ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday 22 June, 2008

ಅಮರಗಂಧ

(ಗುರುರಾಜ ಮಾರ್ಪಳ್ಳಿಯವರ ಸಂಗೀತ ನಿರ್ದೇಶನದ "ಹೇಳು ಮನಸೇ" ಧ್ವನಿಮುದ್ರಿಕೆಯಲ್ಲಿದೆ.
ಹಾಡಿದವರು: ಶ್ರೀಮತಿ ಸಂಗೀತಾ ಬಾಲಚಂದ್ರ, ಉಡುಪಿ.)


ಹವಳದ ತುದಿಯಲಿ ಅರಳುವ ಮುತ್ತು
ಹರಡುವ ಕಂಪು ಮುಸ್ಸಂಜೆಗೆ ಗೊತ್ತು
ಹಸುರಿನ ತೆರೆಯಲಿ ಮಿಂಚುವ ಮಾಯೆ
ಹೊತ್ತಾರೆ ನೋಡಲು ಬೆಳ್ಳನೆ ಛಾಯೆ

ಕಡಲಿನಾಳದ ಚಿಪ್ಪು ಒಡೆದಿಲ್ಲಿ ಬಂತೆ?
ಬರುವಾಗ ಹವಳವನು ಸೆಳೆತಂದಿತಂತೆ!
ದೇವಲೋಕದ ಗಂಧ ಚಂದನವ ಪೂಸಿ
ನಮಗಾಗಿ ಅರಳುತಿವೆ ಸೌಂದರ್ಯ ಸೂಸಿ

ಒಂದೊಂದು ತಾರೆಯೂ ಅಲ್ಲಿಂದ ಕಳಚಿ
ಇಳಿವಾಗ ಹದವಾದ ಹಾಲಂತೆ ಬಿಳಿಚಿ
ತುದಿಯಲ್ಲಿ ನೆಪಮಾತ್ರಕೊಂದು ಕಿಡಿ ಕೆಂಡ
ಮುಡಿದುಕೊಂಡರೆ ಮಾತ್ರ ಕ್ಷಣದಲ್ಲಿ ದಂಡ

ಇಂಥ ನಾಜೂಕು ಚೆಲುವ ಅಮರಾವತಿ ಹೂವು,
ಇಲ್ಲೆಲ್ಲಿ ಹುಡುಕಲಿ, ಪರದೇಶಿಗಳು ನಾವು
ಆ ಕಂಪು, ಆ ಅಂದ, ಗಂಟೆಗಳ ಆಯುಸ್ಸು
ಕಳೆದುಹೋಗಿದೆ ಈಗ; ಅಂತೆ ಬಾಲ್ಯ ವಯಸ್ಸು

ನಿನ್ನ ಮುತ್ತುಗಳನ್ನು ಆಯುತ್ತಿದ್ದ ಕೈಗಳು
ಪೋಣಿಸಿ ಮಾಲೆಮಾಡಿ ಏರಿಸಿಕೊಂಡ ಹೆರಳು
ದೇವ ಪೂಜೆಗೆ ನಿನ್ನ ತುಂಬಿಟ್ಟ ಹರಿವಾಣ
ಪಾರಿಜಾತ, ನೀನಿಲ್ಲದೂರಲ್ಲಿ ಇವೆಲ್ಲ ಭಣಭಣ
(೧೦-ಜುಲೈ-೧೯೯೮)