ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 30 March, 2010

ಅದೃಶ್ಯ

ಕಾರ್ಗಡಲ ಅಲೆ ಹೆಪ್ಪುಗಟ್ಟಿ
ಕರಗಲಾರದೆ ಕೊರಗಿದಾಗ
ತುಳುಕಲಾರದ ಕೊಳದಲ್ಲಿ
ಸಿಡಿಲು-ಗುಡುಗು

ಕಾಣದ ಮಿಂಚಿನ ಸೆಳೆಗೊಡ್ಡಿ
ಅಂಚು ಕೊಂಚ ಹಸಿಯಾದಾಗ
ಕಟ್ಟೆಕೊನೆಯ ಏರಿಯಲ್ಲಿ
ಒಸರು-ಕೆಸರು

ಸಿಡಿಲ ಮರಿ ಹುಟ್ಟಿ ಬಂತೆಂದು
ಕಲ್ಲಣಬೆ ಆರಿಸುವಾಗ
ಬುಟ್ಟಿಯೊಳು ಮಿಡಿಹೆಡೆಯಲ್ಲಿ
ಉಸಿರು-ಹೆಸರು

ಬೆಳ್ನೊರೆಯ ಸೋಗಿನಲಿ ತೆರೆದು
ಎದೆಯ ಹೆಬ್ಬಂಡೆ ಹರಿದಾಗ
ಕಿಬ್ಬದಿಯ ಜೋಳಿಗೆಯಲ್ಲಿ
ಹಸಿವು-ಅಳಲು
(೨೨-ಮಾರ್ಚ್-೨೦೦೯)
(ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು ಆಯೋಜಿಸಿದ್ದ "ಯುಗಾದಿ ಕವನ ಸ್ಪರ್ಧೆ"ಯಲ್ಲಿ ದ್ವಿತೀಯ ಬಹುಮಾನಕ್ಕೆ ಪಾತ್ರವಾದ ಕವನ. ಇದರ ಅರ್ಥ, ಸಂದೇಶ ಏನಿರಬಹುದೆಂದು ನಿರ್ಣಾಯಕರು ಸುಮಾರು ಮುಕ್ಕಾಲು ಗಂಟೆ ಕಾಲ ಚರ್ಚಿಸಿದರಂತೆ. ನಿಮಗೇನನ್ನಿಸುತ್ತದೆ? ತಿಳಿಸುವಿರಲ್ಲ.)