ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 26 April, 2011

ಸುಮ್ಮನೆ ನೋಡಿದಾಗ...೨೩

ಗೇಟಿನ ಬಳಿ ನಾನು ನಿಂತದ್ದನ್ನು ನೋಡಿದ ನೇಹಾ ಓಡಿ ಬಂದು ನನ್ನನ್ನು ಅಲ್ಲಿಗೇ ಎಳೆದೊಯ್ದಳು. ಸುಮುಖ್ ಅಂಕಲ್ ಹರ್ಷಣ್ಣನ ಜೊತೆ ಮಾತಾಡುತ್ತಿದ್ದರು. ನಳಿನಿ ಅಂಟಿ ಹೊಸದೊಂದು ಮಹಿಳೆಯ ಜೊತೆ ಮಾತಾಡುತ್ತಿದ್ದರು. ಜಾಜಿಪೊದೆಯ ನಡುವಿನ ಗುಬ್ಬಚ್ಚಿ ಗೂಡನ್ನು ದಿಟ್ಟಿಸುತ್ತಾ ನಿಂತಿದ್ದವರ ಬೆನ್ನು ಮಾತ್ರ ಕಾಣುತ್ತಿತ್ತು. ನನ್ನೊಳಗೆ ಯಾಕೋ ಯಾವುದೋ ಅರಿಯದ ಉದ್ವೇಗ ತುಂಬಿಕೊಳ್ಳತೊಡಗಿತು.

ನಮ್ಮಿಬ್ಬರನ್ನು ಕಂಡವನೇ ಹರ್ಷಣ್ಣ ಹತ್ತಿರ ಬಂದು ಜೋರಾಗಿಯೇ ತಲೆಯ ಮೇಲೆ ಮೊಟಕಿದ. ‘ಆಆಆಆಯ್’ ಸ್ವರ ಕರೆಯದೆಯೇ ಹೊರಬಂತು. ಗುಬ್ಬಚ್ಚಿ ಗೂಡನ್ನು ನೋಡುತ್ತಿದ್ದ ವ್ಯಕ್ತಿ ಇತ್ತ ತಿರುಗಿತು. ನನ್ನ ಸ್ವರ ಮತ್ತೆ ಗಂಟಲಲ್ಲೇ ಹುದುಗಿತು. ಹೃದಯದ ತಾಳ ಏರುಪೇರಾಯಿತು. ಮುಖ ಕೆಂಪಾಯಿತೇ? ಆಕಾಶವೇ ಕೆಳಗಿಳಿಯಿತೆ? ನೆಲ ನೆಲೆ ತಪ್ಪಿತೆ? ಕಣ್ಣು ಕತ್ತಲಿಟ್ಟು ಬೀಳುವ ಮೊದಲೇ ನೇಹಾಳನ್ನು ಆದರಿಸಿಕೊಂಡೆ. ಇನ್ನೊಂದು ಬದಿಯಿಂದ ಹರ್ಷಣ್ಣನ ಆಸರೆ. ನಳಿನಿ ಆಂಟಿಯ ಜೊತೆ ಮಾತಾಡುತ್ತಿದ್ದ ಮಹಿಳೆಯೂ ಇತ್ತ ತಿರುಗಿದರು. ಎಂಥ ಸುಂದರಿ, ಈ ವಯಸ್ಸಲ್ಲೂ. ಅವನ ಅಮ್ಮನೇ ಇರಬೇಕು, ಅದೇ ಕಣ್ಣು-ಮೂಗು. ಲಕ್ಷಣಕ್ಕೇ ಲಕ್ಷಣವ್ಯಾಖ್ಯೆ ಇವರು.

ನಾನು ಸುಧಾರಿಸಿಕೊಂಡದ್ದನ್ನು ನೋಡಿದ ಹರ್ಷಣ್ಣ ಮತ್ತೊಮ್ಮೆ ತಲೆಗೆ ಮೊಟಕಿದ, ಈ ಸಲ ಹದವಾಗಿಯೇ. ಕಣ್ಣು ನೆಲ ನೋಡಿತಷ್ಟೇ. ಅದ್ಯಾವ ಘಳಿಗೆಯಲ್ಲೋ ಒಳಗೆ ಹೋಗಿದ್ದ ನಳಿನಿ ಆಂಟಿ ಟೀ ಲೋಟ ಹಿಡಿದು ಬಂದರು. ಆಗಲೇ ಧಾರಾಳವಾಗಿ ಕಪ್ಪಿಟ್ಟಿದ್ದ ಆಗಸ ಈಗಲೋ ಮತ್ಯಾವಾಗಲೋ ಸುರಿಯುವಂತೆ ತುಂಬು ಮೋಡಗಳಿಂದ ಉಯ್ಯಾಲೆಯಾಡುತ್ತಿತ್ತು. ಹಿತವಾದ ಗಾಳಿ ಬೀಸುತ್ತಿತ್ತು. ಟೀ ಮುದ ಕೊಟ್ಟಿತು. ಗುಬ್ಬಚ್ಚಿಗಳು ಕಿಚಪಿಚವೆಂದಾಗ ಅಕಸ್ಮಾತ್ ತಲೆಯೆತ್ತಿದೆ. ಅವನ ನೋಟ ಅದ್ಯಾಕೆ ನನ್ನತ್ತಲೇ ಇತ್ತು? ಗುಬ್ಬಚ್ಚಿ ಕಾಣಲೇ ಇಲ್ಲ, ನೆಲ ಕಂಡಿತು. ಮತ್ತೆರಡು ಯುಗಗಳ ನಂತರ ತಲೆಯೆತ್ತಿದಾಗ ನಮ್ಮಿಬ್ಬರ ಹೊರತು ಜಾಜಿ ಮಂಟಪ ಬರಿದಾಗಿತ್ತು. ಅವನ್ಯಾಕೆ ಇಲ್ಲಿ ಬಂದ? ಯಾರು ಕರೆದರು? ಯಾಕೆ? ಉತ್ತರಗಳು ನನ್ನೊಳಗಿರಲಿಲ್ಲ. ಅವನಲ್ಲಿರಬಹುದೆ? ಗೊತ್ತಿಲ್ಲ. ಹೇಗೆ ಕೇಳಲಿ? ಛೇ! ಕಾಲೇಜಿನ ಬೋಲ್ಡ್ ಶಿಶಿರ ನಾನೇನಾ? ಇದ್ಯಾಕೆ ಹೀಗೆ ಕೋಲ್ಡ್ ಆಗಿಬಿಟ್ಟೆ?

‘ಯಾಕೆ ಶಿಶಿರಾ ಏನೂ ಮಾತಾಡುದಿಲ್ಲ? ಹೆದ್ರಿಕೆ, ಗಾಬರಿ ಆಗುವಂಥಾದ್ದು ಏನೂ ಇಲ್ಲವಲ್ಲ ಇಲ್ಲಿ...’ ಈ ಸ್ವರ ನನಗೇನೂ ಹೊಸದಲ್ಲ, ಕಾಲೇಜಲ್ಲಿ ಕೇಳಿದ್ದೇ. ಆದರೆ ಇದನ್ನು ಜೇನಲ್ಲಿಟ್ಟು ತೆಗೆದವರು ಯಾರು? ಹೇಗೆ?
‘ನಾನಿಲ್ಲಿಗೆ ಹೇಗೆ, ಯಾಕೆ ಬಂದೆ ಅಂತ ಯೋಚನೆ ನಿಮಗೆ, ಅಲ್ವಾ?’ ತಟ್ಟನೆ ಅವನ ಮುಖ ನೋಡಿದೆ. ಇವನಿಗೇನು ಅಂಜನವಿದ್ಯೆ ಗೊತ್ತುಂಟಾ?
‘ಹರ್ಷ ನನ್ನ ಕ್ಲಾಸ್‍ಮೇಟ್. ಅವನೇ ನಮ್ಮನ್ನು ಕರ್ದದ್ದು ಇವತ್ತು. ಹೀಗೇ ಮಾತಾಡುವಾಗ ಅಮ್ಮನೂ ನಳಿನಿಯವರೂ ಹೇಗೋ ನೆಂಟರು ಅಂತಲೂ ಗೊತ್ತಾಯ್ತು. ಹಾಗೆ ಇಲ್ಲಿಯೇ ಮಾತಾಡ್ತಾ ನಿಂತೆವು. ನಿಮ್ಮನ್ನು ಇಲ್ಲಿಗೆ ಬರ್ಲಿಕ್ಕೆ ಹೇಳಿದ್ದೂ ಹರ್ಷನೇ. ಸಮಾಧಾನ ಆಯ್ತಾ? ಹೆದ್ರಿಕೆ ಹೋಯ್ತಾ? ಇನ್ನಾದ್ರೂ ಮಾತಾಡ್ಬಹುದಾ? ಒಬ್ಬನೇ ಮಾತಾಡ್ತಿದ್ದೇನೆ, ನನ್ನಷ್ಟಕ್ಕೇ... ತಲೆ ಕೆಟ್ಟಿದೆ ಅಂದ್ಕೊಳ್ತಾರೆ ನೋಡಿದವರು! ಮಾತಾಡಿ...’
‘ಏನು ಮಾತಾಡ್ಲಿ?’

Monday 18 April, 2011

ಸುಮ್ಮನೆ ನೋಡಿದಾಗ...೨೨

ಹಗಲು ಹೇಗೆ ಓಡಿತೋ ಸಂಜೆ ಹೇಗಾಯ್ತೋ ಗೊತ್ತಾಗಲೇ ಇಲ್ಲ.

ಶ್ರಿಯಾಲಂಕಾರ್- ನಮ್ಮೂರಿನ ದೊಡ್ಡ ಬಟ್ಟೆಯಂಗಡಿ. ಎಷ್ಟೋ ಕಾಲದಿಂದಲೂ ಇದ್ದ ಈ ಅಂಗಡಿಯಲ್ಲೇ ಸರೋಜಾ ಆಂಟಿ, ನಳಿನಿ ಆಂಟಿ, ಸುಮುಖ್ ಅಂಕಲ್ ಯಾವಾಗಲೂ ವ್ಯವಹಾರ ಮಾಡುತ್ತಿದ್ದ ಕಾರಣ ನಮಗೆಲ್ಲ ಭಾರೀ ಸ್ವಾಗತವೇ ಸಿಕ್ಕಿತು. ಹರ್ಷಣ್ಣ ಮತ್ತು ಸುಮುಖ್ ಅಂಕಲ್ ಜೊತೆಯಲ್ಲಿ ನಾವೈದು ಹೆಂಗಸರು. ಅಂಗಡಿ ತುಂಬಾ ನಮ್ಮದೇ ಗೌಜಿ-ಗಲಾಟೆ. ಎಲ್ಲರಿಗೂ ಪರಿಚಯವಿರುವ ಉತ್ಸಾಹ ಸಲುಗೆ ಮಾತುಕತೆಯಲ್ಲಿ ಎದ್ದು ಕಾಣುತ್ತಿತ್ತು. ಅಂಗಡಿ ಮಾಲೀಕ ಸ್ವತಃ ನಮ್ಮ ಮುಂದೆ ನಿಂತಿದ್ದರು, ಸೀರೆಗಳನ್ನು ಬಿಡಿಸಿ ತೋರಿಸಿ ವೈವಿಧ್ಯ ವೈಶಿಷ್ಠ್ಯಗಳನ್ನು ವಿವರಿಸಲು.

ನೇಹಾ ತನಗಾಗಿ ಮೂರು-ನಾಲ್ಕು ಸೀರೆಗಳನ್ನು ಆರಿಸಿಕೊಳ್ಳಬೇಕಾಗಿತ್ತು. ಅವಳಿಗೆ ಮೆಚ್ಚಾದದ್ದು ಅಂಕಲ್ ಮತ್ತು ಹರ್ಷಣ್ಣನನ್ನು ಪೆಚ್ಚಾಗಿಸುತ್ತಿತ್ತು. ಅವರ ಇಷ್ಟ ಇವಳಿಗೆ ಕಷ್ಟವಾಗುತ್ತಿತ್ತು. ಇದೇ ಜಟಾಪಟಿ ನಡೀತಿರುವಾಗ ಅಮ್ಮ ಮತ್ತು ನಳಿನಿ ಆಂಟಿ ತಮ್ಮ ತಮ್ಮ ಕಣ್ಣು ಒಪ್ಪಿದ ಸೀರೆಗಳನ್ನು ಹೆಕ್ಕಿಕೊಂಡು ಸರೋಜ ಆಂಟಿಯ ಸಹಾಯಕ್ಕೆ ನಿಂತಿದ್ದರು. ನಾವಿಬ್ಬರೂ ಸೀರೆಗಳ ಅಟ್ಟಿಗಳ ನಡುವೆ ತಲೆಕೆರೆಯುತ್ತಾ ಪಿಳಿಪಿಳಿ ಮಾಡುತ್ತಾ ಕೂತಿದ್ದಾಗ ಅಂಕಲ್ ಮತ್ತು ಹರ್ಷಣ್ಣ ಒಟ್ಟಾಗಿ ನಾಲ್ಕು ಸೀರೆಗಳನ್ನು ತಂದು ನಮ್ಮ ಮುಂದೆ ಇಟ್ಟರು.

‘ನೇಹಾ, ಇದು ನಿಶ್ಚಿತಾರ್ಥಕ್ಕೆ, ಇದು ಧಾರೆಗೆ, ಇದು ಔತಣಕ್ಕೆ, ಇದು ಶಿಶಿರನಿಗೆ...’ ಅಂಕಲ್ ಕೊನೆಯ ಮಾತೆಂಬಂತೆ ಹೇಳಿದಾಗ ಅವರ ಆಯ್ಕೆಗಳನ್ನು ಮರುಮಾತಿಲ್ಲದೆ ನೇವರಿಸಿದೆವು.
‘ಇಷ್ಟು ಹೊತ್ತು ಈ ಸೀರೆಗಳು ಎಲ್ಲಿ ಅಡಗಿದ್ದವು? ಇವುಗಳನ್ನು ನಮಗೆ ಯಾಕೆ ತೋರಿಸ್ಲಿಲ್ಲ ನೀವು?’ ನೇಹಾ ಅಂಗಡಿ ಹುಡುಗರನ್ನೇ ತರಾಟೆಗೆಳೆದಳು. ಅವರೆಲ್ಲ ಸುಮ್ಮನೇ ಮುಖಮುಖ ನೋಡುವಾಗ, ‘ಇಷ್ಟ ಆಗದಿದ್ರೆ ಬದಲಾಯಿಸುವಾ. ಒತ್ತಾಯ ಏನಿಲ್ಲ’ ಎಂದ ಹರ್ಷಣ್ಣ. ನೇಹಾ ಸುಮ್ಮನೇ ತಲೆಯಾಡಿಸಿ ಸೀರೆಗಳನ್ನು ಮಡಿಲಲ್ಲಿರಿಸಿಕೊಂಡಾಗ, ‘ಬಿಲ್ ಮಾಡಿ ಪ್ಯಾಕ್ ಮಾಡಿ ಕೊಡ್ತೇವಮ್ಮಾ, ಇಲ್ಲಿ ಕೊಡಿ’ ಅಂತ ಕೈ ನೀಡಿದರು ಅಂಗಡಿ ಯಜಮಾನರು. ಕೆನ್ನೆಗಳು ಇನ್ನಷ್ಟು ಕೆಂಪಾದವು.

ಜೂನ್ ಮೂವತ್ತರಂದು ಮದುವೆಯೆಂದು ನಿಶ್ಚಯವಾಯ್ತು. ಔಪಚಾರಿಕವಾಗಿ ನಿಶ್ಚಿತಾರ್ಥವೂ ನಡೆಯಿತು. ಇವೆಲ್ಲದರ ನಡುವೆ ಅಮ್ಮನ ವಿರೋಧವನ್ನೂ ಲೆಕ್ಕಿಸದೆ ಎಮ್.ಎಸ್ಸಿ.ಗೆ ಅರ್ಜಿ ಹಾಕಿದೆ. ಜುಲೈ ಹದಿನೆಂಟರಂದು ವಿ.ವಿ. ಕ್ಯಾಂಪಸ್ಸಿನಲ್ಲಿ ಹಾಜರಾಗಬೇಕೆನ್ನುವ ಆಜ್ಞಾಪತ್ರವೂ ಬಂತು. ಅಮ್ಮನ ರಾಗ ಏರುತ್ತಿತ್ತು. ನೇಹಾಳ ಮದುವೆ ನೆಪದಲ್ಲಿ ಹೆಚ್ಚಾಗಿ ಅಲ್ಲೇ ಇರುವ ಅವಕಾಶ ಹುಡುಕುತ್ತಿದ್ದೆ ನಾನು. ನಮ್ಮ ಮಾತಿನ ನಡುವೆ ಆಗೊಮ್ಮೆ ಈಗೊಮ್ಮೆ ವಸಂತ್ ನುಸುಳುತ್ತಿದ್ದ. ಬಲವಂತವಾಗಿ ನೇಹಾಳ ಬಾಯಿ ಮುಚ್ಚಿಸುವುದಾಗಿತ್ತು. ಸುಮುಖ್ ಅಂಕಲ್ ಅಥವಾ ನಳಿನಿ ಆಂಟಿಯಿಂದ ಈ ಬಗ್ಗೆ ಯಾವುದೇ ಪ್ರಶ್ನೆಗಳು ನೋಟಗಳು ನನ್ನನ್ನು ಎದುರುಗೊಂಡಿಲ್ಲವಾದ್ದರಿಂದ ವಸಂತ್ ವಿಷಯ ಅವರ ಕಿವಿ ಮುಟ್ಟಲಿಲ್ಲವೆನ್ನುವ ಸಮಾಧಾನ ನನಗಿತ್ತು.

ಜೂನ್ ಹನ್ನೆರಡರ ಬೆಳಗ್ಗೆ ನೇಹಾ ಫೋನ್ ಮಾಡಿ ಆದಷ್ಟು ಬೇಗ ಬಾರೆಂದು ಕರೆದಾಗ ಅವಳ ಸ್ವರದಲ್ಲಿ ಯಾವುದೇ ಆತಂಕವಿಲ್ಲದಿದ್ದರೂ ನನ್ನ ಎದೆಬಡಿತ ಮಾತ್ರ ತಾಳ ತಪ್ಪಿ ಏರುಪೇರಾಯ್ತು. ಅವಸರವಸರವಾಗಿ ಹೇಗ್ಹೇಗೋ ತಯಾರಾಗಿ ಅವರ ಮನೆಯ ಮುಂದೆ ಬಂದಾಗ ಜಾಜಿ ಮಂಟಪದಲ್ಲೇ ಐದಾರು ಜನ ನಿಂತಿದ್ದರು. ಗೇಟಿನಿಂದ ಹೆಜ್ಜೆ ಮುಂದೆ ಎತ್ತಿಡುವುದೇ ಕಷ್ಟವೆನಿಸಿ ಅಲ್ಲೇ ನಿಂತೆ, ಜಾಜಿ ಮಂಟಪ ದಿಟ್ಟಿಸುತ್ತಾ.

Monday 11 April, 2011

ಸುಮ್ಮನೆ ನೋಡಿದಾಗ...೨೧

ಸಹೃದಯರಿಗೆಲ್ಲ ಸೌರ ಯುಗಾದಿಯ (ವಿಷುವಿನ) ಸಂದರ್ಭದಲ್ಲಿ ಶುಭ ಹಾರೈಕೆಗಳು.
ಜೀವನ ಸುಂದರವಾಗಿರಲಿ, ಸುಖಮಯವಾಗಿರಲಿ, ಸಮೃದ್ಧಿಯಿಂದಿರಲಿ.


ಸರೋಜಾ ಆಂಟಿ ಅದೆಷ್ಟು ಹೊತ್ತಿಗೆ ತಮ್ಮ ಮನೆಗೆ ಹೊರಟಿದ್ದರೋ ಅದ್ಯಾವಾಗ ಸುಮುಖ್ ಅಂಕಲ್ ನಮ್ಮ ಹಿಂದೆ ಬಂದು ನಿಂತರೋ ಅರಿವಿರಲಿಲ್ಲ ನಮಗೆ. ನಳಿನಿ ಆಂಟಿಯ ವಕಾಲತ್ತಿನ ಮೇಲೆ ಅಂದು ರಾತ್ರಿ ನಾನು ಅಲ್ಲಿಯೇ ಉಳಿದೆ. ಮರುದಿನ ಬೆಳಿಗ್ಗೆಯೇ ಅಮ್ಮನೂ ಇಲ್ಲಿಗೇ ಬರುವ ಮಾತಾಯ್ತು ಹಿರಿಯ ಗೆಳತಿಯರಲ್ಲಿ. ನಳಿನಿ ಆಂಟಿಗೆ ಇಂದು ನಿದ್ದೆಯೇ ಬಾರದೇನೋ ಅನ್ನಿಸಿತು ನನಗೆ, ಅವರ ಸಂಭ್ರಮ ನೋಡಿ.

ಮಧ್ಯರಾತ್ರಿಯ ಎರಡು ಗಂಟೆಗೆ ನೇಹಾ ನನ್ನನು ಕುಲುಕಿ ಎಚ್ಚರಿಸಿದಳು, ಮುಖ ತುಂಬಾ ತುಂಟ ನಗು ಹೊತ್ತು.
‘ಏನಾಯ್ತು? ಯಾಕೆ ಎಬ್ಸಿದ್ದು ನನ್ನನ್ನು?’
‘ಯಾರು ವಸಂತ್? ಯಾಕವನು ಇಲ್ಲಿಗೆ ಬರ್ಬೇಕು? ಹೇಳು ಈಗ್ಲೇ’
‘ಯಾರು? ಯಾವ ವಸಂತ್? ಎಂತ ಮಾತಾಡ್ತಿದ್ದೀ ನೀನು? ಕನಸು ಬಿತ್ತಾ ನಿಂಗೆ?’
‘ಕನಸು ಬಿದ್ದದ್ದು ನಂಗಲ್ಲ ಮಾರಾಣಿ, ನಿಂಗೆ. ‘ವಸಂತ್, ಬನ್ನೀ...’ ಅಂತ ಕನವರಿಸಿದವಳು ನೀನು. ನಂಗೀಗ ಹೇಳುದಿಲ್ಲ ಅಂತಾದ್ರೆ ಬೆಳಗಾದ್ಮೇಲೆ ಪಪ್ಪನತ್ರ ಕೇಳಿಸ್ತೇನೆ, ಅಷ್ಟೇ...’
‘....’ ಹೇಗೆ ಎಲ್ಲಿಂದ ಇವಳಿಗೆ ಹೇಳುವುದೆನ್ನುವ ತರ್ಕದಲ್ಲಿ ಮುಳುಗಿದೆ.
‘ಏನು ಲೆಕ್ಕಾಚಾರ ಹಾಕ್ತಾ ಇದ್ದೀ? ನೀನು ಹೇಳದಿದ್ರೆ ಬಿಡುದಿಲ್ಲ ನಾನು. ಹೇಗೆ ನಿನ್ನ ಬಾಯಿ ಬಿಡಿಸ್ಬೇಕು ಅಂತ ನಂಗೊತ್ತುಂಟು. ಬೇಡ ಬಿಡು. ಬೆಳಿಗ್ಗೆ ನೋಡ್ಕೊಳ್ತೇನೆ...’
‘....’ ಹೇಳದಿದ್ರೆ ಬಿಡುವವಳಲ್ಲ. ಹಾಗಂತ ಅಂಕಲ್ ವರೆಗೆ ವಿಷಯ ಹೋದರೆ... ಒಳ್ಳೆಯದೆ? ಕೆಟ್ಟದ್ದೆ? ನಿಜವಾಗಲೂ ಲೆಕ್ಕಾಚಾರದಲ್ಲಿ ಬಿದ್ದೆ. ಬಾಯಿ ಬಿಡಲಿಲ್ಲ.
ಮುಖ ದಪ್ಪ ಮಾಡಿಕೊಂಡು ನನಗೆ ಬೆನ್ನುಹಾಕಿ ಮುಸಕೆಳೆದ ನೇಹಾಳ ಹುಸಿಕೋಪಕ್ಕೆ ನಗುವೇ ಬಂತು. ಕಿಸಕ್ಕನೆ ಹೊರಜಾರಿತು, ತಡೆಯಲಿಲ್ಲ. ಅವಳ ಕೋಪವೂ ಇಳಿಯಲಿಲ್ಲ. ನನ್ನ ಬೆನ್ನಿಗೊಂದು ಗುದ್ದಿದಳು. ನಡುಮನೆಯಲ್ಲಿ ಆಗಲೇ ದೀಪ ಉರಿಯಿತು. ನಳಿನಿ ಆಂಟಿಯ ಹೆಜ್ಜೆ ನಮ್ಮ ಕೋಣೆಯ ಬಾಗಿಲತ್ತ ಬಂತು. ಬಾಯ್ತೆರೆದವಳ ಸ್ವರ ಹೊರಗೆ ಬಾರದ ಹಾಗೆ ಕೈ ಅಡ್ಡ ಹಿಡಿದೆ. ಕೋಣೆಯೊಳಗಿನ ಮೌನ ಆಂಟಿಯನ್ನು ಹಿಂದಕ್ಕೆ ಕಳಿಸಿತು. ಒಂದ್ಹತ್ತು ನಿಮಿಷಗಳಲ್ಲಿ ಮೌನದ ಪದರ ಗಾಢವಾಗಿ ಮತ್ತೊಂದು ಕಿಸಕಿಸದೊಡನೆ ಒಡೆದುಕೊಂಡಿತು. ಇನ್ನೊಮ್ಮೆ ನೇಹಾಳ ಮುಖ ದಪ್ಪವಾಯ್ತು, ಹುಸಿಗೋಪದಲ್ಲಿ,
‘ಹೇಳ್ತೀಯಾ ಇಲ್ವಾ?’
‘ಹೇಳ್ತೇನೆ ಮಾರಾಯ್ತಿ. ನಿಂಗಲ್ದೆ ಇನ್ಯಾರಿಗೆ ಹೇಳುದು ನಾನು? ಎಲ್ಲ ಕೇಳಿದ ಮೇಲೆ ಬೈಬಾರ್ದು ನೀನು, ಅಷ್ಟೇ. ಅದೊಂದು ಪ್ರಾಮಿಸ್ ಮಾಡು.’
‘ಆಣೆ-ಪ್ರಾಮಿಸ್ ಎಲ್ಲ ನಮ್ಮ ನಡುವೆ ಬೇಡ ಅಂತ ಹೇಳಿದವಳೇ ನೀನು. ಈಗ ಪ್ರಾಮಿಸ್ ಮಾಡ್ಬೇಕಾ? ಅಂದ್ರೆ ಏನೋ ಗಾಢ-ಗೂಢ ಕಥೆಯೇ ಉಂಟು. ಹೇಳು, ಪ್ಲೀಸ್...’ ಗೋಗರೆಯುವ ನಾಟಕ ಮಾಡಿದಳು ಜೀವದ ಗೆಳತಿ.

ಮೊದಲ ಕಥೆ ಬರೆದ ಹಿನ್ನೆಲೆಯಿಂದ ಹಿಡಿದು ಸದ್ದಿಲ್ಲದೆ ವಸಂತ್ ನನ್ನೊಳಗೆ ಮನೆ ಮಾಡಿ ಕಾಡುತ್ತಿರುವ ಎಲ್ಲವನ್ನೂ ಕನವರಿಕೆಯಂತೆಯೇ ಉಸುರುತ್ತಾ ಮುಗಿಸಿದಾಗ ಬೆಳಗಿನ ಜಾವ ಐದರ ನಸುಕು. ಹೊರಗೆ ಬೇಕೋಬೇಡವೋ ಇಣುಕುತ್ತಿದ್ದ ಮಂದ ಬೆಳಕಿನಲ್ಲಿ ಕೆಲವಾರು ಹಕ್ಕಿಗಳ ಉಲಿ ವಾತಾವರಣವನ್ನು ಮತ್ತಷ್ಟು ಆಪ್ತವಾಗಿಸುತ್ತಿತ್ತು. ಹಾಸಿಗೆಯ ಮೇಲೆ ಸುಖಾಸನದಲ್ಲಿ ಕೂತು ಮಡಿಲಲ್ಲಿ ದಿಂಬು ಏರಿಸಿ, ಅದರಲ್ಲೆರಡೂ ಮೊಣಕೈಯೂರಿ, ಎರಡೂ ಅಂಗೈಗಳ ಆಧಾರದಲ್ಲಿ ಗಲ್ಲವನ್ನಿಟ್ಟು ತುಟಿ ಚೂಪು ಮಾಡಿ, ಹ್ಙೂಗುಟ್ಟುತ್ತಾ ಕೇಳಿಸಿಕೊಳ್ಳುತ್ತಿದ್ದವಳು, ನಾನು ನಿಟ್ಟುಸಿರು ಬಿಟ್ಟು ಹಗುರಾದಾಗ ಮತ್ತೊಮ್ಮೆ ನನ್ನ ಬೆನ್ನಿಗೆ ಗುದ್ದಿದಳು.
‘...ಯಾಕೆ?’
‘ಇಷ್ಟು ದಿನ ಇದನ್ನೆಲ್ಲ ನನ್ನಿಂದ ಮುಚ್ಚಿಟ್ಟದ್ದಕ್ಕೆ...’
‘ಇನ್ನೂ ಏನೂ ಆಗಿಲ್ಲದ ಈ ವಿಷಯವನ್ನು ನಿಂಗೆ ಹೇಳುವಂಥ ವಿಶೇಷ ನಂಗೆ ಕಂಡಿರಲಿಲ್ಲ. ಅದ್ಕೇ ಹೇಳಿರಲಿಲ್ಲ. ಇದೊಂಥರಾ ಇನ್ಫ಼ಾಚುವೇಷನ್ ಅಂತ ನಿಂಗನಿಸುದಿಲ್ವಾ? ಇದ್ರಲ್ಲೇನೂ ಹುರುಳಿಲ್ಲ ಅಂತ ಅನ್ನಿಸುದಿಲ್ವಾ? ವನ್ ವೇ ಟ್ರಾಫಿಕ್ ಅಲ್ವಾ ಇದು?’

‘ಇದನ್ನು ಟೂ ವೇ ಟ್ರಾಫಿಕ್ ಮಾಡ್ಲಿಕ್ಕೆ ಏನಾದ್ರೂ ಪ್ರಯತ್ನ ಮಾಡ್ಬೇಕಲ್ವ, ಮಾಡಿದ್ದೀಯ? ಆಚೆ ಕಡೆಯ ಟ್ರಾಫಿಕ್ಕಿಗೆ ಗ್ರೀನ್ ಸಿಗ್ನಲ್ ತೋರಿಸ್ಬೇಕಲ್ವ? ತೋರ್ಸಿದ್ದೀಯ? ಅದೇನೂ ಮಾಡದೆ, ಸುಮ್ನೆ ಕನವರಿಸ್ಕೊಂಡು ‘ವಸಂತ್ ಬನ್ನೀ...’ ಅಂತಂದ್ರೆ ಎಲ್ಲಿಂದ ಬರ್ತಾರೆ?. ನಂಗೀಗ ಎಲ್ಲ ಅರ್ಥ ಆಗ್ತಾ ಉಂಟು,ಶಿಶಿರಾ. ಶರತನ್ನು ನೋಡಿದ್ರೆ ಯಾಕೆ ತಪ್ಪಿಸ್ತಿದ್ದಿ, ವಸಂತ್ ಕಾಲೇಜಲ್ಲಿ ಕಂಡಾಗ ಬೇರೆ ಕಾರಿಡಾರಿಗೆ ನನ್ನನ್ನು ಯಾಕೆ ಎಳ್ದಿದ್ದಿ, ನಿಂಗೆ ಇಷ್ಟು ವರ್ಷಗಳಲ್ಲಿ ಇಲ್ಲದ ಒಂಥರಾ ಗೊಂದಲ, ಗಾಬರಿ ಪರೀಕ್ಷೆಯ ಸಮಯದಲ್ಲಿ ಈ ವರ್ಷ ಯಾಕಿತ್ತು... ಎಲ್ಲ ಅರ್ಥ ಆಗ್ತಾ ಉಂಟು. ನಾಳೆನೇ ನಾನು ಶರತ್ ಹತ್ರ ವಸಂತ್ ನಂಬರ್ ತಗೊಂಡು ಮಾತಾಡ್ತೇನೆ. ಅಂತೂ ಒಳ್ಳೇ ಸೆಲೆಕ್ಷನ್ ಬಿಡು. ಆದ್ರೆ, ಅವ್ರ ಸಬ್ಜೆಕ್ಟ್ ಮಾತ್ರ ನಿನ್ನಿಷ್ಟದ್ದು ಅಲ್ವಲ್ಲ... ಪ್ಚ್...ಪ್ಚ್... ಸ್ಸಾರೀ ಮಾರಾಯ್ತಿ...’ ನಾಟಕೀಯವಾಗಿ ತಲೆಯಾಡಿಸಿದವಳ ಮೇಲೆ ಕೋಪಗೊಳ್ಳುವುದೋ ಪ್ರೀತಿ ಹರಿಸುವುದೋ ತಿಳಿಯದೆ ಸುಮ್ಮನೇ ಕೂತಿದ್ದೆ.

ನಳಿನಿ ಆಂಟಿ ಎದ್ದು ಬಂದ ಶಬ್ದವಾದಾಗ ಒಂದು ಗಂಟೆಯಾದರೂ ಮಲಗೋಣವೆಂದು ಮತ್ತೊಮ್ಮೆ ಮುಸುಕೆಳೆದೆವು. ಮುಂಜಾವು ತನ್ನ ಪಾಡಿಗೆ ತಾನು ಬೆಳಕಾಗುತ್ತಿತ್ತು. ಸಂಜೆ ಸೀರೆಯಂಗಡಿಯಲ್ಲಿ ಯಾವುದೆಲ್ಲ ಬಣ್ಣಗಳನ್ನು ಯಾರ್ಯಾರಿಗ ಆರಿಸಬಹುದೆನ್ನುವ ಕಲ್ಪನೆಯೊಳಗೆ ಸೇರಿಹೋದವಳನ್ನು ನಿದ್ರೆಯೆಂಬ ಮಾಯೆ ಆವರಿಸಿಕೊಂಡಳು. ಎಚ್ಚರಾದಾಗ ಏಳೂವರೆಯ ಮೇಲಾಗಿತ್ತು. ಮುಖದ ಮೇಲೆ ಸುಂದರ ಮಂದಹಾಸ ಹರಿಬಿಟ್ಟ ನೇಹಾ ಇನ್ನೂ ಮಲಗೇ ಇದ್ದಳು. ನಡುಮನೆಗೆ ಬಂದಾಗ ಅಲ್ಲಾಗಲೇ ಹರ್ಷಣ್ಣ ನಗುತ್ತಿದ್ದ.
‘ಗುಡ್ ಮಾರ್ನಿಂಗ್ ಗೊಂಬೇ’ ಅಂದ.
‘ನಿನ್ನ ನಿಜವಾದ ಗೊಂಬೆ ಇನ್ನೂ ಮಲ್ಕೊಂಡೇ ಉಂಟು ಮಾರಾಯ. ಎಬ್ಬಿಸ್ಬೇಕಾ?’
‘ಬೇಡ, ನಿಮಗಿಬ್ಬರಿಗೂ ನಿಮ್ಮ ಜನ್ಮದಿನದ ಶುಭಾಶಯಗಳನ್ನು ಖುದ್ದಾಗಿ ಹೇಳುವಾಂತ ಬಾಂಬೆಯಿಂದ ಬಂದೆ. ಇಬ್ಬರೂ ಇಲ್ಲೇ ಸಿಕ್ಕಿದ್ದು ಫ಼ಸ್ಟ್ ಕ್ಲಾಸ್ ಆಯ್ತು. ಹ್ಯಾಪ್ಪಿ ಬರ್ತ್ ಡೇ ಮೈ ಡಿಯರ್.’
‘....’ ನನಗೆ ನೆನಪಿರುವ ಇಷ್ಟು ವರ್ಷಗಳಲ್ಲಿ ಇದೇ ಮೊದಲ ಸಲ ನಮ್ಮ ಜನ್ಮದಿನ ನಮ್ಮ ನೆನಪಿಂದ ಮರೆಯಾಗಿತ್ತು. ಪ್ರೇಮದ ಪರಿ ಹೀಗೇ ಏನು? ಸುಮ್ಮನೆ ಪೆಚ್ಚುಪೆಚ್ಚಾಗಿ ನಕ್ಕು ಬಚ್ಚಲುಮನೆಗೆ ಸಾಗಿ ಮುಖ ತೊಳೆದು ಬಂದೆ. ನಳಿನಿ ಆಂಟಿ ಹರ್ಷಣ್ಣ, ಸುಮುಖ್ ಅಂಕಲ್, ಮತ್ತು ನನಗೆ ಕಾಫಿ ತಂದಿತ್ತರು. ರಾಜಕುಮಾರಿಯ ಮುಖದರ್ಶನವಾಗಿರಲಿಲ್ಲ ಇನ್ನೂ.

Monday 4 April, 2011

ಸುಮ್ಮನೆ ನೋಡಿದಾಗ...೨೦

“ಸಹೃದಯರಿಗೆಲ್ಲ ಚಾಂದ್ರ ಯುಗಾದಿಯ ಸಂದರ್ಭದಲ್ಲಿ ಶುಭ ಹಾರೈಕೆಗಳು. ಜೀವನ ಸುಂದರವಾಗಿರಲಿ”

‘ಅಮ್ಮ, ನೀವು ಸಸ್ಪೆನ್ಸ್ ಶುರು ಮಾಡುದೇನೂ ಬೇಡ. ಶಿಶಿರಾ ನನ್ನ ತಂಗಿಯ ಹಾಗೆ. ಚಿಕ್ಕತ್ತೆ ಅಂತ ಅವಳಮ್ಮನನ್ನು ಕರೀತಿದ್ರೂ ಶಿಶಿರಾನ್ನು ಆ ದೃಷ್ಟಿಯಿಂದ ನೋಡಿದ್ದೇ ಇಲ್ಲ ನಾನು. ಆದ್ದರಿಂದ ಯಾವುದೇ ಗೊಂದಲ ಬೇಡ. ಇನ್ನು, ನೇಹಾ ಇದಕ್ಕೆ ಸಂಪೂರ್ಣ ಒಪ್ಪಿಗೆ ಕೊಡ್ತಾಳಾ ಕೇಳ್ಬೇಕು. ಬೇರೆಯವರಿಗೋಸ್ಕರ ಅವಳು ಒಪ್ಪುದೇನೂ ಬೇಡ. ಏನ್ ಹೇಳ್ತೀರಿ ಅಂಕಲ್?’ ಹರ್ಷಣ್ಣ ಖಡಾಖಂಡಿತವಾಗಿ ಹೇಳಿದಾಗ ಅಡುಗೆಮನೆಯಲ್ಲೇ ಕೆಂಪಾದ ನೇಹಾಳ ಕೆನ್ನೆಯನ್ನು ಸವರಿದೆ. ಸುಮ್ಮನೇ ನನ್ನ ಕೈ ಗಟ್ಟಿಯಾಗಿ ಹಿಡಿದು ನಿಂತವಳ ಹಿಂದೆ ಸುಮುಖ್ ಅಂಕಲ್ ನೆರಳಾದರು. ಅವರ ಕಣ್ಣುಗಳ ಪ್ರಶ್ನೆಗೆ ನೇಹಾ, ‘ಯೆಸ್ ಪಪ್ಪಾ’ ಎಂದಷ್ಟೇ ಉಸುರಿದಳು. ನಡುಮನೆಯಲ್ಲಿ ನಗೆ ಹೊನಲಾಯಿತು. ಎರಡು ಹೃದಯಗಳ ಹಾಡುಗಳು ಲಯಗತಿಯ ತಾದಾತ್ಮ್ಯ ಪಡೆದವು.

ಫೆಬ್ರವರಿ, ಮಾರ್ಚ್ ಹೇಗೋ ಕಳೆದವು. ಏಪ್ರಿಲಿನ ದಿನಗಳಲ್ಲಿ ಪರೀಕ್ಷೆಯ ನೆಪದಲ್ಲಿ ಎಲ್ಲವನ್ನೂ ಮರೆತಂತೆ ನಾವಿದ್ದರೂ ನಮ್ಮೊಳಗೆ ಇನ್ನೊಂದೊಂದು ಮೆಲ್ಲುಸಿರು ಸುಳಿಯುತ್ತಿದ್ದುದು ನಮನಮಗೇ ಗೊತ್ತು. ನೇಹಾಳಿಗಿನ್ನೂ ನನ್ನ ಹೃದಯದೊಳಗಿನ ಕಳ್ಳನ ಪತ್ತೆಯಾಗಿರಲಿಲ್ಲ. ಲ್ಯಾಬ್ ಪರೀಕ್ಷೆಗಳು ಹತ್ತಿರಾದಾಗ ಒಂದು ರಾತ್ರಿ ಇದ್ದಕ್ಕಿದ್ದಂತೆ ನಮ್ಮ ಕೆಮಿಸ್ಟ್ರಿ ಲ್ಯಾಬಿಗೆ ವಸಂತ್ ಹೊರ ಪರೀಕ್ಷಕರಾಗಿ ಬಂದರೆಂದು ಕನಸು ಬಿದ್ದು ಗಾಬರಿಯಿಂದ ಎದ್ದು ಕುಳಿತಿದ್ದೆ. ಲ್ಯಾಬ್ ಪರೀಕ್ಷೆಗಳಿಗೆ ಇನ್ನೊಂದು ವಾರವಿದೆ ಅನ್ನುವಾಗ ನನ್ನ ದಿಗಿಲು ನೇಹಾಳ ಕಣ್ಣುಗಳಿಗೆ ಬಿತ್ತು. ಎಂದೂ ಪರೀಕ್ಷೆಯ ಬಗ್ಗೆ ತಲೆಕೆಡಿಸಿಕೊಂಡಿರದ ನನ್ನ ಆತಂಕ ಅವಳಿಗೆ ಅಚ್ಚರಿ ಮೂಡಿಸಿತು. ನನ್ನೊಳಗನ್ನು ಈಗಲೇ ಬಿಚ್ಚಿಡಲು ನಾನೇನೂ ತಯಾರಿರಲಿಲ್ಲ. ಎಮ್.ಎಸ್ಸಿ. ಮಾಡಬೇಕಿತ್ತು. ಕೆಲಸಕ್ಕೆ ಸೇರಬೇಕಿತ್ತು. ನನ್ನ ನೆಲೆ ನಾನು ಕಂಡುಕೊಳ್ಳಬೇಕಿತ್ತು. ಅದಕ್ಕೆ ಮೊದಲೇ ಇನ್ನೊಂದು ದೋಣಿಯೊಳಗೆ ಹೆಜ್ಜೆಯಿಟ್ಟು ಅಮ್ಮನ ದೃಷ್ಟಿಯಲ್ಲಿ ಕೀಳಾಗಲು ಸಾಧ್ಯವಿರಲಿಲ್ಲ.

ಮನೆಯಲ್ಲಿ ಅಮ್ಮನ ಅವ್ಯಾಹತ ಕಿರಿಕಿರಿ ನಿರಂಕುಶವಾಗಿ ಸಾಗುತ್ತಿತ್ತು. ಕೇಳಿಯೂ ಕೇಳಿಸಿಕೊಳ್ಳದ ದಪ್ಪ ಚರ್ಮ ಕಷ್ಟಪಟ್ಟು ಬೆಳೆಸಿಕೊಂಡಿದ್ದೆ. ಆದರೂ ಒಂದೊಂದು ಬೆಳಗು ಯಾಕಾದರೂ ಏಳಬೇಕೋ ಅನಿಸುವಂತಿರುತ್ತಿತ್ತು. ಈಗ ಅಮ್ಮನ ರಾಗ ನನ್ನ ಮದುವೆಯ ಸುತ್ತಲೇ ಗಾಣಹಾಕುತ್ತಿತ್ತು. ಹರ್ಷನಂಥ ಅತ್ಯುತ್ತಮ ಹುಡುಗನನ್ನು ನಾನೇ ನೇಹಾಳಿಗೆ ಬಿಟ್ಟುಕೊಟ್ಟೆ ಅನ್ನುವ ರೀತಿಯಲ್ಲಿ ಮಾತಾಡುತ್ತಿದ್ದರು. ನೇಹಾಳೂ ತನ್ನ ಮಗಳೇ ಅನ್ನುವುದನ್ನು ಈ ತಾಯಿ ಅದು ಹೇಗೆ ಮರೆತಳು? ನನಗರ್ಥವಾಗಲಿಲ್ಲ.

ಲ್ಯಾಬ್ ಪರೀಕ್ಷೆಗಳಲ್ಲಿ ನಾವಿಬ್ಬರೂ ಚೆನ್ನಾಗೇ ಮಾಡಿದೆವು. ವಸಂತ್ ನಮ್ಮ ಕಾಲೇಜಿಗೆ ಬಂದಿದ್ದರಾದರೂ ನಮ್ಮ ಗುಂಪಿಗೆ ಪರೀಕ್ಷಕರಾಗಲಿಲ್ಲ, ಅವರ ಕಸಿನ್ ಶರತ್ ನಮ್ಮ ಗುಂಪಿನಲ್ಲಿದ್ದ ಅನ್ನುವ ಕಾರಣಕ್ಕೆ ಅವರನ್ನು ನಮ್ಮ ಗುಂಪಿನಿಂದ ದೂರವಿಟ್ಟಿದ್ದರು. ನನಗದು ವರವೇ ಆಯ್ತು.

ಎಲ್ಲ ಪರೀಕ್ಷೆಗಳೂ ಮುಗಿದು ಮೇ ತಿಂಗಳ ಮಧ್ಯಭಾಗದಲ್ಲಿ ಆಕಾಶ ಕಪ್ಪಿಡದೇ ಗುಡುಗಿದ ಒಂದು ಸಂಜೆ, ಸರೋಜಾ ಆಂಟಿ ನಮ್ಮನೆಗೆ ಬಂದರು. ಅವರಿಲ್ಲಿಗೆ ಬರುತ್ತಿದ್ದುದೆ ಅಪರೂಪ.
ನೇರವಾಗಿ ನನ್ನ ಕಡೆಗೇ ನೋಡುತ್ತಾ, ‘ನಾಳೆ ಸಂಜೆ ಸೀರೆ ತೆಗೊಳ್ಳಿಕ್ಕೆ ಹೋಗ್ಬೇಕು. ಶಿಶಿರಾ, ನೀನೂ ಬರ್ಬೇಕು ನಮ್ಮೊಟ್ಟಿಗೆ. ನೇಹಾ ಬರ್ತಾಳೆ. ಹಾಗೇ ಹರಿಣಿ, ನಳಿನಿ ಕೂಡಾ. ನಾವು ಐದು ಜನ ಹೋಗಿ ಬರುವಾ. ಶ್ರಿಯಾಲಂಕಾರ್ ದೊಡ್ಡ ಅಂಗಡಿಯಲ್ವ. ಅಲ್ಲಿಗೇ ಹೋಗುವಾ. ಸಂಜೆ ನಾಲ್ಕು ಗಂಟೆಗೆ ನಳಿನಿ ಮನೆ ಹತ್ರ ಸೇರುವಾ. ಹ್ಙಾ ಹ್ಙೂ ಏನೂ ಹೇಳ್ಳಿಕ್ಕಿಲ್ಲ. ಸುಮ್ಮನೇ ಬರ್ಬೇಕು, ಅಷ್ಟೇ’ ಅಂದರು.
ನಾನು ಅಮ್ಮನ ಮುಖ ನೋಡಿದೆ. ‘ಬರ್ತೇವೆ ಅತ್ತಿಗೆ’ ಅಂದರು ಅಮ್ಮ, ಇವರು ಹೊರಟು ನಿಂತರು. ಅವರ ಜೊತೆಗೇ ನಾನೂ ಹೊರಟೆ, ನೇಹಾ ಮನೆತನಕ ಹೋಗುವ ನೆಪದಲ್ಲಿ.

ದಾರಿಯಲ್ಲಿ ಸರೋಜ ಆಂಟಿ ಅಚಾನಕ್ ಕೇಳಿದರು, ‘ಈಗೀಗ ಅಮ್ಮನ ಮೂಡ್ ಹೇಗುಂಟಾ?’
‘ಯಾವಾಗಿನ ಹಾಗೇ. ವ್ಯತ್ಯಾಸ ಏನಿಲ್ಲ. ಯಾಕೆ ಆಂಟಿ?’
‘ಹ್ಮ್, ಕೇಳಿದೆ, ಸುಮ್ನೆ...’
‘....’
‘ಅವಳು ಯಾಕೆ ಯಾವಾಗ ಅಷ್ಟು ಸಿಡುಕಿಯಾಗಿದ್ದು ಗೊತ್ತುಂಟಾ ನಿಂಗೆ?’
‘ಇಲ್ಲ’ ನನ್ನ ಕೊರೆಯುತ್ತಿದ್ದ ಪ್ರಶ್ನೆಗೆ ಇವತ್ತು ಉತ್ತರ ಸಿಕ್ಕೀತಾ?
‘ತಿಳ್ಕೊಳ್ಬೇಕಾ ನಿಂಗೆ?’
‘ಹೌದು’
‘ವಿನ್ಯಾಸ್ ಅದ್ಕೆ ಕಾರಣ ಅಂದ್ರೆ ನಂಬ್ತೀಯಾ?’
‘ಹ್ಮ್...’ ನನ್ನ ಊಹೆ ಸರಿಯಾಗಿಯೇ ಇತ್ತು. ನಳಿನಿ ಆಂಟಿ ಅಮ್ಮನ ಕಥೆ ಹೇಳಿದ ಮೇಲೆ ಅದನ್ನೇ ಊಹಿಸಿದ್ದೆ.
‘ನಮ್ಮ ಅಕಳಂಕ ಮನೆಯ ಔಟ್ ಹೌಸಿನಲ್ಲಿ ಬಾಡಿಗೆಗೆ ಅಂತ ಅಮ್ಮ ನಿನ್ನನ್ನು ಎತ್ತಿಕೊಂಡು ಲಚ್ಚಮ್ಮನ ಒಟ್ಟಿಗೆ ಬಂದಾಗ ನಿನ್ನಮ್ಮನ ಕಥೆ ಹಿನ್ನೆಲೆ ಗೊತ್ತಿರ್ಲಿಲ್ಲ. ಆದ್ರೆ ನನ್ನಮ್ಮ ಆಗಾಗ ವಿನ್ಯಾಸ್ ಯಾರೋ ಹುಡುಗಿಗೆ ಮೋಸ ಮಾಡಿದ ಅಂತ ಹೇಳ್ತಿದ್ದಳು. ಅದು ಹೇಗೋ ನೀವು ನಮ್ಮಲ್ಲಿ ಬಾಡಿಗೆಗೆ ಇದ್ದ ವಿಷಯ ಅವನಿಗೆ ಗೊತ್ತಾಗಿ ಪದೇ ಪದೇ ಕಾಗದ ಬರೀಲಿಕ್ಕೆ ಶುರುಮಾಡಿದ. ಮನೆಗೆ ಬರ್ಲಿಕ್ಕೆ ಅವ್ನಿಗೆ ಧೈರ್ಯ ಇರ್ಲಿಲ್ಲ. ನನ್ನ ಗಂಡನಿಗೆ ಹೆದರ್ತಿದ್ದ. ಒಮ್ಮೆ ಅವಳು ಕೆಲ್ಸ ಮಾಡ್ತಿದ್ದ ಶಾಲೆಗೂ ಹೋಗಿ ಅಲ್ಲಿ ಗಲಾಟೆ ಮಾಡಿದ್ನಂತೆ, ಮಕ್ಕಳನ್ನು ಕೊಡು ಅಂತ. ಈ ನಿನ್ನಮ್ಮ ಗಟ್ಟಿಗಳು. ಕೊಡುದಿಲ್ಲ ಅಂದಿದ್ದಾಳೆ. ಅಷ್ಟಕ್ಕೇ ಅವ್ನು ಊರೆಲ್ಲ ಕಥೆ ಹಬ್ಬಿಸಿದ್ದಾನೆ, ನಿನ್ನಮ್ಮ ಸೂಳೆ. ಯಾರಿಗೋ ಹುಟ್ಟಿದ ಮಕ್ಕಳನ್ನು ತನ್ನ ತಲೆಗೆ ಕಟ್ಲಿಕ್ಕೆ ನೋಡಿದ್ದಾಳೆ ಅಂತೆಲ್ಲ ಸಾರಿದ. ಆಗಲೇ ಲಚ್ಚಮ್ಮನೂ ಯಾವುದೋ ತಿಳಿಯದ ಕಾಯಿಲೆ ಬಂದು ತೀರಿಕೊಂಡ್ರು. ಊರಲ್ಲಿ ನಿನ್ನಜ್ಜಿಯೂ ತೀರಿದರು. ಎಲ್ಲ ಒಂದರ ಮೇಲೆ ಒಂದು ಪೆಟ್ಟು ಬಿದ್ದಾಗ ಹರಿಣಿ ಕಂಗಾಲಾದ್ಲು. ಆಗ ನಿಂಗೆ ಒಂದೂವರೆ ವರ್ಷ. ಆಗಲೇ ಅವ್ಳು ಒಂಥರಾ ಬಿಸಿ ಮಾತಾಡ್ಲಿಕ್ಕೆ ಶುರು ಮಾಡಿದ್ದು. ಅಷ್ಟಕ್ಕೇ ಅವ್ಳನ್ನು ಶಾಲೆಯ ಕೆಲಸದಿಂದಲೂ ತೆಗೆದುಹಾಕಿದ್ರು. ಮತ್ತಷ್ಟು ತಲೆಕೆಟ್ಟಿತು.

ಆಗೆಲ್ಲ ನಿನ್ನನ್ನು ನಾನೇ ನೋಡಿಕೊಂಡಿದ್ದೆ. ಅಮ್ಮನನ್ನು ನಳಿನಿ ಮತ್ತು ಸುಮುಖ್ ಜೋಪಾನ ಮಾಡಿದ್ರು. ಅವಳಿಗೇನಾದ್ರೂ ಆದ್ರೆ ನಿನ್ನನ್ನು ನಾನೇ ಸಾಕಬೇಕೂಂತಲೂ ಇದ್ದೆ ಮಾರಾಯ್ತಿ. ಅಷ್ಟರಲ್ಲೇ, ನಿಂಗೆ ನಾಲ್ಕು ವರ್ಷ ಆಗುವ ಹೊತ್ತಿಗೆ ಹರಿಣಿ ಉಷಾರಾದ್ಲು. ಬೇರೆ ಊರಿಗೆ ಹೊರಟೇಹೋದ್ಲು. ಎಲ್ಲಿ ಏನು ಅಂತ ನಂಗೆ ಗೊತ್ತಾಗ್ಲೇ ಇಲ್ಲ. ಮತ್ತೆ ನೀವು ಇಲ್ಲಿಗೆ ಬಂದದ್ದು ನೀನು ಬಿ.ಎಸ್ಸಿ. ಸೇರಿದಾಗ. ನಡುವೆ ಕೆಲವಾರು ವರ್ಷ ನಳಿನಿ ನೇಹಾಳನ್ನು ಕಟ್ಟಿಕೊಂಡು ನಿಮ್ಮೊಟ್ಟಿಗೇ ಇದ್ಲಲ್ಲ. ಅದು ನಿಮ್ಮಿಬ್ರ ಅದೃಷ್ಟ. ನೀನು ಮತ್ತು ನೇಹಾ ಇಷ್ಟು ಗಾಢ ಸ್ನೇಹಿತೆಯರಾಗ್ಲಿಕ್ಕೆ ನಳಿನಿಯೇ ಕಾರಣ. ನಳಿನಿ ಸುಮುಖ್ ದಂಪತಿ ದೇವತೆಗಳ ಹಾಗೆ, ಏನಂತೀ?’

‘ಹ್ಮ್’ಗುಟ್ಟುತ್ತಾ ನಳಿನಿ ಆಂಟಿಯ ಗೇಟಿನ ಮುಂದೆ ನಿಂತೆ. ಜಾಜಿ ಚಪ್ಪರದಡಿಯಲ್ಲಿ ಹೊಂಗನಸು ಹೆಣೆಯುತ್ತಲೋ ಹೆಕ್ಕುತ್ತಲೋ ಸುಳಿದಾಡುತ್ತಿದ್ದ ನೇಹಾ ಗೇಟಿಗೆ ಓಡಿ ಬಂದವಳು ಸರೋಜಾಂಟಿಯನ್ನು ಕಂಡು ಗೇಟಿನಾಚೆಯೇ ನಿಂತಳು. ಸರೋಜಾಂಟಿ ಗೇಟ್ ದೂಡಿ ಒಳಹೋದರು, ನಳಿನಿ ಆಂಟಿಗೆ ನಾಳೆ ಸಂಜೆಯ ಕಾರ್ಯಕ್ರಮದ ವಿವರ ಒಪ್ಪಿಸಲು. ನೇಹಾಳಿಗೆ ನನ್ನ ಕಥನ ಕತ್ತಲಾಗುವವರೆಗೂ ಸಾಗಿತು ಜಾಜಿ ಚಪ್ಪರದೊಳಗೆ.