಾ ಕನಸು
ಏನೋ ಮಾಯಕದಲ್ಲಿ ಖುಷಿಯ ಮೆರವಣಿಗೆಯಲಿ
ಕಣ್ಣೊಳಗೆ ಇಳಿವವಳು ಕನಸ ಕಿನ್ನರಿಯು

ಚಂದಿರನ ಅಂಗಳದಿ ರಂಗೋಲಿ ಗೆರೆಯೆಳೆದು
ಚುಕ್ಕಿಗಳ ಕೈ ಹಿಡಿದು, ನೀಹಾರಿಕೆಯನೆಳೆದು
ಕಂಬ ಗೋಪುರದಲ್ಲಿ ಬಳ್ಳಿ ಚಪ್ಪರದೊಳಗೆ
ಅರಳುವುದ ಬರೆವವಳು ಕನಸ ಕಿನ್ನರಿಯು

ಗಾಳಿಗಾಲಿಯನೇರಿ, ಕೂದಲನು ತೂರಾಡಿ
ದಿಕ್ಕುದಿಕ್ಕನು ಮೀರಿ ಅನಂತದೊಳು ನೋಡಿ
ಮೈಮರೆವ ಅರಿವಳಿಕೆ ಆವರಿಸಿ ನಗುವವಳು
ಮುತ್ತು ಮುತ್ತನು ಹೊತ್ತ ಕನಸ ಕಿನ್ನರಿಯು
(೨೭-ಜನವರಿ-೨೦೦೯)

Friday 15 January, 2010

ನನ್ನೊಳಗಿನ ಪರ್ಯಾಯ

ನನ್ನ ಪರ್ಯಾಯವದು ನನ್ನೊಳಗೆಯೇ ಕೂತು
ಏನೇನೋ ಮಸಲತ್ತು ಮಾಡುತ್ತಿದೆ
ಹಾಗಲ್ಲ, ಹೀಗೆಂದು ತಿಳಿಹೇಳುವುದ ಬಿಟ್ಟು
ಬೆದರಿಕೆಯ ಆಟಗಳ ಹೂಡುತ್ತಿದೆ

ಇಳಿಯುವುದ ತಿಳಿಯದದು, ಏರುತೇರುತ್ತಲೇ
ಅ-ನಿಯತ ದಾರಿಯಲಿ ನೂಕಿ ನೂಕಿ
"ಏರಿದವ ಚಿಕ್ಕವನು ಇರಬೇಕು" ಎನ್ನದೆ
ತೋರುವುದು ಕೊಬ್ಬು ಮದ ಬೆಡಗು ಶೋಕಿ

ಅಂಜಿಕೆಯ ಮೂಲವದು ಸ್ವಾರ್ಥದ ಹುತ್ತವು
ಸುಳಿವ ಹೆಡೆ ನೆವದಲ್ಲಿ ಭಂಡ ಧೈರ್ಯ
ಕಾರ್ಯಕಾರಣಕೆಲ್ಲ ನಂಬಿಕೆಯ ತಳಕಟ್ಟು
ಅಳಿಸಿದರೆ ತಿಳಿಯುವುದು ನಿಜದ ಶೌರ್ಯ

ಗೂಢವಾಗಿರುತಿದ್ದ ಒಳಮನದ ಪದರಗಳ
ಪರ್ಯಾಯ ನೆಲೆಗಳನು ಅರಿವ ಕಲೆಯು
ಸಂಮೋಹನದ ಹಾದಿ ಅರಿವನರಳಿಸಿದಾಗ
ಬಾನಿನಗಲದ ಆಚೆ ಮಿತಿಯ ನೆಲೆಯು
(೨೩-ಸೆಪ್ಟೆಂಬರ್-೨೦೦೯)
(ಒಂದು ಸಮ್ಮೋಹನ ತರಗತಿ ಮತ್ತು ಸ್ವಸಮ್ಮೋಹನ ಪ್ರಯೋಗದ ಬಳಿಕ ಹೊಳೆದದ್ದು)

Saturday 9 January, 2010

ಬದುಕು

ಜೆಟ್ ಸಾಗಿದ ಹಾದಿ
ಬೆಳ್ಳಿ ರೇಖೆ, ರಾಜ ಬೀದಿ
ಸದ್ದು ಗದ್ದಲವಿಲ್ಲ
ಕ್ಷಣಗಳ ಬಿಳಿ ಮೋಡ
ನೆನಪುಗಳ ಚೂರು ಪಾರು
ಪರದೆಯೊಳಗೆ ತೆರೆದ ಬಾನು
ಕಾಣದ ಅರಿಯದ ವಿಶಾಲ
ಗಾಳಿ ತೂರಿ ಹಾರಿದಾಗ
ತಣ್ಣನೆ ಬರೀ ನೀಲ
ನೆಪಗಳ ಚೀಲ

ನಾನು ಸಾಗಿದ ಹಾದಿ
ಕಲ್ಲು, ಮುಳ್ಳು, ಹೂವು, ಹಣ್ಣು
ಸದ್ದಿಗೇ ಬಿಡುವಿಲ್ಲ
ಒಂದೆರಡು ಬೆಳ್ಳಿಗೆರೆ
ಹಿನ್ನೋಟಗಳು, ಕನವರಿಕೆ
ಕಂಡಷ್ಟೇ ಸತ್ಯದ ಅರಿವು
ರೆಕ್ಕೆ ತೆರೆದ ಅಂಗಳದಲ್ಲಿ
ರಚ್ಚೆ ಹಿಡಿದು ಸುರಿದದ್ದು
ಸರಿದಾಗ ಕಂಡದ್ದು
ನೀಲಬಿಂಬ ನಿಚ್ಚಳ
(೦೩-ಎಪ್ರಿಲ್-೨೦೦೭)

Friday 1 January, 2010

ಮತ್ತೊಂದು ಹೊಸತು

ಓದುಗರಿಗೆಲ್ಲ ಹೊಸವರ್ಷದ ಶುಭಾಶಯಗಳು.

ಯಾರನ್ನೂ ಯಾವುದನ್ನೂ ಲೆಕ್ಕಿಸದ ಕಾಲದ ಲೆಕ್ಕದಲ್ಲಿ ಇನ್ನೂ ಒಂದು ಅಂಕೆ ಸವೆದಿದೆ. ಕಳೆದ ಕಾಲವೆಲ್ಲವನ್ನೂ ಕಳೆದುಕೊಳ್ಳದೆ ಕಲಿತುಕೊಳ್ಳುತ್ತಾ ಮುಂದೆ ಸಾಗುವುದರಲ್ಲಿ ಸಮಯದ ಸಾರ್ಥಕತೆಯನ್ನು ಕಂಡುಕೊಂಡರೆ ಮನುಜಮತಕ್ಕೇ ಹಿತವಲ್ಲವೆ?

ಹೊಸತೊಂದರ ಆರಂಭ ಎಲ್ಲ ಹಿತ ಸುಖಗಳಿಗೆ ನಾಂದಿಯಾಗಲಿ. ಜಗಜೀವನ ಮಂಗಳವಾಗಲಿ.

ಎಲ್ಲ ಗದ್ದಲಗಳ ನಡುವೆಯೂ
ಮತ್ತದೇ ಸೂರ್ಯ, ಹಗಲು, ಬೆಳಕು;
ಗೋಡೆ ಮೇಲಿನ ಚಿತ್ರ ಮಾತ್ರ ಹೊಸದು
ಸುತ್ತೆಲ್ಲ ಅದೇ ರಾಗ, ಅದೇ ತಾಳ, ಅದೇ ಹಾಡು
ಪಲ್ಲವಿಯಲ್ಲೇ ತಿರುಗಣೆ

ಮುಂದೇನು? ಪ್ರಶ್ನೆಗಳಿವೆ ಹಲವಾರು
ಕೇಳಿದವರಿಗಂತೂ ಉತ್ತರ ತಿಳಿಯದು
ಕೇಳಿಸಿಕೊಂಡವರಿಗೆ ಅವರದೇ ತಲೆನೋವು
ತರಾವರಿ ಗುಳಿಗೆಗಳು ಮಾರಾಟಕ್ಕಿವೆ, ಕೊಳ್ಳುವವರಿಲ್ಲ

ಹೊಸತನದ ಗಾಳಿಯಲ್ಲಿ ಗುಂಡುಗಳ ಹಾರಾಟ
ಮೂಗಿನೊಳಗೆ ಗೊಂದಲದ ಹೊಗೆ
ಉಸಿರಿನ ವಿಷ ಬೆನ್ನಲ್ಲಿ ಕಾಣದು
ಕೊಪ್ಪರಿಗೆಯೊಳಗೇ ಕ್ರೂರಿಗಳ ಸಾಮ್ರಾಜ್ಯ
ಕೊಳ್ಳುಬಾಕನ ಹೆಣದಡಿಯಲ್ಲೂ ಹೂಳುವ ಗುತ್ತಿಗೆ
ಕತ್ತಿ ಹಿಡಿದವನ ಕೈ ಕಾಣದ ಸಾಮಾನ್ಯ ಕುತ್ತಿಗೆ

ಎಷ್ಟು ನೋವಿಗೆ ಎಷ್ಟು ನಲಿವು
ಲೆಕ್ಕ ಇಟ್ಟವರಿದ್ದೀರಾ?
ಎಲ್ಲಿಯ ಸ್ವಾರ್ಥಕ್ಕೆ ಎಲ್ಲಿಯ ಬಲಿ
ಸೂತ್ರ ಹಿಡಿದವರಿದ್ದೀರಾ?
ಯಾರ ನೆರಳಿಗೆ ಯಾರ ಜೀವ
ಸೂಕ್ಷ್ಮ ಕಂಡವರಿದ್ದೀರಾ?

ಗಾಳಿಗೋಪುರದಂಥ ಅರಗಿನರಮನೆಗಳು
ನೆಲಕಚ್ಚಿದಾಗಿಂದ ಕೆಚ್ಚಿನ ಕೆಸರಲ್ಲೂ
ಕುಸಿದದ್ದೇ ಬಂತು, ಕಿಸಿದದ್ದೇ ಬಂತು
ಜಾರಿದವರೆಲ್ಲ ಜಾಣರಾಗಲಿಲ್ಲ
ಎದ್ದ ಜಾಣರ ಹೆಸರು ಕಾಣಲೇ ಇಲ್ಲ

ಸುಖನಿದ್ರೆ ಎಲ್ಲರ ಸೊತ್ತಲ್ಲ
ಮತ್ತದೇ ಚಂದ್ರ, ಇರುಳು, ಕತ್ತಲು

ಅಷ್ಟಾದರೂ, ಕಂಡಷ್ಟೇ ಆಕಾಶದಲ್ಲಿ
ದಿಟ್ಟಿಸಿ ಎಣಿಸಲು ಚುಕ್ಕಿಗಳಿದ್ದಾವೆ

(೦೨-ಜನವರಿ-೨೦೦೯)