ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday 18 July, 2009

ಅಂಗಳದಿಂದ....

ಅಲ್ಲಿಂದ ಬಂದಾಗ
ಇಲ್ಲುಳಿವ ಹಂಬಲವೆ
ಬಲವಾಗಿ ಬೇರೂರಿ ಹಸಿರಾಡಿತು;
ಹಸಿನೆರಳಿನಡಿಯಲ್ಲಿ
ಉಸಿರಾಡುತಿರುವಾಗ
ಪಿಸುದನಿಯ ತೆರದಲ್ಲಿ ನೆನಪಾಡಿತು.

ಗೆಳತಿ-ಗೆಳೆಯರ ನೆನಕೆ
ಬೆಳೆದು ಹಬ್ಬಿತು ಮನಕೆ
ಕಳೆದ ಒಡನಾಟವನು ಕಣಜ ಮಾಡಿ;
ಮರೆಯ ಒಳಗೊಂದು ಹುಳು
ಕೊರೆ-ಕೊರೆದು ದಾರಿಯನು
ಸರಾಗ ಸಾಗಿತು ಯೋಚನೆಯ ಗಾಡಿ.

ಚಲನ ಶೀಲವೆ ಜೀವ-
-ಬಲವಾದ ನೆಲದಲ್ಲಿ
ಕೆಲವಾರು ಬೇರುಗಳು ಊರಲಿಲ್ಲ;
ಕವನ-ಲೇಖನ ಬರೆವ,
ಜವನ ರಂಗಕೆ ತರುವ,
ನವರಸಭರಿತರಿಗೆ ಕೊರತೆಯಿಲ್ಲ.

ಹಂಚಿಕೊಂಡಿಹ ನೆನಹು
ಅಂಚು ರಂಗಿನ ಪಟಲ,
ಚರ್ಚಿಸಿದ ಕ್ಷಣಗಳಿಗೆ ಲೆಕ್ಕವೆಲ್ಲಿ?
ಭಾಷೆ-ಬಂಧನ ನೆವನ,
ದೇಶವೊಂದರ ಸ್ಮರಣ,
ಭೂಷಣವು ಸ್ನೇಹ, ಸಹೃದಯರಲ್ಲಿ.
(೦೪-ಜುಲೈ-೨೦೦೩)
[ಹನ್ನೊಂದು ವರ್ಷಗಳ ಬಳಿಕ ಅಮೆರಿಕಾ ಬಿಟ್ಟು ಮಣಿಪಾಲಕ್ಕೆ ಹೋಗಿ ನೆಲೆಸಿದ್ದ ಸಂದರ್ಭದಲ್ಲಿ... ಎರಡು ವರ್ಷಗಳೊಳಗೇ ಮತ್ತೊಮ್ಮೆ ಅಮೆರಿಕದ ವಿಮಾನ ಹತ್ತಿದ್ದು ವಿಧಿ ಆಡಿಸಿದ ಆಟದಲ್ಲಿ]