ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday 17 June, 2011

ಪರಾಧೀನ-೦೩

ಮೊದಲೆರಡು ಸೆಶನ್‌ಗಳಲ್ಲಿ ಅಂಥ ಪರಿಣಾಮವೇನೂ ಕಾಣಲಿಲ್ಲ. ನಿರಾಳವಾಗುವುದಕ್ಕೇ ಜಗನ್‌ಗೆ ಸಮಯ ತಗಲುತ್ತಿತ್ತು. ಎರಡು ವಾರಗಳ ಭೇಟಿಯ ಕೊನೆಯಲ್ಲಿಯೂ ದಿನವೂ ರಿಲ್ಯಾಕ್ಸೇಷನ್ ಅಭ್ಯಾಸ ಮಾಡಿರೆಂದು ಹೇಳಿ ಕಳಿಸುತ್ತಿದ್ದೆ. ಬೆಳಗಿನ ಹೊತ್ತು ಪ್ರಾಣಾಯಾಮ ಮಾಡುತ್ತಿದ್ದವರು ಬಿಟ್ಟಿದ್ದಾರೆಂದು ತಿಳಿಸಿದ್ದರು ಮೊದಲದಿನ. ಅದನ್ನೂ ಮುಂದುವರಿಸಲು ಸೂಚನೆ ನೀಡುತ್ತಿದ್ದೆ. ಮೂರನೇ ಬಾರಿ ಬಂದಾಗ ತುಸು ಗೆಲುವಾಗಿದ್ದಂತೆ ಕಂಡರು. ಒಬ್ಬರೇ ಬಂದಿದ್ದರು, ನಗುತ್ತಾ, ‘ಅಷ್ಟು ಧೈರ್ಯ ಬಂದಿದೆ’ ಅಂದರು. ಆ ನಗುವೇ ಖುಷಿಕೊಟ್ಟಿತು. ಸಮ್ಮೋಹನಕ್ಕಾಗಿ ರಿಲ್ಯಾಕ್ಸೇಷನ್ ಮಾಡಿಸುತ್ತಿದ್ದಾಗ ಸುಲಭವಾಗಿ ಸ್ಮೃತಿವಲಯದ ಆಳಕ್ಕೆ ಜಾರಿಕೊಂಡರು. ಬೆಳಕಿನ ಸುರಂಗದೊಳಗಿಂದ ಹಾದು ಬರುವ ಪ್ರಕ್ರಿಯೆಯಲ್ಲೇ ನನ್ನ ಸೂಚನೆಯನ್ನು ಅನುಸರಿಸಿ ಯಾವುದೋ ಕಾಲ-ದೇಶದ ಪರಿಧಿಯೊಳಗಿಳಿದರು.

(ಜಗನ್ ಮಾತುಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ)

"ಕೆಂಪು ಹೆಂಚಿನ ಮಾಡು, A ಟೈಪ್ ಮಾಡು, ಸಾಲಾಗಿ. ದೇವಸ್ಥಾನ ಅಥವಾ ಮನೆ.. ಮನೆಯೇ, ಹತ್ತಿರ ಹತ್ತಿರ ಸುಮಾರು ಮನೆಗಳು. ಮೇಲೆ ಬಂಗಾರ ಬಣ್ಣದ ಕಲಶಗಳು. ಗೋಡೆಗಳಿಗೆ ಕೇಸರಿ, ನೀಲಿ ಬಣ್ಣ. ಹಸುರು ಗುಡ್ಡದ ಬದಿಯಲ್ಲಿ ಮೂರು ಮಾಡುಗಳು, ಶೃಂಗದ ಹಾಗೆ, ಮೇಲೆ ಚೂಪು ಕೆಳಗೆ ಅಗಲ. ಛಳಿ ಉಂಟು (ಹದವಾಗಿ ನಡುಕ ಜಗನ್ ಮೈಯಲ್ಲಿ. ಹೊದಿಕೆ ಹೊದೆಸಿದೆ). ಹಸುರು ಹುಲ್ಲಿನ ಮೇಲೆ ಹನಿಹನಿ ನೀರುದನಗಳು ಹುಲ್ಲು ಮೇಯ್ತಾ ಇದ್ದಾವೆ, ಕಪ್ಪು-ಬಿಳಿ ಬಣ್ಣದ ದನಗಳು. ಸುಮಾರು ನಾಲ್ಕೂವರೆಯ ಹೊತ್ತು, ಸೂರ್ಯಾಸ್ತದ ಓರೆ ಕೇಸರಿ ಕಿರಣಗಳು ಹುಲ್ಲಿನ ಮೇಲೆ ಬೀಳ್ತದೆ. ನೇಪಾಳ ಅಥವಾ ಟಿಬೆಟ್ ಥರ ಕಾಣ್ತದೆ. ಮೈಮೇಲೆ ಅರ್ಧಕ್ಕೆ ಗುಲಾಬಿ ಬಣ್ಣದ ಬಟ್ಟೆ ಧರಿಸಿದ ಬೋಳುತಲೆಯ ಸನ್ಯಾಸಿ, ಎದೆಯ ಅರ್ಧಕ್ಕೆ ಶಾಲು ಹೊದ್ದಿದ್ದಾರೆ. ಅವರಿಗೆ ನಾನು ಕಾಣ್ತಾ ಇಲ್ಲ. ನಾನು ಈಶಾನ್ಯದಲ್ಲಿದ್ದೇನೆ, ಅವರು ಪೂರ್ವದಲ್ಲಿ. ನಾನು ಹಿಂದೆ ಸರೀತಿದ್ದೇನೆ, ಅವರು ಧಾಪುಗಾಲು ಹಾಕಿ ಬಂದು ನಾನಿರುವ ಕಡೆಗೆ ನೋಡಿ, ಸುತ್ತು ಹಾಕಿ ಮತ್ತೆ ಗುಡಿಯ ಕಡೆಗೆ ಹೋಗಿ ಅಲ್ಲಿ ಜಗಲಿಯಲ್ಲಿ ಕೂತರು. ಎಡಗೈಯಲ್ಲಿ ಗಲ್ಲ ಇಟ್ಟು ನೋಡ್ತಿದ್ದಾರೆ.

ನನ್ನ ಟ್ರಾನ್ಸ್‌ಪರೆಂಟ್ ಬಿಳಿ ಬಣ್ಣ ಕ್ರೀಮ್ ಆಯ್ತು... ಛಳಿ, ನಡುಕ... (ನಿಜವಾಗಿಯೂ ಮತ್ತಷ್ಟು ನಡುಗುತ್ತಿದ್ದರು. ಮತ್ತೊಂದು ಹೊದಿಕೆ ಹೊದೆಸಿದೆ). ಈಗ ನನ್ನ ಬಣ್ಣ ಮಾರ್ಬಲ್ ಥರ ಒಪೇಕ್ ವೈಟ್. ಛಳಿ ಜಾಸ್ತಿ ಆಗ್ತಿದೆ. ಆದ್ರೆ ನಂಗೆ ಇಲ್ಲಿಂದ ಆಚೀಚೆ ಹಂದಾಡ್ಲಿಕ್ಕೇ (ಕದಲೋದಿಕ್ಕೆ) ಆಗುದಿಲ್ಲ. ಆ ಸನ್ಯಾಸಿ ಈಗ ನಗಾಡ್ತಿದ್ದಾರೆ. ಯಾಕೆ ಹೀಗೆ? ನಾನು ಏನ್ ಮಾಡ್ಬೆಕು? ಕೇಳಿದೆ (ನನ್ನ ಸೂಚನೆಯ ಮೇರೆಗೆ). ಈಗ ಅಲ್ಲಿಂದ ಎದ್ದು ಮುಂದೆ ಬರ್ತಾರೆ. ನನ್ನ ಕಡೆಗೆ. ನಿಂತರು. ಅವರು ಕಾಣುದಿಲ್ಲ, ಆದ್ರೆ ಅದೇ ಜಾಗದಲ್ಲಿ ಉಂಗುರಕ್ಕೆ ಕಲ್ಲುಗಳನ್ನು ಸೆಟ್ ಮಾಡಿದ ಹಾಗೆ ಬೇರೆ ಬೇರೆ ಬಣ್ಣಗಳ ವಜ್ರಗಳ ಹಾಗೆ ಹೊಳೆಯುವ ಕಲ್ಲುಗಳು, ದೊಡ್ಡ ದೊಡ್ಡ ಕಲ್ಲುಗಳು. ಅವುಗಳಿಂದ ಪ್ರಕಾಶ, ಗೆರೆ-ಗೆರೆಯಾಗಿ ಕಿರಣಗಳ ಲೈನ್ಸ್ ನನ್ನ ಮೇಲೆ. ಛಳಿ ಹೋಗ್ತಾ ಉಂಟು. ಬೆಳಕಿಗೆ ಎದೆ ಕೊಟ್ಟು ನಿಂತಿದ್ದೇನೆ. ಸೂರ್ಯಾಸ್ತ ಆಗಿ ಮತ್ತೆ ಉದಯ ಆಯ್ತು. ಬೆಳಗಿನ ಸುಮಾರು ಒಂಭತ್ತು ಗಂಟೆ. ದೇವಸ್ಥಾನದ ಮುಂದುಗಡೆ ಕಲ್ಲಿನ ಮೇಲೆ ೧೯೪೨, ಸೆಪ್ಟೆಂಬರ್, ೧೫, ಕಾಣ್ತಾ ಉಂಟು. ಸರಿಯಾಗಿ ಬೆಳಕಿನ ಕಿರಣಗಳು. ಈಗ ಛಳಿ ಇಲ್ಲ (ನಿಧಾನವಾಗಿ ಒಂದು ಹೊದಿಕೆ ತೆಗೆದೆ). ನನ್ನ ಬಣ್ಣ ಬಿಳಿ, ಸ್ನೋ ಥರ ಬಿಳಿ. ಹಂದಾಡ್ಲಿಕ್ಕೆ ಕಷ್ಟ, ಬೆಳಕಿನ ಕಿರಣಗಳ ಲೈನಿನಲ್ಲಿ ಮಾತ್ರ ಸಾಗಬಹುದು, ಬೇರೆ ಕಡೆ ಇಲ್ಲ.

ಬಿಡುಗಡೆ ಕೇಳಿ ದೇವಸ್ಥಾನದ ಮುಂದೆ ನಿಂತಿದ್ದೇನೆ. ತುಂಬ ದುಬಾರಿ ಬಟ್ಟೆಯ ಚಾಮರ, ತೊಟ್ಟಿಲ ಬಟ್ಟೆ. ಕೇಸರಿ ಮತ್ತು ಗುಲಾಬಿ ಬಟ್ಟೆ ಧರಿಸಿದ ಸನ್ಯಾಸಿಗಳು ಓಡಾಡ್ತಿದ್ದಾರೆ. ಮತ್ತೆ ಅದೇ ಸನ್ಯಾಸಿಯೂ ಬಂದರು. ನಾನು ಬೆಳಕಿನ ರೂಪದಲ್ಲಿ ಸಣ್ಣಸಣ್ಣದಾಗಿ ಅವರ ಕಾಲ ಬುಡದಲ್ಲಿ ನಕ್ಷತ್ರದ ಥರ. ಅವರ ಕೈಯಲ್ಲಿ ತಂಬಿಗೆ, ಕೈಯಲ್ಲಿ ನೀರು ತಗೊಂಡು, ಆಕಾಶ ನೋಡಿ ಏನೋ ಹೇಳಿ ನನ್ನ ಮೇಲೆ- ಅವರ ಪಾದದ ಬುಡದಲ್ಲಿರುವ ಬೆಳಕಿನ ನಕ್ಷತ್ರದ ಮೇಲೆ- ನೀರು ಅಪ್ಪಳಿಸಿದರು (ಒಮ್ಮೆಲೇ ಬೆಚ್ಚಿಬಿದ್ದ ದೇಹ ಪ್ರತಿಕ್ರಿಯೆ). ಈಗ ಲ್ಲೊಂದು ಬಿಳಿ ಹೂ, ತಾವರೆ ಥರ. ಅರಳ್ತಾ ಉಂಟು. ಹೂವು ಪ್ರಣಾಮಮಾಡ್ತಾ ಉಂಟು. ಹರಸ್ತಿದ್ದಾರೆ. ಹೂ ಸರೆಂಡರ್ ಆದ ಹಾಗೆ, ಪಾದದಲ್ಲಿ. ಬಾಗಿ ಮುಟ್ಟಿದರು, ನನ್ನ ಬೆನ್ನನ್ನು ಮುಟ್ಟಿದರು. ಬಿಳಿ ರೂಪಕ್ಕೆ ಬಂದೆ. ಕಣ್ಣಲ್ಲಿ ನೀರು, ಮೈಯಲ್ಲಿ ಕಂಪನ (ನಿಜವಾಗಿಯೂ ಕಣ್ಣ ಕೊನೆಗಳಲ್ಲಿ ನೀರು ಹನಿಯುತ್ತಿತ್ತು, ಮೈ ನಡುಗುತ್ತಿತ್ತು).

ಭುಜ ಹಿಡಿದು ನಿಲ್ಲಿಸಿದ್ದಾರೆ, ನಗುತ್ತಿದ್ದಾರೆ. ಎಪ್ಪತ್ತು ವರ್ಷ ಇರಬಹುದು. ತುಂಬಾ ಒಳ್ಳೆಯ ಸನ್ಯಾಸಿ. ಸಮಾಧಾನ ಹೇಳ್ತಿದ್ದಾರೆ. ತಲೆ ಮೇಲೆ ಕೈಯಿಟ್ಟು, ‘ನೀನು ಹೋಗು, ಒಳ್ಳೇದಾಗ್ತದೆ’ ಅಂತ ಹೇಳ್ತಿದ್ದಾರೆ. ನಾನು ಉತ್ತರಿಸದೆ ಗದ್ಗದನಾಗಿ ನೋಡ್ತಿದ್ದೇನೆ (ಎರಡು ಕ್ಷಣ ಮೌನ. ನಂತರ ಗಾಂಟಲು ಸರಿಮಾಡಿಕೊಂಡು...), ಪಶ್ಚಿಮಾಭಿಮುಖವಾಗಿ ಹೊರಟಿದ್ದೇನೆ. ಬೆಟ್ಟಗಳ ಇಳಿಜಾರಿನಲ್ಲಿ ಭತ್ತ ಗದ್ದೆಗಳ ನಡುವೆ ಹಸುರು ತುಂಬಿದ ಪ್ರದೇಶ... ಎಲ್ಲ ದಾಟಿ ರಸ್ತೆ. ನನ್ನ ಬಿಳೀ ಶರೀರ ಆಕಾಶದಲ್ಲಿ, ನೀರು, ಬಯಲು, ಗುಡ್ಡ-ಬೆಟ್ಟ, ಸುಣ್ಣದ ಕಲ್ಲಿನಂಥ ಬಿಳಿ ಜಾಗ, ಎಲ್ಲ ದಾಟಿ ತುಂಬಾ ವೇಗವಾಗಿ ಬರ್ತಾ ಉಂಟು. ತುಂಬಾ ವೇಗ... ಊಹಿಸ್ಲಿಕ್ಕೂ ಆಗದ ವೇಗ. ಕೆಳಗೆ ಎಲ್ಲ ಕಾಣ್ತಾ ಉಂಟು... ಬೀಚ್ ಬದಿಯಲ್ಲಿ ಮಲಗಿದ್ದ ನನ್ನ ದೇಹ... ಅಲ್ಲೇ ಉಂಟು... ಈ ಬಿಳೀ ದೇಹ ಒಣಗಿದ ಹಾಗೆ ಮರಗಟ್ಟಿ ಮಲಗಿದ್ದ ನನ್ನ ನಿಜ ದೇಹವನ್ನು ಸೇರಿತು..."

ನನ್ನ ಸೂಚನೆಗಳನ್ನು ಅನುಸರಿಸಿ ಮುಂದಿನ ಎರಡು ಕ್ಷಣದಲ್ಲಿ ವಾಸ್ತವಕ್ಕೆ ಎಚ್ಚತ್ತುಕೊಂಡರು ಜಗನ್. ಬಹುಶಃ ಟಿಬೆಟ್ ಅಥವಾ ನೇಪಾಳ ಪ್ರದೇಶದಲ್ಲಿ, ಸಾಮಾನ್ಯನಾಗಿ ಹುಟ್ಟಿದ್ದರೇನೋ, ೧೯೪೨ರ ಸಮಯದಲ್ಲಿ ಪ್ರಾಯಃ ಸಾವನ್ನಪ್ಪಿದ್ದಿರಬೇಕು. ಅವರು ನಂಬಿದ್ದ ಬೌದ್ಧ ಸನ್ಯಾಸಿಯಿಂದ ಮತ್ತೆ ಆಶೀರ್ವಾದ ಪಡೆದು ಬಂದರೆಂದೇ ನಾವಿಬ್ಬರೂ ನಂಬಿದ್ದೇವೆ. ಆ ಆಶೀರ್ವಾದದಿಂದ ಅವರ ಆತ್ಮಸ್ಥೈರ್ಯ ಹೆಚ್ಚಬಹುದು ಎಂದು ನನ್ನ ನಿಲುವು. ಎಚ್ಚತ್ತ ಮೇಲೆ ತಾನು ಕಂಡ ದೃಶ್ಯಗಳು ಎಷ್ಟು ಸ್ಪಷ್ಟವಾಗಿದ್ದವು, ನಿಚ್ಚಳವಾಗಿದ್ದವು. ಛಳಿ, ಬೆಳಕು ಎಲ್ಲವೂ ಅನುಭವಕ್ಕೆ ಬರುತ್ತಿದ್ದವು ಎಂದರು. ಛಳಿಯಾಗುತ್ತಿದ್ದಾಗ ನಾನು ಹೊದಿಕೆ ಹೊದೆಸಿದ ಅರಿವಿದ್ದರೂ ಅದವರ ಮನೋಯಾನಕ್ಕೆ ಅಡ್ಡಿಯಾಗಿರಲಿಲ್ಲ. ಮಾನಸಿಕವಾಗಿಯೂ ಅನುಭವಿಸುತ್ತಿದ್ದ ಆ ಛಳಿ ಅವರ ಈ ಶರೀರದಲ್ಲಿ ಅದು ಹೇಗೆ ಪರಿಣಾಮ ಬೀರುತ್ತಿತ್ತು ಎನ್ನುವುದೇ ಅವರಿಗೆ ಅಚ್ಚರಿಯ ಸಂಗತಿಯಾಗಿತ್ತು. ಮನೋದೈಹಿಕ ಸಂಬಂಧವೇ ಅಂಥಾದ್ದು. ಸೂಕ್ಷ್ಮ ಶರೀರವಾದ ಸುಪ್ತಮನಸ್ಸು/ ಆತ್ಮ ಅನುಭವಿಸುವಂತದ್ದು ಸ್ಥೂಲಶರೀರವಾದ ದೇಹದ ಮೇಲೆ ನೇರ ಪರಿಣಾಮ ಉಂಟುಮಾಡಿಯೇ ತೀರುತ್ತದೆ. ಈ ಸಂಬಂಧದಿಂದಲೇ ಮನೋದೈಹಿಕ ಖಾಯಿಲೆಗಳೂ ತೊಂದರೆಗಳೂ ಕಾಣಿಸಿಕೊಳ್ಳುವುದೂ ಸಮ್ಮೋಹನದಿಂದ ನಿವಾರಣೆಯಾಗುವುದೂ ಸಾಧ್ಯ. ಇಷ್ಟೆಲ್ಲ ವಿವರಣೆಗಳ ಬಳಿಕ ಮುಂದಿನ ವಾರ ಬರುವುದಾಗಿ ಹೇಳಿ ಹೊರಟರು ಜಗನ್.