ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday 4 September, 2013

ಕಾವ್ಯ ಶ್ರಾವಣಕೆ ಕವನ ಬಾಗಿನ

ಕಾವ್ಯ ಶ್ರಾವಣಕೆಂದು ಕವನ ಬಾಗಿನ ಬರೆವೆ
ಸೋನೆ ಸುರಿಸುರಿದಾಗ ಕೆರೆ ತುಂಬದೆ?
ಅಂಚೆಮೇಲೊಂದಂಚೆ ಮಿಂಚಂಚೆ ಸುರಿದಿರಲು
ಹಲಕೆಲವು ಓಘಗಳ ತೆರೆಹರಿಯದೆ?

ನೇಹಿಗರ ಒಡನಾಟ ಮತ್ತೆ ಸಲುಗೆಯ ಕೂಟ
ಆದ್ಯಂತ ರಸಪಾನ ಈ ಶ್ರಾವಣ
ಕವನ-ಬಾಗಿನ ಕೊಡುವೆ ಕನ್ನಡದ ಮರಿಗಳಿಗೆ
ಓದು-ಸಂಕೋಲೆಯಲಿ ಸೆರೆ ಈ ಮನ!

ಬರೆಸಿ-ಬರೆದವರನ್ನು ಓದಿದವರೆಲ್ಲರನು
ನೆನೆನೆನೆದು ಧಾರೆಯನು ಸವಿದು ನಡೆದೆ
ಒಂದೊಂದು ಎಳೆಯೆಳೆಯು ಅಮಿತಹರ್ಷದ ಹನಿಯು
ಸುಖಸಾರವೆಂದೆನುತ ನಮಿಸಿ ಪಡೆದೆ.

(೨೦-ಆಗಸ್ಟ್-೨೦೧೩)

(ವಿಜಯವಾಣಿ ಪತ್ರಿಕೆಯಲ್ಲಿ ಆಗಸ್ಟ್ ಹದಿನೆಂಟರಂದು ಪ್ರಕಟವಾದ ಗೆಳತಿ ತ್ರಿವೇಣಿಯ ಲೇಖನ- ಕಾವ್ಯ ಶ್ರಾವಣ- ನಮ್ಮ ಕೆಲವು ಸ್ನೇಹಿತರೊಳಗೆ ಹುಟ್ಟು ಹಾಕಿದ ಚರ್ಚೆ-ಸಂವಹನಗಳ ಪತ್ರ-ಸರಪಳಿಗಾಗಿ ಸೇರಿಸಿದ ‘ಕವನ ಬಾಗಿನ’; ಇದೀಗ ಗೌರಿ ಹಬ್ಬದ ನೆಪದಲ್ಲಿ ಅಕ್ಷರಮೋಹಿತರಿಗೆಲ್ಲ ಅರ್ಪಣೆ...)