ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 21 February, 2011

ಸುಮ್ಮನೆ ನೋಡಿದಾಗ...೧೬

ಬಾಗಿಲಲ್ಲಿ ನೆರಳು ಹಾದ ಹಾಗೆ ಅನ್ನಿಸಿ ಎದ್ದು ಬಂದರೆ ಒಮ್ಮೆಲೇ ಅಳಬೇಕೆನ್ನಿಸಿತು. ಹರ್ಷಣ್ಣ ನಿಂತಿದ್ದ.

ನನ್ನ ಮುಖ ಕಣ್ಣುಗಳ ಗಾಬರಿ ಅವನನ್ನು ತಟ್ಟಿತೆ? ನೇರವಾಗಿ ಒಳಗೆ ಬಂದವನು ಸುಮ್ಮನೇ ನನ್ನ ತಲೆ ನೇವರಿಸಿದ. ‘ಶ್ಶ್...!’
ಇವನಿಗೆ ಹೇಗೆ ಗೊತ್ತು ನನ್ನ ತಳಮಳ, ದುಗುಡ? ಅವನ ಸಾಂತ್ವನ ಮಾತ್ರ ನನಗಾಗಿಯೇ ಅವತರಿಸಿದ್ದು.

‘ಚಿಕ್ಕತ್ತೇ...’ ಅಮ್ಮನ ಕೋಣೆಯ ಬಾಗಿಲು ತಟ್ಟುತ್ತಾ ಕರೆದ ದನಿಯಲ್ಲಿ ಮೃದುತ್ವದ ಜೊತೆಗೇ ಘನತೆಯೂ ಇದ್ದದ್ದು ಹೇಗೆ?
ಒಂದೇ ಕ್ಷಣ. ದೇವರಿಗೆ ಧನ್ಯವಾದ ಅರ್ಪಿಸುತ್ತಿದ್ದೆ. ‘ನೀನ್ಯಾವಾಗ ಬಂದದ್ದು ಮಾರಾಯ?’ ಅಮ್ಮ ನಗುತ್ತಿದ್ದರು, ಕೆಂಪುಕಣ್ಣುಗಳನ್ನು ಮರೆಸುತ್ತಾ. ನೆಮ್ಮದಿಯ ಹನಿಗಳನ್ನು ಅಂಗಳಕ್ಕೇ ಉದುರಿಸಲು ಹೊರಗೋಡಿದೆ. ಓಣಿ ತುದಿಯಲ್ಲಿ ನೇಹಾ! ಅವಳ ಹಿಂದೆಯೇ ಸುಮುಖ್ ಅಂಕಲ್ ಮತ್ತು ನಳಿನಿ ಆಂಟಿ. ಎಲ್ಲ ದೇವತೆಗಳೂ ಇವತ್ತು ನನ್ನ ಮೇಲೆ ಪ್ರಸನ್ನರಾದದ್ದು ಹೇಗೆ? ಎಂದೂ ಇಲ್ಲದ ಖುಷಿ ಮನೆಯಲ್ಲಿ ತುಂಬಿಕೊಂಡಿತು.

‘ಅಕಳಂಕ’ ಮನೆಯಲ್ಲಿ ನಾವು ಬಾಡಿಗೆಗೆ ಇದ್ದಾಗ... ಇಪ್ಪತ್ತು ವರ್ಷಗಳ ಹಿಂದಿನ ನಂಟಿನ ಈ ಹರ್ಷಣ್ಣ... ನಮ್ಮ ಮೂಲಕವೇ ಅವನ ಪರಿಚಯವಾಗಿದ್ದ ನಳಿನಿ ಆಂಟಿ, ಸುಮುಖ್ ಅಂಕಲ್ ಈಗ ಅವನನ್ನಿಲ್ಲಿ ನೋಡಿ ಅಚ್ಚರಿಯಿಂದ ಖುಷಿಪಟ್ಟರು. ಸೂಕ್ಷ್ಮ ಮನದ ನಳಿನಿ ಆಂಟಿ ಮೊದಲೇ ಯೋಚನೆ ಮಾಡಿ ಹಾಲು ತಗೊಂಡೇ ಬಂದಿದ್ದರಿಂದ ನೇಹಾ ಮತ್ತು ನಾನು ಅಂಗಡಿಗೆ ಓಡುವುದು ತಪ್ಪಿತಾದರೂ ನೇಹಾಳಿಗೆ ನನ್ನ ಮೊದಲ ಕಥೆಯ ಹಿನ್ನೆಲೆ ಹೇಳುವ ಅವಕಾಶ ಇಲ್ಲವಾದ್ದಕ್ಕೆ ಒಂದಿಷ್ಟು ಖೇದ ನನ್ನೊಳಗೆ. ಇದನ್ನೇ ಗ್ರಹಿಸಿದಳೋ ಅನ್ನುವಂತೆ ನೇಹಾ, ‘ಶಿಶಿರಾ, ನಿನ್ ಹತ್ರ ಏನೋ ಕೇಳ್ಬೇಕು, ಬಾ ರೂಮಿಗೆ...’ ಅಂತ ನನ್ನ ರೂಮಿಗೆ ಎಳೆದು ಬಾಗಿಲು ಹಾಕಿಕೊಂಡಳು.

ಕಥೆಯ ಹಿನ್ನೆಲೆ ಮತ್ತು ಅವಳನ್ನು ಕರೆದ ಹಿನ್ನೆಲೆಯನ್ನೂ ತಿಳಿಸಿದೆ.
‘ಏನಾಗ್ತಾ ಉಂಟು ಒಳಗೆ?’ ಹರ್ಷಣ್ಣ ಬಾಗಿಲು ಕೆರೆದ.
‘ಬಂದೆವು...’ ಉತ್ತರಿಸಿದೆ, ಸ್ವರ ನಡುಗದ ಹಾಗೆ ಜಾಗ್ರತೆವಹಿಸುತ್ತಾ.
‘ಹೀಗೇ ಏನಾದ್ರೂ ಆಗಿರ್ಬಹುದು, ಅದ್ಕೇ ನೀನು ನನ್ನನ್ನು ಕರ್ದದ್ದು ಅಂತ ಅಮ್ಮ ಹೇಳಿದ್ದಕ್ಕೆ ನಾವು ಮೂವರೂ ಬಂದದ್ದು’ ಅಂದಳು ನೇಹಾ. ನಳಿನಿ ಆಂಟಿಗೆ ಮತ್ತೊಮ್ಮೆ ಮನದಲ್ಲೇ ವಂದಿಸಿದೆ.

ಮತ್ತೊಮ್ಮೆ ಬಾಗಿಲ ಮೇಲೆ ಬೆರಳುಗಳ ನಾಟ್ಯ, ಮೊದಲಿನದಕ್ಕಿಂತ ಭಿನ್ನವಾಗಿ. ‘ಅಂಕಲ್...’ ‘ಪಪ್ಪಾ...’ ಇಬ್ಬರೂ ಒಟ್ಟಿಗೇ ರಾಗ ಎಳೆದೆವು. ಗಲಗಲನಗು ಅತ್ತಲಿಂದ ಉತ್ತರಿಸಿತು. ಬಾಗಿಲೂ ಮೌನ ಮುರಿಯಿತು. ನಡುಮನೆಯಲ್ಲಿ ಸೋಫಾದಲ್ಲಿ ಹರ್ಷಣ್ಣ ನಮ್ಮತ್ತಲೇ ನೋಡತ್ತಿದ್ದ. ಅಚಾನಕ್ ನೇಹಾಳ ಕಡೆ ನೋಡಿದೆ, ಅವಳ ನೋಟ ನೆಲವನ್ನು ಕೆಣಕುತ್ತಿತ್ತು. ಸೊಂಟಕ್ಕೆ ತಿವಿದೆ. ಅಡುಗೆಮನೆಗೆ ಬೀಸುಹೆಜ್ಜೆ ಹಾಕಿದಳು. ಹಿಂಬಾಲಿಸಿದ್ದು ನಾನೊಬ್ಬಳೇ ಅಲ್ಲವೆನ್ನುವುದು ನಮ್ಮಿಬ್ಬರಿಗೂ ಗೊತ್ತು.

ಒಳಗೆ ಹೋಗುತ್ತಾ ಸುಮುಖ್ ಅಂಕಲ್ ಕಿವಿಯಲ್ಲಿ ಉಸುರಿದೆ, ‘ನೇಹಾ ಈಸ್ ಕ್ಲೀನ್ ಬೌಲ್ಡ್. ಅಂಕಲ್...’ ‘ಐ ನೋ ಡಿಯರ್...’ ಅಂದರು ತಲೆಯಾಡಿಸುತ್ತಾ. ಎಂದೂ ಇಲ್ಲದ ಸಲಿಗೆಯಲ್ಲಿ ಹರ್ಷಣ್ಣನತ್ತ ನೋಡಿ ಕಣ್ಣು ಮಿಟುಕಿಸಿ ಹುಬ್ಬು ಹಾರಿಸಿದೆ. ಆ ನಗುವನ್ನು ನೇಹಾ ಬಾಗಿಲ ಸಂದಿಯಿಂದ ನೋಡಿದಳೇ? ಅಥವಾ ಅವಳಲ್ಲಿದ್ದಾಳೆಂದೇ ಹರ್ಷಣ್ಣ ಅಂಥಾ ನಗು ನಕ್ಕನೆ? ಯಾರಿಗ್ಗೊತ್ತು?

ಘಳಿಗೆಗಳ ಮೊದಲು ನನ್ನನ್ನು ಆವರಿಸಿಕೊಂಡಿದ್ದ ಗಾಬರಿ, ಭಯ, ಖಿನ್ನತೆಗಳು ಎಲ್ಲಿ ಹಾರಿಹೋದವೆಂದು ಅರಿಯುವ ಕುತೂಹಲವೇ ಇಲ್ಲವಾಯಿತು. ಒರಟು ಬರಡು ಭೂಮಿಯಂತಿದ್ದ ಈ ಮನೆಯೊಳಗೆ ಈಗಷ್ಟೇ ಅರಳುತ್ತಿರುವ ಇನ್ನೊಂದು ಮಾಧುರ್ಯದ ಕಂಪು ನನ್ನೊಳಗಿನ ವಸಂತನನ್ನೂ ಹೊಡೆದೆಬ್ಬಿಸಿತು. ನನ್ನ ಕೆನ್ನೆಗಳನ್ನು ಎಲ್ಲ ಕಣ್ಣುಗಳಿಂದ ಮುಚ್ಚಿಡಲಿ ಹೇಗೆ? ಕಳ್ಳರಂತೆ ನೋಟ ತಪ್ಪಿಸುತ್ತಿದ್ದಾಗ ನೇಹಾ ಮತ್ತು ಹರ್ಷಣ್ಣ ಏಕಕಾಲದಲ್ಲಿ ನನ್ನನ್ನು ಕರೆದದ್ದು ಯಾಕೆ? ಮೂರು ಹಿರಿಯರು ಅಡುಗೆಮನೆಯ ಟೇಬಲ್ ಸುತ್ತ ನಿಂತಿದ್ದರು. ಕಾಫಿ ಕಪ್ ಹಿಡಿದು ನಾವು ಮೂವರು ಟೆರೇಸ್ ಹತ್ತಿದೆವು.

ಆ ಸಂಜೆ ನನ್ನ ಇಪ್ಪತ್ತು ವರ್ಷಗಳ ಜೀವನದ ನೆನಪಿರುವ ದಿನಗಳಲ್ಲೇ ಅತ್ಯಂತ ಸುಂದರ ಸಂಜೆ. ತೆಂಗಿನ ಗರಿಗಳ ನಡುವೆ ಕೆಂಪು-ಕಿತ್ತಳೆ ಚೆಂಡು ಜಾರುತ್ತಾ ಜಾರುತ್ತಾ ಇನ್ನಷ್ಟು ಕೆಂಪಾಗುವುದನ್ನು ಮೂರುಜೋಡಿ ಕಣ್ಣುಗಳ ಒಂದೇ ನೋಟ ಹೀರಿಕೊಳ್ಳುತ್ತಿತ್ತು. ಹರ್ಷಣ್ಣ ಮತ್ತು ನೇಹಾಳ ನಡುವೆ ನಿಂತಿದ್ದ ನಾನು ಯಾವುದೋ ಕ್ಷಣದಲ್ಲಿ ನೇಹಾಳ ಇನ್ನೊಂದು ಬದಿಗೆ ಸರಿದುಕೊಂಡಿದ್ದೆ. ನಾನು ತೆರವು ಮಾಡಿದ್ದ ಜಾಗವನ್ನು ಅದ್ಯಾವುದೋ ಕಂಪು ಅಡರಿಕೊಂಡಿತು. ಕತ್ತಲಮರುವ ಮೊದಲೇ ಅಂಗಳದ ದೀಪ ಹೊತ್ತಿತು. ಕೆಳಗಿಳಿದು ಬಂದೆವು, ಗಂಧರ್ವರಂತೆ ತೇಲುತ್ತಾ.

Tuesday 15 February, 2011

ಸುಮ್ಮನೆ ನೋಡಿದಾಗ...೧೫

ಕಾಲೇಜಲ್ಲಿ ಅದ್ಯಾಕೋ ಶರತ್ ಮತ್ತೆ ಮತ್ತೆ ನನ್ನ ಕಡೆ ನೋಡ್ತಿದ್ದಾನೆ ಅನ್ನುವ ಗುಮಾನಿ ನನ್ನದು. ನಿನ್ನೆ ಪುಸ್ತಕದ ಬದಲು ಅವನ ಕೈಗೆ ಕೊಡೆ ಕೊಟ್ಟದ್ದಕ್ಕಾ? ಗೊತ್ತಿಲ್ಲ. ಅಂತೂ ಶನಿವಾರದ ಲ್ಯಾಬ್ ಮುಗಿಸಿ ಒಂದು ಗಂಟೆಗೆ ಹೊರಗೆ ಬಂದಾಗ ಶರತ್ ಬಾಗಿಲಲ್ಲೇ ಎದುರಾದ.
‘ಏನು?’ ಕೇಳಿದವಳು ನೇಹಾ.
‘ಏನಿಲ್ಲ, ನಂಗೆ ಶಿಶಿರನ ನೋಟ್ಸ್ ಮತ್ತೊಮ್ಮೆ ಬೇಕು. ನಿನ್ನೆ ಪೂರ್ತಿ ಬರ್ಕೊಳ್ಳಿಲ್ಲ. ನಾಳೆ ಆದಿತ್ಯವಾರ. ಮನೆಯಲ್ಲಿ ಕೂತು ಎಲ್ಲ ಬರ್ದು ಸೋಮವಾರ ಹಿಂದೆ ತರ್ತೇನೆ. ಪ್ಲೀಸ್, ಕೊಡ್ತೀರ ಶಿಶಿರಾ?’
‘ಯಾಕೆ? ನನ್ನ ನೋಟ್ಸ್ ಆಗುದಿಲ್ವಾ?’ ನೇಹಾ ಕುಟುಕಿದಳು.
‘ನಿನ್ನೆ ನೀವು ಸಿಗ್ಲಿಲ್ಲ. ಇವ್ರ ನೋಟ್ಸ್ ತಗೊಂಡಿದ್ದೆ. ಅರ್ಧ ಬರ್ದಿದ್ದೇನೆ. ಅದ್ಕೇ ಇವತ್ತು ಕೂಡಾ ಇವ್ರದ್ದೇ ಬೇಕು.’
‘ಏ, ಸುಮ್ನಿರು ಮಾರಾಯ್ತಿ... ತಗೊಳ್ಳಿ ಶರತ್. ಸೋಮವಾರ ಮಾತ್ರ ಖಂಡಿತಾ ತನ್ನಿ.’
ವ್ಯಾಜ್ಯ ಕೊನೆಗೊಂಡಿತು. ಇಬ್ಬರೂ ಮನೆ ದಾರಿ ಹಿಡಿದೆವು.
‘ನಿನ್ನಮ್ಮ ನಮ್ಮನೆಯಲ್ಲೇ ಇರ್ಬಹುದಾ?’
‘ಇರ್ಬಹುದು. ನಳಿನಿ ಆಂಟಿ ಅವ್ರನ್ನು ಇವತ್ತು ಸುಲಭಕ್ಕೆ ಬಿಡುದಿಲ್ಲ, ನೋಡು.’
‘ನನ್ನಮ್ಮ ನಂಗಿಂತ ಹೆಚ್ಚು ನಿಂಗೇ ಗೊತ್ತು, ಅಲ್ವಾ?’
‘ಹೌದು, ನನ್ನ ಜೀವನದ ಅರ್ಧ ಸಮಯ ನಿನ್ನಮ್ಮನ ನೆರಳಲ್ಲಿ ಕಳ್ದಿದ್ದೇನೆ, ಅಲ್ವಾ?’

ಹರಟೆಗಳಲ್ಲಿ ದಾರಿ ಚಿಕ್ಕದಾಗಿಬಿಟ್ಟಿತು. ಮನೆಗೆ ಬಂದಾಗ ಗೆಳತಿಯರ ಸಣ್ಣ ನಗು ತೇಲಿ ಬಂತು. ಅಮ್ಮ ಸಮಾಧಾನವಾಗಿದ್ದಾರೆ ಅನ್ನುವ ಯೋಚನೆಯೇ ಖುಷಿ ಕೊಟ್ಟಿತು. ಅವರಿಬ್ಬರ ನಗುವಿನ ಹಿಂದೆಯೇ ಸುಮುಖ್ ಅಂಕಲ್ ಅಬ್ಬರದ ನಗು ಹಾರಿಸುತ್ತಾ ಇದ್ದದ್ದು ಕೇಳಿ ನಾವಿಬ್ಬರೂ ಮುಖ-ಮುಖ ನೋಡಿಕೊಂಡೆವು.
‘ಪಪ್ಪಾ...’ ನೇಹಾ ಚಿಗರೆಯ ಹಾಗೆ ಒಳಗೋಡಿದಳು. ಎಷ್ಟೋ ದಿನಗಳಿಂದ ಕಾಣದವರನ್ನು ಅಚಾನಕ್ ಕಂಡ ಹಾಗೆ ಪಪ್ಪನ ಕುತ್ತಿಗೆಗೆ ಜೋತುಬಿದ್ದಳು. ಅದ್ಯಾಕೋ ವಿನ್ಯಾಸ್ ಸತ್ತ ಹಿನ್ನೆಲೆಯಲ್ಲಿ ಈ ಪ್ರೀತಿ ಮತ್ತಷ್ಟು ಆಪ್ತವಾಗಿ ಕಂಡಿತು. ಅಂಕಲ್ ನನ್ನ ಕಡೆಗೂ ಕೈ ಚಾಚಿ, ‘ಬಾ ಮಗಳೇ...’ ಅಂದರು. ಸೋಫಾದಲ್ಲಿ ಅವರ ಬದಿಗೇ ಸರಿದು ಕೂತೆ. ಇಬ್ಬದಿಗಳಲ್ಲಿ ಇಬ್ಬರು ಮಕ್ಕಳು. ಅಮ್ಮನ ಕಣ್ಣುಗಳು ಮಂಜಾದವೆ? ನನ್ನ ಕಣ್ಣುಗಳಾ?

ಊಟ ಅಲ್ಲೇ ಮುಗಿಸಿ ಬಿಸಿಲಲ್ಲೇ ನಮ್ಮ ಮನೆಗೆ ಹೊರಟಾಗ ಅಮ್ಮ ನೆಲದಲ್ಲಿ ಕಲ್ಲು ಲೆಕ್ಕ ಮಾಡ್ತಾ ನಡೀತಿದ್ರಾ ಹೇಗೆ? ಮಾತುಗಳನ್ನೆಲ್ಲ ಅಲ್ಲೇ ಬಿಟ್ಟು ಬಂದಿದ್ರಾ? ನಮ್ಮ ಗೇಟಿನ ಕಿರ್ರ್ ಶಬ್ದ ಅವರಿಗೆ ಕಿರಿಕಿರಿ ಮಾಡಿರಬೇಕು...
‘ಶಿಶಿರಾ, ನಳಿನಿ ನಿಮ್ಗೆ ಎಲ್ಲ ಹೇಳಿದ್ದಾಳಂತಲ್ಲ. ಅದನ್ನು ಬೆಳಿಗ್ಗೆ ನಂಗೆ ಯಾಕೆ ತಿಳಿಸ್ಲಿಲ್ಲ?’ ಎಂದೂ ಇಲ್ಲದ ಶಾಂತಿ ಅಮ್ಮನ ಮಾತಲ್ಲಿ.
‘ನಿಮ್ಗೆ ಹೇಗೆ ಹೇಳ್ಬೇಕೂಂತ ಗೊತ್ತಾಗ್ಲಿಲ್ಲ, ಸಾರಿ ಅಮ್ಮ.’
‘ಮತ್ತೆ, ನಿನ್ನೆ ಸುಮುಖ್ ಇದ್ರಾ ನಿಮ್ಗೆ ಇವೆಲ್ಲ ಗೊತ್ತಾಗುವಾಗ? ಅವ್ರು ಏನ್ ಹೇಳಿದ್ರು?’
‘ಇಲ್ಲಮ್ಮ, ಅಂಕಲ್ ಇರ್ಲಿಲ್ಲ. ಆದ್ರೆ ಅಂಕಲ್‌ಗೆ ಗೊತ್ತುಂಟು. ಅದ್ಯಾವ ಘಳಿಗೆಯಲ್ಲೋ ಆಂಟಿ ಅವರಿಗೆ ತಿಳಿಸಿರ್ಬೇಕು...’
‘ಹೌದು, ಅವ್ರಿಬ್ರ ಹೊಂದಾಣಿಕೆ ಅಪರೂಪದ್ದು. ಹ್ಮ್! ನಂಗಂತೂ ಅಂಥ ಸಂಸಾರದ ಋಣ ಇಲ್ಲ. ತಿಳಿಯದೇ ತಪ್ಪು ಮಾಡಿದೆ ಅಂತ ಹೇಳುವ ಹಾಗಿಲ್ಲ. ಕಣ್ಣು ತೆರೆದಿದ್ದುಕೊಂಡೇ ಬಾವಿಗೆ ಬಿದ್ದೆ. ನೀನು ಅಂಥ ತಪ್ಪು ಎಲ್ಲಿ ಮಾಡಿಬಿಡ್ತೀಯೋ ಅಂತ ಯಾವಾಗ್ಲೂ ಹೆದ್ರಿಕೆ ನಂಗೆ...’
‘ಖಂಡಿತಾ ಅಂಥದ್ದು ನನ್ನಿಂದ ಆಗುದಿಲ್ಲಮ್ಮ. ನಾನು ನನ್ನ ಕಾಲ ಮೇಲೆ ನಿಲ್ತೇನೆ. ಕೆಲ್ಸಕ್ಕೆ ಸೇರ್ತೇನೆ. ಕರೆಸ್ಪಾಂಡೆನ್ಸ್ ಆದ್ರೂ ಸರಿ, ಎಂ.ಎಸ್ಸಿ. ಮಾಡ್ತೇನೆ... ಒಳ್ಳೇ ಕಾಲೇಜಲ್ಲಿ ಲೆಕ್ಚರರ್ ಆಗ್ತೇನೆ. ಮಕ್ಕಳನ್ನು ಪ್ರೋತ್ಸಾಹಿಸಿ ಒಳ್ಳೇ ವ್ಯಕ್ತಿಗಳನ್ನಾಗಿ ಮಾಡ್ತೇನೆ... ಯಾವುದೋ ಗೊತ್ತಿಲ್ದ ಗಂಡಿನ ಕುತ್ತಿಗೆಗೆ ಮಾಲೆ ಹಾಕಿ ನನ್ನ ಜೀವನವನ್ನು ಆ ಮಾಲೆಯ ಪರಿಧಿಯೊಳಗೆ ಒಣಗಿಸ್ಲಿಕ್ಕೆ ನಾನು ತಯಾರಿಲ್ಲ. ನೋಡ್ತಾ ಇರಿ. ನಾನು ನಿಜವಾದ ಅರ್ಥದಲ್ಲಿ ಒಬ್ಬ ಒಳ್ಳೇ ಟೀಚರ್ ಆಗ್ತೇನೆ...’

ಬಾಗಿಲು ತೆರೆದು ನಡುಮನೆಯ ಸೋಫಾದಲ್ಲಿ ಕೂತ ನನ್ನ ಆವೇಶದ ಮಾತುಗಳು ಅಮ್ಮನ ಸಿಡುಕಿಯನ್ನು ಎಚ್ಚರಿಸಿದ್ದು ಯಾಕೋ ಗೊತ್ತಾಗಲೇ ಇಲ್ಲ.
‘ಒಳ್ಳೇ ಟೀಚರ್ ಮತ್ತೆ ಆಗು. ಮೊದ್ಲು ಒಳ್ಳೇ ಮಗಳಾಗು...’
ನನ್ನ ಆವೇಶ ಎಲ್ಲ ಆವಿಯಾಗಿಬಿಟ್ಟಿತು. ಎಲ್ಲಿ ಏನು ತಪ್ಪಾಯ್ತು? ಯಾಕೆ ಹೀಗೆ ಮಾತಾಡಿದ್ರು? ಸುಮ್ಮನೆ ಸೋಫಾದಿಂದ ಎದ್ದು ಬಚ್ಚಲಿಗೆ ಹೋದೆ, ಮುಖ ಕೈಕಾಲು ತೊಳೆಯುವ ನೆಪದಲ್ಲಿ. ತಲೆಯಲ್ಲಿ ಗುಂಗಿಹುಳ ಹರಿದಾಡ್ತಿತ್ತು. ಅಮ್ಮ ಅವರ ಕೋಣೆಗೆ ಹೋಗಿ, ‘ಕಿರಿಕಿರಿ ಮಾಡ್ಬೇಡ, ನಾನು ಮಲಗ್ತೇನೆ’ ಅಂತ ಜೋರಾಗಿ ಹೇಳಿ ಧಡಾರಂತ ಬಾಗಿಲು ಹಾಕಿಕೊಂಡರು.

ಎರಡೇ ಕ್ಷಣ. ಯಾಕೋ ನಂಗೆ ದಿಗಿಲಾಯಿತು. ಅಮ್ಮ ಏನಾದ್ರೂ ಮಾಡಿಕೊಂಡರೆ? ಇವತ್ತಿನವರೆಗೂ ನನಗಂಥಾ ಯೋಚನೆಯೇ ಬಂದಿರಲಿಲ್ಲ. ಇವತ್ತು ಅದನ್ನು ಬದಿಗೆ ಸರಿಸಲಾಗಲೇ ಇಲ್ಲ. ಗಾಬರಿಯಿಂದ, ಜಾಗ್ರತೆಯಿಂದ ಅಮ್ಮನ ಕೋಣೆಯ ಬಾಗಿಲು ತಟ್ಟಿದೆ...
‘ಅಮ್ಮ, ನನ್ನ ಬಾಟನಿ ಟೆಕ್ಸ್ಟ್ ಅಲ್ಲೇ ಉಂಟು. ಬಾಗಿಲು ತೆಗೀರಿ. ನಂಗೀಗ ಬೇಕದು...’
ಎಷ್ಟು ತಟ್ಟಿದರೂ ಅಲ್ಲಿಂದ ಉತ್ತರ ಇಲ್ಲ. ನನ್ನೊಳಗು ಟೊಳ್ಳಾಗತೊಡಗಿತು. ಫೋನ್ ಮಾಡಿ ನೇಹಾಳನ್ನು ಬರಹೇಳಿದೆ, ‘ಸುಮ್ನೆ... ಹೀಗೇ... ಬಾ... ಆದ್ರೆ ಕೂಡ್ಲೇ ಬಾ...’ ಹತ್ತು ನಿಮಿಷದಲ್ಲಿ ಬರುತ್ತೇನೆಂದಳು. ಇನ್ನೂ ಹತ್ತು ನಿಮಿಷ? ಆಗಲೇ ಅಮ್ಮ ಬಾಗಿಲು ಹಾಕ್ಕೊಂಡು ಐದು ನಿಮಿಷವಾಗಿತ್ತು. ಇನ್ನು ಹತ್ತು ನಿಮಿಷ? ಅಷ್ಟೊತ್ತಿಗೆ ಏನಾದ್ರೂ ಆಗ್ಬಹುದು! ಏನ್ ಮಾಡ್ಲಿ?
ಮತ್ತೊಮ್ಮೆ ಬಾಗಿಲು ತಟ್ಟಿ ಮೌನವನ್ನು ಎದುರ್ಗೊಂಡೆ. ಏನೂ ತೋಚದೆ ಸೋಫಾದಲ್ಲಿ ಕೂತೆ... ಕೂತೇ ಇದ್ದೆ...

Monday 7 February, 2011

ಸುಮ್ಮನೆ ನೋಡಿದಾಗ...೧೪

‘ಶಿಶಿರಾ, ಮೊನ್ನೆ ನಿನ್ನಪ್ಪ ಸತ್ತೋದ...’
‘ಹ್ಞಾ!?’ ಏನೊಂದೂ ಅರ್ಥವಾಗದೆ ಉದ್ಗರಿಸಿದೆ.
ಕೆಂಪು ಕಣ್ಣುಗಳಲ್ಲಿ ಈಗ ಪಸೆಯಿರಲಿಲ್ಲ, ಉರಿಯಿತ್ತು.
‘ಹೌದು. ನಿನ್ನ ಹುಟ್ಟಿಗೆ, ನನ್ನ ಈ ಸ್ಥಿತಿಗೆ ಕಾರಣನಾದ ಆ ದೊಡ್ಡ ಮನುಷ್ಯ ನಿನ್ನೆ ಪ್ರೋಸ್ಟೇಟ್ ಕ್ಯಾನ್ಸರಿಗೆ ಬಲಿಯಾದ.’
ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಅಮ್ಮನ ಹಿಂದಿನ ಕಥೆ ಗೊತ್ತಿದೆಯೆನ್ನಲೆ? ನನ್ನಪ್ಪ ವಿನ್ಯಾಸ್, ನೇಹಾಳಿಗೂ ಅಪ್ಪ ಅನ್ನುವ ಸತ್ಯ ನಮಗೆ ನಿನ್ನೆಯೇ ತಿಳಿಯಿತೆಂದು ಹೇಳಲೆ? ಅದಕ್ಕಿದು ಸರಿಯಾದ ಸಂದರ್ಭವೆ? ಅವನ (ಅವರ ಅನ್ನಲು ಮನವೊಪ್ಪದು) ಅನಾರೋಗ್ಯವೇ ಅಮ್ಮನ ಸಿಡುಕು ಸ್ವಭಾವಕ್ಕೆ ಕಾರಣವಾಗಿತ್ತೆ? ನೂರು ಪ್ರಶ್ನೆಗಳು ನನ್ನೊಳಗೆ. ನನ್ನ ಮೌನ ಅಮ್ಮನಿಗೆ ಬೇರೇನೋ ಅರ್ಥ ಕೊಟ್ಟಿರಬೇಕು.
‘ನಿಂಗೆ ಈ ಬಗ್ಗೆ ಏನೂ ಹೇಳಿರಲಿಲ್ಲ ಇಲ್ಲಿವರೆಗೆ. ನಾನು ಇಷ್ಟು ವರ್ಷ ಅವ್ನಿದ್ದೂ ವಿಧವೆ ಥರ ಜೀವನ ಮಾಡಿದೆ. ನಿನ್ನೆ, ಬಿಡುಗಡೆ ಆಯ್ತು ಅಂತಲೂ ಅನ್ನಿಸಿತ್ತು, ಎಲ್ಲವೂ ಮುಗೀತು ಅಂತಲೂ ಅನ್ನಿಸಿತ್ತು. ಇವತ್ತು ನಾನು ಕೆಲಸಕ್ಕೆ ಹೋಗುದಿಲ್ಲ. ನೀನು ಕಾಲೇಜಿಗೆ ಹೋಗಿ ಬಾ. ಸಂಜೆ ಎಲ್ಲ ಹೇಳ್ತೇನೆ...’
‘ಅಮ್ಮ, ನೀವ್ಯಾಕೆ ಇವತ್ತು ನಳಿನಿ ಆಂಟಿ ಮನೆಗೆ ಹೋಗ್ಬಾರ್ದು? ನೀವಲ್ಲಿ ಹೋಗದೆ ತುಂಬಾ ದಿನ ಆಯ್ತಲ್ಲ. ನಿಮ್ಮನ್ನು ಅಲ್ಲಿ ಬಿಟ್ಟು ನಾನ್ ಕಾಲೇಜಿಗೆ ಹೋಗ್ತೇನೆ. ನಂಗೂ ಇವತ್ತು ಇಷ್ಟದ ಲ್ಯಾಬ್ ಉಂಟು. ತಪ್ಪಿಸ್ಲಿಕ್ಕೆ ಖುಷಿ ಇಲ್ಲ...’ ನಳಿನಿ ಆಂಟಿ ನಿನ್ನೆ ಅವ್ರ ಮನೆಯಲ್ಲಿ ನಡೆದದ್ದನ್ನು ಅಮ್ಮನಿಗೂ ಹೇಳಿಯಾರು ಅನ್ನುವ ಯೋಚನೆಯಿಂದ ಈ ಮಾತು ಹೇಳಿದೆ.
‘...’
‘ಅಮ್ಮ, ಪ್ಲೀಸ್. ನಿಮ್ಮನ್ನು ಒಬ್ರನ್ನೇ ಬಿಟ್ಟು ಹೋಗ್ಲಿಕ್ಕೆ ನಂಗಾಗುದಿಲ್ಲ. ರೆಡಿಯಾಗಿ.’
ಅವರ ಉತ್ತರಕ್ಕೂ ಕಾಯದೆ ನಾನು ಬಚ್ಚಲಿಗೆ ಹೋದೆ. ಅದೇನನ್ನಿಸಿತ್ತೋ, ನಾನು ಹೊರಡುವ ಹೊತ್ತಿಗೆ ಅಮ್ಮನೂ ತಯಾರಾಗಿದ್ದರು. ಸಾಮಾನ್ಯವಾಗಿ ನಾನು ಹೋಗುವ ದಾರಿ ಬಿಟ್ಟು ಅಮ್ಮನ ಒಟ್ಟಿಗೆ ನಳಿನಿ ಆಂಟಿ ಮನೆಗೆ ಹೋದೆ.

ನೇಹಾ ಗೇಟಿನ ಹತ್ರವೇ ಸಿಕ್ಕಿದಳು. ಬಾಗಿಲಲ್ಲೇ ಇದ್ದ ನಳಿನಿ ಆಂಟಿಯ ಮುಖದಲ್ಲಿ ಖುಷಿಯೂ ಗೊಂದಲವೂ ಕಂಡಿತು. ಅವರ ಮುಖಭಾವದಿಂದ, ನಿನ್ನೆಯ ಇಲ್ಲಿಯ ವಿಷಯ ಅಮ್ಮನಿಗೆ ಗೊತ್ತಾಗಿಯೇ ಅವರೀಗ ಇಲ್ಲಿ ಬಂದಿದ್ದಾರೆನ್ನುವ ಸಂಶಯ ನಳಿನಿ ಆಂಟಿಗಿತ್ತೆಂದು ನನಗೆ ಭಾಸವಾಯ್ತು. ಆಂಟಿಯ ಕಣ್ಣನ್ನೇ ದಿಟ್ಟಿಸಿ ಇಲ್ಲವೆಂಬಂತೆ ತಲೆಯಾಡಿಸಿದೆ. ಸಮಾಧಾನದ ಉಸಿರು ಬಿಟ್ಟು, ‘ಬಾ ಹರಿಣಿ. ಎಷ್ಟು ದಿನ ಆಯ್ತು ಇಲ್ಲಿಗೆ ನೀನು ಬಾರದೆ! ಇವತ್ತು ಕೆಲಸಕ್ಕೆ ರಜೆಯಾ? ಈಗಾದ್ರೂ ಬಂದ್ಯಲ್ಲ. ಬಾ ಒಳಗೆ...’ ಅಂದರು.

ಅವರಿಬ್ಬರೂ ಒಳಗೆ ಹೋದ ಮೇಲೆ ನಾವಿಬ್ಬರೂ ಗೇಟಿಂದ ಹೊರಗೆ ಹೆಜ್ಜೆ ಹಾಕಿದೆವು.
‘ನೇಹಾ, ನಮ್ಮಪ್ಪ -ನಮ್ಮಿಬ್ರ ಅಪ್ಪ, ವಿನ್ಯಾಸ್- ನಿನ್ನೆ ಸತ್ತ ಅಂತ ಅಮ್ಮ ಈಗ ಬೆಳಿಗ್ಗೆ ಹೇಳಿದ್ರು. ತುಂಬಾ ಡಲ್ ಆಗಿದ್ದಾರೆ. ಅದ್ಕೇ ಇಲ್ಲಿಗೆ ಕರ್ಕೊಂಬಂದೆ...’
ಅವಳ ಹೆಜ್ಜೆಗಳು ಗಕ್ಕನೆ ನಿಂತವು. ‘ನಡಿ. ಮನೆಗೇ ಹೋಗುವಾ...’
‘ಅದ್ರ ಅಗತ್ಯ ಇಲ್ಲ. ನಮ್ಮನ್ನು ಒಮ್ಮೆಯಾದ್ರೂ ನೋಡ್ಲಿಕ್ಕೂ ಬಾರದ ಮನುಷ್ಯ, ನಮ್ಮನ್ನು ತನ್ನ ಮಕ್ಕಳೂಂತ ಒಪ್ಪಿಕೊಳ್ಳದ ಮನುಷ್ಯ ಈಗ ಸತ್ತಿದ್ದಾನೆ ಅಂದ್ರೆ ನಮಗ್ಯಾಕೆ ಅದು ನಾಟಬೇಕು? ಅವನ ಜೀನ್ಸ್ ನಮ್ಮಲ್ಲಿದೆ, ಸರಿ. ಅಷ್ಟಕ್ಕೇ ಅವ ನಮ್ಮ ಅಪ್ಪ ಆಗುದಿಲ್ಲ. ಅವನ ಜೀವನದಲ್ಲಿ ನಮಗೆ ಯಾವ ಸ್ಥಾನ ಕೊಟ್ಟಿದ್ದಾನೆ ಅಂತ ನಮ್ಮ ಜೀವನದಲ್ಲಿ ಅವನಿಗೆ ಯಾವುದೇ ಸ್ಥಾನ ಕೊಡ್ಬೇಕು? ಅದೆಲ್ಲ ಬೇಡ... ನಿನಗಂತೂ ಪ್ರೀತಿ ಸುರಿಸುವ ಅಪ್ಪ ಇದ್ದಾರೆ, ಆದ್ರೂ ನಿನಗ್ಯಾಕೆ ಈ ಸೆಳೆತ? ಸರಿಯಲ್ಲ ನೇಹಾ. ಈ ಸೆಂಟಿಮೆಂಟಿನಿಂದ ನಿನ್ನ ಅಪ್ಪ-ಅಮ್ಮನಿಗೆ ಅನ್ಯಾಯ ಮಾಡ್ತೀ ನೀನು. ಅಷ್ಟೇ. ಕಣ್ಣು ತೆರಿ. ಸರಿಯಾಗಿ ಬದುಕನ್ನು ನೋಡು...’

‘ಸೆಂಟಿಮೆಂಟ್ ಅಂತ ನನಗೆ ಪಾಠ ಹೇಳುವವಳು ನೀನ್ಯಾವಾಗ ಇಷ್ಟು ಗಟ್ಟಿ ಆದದ್ದು? ಮೊನ್ನೆಯಷ್ಟೇ ರೊಮ್ಯಾಂಟಿಕ್ ಕಥೆ ಬರ್ದು ಅದ್ರೊಳಗೆ ಮುಳುಗಿದವಳು ಅದೆಷ್ಟು ಹೊತ್ತಿಗೆ ಇಷ್ಟ ಕಟುವಾದದ್ದು?’
‘ರೊಮ್ಯಾಂಟಿಕ್ ಕಥೆಗೂ ರೂಂಮೇಟ್ ಜೀವನಕ್ಕೂ ವ್ಯತ್ಯಾಸ ಗೊತ್ತಾದಾಗ...’
‘ಹ್ಮ್! ಅಂತೂ ನಮ್ಮ ಜೀವನದಲ್ಲಿ ಈ ವ್ಯಕ್ತಿಗೆ, ಈ ಸಾವಿಗೆ ಯಾವುದೇ ಅರ್ಥ ಇಲ್ಲ ಅಂತ ನೀನು ಹೇಳಿದ್ದೀ, ಅಲ್ವಾ?’
‘ಹೌದು. ನಿಜ. ಇಲ್ಲವೇ ಇಲ್ಲ. ಅದರ ಅಗತ್ಯವೇ ಇಲ್ಲ. ನಮ್ಮ ಈ ದೃಢ ನಿರ್ಧಾರ ನಮ್ಮ ಹಿರಿಯರಿಗೂ ಒಳ್ಳೇದೇ.’
‘ಸರಿ ಹಾಗಾದ್ರೆ. ಈಗ ಕಾಲೇಜಿಗೇ ಹೋಗುವ.’
‘ಹೋಗುವ... ಬಾ...’

Tuesday 1 February, 2011

ಸುಮ್ಮನೆ ನೋಡಿದಾಗ...೧೩

ನನ್ನ ಕಣ್ಣುಗಳಲ್ಲಿ ಗಾಬರಿ ಗುರುತಿಸಿ ಸುಮುಖ್ ಅಂಕಲ್ ಹತ್ರ ಬಂದರು.
‘ಯೋಚಿಸ್ಬೇಡ. ಇವತ್ತು ಇಲ್ಲೇ ಊಟ ಮಾಡು. ನಂತ್ರ ನಿನ್ನನ್ನು ನಾನೇ ನಿಮ್ಮನೆಗೆ ಬಿಡ್ತೇನೆ, ಆಯ್ತಾ?’
‘ಬೇಡ ಅಂಕಲ್, ಅಮ್ಮ ಆಗ್ಲೇ ಕಾಯ್ತಿರ್ಬಹುದು. ನಾನು ಈಗ್ಲೇ ಹೋಗ್ತೇನೆ’
‘ಏ, ಇಲ್ಲೇ ಇರು ಇವತ್ತು...' ನೇಹಾ ಕುತ್ತಿಗೆ ಅಡ್ಡ ಹಾಕಿ ನಗುತ್ತಿದ್ದಳು.
ನಳಿನಿ ಆಂಟಿಯ ಕಣ್ಣುಗಳಲ್ಲಿ ಆಗಲೇ ಖುಷಿಯಿತ್ತು. ನನ್ನಮ್ಮನ ಕೋಪದಿಂದ ನನ್ನನ್ನು ಉಳಿಸಿಕೊಳ್ಳುವ ಸಲುವಾಗಿ ಮೂರು ಜೀವಗಳಿಗೆ ನಿರಾಸೆ ಮಾಡುವ ಇಚ್ಛೆಯಾಗಲಿಲ್ಲ, ಒಪ್ಪಿಕೊಂಡೆ. ಎಲ್ಲರೂ ಮನೆಯೊಳಗೆ ಹೋದ ಕೂಡಲೇ ಸುಮುಖ್ ಅಂಕಲ್ ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿ, ‘ನೀವೂ ಇಲ್ಲೇ ಊಟಕ್ಕೆ ಬನ್ನಿ’ ಎಂದರು. ನನ್ನ ನಿರೀಕ್ಷೆಯಂತೆಯೇ ನಿರಾಕರಣೆ ಬಂದಾಗ ಪೆಚ್ಚಾದವಳು ನೇಹಾ.


ಊಟ ಮುಗಿಸಿ ಒಂಬತ್ತು ಗಂಟೆಯ ಸುಮಾರಿಗೆ ಸುಮುಖ್ ಅಂಕಲ್ ನನ್ನನ್ನು ಮನೆಗೆ ಕರೆದುಕೊಂಡು ಹೊರಟಾಗ ನೇಹಾಳೂ ಜೊತೆಯಾದಳು. ನಡೆಯುತ್ತಾ ಸಾಗಿದೆವು. ಕೆಲಕ್ಷಣಗಳ ಮೌನದ ಬಳಿಕ,
‘ಅಂಕಲ್, ನಮ್ಮಮ್ಮ ಯಾವಾಗ ಇಷ್ಟು ಸಿಡುಕಿಯಾದದ್ದು? ಯಾಕೆ? ನಿಮಗೆ ಗೊತ್ತುಂಟಾ?’ ತಡೆಯಲಾರದೆ ಕೇಳಿದೆ.
‘ಹ್ಮ್, ಇದನ್ನು ನಿಮ್ಮಮ್ಮನ ಹತ್ರವೇ ಕೇಳುದು ಒಳ್ಳೇದು ಮಗಳೇ. ನಾನು ಹೇಳಿದ್ರೆ ತಪ್ಪಾದೀತು’
‘ಅಮ್ಮ ಇದಕ್ಕೆ ಉತ್ತರ ಕೊಡುದು ಸಂಶಯ. ಅಲ್ಲದೆ, ಕೇಳಿದ್ರೆ ನಾನಂತೂ ಸರಿಯಾಗಿ ಬೈಸಿಕೊಳ್ಬೇಕು, ಅಷ್ಟೇ’
‘ಒಂದಲ್ಲ ಒಂದಿನ ನಿನಗೆ ಸತ್ಯ ಗೊತ್ತಾಗಿಯೇ ಆಗ್ತದೆ. ಇವತ್ತು ಅರ್ಧ ಕಥೆ ಗೊತ್ತಾಯ್ತಲ್ಲ, ಹಾಗೇ...’
‘ಇವತ್ತು ನಮಗೆ ಅರ್ಧ ಕಥೆ ಗೊತ್ತಾಯ್ತು ಅಂತ ನಿಮಗೆ ಹೇಗೆ ಗೊತ್ತಾಯ್ತು?’
‘ಅದು ನಳಿನಿ ಮತ್ತು ನನ್ನ ನಡುವಿನ ಗುಟ್ಟು. ನಿಮಗೀಗಲೇ ಬೇಡ.’
‘ಪಪ್ಪಾ, ಮುಂದೆ ನಾನೂ ನಿಮ್ಮಿಬ್ಬರ ಹಾಗೇ ಚಂದ ಹೊಂದಾಣಿಕೆಯಿಂದ ಸಂಸಾರ ಮಾಡ್ಬೇಕಾದ್ರೆ ಇಂಥ ಗುಟ್ಟನ್ನೆಲ್ಲ ನಂಗೂ ಹೇಳಿಕೊಡ್ಬೇಕು ನೀವು’ ನೇಹಾಳ ಮಾತಿಗೆ ಅಂಕಲ್ ಅಬ್ಬರದ ನಗು ಹಾರಿಸಿದರು.
ಅಷ್ಟರಲ್ಲಾಗಲೇ ನಮ್ಮ ಗೇಟಿನ ಹತ್ತಿರ ಬಂದಿದ್ದೆವಾದ್ದರಿಂದ ಆ ನಗು ಕೇಳಿಯೇ ಅಮ್ಮ ಬಾಗಿಲು ತೆರೆದರು. ನನ್ನನ್ನು ಮೆಟ್ಟಿಲವರೆಗೆ ತಲುಪಿಸಿ ಹಿಂದೆ ಹೊರಟವರನ್ನು ಅಮ್ಮ ಒಳಗೆ ಕರೆಯಲೇ ಇಲ್ಲ. ಪೆಚ್ಚಾಗುವ ಸರದಿ ನನ್ನದು.

ಒಳಗುದಿಯಿಂದ ಪುಸ್ತಕಗಳನ್ನು ಮೇಜಿನ ಮೇಲಿಟ್ಟು ಬಚ್ಚಲಿಗೆ ಹೋಗಿ ಕೈಕಾಲು ತೊಳೆದುಕೊಂಡು ಬಂದೆ. ಅಮ್ಮನಂತೂ ಮಲಗಲು ಸಿದ್ಧವಾಗಿದ್ದರು. ನನಗೂ ಬೇರೇನೂ ಕೆಲಸಗಳಿರಲಿಲ್ಲ. ತಲೆ ಮಾತ್ರ ಧಿಮ್ಮೆನ್ನುತ್ತಿತ್ತು. ಒಂದು ದಿನಕ್ಕೆ ಗ್ರಹಿಸಲು ಸಾಧ್ಯವಿದ್ದದ್ದಕ್ಕಿಂತ ಹೆಚ್ಚಿನ ಮಾಹಿತಿ ಮನಸ್ಸು ಮೆದುಳನ್ನು ತುಂಬಿಕೊಂಡಿತ್ತು. ಅವನ್ನೆಲ್ಲ ಹೇಗೆ ಸಂಭಾಳಿಸಬೇಕೆಂದು ತಿಳಿಯದೆ ನನ್ನ ಮಂಚದ ಮೇಲೆ ಬೋರಲಾದೆ.

ಬೆಳಿಗ್ಗೆ ಎದ್ದಾಗ ಸೂರ್ಯ ನನ್ನ ಕೆನ್ನೆ ಮುತ್ತಿಕ್ಕುತ್ತಿದ್ದ. ನಿನ್ನೆ ಸಂಜೆಯೆಲ್ಲ ಮನದೊಳಗೆ ಅವಿತಿದ್ದವ ಮತ್ತೆ ಧುತ್ತನೆ ಎದುರು ನಿಂತ. ಜನವರಿ ಮುಂಜಾನೆಯ ಚಳಿಯಲ್ಲಿ ವಸಂತನ ಹೂನಗೆ ಕೋಣೆಯನ್ನೇ ಬೆಚ್ಚಗಾಗಿಸಿತು. ಇವನನ್ನು ಹೇಗೆ ನಿಭಾಯಿಸುವುದೆನ್ನುವ ಹೊಸ ಸಮಸ್ಯೆ ಎದುರಾಯಿತು. ಹೀಗೆ, ಇದ್ದಕ್ಕಿದ್ದ ಹಾಗೆ, ಎಲ್ಲೆಂದರಲ್ಲಿ ಇವ ಎದುರಾದರೆ ನನ್ನ ಕೆಲಸಗಳೆಲ್ಲ ಏರುಪೇರಾದಂತೆಯೇ. ಅಮ್ಮನ ಚಿರತೆ ಕಣ್ಣುಗಳಿಗೆ ಈ ಕಳ್ಳನ ಪತ್ತೆಯಾಗದ ರೀತಿ ಜೋಪಾನ ಮಾಡುದು ಹೇಗೆ?... ಅಲ್ಲ! ನನಗ್ಯಾಕೆ ಅವನ ಉಸಾಬರಿ? ಅವನನ್ನು ಬಚಾಯಿಸಿಕೊಳ್ಳುವ ಯೋಚನೆ-ಯೋಜನೆ ಯಾಕೀಗ? ಅಸಲಿಗೆ, ನನ್ನೊಳಗೆ ಅವನು ಸೇರಿಕೊಂಡದ್ದು ಯಾವಾಗ? ಅಯ್ಯೋ! ಬೆಳಬೆಳಗ್ಗೆಯೇ ಇದೇನಿದು ಗೋಜಲು? ಹೇಗೆ ಇದನ್ನೆಲ್ಲ ಬಿಡಿಸಿಕೊಳ್ಳಲಿ? ಹರ್ಷಣ್ಣ? ನೇಹಾ? ನಳಿನಿ ಆಂಟಿ? ಇಲ್ಲ, ಯಾರೂ ಬೇಡ. ಇದನ್ನು ನಾನೇ ನಾನಾಗಿಯೇ ಪರಿಹರಿಸಿಕೊಳ್ಳಬೇಕು. ನಿರ್ಧಾರದ ಜೊತೆ ಕಿಟಕಿಯ ಪರದೆ ಸರಿಸಿದೆ. ಬೆಚ್ಚನೆಯ ಕಿರಣಗಳಿಗೆ ಮುಖವೊಡ್ದಿದೆ.

ಗಂಟೆ ಏಳಾದರೂ ಅಮ್ಮನ ಸದ್ದಿರಲಿಲ್ಲ. ಎದ್ದಿಲ್ಲವೇನೋ ಅಂದುಕೊಂಡು ಕೋಣೆಗೆ ಹೋಗಿ ನೋಡಿದರೆ ಅಮ್ಮ ಅಲ್ಲಿರಲೇ ಇಲ್ಲ. ಅಡುಗೆಮನೆ, ಬಚ್ಚಲು, ಹಿತ್ತಿಲು ಎಲ್ಲ ನೋಡಿ ಟೆರೇಸಿಗೆ ಹತ್ತಿದೆ. ಸೂರ್ಯನನ್ನೇ ದಿಟ್ಟಿಸುತ್ತಿದ್ದರು. ನನ್ನ ಹೆಜ್ಜೆ ಸದ್ದಿಗೆ ಬೆಚ್ಚಿಬಿದ್ದವರು ಹಾಗೇ ತಿರುಗಿ ಧಡಧಡ ಕೆಳಗೆ ಇಳಿದುಹೋದರು. ಗಲಿಬಿಲಿ, ಕಿರಿಕಿರಿಯೊಳಗೆ ನಾನೂ ಕೆಳಗಿಳಿದೆ.

ಮುಖತೊಳೆದು ಬಂದ ಅಮ್ಮನ ಕಣ್ಣುಗಳು ಅವರು ರಾತ್ರೆಯೆಲ್ಲ ಮಲಗಿರಲಿಲ್ಲ ಎನ್ನುವ ಸಂಶಯ ಕೊಟ್ಟವು.
‘ಅಮ್ಮಾ, ಉಶಾರಿಲ್ವಾ?’ ಆದಷ್ಟೂ ಮೃದುವಾಗಿ ಕೇಳಿದೆ. ಉತ್ತರ ಬರಲಿಲ್ಲ.
‘ತಿಂಡಿ ಏನ್ ಮಾಡ್ಲಿ ಹೇಳಿ, ನಾನೇ ಮಾಡ್ತೇನೆ...’ ಪ್ರತಿಕ್ರಿಯೆ ಇಲ್ಲ.
‘ದೋಸೆ ಬಂದ ಉಂಟಲ್ಲ, ದೋಸೆ ಹಾಕ್ತೇನೆ, ಬನ್ನಿ ಈಚೆ. ಟೇಬಲ್ ಹತ್ರ ಕೂತ್ಕೊಳ್ಳಿ...’ ವ್ಯತ್ಯಾಸವೇ ಇಲ್ಲ.

ಹತ್ತಿರ ಹೋಗಿ ಅವರನ್ನು ಟೇಬಲ್ ಹತ್ತಿರಕ್ಕೆ ದೂಡುನಡಿಗೆಯಲ್ಲಿ ಕರೆತಂದೆ. ಅದೇನೋ ಶೂನ್ಯಭಾವ ಅವರೊಳಗಿಂದ ಆವಿಯಾಗುತ್ತಿತ್ತು. ಅದರ ಝಳ ನನ್ನೊಳಗನ್ನೂ ಸೋಕಿತು.

ದೋಸೆ ಹಾಕಿ, ಉಪ್ಪಿನಕಾಯ್ ಜೊತೆ ಪ್ಲೇಟಲ್ಲಿಟ್ಟು ಟೇಬಲ್ಲಿನಲ್ಲಿಟ್ಟೆ. ಕುದಿಕಾಫಿ ಲೋಟ ಬದಿಯಲ್ಲಿಟ್ಟೆ. ನನಗೂ ದೋಸೆ ಕಾಫಿ ಮಾಡಿಕೊಂಡು ಟೇಬಲ್ ಬದಿಗೆ ಬಂದಾಗ ಅಮ್ಮನ ಕಣ್ಣುಗಳಲ್ಲಿ ಹನಿಗಳು ಉದುರುತ್ತಿದ್ದವು. ಹೊಟ್ಟೆ ತಾಳ ಹಾಕುತ್ತಿದ್ದರೂ ದೋಸೆ ಗಂಟಲಲ್ಲಿ ಇಳಿಯಲಿಲ್ಲ. ಕಾಫಿ ಮಾತ್ರ ಕುಡಿದು ಅಮ್ಮನ ಮುಖ ನೋಡಲಾಗದೆ ಗೋಡೆ, ಕಿಟಕಿ ನೋಡುತ್ತಾ ಅಲ್ಲೇ ಕೂತೇ ಇದ್ದೆ. ಎಷ್ಟು ಹೊತ್ತೋ, ಯಾರಿಗ್ಗೊತ್ತು?