ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 24 January, 2011

ಸುಮ್ಮನೆ ನೋಡಿದಾಗ...೧೨

‘ನಳಿನಿ, ನಿನ್ನ ಮತ್ತು ಹರಿಣಿಯ ಸ್ನೇಹ ನನ್ಗೆ ಗೊತ್ತಿರುವ ವಿಷಯವೇ. ಈಗ, ಈ ಮಕ್ಕಳನ್ನು ಹೇಳಿ ನೀವಿಬ್ರೂ ಇನ್ನಷ್ಟು ಹತ್ರ ಆಗಿದ್ದೀರಿ. ನಿಮ್ಮನ್ನು ದೂರ ಮಾಡುವ ಉದ್ದೇಶ ನನ್ನದಲ್ಲ. ಹಾಗಂತ, ಹರಿಣಿಯೂ ಇಲ್ಲೇ ಇದ್ರೆ ಮುಂದೆ ಅಮ್ಮ ಬರುವಾಗ ಖಂಡಿತಾ ತೊಂದ್ರೆ ಆಗ್ತದೆ. ಅದೆಲ್ಲ ಯೋಚನೆ ಮಾಡಿಯೇ ನಮ್ಮ ಹಿಂದಿನ ರಸ್ತೆಯಲ್ಲೇ ಒಂದು ಬಾಡಿಗೆ ಮನೆ ನೋಡಿದ್ದೇನೆ. ಹರಿಣಿ ಮತ್ತು ಲಚ್ಚಮ್ಮ ಅಲ್ಲಿಗೆ ಹೋಗಿರ್ತಾರೆ. ಇನ್ನೂ ಒಂದೆರಡು ತಿಂಗಳಾದ ಮೇಲೆ ಹರಿಣಿಗೆ ಇಲ್ಲಿಯ ಶಾಲೆಯಲ್ಲಿ ಟೀಚರ್ ಆಗಿ ಸೇರುವ ಸಾಧ್ಯತೆ ಉಂಟು. ಮಾತಾಡಿದ್ದೇನೆ. ಅವಳ ಜೀವನಕ್ಕೂ ಒಂದು ದಾರಿ ಆಗ್ತದೆ. ಮೊದಲೇ ಹೇಳಿದ್ರೆ ನೀನು ಕೇಳುವ ಸಾವಿರ ಪ್ರಶ್ನೆಗಳಿಗೆ ಉತ್ರ ಹೇಳಿ ನನ್ನ ತಲೆ ಹುಳ ಹಿಡೀತದೆ, ಅದ್ಕೇ ಹೇಳ್ಲಿಲ್ಲ. ಇನ್ನು... ದೇವರು ಎಲ್ಲವನ್ನೂ ಯೋಚನೆ ಮಾಡಿಯೇ ಮಾಡ್ತಾನೆ. ಹರಿಣಿಗೆ ಅವಳಿಗಳು ಹುಟ್ಟಿದ್ದು ಒಳ್ಳೇದಕ್ಕೇ. ಒಂದು ನಮ್ಗೆ, ಒಂದು ಅವಳಿಗೇನೇ. ಇದನ್ನು ಕೂಡಾ ಮೊನ್ನೆಯೇ ಲಚ್ಚಮ್ಮ, ಹರಿಣಿ ನಿರ್ಧರಿಸಿ ನಂಗೆ ಹೇಳಿದ್ರು. ಇವತ್ತು ಮಕ್ಕಳಿಗೆ ಮೂರು ತುಂಬ್ತದೆ. ಯಾವುದೇ ಪುರೋಹಿತರ ಹಂಗೂ ಇಲ್ಲದೆ ನಾವೇ ನಾಮಕರಣ ಮಾಡುವಾ. ಮಧ್ಯಾಹ್ನ ಹಬ್ಬದೂಟ ಮುಗಿಸಿ ಹರಿಣಿ ಮತ್ತು ಲಚ್ಚಮ್ಮ ಒಂದು ಮಗುವಿನ ಒಟ್ಟಿಗೆ ಆ ಮನೆಗೆ ಹೋಗ್ತಾರೆ. ಸಂಜೆ ಮತ್ತೆ ನಾವೆಲ್ಲ ಒಟ್ಟಿಗೆ ದೇವಸ್ಥಾನಕ್ಕೆ ಹೋಗಿ ಬರುವಾ. ನಾಳೆ ಹೇಗೂ ಎರಡನೇ ಶನಿವಾರ, ನಂಗೆ ಆಫೀಸಿಲ್ಲ. ನಾಡಿದ್ದು ಆದಿತ್ಯವಾರ. ಸೋಮವಾರದ ಹೊತ್ತಿಗೆ ಎಲ್ಲ ಸೆಟ್ ಆಗಿರ್ತದೆ. ಲಚ್ಚಮ್ಮ ನಿಮ್ಮಿಬ್ಬರಿಗೂ ಸಹಾಯ ಮಾಡಿಕೊಂಡು ಇಲ್ಲೇ ಇರ್ತಾರೆ. ಇದಿಷ್ಟು ಪ್ಲಾನ್. ಏನ್ ಹೇಳ್ತೀ?’

ಹರಿಣಿ, ನಾನು ಮುಖ ಮುಖ ನೋಡಿಕೊಳ್ತಿರುವಾಗಲೇ ಲಚ್ಚಮ್ಮನ ಖಡಕ್ ಚಾ ಲೋಟೆಗಳು ಬಂದವು. ತೊಟ್ಟಿಲು ಹೊತ್ತು ತಂದ ಆಳು ಕೆಂಚ, ಜಗಲಿ ಬದಿಯಲ್ಲಿದ್ದವ ಅಲ್ಲಿಂದಲೇ ಬಗ್ಗಿ, ‘ಮಧ್ಯಾಹ್ನ ಊಟ ಮಾಡಿ ಬರ್ತೇನೆ ಅಯ್ಯ. ಆ ಮನೆಗೆ ಸಾಮಾನು ಸಾಗಿಸ್ಲಿಕ್ಕೆ. ಅಮ್ಮ, ನಂಗೊಂದು ಲೋಟ ಪಾಯ್ಸ ಇಡಿ, ಪೂರಾ ಖಾಲಿ ಮಾಡ್ಬೇಡಿ’ ಅಂದ. ‘ನೀನು ಬಂದ್ರೆ ಪಾಯ್ಸ ಗ್ಯಾರಂಟಿ. ಬಾ ಮೊದ್ಲು’ ಅಂದ್ರು ಸುಮುಖ್. ಚಾ ಕುಡಿದು ಅವ ಹೊರಟ. ನಡುಮನೆಯಲ್ಲಿ ಮಾತುಗಳು ಚಹಾ ಲೋಟಗಳೊಳಗೆ ಮುಳುಗಿದ್ದವು.

‘ಹರಿಣಿಯ ಮಗಳು ಶಿಶಿರಾ. ನಳಿನಿಯ ಮಗಳು ನೇಹಾ.’ ಸುಮುಖ್ ದನಿಯಲ್ಲಿ ತಮಾಷೆಯಿರಲಿಲ್ಲ. ನಾವು ಮೂವರೂ ಅವರ ಮುಖ ನೋಡಿದೆವು.
‘ಒಪ್ಪಿಗೆಯಿಲ್ವಾ?’
‘....’ ಮೂರು ತಲೆಗಳು ಸುಮ್ಮನೇ ಮೇಲಿಂದ ಕೆಳಗೆ ಆಡಿದವು.
‘ಮತ್ಯಾಕೆ ಹಾಗೆ ನೋಡ್ತೀರಿ?’
‘....’
‘ಏನಾದ್ರೂ ಮಾತಾಡಿ... ಯಾರಾದ್ರೂ...’
‘....’
‘ಲಚ್ಚಮ್ಮ, ಚಾ ಮಾಡುವಾಗ ಏನಾದ್ರೂ ಮದ್ದು ಹಾಕಿದ್ರಾ ಹೇಗೆ?’
‘....’
‘ಅಯ್ಯೋ ದೇವ್ರೇ... ಮಾತಾಡಿ ಮಾರಾಯ್ತಿಯರೇ... ಇಲ್ಲಿ ಏನೂ ಅವಾಂತರ ಆಗ್ಲಿಲ್ಲ...’
‘....’
‘....’
ಒಂದು ಜೊತೆ ಕಿಸಕ್ ಸದ್ದು ಸೋಫಾವನ್ನೊಮ್ಮೆ ಕಂಪಿಸಿತು. ಅದೇ ಪ್ರತಿಧ್ವನಿಸಿ ನಡುಮನೆ ತುಂಬ ಗಲಗಲವಾಯ್ತು. ನಕ್ಕೂನಕ್ಕೂ ನನ್ನ ಹರಿಣಿಯ ಕಣ್ಣುಗಳಲ್ಲಿ ನೀರಿಳಿಯಲು ಶುರುವಾದಾಗ ಲಚ್ಚಮ್ಮ ಟವೆಲ್ ತಂದುಕೊಟ್ಟರು. ಸುಮುಖ್ ನೇಹಾಳನ್ನು ಎತ್ತಿಕೊಂಡು ಅಲ್ಲಿಂದ ಜಾರಿಕೊಂಡರು. ಅವರ ಹಿಂದೆಯೇ ಲಚ್ಚಮ್ಮ ಶಿಶಿರಳನ್ನು ಮಾತಾಡಿಸುತ್ತಾ ನಡೆದರು. ಮುಂದೆ ಎಲ್ಲವೂ ಸುಮುಖ್ ಯೋಜಿಸಿದ ಹಾಗೇ ನಡೆದುಹೋಯ್ತು. ಮಕ್ಕಳ ಮನೆಯಿಂದ ಹಿಂದೆ ಬಂದ ಅತ್ತೆ ಕೂಡಾ ಖುಷಿಯಾಗಿಯೇ ನೇಹಾಳನ್ನು ಮುದ್ದು ಮಾಡಲು ಶುರುಮಾಡಿದಾಗ ಈ ಮನೆ ನಂದನವೇ ಆಯ್ತು. ಆಮೇಲಾಮೇಲೆ ಲಚ್ಚಮ್ಮ ಇಲ್ಲಿಗೆ ಬರುದನ್ನು ಕಡಿಮೆ ಮಾಡಿದ್ರು. ನಂಗೆ ಸಹಾಯಕ್ಕೆ ಅತ್ತೆ ಇದ್ರಲ್ಲ, ನಂಗೂ ತೊಂದ್ರೆ ಆಗ್ಲಿಲ್ಲ. ನಿಜವಾಗಲೂ ನೆಮ್ಮದಿ ಅನ್ನುದನ್ನು ನಮ್ಮನೆಗೆ ತಂದವಳು ಈ ನೇಹಾ. ಇವಳು ನಿನ್ನ ತಂಗಿ, ಶಿಶಿರಾ. ಆದ್ರೂ ನೀವು ಒಬ್ರ ಹಾಗೆ ಇನ್ನೊಬ್ರಿಲ್ಲ. ಮೊದಲಿಂದಲೂ ನೀವಿಬ್ರೂ ಬೇರೆ ಬೇರೆ ಸ್ವಭಾವದವ್ರೇ. ನಮ್ಮೆಲ್ಲರ ಜೀವನಕ್ಕೆ ಬೆಳಕಾಗಿ ಬಂದವರು ನೀವಿಬ್ರು ಮಕ್ಳೇ. ಎಂದಿಗೂ ಸುಖವಾಗಿರಿ....
*****
ನಳಿನಿ ಆಂಟಿ ಮಾತು ಮುಗಿಸಿದಾಗ ನಮ್ಮಿಬ್ಬರ ಕಣ್ಣುಗಳು ಗೊಂದಲಮಯವಾಗಿಯೇ ಇದ್ದವು. ನನ್ನೊಳಗೆ ನೂರಾರು ಪ್ರಶ್ನೆಗಳು. ಇಷ್ಟು ಹತ್ರ ಇದ್ದ ನಾವುಗಳು ಈ ಊರು ಬಿಟ್ಟು ಹೋದದ್ದು ಯಾಕೆ? ಯಾವಾಗ? ಮತ್ತೊಮ್ಮೆ ಇದೇ ಊರಿಗೆ ಬಂದದ್ದು ಯಾಕೆ? ಲಚ್ಚಮ್ಮ ಈಗೆಲ್ಲಿದ್ದಾರೆ? ಅಮ್ಮ ಯಾಕೆ ಸದಾ ಸಿಡುಕ್ತಾರೆ? ಅದ್ರ ಹಿನ್ನೆಲೆ ಏನು? ಸಿನೆಮಾಗಳಲ್ಲಿ ಆಗುವ ಹಾಗೆ ಧಡಕ್ಕನೆ ಎದ್ದು ಒಬ್ಬರನ್ನೊಬ್ಬರು ತಬ್ಬಿಕೊಳ್ಳಬೇಕು ಅಂತ ನೇಹಾಳಿಗಾಗಲೀ ನನಗಾಗಲೀ ಅನ್ನಿಸಲೇ ಇಲ್ಲ. ಸುಮ್ಮನೇ ಒಬ್ಬರನ್ನೊಬ್ಬರು ನೋಡುತ್ತಾ ಕೂತಿದ್ದೆವು.

ಆಂಟಿಯೇ ನಮ್ಮನ್ನೆಬ್ಬಿಸಿದರು. ಆಗಲೇ ಸುಮುಖ್ ಅಂಕಲ್ ಗೇಟಿನೊಳಗೆ ಬಂದವರು ನಮ್ಮನ್ನು ಜಾಜಿ ಮಂಟಪದಲ್ಲಿ ನೋಡಿ ಅಲ್ಲಿಗೇ ಬಂದ್ರು. ‘ನಮ್ಮ ಜಿಂಕೆಮರಿಗಳು ಹೇಗಿದಾವೆ?’ ಎನ್ನತ್ತಾ ನಮ್ಮಿಬ್ಬರ ಕಡೆ ಮಿಂಚು ನೋಟ ಹರಿಸಿದರು. ಅವರು ಯಾವಾಗಲೂ ಹೇಳುತ್ತಿದ್ದ ಆ ‘ಜಿಂಕೆಮರಿಗಳು’ ಪದಕ್ಕೆ ಇವತ್ತು ವಿಶೇಷ ಅರ್ಥ ಕಂಡಿತು ನಮಗಿಬ್ಬರಿಗೂ. ಅವರ ಕಣ್ಣ ಮಿಂಚು ನಮ್ಮೊಳಗೆ ಹರಿಯಿತು. ಅಚಾನಕ್ ವಾಚಿನತ್ತ ನೋಡಿ ಗಾಬರಿಯಿಂದ ಮೆಟ್ಟಿಬಿದ್ದೆ.