ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday 8 August, 2012

ದಾರಿ

"ರಾಜಾ..." ಜಯರಾಮನ ಕರೆಗೆ ಓಡಿ ಬಂದಳು ರಾಜಶ್ರೀ. ನಲ್ವತ್ತೆರಡು ವರ್ಷಗಳ ಒಡನಾಟ ಬಿಟ್ಟೀತೆ?
"ಏನು ಬೇಕು, ದೊರೆ?"
"ಸ್ವಲ್ಪ ನೀರು..." ಸ್ವರ ಉಡುಗುತ್ತಿತ್ತು.
ಮಗ ಬೇಗ ಬರಬಾರದೆ? ಬರಬೇಕಾಗಿತ್ತು ಈ ಹೊತ್ತಿಗೆ. ಫ್ಲೈಟ್ ಲೇಟೋ ಏನೋ! ಹಂಬಲಿಸುತ್ತಲೇ ಜಯರಾಮನ ಒಣಗುತ್ತಿದ್ದ ತುಟಿಗಳ ನಡುವೆ ಒಂದೆರಡು ಗುಟುಕು ಎಳನೀರು ಹನಿಸಿದಳು. ನಿಧಾನವಾಗಿ ಸವಿದ. ಅಷ್ಟಕ್ಕೇ ಸುಸ್ತಾಗಿ ಹಾಗೇ ದಿಂಬಿಗೆ ಒರಗಿದ. ಒಡಲೆಲ್ಲ ಬಗೆದು ನೋಡಿದರೆ ಏನಿದ್ದೀತು ಒಳಗೆ? ಗೆದ್ದಲು ತಿಂದ ಮರದ ಹಾಗಿರಬಹುದಾ? ರಾಜಶ್ರೀ ಮುಂದೆ ಯೋಚಿಸದೆ ಅಡುಗೆ ಕೆಲಸ ಮುಗಿಸಲು ಹೋದಳು.

ಯೋಚನೆಗಳು ಬೆನ್ನು ಬಿಡವು. ಇರುವ ಒಬ್ಬನೇ ಮಗ ಸಂಸಾರ ಸಮೇತ ಆಸ್ಟ್ರೇಲಿಯಾದಲ್ಲಿ. ಈ ವರ್ಷ, ಮುಂದಿನ ವರ್ಷ ಅನ್ನುತ್ತಾ ಹತ್ತು ವರ್ಷಗಳೇ ಕಳೆದಾಗಿದೆ. ಇನ್ನೂ ಗಂಟು ಮೂಟೆ ಕಟ್ಟಿ ಊರಿಗೆ ಬಂದಿಲ್ಲ. ಇಲ್ಲಿ ಜಯರಾಮನ ಆರೋಗ್ಯ ಗಂಟು ಮೂಟೆ ಕಟ್ಟಲಿಕ್ಕೆ ಶುರು ಮಾಡಿದ್ದು ವರ್ಷದ ಹಿಂದೆ ಗೊತ್ತಾದಾಗ ಗಾಬರಿಯಾದದ್ದು ಅವನಿಗೇ, ಇವಳಿಗಲ್ಲ. ಇತ್ತೀಚೆಗೆ, ಜಯರಾಮ ದಿನಗಣನೆಯ ಮಟ್ಟ ಮುಟ್ಟಿದ ಅಂದಾಗ, ಫೋನಲ್ಲಿ ಹೇಳಿದ್ದ, "ಅಮ್ಮ, ನೀನು ಪಾಸ್‌ಪೋರ್ಟಿಗೆ ಅಪ್ಲೈ ಮಾಡು. ಮತ್ತೆ ಇಲ್ಲಿಗೇ ಬಂದುಬಿಡು..." ಸುಮ್ಮನೆ ಕರೆ ಕಟ್ ಮಾಡಿದ್ದಳು. ಅವನೇನೋ ಅಪ್ಪನ ಸಾವನ್ನು ಎದುರು ನೋಡುತ್ತಿರಬಹುದು, ಅವನಿಗೆ ಬದುಕು ಎದುರಾಗಿದೆ. ಜಯರಾಮನ ನಂತರ ತನ್ನ ದಾರಿ ಹೇಗೆ? ಪ್ರಶ್ನೆ ಭೂತಾಕಾರ ಮಾತ್ರವೇ ಆಗುತ್ತಿತ್ತು ರಾಜಶ್ರೀಯ ಮನದಲ್ಲಿ.

ಯಾವುದೇ ಘಳಿಗೆಯಲ್ಲಿ ಗಾಡಿ ಮನೆ ಮುಂದೆ ಬರಬಹುದು. ಮಗ, ಸೊಸೆ, ಮತ್ತು ಮೊಮ್ಮಗ ಬಂದುಬಿಡುತ್ತಾರೆ. ವಾರದಿಂದ ಕಾಯುತ್ತಿದ್ದಳವಳು. ಅಡುಗೆ ಮುಗಿಸಿ ಕಟ್ಟೆ ಒರಸಿ ಹಾಗೇ ಗೋಡೆಗೊರಗಿ ದೇವರ ಗೂಡು ನೋಡುತ್ತಾ ಕೂತವಳ ಕಣ್ಣುಗಳಲ್ಲಿ ಧಾರೆ.
"ಭಗವಂತಾ, ಈ ಎರಡು ಜೀವಗಳಿಗೆ ಇನ್ನೆಷ್ಟು ದಿನಗಳ ಯಾತನೆ? ಅವರ ಮೌನ ವೇದನೆ ಸಹಿಸೋದು ಹೇಗೆ ನಾನು? ಆ ನೋವು ನಂಗಾದರೂ ಕೊಡು." ಮನದೊಳಗಿನ ಪರಮಾತ್ಮನೊಡನೆ ಮಾತಾಡುತ್ತಾ ಗೂಡಿನ ಬಿಂಬ ಕಂಗಳಲ್ಲಿ ತುಂಬಿಕೊಂಡು ಕಳೆದುಹೋಗದಂತೆ ಕಣ್ಣು ಮುಚ್ಚಿದಳು. ಆ ಪರಮಾತ್ಮನ ಜೊತೆ ಮತ್ತಷ್ಟು ಮಾತಾಡಿದಳು. ಒಳಗೊಳಗೇ ಇನ್ನೂ ಇನ್ನೂ ಕೊಳೆತಂತೆ ಕರಗಿಕೊಳ್ಳುತ್ತಿರುವ ಜೀವಕೋಶಗಳ ಶಿಥಿಲ ದೇಹದಿಂದ ಆ ವ್ಯಾಧಿಕಣಗಳು ದೇವಕರುಣೆಯ ಶಕ್ತಿಧಾರೆಯಲ್ಲಿ ತೊಳೆದು ಹೋಗುವ ದೃಶ್ಯ ಕಲ್ಪಿಸಿಕೊಂಡಳು. ಅದೂ ಕೂಡಾ ಜಯರಾಮನಿಗೆ ನೋವೇ ಕೊಡಬಹುದಾ? ಉತ್ತರವಿರಲಿಲ್ಲ.
"ಬಿಡುಗಡೆ ಕೊಡು, ದೇವಾ... ಬಿಡುಗಡೆ ಕೊಡು" ಕಂಗೆಟ್ಟು ಮೊರೆಯಿಟ್ಟಳು.

ಗೇಟ್ ತೆರೆದು ಗಾಡಿ ಒಳ ಬಂದು, ಬಾಗಿಲುಗಳ ಸದ್ದಾಗಿ, ಚಪ್ಪಲಿಗಾಲುಗಳು ಮೆಟ್ಟಲೇರಿ ಮುಂಬಾಗಿಲು ದೂಡಿಕೊಂಡು ಒಳಬಂದ ದನಿಗಳಿಗೆ ಪ್ರತಿಯಾಗಿ ಜಯರಾಮ ಇಷ್ಟೇ‌ಇಷ್ಟು ಉತ್ಸಾಹ ಕೂಡಿಸಿಕೊಂಡು ಕೂಗಿ ಕರೆದ,
"ರಾಜಾ... ಬಾ... ಮಕ್ಕಳು ಬಂದ್ರು ನೋಡು. ರಾಜಾ..."
ಒಳಮನೆಯಲ್ಲಿ ಸದ್ದಿಲ್ಲ. 
(೦೯-ಜುಲೈ-೨೦೧೨)

Wednesday 16 May, 2012

ರಜತ-ಸ್ನೇಹ-ಸಮ್ಮಿಲನ





ಅತ್ತ ಮರೆಯುವ ಮುನ್ನ ಮತ್ತೆ ಬೆರೆಯುವ ಚೆನ್ನ
ಅವಕಾಶ ಹೊಂದಿಸುತ ಕರೆಯುತಿರುವೆ

ಬನ್ನಿ ನೀವುಗಳೆಲ್ಲ ಮನದ ಮೂಲೆಯ ಮೆಲ್ಲ
ತಡವುತ್ತ ನೆನಹುಗಳ ಕರೆದುತೆರೆದು

ಸೇರಿ ಕಲೆಯುತ ನಗುವ ಹರುಷ ಹಂಚುತ ನೆನೆವ
ಕಳೆದ ವರುಷಗಳನ್ನು ಗುಣಿಸಿಗಣಿಸಿ

ಇಂದು ತರತಮವಿಲ್ಲ ಸಂದ ದಿನಗಳನೆಲ್ಲ 
ಹೊರಳಿ ಕುಲುಕಿಸಿ ಬೆದಕಿ ತೆಗೆವ, ಬನ್ನಿ

ಮೊದಲ ಹೆಜ್ಜೆಯನಿಟ್ಟು ಬಗಲಿನೊಜ್ಜೆಯ ಬಿಟ್ಟು
ಮರಳಿ ಬೆರೆಯುವ ನಿಲುವ ತಳೆವ, ಬನ್ನಿ

ಕೆಚ್ಚುಗುಚ್ಚುಗಳಿರದ ಬೆಚ್ಚನೆಯ ಮಕರಂದ
ತುಂಬುಹೃದಯದಲೆಂದು ಉಳಿಸೆ ಬನ್ನಿ

ಪಡೆದ ಪದವಿಗೆ ರಜತ ನಡೆದ ಹಾದಿಯ ಸವೆತ
ಎಲ್ಲ ಮೆಲ್ಲುತ ಹುರುಪುಗೊಳುವ ಬನ್ನಿ

(೨೨-ಎಪ್ರಿಲ್-೨೦೧೨)

Tuesday 14 February, 2012

ರಾತ್ರಿಹಕ್ಕಿ ಮತ್ತು ಚಾರಣ

[ಜನವರಿ ಹದಿನಾಲ್ಕರ ಸಂಜೆ ನಡೆದ ವಿಶಿಷ್ಟ ಕಾರ್ಯಕ್ರಮ- "ಕಾವ್ಯ- ವಾಚನ- ಗಾಯನ- ಚಿಂತನ- ನರ್ತನ"! ಶ್ರೀಯುತ ಉದ್ಯಾವರ ಮಾಧವ ಆಚಾರ್ಯರು ಯೋಚಿಸಿ ಆಯೋಜಿಸಿದ್ದ ಈ ಅಕ್ಷರ-ನಾದ-ನೃತ್ಯ ಸಂಗಮದಲ್ಲಿ ಆರು ಕವಿಗಳು, ಆರು ಸಹೃದಯ ಚಿಂತಕರು, ಆರು ಗಾಯಕರು ಹಾಗೂ ಎಂಟು ನರ್ತಕರು (ನಟುವಾಂಗ-ಹಿಮ್ಮೇಳ ಸಹಿತ) ಭಾಗವಹಿಸಿದ್ದರು. ಅಂದು ನಾ ಓದಿ, ಶ್ರೀ ನೀಲಾವರ ಸುರೇಂದ್ರ ಅಡಿಗರು ವಿಶ್ಲೇಷಿಸಿದ ನನ್ನೆರಡು ಕವನಗಳು ಇದೀಗ ನಿಮ್ಮೆಲ್ಲರ ಅವಗಾಹನೆಗೆ.]
************

ರಾತ್ರಿಹಕ್ಕಿ

ಕುದಿಯುತಿರುವ ಕಡಲಿನೊಳಗೆ
ಉರಿದು ದಣಿದ ಸೂರ್ಯ ಮುಳುಗೆ
ಬೆಳಗಿನಿಂದ ಬೆಳಗಿ ಬೆಳಗಿ
ಬಾಗಿ ನಿಂತ ಬಾನ ಕೆಳಗೆ
ರಾತ್ರಿ ಹಕ್ಕಿ ಹಾರಿತು
ಅದರ ನೆರಳು ಜಾರಿತು

ಕಪ್ಪು ಹಾಸು ಹಾಸಿ ಬಂದು
ಗುಮ್ಮನನ್ನು ಕರೆವೆನೆಂದು
ಬಳಲಿದವರ ಒಳಗೆ ತಂದು
ಬಾಗಿಲಂಚಿನಿಂದ ಸಂದು
ರಾತ್ರಿ ಹಕ್ಕಿ ಹಾರಿತು
ಅದರ ನೆರಳು ಜಾರಿತು

ಕಮ್ಮೆನ್ನುವ ಬಿಳಿಯ ಮುಗುಳು
ಕುಸುಮ ರಾಣಿ ಬೆಳಕ ಮಗಳು
ಕಣ್ಣು ಹೊಡೆವ ಚುಕ್ಕಿ ಹರಳು
ಮುಸುಕಿನೊಳಗೆ ಸೋಲುತಿರಲು
ರಾತ್ರಿ ಹಕ್ಕಿ ಹಾರಿತು
ಅದರ ನೆರಳು ಜಾರಿತು
(೦೮-ಮೇ-೨೦೧೧)
************

ಚಾರಣ

ಕಟ್ಟೆ ತುಂಬಿ ಹರಿದುಹೋದ ನೀರಿಗೇಕೆ ಹೆಸರು
ಒಡಲ ತುಂಬ ನಲಿಯಬಹುದು ಹಸುರಿನ ಹೊಸ ಉಸಿರು

ಗಾಳಿಗೊಡ್ಡಿಕೊಂಡ ಬದುಕು ಯಾರ ಮನದ ಇಂಗಿತ
ಸೂರಿನೊಳಗೆ ನೆರೆಯು ಮೊರೆಯೆ ಯಾರಿತ್ತರು ಅಂಕಿತ

ಕಾನಸುಧೆಯ ನೆಳಲಿನಲ್ಲಿ ಚಂಚಲಿಸುವ ಚೇತನ
ಮಂಜು ಹನಿಸಿ ಮಾಗಿ ಬಿಗಿದು ಚಿತ್ತಾಯಿತು ಚಿನ್ಮನ

ಆಟವುಂಟು ಲೆಕ್ಕವಲ್ಲ ಬಾಳು ಬಾಳಿದವರದು
ಗೋಡೆಯೊಳಗೆ ಗುಟ್ಟು ಗುನುಗು ಬಿಸುಪು ಮಾತ್ರ ನಮ್ಮದು

ಮಾತು ಮಾತಿಗೊಂದು ಸುತ್ತು ಚುಕ್ಕಿ ಬೆಳಕು ವರ್ತುಲ
ಏರಿ ಇಳಿದು ಹಾದಿ ಮಣಿದು ಚರ ಚೈತ್ರದ ಸಂಕುಲ
(೨೨-ಡಿಸೆಂಬರ್-೨೦೧೧)
************

ನೀಲಾವರ ಸುರೇಂದ್ರ ಅಡಿಗ:-

ಮೊತ್ತ ಮೊದಲು ಉದ್ಯಾವರ ಮಾಧವ ಆಚಾರ್ಯರಿಗೆ ನಾನು ಶರಣು. ಸಂಕ್ರಾಂತಿಯ ಶುಭದಿನ ಒಂದು ಅತ್ಯುತ್ತಮವಾದ ಕವಿತಾಗುಚ್ಛವೊಂದನ್ನು ಓದಿ ಸಹೃದಯ ಪ್ರತಿಕ್ರಿಯೆ ನೀಡುವ ಅವಕಾಶ ಕಲ್ಪಿಸಿದ್ದಕ್ಕಾಗಿ ಇನ್ನೊಮ್ಮೆ ಅವರಿಗೆ ಶರಣು.

‘ಸುಪ್ತದೀಪ್ತಿ’ ಕಾವ್ಯನಾಮದ ಶ್ರೀಮತಿ ಜ್ಯೋತಿ ಮಹಾದೇವರವರ ಈ ಎರಡು ಕವಿತೆಗಳು ಒಂದೊಂದು ಸಲ ಓದಿದಾಗ ಒಂದೊಂದು ರೀತಿಯ ಒಳ ಅರ್ಥ ಕೊಡುತ್ತವೆ. ಈ ಕವಿತೆಗಳ ಮೇಲುನೋಟದ ಅರ್ಥಕ್ಕಿಂತ ಒಳನೋಟದ ಅರ್ಥ ತುಂಬಾ ವಿಶಾಲವಾಗಿದೆ.

‘ರಾತ್ರಿ ಹಕ್ಕಿ’ಯಲ್ಲಿ ಮೂರು ಚರಣಗಳಿವೆ. ಮೊದಲ ಚರಣ ಸಂಧ್ಯಾಕಾಲ, ಎರಡನೇ ಚರಣ ರಾತ್ರಿಯ ಹೊತ್ತು, ಮೂರನೆಯ ಚರಣ ಬೆಳಗಿನ ಸಂದರ್ಭವನ್ನು ಚಿತ್ರಿಸುತ್ತವೆ.

ಧ್ವನಿ ಕಾವ್ಯದ ಆತ್ಮ ಎಂಬ ಮಾತಿಗೆ ಈ ಕವಿತೆ ಶ್ರೇಷ್ಠ ಉದಾಹರಣೆಯಾಗಿದೆ.

‘ಬೆಳಗಿನಿಂದ ಬೆಳಗಿ ಬೆಳಗಿ ಬಾಗಿ ನಿಂತ ಬಾನ ಕೆಳಗೆ’ ಉರಿದು ದಣಿದ ಸೂರ್ಯ ಕುದಿಯುತ್ತಿರುವ ಕಡಲಿನೊಳಗೆ ಮುಳುಗುತ್ತಾನೆ. ಆಗ ರಾತ್ರಿಹಕ್ಕಿ ಹಾರಿತು, ಅದರ ನೆರಳು ಕೂಡ ಜಾರಿ ಹೋಗುತ್ತದೆ, ಕಣ್ಮರೆಯಾಗುತ್ತದೆ.

ಬೆಳಗಿನಿಂದ ಸಂಜೆಯವರೆಗೂ ದುಡಿದು ದುಡಿದು ಸುಸ್ತಾದ ದೇಹ ಆರಾಮವನ್ನು ಬಯಸುತ್ತದೆ. ಇಲ್ಲಿ ದೇಹ ಮತ್ತು ಚೇತನಗಳ ಪರಸ್ಪರ ಸಂಬಂಧವನ್ನು ಕವಯತ್ರಿ ತುಂಬ ಸೊಗಸಾಗಿ ಸೆರೆಹಿಡಿದಿದ್ದಾರೆ. ಇದು ಸಹೃದಯನಿಗೂ ಕೂಡಾ ಅರ್ಥೈಸಿಕೊಳ್ಳಲಿಕ್ಕೆ ಸ್ವಲ್ಪ ಮಟ್ಟಿನ ತ್ರಾಸವೇ ಆಗಿದೆ (ಈ ಕವಿತೆಯನ್ನು ನಾಲ್ಕು ಜನ ಕವಿ ಮಿತ್ರರಿಗೆ ತೋರಿಸಿದಾಗ ಅವರಿಂದ ಬಂದ ಪ್ರತಿಕ್ರಿಯೆಗಳ ಆಧಾರವಾಗಿ ಈ ಮಾತು ಹೇಳಿರುವುದಾಗಿದೆ). ಒಬ್ಬೊಬ್ಬ ಸಹೃದಯನಿಗೆ ಒಂದೊಂದು ರೀತಿಯ ಅರ್ಥ ಕೊಡುವ ಕಾರಣಕ್ಕಾಗಿ ಇದೊಂದು ಶ್ರೇಷ್ಠ ಕವಿತೆ ಎಂದು ಭಾವಿಸಿದ್ದೇನೆ.

ಎರಡನೆಯ ಚರಣದಲ್ಲೂ ಕೊಟ್ಟ ಉದಾಹರಣೆ ಕೂಡ ಅದ್ಭುತ. ಗುಮ್ಮನನ್ನು ಕರೆವೆನೆಂದು ಬಳಲಿದವರ ಒಳಗೆ ತಂದಾಗ ಬಾಗಿಲ ಅಂಚಿನ ಸಂದಿನಿಂದ ‘ರಾತ್ರಿ ಹಕ್ಕಿ ಹಾರಿತು’ ಎಂದು ಕವಯತ್ರಿ ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲಿ ಬದುಕಿನ ಜಂಜಾಟವನ್ನೆಲ್ಲಾ ಮರೆತು ದೇಹ ವಿಶ್ರಾಂತಿ ಪಡೆಯುತ್ತದೆ ಎಂಬ ಅರ್ಥೈಸುವಿಕೆ ನನ್ನದು. ಇಲ್ಲಿ ಚೇತನ ಹಾರಿ ಹೋಗುವುದಿಲ್ಲ. ಆದರೆ ದುಗುಡ, ದುಮ್ಮಾನಗಳು ಮರೆಯಾಗುತ್ತವೆ.

ಕೊನೆಯ ಚರಣದಲ್ಲಿ ‘ಕುಸುಮ ರಾಣಿ ಬೆಳಕ ಮಗಳು, ಕಣ್ಣು ಹೊಡೆವ ಚುಕ್ಕಿ ಹರಳು’ ನಾನು ಮೆಚ್ಚಿಕೊಂಡ ಸಾಲುಗಳು. ‘ಮುಸುಕಿನೊಳಗೆ ಸೋಲುತಿರಲು, ರಾತ್ರಿ ಹಕ್ಕಿ ಹಾರಿತು’ ಎಂಬ ಸಾಲಿನ ಸಾರ ಕೂಡ ಯೋಚನೆಗೆ ಎಡೆ ಮಾಡಿಕೊಡುತ್ತದೆ.

‘ರಾತ್ರಿ ಹಕ್ಕಿ’ ಕವಿತೆಯಲ್ಲಿ ಬದುಕಿನ ಒಳನೋಟವಿದೆ.ದೇಹ ಮತ್ತು ಚೇತನಗಳ ಪರಸ್ಪರ ಸಂಬಂಧದ ಸೂಕ್ಷ್ಮ ಒಳಹರಿವು ಇರುವುದನ್ನು ಗಮನಿಸಬಹುದು. ಇಲ್ಲಿ ಬದುಕಿನ ಜಂಜಾಟದಲ್ಲಿ ಆಗುವ ಅನುಭವಗಳ ಸೊಗಸಾದ ಚಿತ್ರಣವಿದೆ.

ಇನ್ನೊಂದು ಕವಿತೆ ‘ಚಾರಣ’. ಇದು ಕೂಡ ಬದುಕಿನ ಚಾರಣವನ್ನು ತಿಳಿಸುತ್ತದೆ:

‘ಕಟ್ಟೆ ತುಂಬಿ ಹರಿದುಹೋದ/ ನೀರಿಗೇಕೆ ಹೆಸರು?// ಒಡಲ ತುಂಬ ನಲಿಯಬಹುದು/ ಹಸುರಿನ ಹೊಸ ಉಸಿರು’. ಇಲ್ಲಿ ದೇಹದೊಳಗಿರುವ ಚೇತನದ ಪ್ರಾಮುಖ್ಯದ ಅರಿವು ನಮಗಾಗುತ್ತದೆ. ಗಾಳಿಗೆ ಒಡ್ಡಿಕೊಂಡಿರುವ ಬದುಕು; ಅದನ್ನು ನಿಭಾಯಿಸುವ ಚೇತನ. ಇವುಗಳ ಪರಸ್ಪರ ಹೋಲಿಕೆಯ ಅರ್ಥಪೂರ್ಣತೆಯನ್ನು ಯೋಚಿಸುವಂತೆ ಮಾಡಿದೆ.

ಮಾಗಿಯ ಬಿಗಿ ಅಪ್ಪುಗೆಯಲ್ಲಿ ಚಿನ್ಮನ ಚಿತ್ತಾಗುವುದು, ಕಾನಸುಧೆಯ ನೆಳಲಿನಲ್ಲಿ ಚಂಚಲಿಸುವ ಚೇತನ - ಇವೆಲ್ಲ ಬದುಕಿನ ಚಾರಣಕ್ಕೆ ಸಂಬಂಧಿಸಿದ ಹಾಗೆ ಕವಯತ್ರಿ ನೀಡುವ ಅರ್ಥಪೂರ್ಣ ಉದಾಹರಣೆಗಳಾಗಿವೆ. ಗೋಡೆಯೊಳಗಿನ ಗುಟ್ಟು ಗುನುಗುವಾಗ ಅದನ್ನು ಹೊಂದಿಸುವ ಕೆಲಸ ಮಾತ್ರವಾಗುತ್ತಿದೆ. ‘ಆಟವುಂಟು ಲೆಕ್ಕವಲ್ಲ, ಬಾಳು ಬಾಳಿದವರದು’ ಎಂಬ ಹೇಳಿಕೆಯು ವಿಶಿಷ್ಟ ಧ್ವನಿಯನ್ನು ಹೊರಹಾಕಿದೆ.

ಏರಿ ಇಳಿದು ಹಾದಿ ಮಣಿದು, ಮಾತು ಮಾತಿಗೊಂದು ಸುತ್ತು ಹೊಡೆದು, ಚುಕ್ಕಿ ಬೆಳಕಿನ ವರ್ತುಲದಲ್ಲಿ ಚೈತ್ರದ ಸಂಕುಲದಲ್ಲಿ ‘ಚಾರಣ’ ಸಾಗುವ ಬಗೆಯನ್ನು ಇಲ್ಲಿ ಹೇಳಲಾಗಿದೆ. ಪೂರಕವಾಗಿ ಇದು ಕೂಡ ಬದುಕಿನ ಚಾರಣವನ್ನು ಧ್ವನಿಸುತ್ತದೆ.

‘ರಾತ್ರಿ ಹಕ್ಕಿ’ ಹಾಗೂ ‘ಚಾರಣ’ - ಈ ಎರಡೂ ಕವಿತೆಗಳ ಈ ಗುಚ್ಛ- ದೇಹ, ಚೇತನ, ಬದುಕಿನ ಒಳನೋಟಗಳನ್ನು ಅರ್ಥಪೂರ್ಣವಾಗಿ ತಿಳಿಸುವ ಜೊತೆಗೆ ಬದುಕಿನ ಚಾರಣವನ್ನು ನಮಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿದೆ. ಈ ಕಾರಣಕ್ಕಾಗಿ ಅರ್ಥಪೂರ್ಣವಾದ ಕವಿತೆಗಳನ್ನು ಕಾವ್ಯಸರಸ್ವತಿಗೆ ಅರ್ಪಿಸಿದ ‘ಸುಪ್ತದೀಪ್ತಿ’ ಕಾವ್ಯನಾಮದ ಶ್ರೀಮತಿ ಜ್ಯೋತಿ ಮಹಾದೇವ್ ಶ್ಲಾಘನೆಗೆ ಅರ್ಹರಾಗಿದ್ದಾರೆ.