ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday 20 December, 2008

'ಡೆಲ್ ಚಿಕ್ಕಣ್ಣ'ನ ಅನಾರೋಗ್ಯ....

ಇದೇನಂಥ ಹೊಸ ವಿಷಯ ಅಲ್ಲದಿರಬಹುದು. ಎಲ್ಲ ಮಾಮೂಲು ಇದ್ದ ದಿನಗಳೇ ಹಾಗೆ. ಅಮೆರಿಕದಿಂದ ರಜೆಗೆಂದು ಜುಲೈ ಕೊನೆಯ ವಾರದಲ್ಲಿ ಉಡುಪಿ ಜಿಲ್ಲೆಯ ನಮ್ಮೂರಿಗೆ ಹೋದಾಗ ಧೋ ಧೋ ಮಳೆ. ಹೇಳಿ ಕೇಳಿ ಮುಂಗಾರು; ಮಳೆಯಲ್ಲದೆ ಮತ್ತೇನಿದ್ದೀತು? ಊರಿನ ಮಳೆಯೆಂದರೆ ನನಗೇನೂ ಬೇಸರವೇ ಇಲ್ಲ.

--ಬಿಡುವಿಲ್ಲದೆ ಸುರಿಯುವ ಮಳೆಗೆ ಮನೆಯ ಪಕ್ಕದ ಚರಂಡಿ ತುಂಬಿ ಅಂಗಳಕ್ಕೆ ನೀರು ನುಗ್ಗಿದರೇನು? (ಮಳೆ ನಿಂತಾಗ ಅದೂ ಕಡಿಮೆಯಾಗ್ತದೆ!)
--ಮುಂದಿನ ರಸ್ತೆಯಲ್ಲಿ ಹೋಗುವ ಯಾರದೋ ಕಾರು ಈ ಸಣ್ಣ "ಬೊಳ್ಳ"ಕ್ಕೆ (ನೆರೆಗೆ) ಸಿಕ್ಕಿ ಧಡಕ್ಕಂತ ನಿಂತರೇನು? (ಒಂದೆರಡು ಸರ್ತಿ ಸ್ಟಾರ್ಟ್ ಮಾಡಿದಾಗ ಮತ್ತೆ ಹೊರಟೇ ಹೊರಡುತ್ತದೆ! ನಮಗೇನು ತೊಂದರೆ ಇಲ್ಲ!)
--ಈಗ ಕರೆಂಟು ಉಂಟೂಂತ, ಅಡುಗೆಗೆ ಮಿಕ್ಸಿಯಲ್ಲಿ ಮಸಾಲೆ ಅರೆಯಲು ತಯಾರಾದಾಗಲೇ ಪ್ಲಗ್ ಮೌನವಾದರೇನು? (ಮಸಾಲೆ ಇಲ್ಲದೆಯೇ 'ಬೋಳು ಕೊದ್ದೆಲ್' ಮಾಡಬಹುದು!)
--ಪಕ್ಕದ ಕೋಣೆಯಿಂದ ಮಗ ಕರೆದದ್ದೂ ಕೇಳದಷ್ಟು ಮಳೆರಾಯನೇ ಬೊಬ್ಬೆ ಇಡುತ್ತಿದ್ದರೇನು? (ಮಗನಿಗೆ ಬೇರೆ ಕೆಲಸ ಇಲ್ಲ, ಸುಮ್ನೆ ನನ್ನ ತಲೆ ತಿಂತಾನೆ!)
--ಸೋಲಾರ್ ಹೀಟರ್ ಇದ್ದೂ ಒಳಗೆ ಗ್ಯಾಸ್ ಒಲೆಯಲ್ಲೇ ಸ್ನಾನದ ನೀರು ಬಿಸಿ ಮಾಡಬೇಕಾದರೇನು? (ವರ್ಷದಲ್ಲಿ ಕೆಲವೇ ಕೆಲವು ದಿನ ತಾನೇ! ಹೊರಗೆ ನುಸಿ ಹೊಡೆತ ತಿಂತಾ ನೀರೊಲೆಗೆ ಬೆಂಕಿ ಹಾಕುದಕ್ಕಿಂತ ಇದೇ ವಾಸಿ!)
--ಬೇರೆ ಬೇರೆ ಶ್ರುತಿಯ ರಾಗ ಹಾಡುವ ಊರಿನ ನುಸಿಗಳೆಲ್ಲ ನಮ್ಮ ಮನೆಯಲ್ಲೇ ಬಿಡಾರ ಹುಡುಕಿದರೇನು? (ಒಡೋಮಸ್ ಉಂಟಲ್ಲ, ಹಚ್ಚಿಕೊಂಡೇ ಇದ್ದರಾಯ್ತು!)
--ನೆಲವೇ ನಡುಗುವ ಹಾಗೆ, ಕಿವಿ ಕೆಪ್ಪಾಗುವ ಹಾಗೆ, ಎದೆ ಒಡೆಯುವ ಹಾಗೆ, ಎಲ್ಲೋ ಹತ್ತಿರದಲ್ಲೇ ಸಿಡಿಲು ಹೊಡೆದರೇನು? (ಎರಡು ಸೆಕೆಂಡ್ ಕಿವಿ-ಕಣ್ಣು ಮುಚ್ಚಿ, 'ದೇವರೇ, ಯಾರಿಗೂ ಏನೂ ಆಗದೇ ಇರ್ಲಿ' ಅಂತ ಧ್ಯಾನಿಸಿದರೆ ಮುಗೀತು!)
--ಮನೆಯೊಳಗೆಲ್ಲ ಕೆಸರು ಕೆಸರು ಕಿಚಿಪಿಚಿಯಾದರೇನು? (ಆಗಾಗ ಒರಸ್ತಾ ಇದ್ರೆ ಸರಿ, ಬೇರೆ ವ್ಯಾಯಾಮ ಬೇಕಂತಿಲ್ಲ!)
--ಬಟ್ಟೆ ಸರಿಯಾಗಿ ಒಣಗದೆ ಹಳಸಲು ವಾಸನೆ ಬಂದರೇನು? (ರಾತ್ರಿ ಫ್ಯಾನ್ ಅಡಿಗೆ ಹರಡಿದರೆ ಸುಮಾರಾಗಿ ಒಣಗ್ತವಲ್ಲ!)
--ಮರದ ವಸ್ತುಗಳ ಮೇಲೆಲ್ಲ 'ಬುಗುಟೆ' (ಬಿಳೀ ಬೂಸ್ಟ್) ಬಂದರೇನು? (ವಾರಕ್ಕೊಮ್ಮೆ ಅವುಗಳನ್ನೂ ಒರಸಿದ್ರೆ ಧೂಳಿನ ಅಲರ್ಜಿ ಆಗುದಿಲ್ಲ!)

ಇಂಥಾ ಇನ್ನೂ ಹಲವಾರು ಪ್ರಶ್ನೆಗಳೂ ಅಚ್ಚರಿಗಳೂ ಇದ್ದರೂ ಮಳೆಗಾಲ ನನಗೆ ಇಷ್ಟವೇ. ಆದ್ರೆ, ಈ ಸರ್ತಿ ಮಾತ್ರ ಮಳೆಗಾಲ ನನಗೆ ದೊಡ್ಡ ಚಿಂತಾಜನಕ ಪರಿಸ್ಥಿತಿ ಕೊಟ್ಟಿತು.

ಇಲ್ಲಿಂದ ಹೋದಾಗ ನನಗೋಸ್ಕರ ಒಂದು ಹಳೇ ಡೆಲ್ ಲ್ಯಾಪ್-ಟಾಪ್ ಹೊಂದಿಸಿಕೊಂಡು, ನನ್ನ ಬರಹಗಳನ್ನೆಲ್ಲ ಅದಕ್ಕೆ ತುಂಬಿಸಿಕೊಟ್ಟಿದ್ದರು ನನ್ನವರು. ಊರಿಗೆ ಹೋಗಿ ಒಂದೆರಡು ವಾರದ ನಂತರ, ಮನೆಯಲ್ಲಿ ಡಿ.ಎಸ್.ಎಲ್. ಕನೆಕ್ಷನ್ ಬಂದ ಮೇಲೆ ಅದನ್ನು ತೆರೆದು ನನ್ನ ಬ್ಲಾಗ್ ಕಡೆಗೆ ಕಣ್ಣು ಹಾಯಿಸಿ ಒಂದೆರಡು ಕವನಗಳನ್ನೂ ಅಲ್ಲಿಗೆ ಹರಿಸಿದ್ದೆ. ನಂತರ ಒಂದು ವಾರ ಮನೆಯಲ್ಲಿರಲಿಲ್ಲ. ಆಮೇಲೆ ಬಂದಾಗ ಮತ್ತೊಮ್ಮೆ ನನ್ನ ಈ-ಮೈಲುಗಳನ್ನೆಲ್ಲ ಒಮ್ಮೆ ನೋಡಿ ಬ್ಲಾಗಿನಲ್ಲಿ ಬಂದಿದ್ದ(!?) ಪ್ರತಿಕ್ರಿಯೆಗಳಿಗೆ ಉತ್ತರಿಸಿದ್ದೆ.

ಮರುದಿನ ಬೆಳಗ್ಗೆ ಯಾಕೋ ಈ ನನ್ನ 'ಡೆಲ್ ಚಿಕ್ಕಣ್ಣ' ಏಳಲು ತಕರಾರು ಮಾಡಿದ. ಏನೋ ಥಂಡಿ ಆಗಿರಬೇಕು, ಶೀತ ಆಗ್ತದೋ ಏನೋ ಅಂದುಕೊಂಡೆ. ನನ್ನ ಪ್ರಾರ್ಥನೆಗೋ, ತನಗೇ ಬೋರಾಗಿದ್ದಕ್ಕೋ, ಅಂತೂ ಆ ದಿನ ಮಳೆರಾಯ ರಜೆ ತಗೊಂಡ. ಮಧ್ಯಾಹ್ನ ಮತ್ತೆ ಈ ಪುಟಾಣಿ ಜಾದೂಗಾರನನ್ನು ಎಬ್ಬಿಸಿದರೂ ಏಳಲಿಲ್ಲ. ರಾತ್ರೆಗೂ ನಿದ್ದೆ ಬಿಡಲಿಲ್ಲ. ಗಾಬರಿಯಾಯ್ತು. ನನ್ನ ಕೈಗೆಟಕುವ ಕಂಪ್ಯೂಟರ್ ವೈದ್ಯರನ್ನು ಕರೆದೆ: 'ರೀ... ಇವನು ಏಳ್ತಾನೇ ಇಲ್ಲ; ಏನಾಗಿದೆ ನೋಡಿ ಸ್ವಲ್ಪ... ಇಲ್ಲಿ ಬನ್ನಿ ಮೊದ್ಲು... ನಿಮ್ಮ ಕೆಲ್ಸ ಮತ್ತೆ ಮಾಡಿ... ಇವನನ್ನು ಒಮ್ಮೆ ನೋಡಿ... ರೀ... ರ್ರೀ...'

ಅಷ್ಟೋತ್ತರ ಕೇಳುವ ಮೊದಲೇ ಬಂದರೆ ಅವರ ಘನತೆಗೆ ಕುಂದು ಅಂತ ಗೊತ್ತಿದ್ದವರು, ಯಥಾವತ್ ಅವರ ಪಾಲಿನ ನಾಮಾರ್ಚನೆ ಮಾಡ್ತಾ ಬಂದ್ರು. ಮಲಗಿದ್ದ ಚಿಕ್ಕಣ್ಣನನ್ನು ತಮ್ಮ ಕಾಲ ಮೇಲೇ ಏರಿಸಿಕೊಂಡು ಅಲ್ಲಿ ಇಲ್ಲಿ ತಡವಿ, ತಟ್ಟಿ, ಕಿವಿ ಹಿಡಿದು, ಕಾಲು ಎಳೆದು, ತಲೆ ಎತ್ತಿ... ಊಹುಂ ಏನೇನು ಮಾಡಿದರೂ ಚಿಕ್ಕಣ್ಣ ಏಳಲೇ ಇಲ್ಲ.
'ಇವನು ಕೋಮಾಗೆ ಹೋಗಿರೋ ಹಾಗಿದೆ ಮಾರಾಯ್ತಿ. ಮುಂದಿನ ವಾರ ದೊಡ್ಡೂರಿನ ದೊಡ್ಡಾಸ್ಪತ್ರೆಗೆ ಕರ್ಕೊಂಡು ಹೋಗುವಾ...' ಅಂದ್ರು. ನನಗೇನೋ ಗಾಬರಿಯಾಯ್ತು; ಕೋಮಾ ಅಂತಾರೆ, ದೊಡ್ಡಾಸ್ಪತ್ರೆ ಅಂತಾರೆ, ಮುಂದಿನ ವಾರ ಅಂತಾರೆ...
'ಅಲ್ಲಿ ಹೋದ್ರೆ ಸರಿಯಾಗ್ತದಾ...?' ನನ್ನ ಸ್ವರಕ್ಕೆ ಜೀವ ಇರಲಿಲ್ಲ. ನನ್ನ ಬ್ಲಾಗಿನ ಜೀವ ಚಿಕ್ಕಣ್ಣನ ಒಳಗೇ ಇತ್ತಲ್ಲ.
'ಏನೋ, ನೋಡ್ಬೇಕು.' ವೇದಾಂತಿಯ ಮೂಡ್ ನನ್ನ ಹಿಡಿತಕ್ಕೆ ಬರುವಂಥದ್ದಲ್ಲ.

ಸರಿ, ಆ ಮುಂದಿನ ವಾರದ 'ಆ ದಿನ' ಬಂತು. ಒಂದಷ್ಟು ದಿನಗಳಿಗೆ ಆಗುವಷ್ಟು ಬಟ್ಟೆಬರೆ ಜೋಡಿಸಿಕೊಂಡು, ಈ ಚಿಕ್ಕಣ್ಣನನ್ನೂ ಚೆನ್ನಾಗಿ ಹೊದೆಸಿ ಹೆಗಲಿಗೆ ಏರಿಸಿಕೊಂಡೆ. ಆ ದೊಡ್ಡೂರಿಗೆ ಸಾಗಿತು ವೋಲ್ವೋ ಬಸ್.

ಸಿಕ್ಕಾಪಟ್ಟೆ ಪ್ಯಾಂ... ಪೂಂ... ಕೀಂ... ಕ್ರೇಂ... ಮೇಳಗಳಿಗೆ ಸಿಹಿನಿದ್ದೆಯಿಂದ ಕುಕ್ಕಿದಂತಾಗಿ ಕಣ್ಣು ಉಜ್ಜಿಕೊಂಡು ನೋಡಿದಾಗ, ಬೆಳಗಾತ ಬೆಂಗಳೂರಿನ ಸರಹದ್ದಿನಲ್ಲಿ ಬೇರೆ ವಾಹನಗಳ ನಡುವೆ ದಾರಿ ಮಾಡಿಕೊಂಡು ನುಸುಳುತ್ತಿತ್ತು ವೋಲ್ವೋ. "ನಿಮ್ಮ ನಿಲುದಾಣದ ಕಡೆ ಹೋಗೋದಿಲ್ಲ, ತಡವಾಗಿದೆ; ಈ ದಟ್ಟಣೆಯಲ್ಲಿ ಊರೊಳಗೆ ಬಸ್ ಹೋಗೋ ಹಾಗಿಲ್ಲ, ಇಲ್ಲೇ ಇಳೀರಿ..." ಅಂದ ನಿರ್ವಾಹಕ. ನಮಗಂತೂ ಬೇರೆ ನಿರ್ವಾಹವಿರಲಿಲ್ಲವಲ್ಲ; ಇಳಿದೆವು. ಅಲ್ಲಿಂದ ಆಟೋ ಹಿಡಿದು ನಾವು ಉಳಿದುಕೊಳ್ಳಬೇಕಾಗಿದ್ದ ಮನೆ ತಲುಪಿದ್ದಾಯ್ತು. ಅಂತೂ ಇಂತೂ ಬೆಳಗಿನ ವಿಧಿವಿಧಾನಗಳನ್ನು ಮುಗಿಸಿದೆವು. ದೊಡ್ಡೂರಿನ ವಾತಾವರಣ ನನ್ನ ಗಂಟಲನ್ನು, ಮೂಗನ್ನು ಹೊಕ್ಕಿತ್ತು. ನನ್ನ ಸ್ವರ ನನ್ನದಲ್ಲ ಅನ್ನುವಂತಾಗಿತ್ತು. ಒಮ್ಮೆ ಮನೆಯ ಬಾಗಿಲಿಂದಾಚೆ ಹೋಗಿ ಬಂದರೆ ಮೈ ಮೇಲೆ ಒಂದು ರೀತಿಯ ತೆಳುಗಪ್ಪಿನ ರಕ್ಷಣಾ ಪದರ ನಿರ್ಮಾಣವಾಗುತ್ತಿತ್ತು. ಬೆಳಗಿನ ಸಣ್ಣ ಛಳಿ, ನಡುಹಗಲ ಬಿಸಿಲ ಉರಿ, ನಸು ಸಂಜೆಯ ದಟ್ಟ ಹೊಗೆ, ಮುಸ್ಸಂಜೆಯ ಕಲುಷಿತ ಮೋಡ, ಮತ್ತು ರಾತ್ರೆಯ ಇಬ್ಬನಿ ಹೊದಿಕೆಗಳ ನಡುವೆಯೇ ದೊಡ್ಡೂರಿನ ದೊಡ್ಡಾಸ್ಪತ್ರೆಗೆ ಅರ್ಜಿ ಹಾಕುವ ಕೆಲಸಕ್ಕೆ ಶುರುವಿಟ್ಟರು ನನ್ನವರು.

ಮಾರನೇ ಬೆಳಗ್ಗೆ ಲೈನ್-ಕ್ಲೀಯರ್ರಾಗಿ, 'ಡೆಲ್' ಸರ್ವಿಸ್ ಸೆಂಟರಿಗೆ ಫೋನಾಯಿಸಿದಾಗ, "ನಿಮ್ಮ ಕೋರಿಕೆ ಮಾನ್ಯವಾಗಿದೆ. ಮೊದಲಾಗಿ ಒಂದು 'ಕೊಟೇಷನ್' ನಿಮಗೆ ಈ-ಮೈಲಿನಲ್ಲಿ ಬರುತ್ತೆ. ಚೆಕ್ ಅಥವಾ ಡಿ.ಡಿ. ಮೂಲಕ ಅದನ್ನು ಪಾವತಿಸಿ. ಆ ಮೊತ್ತ ನಮ್ಮನ್ನು ತಲುಪಿದ ಮೇಲೆ ಒಂದೆರಡು ದಿನಗಳಲ್ಲಿ ನಮ್ಮ ನಿಷ್ಣಾತರು ನಿಮ್ಮ ಮನೆಗೆ ಬರುವಂತೆ ಆದೇಶಿಸಲಾಗುತ್ತದೆ. ಅವರು ಚಿಕ್ಕಣ್ಣನನ್ನು ಚೆಕ್-ಅಪ್ ಮಾಡುತ್ತಾರೆ. ಆಮೇಲಿನ ವಿಚಾರ ಆಮೇಲೆಯೇ ಹೇಳಬಹುದು." ಎಂಬ ಉತ್ತರ ಬಂತು.

ಎರಡು ದಿನ ಕಾದರೂ ಯಾವುದೇ ಈ-ಮೈಲ್ ನನ್ನವರ ಪತ್ರಪೆಟ್ಟಿಗೆಗೆ ಬೀಳಲಿಲ್ಲ. ಕ.ಬು. ಕೂಡಾ ಅದನ್ನು ಕಂಡಿರಲಿಲ್ಲ. ಮತ್ತೊಮ್ಮೆ ಫೋನಾಯಿಸಿ, ಗುರಾಯಿಸಿ, ನೊಂದ ಪೋಷಕರ ಪೋಸು ಕೊಟ್ಟು, ಒಂದಿಷ್ಟು ಒದರಿದ ಮೇಲೆ ಒಂದೆರಡು ಗಂಟೆಯಲ್ಲಿ ಬರುವುದೆಂದಿದ್ದ ವಿ-ಪತ್ರ, ಕೊನೆಗೂ ಬಂತು; ಮರುಮುಂಜಾನೆಯೇ. ಅದರ ಸೂಚನೆಗಳ ಮೇರೆಗೆ, ಪೂರ್ವಪರಿವೀಕ್ಷಣಾ ಮೊತ್ತವಾದ 'ಒಂದು ಸಾವಿರದ ಮುನ್ನೂರ ಅರವತ್ನಾಲ್ಕು ರುಪಾಯಿ'ಗಳ ಚೆಕ್ ಕಳಿಸಲು ವಿಳಾಸ ಬರೆದುಕೊಂಡಾಯ್ತು. ಇಷ್ಟಾಗುವಾಗ, ದೊಡ್ಡೂರಲ್ಲಿ ನಮ್ಮ ವಾಸ ಮುಗಿಯುತ್ತಾ ಬಂದಿತ್ತು, ಮುಂದಿನ ಪ್ರಯಾಣ ನಿಗದಿಯಾಗಿತ್ತು, ಮರುದಿನವೇ ಚುಮುಚುಮು ಮುಂಜಾನೆಗೆ. ಆದ್ದರಿಂದ ನಾವು ಉಳಿದುಕೊಂಡಿದ್ದ ಮನೆಯ ಯುವಕನ ಸಹಾಯ ಪಡೆಯಲು ನಿರ್ಧರಿಸಿದೆವು.

ಆ ಸಂಜೆ, ನಮ್ಮ ಚಿಕ್ಕಣ್ಣನನ್ನು ಯುವಕನ ಕೋಣೆಗೆ ಎತ್ತಿಕೊಂಡು ಹೋದ ನನ್ನವರು ಎಲ್ಲ ವಿವರಗಳನ್ನು ತಿಳಿಸಿದರು. ಚೆಕ್ ಬರೆದು ಡೆಲ್ ಸರ್ವಿಸ್ ಸೆಂಟರಿನ ವಿಳಾಸ ಬರೆದು ತಯಾರು ಮಾಡಿಡುವುದಾಗಿಯೂ, ಮರುದಿನ ಅದನ್ನು ಟಪ್ಪಾಲಿಗೆ ಹಾಕುವುದಾಗಿಯೂ ಹೇಳಿದರು. ಆಮೇಲೆ ಡೆಲ್ ನಿಷ್ಣಾತ ಬರುವಾಗ ಚಿಕ್ಕಣ್ಣನನ್ನು ಅವನ ಕೈಗೊಪ್ಪಿಸಿ ಅವನು ನಡೆಸುವ ಪರೀಕ್ಷೆಗಳನ್ನು ಗಮನಿಸಬೇಕೆಂದೂ ಕೇಳಿಕೊಂಡರು. ಯಾವಯಾವ ರೀತಿಯಲ್ಲಿ ತಟ್ಟಿ ತಡವಿ ಎಬ್ಬಿಸಿದರೂ ಚಿಕ್ಕಣ್ಣ ಏಳಲಿಲ್ಲ ಎಂಬುದನ್ನು ಇವರು ಅವನಿಗೆ ಪ್ರಮಾಣ ಸಹಿತ ತೋರಿಸುತ್ತಿರುವಾಗ, ನೋಡಲಾಗದೆ ನಾನು ಕೆಳಗಿಳಿದು ಚಾವಡಿಗೆ ಹೋದೆ. ಕೆಲವೇ ನಿಮಿಷಗಳಲ್ಲಿ, ಮಹಡಿಯ ಆ ಕೋಣೆಯಿಂದ ಕೆಳಗಿನ ಚಾವಡಿಗೊಂದು ಕರೆ.... "ಏ.... ಇಲ್ಲಿ ಬಾ... ಇಲ್ನೋಡು, ಬೇಗ ಬಾ...."

ಮನೆಯಾಕೆಯೊಂದಿಗೆ ಆಗ ತಾನೇ ಯಾವುದೋ ಸ್ವಾರಸ್ಯಕರವಾದ ಸುದ್ದಿ ಸವಿಯುತ್ತಿದ್ದ ನನಗೆ ಕೋಲಲ್ಲಿ ಕುಟ್ಟಿದಂತಾದರೂ ಬೇಕೋ ಬೇಡವೋ ಎಂಬಂತೆ ಮಹಡಿ ಹತ್ತಿದೆ. ಕರೆ ಕೊಟ್ಟ ಮೇಲೆ ಮಾಮೂಲಿ ಮೌನಾವತಾರ ತಾಳಿದ್ದ ಇವರನ್ನು ನೋಡಿ, ಯುವಕನನ್ನು ಪ್ರಶ್ನಿಸಿದೆ, "ಏನಾಯ್ತು?". ಅವನೋ, ಎಲ್ಲರಂತಲ್ಲದ ಅಸಾಮಾನ್ಯ ಹುಡುಗ. ಎಂದಿನ ಗಂಭೀರ ಮುದ್ರೆಯಲ್ಲೇ, "ಮಾಮ ನಿಮ್ಮನ್ನು ಕರೆದರು" ಅಂದ. "ಅದು ಕೇಳಿಯೇ ನಾನು ಬಂದದ್ದು. ಏನಾಯ್ತು ಅಂತ ಕರೆದದ್ದು? ಯಾಕೆ?" ಅಂದೆ. ಇಬ್ಬರದ್ದೂ ಮೌನ. ಧ್ಯಾನ ಮಾತ್ರ ಚಿಕ್ಕಣ್ಣನತ್ತ ಇದ್ದದ್ದು ಈಗ ನನ್ನ ಗಮನಕ್ಕೂ ಬಂತು. ನೋಡಿದ್ರೆ...

ಇಷ್ಟೂ ದಿನಗಳು ನಡುವೆ ಘಟಿಸಿಯೇ ಇಲ್ಲವೆಂಬಂತೆ,
ಸಂದ ಘಟನೆಗಳೆಲ್ಲ ನಡೆದೇ ಇಲ್ಲವೆಂಬಂತೆ,
ನಮ್ಮ ಕಾಳಜಿಗೆಲ್ಲ ಅರ್ಥವೇ ಇಲ್ಲವೆಂಬಂತೆ,
ತಾನು ನಿದ್ರೆ ಮಾಡಿಯೇ ಇಲ್ಲವೆಂಬಂತೆ,

...ಆ ಅಂದಿನಂತೆಯೇ ಎದ್ದು ನಗುನಗುತ್ತಾ ಮುಖವರಳಿಸಿ ಎಲ್ಲ ಆಟ ಚಮತ್ಕಾರಗಳನ್ನು ಸಲೀಸಾಗಿ ಲೀಲಾಜಾಲವಾಗಿ ಪ್ರದರ್ಶಿಸುತ್ತಿದ್ದಾನೆ ನಮ್ಮ ಡೆಲ್ ಚಿಕ್ಕಣ್ಣ. ಇದೇನಾಯ್ತು ಇವನಿಗೆ? ಇದ್ದಕ್ಕಿದ್ದಂತೆಯೇ ಅವನು ಸರಿಹೋಗಿದ್ದು ಹೇಗೆ? ಅವನ ದೀರ್ಘ ನಿದ್ರೆ ಕರಗಿದ್ದು ಹೇಗೆ? ಅವನನ್ನು ಇವರು ಎಚ್ಚರಗೊಳಿಸಿದ್ದು ಹೇಗೆ? ಇದು ಮೊದಲೇ ಯಾಕಾಗಲಿಲ್ಲ? ಈಗ ಯಾಕೆ ಆಯ್ತು? ಹೇಗೆ? ಹೇಗೆ? ಯಾಕೆ? ಹೇಗೆ? ಅವರಿಬ್ಬರ ಬಳಿಯೂ ಉತ್ತರ ಇರಲಿಲ್ಲ. ತಲೆ ಕೆರೆದುಕೊಳ್ಳುತ್ತಾ ಹೊರಗೆ ಬಂದಾಗ...

...ಆ ಮುಸ್ಸಂಜೆಯಲ್ಲಿ, ಕಟ್ಟಿಕೊಂಡ ಗಂಟಲಲ್ಲಿ, ದೊಡ್ಡೂರಿನ ದಟ್ಟ ಗಾಳಿಯಲ್ಲಿ ಬಂತು ನೋಡಿ ಒಂದು ಸೀನು....
ಅದರ ಜೊತೆಗೇ ಡೆಲ್ ಚಿಕ್ಕಣ್ಣನ ನಿಗೂಢ ಕೋಮಾ ನಿವಾರಣೆಯಾದುದಕ್ಕೆ ಕಾರಣವೂ ಹೊಳೆದೇಬಿಟ್ಟಿತು.
ಅದೇನಪ್ಪಾ ಅಂದ್ರೆ- 'ನಮ್ಮೂರಿನಲ್ಲಿನ ಮಳೆಯ ಕುಳಿರ್ಗಾಳಿಗೆ ಮೈ ಒಡ್ಡಿಕೊಂಡು ಹಿತವಾಗಿ ಬೆಚ್ಚಗೆ ಮಲಗಿ ಸುದೀರ್ಘ ಹಿತನಿದ್ರೆಗೆ ಜಾರಿದ್ದ ಚಿಕ್ಕಣ್ಣನ ಬಣ್ಣಬಣ್ಣದ ಸುಂದರ ನೀಳ ಕನಸುಗಳೆಲ್ಲ, ದೊಡ್ಡೂರಿನ ದಮ್ಮು ಕಟ್ಟಿಸುವ ಮಾರುತನಿಂದಾಗಿ ಬಣ್ಣ ಕರಗಿ, ಚೂರುಚೂರಾಗಿ, ಭಗ್ನವಾಗಿ, ಅವನ ಮುಸುಕು ಸರಿಯುವುದನ್ನೇ ಕಾದಿದ್ದ. ಈಗ ಇವರು ಮುಸುಕು ಸರಿಸಿದ್ದೇ ತಡ, ಎದ್ದು ಮೈಕೊಡವಿ, ತನ್ನ ಸಾರ್ವಕಾಲಿಕ ಹರ್ಷಚಿತ್ತಸ್ಥಿತಿಯನ್ನು ಮತ್ತೆ ಹೊಂದಿದ್ದಾನೆ'- ಎಂಬುದು.

ಇದೀಗ ನನ್ನ ಥಿಯರಿ ಮಾತ್ರ. ಇದನ್ನು ಇನ್ಯಾರಾದರೂ ಪರಾಮರ್ಶಿಸಿ, ಸಾಧಿಸಿ, ವಿವೇಚಿಸಿ, ಪರೀಕ್ಷಿಸಿ, ಒರೆಹಚ್ಚಿ ನೋಡುವುದಾದರೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ, ನಮ್ಮ ಡೆಲ್ ಚಿಕ್ಕಣ್ಣನನ್ನು ಮಾತ್ರ ನಿಮ್ಮ ಯಾವುದೇ ಪ್ರಯೋಗಕ್ಕೆ ಒಳಪಡಿಸಲು ಕೊಡಲಾರೆವೆಂದು ನಿಶ್ಚಯವಾಗಿ ತಿಳಿಸಲು ಬಯಸುತ್ತೇನೆ.

Sunday 14 December, 2008

ತುಂಟ ಮರಿಯ ಪ್ರಶ್ನೆ

ಮೊನ್ನೆ ತಾನೇ ಊರಲ್ಲಿದ್ದಾಗ, ನಮ್ಮ ಸಂಬಂಧಿಯೊಬ್ಬರ ಮನೆಯಲ್ಲಿ ನಡೆದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದೆ.
ಅಂಥ ಮಹತ್ತರ ಘಟನೆಯೇನಲ್ಲ, ಆದರೆ ನಮ್ಮೆಲ್ಲರ ಜೀವನದಲ್ಲಿ ಎಂದಾದರೊಮ್ಮೆ ಇಂಥದ್ದು ನಡೆದಿರಬಹುದು, ಅಥವಾ ನಡೆಯಬಹುದಾದ್ದು.

ನಮ್ಮ ಸಂಬಂಧಿಯ ಮನೆಗೆ ನಮ್ಮ ಭೇಟಿ. ಅವರಿಗೆ ನಾಲ್ಕು ವರ್ಷದ ಪೋರಿ. ತುಂಬಾ ತುಂಟಿ. ಬಾಯಿ ತುಂಬಾ ಮಾತು. ಎಲ್ಲರ ಪರವಾಗಿಯೂ ಒಬ್ಬಳೇ ಮಾತಾಡಿ ಮುಗಿಸುವಷ್ಟು ಬಾಯಿಬಡುಕಿ. ಹೊತ್ತು ಗೊತ್ತಿನ ಪರಿವೆಯಿಲ್ಲ. ಎಲ್ಲಿ ಕೂತಿದ್ದೇನೆ, ಎಲ್ಲಿ ನಿಂತಿದ್ದೇನೆ, ಸುತ್ತ ಯಾರಿದ್ದಾರೆ, ಯಾವುದರ ಗೊಡವೆಯೂ ಅವಳಿಗೆ ಇರುವ ಹಾಗಿಲ್ಲ. ಮಾತಿಗೆ ಒಂದು ವ್ಯಕ್ತಿ ಇದ್ದರೆ ಸರಿ.

ನಾವು ಅಲ್ಲಿಗೆ ಹೋದಾಗಿನಿಂದ ನಮ್ಮ ಬಗ್ಗೆ ಅವಳಿಗೆ ಬೇಕಾದಂತೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದಳು. ಕೆಲವು ಸಲ ತನ್ನ ಅಪ್ಪ-ಅಮ್ಮ, ಅಜ್ಜಿಯ ಒಳಗುಟ್ಟುಗಳನ್ನೂ ನಮ್ಮೊಡನೆ ಸಾರಿದ್ದಳು. ಅದೇ ಸಂಜೆ ನಾನು ಮನೆಯ ಹಿಂದೆ ಟಾಯ್ಲೆಟ್ ಬದಿಗೆ ಹೋಗುತ್ತಿದ್ದಾಗ, ಅಲ್ಲಿ ಪೋರಿಯ ಅಮ್ಮ ಗೋಡೆಗೊರಗಿ ನಗುತ್ತಿದ್ದಾಳೆ, ಪೋರಿ ಒಂದು ಟಾಯ್ಲೆಟ್ ಒಳಗಿಂದ "ಹೇಳು, ಸುಮ್ನೇ ನಗ್ಬೇಡ.... ಹೇಳು..." ಅಂತಿದ್ದಾಳೆ. ನಾನು ಹೋಗಿದ್ದು ಗೊತ್ತಾದ್ರೆ ಅವಳು ತನ್ನ ಅಮ್ಮನ ಮೇಲೇ ಕೋಪಿಸಿಕೊಳ್ಳುತ್ತಾಳೆ (ಬಾಯಿ ಬಡುಕಿಯಾದ್ರೂ ಮರ್ಯಾದೆ ಜೋರಾಗಿದೆ ಪುಟ್ಟಮ್ಮಂಗೆ...) ಅಂತ ಮೊದಲೇ ಗೊತ್ತಿದ್ದ ನಾನು ಮೆಲ್ಲಗೆ ಕಡೆ ಬಂದೆ. ಸ್ವಲ್ಪ ಹೊತ್ತಾದ ಮೇಲೆ ಹೋಗಿ ನನ್ನ ಕೆಲಸ ಮುಗಿಸಿ ಬಂದೆ.

ಮತ್ಯಾವಾಗಲೋ ಸಮಯ ಸಿಕ್ಕಾಗ ಅವಳ ಅಮ್ಮನೇ ನನ್ನ ಬಳಿ ಹೇಳಿಕೊಂಡು ಮತ್ತೊಂದಿಷ್ಟು ನಕ್ಕಳು. " ಥರ ಪ್ರಶ್ನೆ ಕೇಳಿದ್ರೆ ಏನು ಉತ್ತರ ಹೇಳೋದೋ ಗೊತ್ತಾಗುದಿಲ್ಲ. ಹೇಳದಿದ್ರೆ ರಂಪ ಮಾಡ್ತಾಳೆ. ಒಮ್ಮೊಮ್ಮೆ ಯಾರಾದ್ರೂ ಇದ್ದಾಗಲೂ ಇಂಥ ಪ್ರಶ್ನೆ ಕೇಳ್ತಾಳೆ, ತುಂಬಾ ಮುಜುಗರ ಆಗ್ತದೆ. ಹೇಳಿ ಅಕ್ಕ, ಇಂಥ ಪ್ರಶ್ನೆಗೆ ಹೇಗೆ ಉತ್ತರಿಸೋದು...?"

ಅದೇನಪ್ಪಾ ಅಂಥಾ ಮುಜುಗರದ ಪ್ರಶ್ನೆ ಅಂದ್ರಾ...

"ಟಾಯ್ಲೆಟ್ಟಲ್ಲಿ ಕೂತಾಗ, ಚಿಚ್ಚಿ (ಕಕ್ಕ) ಮಾಡಿ ಮುಗೀತು, ಇನ್ನು ಬರುದಿಲ್ಲ ಅಂತ ಹೇಗೆ ಗೊತ್ತಾಗ್ತದೆ? ಯಾವಾಗ ತೊಳೀಬಹುದು ಅಂತ ನಿಂಗೆ ಹೇಗೆ ಗೊತ್ತಾಗ್ತದೆ? ನಾ......ಳೆ ನಾನೇ ದೊಡ್ಡವಳಾಗಿ ನಾನೊಬ್ಳೇ ಇಲ್ಲಿ ಕೂತಾಗ ಚಿಚ್ಚಿ ಮುಗೀತು, ಇನ್ನು ತೊಳ್ಕೊಳ್ಬೇಕು ಅಂತ ನಂಗೆ ಹೇಗೆ ಗೊತ್ತಾಗ್ಬೇಕು...? ಆಗ ನೀನು ಹೊರಗೆ ನಿಂತು ಹೇಳುದಿಲ್ಲ ಅಲ್ವಾ, 'ಇನ್ನು ಸಾಕು... ಏಳು... ತೊಳೀತೇನೆ...' ಅಂತ; ... ನಂಗೇ ಗೊತ್ತಾಗುದು ಹೇಗೆ?"

ಪ್ರಶ್ನೆಗೆ ಉತ್ತರ ತಿಳಿದೂ ಹೇಳದೇ ಇದ್ರೆ.....

Monday 8 December, 2008

ಮಿಂಚುಹುಳ

ಒಮ್ಮೊಮ್ಮೆ
ಸುತ್ತ ಕತ್ತಲ ನಡುವೆ
ಎಲ್ಲೋ ಹೇಗೋ
ಆ ಹುಳ ಮಿಸುಕಾಡಿ
ಕುಟುಕು ಬೆಳಕು ನೀಡಿ
ಹಾಗೇ ತಣ್ಣಗಾಗುವಾಗ
ಮತ್ತೆ ಕಾರ ಬೆಳದಿಂಗಳ
ನೆನಪು ಕಾಡುತ್ತದೆ

ಒಳ ಹೊರಗನೆಲ್ಲ
ತಣ್ಣನೆಯ ಸೋನೆ ಮಳೆ
ತೋಯಿಸಿದ್ದು
ಹಗಲಲ್ಲಿ ಕಾಣದಾದಾಗ
ಕನಸಲ್ಲೂ ಚಂದ್ರನನು
ರಾಹು ಕಾಡುತ್ತದೆ

(೦೫-ನವೆಂಬರ್-೨೦೦೮)

Sunday 30 November, 2008

ಅನಾವರಣ

ಅದೆಷ್ಟು ಜನ! ಎಲ್ಲಿದ್ದರವರು? ಅದ್ಹೇಗೆ ಒಗ್ಗೂಡಿದರು! ಯಾಕಾಗಿ? ಒಂದೂ ತಿಳಿಯದು. ಎಷ್ಟೋ ಹಿಂದಿನಿಂದಲೂ ಪ್ರತಿ ವರ್ಷವೂ ಹೀಗೇ ಬರುತ್ತಿದ್ದಾರೆ. ಈ ವರ್ಷವೂ ಕೂಡಾ! ಬಂದರು, ಬಂದರು; ಬರುತ್ತಲೇ ಇದ್ದರು. ಸುಮಾರು ಒಂದು ತಿಂಗಳ ಕಾಲ ಬಂದು ಬಂದು ಅಲ್ಲಿ, ಆ ವಿಶಾಲ ಪ್ರದೇಶದಲ್ಲಿ ಸೇರುತ್ತಿದ್ದರು. ಅಲ್ಲಿ ಮೊದಲೇ ಸುಂದರ ಮನೆಗಳಲ್ಲಿದ್ದ ಬಿಳಿ ಬಿಳೀ ಜನರನ್ನೆಲ್ಲ ಮೂಲೆಗುಂಪಾಗಿಸಿ, ಅಲ್ಲೆಲ್ಲ ತಮ್ಮ ಅಧಿಕಾರ ಸ್ಥಾಪಿಸಿಕೊಂಡ ಕರಿ ಕರೀ ಜನ. ಯಾರಿವರು? ಅದ್ಹೇಗೆ ತಿಳಿಯಬೇಕು ನಮಗೆ? ಮಾತಾಡಿಸಿದರೂ ಮಾತಾಡಲೊಲ್ಲರು; ನಮ್ಮ ಕಡೆಗೆ ನೋಡಲೂ ನೋಡರು. ತಮ್ಮ ಪಾಡಿಗೆ ತಾವು; ತಂತಮ್ಮೊಳಗೆ ಗುಂಗುಂ! ಹಾಗೆಂದು ಅವರಲ್ಲಿ ಅಂಥ ಸಂಭ್ರಮವೇನೂ ಕಾಣುವುದಿಲ್ಲ. ಬರೀ ಒಗ್ಗಟ್ಟು, ಬಲವಾದ ಒಗ್ಗಟ್ಟು. ಗಂಡುಗಳು, ಹೆಣ್ಣುಗಳು ವ್ಯತ್ಯಾಸವೇ ತಿಳಿಯದಂಥ ಮೈಕಟ್ಟು, ವೇಷ-ಭೂಷಣ. ಅನೇಕ ಮಕ್ಕಳು-ಮರಿಗಳೂ ಇದ್ದಾರೆ. ಯಾರೀ ಜನ, ಯಾಕೆ ಬಂದರು, ಒಂದೂ ಗೊತ್ತಿಲ್ಲ.

ಅದೇಕೆ ಹೀಗೆ ಬಂದರು? ಅಷ್ಟು ವಿಶಾಲ ಪ್ರದೇಶವನ್ನೆಲ್ಲ, ಕಣ್ಣು ಹರಿಯುವಷ್ಟು ದೂರದವರೆಗೂ - ತುಂಬಿಕೊಂಡಿದ್ದಾರೆ. ಆ ಪ್ರದೇಶದ ಮುಖ್ಯಸ್ಥ, ಅವನ ಅಧಿಕಾರಿಗಳು ಯಾರೂ ಏನೂ ಮಾಡಲಾಗುತ್ತಿಲ್ಲ. ಯಾರ ಮುಖವೂ ಹೊರಗೆ ಕಾಣುತ್ತಿಲ್ಲ. ಹೆಸರುಗಳು ಮಾತ್ರ ಪ್ರಚಲಿತದಲ್ಲಿವೆ, ಅವರೆಲ್ಲ ಎಲ್ಲಿ ಎಂಬ ಪ್ರಶ್ನೆ ಬಂದಾಗ! ಹಗಲೂ ರಾತ್ರಿ ಈ ಆಗಂತುಕರದೇ ಕಾರುಭಾರು, ಓಡಾಟ. ಅಷ್ಟು ಜನ ತುಂಬಿಕೊಂಡದ್ದರಿಂದ ವಾತಾವರಣದಲ್ಲೆಲ್ಲ ಒಂದು ರೀತಿಯ ಬಿಗುವು. ಸರಿಯಾಗಿ ಗಾಳಿ ಸಂಚಾರ ಇರದೆ ಸೆಖೆ, ಎಲ್ಲೆಲ್ಲೂ ಬೆವರು ವಾಸನೆ. ಇರುವ ಗಾಳಿಯೇ ಒಣಗಿ ಆವಿಯಾಗುವುದೇನೋ ಅನ್ನುವಂಥ ಧಗೆ. ನಮಗೇ ಒಬ್ಬರಿಗೊಬ್ಬರ ಅತಿ ಸಾಮೀಪ್ಯ ಹಿಂಸೆಯಾಗುವಂತಹ ಅಂಟಿನ ವಾತಾವರಣ. ಹೀಗಿದ್ದರೂ ಆ ಜನರು ಮಾತ್ರ ಒಬ್ಬರಿಗೊಬ್ಬರು ಬೆಸೆದುಕೊಳ್ಳುವಂತಹ ನಿಕಟತೆಯಲ್ಲಿರಲು ಹೇಗೆ ಸಾಧ್ಯ? ಅವರೊಳಗೆ ಮಾತುಕತೆ ನಡೆಯುವುದಿಲ್ಲವೇನೋ! ಬಹಳವಾಗಿ ಮೌನಿಗಳವರು. ಪುಟ್ಟ ಮಕ್ಕಳೂ ಕೂಡ.

ಅವರ ಈ ಮೌನ, ವಿಚಿತ್ರ ಒಗ್ಗೂಡುವಿಕೆ, ಕರಿಯ ಬಣ್ಣ, ಎಲ್ಲಕ್ಕಿಂತ ಹೆಚ್ಚಾಗಿ ಯಾವುದೋ ರೋಚಕವಾದ ರಹಸ್ಯವನ್ನು ಭೇದಿಸ ಹೊರಟವರಂತಿರುವ ಜಂಭ - ಇವೆಲ್ಲ ನಮಗೆ ನಿಗೂಢ. ಇದು ಯಾಕಾಗಿ? ಯಾರಿಂದ ಪ್ರೇರಿತ? ಯಾವ ಉದ್ದೇಶ ಪೂರಿತ? ನಮ್ಮೊಳಗೆ ಯಾರಿಗೂ ಉತ್ತರ ತಿಳಿಯದು. ಅವರನ್ನೇ ಕೇಳೋಣವೆಂದರೆ, ಯಾರೂ ಆ ಕಡೆ ಸುಳಿಯುವಂತಿಲ್ಲ. ಹೋದರೂ ನಮ್ಮ ಕಡೆ ಯಾವುದೇ ಗಮನ ಹರಿಸದವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿಯಾರೆ? ಇದೀಗ ಒಂದು ತಿಂಗಳು ಆಗುತ್ತಾ ಬಂದಿದೆ, ಅವರುಗಳೆಲ್ಲ ಬರಲಾರಂಭಿಸಿ. ಸೆಖೆಯ ಬಿಸಿ ಮತ್ತಷ್ಟು ಏರಿದೆ, ಹಾಗೇ ಅವರೊಳಗಿನ ಗಾಢತೆಯೂ. ತಡೆಯಲಾರದ ಉಷ್ಣ, ಶಾಖ; ನಡುವೆ ಶುದ್ಧ ವಾಯುಸಂಚಾರವೂ ಕಡಿಮೆ. ಇದರಿಂದಾಗಿ ಮೈಯಲ್ಲೆಲ್ಲ ಉರಿ. ಕೆರೆದುಕೊಳ್ಳುವ ನವೆ, ಬೆವರು, ಅಂಟು, ವಾಸನೆ. ಇದರಿಂದ ಮುಕ್ತಿ ಹೇಗೆ? ಬೇಸರ ನಿರಾಸೆಗಳಿಂದ ಅತ್ತ ಮುಖ ಮಾಡಿದಾಗ... ...

ಅದೇನು ಬೆಳಕು? ಛಳಕ್ಕೆಂದು ಹೊಳೆದು ಮಾಯವಾಯಿತಲ್ಲ! ಜೊತೆಗೇ ದೊಡ್ಡ ಸದ್ದು. ಹಿಂದೆಯೇ ಪ್ರತಿಧ್ವನಿಗಳ ಸರಮಾಲೆ. ಹೌದು! ಅಲ್ಲಿ ಯುದ್ಧ ಶುರುವಾಗುತ್ತಿದೆ. ಆ ಸ್ಥಳನಿವಾಸಿಗಳಾದ ಬಿಳಿಯರಿಗೂ ಆಗಂತುಕ ಕರಿಯರಿಗೂ ಯುದ್ಧವೇ ಶುರುವಾಗುತ್ತಿದೆ. ಅದೇ ಬೆಂಕಿ-ಬಾಣಗಳ ಹೊಳೆತ, ನಗಾರಿಗಳ ಹೊಡೆತ; ಭಾರೀ ಯುದ್ಧವೇ ಇರಬೇಕು. ಆಗಲಿ, ಕಾಳಗವೇ ಆಗಲಿ. ಆಗಂತುಕರನ್ನು ಸ್ಥಳೀಯರು ಸೋಲಿಸಿ, ಮಣಿಸಿ ಹೊಡೆದುರುಳಿಸಿ, ಅಳಿಸಲಿ. ಇದರಿಂದ ನಮಗೂ ಲಾಭ, ಅಲ್ಲೊಂದಿಷ್ಟು ವಾತಾವರಣ ತಿಳಿಯಾದರೆ ಗಾಳಿ ಸರಾಗವಾಗಿ ತಿರುಗಾಡಬಹುದು. ನಮ್ಮ ಜಿಗುಟು ಸೆಖೆಯೂ ಜಾಲಾಡಿ ಹೋಗಬಹುದು. ಯುದ್ಧವಾಗಲಿ. ಹಾಗೆಂದು ಹಿಂಸೆ ಬಯಸುವ ಮನೋಭಾವವೇನೂ ನಮ್ಮದಲ್ಲ. ಆದರೆ, ಈ ಯುದ್ಧದಿಂದ ಎಲ್ಲರಿಗೂ ಒಳ್ಳೆಯದೇ ಆಗುವುದಾದರೆ ಆಗಲಿ.

ಮತ್ತೆ ... ಶುರುವಾಗೇ ಬಿಟ್ಟಿತು. ರಣಕಹಳೆಗಳ ಕೂಗು, ರಣಭೇರಿಗಳ ಮೊಳಗು, ಬೆಂಕಿ-ಬಾಣಗಳ ಬಿರುಸಿನ ಹಾರಾಟ ಹಗಲಿರುಳೆನ್ನದೆ ನಡೆಯಿತು. ಅವುಗಳನ್ನು ನೋಡುವುದು ನಮಗೂ ಒಂದು ರೀತಿಯ ಮೋಜು; ಭಯ ತುಂಬಿದ ಮೋಜು. ಇಷ್ಟು ಸನಿಹದಲ್ಲೇ ಯುದ್ಧವಾಗುತ್ತಿರುವಾಗ ಅದರ ಪರಿಣಾಮಗಳ ಭಯವಂತೂ ಇದ್ದೇ ಇದೆಯಲ್ಲ. ಒಮ್ಮೊಮ್ಮೆ ಅವರ ಬೆಂಕಿ-ಬಾಣಗಳ ಹಾದಿ ತಪ್ಪಿ ಈ ಕಡೆ ಬಂದು ಮರ-ಗಿಡಗಳೋ, ದನ-ಕರುಗಳೋ, ಇಲ್ಲ ನಮ್ಮ ಜನರೇ ಯಾರಾದರೂ ಸುಟ್ಟುಹೋಗಿರುವುದೂ ಇದೆ. ಪ್ರತಿ ವರ್ಷವೂ ಸುಮಾರಾಗಿ ಇದೇ ಸಮಯಕ್ಕೆ ಬರುತ್ತಾರಲ್ಲ. ಇದೇ ರೀತಿ ಯುದ್ಧವಾಗುತ್ತದಲ್ಲ. ಅದರಿಂದಾಗಿಯೇ ನಮಗೆ ಭಯ. ಈ ಭಯದಿಂದ ಒಂದು ಸಣ್ಣ ರಕ್ಷಣೆಯೂ ಇದೆ. "ಕಾಳಗದ ತೀವ್ರತೆ ಜೋರಾಗಿ ಬಾಣಗಳು ಹಾರಾಡುವಾಗ ಮನೆಯೊಳಗೆ ಒಣಮರದ ಕುರ್ಚಿ, ಬೆಂಚು, ಮಂಚಗಳಲ್ಲೇ ಕುಳಿತಿದ್ದು, ಅರ್ಜುನನ ದಶನಾಮ ಜಪಿಸಿದರೆ ಆ ಬಾಣಗಳೆಲ್ಲ ನಮ್ಮನ್ನು ತಲುಪುವದೇ ಇಲ್ಲ, ನಮಗೇನೂ ಹಾನಿಯಿಲ್ಲ!" ಅನ್ನುವ ಗಾಢವಾದ ನಂಬಿಕೆಯೇ ಧೈರ್ಯ, ಅದರ ಪಾಲನೆಯೇ ರಕ್ಷಾಕವಚ. ಹಾಗೆಂದೇ ದೊಡ್ಡ ದೊಡ್ಡ ಬೆಳಕಿನೆಳೆಗಳನ್ನು ಕಂಡಾಗ, ದಶನಾಮ ತಿಳಿಯದ ಮಕ್ಕಳೆಲ್ಲ "ಅರ್ಜುನಾ... ಅರ್ಜುನಾ... ಅರ್ಜುನಾ..." ಎಂದೇ ಹತ್ತು ಬಾರಿ ಜಪಿಸಿದರೆ, ಹಿರಿಯರು ನಿಯತ್ತಿನಿಂದ ತೂಗುಮಂಚದ ಮೇಲೆ ಕೂತು, "ಅರ್ಜುನಃ... ಫಲುಗುಣಃ... ಪಾರ್ಥ... ಕಿರೀಟೀ... ಶ್ವೇತವಾಹನ ಭೀಭತ್ಸುಃ... ವಿಜಯೋ... ಜಿಷ್ಣುಃ... ಸವ್ಯಸಾಚೀ.. ಧನಂಜಯ" ಎಂದು ಜಪಿಸುತ್ತಾರೆ. ಸುತ್ತಮುತ್ತಲ ಹಳ್ಳಿಗರಂತೂ ಮನೆಯಂಗಳಕ್ಕೆ ಒಂದು ಕತ್ತಿಯನ್ನೆಸೆದು ಮನೆಯೊಳಗೆ ಮುಸುಕೆಳೆದು ಕುಳಿತುಬಿಡುತ್ತಾರೆ. ಗುರಿತಪ್ಪಿದ ಬಾಣಗಳಿಗೆ ಮತ್ತೆ ಹಾದಿ ತಪ್ಪಿಸಿ ಆ ಕತ್ತಿಗಳು ತಮ್ಮೆಡೆಗೆ ಸೆಳೆದುಕೊಳ್ಳುತ್ತವೆ, ಆಗ ತಾವು, ತಮ್ಮ ಮನೆಗಳು ಸುರಕ್ಷಿತ ಎಂಬುದು ಅವರ ನಂಬಿಕೆ. ಇಷ್ಟೆಲ್ಲ ಭಯಗಳಿದ್ದರೂ ಯಾರಿಗೂ ಈ ಯುದ್ಧ ಬೇಡವೆಂದೆನಿಸಿಲ್ಲ. ಪ್ರತಿ ವರ್ಷವೂ ನಡೆಯುವ ಈ ಕಾಳಗವನ್ನು ಎದುರು ನೋಡುವವರೆಷ್ಟು ಮಂದಿಯೋ? ಅದಕ್ಕೇ ಇದೊಂದು ವಿಶೇಷವುಳ್ಳದ್ದು, ಗುರುತರ ಕಾರ್ಯಕಾರಣ ನಿಮಿತ್ತದಿಂದ ನಡೆಯುವಂಥಾದ್ದೆಂದು ಇದನ್ನು ವಿವರಿಸ ಹೊರಟಿದ್ದು, ಬಣ್ಣಿಸತೊಡಗಿದ್ದು. ಇರಲಿ. ಇದೀಗ ಆ ಕದನದ ಆರಂಭವಷ್ಟೆ! ಮುಂದೆ ಇನ್ನೂ ಇದೆ, ಕೇಳಿ.

ಹೀಗೆ ರಣ ಭೇರಿಗಳಿಂದ ಬೆಂಕಿ-ಬಾಣಗಳಿಂದ ಶುರುವಾಗುವ ಇದರ ಮುಂದಿನ ಹಂತ, ಸಹಜವಾಗಿಯೇ ರಕ್ತಪಾತ! ಹೌದು, ಧೋ ಧೋ ಸುರಿಯುವ ರುಧಿರಧಾರೆ. ಇಲ್ಲೂ ವಿಚಿತ್ರವೆಂದರೆ ಈ ರಕ್ತ ನಮ್ಮದರಂತೆ ಕೆಂಪಿಲ್ಲ, ಅದಕ್ಕಾವುದೇ ಕಂಪಿಲ್ಲ, ರಾಗಭಾವಗಳ ಬಿಸುಪಿಲ್ಲ. ವರ್ಣವಿಹೀನ, ವಾಸನಾರಹಿತ ಜೀವಧಾರೆ, ಇದೆಂತಹುದು? ಆ ಜನಗಳೂ ನಮ್ಮಂತಿಲ್ಲವಲ್ಲ! ಅದಕ್ಕೇ ಅವರ ರಕ್ತವೂ ಹೀಗೆ, ನಮ್ಮದರಂತಿಲ್ಲ. ಆದರೆ ಒಂದು ವಿಚಿತ್ರವೆಂದರೆ, ಪ್ರತೀ ವರ್ಷವೂ ಈ ಕದನದ ರಕ್ತಪಾತ ನಡೆಯದಿದ್ದರೆ, ನಮ್ಮ ತಾಯಿ, ಈ ಭೂಮಿ ಅದರಿಂದ ತೋಯದಿದ್ದರೆ ನಾವೂ ಬದುಕಲಾರೆವು. ಆ ಜನ ಬರುವುದು ತಡವಾದಲ್ಲಿ, ಈ ಸ್ಥಳೀಯರ ರಾಜ್ಯಭಾರ ಮುನ್ನಡೆದಲ್ಲಿ, ಭೂಮಿಯೂ ಬಿಳಿಚಿಕೊಳ್ಳುತ್ತಾಳೆ, ನಿತ್ರಾಣಳಾಗುತ್ತಾಳೆ. ಬಾಯಾರಿ, ಬಳಲಿ, ಮುದುರುತ್ತಾಳೆ. ಹಸಿದು ಬಂದ ಕಂದನನ್ನು ಸಂತೈಸಲಾರದೆ ನೋಯುತ್ತಾಳೆ. ಬಾಯಾರಿದ ಪಶು-ಪಕ್ಷಿಗಳಿಗೆ ಆಸರೀಯದೆ ಅಳುತ್ತಾಳೆ. ಮತ್ತೂ ಅವರು ಬಾರದಿದ್ದಲ್ಲಿ ಅವಳ ಮೈಯೆಲ್ಲ ಒಡೆದು ನಿಸ್ತೇಜಳಾಗುತ್ತಾಳೆ. ಮತ್ತೆ ತಡವಾಗಿಯಾದರೂ ಬಂದ ಅವರ ಗುಂಪನ್ನು ನೋಡಿ ಸೆಖೆಯ ಬೇಗೆಯನ್ನು ನಿಟ್ಟುಸಿರಾಗಿ ಹೊರಹೊಮ್ಮಿಸುತ್ತಾಳೆ. `ನಿಮ್ಮ ರಕ್ತ ನೀಡಿ, ನಾನು ಸೋತು ಬಳಲಿದ್ದೇನೆ' ಎಂದು ಮೊರೆಯಿಡುವಂತೆ ಅವರೆಡೆ ದೀನಳಾಗಿ ನೋಡುತ್ತಾಳೆ. ಅವಳ ಮಕ್ಕಳಾದ ನಾವುಗಳೆಲ್ಲರೂ ಅವಳನ್ನನುಸರಿಸುತ್ತೇವೆ.

ಇಷ್ಟೆಲ್ಲಾ ಆದರೂ ಆ ಜನರ ಬರವಾಗಲಿ, ನಂತರ ನಡೆವ ಕಾಳಗವಾಗಲಿ ನಮ್ಮ ಯಾವುದೇ ಸ್ಥಿತಿ-ಗತಿಗಳನ್ನು, ಕೆಲಸ-ಕಾರ್ಯಗಳನ್ನು ಆಧರಿಸಿಲ್ಲ. ಅವರಿಗೆ ಮನಸ್ಸಾದಾಗ, ವರ್ಷಕ್ಕೊಂದು ಬಾರಿಯಂತೆ, ಸುಮಾರು ವೈಶಾಖದ ಸಮಯಕ್ಕೆ ಬರುವರು. ಜ್ಯೇಷ್ಠ-ಆಷಾಢದ ಭಾರೀ ಯುದ್ಧದ ಬಳಿಕವೂ ಅಲ್ಲೊಂದು ಇಲ್ಲೊಂದು ಸಣ್ಣ ಸಣ್ಣ ಗುಂಪುಗಳಲ್ಲಿ ಶ್ರಾವಣ-ಭಾದ್ರಪದ ಮಾಸಗಳವರೆಗೂ ಉಳಿಯುವರು. ಆಗೊಮ್ಮೆ ಈಗೊಮ್ಮೆ ಚಿಕ್ಕ ಪುಟ್ಟ ಜಗಳಗಳನ್ನು ಮಾಡುತ್ತಾ ಕೊನೆಗೆ ಚದುರಿ ಹೋಗುವರು. ಇದು ಹೀಗೇ ನಡೆಯುತ್ತಾ ಬಂದಿದೆ, ಎಷ್ಟು ವರ್ಷಗಳಿಂದಲೊ! ಅದರಲ್ಲೂ ಕೆಲವೊಮ್ಮೆ ಇವರ ಸಂಖ್ಯೆ ಕಡಿಮೆಯಿರುತ್ತದೆ. ಮತ್ತೆ ಕೆಲವೊಮ್ಮೆ ಹಾದಿ ತಪ್ಪಿ ಬಂದವರಂತೆ ಬಹುಬೇಗ ಸ್ವಲ್ಪ ಜನ ಬಂದು, ಜಗಳದಲ್ಲಿ ಅಳಿದು ಬಿಡುತ್ತಾರೆ. `ಹೀಗೇ ಆಗುತ್ತದೆ' ಎಂದು ಖಡಾಖಂಡಿತವಾಗಿ ಹೇಳುವಂತಿಲ್ಲವಾದರೂ ಸರಿಸುಮಾರಾಗಿ ಹೇಳಬಹುದು. ಈ ವರ್ಷ ಮಾತ್ರ ಇವರ ಆಗಮನ ಬಹಳ ತಡವಾಗಿದೆಯಾದ್ದರಿಂದ ವಿಶೇಷವಾಗಿ ಎಲ್ಲರೂ ಎದುರು ನೋಡುತ್ತಿದ್ದರು. ಅದರಲ್ಲೂ ಅವರೆಲ್ಲ ಬಂದು ಸೇರಲಾರಂಭಿಸಿ ಇನ್ನೂ ಯುದ್ಧ ಶುರುವಾಗದಿರುವಾಗ ಇನ್ನಷ್ಟು ಆತಂಕ. ಇದ್ದ ಬದ್ದ ನೀರು, ಆಹಾರ ಎಲ್ಲ ಅವರುಗಳಿಗೆ ಮೀಸಲಾಗಿ ಬಿಡುತ್ತದೆ. ಆ ಕಾರಣಕ್ಕಾಗಿಯೇ ನಮ್ಮ ಉದ್ವೇಗ ಇನ್ನಷ್ಟು ಹೆಚ್ಚುತ್ತದೆ. ಇದೀಗ ಯುದ್ಧ ಶುರುವಾಗಿ ಒಂದು ರೀತಿಯ ವಿಚಿತ್ರ ನೆಮ್ಮದಿ ಸಿಕ್ಕಿದರೂ, ಆ ಬಾಣಗಳ ಭಯ ಇದ್ದೇ ಇದೆಯಲ್ಲ.....

ಈ ವರ್ಷದ ಮಟ್ಟಿಗೆ ಆತಂಕ ಕಡಿಮೆಯಾಯಿತೆಂದೇ ಹೇಳಬಹುದು. ಭೂತಾಯಿ ತಣಿಯುವಷ್ಟು ತಂಪಾದಳು. ಅವಳ ಒಡಲಲ್ಲಿ ಒಸರಾಡಿತು, ಮಡಿಲು ಮತ್ತೆ ಹಸುರಾಯಿತು. ಕುಣಿದು ಕರೆವ ಮಣಕನನ್ನು ಹಸು ತೃಪ್ತಿಯಿಂದ ನೆಕ್ಕಿತು. ಅಲ್ಲಿ, ಆ ಆಗಂತುಕರೆಲ್ಲ ಸೇರಿದ್ದ ಪ್ರದೇಶ ಈಗ ತೆರವಾಗಿ ತಿಳಿಗಾಳಿ ಸುಳಿದಾಡಿತು. ಬಿತ್ತಿದ್ದೆಲ್ಲ ಬೆಳೆಯುವಾಗ ದುಡಿದ ಮೈ ದಣಿವಾರಿಸಿಕೊಂಡಿತು. ಆಗಲೇ ಬಂದ ಸಂತಸದ ದಿನಗಳಲ್ಲಿ ಎಲ್ಲರೂ ಒಂದೊಂದು ಹೆಸರಿನ ನೆಪಮಾಡಿ ಹೊಸದುಟ್ಟು ನಲಿದರು. ಶಿಶಿರನನ್ನು ಬೆನ್ನ ಹಿಂದೆ ಕಟ್ಟಿಕೊಂಡು ಹೇಮಂತ ಬಂದ. ನೆಮ್ಮದಿಯು ಹಣಕಿ ಹಾಕಿತು.

ಆದರೆ..., ಅದೇನು ಆ ಬಯಲಲ್ಲಿ...? ಅದೋ ಮತ್ತೆ ಅವರೆಲ್ಲ ಬಂದರಲ್ಲ! ಯಾಕೀಗ? ಇಷ್ಟು ಬೇಗ? ಅಯ್ಯೋ, ಮತ್ತೆ ಬೆಂಕಿಬಾಣ! ಓಡಿ, ಓಡಿ; "ಅರ್ಜುನಃ... ಫಲುಗುಣಃ... ಪಾರ್ಥ... ಕಿರೀಟೀ... ಶ್ವೇತವಾಹನ....."
************ ************
(ಸೆಪ್ಟೆಂಬರ್, ೧೯೯೯ - ಆಗಸ್ಟ್, ೨೦೦೧)
[1999ರ ಎಪ್ರಿಲ್-ಮೇ ತಿಂಗಳಲ್ಲಿ ಅಸಾಧ್ಯ ಸೆಖೆಯಿಂದ ಕೂಡಿದ ಮೋಡ ಕವಿದ ವಾತಾವರಣವಿದ್ದು ಮೇ ಕೊನೆಗೆ ಧಾರಾಕಾರ ಮುಂಗಾರು ಮಳೆ ಸುರಿದು ದಕ್ಷಿಣ ಕನ್ನಡ ಜಿಲ್ಲೆಯ ನೆಲ ಒಮ್ಮೆ ತಂಪಾಗಿತ್ತು. ಮಳೆ ಸುರಿಯುವ ಪ್ರಕ್ರಿಯೆಯನ್ನು ಹೊಸ ರೀತಿಯ ಕಥನವಾಗಿ ಹೆಣೆಯುವ ಯೋಚನೆ ಮಾಡಿ, ಸೆಪ್ಟೆಂಬರಲ್ಲಿ ಬರೆಯಲು ಶುರು ಮಾಡಿದ್ದೆ. ಅದೇ ನವೆಂಬರ್ ತಿಂಗಳಲ್ಲಿ ಮತ್ತೆ ಮುಂಗಾರೇನೋ ಎಂಬಂತೆ ಮೋಡ ಕವಿದು ಧೋ ಧೋ ಮಳೆ ಸುರಿದಾಗ ಕಥೆಯ ಎಳೆ ಇನ್ನಷ್ಟು ಗಟ್ಟಿಯಾಗಿತ್ತು. ಆದರೆ, ಬರೆದು ಮುಗಿಸಿದ್ದು ಮಾತ್ರ ಸುಮಾರು ಎರಡು ವರ್ಷಗಳ ಬಳಿಕವೇ!]

Thursday 30 October, 2008

ಶುಭ ಹಾರೈಕೆಗಳು, ನಿಮಗೆಲ್ಲ...







ಓದುಗರೆಲ್ಲರಿಗೂ ದೀಪಾವಳಿಯ ಶುಭಾಶಯಗಳು.

ಬೆಳಕಿನಾವಳಿಯು ಎಲ್ಲರ ಬಾಳಲ್ಲಿ ಒಳಿತಿನ ಹಾದಿಯನ್ನೇ ಬೆಳಗುತಿರಲಿ.

Friday 17 October, 2008

ಸೀಳುನಾಯಿ-- ಭಾಗ ೦೧

"...ಸೀಳುನಾಯಿಗಳು ಒಂದು ಜಾತಿಯ ಬೇಟೆ ನಾಯಿಗಳು. ಹಿಂದೆ ಕಾಡುಗಳಲ್ಲಿ ಗುಂಪಿನಲ್ಲಿ ವಾಸಿಸುತ್ತಾ ತೋಳಗಳ ಹಾಗೆ ಬದುಕಿದವು. ಉತ್ತಮ ಶಕ್ತಿ, ಬುದ್ಧಿವಂತಿಕೆ ಮತ್ತು ಒಳ್ಳೆಯ ಸ್ವಂತಿಕೆಯನ್ನೂ ಹೊಂದಿರುವ ನಾಯಿಗಳು. ತಮ್ಮ ದೇಹದ ದೌರ್ಬಲ್ಯವನ್ನೂ ಕಡೆಗಣಿಸಿ ಗುಂಪಿಗಾಗಿ ಸೆಣಸಾಡುವಂಥ ಛಾತಿಯುಳ್ಳವು. ನಾಯಿಗಳಲ್ಲಿ ನನಗೆ ಇಷ್ಟದ ಜಾತಿ...."
ಇಪ್ಪತ್ತೈದರ ಮಗನ ವಿವರಣೆ ಸಾಗಿತ್ತು. ಐವತ್ತೈದರ ನಾನು ಎಲ್ಲೋ ಕಳೆದುಹೋಗಿದ್ದೆ. "ತನ್ನ ಹೊಟ್ಟೆಪಾಡಿಗಷ್ಟೇ ಹಿಂಸಾಚಾರ ಮಾಡುವ ಪ್ರಾಣಿಗಳಿಗಿಂತ ಮನುಷ್ಯ ಕೆಟ್ಟವನು" ಅನ್ನುವುದು ಅವನ ವಾದ. ಇದರ ಪೂರ್ವಾಪರ ವಿಮರ್ಶೆಯಲ್ಲಿ ನಾನಿದ್ದೆ, ಸೋಲುತ್ತಿದ್ದೆ. ಆದರೆ, ಮಗನೆದುರು ಸೋಲೊಪ್ಪಿಕೊಳ್ಳದ ಭಂಡ ಗಂಡುತನ ನನ್ನದು. ‘ಎಷ್ಟಾದರೂ ಅವನ ಅಪ್ಪ ನಾನು. ನನಗೂ ಮೀಸೆಯಿದೆ!’ ನನ್ನೊಳಗಿನ ಅಹಂ ಒತ್ತುಕೊಡುತ್ತಿತ್ತು. ನಮ್ಮಿಬ್ಬರ ವಾಗ್ವಾದ ತಡೆಯಲಾರದೆ ವಾಣಿ ಹೊರಗೆ ಹೋಗಿದ್ದಳು. ಅವಳಿಗೆ ಚೆನ್ನಾಗಿ ಗೊತ್ತು, ಸೋಲೊಪ್ಪಿಕೊಳ್ಳದ ಗಂಡು ನಾನು; ಸೋಲೇ ಇಲ್ಲದ ಗಂಡು ಇವನು.

ಮೂರು ವರ್ಷದ ಪೋರನಾಗಿದ್ದಾಗಲೇ ನನಗೆ ಅರಿವಿಲ್ಲದ, ಉತ್ತರ ನನ್ನಲ್ಲಿಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದ, ಈ ಕಿಶೋರ. ಗೊತ್ತಿಲ್ಲವೆನ್ನದೆ ಗದರುತ್ತಿದ್ದ ನನ್ನನ್ನು ಮುಚ್ಚಿದ ಬಾಗಿಲ ಹಿಂದೆ ಸುಮ್ಮನಿರಿಸುತ್ತಿದ್ದಳು ಅವಳು. ಮುಂದಿನ ವರ್ಷಗಳಲ್ಲಿ ಅವನ ಪ್ರಶ್ನೆಗಳು ನನ್ನನ್ನು ಕಾಣುತ್ತಲೇ ಇರಲಿಲ್ಲ. ವಾಚನಾಲಯದ ಪುಸ್ತಕಗಳೆಲ್ಲ ಅವನ ಗ್ರಾಸವಾಗಿದ್ದವು. ಕಿಶೋರನ ಕ್ರಿಯಾಶೀಲತೆಗೆ ಶರಣಾದವಳು ವಾಣಿ; ಅವನ ಸಾಮರ್ಥ್ಯಕ್ಕೆ ಸಾಧ್ಯವಾದಷ್ಟೂ ಅವಕಾಶ ಒದಗಿಸುತ್ತಿದ್ದಳು. ಪರಿಣಾಮ... ಅತ್ಯಂತ ಸ್ವಂತಿಕೆಯುಳ್ಳ ಮಗ. ಒಂದೇ ಕೂರಿನಲ್ಲಿ ಏನನ್ನೂ ಮಾಡದ ನಾನು, ಕೂತಲ್ಲಿಂದ ಏಳದೆ ಹಿಡಿದ ಕೆಲಸ ಮುಗಿಸುವ ಅವನು; ಇದೆಂಥಾ ಅಪ್ಪ-ಮಗನ ಜೋಡಿ! ನಮ್ಮಿಬ್ಬರ ಗುಣಗಳ ಯಾವ ಹೋಲಿಕೆಯೂ ಇಲ್ಲದ ಅವನನ್ನು ಕುರಿತು ವಾಣಿಯನ್ನು ನಾನು ಗೇಲಿ ಮಾಡಿದ್ದಿದೆ, ‘ಆಸ್ಪತ್ರೆಯಲ್ಲಿ ಮಗು ಅದಲು-ಬದಲಾಗಿದ್ದಿರಬೇಕು, ನಿನಗೆ ಅರಿವಾಗಿಲ್ಲ’ ಎಂದು. ಅದಕ್ಕೂ ಅವಳ ಉತ್ತರವಿಲ್ಲ. ಸಣ್ಣ ನಗುವಿನಿಂದಲೇ ಎಲ್ಲವನ್ನೂ ನಿಭಾಯಿಸುವ ಇವಳನ್ನು ಬ್ರಹ್ಮ ನನಗೇ ಯಾಕೆ ಗಂಟು ಹಾಕಿದನೊ?

"...ಅಪ್ಪಾ! ಎಲ್ಹೋದ್ರಿ?..." ಕಿಶೋರ ಭುಜ ತಟ್ಟಿದಾಗಲೇ ಎಚ್ಚರ. "ಮತ್ತೆ ಹಳೇ ಕನಸುಗಳಲ್ಲಿ ಸಿಕ್ಕಿಕೊಂಡ್ರಾ?" ಹೌದು ಅನ್ನಲಾಗದೆ, ವಿಷಯಾಂತರ ಮಾಡಿದೆ: "ಇಲ್ಲಪ್ಪ. ಸಣ್ಣ ನಿದ್ದೆ ಹಿಡ್ದಿತ್ತು. ಬೆಳಗ್ಗೆ ದೋಸೆ ತಿಂದದ್ದು ನೋಡು. ಒಳ್ಳೆ ಜಡ ಏರಿದೆ." "ಹಾಗಾದ್ರೆ ನೀವು ಮಲಗಿ. ನನಗೂ ಬೇರೇನೋ ಕೆಲಸ ಉಂಟು." ಸೋಫಾದಿಂದ ಎದ್ದ ಕಿಶೋರ. ನನ್ನ ಯೋಚನೆ ಮತ್ತೆ ಎಲ್ಲೋ ಕಳೆದುಹೋಯಿತು.

ಇವನಿಗೆ ತಿಳಿಯದ ವಿಷಯವೇ ಇಲ್ಲ. ಯಾವುದರ ಬಗ್ಗೆ ಮಾತು ಎತ್ತಿದರೂ ಅವೆಲ್ಲದರ ಬಗ್ಗೆ ಕರಾರುವಕ್ಕಾಗಿ ಹೇಳಬಲ್ಲವ. ಅವನ ಸ್ವಂತಿಕೆಯೂ ಅಷ್ಟೇ ಕಟ್ಟುನಿಟ್ಟಿನದು. ತನ್ನ ಹದಿನೆಂಟನೇ ಹುಟ್ಟುಹಬ್ಬದ ದಿನ ಮನೆಯೊಳಗೆ ಬಿರುಗಾಳಿಯಂಥ ಸುದ್ದಿ ಬಿತ್ತಿದವ. ಅದಕ್ಕಿದ್ದ ಪ್ರತಿರೋಧಗಳ ನಡುವೆಯೂ ಒಂದು ವಾರದ ಬಳಿಕ ಏಳು ದಿನಗಳ ಹಸುಗೂಸನ್ನು ದತ್ತು ಸ್ವೀಕರಿಸಿ ಮನೆಗೆ ತಂದವ. ಅದಕ್ಕೆ ಅಪ್ಪ-ಅಮ್ಮ ಎರಡೂ ಆಗಿ ಸಾಕುವ ಛಾತಿ ತೋರಿದವ. ವಾಣಿಯ ತಾಯ್ತನ ಅವನಲ್ಲಿನ ಹೆಂಗರುಳನ್ನು ಸದ್ಯಕ್ಕೆ ಮರೆಯಲ್ಲಿರಿಸಿದೆ. ಆ ಪೋರಿಗಾಗಿ ಎರಡು ವರ್ಷ ತಾನು ಕಮ್ಯೂನಿಟಿ ಕಾಲೇಜಿನಲ್ಲಿ ಕಲಿಯುವ ನಿರ್ಧಾರ ಮಾಡಿ ಡ್ಯೂಕ್ ಯೂನಿವರ್ಸಿಟಿಯ ವಿದ್ಯಾರ್ಥಿ ವೇತನದ ಸೀಟನ್ನೂ ಬಿಟ್ಟುಕೊಟ್ಟ ಹಠವಾದಿ. ಮುಂದೆ ಕಾಲೇಜಿಗೆ ಸೇರಿದಾಗಲೂ ತನ್ನ ಮಗಳನ್ನು ಬಿಟ್ಟಿರಲಾರದೆ, ತನ್ನೊಂದಿಗೆ ಕರೆದೊಯ್ಯಲು ನಮ್ಮನ್ನು ಒಪ್ಪಿಸಲಾರದೆ ಪ್ರತೀ ವಾರಾಂತ್ಯಕ್ಕೆ ಮನೆಗೆ ಬರುತ್ತಿದ್ದ. ಗೆಳೆಯರ ನಡುವಿನ ಮೋಜಿನ ಜೀವನವನ್ನೂ ತನ್ನ ವೈಯಕ್ತಿಕ ಆಯ್ಕೆಯ ಗಂಭೀರ ಜವಾಬ್ದಾರಿಯನ್ನೂ ಅನಾಯಾಸದಿಂದ ನಿಭಾಯಿಸಿಕೊಂಡವ. ಅತ್ಯುನ್ನತ ಅಂಕಗಳಿಂದ ಕಾಲೇಜು ಮುಗಿಸಿ, ನಮ್ಮೂರಲ್ಲೇ ಉನ್ನತ ಶಿಕ್ಷಣವನ್ನೂ ಪೂರೈಸಿ, ಒಳ್ಳೆಯ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಮಗ ಮನೆಯಲ್ಲೇ ಇದ್ದಾನೆಂಬ ಸಡಗರ ನಮ್ಮಿಬ್ಬರಿಗೆ. ಅವನ ಜೊತೆ ಕುಣಿಯುವ ಖುಷಿ ‘ನಿಧಿ’ಗೆ.

ವಾಣಿ ಒಳಗೆ ಬಂದಿದ್ದಾಳೆ. ನಿಧಿ ಓಡಿ ಹೋಗಿ ‘ಅಮ್ಮ’ನಿಗೆ ಅಂಟಿಕೊಂಡಳು. ಅವಳಿಗೆ ನಾವಿಬ್ಬರೂ ‘ಅಮ್ಮ-ಅಪ್ಪ’. ಕಿಶೋರ ಆಕೆಯ ‘ಡ್ಯಾಡ್’. ಮೂವರು ಹಿರಿಯರ ಪ್ರೀತಿಯಲ್ಲಿ ಬೆಚ್ಚಗೆ ಬೆಳೆಯುತ್ತಿದೆ ಬಿಳಿಯ ಚಿಗರೆ ಮರಿ. ವಯಸ್ಸಿಗೆ ಮೀರಿದ ಬೆಳವಣಿಗೆ, ಇಲ್ಲಿನವರಂತೆ. ಅವಳ ಜೈವಿಕ ಅಮ್ಮ-ಅಪ್ಪ ಯಾರೆಂದೇ ನಮಗೆ ತಿಳಿದಿಲ್ಲ. ಕಿಶೋರನಿಗೆ ಅರಿವಿರಬಹುದು, ಹೇಳುತ್ತಿಲ್ಲ. ಆದರೆ, ಆಕೆ ಶಾಲೆಗೆ ಸೇರುವ ಸಮಯದಲ್ಲಿ ಆಕೆಗೆ ತಿಳಿಸಿದ್ದಾನೆ, ಆಕೆ ನಮ್ಮ ನೈಜ ಮಗುವಲ್ಲ, ದತ್ತುಪುತ್ರಿ ಎಂದು. ಜೊತೆಗೇ ಆಕೆ ನಮ್ಮೆಲ್ಲರ ಕಣ್ಮಣಿ ಎಂದೂ ಅವಳಿಗೆ ಮನವರಿಕೆ ಮಾಡಿದ್ದಾನೆ. ‘ಇದೆಲ್ಲ ಬೇಕಾ?’ ಅನ್ನುವ ನನ್ನ, ವಾಣಿಯ ಪ್ರಶ್ನೆಗಳಿಗೆ ಈಗಲ್ಲದಿದ್ದರೂ ಮುಂದೆ ಬೇಕಾದೀತು ಅನ್ನುವುದು ಅವನ ವಾದ. ಕಿರಿಕಿರಿಯಾದರೂ ಸುಮ್ಮನಿದ್ದೇವೆ. ಈ ಮುದ್ದಿನ ನಿಧಿಯನ್ನು ಈಗ ಯಾರಾದರೂ ಬಂದು "ಇವಳು ನಮ್ಮ ಮಗಳು, ನಮಗೆ ಕೊಡಿ" ಅಂದರೆ ಕೊಡಲು ನಾವಿಬ್ಬರೂ ತಯಾರಿಲ್ಲ. ಅದೇ ಭಯ ಒಮ್ಮೊಮ್ಮೆ ವಾಣಿಗೆ ಕನಸಾಗಿ ಕಾಡುವುದಿದೆ. ಹೇಗಾದರೂ ಕಿಶೋರನಿಗೆ ಇದನ್ನು ತಿಳಿಸಬೇಕು. ಮುಂದಿನ ಶುಕ್ರವಾರ ನಿಧಿ ಮತ್ತು ಅವನ ಜನ್ಮದಿನ. ಅದರ ನಂತರ ತಿಳಿಸಿದರಾಯಿತು.
************ ************

ನಿಧಿ ಈಗ ಆರನೇ ತರಗತಿ. ಈ ನಾಲ್ಕು ವರ್ಷಗಳಲ್ಲಿ ಕಿಶೋರನ ಮಾತು ನಿಧಾನವಾಗಿ ಮೂಲೆ ಸೇರಿದೆ. ಯಾಕೆ ಅನ್ನುವುದು ನಮಗೆ ಒಡೆಯಲಾಗದ ಒಗಟು. ನಿಧಿಯ ಎಂಟನೇ ಜನ್ಮದಿನ ಮತ್ತು ತನ್ನ ಇಪ್ಪತ್ತಾರನೇ ಜನ್ಮದಿನ ನಮ್ಮೊಂದಿಗೆ ಮನೆಯಲ್ಲಿ ಆಚರಿಸಿದ ಹುಡುಗ, ತನ್ನ ಜೊತೆಗಾರರೊಂದಿಗೆ ಸಾಗರ ತೀರಕ್ಕೆ ಹೋಗಿ ಬಂದಿದ್ದ. ಅದೇ ರಾತ್ರೆ ವಾಣಿ ‘ಆತನ ವರ್ತನೆಯಲ್ಲಿ ಬದಲಾವಣೆಯಾಗಿದೆ’ ಎಂದಾಗ ನಾನು ಯಾವುದೇ ಒತ್ತಾಸೆಯಿತ್ತಿರಲಿಲ್ಲ. ‘ಏನಿಲ್ಲ, ಎಲ್ಲ ನಿನ್ನ ಭ್ರಮೆ’ ಅಂದಿದ್ದೆ. ಎಂದಿನಂತಿಲ್ಲದೆ, ಮೌನವಾಗಿದ್ದ ಮಗನ ನಡತೆ ಅವಳ ಕರುಳು ಕಾಣದಿದ್ದೀತೆ? ನಿಧಿಯಂತೂ ವಾಣಿಗೇ ಹೆಚ್ಚು ಹೆಚ್ಚು ಅಂಟುತ್ತಿದ್ದಾಳೆ. ಬೆಳೆಯುತ್ತಿರುವ ಹೆಣ್ಣು ಆಕೆ, ಸಹಜವೇನೊ! ಆದರೂ, ಇವನಿಗೇನಾಗಿದೆ? ಮೊದಲಿನಂತೆ ಎಲ್ಲದಕ್ಕೂ ವಾದಿಸುತ್ತಿಲ್ಲ. ಮೊನ್ನೆ-ಮೊನ್ನೆ ಅನ್ನುವ ಹಾಗೆ ಎಲ್ಲರನ್ನು ಕಾಡಿಸಿ, ರೇಗಿಸಿ, ಆಡಿಸುತ್ತಿದ್ದವ ನಾಲ್ಕು ವರ್ಷಗಳಲ್ಲಿ ತೀರಾ ಮೌನಿಯಾಗಿದ್ದು ಸಹಜ ಬದಲಾವಣೆಯೆ? ಏನು ಕೇಳಿದರೂ ಉತ್ತರವಿಲ್ಲ. ಹೇಗೆ ಕೇಳಿದರೂ ಉತ್ತರವಿಲ್ಲ. ಒತ್ತಾಯಿಸಿದರೆ ನಮ್ಮ ನಡುವಿನಿಂದ ಎದ್ದೇ ಹೋಗುತ್ತಾನೆ. ನಿಧಿಯೊಡನೆಯೂ ಯಾವುದೇ ಆಟಗಳಿಲ್ಲ. ಅವಳ ಪಾಠಗಳಲ್ಲಿ ಗಮನವಿಲ್ಲ. ಶಾಲೆಯ ಮೀಟಿಂಗುಗಳಿಗೂ ನಮ್ಮನ್ನೇ ಅಟ್ಟುತ್ತಿದ್ದಾನೆ. ಈ ಎಲ್ಲ ಗಮನಾರ್ಹ ಬದಲಾವಣೆಗಳು ಇತ್ತೀಚೆಗೆ ಅನ್ನುವಂತೆ ನಡೆದಿವೆ. ಯಾಕೆ?
************ ************

ಕಿಶೋರನ ಡೈರಿ ನನ್ನ ಕೈಯ್ಯಲ್ಲಿದೆ. ಓದಲೋ ಬೇಡವೋ ಸಂದಿಗ್ಧ. ವಾಣಿಗೆ ಹೇಳಿದರೆ ನೊಂದುಕೊಂಡಾಳು. ಒಂದು ವಾರದಿಂದ ನಾವ್ಯಾರೂ ಬದುಕಿಯೇ ಇಲ್ಲವೆಂಬಂತೆ ಇದ್ದೇವೆ. ಹಿಂದಿನ ಗುರುವಾರ ಕೆಲಸಕ್ಕೆ ಹೋದ ಹುಡುಗ ಮನೆಗೇ ಬಂದಿಲ್ಲ. ಪೋಲಿಸ್ ಕಂಪ್ಲೇಂಟ್ ಕೊಟ್ಟಾಗಿದೆ. ಅವನ ಸ್ನೇಹಿತರನ್ನು ಸಂಪರ್ಕಿಸಿಯಾಗಿದೆ. ಸಹೋದ್ಯೋಗಿಗಳ ಹೇಳಿಕೆಯಂತೆ, ಅದಕ್ಕೂ ಹಿಂದಿನ ವಾರದಿಂದ ಅವನು ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಗುರುವಾರದಂದು ಆಫೀಸಿಗೇ ಹೋಗಿರಲಿಲ್ಲ. ಈ ಡೈರಿ ನಮ್ಮ ಹಾಸಿಗೆಯಡಿಯಲ್ಲಿ ಇಂದು ಸಿಕ್ಕಿದೆ. ಪೋಲಿಸ್ ಅಧಿಕಾರಿಗಳು ಇಂಥಾದ್ದೇನಾದರೂ ಇದೆಯೇ ಎಂದು ಅವನ ಕೋಣೆಯನ್ನು, ಕಾರನ್ನು, ಎಲ್ಲ ಜಾಲಾಡಿದ್ದರು. ಏನೂ ಸಿಕ್ಕಿರಲಿಲ್ಲ. ಇದೀಗ ಸಿಕ್ಕಿದೆ, ನಮ್ಮ ಕೋಣೆಯಲ್ಲಿ. ನಾನಂತೂ ಈ ವಾರ ಕೆಲಸಕ್ಕೆ ಹೋಗದೆ ಮನೆಯಲ್ಲೇ ಕೂತಿದ್ದೇನೆ. ತಲೆ ಕೆಟ್ಟಿದೆ. ವಾಣಿ ನಿಧಿಯನ್ನು ಶಾಲೆಯಿಂದ ಕರೆತರಲು ಹೋಗಿದ್ದಾಳೆ, ಬರಲು ಇನ್ನೊಂದು ಗಂಟೆ ಬೇಕು. ಅಷ್ಟರಲ್ಲಿ ಈ ಡೈರಿ ಓದಿಯೇ ಬಿಡುತ್ತೇನೆ, ಏನಾದರೂ ಸುಳಿವು ಸಿಕ್ಕೀತು...
************ ************

"ಅಮ್ಮ, ಅಪ್ಪ, ಯಾವಾಗಲೂ ನಿಮ್ಮ ಜೊತೆ ಮಾತಾಡುತ್ತಿದ್ದರೂ ಕೆಲವೊಂದು ವಿಷಯಗಳನ್ನು ನಿಮಗೆ ತಿಳಿಸಲು ಸಾಧ್ಯವೇ ಆಗುತ್ತಿಲ್ಲ. ಇವತ್ತು ನನ್ನ ಹದಿನೆಂಟನೇ ಜನ್ಮದಿನ. ಒಂದು ಮಗುವನ್ನು ದತ್ತು ತೆಗೆದುಕೊಂಡು ಸಾಕುವುದಾಗಿ ನಿಮಗೆ ಹೇಳಿದ್ದೇನೋ ಆಗಿದೆ. ನಿಮ್ಮ ವಿರೋಧ, ಸಿಟ್ಟು, ಅಸಮಾಧಾನ, ಆಶ್ಚರ್ಯ, ಎಲ್ಲವೂ ನನಗೆ ಅರ್ಥವಾಗುತ್ತದೆ. ಆದರೆ, ಯಾಕೆ ಈ ನಿರ್ಧಾರ ಅನ್ನುವುದನ್ನು ಮಾತ್ರ ಮಾತಲ್ಲಿ ನಿಮಗೆ ತಿಳಿಸಿ ಹೇಳಲಾರೆ. ಅದಕ್ಕಾಗಿ ಈ ಡೈರಿ."

"ನಾನು ದತ್ತು ಸ್ವೀಕರಿಸುವ ಮಗು ನನ್ನ ಸ್ನೇಹಿತನದ್ದು. ಅವನು ಮತ್ತವನ ಸ್ನೇಹಿತೆ ವಯಸ್ಸಿನ ಆಮಿಷಕ್ಕೆ ಒಳಗಾಗಿ ಮಗುವಿನ ಹುಟ್ಟಿಗೆ ಕಾರಣರಾಗುತ್ತಿದ್ದಾರೆ. ಕಟ್ಟಾ ಕ್ಯಾಥೋಲಿಕ್ ಕ್ರಿಶ್ಚಿಯನ್ನರಾದ ಅವಳ ಹೆತ್ತವರು ಹೊಂದಾಣಿಕೆ ಮಾಡಿ ಮದುವೆಗೆ ಏರ್ಪಾಡು ಮಾಡೋಣ ಎಂದರೆ ಇವನ ಹೆತ್ತವರಿಗೆ ಒಪ್ಪಿಗೆಯೇ ಇಲ್ಲ. ಜೊತೆಗೆ, ಇವರಿಬ್ಬರಿಗೂ ಇಷ್ಟವಿಲ್ಲ. ತಮ್ಮ ನಡುವೆ ಪ್ರೀತಿಯಿಲ್ಲ, ಆದ್ದರಿಂದ ಮದುವೆ ಸಾಧ್ಯವಿಲ್ಲ ಅನ್ನುವುದು ಇವರ ವಾದ. ಒಂದು ಮಗುವಿಗಾಗಿ ತಮ್ಮಿಬ್ಬರ ಜೀವನ ತಪ್ಪು ದಾರಿಯಲ್ಲಿ ಶುರುವಾಗಬಾರದು ಅನ್ನುವ ಸಮರ್ಥನೆ. ಇಬ್ಬರೂ ಮಾತಾಡಿಕೊಂಡು ಮಗುವನ್ನು ಯಾರಿಗಾದರೂ ದತ್ತು ಕೊಡುವುದೆಂದು ನಿರ್ಧರಿಸಿದ್ದಾರೆ. ಇದರಲ್ಲಿ ನನ್ನದೇನು ಪಾತ್ರ? ‘ನನಗೆ ಮಕ್ಕಳೆಂದರೆ ಅತೀವ ಮಮತೆ. ಈ ಗೆಳೆಯನ ಮಗು ಅನಾಥವಾಗುವುದನ್ನು ಸಹಿಸಲಾರೆ’ ಅಂತೆಲ್ಲ ಹೇಳಿದರೆ ಅದು ಅರ್ಧ ಸತ್ಯ. ಪೂರ್ಣ ಸತ್ಯವನ್ನು ಹೊರಹಾಕಿ ಅರಗಿಸಿಕೊಳ್ಳುವ ಶಕ್ತಿ ನಿಮ್ಮಿಬ್ಬರಿಗೂ, ನನಗೂ ಸದ್ಯಕ್ಕೆ ಇಲ್ಲ. ಅದನ್ನು ಬರೆಯುವ ಮನಶ್ಶಕ್ತಿ ನನಗೂ ಈಗ ಇಲ್ಲ. ಆ ಘಳಿಗೆ ಬಂದಾಗ ಇಲ್ಲೇ ಬರೆಯುವೆ."
***

"ಅಪ್ಪ, ಅಮ್ಮ, ಇಂದು ನನ್ನ ಇಪ್ಪತ್ತನೆಯ ಜನ್ಮ ದಿನ. ಎಲ್ಲವೂ ಎಷ್ಟು ಚೆನ್ನಾಗಿ ಸಾಗುತ್ತಿದೆ. ನಿಧಿ ನಮ್ಮ ಪಾಲಿನ ನಿಧಿಯೇ. ನಿಮಗೆ ಮೊಮ್ಮಗಳಂಥ ಮಗಳು. ನನಗೂ ಆಡಲು ತಂಗಿಯಂಥ ಮಗಳು. ಇದೆಂಥ ವಿಚಿತ್ರ? ನನ್ನ ಕಮ್ಯೂನಿಟಿ ಕಾಲೇಜ್ ಮುಗಿದಿದೆ. ಮುಂದಿನ ವಾರ ನಾನು ಯೂನಿವರ್ಸಿಟಿಗೆ ಹೋಗಲೇಬೇಕು. ಆದರೂ ನನ್ನೆದೆಯೊಳಗೆ ಬೆಚ್ಚನೆ ಬಚ್ಚಿಟ್ಟಿರುವ ಒಂದು ಸತ್ಯವನ್ನು ನಿಮ್ಮ ಮುಂದೆ ಎಳೆದುಹಾಕಲು ನನ್ನಿಂದಾಗುತ್ತಿಲ್ಲ. ನಿಮ್ಮಿಬ್ಬರ ಮುಖದಲ್ಲಿ ನಲಿಯುವ ಸುಖವನ್ನು ಗೀರುಗಾಯದಿಂದ ವಿಕೃತಗೊಳಿಸಲು ಸಾಧ್ಯವಿಲ್ಲ. ಬರೆಯೋಣವೆಂದೇ ಶುರುಮಾಡಿದೆ, ಆಗದು. ಇಂದಿಗೆ ಕ್ಷಮಿಸಿ."
***

"ಅಪ್ಪ, ಅಮ್ಮ, ನಿನ್ನೆ ಸಂಜೆ ನನ್ನ ಗೆಳೆಯರೊಂದಿಗೆ ಸಾಗರ ತೀರಕ್ಕೆ ಹೋಗಿದ್ದಾಗ ಏನೋ ಮಾತು ಮಾತಿನ ನಡುವೆ ನಮ್ಮೊಳಗೆ ವಾಗ್ವಾದವಾಗಿ ಒಬ್ಬ ಗೆಳೆಯ ಏನೇನೋ ಅಂದುಬಿಟ್ಟ. ನಿಧಿ ನನ್ನದೇ ಮಗಳೆಂದು ಹೈ-ಸ್ಕೂಲಿನಲ್ಲಿ ಎಲ್ಲರೂ ಆಗ ಆಡಿಕೊಂಡಿದ್ದಾಗಿ ತಿಳಿಸಿದ. ಅವಳ ನಿಜವಾದ ಅಪ್ಪ, ಅಮ್ಮ ಮತ್ತು ನಾನು ಒಳ್ಳೆಯ ಸ್ನೇಹಿತರಾಗಿದ್ದೆವು, ನಿಜ. ಆದರೆ ಅದಕ್ಕೂ ಮೀರಿದ ಬಾಂಧವ್ಯವಿರಲಿಲ್ಲ. ಅದನ್ನು ಈ ಗೆಳೆಯನಿಗೆ ಹೇಗೆ ವಿವರಿಸಿದರೂ ಆತ ಒಪ್ಪಲಿಲ್ಲ. "ನಿನಗೇನೂ ಸಂಬಂಧ ಇಲ್ಲವಾದರೆ ಆ ಮಗುವನ್ನು ನೀನೇ ಯಾಕೆ ದತ್ತು ತಗೊಂಡೆ? ನೀನಿನ್ನೂ ಕಲಿಯುತ್ತಿದ್ದ ಹುಡುಗ. ಅವರಿಬ್ಬರಿಗೇ ಇಲ್ಲದ ಜವಾಬ್ದಾರಿ ನಿನಗ್ಯಾಕೆ ಬೇಕಿತ್ತು?" ಅವನ ಈ ವಾದಕ್ಕೆ ನನ್ನಲ್ಲಿ ಉತ್ತರವಿದೆ, ಆದರೆ ಕೊಡುವ ಹಾಗಿಲ್ಲ. ನನ್ನೊಳಗೆ ಯಾವುದೋ ಹುತ್ತ ಬೆಳೆಯುತ್ತಿರುವಂತೆ ಅನಿಸುತ್ತಿದೆ. ಒಳಗಿನಿಂದಲೇ ನನ್ನನ್ನು ಕೊರೆಯುತ್ತಿದೆ. ಇದರಿಂದ ಮುಕ್ತನಾಗುವ ದಾರಿ ಸದ್ಯಕ್ಕೆ ಕಾಣುತ್ತಿಲ್ಲ."
***

"ಅಮ್ಮ, ಅಪ್ಪ, ನಿನ್ನೆ ತಾನೇ ನಿಧಿಯನ್ನು ಆರನೇ ತರಗತಿಗೆ, ಮಾಧ್ಯಮಿಕ ಶಾಲೆಯಲ್ಲಿ ಬಿಟ್ಟು ಬಂದೆವಲ್ಲ. ಇನ್ನು ಮೂರು ವರ್ಷಗಳಲ್ಲಿ ಅವಳು ಅವಳ ಹೆತ್ತವರು ಮತ್ತು ನಾನು ಓದಿದ ಹೈ-ಸ್ಕೂಲಿಗೆ ಹೋಗುತ್ತಾಳೆ. ತಾನು ಈ ಮನೆಯ ಮಗಳಲ್ಲವೆಂದು ಅವಳಿಗೆ ತಿಳಿದಿದೆಯಾದರೂ ಅವಳು ತನ್ನ ಹೆತ್ತವರನ್ನು ಹುಡುಕಲು ಇನ್ನೂ ಶುರುಮಾಡಿಲ್ಲ. ಹೈ-ಸ್ಕೂಲ್ ಸೇರಿದಾಗ ಅದೆಲ್ಲ ಬದಲಾಗಬಹುದು. ಅಲ್ಲಿ ಅವರ ಫೋಟೋಗಳಿವೆ. ಅವರಿಬ್ಬರೂ ಶಾಲೆಯ ಮುಂದಾಳುಗಳು. ನನ್ನಂತೆಯೇ ಬುದ್ಧಿವಂತರಾಗಿದ್ದವರು. ಅವರಿಬ್ಬರ ಹೋಲಿಕೆ ನಿಧಿಯಲ್ಲಿ ದಿನವೂ ನಾನು ಕಾಣುತ್ತೇನೆ. ಇಬ್ಬರೊಂದಿಗೂ ನನ್ನ ಸಂಪರ್ಕ ಈಗ ಇಲ್ಲವಾದರೂ ಅವರಿಬ್ಬರಲ್ಲಿ ನಮ್ಮ ವಿಳಾಸ ಇರಬಹುದು. ಯಾವ ಘಳಿಗೆಯಾದರೂ ಅವರು ಇಲ್ಲಿಗೆ ಬರಬಹುದು ಅನ್ನುವ ಯೋಚನೆ ನನ್ನನ್ನು ಕಾಡಿದ್ದು ಇದೆ. ಅದಕ್ಕಾಗಿ ಇಂದು ನಾನು ನಮ್ಮ ಶಾಲೆಯ ಮೂಲಕ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದೆ. ಅವರಿಬ್ಬರೂ ನಮ್ಮ ಪಕ್ಕದ ಊರು, ಫೋಲ್ಸಮ್‍ನಲ್ಲಿ ಬಂದು ನೆಲೆಸಿದ್ದೂ, ಅಲ್ಲಿಯ ಹೈ-ಸ್ಕೂಲಲ್ಲಿ ಶಿಕ್ಷಕರಾಗಿ ಸೇರಿರುವುದೂ, ಇದೇ ವರ್ಷ ಮದುವೆಯಾಗಿರುವುದೂ ತಿಳಿದುಬಂತು. ಮುಂದಿನ ಚಿತ್ರ ನೀವೇ ಊಹಿಸಬಲ್ಲಿರಿ. ಅವರೇನಾದರೂ ಮನಸ್ಸು ಬದಲಾಯಿಸಿ ನಿಧಿಯನ್ನು ತಮಗಾಗಿ ಕೇಳಿಕೊಂಡು ಬಂದರೆ ನಮ್ಮ ಮೂವರ ಸ್ಥಿತಿ ಏನಾದೀತು?"

"ಇವೆಲ್ಲ ಯೋಚನೆಗಳ ನಡುವೆ ನಾನೇ ಅವರನ್ನು ಮಾರುವೇಷದಿಂದ ಹಿಂಬಾಲಿಸಿ, ಅವರ ಬಗ್ಗೆ ತಿಳಿಯುವ ಕೆಲಸಕ್ಕೆ ಯೋಜನೆ ಹಾಕುತ್ತಿದ್ದೇನೆ. ಪತ್ತೇದಾರಿಕೆ ನನ್ನ ವಿಶೇಷತೆಯಲ್ಲ. ನಿಧಿಯನ್ನು ಉಳಿಸಿಕೊಳ್ಳುವತ್ತ ಒಂದು ಯತ್ನ. ಅವಳು ನನ್ನ ಜೀವನದ ಅವಿಭಾಜ್ಯ ಅಂಗವಾಗಿದ್ದಾಳೆ. ನಿಮ್ಮಿಬ್ಬರಿಗೆ ನನ್ನ ಕಡೆಗಿನ ಪ್ರೀತಿಯನ್ನೂ ಅಂಟನ್ನೂ ನಾನೀಗ ಅರ್ಥ ಮಾಡಿಕೊಳ್ಳಬಲ್ಲೆ. ಇದೇ ರೀತಿಯ ಪ್ರೀತಿ, ನಂಟು ಅವಳತ್ತಲೂ ನಿಮಗಿದೆ ಅನ್ನುವುದನ್ನೂ ಅರಿತಿದ್ದೇನೆ. ಅವರೇನಾದರೂ ನಿಧಿಯನ್ನು ಅವರಿಗೇ ಕೊಡಬೇಕೆಂದು ಕೇಳಬಹುದೆಂಬ ಸುಳಿವು ಸಿಕ್ಕರೆ ನಾವು ನಾಲ್ವರೂ ಭಾರತಕ್ಕೆ, ನಿಮ್ಮ ಹಳ್ಳಿ ಕೋಣಂದೂರಿಗೆ ಹೋಗಿಬಿಡುವಾ. ನನಗೆ ನಿಧಿ ಬೇಕು. ನಿಮಗೆ ನಾವಿಬ್ಬರೂ ಬೇಕು. ಅದಕ್ಕಿಂತ ಹೆಚ್ಚಿನದ್ದೇನಿಲ್ಲ. ಹೇಗಿದ್ದರೂ ಇದೇ ಡಿಸೆಂಬರಿಗೆ, ಅಪ್ಪ, ನೀವು ನಿವೃತ್ತರಾಗುತ್ತೀರಿ. ಇನ್ನುಳಿದ ಮೂರು ತಿಂಗಳ ರಜೆ ಪಡೆಯಿರಿ. ಎಲ್ಲರೂ ಹೋಗುವಾ."
***

"ಅಮ್ಮ, ಅಪ್ಪ, ನಾಳೆ ಜೆನ್ನಿ ಮತ್ತು ಆರ್ಯನನ್ನು ಭೇಟಿಯಾಗುವುದಿದೆ. ನನ್ನ ಹುಚ್ಚುತನ ಅಂದುಕೊಳ್ಳಿ. ನನ್ನ ಬುದ್ಧಿವಂತಿಕೆಗೆ, ಸ್ವಂತಿಕೆಗೆ ಮಸಿ ಹಿಡಿದಿದೆ. ಇವರಿಬ್ಬರನ್ನು ಭೇಟಿಯಾಗುತ್ತಿರುವುದೂ ಯಾವುದೋ ಹೆಸರಿನಿಂದ. ನಾನು ನಾನಾಗಿಲ್ಲ. ಆರ್ಯನನ್ನು ದೂರದಿಂದ ಕಂಡಾಗಲೂ ‘ಈತ ನಿಧಿಯ ಅಪ್ಪ’ ಅನ್ನಬಹುದಾಗಿದೆ. ಜೆನ್ನಿಯ ಎತ್ತರ, ಬಿಳುಪು, ಆರ್ಯನ ಕಣ್ಣು, ಮೂಗು ಪಡೆದು ಬಂದಿದ್ದಾಳೆ ನಮ್ಮ ನಿಧಿ. ಇವರಿಬ್ಬರ ಹಿಂದೆ ಗೂಢಚಾರಿಕೆ ಮಾಡಿ ಅವರ ಜೊತೆಗೂ ಏನೋ ಬಾಂಧವ್ಯ ಸೆಳೆಯುತ್ತಿದೆ. ಎಷ್ಟೆಂದರೂ ನಾಲ್ಕು ವರ್ಷ ಜೊತೆಗೇ ಕಲಿತವರು ನಾವು, ಆರ್ಯನ ಜೊತೆ ಇನ್ನೂ ಮೂರು ವರುಷ ಹೆಚ್ಚು. ಧಿಡೀರನೆ ಅವರ ಮುಂದೆ ನಿಂತುಬಿಡಲೇ ಅನ್ನಿಸಿದೆ. ಆಗುತ್ತಿಲ್ಲ. ನಾಳೆ ಭೇಟಿಯಾದಾಗ ಎಲ್ಲವನ್ನೂ ಹೇಳಿಬಿಡಬೇಕು. ಜೊತೆಗೇ ಯಾವುದೇ ಕಾರಣಕ್ಕೂ ನಿಧಿಯನ್ನು ಕೇಳಬೇಡಿ ಅನ್ನಬೇಕು. ಅವರಿಗೂ ನನ್ನೊಳಗೆ ಕಾಡುತ್ತಿರುವ ಗುಟ್ಟಿನ ಪರಿಚಯವಿಲ್ಲ ಅಂದುಕೊಂಡಿದ್ದೇನೆ. ಯಾವುದೇ ಉಪಾಯ ಸಾಗದಿದ್ದಲ್ಲಿ... ಏನು ಮಾಡಲಿ? ಪ್ರೌಢನಾಗಿ ಬಹುಶಃ ಮೊದಲ ಬಾರಿಗೆ ದೇವರ ನೆನಪಾಗುತ್ತಿದೆ. ದೇವರೇ, ಅಪ್ಪಾ, ಅಮ್ಮಾ... ನನ್ನನ್ನು ಹರಸಿ."
************ ************

ಇದು ಕಳೆದ ಬುಧವಾರ ರಾತ್ರೆ ಬರೆದದ್ದು. ಅದೇ ಮರುದಿನ ಆತ ಕಣ್ಮರೆಯಾದದ್ದು. ನನ್ನ ತಲೆ ಓಡಲಿಲ್ಲ. ಮೂಢನಾಗಿದ್ದೆ. ಆತನನ್ನು ಕಾಡುತ್ತಿದ್ದ ಭಯದ ಪರಿಚಯವಾಗಿತ್ತು. ವಾಣಿಗೆ ಪದೇ ಪದೇ ಬೀಳುತ್ತಿದ್ದ ಕನಸು ಅವನ ಭಯದಲ್ಲಿ ಗೂಡು ಕಟ್ಟಿತ್ತು. ಆದರೆ, ಅವನು ಕಾದಿರಿಸಿದ್ದ ಗುಟ್ಟು ಹೊರಬಿದ್ದಿರಲಿಲ್ಲ. ಆ ಗೋಪ್ಯಕ್ಕೂ ಈ ಕಣ್ಮರೆಗೂ ಸಂಬಂಧ ಇರಬಹುದೆ? ತೋಚಲಿಲ್ಲ.

ವಾಣಿ ಮತ್ತು ನಿಧಿ ಬಾಗಿಲತ್ತ ಬರುತ್ತಿರುವ ಸದ್ದು ಕೇಳಿಸಿ ನಮ್ಮ ಕೋಣೆಯೊಳಗೆ ಓಡಿದೆ, ಡೈರಿಯನ್ನು ಮೊದಲಿದ್ದ ಜಾಗದಲ್ಲೇ ಅಡಗಿಸಿದೆ. ಕಿಶೋರ ಪತ್ತೇದಾರಿಕೆ ಮಾಡಹೋಗಿ ಪತ್ತೇದಾರರಿಗೇ ಕೆಲಸ ಕೊಟ್ಟಿದ್ದ. ಇದರಲ್ಲಿ ನಾನು ಮಾಡಬಹುದಾದ್ದು ಏನು? ಸುಮ್ಮನೆ ಕಣ್-ಕಣ್ ಬಿಡುತ್ತಿದ್ದಾಗ ಅಮ್ಮ-ಮಗಳು ಕೋಣೆಯೊಳಗೇ ಬಂದರು. ಏನೋ ಹೇಳುವ ತಯಾರಿಯಲ್ಲಿದ್ದಾರೆಂದು ಅವರ ಮುಖಗಳು ತಿಳಿಸುತ್ತಿದ್ದವು. ವಾಣಿ ಮೊದಲು ಮಾತಾಡಿದಳು, "ನ್ಯೂಸ್ ಕೇಳಿದ್ರಾ?" ಇಲ್ಲವೆಂದು ತಲೆಯಾಡಿಸಿದೆ. ನಿಧಿ ಬಿಕ್ಕಲು ಮೊದಲಿಟ್ಟಳು, "ಕಾರಿನಲ್ಲಿ ರೇಡಿಯೋ ನ್ಯೂಸ್ ಕೇಳಿದೆವು..." ಅಂದಳು. ಯೋಚನೆ ಬೇಡವಾದ ದಿಕ್ಕಿಗೇ ಓಡಿತು. ಕೂಡಲೇ ಹೋಗಿ ಟಿ.ವಿ. ಹಾಕಿದೆ.

ಸ್ಥಳೀಯ ವಾರ್ತೆಗಳಲ್ಲಿ ನಮ್ಮೂರಿನ ಹೊರವಲಯದಲ್ಲಿ ಸುಮಾರು ಮೂವತ್ತರ ಹರೆಯದ ತರುಣನ ದೇಹವೊಂದು ಸಿಕ್ಕಿರುವ ಬಗ್ಗೆ ವಿವರಿಸುತ್ತಿದ್ದರು. ನನಗೇ ಕಣ್ಣು ಕತ್ತಲಿಟ್ಟಿತು. ವಾಣಿ, ನಿಧಿ ನನ್ನ ಮುಖ ನೋಡುತ್ತಿದ್ದರು. ಅವರಿಗಾಗಿ ಇಲ್ಲದ ಧೈರ್ಯ ತಂದುಕೊಂಡೆ. "ಪೊಲೀಸರಿಗೆ ಫೋನ್ ಮಾಡಿ ನೋಡೋಣ. ಕಿಶೋರ ಅಲ್ಲಿ ಹೋಗಿರಲಾರ. ಊರಿಗಿಂತ ಅಷ್ಟು ದೂರ, ಅಂಥಾ ನಿರ್ಜನ ಪ್ರದೇಶದಲ್ಲಿ ಅವನಿಗೆಂಥ ಕೆಲಸ? ಇದು ಅವನಲ್ಲ. ಇಬ್ಬರೂ ಅಳಬೇಡಿ, ಸುಮ್ಮನಿರಿ..." ಏನೇನೋ ಒದರುತ್ತಿದ್ದೆ. ನಮ್ಮ ಪ್ರದೇಶದ ಪೋಲಿಸ್ ಠಾಣೆಗೆ ಕರೆ ಮಾಡಿದೆ. ಅಲ್ಲಿರುವ ಯಾರಿಗೂ ನಿಖರವಾಗಿ ವಿಷಯ ತಿಳಿದಿರಲಿಲ್ಲ, ಅಥವಾ ತನಿಖೆಯ ಅಗತ್ಯದಿಂದಾಗಿ ವಿವರಗಳನ್ನು ಹೇಳುತ್ತಿರಲಿಲ್ಲ. ನಾನೇ ಅಲ್ಲಿಗೆ ಹೊರಟೆ. ವಾಣಿ ಮತ್ತು ನಿಧಿಯನ್ನು ತಡೆಯುವುದು ಕಷ್ಟವಾಗಿತ್ತು. ನಿಧಿ ಇನ್ನೂ ಬಾಲೆ, ಅಲ್ಲಿಗೆಲ್ಲ ಬರಲಾಗದು. ವಾಣಿಯನ್ನು ಒಪ್ಪಿಸಿ ಒಬ್ಬನೇ ಠಾಣೆಗೆ ಹೊರಟೆ.

ನಮ್ಮ ಮನೆಗೆ ಎರಡು ಬಾರಿ ಬಂದಿದ್ದ ಪೋಲಿಸ್ ಅಧಿಕಾರಿಯೇ ಮೊದಲು ಕಣ್ಣಿಗೆ ಬಿದ್ದ. ನನ್ನ ಕರೆಯ ಬಗ್ಗೆ ಅವನಿಗೆ ತಿಳಿದಿಲ್ಲವಾದರೂ ನಾನು ಬಂದ ಉದ್ದೇಶವನ್ನು ಅರ್ಥೈಸಿಕೊಂಡ. ತನ್ನ ಕಾರಿನಲ್ಲೇ ಶವಾಗಾರಕ್ಕೆ ಕರೆದೊಯ್ದ. ತಣ್ಣಗೆ, ಬಿಮ್ಮಗೆ ಕೊರೆಯುತ್ತಿದ್ದ ಶವಾಗಾರದ ಕಾರಿಡಾರಿನಲ್ಲಿ ನಮ್ಮಿಬ್ಬರ ಬೂಟುಗಳ ಸದ್ದು ನನ್ನ ಎದೆಬಡಿತವನ್ನು ಪ್ರತಿಧ್ವನಿಸಿದಂತೆ ಕೇಳಿತು. ಒಂದು ಬಾಗಿಲು ದಾಟಿ ಒಳ ಹೊಕ್ಕಾಗ, ಛಳಿ ಇಮ್ಮಡಿಸಿತು. ಸಾಲು-ಸಾಲು ಎತ್ತರದ ಸ್ಟೀಲ್ ಕವಾಟುಗಳಲ್ಲಿ ಸಣ್ಣ-ಸಣ್ಣ ಖಾನೆಗಳು. ಎಲ್ಲದರ ಹಿಡಿಕೆಗಳಲ್ಲಿ ಕ್ರಮ ಸಂಖ್ಯೆಗಳು. ನಮ್ಮಿಬ್ಬರ ಹೊರತಾಗಿ ಬೇರೆ ಯಾವ ಉಸಿರೂ ಇಲ್ಲದ ಶೈತ್ಯಾಗಾರ. ನನ್ನ ಉಸಿರೇ ಎದೆಯಿಂದ ಹೊರಗೆ ಹಾರಿ ಈ ಖಾನೆಗಳ ದೇಹಗಳಲ್ಲಿ ಸೇರಲು ಯತ್ನಿಸುತ್ತಿದೆ ಅನಿಸಿತು. ಅಷ್ಟರಲ್ಲಿ ಆ ಅಧಿಕಾರಿ ಒಂದು ಖಾನೆಯ ಹಿಡಿಕೆ ಹಿಡಿದು ಎಳೆದ. ಬಿಳಿ ಬಟ್ಟೆ ಮುಚ್ಚಿದ್ದ ದೇಹ ನನ್ನ ಕಣ್ಣೆದುರು ಬರಲಾರಂಭಿಸಿತು. ಎದೆಯ ಮಟ್ಟಕ್ಕೆ ಎಳೆದು, ಮುಖದ ಮೇಲಿನ ವಸ್ತ್ರ ಸರಿಸಲು ಕೈಯಿಟ್ಟ. ನೋಡಲಾಗದೆ ಕಣ್ಣು ಮುಚ್ಚಿಕೊಂಡೆ. ನನ್ನೊಳಗಿನ ನಂಬಿಕೆ, ದೇವರು, ಪ್ರಜ್ಞೆ, ಬುದ್ಧಿ, ವಿವೇಕ... ಎಲ್ಲವೂ ಆ ನಿರ್ವಾತದೊಳಗೆ ಲೀನವಾದಂತೆ ಅನಿಸಿತು. "ಮಿಸ್ಟರ್ ಕೇಶಾವ್, ಈಸ್ ದಿಸ್ ಯುವರ್ ಸನ್?" ಕಣ್ಣು ತೆರೆಯಲೊಲ್ಲದು. ಉಸಿರು ಆಡಲೊಲ್ಲದು. ಹೇಗೆ ನೋಡಲಿ ಈ ಶವವನ್ನು? ನಾನೇ ಶವದಂತಾಗಿದ್ದೆ. ಯಾಕೆ ನನ್ನ ಹೆತ್ತವರು ಕೇಶವನೆಂಬ ನಾಮಕರಣ ಮಾಡಿದರೋ...!

ಕ್ಷಣಗಳಲ್ಲಿ ವಿವೇಕ ಮರಳಿತು. ನಾನೀಗ ಈ ಮುಖ ನೋಡದೆ ಹಿಂದಿರುಗಿದರೆ ವಾಣಿ, ನಿಧಿಯವರ ಮುಖವನ್ನೂ ನೋಡಲಾರೆ ಅನ್ನುವ ಪ್ರಜ್ಞೆ ಮೂಡಿತು. ನಿಧಾನವಾಗಿ ಕಣ್ತೆರೆದು ಎದುರಿನ ಪೇಲವ ನಿರ್ಜೀವದತ್ತ ದೃಷ್ಟಿ ನೆಟ್ಟೆ. ಚೀರಬೇಕೆನಿಸಿತು. ಹೊರಗೆ ಓಡಬೇಕೆನಿಸಿತು. ಮನೆಯವರೆಗೂ ಓಡಿ ಓಡಿ ವಾಣಿಯನ್ನೂ ನಿಧಿಯನ್ನೂ ತಬ್ಬಿಕೊಂಡು ಮನಸಾರೆ ಅತ್ತು ಹಗುರಾಗಬೇಕೆನಿಸಿತು. ಹಾಗೇನೂ ಮಾಡದೆ, ಬಂದ ಬಾಗಿಲತ್ತ ಹೊರಳಿದೆ. ಗದ್ಗದ ಗಂಟಲನ್ನು ಗುರು-ಗುರು ಮಾಡಿ, ಮೆಲ್ಲಗೆ, "ನೋ ಸರ್. ಹೀ ಈಸ್ ನಾಟ್ ಮೈ ಸನ್. ಥಾಂಕ್ಯೂ ಫಾರ್ ಯುವರ್ ಹೆಲ್ಪ್" ಅಂದೆ.

ಮನೆಗೆ ಬಂದು ಪೆಚ್ಚು ನಗು ತೂರಿಸಿ ಅದು ಕಿಶೋರನಲ್ಲವೆಂದು ಸಾರಿದೆ. ನನ್ನೊಳಗೆ ದೈತ್ಯನೊಬ್ಬ ಹೊಕ್ಕಿದ್ದ. ಅದೇ ರಾತ್ರೆ ವಾಣಿಗೆ ತಿಳಿಯದಂತೆ ಕಿಶೋರನ ಡೈರಿಯನ್ನು ಚಿಂದಿ ಚಿಂದಿ ಮಾಡಿದೆ, ಒಂದು ಪುಟದ ಹೊರತಾಗಿ. ನಾವೆಲ್ಲರೂ ನಮ್ಮ ಹಳ್ಳಿ ಕೋಣಂದೂರಿಗೆ ಮರಳುವ ಅವನಾಸೆಯನ್ನು ತೋಡಿಕೊಂಡಿದ್ದ ಪುಟವನ್ನು ನನ್ನ ಪರ್ಸಿನ ಒಳಗೆ ಜೋಪಾನವಾಗಿ ಮಡಚಿಟ್ಟುಕೊಂಡೆ. ವಾಣಿ ಮತ್ತು ನಿಧಿ ಇಬ್ಬರಿಗೂ ಅದರ ಬಗ್ಗೆ ಮನವರಿಕೆ ಮಾಡಿಸಿ ಹಳ್ಳಿಗೇ ಹಿಂದಿರುಗಿದರೆ ಹೇಗೆ ಅನ್ನುವ ಯೋಚನೆ ಕಾಡಲಾರಂಭಿಸಿತು. ಆದರೆ, ನಿಧಿಯನ್ನು ಅಲ್ಲಿಗೆ ಒಗ್ಗಿಸುವುದು ಕಷ್ಟ ಎಂಬ ಅರಿವೂ ಇದೆ. ಮುಂದೇನು ಅನ್ನುವ ಪ್ರಶ್ನಾರ್ಥಕದೊಡನೆ ಕಾದಾಡುತ್ತಾ ದಿನಗಳು ಕಳೆಯುತ್ತಿವೆ.
************ ************
(ಮುಂದಿನ ಭಾಗ.....)

ಸೀಳುನಾಯಿ-- ಭಾಗ ೦೨

(....ಹಿಂದಿನ ಭಾಗ....)
ಡಿಸೆಂಬರ್ ಛಳಿಯೊಡನೆ ನನ್ನ ವೃತ್ತಿ ಜೀವನದ ಕೊನೆಯ ದಿನವೂ ಸೇರಿಹೋಗಿದೆ. ಸುತ್ತ ಹಬ್ಬಿದ ಮೋಡಮಬ್ಬಿನ ಛಳಿಯಲ್ಲಿ ನನ್ನದೇ ಮನಸ್ಸಿನ ಚಿತ್ರ ಮೂಡುತ್ತಿದೆ. ಹೊಸ ವರುಷದ ಮೊದಲ ದಿನ. ನಿರುತ್ಸಾಹವನ್ನು ಮೂರೂವರೆ ತಿಂಗಳಿಂದ ಹಾಸಿಹೊದೆಸಿ ಮಲಗಿಸಿದ್ದ ನಮ್ಮ ಮನೆಗೆ ಬೆಳಗಿನ ಏಳು ಘಂಟೆಗೆ ಒಂದು ಟೆಲಿಫೋನ್ ಕರೆ ಬಂದಿದೆ. ಅತ್ತಲಿಂದ ಹೆಣ್ಣು ದನಿ: "ಹಲ್ಲೋ ಮಿಸ್ಟರ್ ಕೇಶಾವ್, ಅಯಾಮ್ ಜೆನ್ನಿ. ಯುವರ್ ಸನ್ ಕಿಶೋರ್‍ಸ್ ಓಲ್ಡ್ ಫ್ರೆಂಡ್. ಹೀ ಈಸ್ ವಿಥ್ ಅಸ್. ಕ್ಯಾನ್ ಯೂ ಪ್ಲೀಸ್ ಕಂ ಟು ಅವರ್ ಹೌಸ್?" ಅವಳು ಕೊಟ್ಟ ವಿಳಾಸ ಬರೆದುಕೊಳ್ಳಲು ತಡಬಡಾಯಿಸುತ್ತಿದ್ದ ನನ್ನ ಕೈಗೆ ನಿಧಿ ಕಾಗದ ಪೆನ್ಸಿಲ್ ಕೊಡುತ್ತಾಳೆ. ನಾನು ಯಾವುದೋ ಲೋಕದಲ್ಲಿ ಕಳೆದುಹೋಗಿದ್ದೇನೆ.

ಒಂದೂವರೆ ಗಂಟೆಯ ಬಳಿಕ, ಕಾರು ನಮ್ಮ ನಾಲ್ವರನ್ನೂ ಹೊತ್ತು ಫೋಲ್ಸಮ್‍ನಿಂದ ರೋಸ್‍ವಿಲ್‍ನ ನಮ್ಮ ಮನೆಯ ದಾರಿಯಲ್ಲಿದೆ. ಏನೇನೋ ಮಾತುಗಳ ನಂತರ, ವಾಣಿ ಮತ್ತು ಕಿಶೋರ್, ಇದೇ ಜೂನ್‍ನಲ್ಲಿ ನಾವೆಲ್ಲರೂ ಕೋಣಂದೂರಿಗೆ ಹೋಗುವ ಯೋಜನೆಯಲ್ಲಿದ್ದರೆ ನಿಧಿ ಕೇಕೆ ಹಾಕುತ್ತಿದ್ದಾಳೆ. ಅವಳ ಡ್ಯಾಡ್ ಜೊತೆ ಅವಳು ಪ್ರಪಂಚದ ಯಾವ ಮೂಲೆಯಲ್ಲೂ ಇರಬಲ್ಲಳು ಅನ್ನುವುದು ನನಗೆ ಮನವರಿಕೆಯಾಗುತ್ತಿದ್ದಂತೆ ಕಳೆದ ಮೂರೂವರೆ ಕರಾಳ ತಿಂಗಳುಗಳು ನಮ್ಮ ಜೀವನದ ಕ್ಯಾಲೆಂಡರಿನಿಂದ ಮೆಲ್ಲಗೆ ಮರೆಯಾಗುತ್ತವೆ.
************ ************

ಕಿಶೋರ ಮನೆಗೆ ಬಂದದ್ದು ನಮ್ಮ ಪಾಲಿಗೆ ಪವಾಡದಂತೆ ಅನಿಸಿದೆ. ವಾಣಿ ಅವನನ್ನು ಏನೇನು ಕೇಳಿದಳೋ, ಗೊತ್ತಿಲ್ಲ. ನನ್ನ ಪ್ರಶ್ನೆಗಳು ಗಂಟಲಲ್ಲೇ ಒಣಗುತ್ತಿದ್ದವು. ಹೊಸ ವರ್ಷದ ಹುಮ್ಮಸ್ಸು ಕಳೆದು ಸಂಕ್ರಾಂತಿಯ ಸಡಗರ ತುಂಬಿತು. ವಾಣಿ ಹುಗ್ಗಿಯ ತಯಾರಿ ನಡೆಸಿದಳು. ದ್ರಾಕ್ಷಿ, ಗೋಡಂಬಿಗಳ ಖಜಾನೆ ಬರಿದಾಗಿದ್ದು ಗಮನಿಸಿ ಅಂಗಡಿಗೆ ಹೊರಟಳು. ನಿಧಿ ಅವಳ ಬಾಲ. ಮನೆಯಲ್ಲಿ ಅಪ್ಪ-ಮಗ ಇಬ್ಬರೇ. ಕೇಳಿಯೇ ಬಿಡಬೇಕೆಂದು ಪದೇ ಪದೇ ಅವನ ಮುಖ ನೋಡಿದೆ. ನಾಲಗೆ ಮಾತ್ರ ತಳ ಹಿಡಿದಿತ್ತು. ಹಲವಾರು ಕ್ಷಣಗಳ ಬಳಿಕ ಗಂಟಲು ಸರಿ ಮಾಡಿದ ಕಿಶೋರ. ದೃಷ್ಟಿಗಳು ಢಿಕ್ಕಿಯಾದವು, ಹೊರಳಿ ಎದುರಿನ ಗೋಡೆಗಳಲ್ಲಿ ಬೆಳಕು ಕಂಡವು. ಮತ್ತೆ ಒಂದಿಷ್ಟು ಮೌನ; ಅದೆಷ್ಟು ಭಾರ!
"ಅಪ್ಪ, ನನ್ನ ಡೈರಿ ಎಲ್ಲುಂಟು?" ಧ್ವನಿ ಅವನದ್ದಲ್ಲವೇ ಅಲ್ಲ. ನನ್ನ ಒಡಕು ಸ್ವರದ ಗುರು-ಗುರು ಅವನ ಕಿವಿ ಮುಟ್ಟಲಿಲ್ಲ. ಎರಡು ಯುಗ... ಮತ್ತೆ ಅದೇ ಪ್ರಶ್ನೆ. ಈಗ ನನ್ನ ಬಾಯಿ ತೆರೆಯಿತು. "ಚಿಂದಿ ಆಗಿದೆ."
"ಯಾ... ಯಾರು? ಯಾವಾಗ...?"
"ನಾ... ನಾನೇ! ನೀನು... ನೀನು ಬಾರದೆ ಹೋದ ವಾರದ ಮೇಲೆ... ವಾಣಿಗೆ ಗೊತ್ತಿಲ್ಲ.... ನಿಧಿಗೂ...."
"ಯಾಕೆ?"
"ಅದರಲ್ಲಿ ನೀನು ಜೆನ್ನಿ ಮತ್ತು ಆರ್ಯನನ್ನು ಪತ್ತೆ ಮಾಡಿದ್ದು, ಅವರ ಬಗ್ಗೆ ಬರ್ದದ್ದು ಇತ್ತಲ್ಲ, ಅದಕ್ಕೆ. ಪೊಲೀಸರ ಕೈಗೆ ಸಿಕ್ಕಿದ್ರೆ ನಮಗೂ ನಿಧಿಗೂ ಕಷ್ಟ ಅಂತ... ಹಾಗೆ ಮಾಡಿದೆ.... ಆದ್ರೆ.... ನೀನದನ್ನು ನಮ್ಮ ಹಾಸಿಗೆಯಡಿ ಯಾಕಿಟ್ಟದ್ದು?"
"ಆರ್ಯನ ಮನೆಗೆ ಹೊರಡುವ ಮೊದಲು, ಅದನ್ನು ನಿಮ್ಮ ಹಾಸಿಗೆಯಡಿಯಲ್ಲಿಟ್ಟೆ. ನನಗೇನಾದ್ರೂ ಆದ್ರೆ, ಪೋಲೀಸರ ಕೈಗೆ ಸಿಗುವ ಬದಲು ನಿಮ್ಮ ಕೈಗೇ ಸಿಗಲಿ ಅಂತ..."
"ನಿನಗೇನಾಗಿತ್ತು? ನೀನು... ನೀನು ಅಷ್ಟು ದಿನ ಎಲ್ಲಿದ್ದಿ? ಏನ್ ಮಾಡ್ತಿದ್ದಿ?" ಒಳಗಿನ ಗುಮ್ಮ ಹೊರಬಿದ್ದಿತ್ತು.
"ಅಲ್ಲೇ... ಆರ್ಯನ ಮನೆಯಲ್ಲೇ."
"ಅಲ್ಲೇ ಇದ್ಯಾ? ಯಾಕೆ? ಮತ್ಯಾಕೆ ಫೋನ್ ಕೂಡಾ ಮಾಡ್ಲಿಲ್ಲ? ನಮ್ಮನ್ನು ಏನೂಂತ ತಿಳ್ಕೊಂಡಿದ್ದೀ? ಅಥವಾ ನಮ್ಮ ನೆನಪೂ ಬರ್ಲಿಲ್ವಾ? ಎಂಥಾ ಹುಡುಗನೋ ನೀನು? ನಾವಿಲ್ಲಿ ಎಷ್ಟು ನೊಂದುಕೊಂಡೆವು, ಗೊತ್ತುಂಟಾ? ಏನ್... ಏನ್ ಯೋಚನೆ ಮಾಡಿದ್ದಿ ನೀನು?..."
"ಅಪ್ಪಾ... ಹೋಲ್ಡ್ ಆನ್! ಸ್ವಲ್ಪ ನಿಧಾನ! ನಾನು ಅಲ್ಲಿದ್ದದ್ದು ನಿಜ, ಯಾವ ಸ್ಥಿತಿಯಲ್ಲಿದ್ದೆ ಅಂತ ಕೇಳ್ತೀರ?"
"ಯಾಕೆ? ಏನಾಗಿತ್ತು ನಿನಗೆ?"
"ನನಗೆ ಏನೂ ಆಗಿರಲಿಲ್ಲ. ಆದ್ರೆ, ಮನೆಗೆ ಬರುವ ಸ್ಥಿತಿಯಲ್ಲಿ ಇರಲಿಲ್ಲ, ಅಷ್ಟೇ"
"ಯಾಕೆ? ನಿನಗೇನಾದ್ರೂ ಹೊಡೆದಿದ್ರಾ? ಹೆದರಿಸಿದ್ರಾ? ಒಮ್ಮೆ ಫೋನ್ ಮಾಡಿದ್ದಿದ್ರೆ ಪೊಲೀಸ್ ಕರ್ಕೊಂಡೇ ಬರ್ತಿದ್ನಲ್ಲ"
"ಅಪ್ಪಾ, ಪ್ಲೀಸ್! ಸ್ವಲ್ಪ ರಿಲ್ಯಾಕ್ಸ್ ಮಾಡಿ. ನೋಡಿ, ಒಂದೆರಡು ದೊಡ್ಡ ಉಸಿರು ತಗೊಳ್ಳಿ, ನಿಧಾನಕ್ಕೆ...."
"ಏನು ಉಸಿರು ತಗೊಳ್ಳೋದು? ಆ ಮೂರೂವರೆ ತಿಂಗಳಲ್ಲಿ ನಮ್ಮೆಲ್ಲರ ಉಸಿರೂ ಗಂಟಲಲ್ಲೇ ಸಿಕ್ಕಿಕೊಂಡಿತ್ತು, ಗೊತ್ತುಂಟಾ ನಿನಗೆ? ಉಸಿರು ತಗೊಳ್ಬೇಕಂತೆ, ಉಸಿರು!"
"ಅಪ್ಪಾ, ಎಲ್ಲವನ್ನೂ ಹೇಳ್ತೇನೆ. ನಿಮಗೇ ಹೇಳ್ತೇನೆ. ಆದ್ರೆ, ನೀವು ಹೀಗೆ ತಡೀತಾ ಇದ್ರೆ ಹೇಳಲಿಕ್ಕಾಗುದಿಲ್ಲ...."
"ಓ, ನಾನು ತಡೀತಾ ಇದ್ದೇನಾ? ನೀನೊಬ್ಬ ದೊಡ್ಡ ಮನುಷ್ಯ, ನೀನ್ ಮಾತಾಡ್ತ ಇದ್ರೆ ನಾವ್ಯಾರೂ ನಡುವೆ ಮಾತಾಡುವ ಹಾಗಿಲ್ವ?"
"ಮೈ ಗಾಡ್! ಅಪ್ಪ, ಒಂದೈದು ನಿಮಿಷ ಬಿಟ್ಟು ನಿಮ್ಮ ಹತ್ರ ಮಾತಾಡ್ತೇನೆ. ಬರ್ತೇನೆ"
ತನ್ನ ರೂಮಿಗೆ ಹೋದವನ ಬೆನ್ನ ದಿಕ್ಕನ್ನೇ ನೋಡುತ್ತಾ ಕೂತೆ. ಕಳೆದ ಎರಡು ನಿಮಿಷಗಳ ಸಂಭಾಷಣೆ ತಲೆಯೊಳಗೆ ಸುಳಿಯಿತು. ನಾನು ಸಿಟ್ಟಿನ ಕೈಗೆ ಬುದ್ಧಿ ಕೊಟ್ಟದ್ದು ಬೆಳಕಿನಷ್ಟು ನಿಚ್ಚಳವಾಗಿ ಕಂಡಿತು. ಮಗನನ್ನು ಕರೆದು ಕ್ಷಮೆ ಕೋರುವ ಮನಸ್ಸಾದರೂ ಏಳಲಿಲ್ಲ. ಹೇಗೂ ಇನ್ನೈದು ನಿಮಿಷಗಳಲ್ಲಿ ಬಂದೇ ಬರುವವ ಅವನು. ನಾನೇ ಸ್ವಲ್ಪ ನಿರಾಳವಾದರೆ ಸರಿ. ಸೋಫಾದ ಬೆನ್ನಿಗೊರಗಿ ಕಣ್ಣು ಮುಚ್ಚಿದೆ. ಒಪ್ಪಿಕೊಂಡಂತೆ ಬಂದ ಕಿಶೋರ. ನಾನು ಶಾಂತವಾಗಿದ್ದೂ ಉದ್ವಿಗ್ನಗೊಂಡಿದ್ದೆ. ಏನನ್ನು ಕೇಳಲಿದ್ದೇನೋ ಅನ್ನುವ ಆತಂಕ.
"ಅಪ್ಪಾ, ನಿರಾಳವಾಗಿದ್ದೀರ ಈಗ? ನನ್ನ ಕಥೆ ಹೇಳಬಹುದಾ?"
"ಹೇಳಪ್ಪ...." ಅಂದೆ ನಾನು ಶಾಂತವಾಗಿಯೇ. ಅವನಿಗೂ ಅಷ್ಟೇ ಬೇಕಿತ್ತು, ಸಾಕಿತ್ತು. ಶುರುಮಾಡಿದ....
************ ************

ಆ ದಿನ, ಗುರುವಾರ, ಆರ್ಯ, ಜೆನ್ನಿ ಮನೆಗೆ ನಾನು ಹೋದಾಗ ಅವರಿನ್ನೂ ಶಾಲೆಗೆ ಹೊರಟಿರಲಿಲ್ಲ, ಹೊರಡುವ ತಯಾರಿಯಲ್ಲಿದ್ದ ಹಾಗೆಯೂ ಕಾಣಲಿಲ್ಲ. ನನ್ನನ್ನು ನೋಡಿದ ಕೂಡಲೇ, ಆರ್ಯ ತಬ್ಬಿಕೊಂಡು ಕುಣಿದಾಡಿದ, ಅತ್ತುಬಿಟ್ಟ. ಜೆನ್ನಿಗೂ ಖುಷಿಯಾಗಿತ್ತು. ನಾವು ರೋಸ್‍ವಿಲ್‍ನಲ್ಲೇ ಇರಬಹುದು ಅನ್ನುವ ಕಲ್ಪನೆಯೂ ಅವರಿಗೆ ಬಂದಿರಲಿಲ್ಲವಂತೆ. ನಮ್ಮೆಲ್ಲರ ಬಗ್ಗೆ ವಿಚಾರಿಸಿಕೊಂಡರು. ನನ್ನ ಪರ್ಸಿನಲ್ಲಿರುವ ನಿಧಿಯ ಫೋಟೋ ನೋಡಿ ಖುಷಿಪಟ್ಟರು. ಅವರ ಜೊತೆ ನಾನೂ ಮತ್ತೆ ತಿಂಡಿ ತಿನ್ನಲು ಒತ್ತಾಯಿಸಿ ತಿನ್ನಿಸಿದರು. ಅವರ ಪ್ರೀತಿಗೆ ನಾನು ಅಚ್ಚರಿ ಪಟ್ಟುಕೊಂಡೆ. ಅವರನ್ನು ಸಂಶಯಿಸಿ ಅವರ ಹಿಂದೆ ಪತ್ತೇದಾರಿಕೆ ನಡೆಸಿದ್ದನ್ನ ಹೇಳಿಕೊಂಡೆ. ಇಬ್ಬರೂ ಹೊಟ್ಟೆತುಂಬಾ ನಕ್ಕರು. ನನ್ನನ್ನೂ ನಗಿಸಿದರು. ಕಾಲೇಜು ಮುಗಿಸುವ ಹೊತ್ತಿಗೆ ಇಬ್ಬರಿಗೂ ತಂತಮ್ಮ ಆಸೆ-ಆಕಾಂಕ್ಷೆಗಳು, ಹವ್ಯಾಸಗಳು ಒಂದೇ ರೀತಿ ಇರುವುದು ಮನವರಿಕೆಯಾಗಿತ್ತಂತೆ. ಹಾಗಾಗಿ ಮದುವೆಯಾಗುವ ನಿರ್ಧಾರ ಮಾಡಿದರಂತೆ. ಇವನ್ನೆಲ್ಲ ಆಸಕ್ತಿಯಿಂದ ತಿಳಿಸಿದರು. ಬೇರೇನೋ ಕೆಲಸದ ಪ್ರಯುಕ್ತ ಆವತ್ತು ಶಾಲೆಗೆ ರಜೆ ಹಾಕಿದ್ದನ್ನೂ ತಿಳಿಸುವಷ್ಟರಲ್ಲಿ ಅವರಿಬ್ಬರ ಮುಖವೂ ಸಪ್ಪೆಗಟ್ಟಿದ್ದು ನನ್ನ ಗಮನಕ್ಕೆ ಬಂತು.

"ಬೇಡ, ಬಿಡು." ಅನ್ನುತ್ತಾ ಆರ್ಯ ಮೇಜಿನ ಬದಿಯಿಂದ ಎದ್ದಾಗ ಜೆನ್ನಿಯ ಕಣ್ಣುಗಳು ತುಂಬಿದ್ದವು. ನನ್ನ ಎದೆ ಹೊಡೆದುಕೊಳ್ಳುತ್ತಿತ್ತು. ಅವರು ನಿಧಿ ಬಗ್ಗೆ ಪ್ರಸ್ತಾಪಿಸುತ್ತಾರೆಂದೇ ಭಾವಿಸಿಕೊಂಡಿದ್ದೆ. "ಪ್ಲೀಸ್, ಆರ್ಯ, ಜೆನ್ನಿ, ಪ್ಲೀಸ್... ನಿಧಿಯನ್ನು ಮಾತ್ರ ಕೇಳಬೇಡಿ. ಬೇರೇನಾದರೂ ಕೇಳಿ, ಕೊಡ್ತೇನೆ; ಅವಳನ್ನು ಮಾತ್ರ ಕೇಳಬೇಡಿ..." ಅಂದೇಬಿಟ್ಟೆ. ಮುಖ-ಮುಖ ನೋಡಿಕೊಂಡ ಇಬ್ಬರೂ ನಕ್ಕರು."ಅದಲ್ಲ ನಮ್ಮ ಸಮಸ್ಯೆ. ನಿಧಿ ನಿನ್ನ ಮಗಳೇ. ಅವಳನ್ನೇನೂ ಕೇಳುವ ಯೋಚನೆಯಿಲ್ಲ. ನಮ್ಮ ಚಿಂತೆಯೇ ಬೇರೆಯಿದೆ" ಅಂದಳು ಜೆನ್ನಿ. ನನಗೆ ಹೊರೆಯಿಳಿದ ಸಮಾಧಾನದ ಜೊತೆ ಗೆಳೆಯರಿಗೆ ಸಹಾಯ ಮಾಡುವ ಹುರುಪು ಹುಟ್ಟಿತು. ಕಿಟಕಿಯ ಬದಿ ನಿಂತಿದ್ದ ಆರ್ಯನ ಹತ್ತಿರ ಹೋಗಿ ನಿಂತೆ. "ನನ್ನಿಂದ ಏನಾದರೂ ಮಾಡಲು ಸಾಧ್ಯವಿದ್ದರೆ ತಿಳಿಸು, ಮಾಡುತ್ತೇನೆ" ಅಂದೆ. ಆತ ಸುಮ್ಮನೇ ತಲೆಯಾಡಿಸಿದ. ನಮ್ಮ ಕಡೆ ನೋಡುತ್ತಿದ್ದ ಜೆನ್ನಿಯ ಕಣ್ಣುಗಳು ಅರಳಿದವು. ಬೆಳಕು ಮಿನುಗಿದ್ದು ನಮ್ಮಿಬ್ಬರಿಗೂ ಗೋಚರಿಸಿತು."ಏನು ಮಹಾ ಪ್ಲಾನ್ ನಡೀತಿದೆ ನಿನ್ನ ತಲೆಯೊಳಗೆ?" ಆರ್ಯ ಛೇಡಿಸುವ ದನಿಯಲ್ಲಿ ಕೇಳಿದ. ಅಷ್ಟೇ ಸಾಕಾಗಿತ್ತು ಅವಳಿಗೆ. ತಮ್ಮ ಕೋಣೆಯಿಂದ ಫೋಟೋ ಒಂದನ್ನು ತಂದು ಆರ್ಯನ ಮುಂದೆ ಹಿಡಿದಳು. "ಏನಿದರಲ್ಲಿ ವಿಶೇಷ?" ಅವನ ಪ್ರಶ್ನೆಗೆ ಅವಳ ದೃಷ್ಟಿ ನನ್ನ ಕಡೆಗೆ ಹರಿಯಿತು. ಈಗ ಅವನ ಕಣ್ಣುಗಳೂ ಮಿಂಚುತ್ತಿದ್ದವು. ನನಗೇನೋ ವಿಚಿತ್ರ ಅನಿಸತೊಡಗಿತು. ಹತ್ತಿರ ಹೋಗಿ ನೋಡಿದೆ. ನನ್ನದೇ ಫೋಟೋ!? "ಇದೆಲ್ಲಿಂದ ಬಂತು ನಿನ್ನ ಹತ್ರ?" ಕೇಳದಿರಲಾಗಲಿಲ್ಲ. ನಿಧಾನವಾಗಿ ಕುರ್ಚಿಗಳಲ್ಲಿ ಕೂತರು. ನಾನೂ ಒಂದು ಕುರ್ಚಿ ಆರಿಸಿಕೊಂಡೆ. ಒಂದೆರಡು ಕ್ಷಣಗಳ ಮೌನದ ಬಳಿಕ ಆರ್ಯ ಮತ್ತು ಜೆನ್ನಿ ಜೊತೆ ಜೊತೆಯಾಗಿ ಹೇಳಲು ಶುರುಮಾಡಿದರು...
************ ************

"ಇದು ನಿನ್ನ ಫೋಟೋ ಅಲ್ಲ, ಆರ್ಯಂದು. ನಾವು ಕಾಲೇಜಿನ ಕೊನೆ ವರ್ಷದಲ್ಲಿದ್ದಾಗ ತೆಗೆದದ್ದು. ನಿನಗೀಗ ಇರುವ ಹಾಗೇ ದಟ್ಟನೆ ಮೀಸೆ, ಫ್ರೆಂಚ್ ಗಡ್ಡ ಆಗ ಅವನಿಗಿತ್ತು. ನೀನೀಗ ಅವನ ಹಾಗೇ ಇದ್ದೀ..."
"ಸುಮ್ನೆ ಸುತ್ತಿ ಬಳಸಿ ಮಾತಾಡುದು ನನಗಿಷ್ಟ ಇಲ್ಲ, ನೇರವಾಗಿ ವಿಷಯ ಹೇಳ್ತೇನೆ, ಕೇಳು... ಆಗ, ಫೀನಿಕ್ಸ್ ಕಾಲೇಜ್ ಕ್ಯಾಂಪಸ್ಸಲ್ಲಿ ಒಬ್ಳು ಗಂಡುಬೀರಿ, ಷೆರೀನ್, ನನ್ನ ಮೇಲೆ ಕಣ್ಣಿಟ್ಟಿದ್ದಳು. ಹೇಗಾದ್ರೂ ನನ್ನನ್ನು ವಶಪಡಿಸಿಕೊಳ್ಳಬೇಕು ಅಂತ ಅವಳ ಪ್ರಯತ್ನ. ಅದಕ್ಕೆ ನಾನು ಒಳಗಾಗಿರಲಿಲ್ಲ. ಜೆನ್ನಿ ಬಗ್ಗೆ ಏನೆಲ್ಲ ಅಪಪ್ರಚಾರ ಮಾಡಿದ್ಲು. ಅದನ್ನೂ ನಾವಿಬ್ಬರೂ ಲೆಕ್ಕಿಸಿರಲಿಲ್ಲ. ಕೊನೆಗೊಂದು ದಿನ, ಕಾಲೇಜು ಮುಗಿದ ವಾರದಲ್ಲಿ, ತಾನು ಗರ್ಭಿಣಿ, ನಾನು ಆ ಮಗುವಿನ ಅಪ್ಪ ಅಂತಲೂ ಗೋಳಾಡುತ್ತಾ ನಮ್ಮ ಅಪಾರ್ಟ್‍ಮೆಂಟಿಗೆ ಬಂದಳು. ನಾವಿಬ್ಬರೂ ಹರಟೆ ಹೊಡೀತಾ ಮನೆ ಖಾಲಿ ಮಾಡ್ತಾ ಇದ್ದೆವು. ಜೆನ್ನಿ ಅವಳ ಮಾತನ್ನು ಏನೇನೂ ನಂಬಿರಲಿಲ್ಲ. ಆದ್ರೂ ನನಗೆ ಗಾಬರಿಯಾಗಿತ್ತು. ಹೇಗೇ ಹೇಳಿದರೂ ಒಪ್ಪುವ ಸ್ಥಿತಿಯಲ್ಲಿ ಅವಳಿರಲಿಲ್ಲ. ನಮಗೂ ತಡೆಯಲಾಗದೆ, ಹೋಗು ಕೋರ್ಟಿಗೆ ಅಂದೆವು. ಆಗ ಸುಮ್ಮನಿದ್ದವಳು, ಈಗ ವಾರದ ಹಿಂದೆ, ಅವಳ ಊರು ಡೇಟನ್‍ನಿಂದ ಕೋರ್ಟ್ ನೋಟೀಸ್ ಕಳಿಸಿದ್ದಾಳೆ. ಅವಳನ್ನು ನಂಬಿಸಿ ಮೋಸ ಮಾಡಿದ್ದೇನೆ, ಮಗುವಿನ ಜವಾಬ್ದಾರಿ ನಾನು ಹೊರಬೇಕು ಅಂತೆಲ್ಲ ಹೇಳಿದ್ದಾಳೆ. ಡಿ.ಎನ್.ಎ. ಪರೀಕ್ಷೆಗೆ ನನ್ನದೇನೂ ತಕರಾರಿಲ್ಲ; ಆದ್ರೆ ಅವಳು, ‘ಮಗುವಿಗೆ ಸೂಜಿ ಚುಚ್ಚೋದಕ್ಕೂ ಬಿಡೋದಿಲ್ಲ, ಅದಕ್ಕೆ ತಾನು ತಯಾರಿಲ್ಲ’ ಅಂತೆಲ್ಲ ಹಾರಾಡ್ತಾಳೆ. ಕಳೆದ ವಾರ ಎರಡು ಬಾರಿ ಅವಳ ಲಾಯರ್ ಹತ್ರ ಮಾತಾಡಿದ್ದಾಗಿದೆ. ಪಟ್ಟು ಹಿಡಿದು ನನ್ನನು ಅವಳ ಕಡೆ ಎಳಿಯೋದಕ್ಕೇ ಮಾಡಿರೋ ತಂತ್ರ ಇದು ಅಂತ ನಮಗನಿಸಿದೆ. ಹೊರಬರುವ ದಾರಿ ಮಾತ್ರ ನಮಗೆ ಕಾಣುತ್ತಿಲ್ಲ. ಇವತ್ತು ನಮಗೊಬ್ಬ ಲಾಯರನ್ನು ಹುಡುಕಿ, ಅವರ ಹತ್ರ ಹೋಗಬೇಕು ಅಂತ ರಜೆ ಹಾಕಿದ್ದೇವೆ..."

"ಇದೆಲ್ಲ ಆಗಿ ಎಷ್ಟು ಸಮಯ ಆಗಿದೆ? ಗ್ರ್ಯಾಡ್-ಕಾಲೇಜಿನ ನಂತ್ರ ಅಂದ್ರೆ ಸುಮಾರು ಎರಡು ವರ್ಷದ ಹಿಂದೆ?"
"ಹೌದು, ಎರಡು ವರ್ಷ. ಈಗ ಮಗುವಿಗೆ ಒಂದೂವರೆ ವರ್ಷ ಅಂದಿದ್ದಾಳೆ."
"ಈ ಎರಡು ವರ್ಷಗಳಲ್ಲಿ ನೀವಿಬ್ಬರೂ ಅವಳನ್ನು ಸಂಪರ್ಕಿಸಿಲ್ಲ, ಅಥವಾ ಅವಳೂ ನಿಮ್ಮನ್ನ ಸಂಪರ್ಕಿಸಿಲ್ಲ. ಆದರೂ ಅವಳಿಗೆ ನಿಮ್ಮ ಇಲ್ಲಿಯ ವಿಳಾಸ ಹೇಗೆ ಗೊತ್ತು?"
"ಕಾಲೇಜ್ ಅಲ್ಯುಮ್ನಿ ಪಟ್ಟಿ. ಎಲ್ಲವೂ ಆನ್-ಲೈನ್. ಗೋಪ್ಯತೆ ಎಲ್ಲಿ?" ಜೆನ್ನಿಯ ಸ್ವರ ನಡುಗುತ್ತಿತ್ತು.
"ಹ್ಮ್... ಈಗ ನನ್ನಿಂದ ನಿಮಗೆ ಹೇಗೆ ಸಹಾಯ ಬೇಕಾಗಿದೆ? ನಾನು ಏನು ಮಾಡಬಹುದು? ಜೆನ್ನಿ, ಯಾಕೆ ಆ ಫೋಟೋ ತಂದದ್ದು?"
"ನಿನಗೆ ಬೇಕಾದ ವಿವರಗಳನ್ನೆಲ್ಲ ನಾವಿಬ್ಬರೂ ತಿಳಿಸುತ್ತೇವೆ. ನೀನು ಮತ್ತು ಜೆನ್ನಿ, ಅಲ್ಲಿಗೆ ಹೋಗಿ ಈ ಕೇಸ್ ಮುಗಿಸಿಕೊಂಡು ಬರಬೇಕು."
"ನೀನೇ ಯಾಕೆ ಹೋಗಬಾರದು? ಹೇಗೂ ನಿಮ್ಮಿಬ್ಬರಿಗೆ ನಿನ್ನ ಮೇಲೆ ನಂಬಿಕೆಯುಂಟು. ನಿನಗೇನು ಕಷ್ಟ?"
"ಇಷ್ಟೆಲ್ಲ ಹುನ್ನಾರ ಮಾಡಿದವಳು ಹೇಗಾದ್ರೂ ನನ್ನ ಡಿ.ಎನ್.ಎ. ಕೂಡಾ ಸಂಪಾದಿಸಬಹುದು. ಡೇಟನ್ ಅವಳದ್ದೇ ಊರು. ಅವಳ ಸ್ನೇಹಿತರೇ ಎಲ್ಲ ಕಡೆ ಇದ್ದಾರು. ಅವಳ ಅಪ್ಪನೇ ಲಾಯರ್. ಅವರಿಗೆ ಅಲ್ಲಿ ಎಲ್ಲರ ಪರಿಚಯವೂ ಇರಬಹುದು. ಅಲ್ಲಿಯ ಡಾಕ್ಟರ್, ನರ್ಸ್, ಎಲ್ಲರೂ ಅವರಿಗೆ ಗೊತ್ತಿರುವವರೇ ಇರುತ್ತಾರೆ. ಅವರಿಗೆ ಬೇಕಾದ ಹಾಗೆ ಕೆಲಸ ನಡೆಸಿಕೊಳ್ಳಬಹುದು. ಅದಕ್ಕೇ, ನನ್ನ ಬದಲು ನೀನೇ ಹೋದ್ರೆ, ಜೆನ್ನಿ ಜೊತೆ. ಆಗ, ಅವಳಿಗೆ ಸೋಲು ಖಂಡಿತ. ಅವಳಿಗೆ ಬೇಕಾದ ನನ್ನ ಡಿ.ಎನ್.ಎ. ಸಿಗುದಿಲ್ಲ, ಅಲ್ವಾ?"
"ಹಾಗಲ್ಲ, ಆರ್ಯ. ಮೋಸ ಮಾಡಲೇಬೇಕಂದ್ರೆ ಅವಳು ಹೇಗಾದ್ರೂ ಮೋಸ ಮಾಡಬಹುದಲ್ವಾ? ನಾನು ನೀನೇ ಆಗಿ, ನಿನ್ನ ಹೆಸರಲ್ಲಿ ಹೋಗುತ್ತಿರುವಾಗ, ನನ್ನ ಡಿ.ಎನ್.ಎ.ಯನ್ನೇ ಮಗುವಿಗೆ ಹೊಂದುತ್ತದೆ ಅಂತ ಹೇಳಿಸಬಹುದಲ್ವಾ?"
"ಜೆನ್ನಿ, ನಮಗೆ ಎರಡು ನಿಮಿಷ ಏಕಾಂತ ಬೇಕು. ಸ್ವಲ್ಪ ಹೊರಗೆ ಹೋಗ್ತೀಯಾ?" ಆರ್ಯ ಕೇಳಿದ. ಅವಳು ತಮಾಷೆಯಾಗಿ ಹುಬ್ಬು ಹಾರಿಸುತ್ತಾ ಕತ್ತು ಕೊಂಕಿಸುತ್ತಾ ಮೇಲಿನ ಕೋಣೆಗೆ ಹೋದಳು. ಆರ್ಯ ನನ್ನ ಪಕ್ಕದ ಕುರ್ಚಿಯಲ್ಲಿ ಕೂತು, ನನ್ನ ಮಂಡಿಯ ಮೇಲೆ ಕೈಯಿಟ್ಟ.
"ಏನ್ ನಡೀತಾ ಉಂಟು ಆರ್ಯ? ನನ್ನಿಂದ ನಿನಗೆ ಎಂಥಾ ಸಹಾಯ ಬೇಕಾಗಿದೆ, ಬಿಡಿಸಿ ಹೇಳು."
"ಕಿಶ್, ನಿನ್ನ ಸ್ನೇಹಿತ ನಾನು. ಆರನೇ ತರಗತಿಯಿಂದಲೂ ಜೊತೆಗೇ ಓದಿದ್ದೇವೆ. ನಿನ್ನ ಬಗ್ಗೆ ನನಗೆ ತುಂಬಾ ಗೊತ್ತುಂಟು. ಈ ವಿಷಯದಲ್ಲಿ ನೀನು ಮಾಡಬಹುದಾದ ಸಹಾಯ ಬರೀ ಡಿ.ಎನ್.ಎ. ಬದಲಾಯಿಸುವ ಉದ್ದೇಶದ್ದಲ್ಲ. ನಿನ್ನ ಒಳಗಿನ ಗುಟ್ಟು ನನಗ್ಗೊತ್ತುಂಟು. ಅದನ್ನು ಉಪಯೋಗಿಸಿಕೊಳ್ತಿದ್ದೇನೆ ಅಂತಲ್ಲ. ಆದ್ರೆ, ನೀನು ಮಾತ್ರ ನನ್ನನ್ನು ಆ ರಾಕ್ಷಸಿಯ ಕೈಯಿಂದ ಉಳಿಸಬಹುದು. ಮಾಡ್ತೀಯ?"
ಗೆಳೆಯನ ಈ ಮೆಲುದನಿಯ ಅಂಗಲಾಚುವಿಕೆ ನನ್ನೊಳಗೆ ಸಂಕೋಚದ ಜೊತೆಗೇ ಬಾಂಧವ್ಯವನ್ನೂ ಎಬ್ಬಿಸಿತು.
"ನನ್ನ ತೊಂದರೆಯ ಅರಿವಿದ್ದೇ ನಿಧಿಯನ್ನು ನನಗೆ ಕೊಟ್ಟಿಯಾ ನೀನು? ಜೆನ್ನಿಗೆ ಈ ವಿಷಯ ಗೊತ್ತುಂಟಾ?" ನನ್ನ ಪ್ರಶ್ನೆಗೆ ಸುಮ್ಮನೇ ಹೌದೆಂದು ತಲೆಹಾಕಿದ. ಇಬ್ಬರೂ ಕೆಲವಾರು ಕ್ಷಣ ಮೌನವಾಗಿಯೇ ಇದ್ದೆವು. "ನಾನು ಮನೆಗೊಮ್ಮೆ ಫೋನ್ ಮಾಡಬೇಕು" ಅಂದಾಗ ಆರ್ಯ ಮತ್ತೂ ಗಂಭೀರನಾದ.
"ಬೇಡ ಕಿಶ್. ನೀನು ಆಗ ಹೇಳಿದ ವಿವರಗಳ ಪ್ರಕಾರ, ಮನೆಯಲ್ಲಿ ಹೇಳದೆ ಬಂದಿದ್ದೀ ಅಂತ ನನಗೆ ಗೊತ್ತಾಯ್ತು. ಈಗ ಹೇಳಿದ್ರೆ, ನಿನ್ನ ಅಪ್ಪ-ಅಮ್ಮ ಮತ್ತು ನಿಧಿ, ಎಲ್ಲರಿಗೂ ಇದನ್ನು ವಿವರಿಸಿ ಹೊರಡಬೇಕಾಗುತ್ತದೆ. ಇದು ತುಂಬಾ ರಹಸ್ಯವಾಗಿ ನಡೆಯಬೇಕಾದ ವ್ಯವಹಾರ. ಕಾನೂನು ರೀತ್ಯಾ ನಾವು ಮಾಡ್ತಿರುವುದು ಅಪರಾಧ, ಗೊತ್ತುಂಟಲ್ಲ ನಿನಗೆ. ಇದರಲ್ಲಿ ನಾವು ಮೂವರಲ್ಲದೆ ಬೇರೆ ಯಾರೂ ಶಾಮೀಲಾಗುವುದು ನಮಗಿಷ್ಟವಿಲ್ಲ. ಇದಕ್ಕೆ ಒಪ್ಪಿಗೆಯಿದ್ದರೆ ಮಾತ್ರ ಮುಂದುವರಿಯುವ. ಇಲ್ಲದಿದ್ದರೆ ನಾವಿಬ್ಬರೇ ಇದನ್ನ ನಿಭಾಯಿಸ್ತೇವೆ. ನೀನು ನಿನ್ನ ಪಾಡಿಗೆ ನಡೆದುಬಿಡು, ನಿನಗೆ ಇದೊಂದು ನಿಬಂಧನೆ ಹಾಕಬೇಕಾಗಿದೆ. ಕ್ಷಮಿಸು."
ಎರಡು ಕ್ಷಣ ಯೋಚಿಸಿದಾಗ ಅವನ ನಿಬಂಧನೆಯ ಒಳತಿರುಳು ನನ್ನ ಅರಿವಿಗೆ ಬಂತು. "ಹಾಗಾದ್ರೆ, ಈ ಕೇಸ್ ಮುಗಿಯುವತನಕ ನೀನು ಶಾಲೆಗೂ ಹೋಗುವ ಹಾಗಿಲ್ಲ. ಏನು ಮಾಡ್ತೀ?"
"ಗೃಹಬಂಧಿ ಥರಾ ಇರ್ತೇನೆ. ಏನು ಮಹಾ? ಒಂದು ವಾರದಲ್ಲಿ ಮುಗೀಬಹುದು. ಮತ್ತೆ ನಿನ್ನ ದಾರಿ ನಿನಗೆ, ನಮ್ಮ ದಾರಿ ನಮಗೆ. ಸ್ನೇಹ ಮಾತ್ರ ಮೂವರಿಗೂ." ಅಂದ ಅರೆನಗುತ್ತಾ. ಹೌದೆನ್ನಿಸಿತು.
"ಒಂದು ವಾರದಲ್ಲಿ ಮುಗಿಯುವುದಾದ್ರೆ ನಾನು ಸಿದ್ಧ. ಆದ್ರೂ... ಮನೆಗೊಂದು ಫೋನ್ ಮಾಡಿ ನಾನು ಸದ್ಯ ಮನೆಗೆ ಬರ್ಲಿಕ್ಕಾಗುದಿಲ್ಲ ಅಂತಲಾದರೂ ಹೇಳ್ಬೇಕಾಗ್ತದೆ. ಇಲ್ಲಾಂದ್ರೆ, ಅಪ್ಪ, ಅಮ್ಮ, ನಿಧಿ ಗಾಬರಿಯಾಗ್ತಾರೆ..."
"ನೀನು ಬರ್ಲಿಕ್ಕಾಗುದಿಲ್ಲ ಅಂದ್ರೆ- ಯಾಕೆ, ಏನು, ಎತ್ತ- ಪ್ರಶ್ನೆಗಳನ್ನು ಕೇಳ್ತಾರೆ, ಉತ್ತರಿಸದೆ ಇರ್ತೀಯಾ? ಸುಳ್ಳು ಹೇಳ್ತೀಯಾ? ಏನು ಮಾಡ್ತಿ?"
ಆರ್ಯನ ಮೊನಚುಕಣ್ಣುಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಸ್ನೇಹ ಮತ್ತು ಸಂಸಾರ- ಇವೆರಡರಲ್ಲಿ ಈ ಕ್ಷಣ ಒಂದನ್ನು ತಾತ್ಕಾಲಿಕವಾಗಿ ಆರಿಸಿಕೊಳ್ಳಬೇಕಾಗಿತ್ತು. ಬರುವ ಪ್ರಶ್ನೆಗಳಿಗೆ ಉತ್ತರ ಕೊಡದೇ ಇರುವುದಾಗಲೀ, ಸುಳ್ಳು ಹೇಳುವುದಾಗಲೀ ನನ್ನಿಂದಾಗದ ಕೆಲಸಗಳು. ಈ ಯೋಚನೆಗಳಲ್ಲಿ ಮುಳುಗಿದ್ದಾಗ ಅವನೇ, "ಬೇಡ, ಬಿಡು. ನಿನಗ್ಯಾಕೆ ತೊಂದರೆ? ನಾವೇ ಹೇಗಾದ್ರೂ ಪರಿಹರಿಸಿಕೊಳ್ತೇವೆ" ಅಂದ. ಅದ್ಯಾವಾಗಲೋ ಕೆಳಗೆ ಬಂದು ಆರ್ಯನ ಹಿಂದೆ ನಿಂತಿದ್ದ ಜೆನ್ನಿಯ ಕಣ್ಣುಗಳು ತುಂಬಿ ನಿಂತಿದ್ದವು. ನನಗೆ ನಿಧಿಯ ನೆನಪಾಯ್ತು. ಆ ಪುಟ್ಟ ಕೂಸನ್ನು ನನ್ನ ಮಡಿಲಿಗೆ ಹಾಕಿದ್ದ ಇವರನ್ನು ಈಗ ಅವರ ಪಾಡಿಗೆ ಬಿಟ್ಟುಬಿಡಲು ಸಾಧ್ಯವಾಗಲಿಲ್ಲ. ಒಪ್ಪಿಕೊಂಡೆ. ಅದೇ ಸಂಜೆ ಆರ್ಯ ಮತ್ತು ಜೆನ್ನಿ ವಾರಕ್ಕಾಗುವಷ್ಟು ಸಾಮಾನುಗಳನ್ನು ಹೊತ್ತು ತಂದು ಆರ್ಯನ ಗೃಹಬಂಧನಕ್ಕೆ ತಯಾರಾದರು. ಅವರಿಗೆ ಒಪ್ಪಿಗೆಯಾದ ಒಬ್ಬ ಲಾಯರನ್ನು ಫೋನಿನಲ್ಲೇ ಮಾತಾಡಿಸಿದರು. ಅವರನ್ನೂ ಮೂರನೇ ದಿನ ಡೇಟನ್‍ನಲ್ಲಿ ಭೇಟಿಯಾಗಲು ತಿಳಿಸಿ ವಿಶ್ರಮಿಸಿದೆವು. ನಾನು ಅವರ ಮನೆಗೆ ಬಸ್ಸಿನಲ್ಲಿ ಹೋಗಿದ್ದರಿಂದ ನನ್ನ ಕಾರನ್ನು ಮನೆ ತಲುಪಿಸುವ ಕೆಲಸವಿರಲಿಲ್ಲ.
************ ************

ಮರುದಿನವೇ ಜೆನ್ನಿ ಮತ್ತು ನಾನು ಡೇಟನ್ ಕಡೆ ಹೊರಟೆವು. ನೆವಾಡದ ಕಾರ್ಸನ್ ಸಿಟಿಯಿಂದ ಹೈವೇ ಐವತ್ತರಲ್ಲಿ ಹತ್ತು ಮೈಲಿ ಪೂರ್ವಕ್ಕೆ ಇದ್ದ ಸಣ್ಣ ಊರು. ದಾರಿಯುದ್ದಕ್ಕೂ ಜೆನ್ನಿ ಹಲವಾರು ವಿವರಗಳನ್ನು ನನ್ನ ತಲೆಗೆ ತುಂಬುತ್ತಿದ್ದಳು. ಯಾರಿಗೂ ಸಂಶಯ ಬರಬಾರದೆಂದು ಹೋಟೆಲಿನಲ್ಲಿ ಒಂದೇ ಕೋಣೆಯನ್ನು ಹಿಡಿದಿದ್ದೆವು. ರಾತ್ರೆ ನಾನು ಸ್ಲೀಪಿಂಗ್ ಬ್ಯಾಗಿನೊಳಗೆ ತೂರಿಕೊಂಡೆ. ಮರುದಿನ ಸುಮ್ಮನೆ ಊರಿನ ಬೀದಿಗಳಲ್ಲಿ ಸುತ್ತಾಡಿದೆವು. ಸುತ್ತಮುತ್ತ ಒಂದಿಷ್ಟು ಪರಿಚಯ ಮಾಡಿಕೊಂಡೆವು. ರೆಸ್ಟಾರೆಂಟುಗಳಲ್ಲಿ ತಿನ್ನದೆ ಟೇಕ್-ಔಟ್ ಊಟಗಳನ್ನು ಪಡೆದೆವು. ಅದರ ಮಾರನೇ ದಿನ ನಮ್ಮ ಲಾಯರ್ ಮಿಸ್ಟರ್ ಸ್ಟೀವನ್ಸನ್ ಜೊತೆ ಭೇಟಿಯಾಗಿ, ಅವರೊಂದಿಗೆ ಎಲ್ಲ ವಿವರಗಳನ್ನು ಹಂಚಿಕೊಳ್ಳಲಾಯಿತು. ಈತನ ಜೊತೆ ಮೊದಲು ಭೇಟಿಯಾಗದೇ ಇದ್ದದ್ದು ಅನುಕೂಲವೇ ಆಗಿತ್ತು. ಅವನಿಗೂ ನಾನು ಆರ್ಯ ಅಲ್ಲವೆಂದು ಸಂಶಯ ಬರಲಿಲ್ಲ. ನಾವಿಬ್ಬರೂ ಪ್ರೇಮಿಗಳಂತೆ ಕೈ-ಕೈ ಹಿಡಿದು ಸುತ್ತಾಡುತ್ತಿದ್ದೆವು. ಆದಷ್ಟೂ ಎಲ್ಲರ ದೃಷ್ಟಿಗೆ ನಾನು ಆರ್ಯನಂತೆ ತೋರಿಸಿಕೊಳ್ಳುತ್ತಿದ್ದೆ. ಅವನದ್ದೇ ಡ್ರೈವರ್ಸ್ ಲೈಸೆನ್ಸ್ ಕೂಡಾ ಪಡೆದು ಬಂದಿದ್ದೆ. ಕ್ರೆಡಿಟ್ ಕಾರ್ಡ್ ಕೊಡಬೇಕಾದಲ್ಲಿ ಮಾತ್ರ ಜೆನ್ನಿ ವ್ಯವಹರಿಸುತ್ತಿದ್ದಳು. ಆದರೂ ಅವನ ಸಹಿಯನ್ನೂ ಅಭ್ಯಾಸ ಮಾಡಿಕೊಂಡಿದ್ದೆ, ಜೆನ್ನಿಯಿಂದ ಶಹಬ್ಬಾಸ್-ಗಿರಿ ಪಡೆದಿದ್ದೆ.

ಇದಾಗಿ ಮಾರನೇ ದಿನ ಕೋರ್ಟ್-ಕಟ್ಟೆ ಹತ್ತಿದೆವು. ಅಲ್ಲಿಗೆ ತನ್ನ ಅಪ್ಪ ಮತ್ತು ಮಗುವಿನ ಜೊತೆ ಬಂದಿದ್ದಳು ಷೆರೀನ್. ಕಂಡಕೂಡಲೇ ಗುರುತು ಹತ್ತಿತು. ಅವಳೂ ನಮ್ಮತ್ತ ನೋಡಿ ಕತ್ತು ಕೊಂಕಿಸಿ ನಕ್ಕಳು. ನಮ್ಮ ಕಡೆ ಮಾಟವಾಗಿ ನಡೆದು ಬಂದು, ನನ್ನ ಮುಂದೆ ಬಾಗಿ ನಿಂತು, "ಹಾಯ್ ಹ್ಯಾಂಡ್ಸಮ್, ಮದುವೆ ಆದಮೇಲೆ ಸ್ವಲ್ಪ ದಪ್ಪಗಾಗಿದ್ದೀಯಲ್ವ?" ಅಂದವಳು ಜೆನ್ನಿ ಕಡೆ ತಿರುಗಿ, "ಏಯ್ ಬ್ಯೂಟೀಕ್ವೀನ್, ಅವನಿಗೆ ಸರಿಯಾಗಿ ವ್ಯಾಯಾಮ ಮಾಡಿಸುತ್ತಿಲ್ಲವಾ ನೀನು?" ಅಂತ ಕಣ್ಣು ಹೊಡೆದು, ವಕ್ರವಾಗಿ ತುಟಿತೆರೆದಳು. ಅವಳ ಮಾತಿನ, ನಡಿಗೆಯ ಶೈಲಿಗೆ ನನಗೇ ಕಿರಿಕಿರಿಯಾಗುತ್ತಿತ್ತು. ಅವಳ ಅಪ್ಪನೂ ಹತ್ತಿರ ಬಂದು ನಮ್ಮಿಬ್ಬರ ಮತ್ತು ನಮ್ಮ ಲಾಯರ ಕೈಕುಲುಕಿದ. ಅವನ ನಡತೆಯಲ್ಲಿ ಅದೇನೋ ಒಂದು ರೀತಿಯ ಅಹಂಕಾರ, "ನಾನ್ಯಾರೂಂತ ನಿಮಗೆ ತಿಳಿಯುತ್ತೆ" ಅನ್ನುವಂಥಾ ಪೊಗರು ಕಾಣಿಸಿತು.

ಸ್ವಲ್ಪ ಹೊತ್ತಿಗೆ ಬಂದ ಜಡ್ಜ್, ಯಾವುದೇ ಹಿನ್ನೆಲೆ, ಪೀಠಿಕೆಯಿಲ್ಲದೆ ಕೇಸ್ ಹಿಯರಿಂಗ್ ಶುರುಮಾಡಿಕೊಂಡರು. ಜ್ಯೂರಿಗಳಿಲ್ಲದ ಕಾರಣ ಕೇಸ್ ಬೇಗ ಮುಗಿಯಬಹುದೆಂಬ ಆಸೆ ನಮ್ಮಿಬ್ಬರಿಗೂ ಹುಟ್ಟಿತು. ಎರಡೂ ಕಡೆಯ ವಾದಗಳನ್ನು ಕೇಳಿದ ನ್ಯಾಯಾಧೀಶರ ಆದೇಶದ ಮೇಲೆ, ಮರುದಿನ ನನ್ನನ್ನು ವೈದ್ಯರ ಹತ್ತಿರ ಪರೀಕ್ಷೆಗಾಗಿ ಕರೆದೊಯ್ಯಲಾಯಿತು. ಅಂಥ ಕಹಿ ಕ್ಷಣಗಳನ್ನು ನಾನು ಇದುವರೆಗೆ ಅನುಭವಿಸಿರಲಿಲ್ಲ ಅನ್ನಬಹುದು. ಆದರೂ ಅದನ್ನು ಸ್ನೇಹಕ್ಕಾಗಿ ಸಹಿಸಿಕೊಂಡೆ. ಮಾರನೇ ದಿನವೇ ಕೋರ್ಟಿನಲ್ಲಿ ಜಡ್ಜ್ ನಮ್ಮ ಪರವಾಗಿ ತೀರ್ಪಿತ್ತರು. "ಆರ್ಯ ಅನ್ನುವ ಹೆಸರಿನ ಈ ವ್ಯಕ್ತಿ ತಂದೆಯಾಗಲು ಸಾಧ್ಯವಿಲ್ಲವಾದ್ದರಿಂದ ಷೆರೀನ್ ಅವನ ಮೇಲೆ ಸುಳ್ಳು ಆಪಾದನೆ ಮಾಡಿದ್ದಾಳೆ. ಆರ್ಯನನ್ನು ಈ ಆಪಾದನೆಯಿಂದ ಮುಕ್ತಗೊಳಿಸಲಾಗಿದೆ." ನಮ್ಮ ಲಾಯರ್, ಅಲ್ಲೇ ಷೆರೀನ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹಾರಾಡತೊಡಗಿದ. ನಮಗೆ ಅದ್ಯಾವುದೂ ಬೇಕಾಗಿಲ್ಲವೆಂದು ಅವರನ್ನು ಒಪ್ಪಿಸಿ ನಾವಿಬ್ಬರೂ ಹಿಂದಿರುಗಿ ರೋಸ್‍ವಿಲ್ ಕಡೆ ಹೊರಟೆವು.
ಕಾರ್ಸನ್ ಸಿಟಿ ದಾಟಿ, ಟಾಹೋ ಕಡೆ ಇಳಿಯುತ್ತಿದ್ದೆವು, ಅಷ್ಟರಲ್ಲಿ ನಮ್ಮ ಕಾರಿಗೆ ಎದುರುಗಡೆಯಿಂದ ಬಂದ ಟ್ರಕ್ಕೊಂದು ಹೊಡೆಯಿತು. ನಾನೇ ಡ್ರೈವ್ ಮಾಡುತ್ತಿದ್ದೆ. ಹೇಗೋ ನಮ್ಮ ಅದೃಷ್ಟ, ಕಾರಿನ ಹಿಂದಿನ ಸೀಟಿನ ಭಾಗಕ್ಕೆ ಟ್ರಕ್ಕಿನ ಎಡತುದಿ ಹೊಡೆದಿತ್ತು. ನನ್ನ ಎದೆಗೂಡಿನ ಎಲುಬುಗಳೆರಡು ಮುರಿದಿದ್ದವು. ಎಡಭುಜಕ್ಕೆ ಏಟಾಗಿತ್ತು. ಜೆನ್ನಿಗೆ ದೊಡ್ಡ ಶಾಕ್ ಆಗಿತ್ತು. ಅವಳಿಗೂ ಕುತ್ತಿಗೆ ಭುಜ ನೋಯುತ್ತಿದ್ದವು. ತೀರಾ ಪೆಚ್ಚಾಗಿದ್ದಳು. ಎರಡು ದಿನ ನಾನು ಟಾಹೋ ಆಸ್ಪತ್ರೆಯಲ್ಲಿ ಇರಬೇಕಾಗಿತ್ತು. ಇನ್ನೊಂದು ಕೇಸಿನಲ್ಲಿ ನಾನು ‘ಆರ್ಯ’ ಆಗಿ ಸಿಕ್ಕಿಬಿದ್ದಿದ್ದೆ. ಆ ಟ್ರಕ್ಕಿನವನ ಕೇಸು ಮುಗಿಯುವತನಕ ನಾನೆಲ್ಲೂ ಹೋಗುವ ಹಾಗಿರಲಿಲ್ಲ. ಎರಡು ದಿನಗಳ ಮೇಲೆ, ಆರ್ಯನೇ ಬಂದು ನಮ್ಮನ್ನು ಫೋಲ್ಸಮ್‍ಗೆ ಕರೆತಂದ. ಅವರ ಆ ಕಾರು ರಿಪೇರಿಗೂ ಬಾರದಂತೆ ನುಗ್ಗಾಗಿತ್ತು. ಇಲ್ಲಿಗೆ ಬಂದಮೇಲೆ, ಅವರ ಮನೆಯಲ್ಲೇ ಇದ್ದೆ. ಆರು ವಾರಗಳ ವಿಶ್ರಾಂತಿ. ಆಮೇಲಿನ ಎಂಟು ವಾರ, ವಾರಕ್ಕೊಂದು ದಿನದಂತೆ ಫಿಸಿಯೋಥೆರಪಿಗೆ ಹೋಗಬೇಕಾಗಿತ್ತು. ಅದೂ ಆರ್ಯನಾಗಿ.
ಈ ವಿಪರೀತದಿಂದ ಆರ್ಯನೂ ಮನೆಯಲ್ಲೇ ಸಿಕ್ಕಿಬಿದ್ದಿದ್ದ. ಇಬ್ಬರು ಸ್ನೇಹಿತರೂ ಬೇಕಾದಷ್ಟು ಹರಟೆಹೊಡೆದೆವು. ಆಗಲೇ ಆರ್ಯ ನನ್ನ ತೊಂದರೆಯ ಬಗ್ಗೆಯೂ ಕೆದಕತೊಡಗಿದ. ಅದನ್ನು ಪರಿಹರಿಸಿಕೊಳ್ಳುವ ದಾರಿಯೂ ಇದೆಯೆಂದ. ನನಗೇನೂ ಬೇಡವಾಗಿತ್ತು. ಇದ್ದ ಹಾಗೇ ಇದ್ದುಬಿಡುವ ನಿರಾಳತನದಲ್ಲಿ ಸುಖವಿತ್ತು. ಸರಿಮಾಡಲು ಹೋಗಿ ಇನ್ನೇನೋ ಆಗಬಹುದೆಂಬ ಭಯವಿತ್ತು. ಹೆತ್ತವರಾದ ನಿಮಗೂ ಅದನ್ನು ಹೇಳಿಲ್ಲದ ಸಂಕೋಚವಿತ್ತು. ಅದನ್ನೆಲ್ಲ ಅವನ ಸಕಾರಣ ವಾದಗಳಲ್ಲಿ ಬದಿಗೊತ್ತರಿಸಿ, ಒಮ್ಮೆ ಪ್ರಯತ್ನಿಸುವಂತೆ ನನ್ನನ್ನು ಒಪ್ಪಿಸಿದ. ಹಾಗೇನೇ, ಅವನ ಒತ್ತಾಯದ ಮೇರೆಗೆ ಅವನದೇ ವೈದ್ಯರ ಮುಂದಾಳತ್ವದಲ್ಲಿ, ವೈದ್ಯಕೀಯವಾಗಿ ಹೆಚ್ಚಿನ ತೊಡಕಿಲ್ಲದ ಆ ತೊಂದರೆಯನ್ನೂ ಪರಿಹರಿಸಿಕೊಂಡದ್ದಾಯ್ತು. ಅದರ ಮರುಪರೀಕ್ಷೆಯೂ ನಡೆದು ಎಲ್ಲವೂ ಸರಿಹೋಗಿದೆಯೆಂದು ವರದಿಯೂ ಬಂತು. ಇವೆಲ್ಲದರ ನಡುವೆ, ನಾನು ಇಲ್ಲಿ ಮನೆಗೆ ಬರುವ ಹಿಂದಿನ ವಾರವಷ್ಟೇ ಟ್ರಕ್ಕಿನ ಕೇಸ್ ಕೂಡಾ ನಮ್ಮ ಪರವಾಗಿಯೇ ಆದದ್ದು ಇನ್ನೂ ಒಂದು ಖುಷಿಯ ಸಂಗತಿಯಾಯಿತು.

ಅಪ್ಪ, ಆ ವಾರದ ನನ್ನ ಫಿಸಿಯೋಥೆರಪಿ ಹಿಂದಿನ ಸಂಜೆಯಷ್ಟೇ ಮುಗಿಸಿದ್ದೆ. ಮರುದಿನ ಬೆಳಗ್ಗೆ ನಾನು ಏಳುವ ಹೊತ್ತಿಗಾಗಲೇ ಜೆನ್ನಿ ನಿಮಗೆ ಫೋನ್ ಮಾಡಿದ್ದಳು. ನನಗದು ಗೊತ್ತಿರಲಿಲ್ಲ. ನಾನು ತಿಂಡಿ ಮುಗಿಸಿ ನಿಮಗೆ ಫೋನ್ ಮಾಡಲಿಕ್ಕೆ ಹೊರಟಾಗಲೇ ನೀವೆಲ್ಲ ಆ ಮನೆಯೊಳಗೆ ಬಂದಿರಿ. ಇನ್ನು ಮುಂದಿನದ್ದು ನಿಮಗೇ ಗೊತ್ತುಂಟಲ್ಲ. ಆದ್ರೆ, ಈ ವಿಷಯ ನಮ್ಮಿಬ್ಬರಿಂದ ಆಚೆ ಹೋಗಕೂಡದು. ಆರ್ಯ ಮತ್ತು ಜೆನ್ನಿಗೆ ನಾನು ಮಾತು ಕೊಟ್ಟಿದ್ದೆ. ನಿಮ್ಮ ಸಲುವಾಗಿ ಆ ಮಾತಿಗೆ ತಪ್ಪಿದ್ದೇನೆ. ನಮ್ಮ ಮೂವರನ್ನೂ ಕ್ರಿಮಿನಲ್‍ಗಳನ್ನಾಗಿ ಮಾಡಬೇಡಿ, ಅಪ್ಪಾ...
************ ************

ಮಾತು ಮುಗಿಸಿ ಎದುರಿನ ಗೋಡೆ ನೋಡುತ್ತಾ ಕೂತವನ ಕಣ್ಣುಗಳಲ್ಲಿ ನೋವಿನ ಧಾರೆ ಇಳಿಯುತ್ತಿತ್ತು. ಸೋಫಾದ ಬದಿಯ ಟೇಬಲ್ ಮೇಲಿನಿಂದ ಟಿಶ್ಯೂ ತೆಗೆದು ಅವನ ಕೈಗಿತ್ತೆ. ಸ್ನೇಹಕ್ಕಾಗಿ ಈ ಹುಡುಗ ಮಾಡಿದ ತ್ಯಾಗದ ಎದುರು ನನ್ನ ದುಗುಡ ದೊಡ್ಡದಾಗಿ ಕಾಣಲಿಲ್ಲ. ತಂದೆಯಾಗಿ ನನಗೆ ನೋವಾಗಿದ್ದು ನಿಜ. ತಾಯಿಯಾಗಿ ವಾಣಿ ಮತ್ತು ಮಗಳಾಗಿ ನಿಧಿಯರಿಗಿದ್ದ ನೋವು ನನ್ನನ್ನು ಕಾಡಿದ್ದು ನಿಜ. ಈಗ ಅವೆಲ್ಲ ಗೌಣವಾಗತೊಡಗಿದವು. ಮೆಲ್ಲಗೆ, "ನಿನ್ನ ಡೈರಿ ಹರಿದದ್ದಕ್ಕೆ ನನ್ನನ್ನು ಕ್ಷಮಿಸ್ತೀಯಾ ಮಗನೇ?" ಅಂದೆ. ನನ್ನ ಕಡೆ ತಿರುಗಿದವನ ಕಣ್ಣಲ್ಲಿ ವರುಷಗಳ ಹಿಂದಿನ ತುಂಟ ಇಣುಕುತ್ತಿದ್ದ. ನನಗಷ್ಟೇ ಸಾಕಾಗಿತ್ತು. ಪರ್ಸಿನೊಳಗೆ ತೂರಿಸಿಟ್ಟುಕೊಂಡಿದ್ದ ಆ ಒಂದು ಪುಟವನ್ನೂ ತಂದು ಅವನ ಕೈಯಲ್ಲಿಟ್ಟೆ. ಅದನ್ನೂ ಹರಿಯುತ್ತಾ ನನ್ನ ಕಡೆ ನೋಡಿದ, "ಅಪ್ಪಾ, ಒಂದು ವಿಷಯ ಬಾಕಿಯಿದೆ..." ಏನು ಅನ್ನುವಂತೆ ಹುಬ್ಬು ಹಾರಿಸಿದೆ. ಅಷ್ಟರಲ್ಲಿ ವಾಣಿ ಮತ್ತು ನಿಧಿ ಮನೆಯೊಳಗೆ ಬಂದರು. ತುಂಬಾ ಮೆಲ್ಲಗೆ, "ನನಗೊಂದು ಹುಡುಗಿ ನೋಡಿ." ಅಂದವನೇ ಸೋಫಾದಿಂದ ಎದ್ದು ಅವನ ಕೋಣೆಯ ಕಡೆ ಹೋದ. ನಿಧಿ ಹಾರುತ್ತಾ ಅವನ ಹಿಂದೆಯೇ ಹೋದಳು. ಅವರಿಬ್ಬರ ಬೆನ್ನ ಮೇಲೆ ಸಂಕ್ರಾಂತಿಸೂರ್ಯನ ಸಂಜೆಯ ಕಿರಣಗಳು ಆಟವಾಡುತ್ತಿದ್ದವು. ವಾಣಿಯ ಪ್ರಶ್ನಾರ್ಥಕ ನೋಟಕ್ಕೆ ನಸುನಕ್ಕು ಟಿ.ವಿ. ಹಾಕಿದೆ.
************ ************ ************
(ಮಾರ್ಚ್-೨೦೦೮)

Thursday 2 October, 2008

ಮುಗ್ಧ

ದೀಪಗಳು ನೆರಳುಗಳು ಹಾದಿಯಲ್ಲಿ
ಬಾಳ ಬಣ್ಣದ ಕನಸು ಕಂಗಳಲ್ಲಿ
ನಿನ್ನೆ ನಾಳೆಗಳೆಂಬ ಚಿಂತೆಯಿಲ್ಲ
ಈ ಕ್ಷಣದ ಬೆಳಕಿನಲಿ ಬಾಳಬಲ್ಲ.

ಅರಿವಿರುವುದೆಂದರೆ ಅರಿವು ಅಲ್ಲ
ಕನ್ನಡಿಯ ಬಿಂಬವದು ಅವನದಲ್ಲ
ಅಕ್ಕರೆಯ ತಿಳಿಗೊಳದಿ ನಲಿವನಲ್ಲ
ಕತ್ತಲೆಯ ಪರಿಧಿಯನು ದಾಟಬಲ್ಲ.

ಚಿಣ್ಣನಾಗಿರುವನಕ ಹಗೆಯು ಅಲ್ಲ
ಬೀದಿಬದಿ ಅರಮನೆಯ ಅರಸನಲ್ಲ
ಹಗಲ ಜಗ್ಗಾಟದಲು ನಗಲು ಬಲ್ಲ
ಇರುಳ ಕೊರೆತಗಳನ್ನು ಮರೆಯಬಲ್ಲ
(೨೧-ಮೇ-೨೦೦೭)

Thursday 11 September, 2008

ಆಧಾರ ಸೂತ್ರ

ನಿನ್ನ ನೆನಪು ಮೂಡಿ ಬರಲು ಹಗುರವಾಯ್ತು ಜೀವ
ಕಣ್ಣು ತುಂಬಿ ಕಲಕಿದಾಗ ಕರಗಿತೆಲ್ಲ ಭಾವ

ಅಲ್ಲಿ ಇಲ್ಲಿ ದಿಕ್ಕು ಹುಡುಕಿ ಬಿಕ್ಕುತಿರಲು ತಾನು
ಬಲ್ಲರಾರು ಏನು, ಎತ್ತ; ಮಂಜೊಳು ಬುವಿ-ಬಾನು
ಎಲ್ಲಿ ಇದ್ದೆ, ಎಲ್ಲಿ ಎದ್ದೆ, ಅರಿಯದಿರುವ ಚಿಣ್ಣ
ಸಲ್ಲಲಹುದು ಕೆಸರಿನಲ್ಲಿ ಹೊಂದಾವರೆ ಬಣ್ಣ

ಜೀವಕೋಟಿ ಚರಾಚರದೊಳಗೆ ಮನುಜ ಭ್ರಷ್ಟ
ಭಾವಲೋಕ ಭುವನದಲ್ಲಿ ನಿತ್ಯ ಕಷ್ಟ-ನಷ್ಟ
ಕಾವ ಸತ್ಯವೊಂದೆ ಅರಿಯೊ, ಇರಲು ಸತ್ವದರಿವು
ಆವ ಬಲವು ಬೇಕಿದೆಯೊ, ಬೆಳೆಯಲಾತ್ಮ ಛಲವು!

ಪಾಂಚಜನ್ಯ ಮೊಳಗಲೀಗ- ನಡುಗಲಳ್ಳೆದೆಯು
ಸುಪ್ರಬೋಧ ಬೆಳಗಲೀಗ- ಅಡಗಲಜ್ಞತೆಯು
ತೇಜಃಪುಂಜ ಹೊಳೆಯಲೀಗ- ಉಡುಗಲೆಲ್ಲ ಕ್ರೌರ್ಯ
ಮೌಢ್ಯತೆಯನು ಕಳೆಯಲೀಗ- ಪೊಡವಿಗಾಚಾರ್ಯ

(೧೦-ಸೆಪ್ಟೆಂಬರ್-೨೦೦೧; ರಾತ್ರೆ ೧:೪೮)

(ಮಲಗಿದ್ದವಳನ್ನು ನಿದ್ರಿಸಗೊಡದೆ, ಎಬ್ಬಿಸಿ, ಈ ಕವನ "ತನ್ನನ್ನು ತಾನು ಬರೆಸಿಕೊಂಡ" ಮರುಬೆಳಗ್ಗೆಯೇ ಜಗತ್ತನ್ನು ನಡುಗಿಸಿದ ಘಟನೆ ನಡೆದದ್ದು ನನಗಿನ್ನೂ ಅರಗಿಸಿಕೊಳ್ಳಲಾಗದ ವಿಸ್ಮಯ)

Friday 5 September, 2008

ಶಿಕ್ಷಕ

ಭಾಗ ೧:-- ಶಿಕ್ಷಕ ಹೀಗಾದರೆ?

ಶಿಕ್ಷಕ ತಕ್ಷಕನಾದರೆ ಮನುಕುಲಕ್ಕೆ-
ಅಮೃತವುಣಿಸುವವರಾರು?
ಶಿಕ್ಷಕ ಭಕ್ಷಕನಾದರೆ ಬೆಳೆವ-
ಸಿರಿಯ ಮೊಳಕೆಗೆ ರಕ್ಷಕರಾರು?

ಶಿಕ್ಷಕ ವಂಚಕನಾದರೆ ನವಯುಗದ-
ಭವಿತವ್ಯದ ಹಿತಚಿಂತಕರಾರು?
ಶಿಕ್ಷಕ ಅಚೇತನನಾದರೆ ಭಾರತಮಾತೆಯ-
ಕೀರ್ತಿಪತಾಕೆಯ ಚೈತನ್ಯವಾರು?

ಭಾಗ ೨:-- ಶಿಕ್ಷಕ ಹೇಗಿರಬೇಕು?

ತಕ್ಷಕನಾಗಿ ಭಕ್ಷಕರನ್ನು ಎದುರಿಸಿ ನಿಲಬೇಕು,
ರಕ್ಷಕನಾಗಿ ನವಯುವಶಕ್ತಿಗೆ ಧೈರ್ಯವ ಕೊಡಬೇಕು.

ಚೇತನವಾಗಿ ಮುಗ್ಧ ಮನಸಿಗೆ ಜಾಗೃತಿ ತರಬೇಕು,
ಚಿಂತನಶೀಲ ತರುಣಗಣಕ್ಕೆ ಪ್ರಣತಿಯಾಗಬೇಕು.

ಮಮತೆ, ಕರುಣೆ, ವಾತ್ಸಲ್ಯಗಳ ಚಿಲುಮೆಯಾಗಬೇಕು,
ಭಾರತಮಾತೆಯ ಕೀರ್ತಿಪತಾಕೆಗೆ ಭದ್ರ ಬುನಾದಿಯಾಗಬೇಕು.
(ಆಗಸ್ಟ್-೧೯೯೨)

(ಬೆಂಗಳೂರಿನ ವಿಜಯಾ ಶಿಕ್ಷಕರ ತರಬೇತಿ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ನನ್ನ ಸಹಪಾಠಿಗಳ ಧೋರಣೆ, ಸುತ್ತಮುತ್ತಲ ಶಾಲೆಗಳಿಗೆ ಕಲಿಕೆ-ಪಾಠಗಳಿಗೆಂದು ಹೋಗುತ್ತಿದ್ದಾಗ ಅಲ್ಲಿನ ಶಿಕ್ಷಕರ ಧೋರಣೆ ಕಂಡು ಬೇಸರದಿಂದಲೂ ಹತ್ತಿರ ಬರುತ್ತಿದ್ದ ಶಿಕ್ಷಕರ ದಿನಾಚರಣೆಯ ಸಂದರ್ಭವೆಂತಲೂ ಗೀಚಿಕೊಂಡದ್ದು. ಈಗ ಮತ್ತೊಮ್ಮೆ, ಈ ಕವನದ ಮೂಲಕ ನಮ್ಮೆಲ್ಲಾ ಶಿಕ್ಷಕವರ್ಗಕ್ಕೆ ವಂದನೆಗಳು.)

Sunday 27 July, 2008

ಆರೋಗ್ಯ ಪೂಜೆ

(ದಾಸರ ಕ್ಷಮೆ ಕೋರಿ, `ಅತ್ಯಾಧುನಿಕ'ರ ಗಮನಕ್ಕೆ... ಅಣಕವಾಡು)

ಊಟಕ್ಕೆ ಬನ್ನಿರಿ ನೀವು; -ನಿಮ್ಮ
ಲ್ಯಾಪ್-ಟಾಪು, ಸೆಲ್-ಫೋನುಗಳನಾಚೆಗಿಟ್ಟು --ಊಟಕ್ಕೆ
ಪಿ.ಡಿ.ಎ., ಬ್ಲ್ಯಾಕ್-ಬೆರ್ರಿ ಜೊತೆಗೆ, -ತಮ್ಮ
ಬೀಪರ್ರು, ಬ್ಲೂಟೂಥುಗಳ ಮೇಜಲಿಟ್ಟು --ಊಟಕ್ಕೆ

ಒಂದೇ ಮನೆಯೊಳಗಿದ್ದೂ, -ಮಂದಿ
ಒಬ್ಬೊಬ್ಬರೊಂದೊಂದು ದಿಕ್ಕನ್ನು ಹೊದ್ದು
ಅರೆನಿದ್ರೆ ಹೊತ್ತಲ್ಲಿ ಎದ್ದು, -ಬಂದು
ಮಬ್ಬಲ್ಲಿ ತಿಂದರೆ ಆರೋಗ್ಯಕೆ ಗುದ್ದು --ಊಟಕ್ಕೆ

ಟೀವಿಯ ಮುಂದಿರಬೇಡಿ, -ಒಮ್ಮೆ
ಅಡುಗೆ ಮನೆಯಲ್ಲೊಂದು ಮಣೆ ಹಾಕಿ ಕೂಡಿ
ನಗು ನಗುತಾ ಊಟವ ಮಾಡಿ, -ನಿಮ್ಮ
ಒಡನಾಡಿಗಳ ಜೊತೆಗೆ ಹರಟೆ ಮಾತಾಡಿ --ಊಟಕ್ಕೆ

ಸಿಹಿ-ಖಾರ, ಹುಳಿ-ಉಪ್ಪು ಇರಲಿ, -ಹಾಗೇ
ಶುಚಿಯ ಕಡೆಗೂ ನಿಮ್ಮ ಒಮ್ಮನವು ಹೊರಳಿ
ಮಾಡಿರುವ ಅಡುಗೆಯನು ಹೊಗಳಿ, -ತೇಗಿ
ರುಚಿ ಹಣ್ಣ ಸವಿಯುತ್ತ ಅಂಗಳಕೆ ತೆರಳಿ --ಊಟಕ್ಕೆ

ಆಧುನಿಕ ಸೌಕರ್ಯ ಬೇಕು, -ನಮಗೆ
ಬಾಳುವೆಯ ನಡೆಸಲು ಕೆಲಸವಿರಬೇಕು
ಆಧಾರವೀ ದೇಹ ಎದಕು, -ಅದನೆ
ಕಡೆಗಣಿಸಿ ಬದುಕಿದರೆ ನೋವುಣ್ಣಬೇಕು --ಊಟಕ್ಕೆ

ಹೊತ್ತು ಹೊತ್ತಿಗೆ ಊಟ-ತಿಂಡಿ, -ಹೆಚ್ಚು
ಹಣ್ಣು ತರಕಾರಿಗಳ ಮಿಶ್ರಣದ ಮೋಡಿ
ಬಲುಕಾಲ ಆರೋಗ್ಯ ನೋಡಿ, -ಮೆಚ್ಚು
ತನು-ದೇವರ ಸೇವೆ ಈ ರೀತಿ ಮಾಡಿ --ಊಟಕ್ಕೆ
(೦೨-ಜೂನ್-೨೦೦೮ ರಾತ್ರೆ ೧೦:೩೦)

Sunday 20 July, 2008

ಹೊಸ ಬಾಳು

(ಮನೋ ಮೂರ್ತಿಯವರ ಸಂಗೀತ ನಿರ್ದೇಶನದ "ಭಾವ ಮಾಲಿಕಾ" ಧ್ವನಿಸುರುಳಿಗಾಗಿ ಪದ ಜೋಡಣೆ.
ಹಾಡಿದವರು: ಕೆ.ಎಸ್. ಸುರೇಖಾ.)

ನಂದನದಂತಿದೆ ಈ ಮನೆ ಸ್ವರ್ಗ ಸುಳ್ಳಲ್ಲ
ಸುಂದರವು ನಿನ್ನಿಂದ ನೋಟ ಎಲ್ಲ
ಬಾನಿಗೆ ಚಂದ್ರನ ಚಂದ್ರಿಕೆ ಬಾಳಿಗೆ ಪ್ರೇಮದ ಮುದ್ರಿಕೆ
ನಲ್ಲ... ಇಂದು ನಿನ್ನಿಂದ ನಾ ಕಂಡೆ ಬಾಳಿಗೆ ಅರ್ಥ.

ಮದುವೆಯ ಬಂಧನ ಪವಿತ್ರ,
ಈ ಜೀವದ ದೇವ ನೀನು
ನಿನ್ನೀ ಪ್ರೇಮದ ಹಂದರ...
ಇದು, ನಿನ್ನನು ಪೂಜಿಪ ಮಂದಿರ
ನಿನ್ನ ನನ್ನ ನಂಟು, ಆ ಬ್ರಹ್ಮನು ಹಾಕಿದ ಗಂಟಿದು...
ಭಾವ ಹೊನಲಾಗಿದೆ, ಒಲವು ಒಸರಾಗುತಿದೆ,
ನನ್ನ ಕವಿತೆ ನಿನ್ನಿಂದಲೇನೇ, ನನ್ನಾಣೆ...
ನಲ್ಲ... ನಿನ್ನಿಂದ ನಾ ಕಂಡೆ ಬಾಳಿಗೆ ಅರ್ಥ.

ಕೇಳಿದೋ ಕೋಗಿಲೆ ಹಾಡನು
ಅದು ಹೇಳಿದೆ ಪ್ರೇಮಿಯ ಮಾತನು
ಚೈತ್ರ ಬಂದ ವೇಳೆ...
ಆ ಚಿಗುರೆಲೆ ಹೊರಳಿದವಾಗಲೇ
ಮೊಗ್ಗು ಹೂವಾಗಿದೆ, ಹೂವು ಹಣ್ಣಾಗುತಿದೆ
ಹಿಗ್ಗಿನಿಂದ ಮುದ್ದಾದ ಕಾವ್ಯ ನಾ ತಂದೆ...
ನಲ್ಲ... ನಿನ್ನಿಂದ ನಾ ಕಂಡೆ ಬಾಳಿಗೆ ಅರ್ಥ.
(ಜುಲೈ-೧೯೯೫)

Sunday 13 July, 2008

ಹೆಣ್ಣು

ಧಾನ್ಯಲಕ್ಷ್ಮಿ ಭೂಮಿತಾಯಿ ಧೈರ್ಯಲಕ್ಷ್ಮಿ ಮೋಹ ಮಾಯೆ
ಜ್ಞಾನದಾತೆ ಪೂಜ್ಯಮಾತೆ ಪಾಪನಾಶಿ ಸುರಭಿಯೆ
ಎನುತ ಹೊಗಳಿ ಹಾಡೊ ಮನುಜ ಹೇಳು ಎಲ್ಲಿದೆ
ಈ ಹಿರಿಮೆ ಹೆಣ್ಣಿಗೆ?

ಬಾಳ ಬೆಳಕು ಮನೆಯ ಥಳಕು ಪ್ರೇಮ ಗಂಗೆ ಎನ್ನುವೆ
ಬಾಳ ಏಣಿಯಲ್ಲಿ ಮೇಲೆ ಏರಗೊಡದೆ ತುಳಿಯುವೆ
ತೊಳೆಯಲೊಲ್ಲೆ "ಅಳುವ ಅಬಲೆ" ಎನುವ ಮಾತನು
ಅಳೆಯಬಲ್ಲೆಯಾ ಜನನಿ ತೋಳನು!

ಚೆಲುವ ಮೂರ್ತಿ ಕಾವ್ಯ ಸ್ಫೂರ್ತಿ ಕರುಣೆ ಕಡಲು ಎನ್ನುವೆ
ಒಲುಮೆ ಬೇಡಿ ತೊಡಿಸಿ ಅವಳ ಸೆರೆಯ ಒಳಗೆ ಇರಿಸುವೆ
ನಲಿವ ಹೂವು ನಲುಗಿ ಬಳಲಿ ಬಾಡಿ ಬಾಗಿತು
ನೆಲವ ಸೇರಿತು, ಅಮರವಾಯಿತು!
(ಜೂನ್-೧೯೯೫)

Tuesday 8 July, 2008

ಬಣ್ಣ-ಭಾವ

ಎಲೆ ಹಸಿರು ಗಿಳಿ ಹಸಿರು
ಗಾಳಿ ನಮ್ಮ ಉಸಿರು,
ರಕ್ತ ಕೆಂಪು ನೆರಳು ತಂಪು
ಹೂವುಗಳಿಂದ ಕಂಪು.

ದೊಡ್ಡ ಕಿತ್ತಳೆ ಸಣ್ಣ ನೇರಳೆ
ಯಾವುದು ಬೇಕು ಮಕ್ಕಳೆ?
ಬಾನು ನೀಲ ಭೂಮಿ ಗೋಲ
ಹಿತ ವಸಂತ ಕಾಲ.

ಮೋಡ ಬೂದು ಕಾಂಡ ಕಂದು
ಮಳೆಯ ಹನಿಯು ಬಿಂದು
ಹತ್ತಿ ಬಿಳಿ ಕಾಡಿಗೆ ಕಪ್ಪು
ಬಣ್ಣದಲಿಲ್ಲ ತಪ್ಪು.

ಗಂಡಿಗೆ ನೀಲಿ ಹೆಣ್ಣಿಗೆ ಗುಲಾಲಿ
ಹಳದಿ ಯಾರ ಖಯಾಲಿ?
ವರ್ಣರಂಜಿತ ಚಿತ್ರ ಸುಂದರ
ಭಾವಗಳು ಮೃದು ಮಧುರ.
(ಎಪ್ರಿಲ್-೧೯೯೩)

(ಮೊದಲಬಾರಿಗೆ ಹೊರದೇಶದಲ್ಲಿ ಸಮಾನಾಸಕ್ತರ ಗುಂಪೊಂದನ್ನು ಮಾಡಿಕೊಂಡು, ಸರಿಸುಮಾರು ಒಂದೇ ವಯಸ್ಸಿನ [ಎರಡು ವರ್ಷದ ಆಸುಪಾಸಿನಲ್ಲಿದ್ದ] ಆರು ಮಕ್ಕಳನ್ನು ಆಡಿಸುತ್ತಾ, ಪಾರ್ಕುಗಳಲ್ಲಿ ಓಡಾಡುತ್ತಾ, ಆಗತಾನೇ ಹೊರಬಂದ ವಸಂತದಲ್ಲಿ ಸುಖಿಸುತ್ತಾ, ಗೆಳತಿಯರೊಡನೆ ಹರಟುತ್ತಿದ್ದ ಸಮಯದಲ್ಲಿ ಗುಂಪಿನಲ್ಲಿದ್ದ ನಾಲ್ಕು ಕನ್ನಡದ ಮಕ್ಕಳಿಗಾಗಿ ಹುಟ್ಟಿಕೊಂಡದ್ದು.)

Thursday 3 July, 2008

"ಹಾಯ್... ...ಬಾಯ್"ಗಳ ನಡುವೆ...

"ಹಾಯ್ ಗೆಳತಿ, ಹೇಗಿದ್ದೀಯಾ? ಅಡುಗೆ ಏನಿವತ್ತು?"
ಹೀಗೇ ಶುರುವಾಗುವ ಮಾತು ಎತ್ತೆತ್ತಲೋ ಸಾಗುತ್ತಿತ್ತು
"ಅಮ್ಮಾ... ನಂಗೆ ನೀರು... ಕ್ಯಾಂಡಿ..." ನನ್ನ ಮರಿಯ ಗಲಿಬಿಲಿ
"ಅಮ್ಮಾ... ಬಾ... ಅಣ್ಣಾ... ಅಪ್ಪಾ..." ನಿನ್ನ ಸನಿಹ ಚಿಲಿಪಿಲಿ

ಕಂಡರಿಯದ ನಾಡಿನಲ್ಲಿ ಕನ್ನಡ ಮಾತಿನ ಗೆಳತಿ
ಕಹಿ-ಸಿಹಿ ಹಂಚಿಕೊಳಲು ಹುಮ್ಮನಸ್ಸಿನ ಕನ್ನಡತಿ
ಸಮಾನ ಲಕ್ಷ್ಯಗಳು, ರೇಖೆಗಳು, ನಿಲುವುಗಳು
ಸರಾಗವಾಗಿ ಮಾತು ಹರಿಯಲು ಬೇಕಷ್ಟು ವಿಷಯಗಳು

ಎಂದು, ಹೇಗೆ ಈ ಸಖ್ಯ, ಈ ನಂಟು ಬೆಳೆಯಿತು?
ಎಲ್ಲಿಂದ, ಎಲ್ಲಿ ಬಂದು, ಯಾವ ಕಡೆಗೆ ಎಳೆಯಿತು?
ಅರಿಯಲಾರೆ, ವಿಸ್ಮಯವೇ ನನ್ನ ಮನದ ತುಂಬ
ಅಗಲಿಕೆಯ ಸಹಿಸಲಾರೆ, ಇರಲಿ ಸ್ನೇಹ ಬಿಂಬ

ತವರನಗಲಿ ಹೊರಟಾಗಲೂ ಬಾರದ ಕಣ್ಣೀರು
ತಡೆದರೂ ಹಣಕುತ್ತಿದೆ, ಬದುಕು ನಿಲ್ಲದ ನೀರು
ಹರಿಯಬೇಕು, ಹಾಡಬೇಕು, ಹರಡಬೇಕು ಹೊನಲು
ಹತ್ತಿರವನು ದೂರದಿಂದ ಅಳೆಯುವಾಗ ಅಳಲು

ಸ್ವರ್ಗವಿದು, ನರಕವಿದು, ಪರಿಪೂರ್ಣವೆಂಬುದಿಲ್ಲ
ಸ್ವಂತಿಕೆಗೆ ನೆಲವು ಇದು, ಸ್ವಂತವು ಇದಲ್ಲ
ಮರಳಿ ಮನೆಗೆ ಮರಳುವ ಹಂಬಲವು ಬಹಳ
ಮತ್ತೆ ನೋಡುವೆ ನಿನ್ನೆಂಬ ಸಂಭವ ವಿರಳ.
(೦೧-ಅಕ್ಟೋಬರ್-೧೯೯೭)

Sunday 29 June, 2008

ನಲ್ನುಡಿ

ಎರಡು ಮಾತು ಹೇಳುವೆನು
ಕೇಳು ಜಾಣ ಮಗು ನೀನು
ಒಳ್ಳೆ ನಡೆ ನುಡಿಯ ಕಲಿ
ಧೀರನಾಗು ಬಾಳಲಿ

ಗುರುಗಳು ಹಿರಿಯರು ನಿನಗೆ
ಕೆಡುಕನು ಬಯಸುವುದಿಲ್ಲ
ಅರಿವಿನ ಮಾರ್ಗವ ತೋರಿ
ವಿಜಯವ ಹರಸುವರೆಲ್ಲ
ಹೇಳಿದ ಮಾತನು ಕೇಳಿ
ನೂರಾರು ಕಾಲ ಬಾಳಿ
ಯಶವೆಂಬ ಏಣಿಯನೇರು

ವಂಚನೆ ಜಗಳ ಕದನ
ಒಳ್ಳೆಯ ಸಂಸ್ಕೃತಿಯಲ್ಲ
ಸಂಚು ಸುಲಿಗೆಯ ಮಾಡೋ
ಮನುಜ ಸುಸಂಸ್ಕೃತನಲ್ಲ
ಸತ್ಯವ ಬಿಡದೆ ಎಲ್ಲೆಲ್ಲೂ
ಹಿಂಸೆಯ ಎದುರಿಸಿ ನಿಲ್ಲು
ಆದರ್ಶ ಮಾನವನಾಗು

"ದೂರದ ಬೆಟ್ಟವು ಹಸಿರು"
ಗಾದೆಯ ಮಾತಿದು ಕೇಳು
ಸರಿದು ಸನಿಹದೆ ನೋಡು
ತಿಳಿವುದು ಒಳಗಿನ ಪೊಳ್ಳು
ಬಣ್ಣದ ಮೆರುಗಿಗೆ ಸೋತು
ನಿನ್ನತನವನೇ ಮರೆತು
ಸುಳಿಯಲ್ಲಿ ಸಿಲುಕದೆ ಬಾಳು
(ಎಪ್ರಿಲ್-೧೯೯೫)

Sunday 22 June, 2008

ಅಮರಗಂಧ

(ಗುರುರಾಜ ಮಾರ್ಪಳ್ಳಿಯವರ ಸಂಗೀತ ನಿರ್ದೇಶನದ "ಹೇಳು ಮನಸೇ" ಧ್ವನಿಮುದ್ರಿಕೆಯಲ್ಲಿದೆ.
ಹಾಡಿದವರು: ಶ್ರೀಮತಿ ಸಂಗೀತಾ ಬಾಲಚಂದ್ರ, ಉಡುಪಿ.)


ಹವಳದ ತುದಿಯಲಿ ಅರಳುವ ಮುತ್ತು
ಹರಡುವ ಕಂಪು ಮುಸ್ಸಂಜೆಗೆ ಗೊತ್ತು
ಹಸುರಿನ ತೆರೆಯಲಿ ಮಿಂಚುವ ಮಾಯೆ
ಹೊತ್ತಾರೆ ನೋಡಲು ಬೆಳ್ಳನೆ ಛಾಯೆ

ಕಡಲಿನಾಳದ ಚಿಪ್ಪು ಒಡೆದಿಲ್ಲಿ ಬಂತೆ?
ಬರುವಾಗ ಹವಳವನು ಸೆಳೆತಂದಿತಂತೆ!
ದೇವಲೋಕದ ಗಂಧ ಚಂದನವ ಪೂಸಿ
ನಮಗಾಗಿ ಅರಳುತಿವೆ ಸೌಂದರ್ಯ ಸೂಸಿ

ಒಂದೊಂದು ತಾರೆಯೂ ಅಲ್ಲಿಂದ ಕಳಚಿ
ಇಳಿವಾಗ ಹದವಾದ ಹಾಲಂತೆ ಬಿಳಿಚಿ
ತುದಿಯಲ್ಲಿ ನೆಪಮಾತ್ರಕೊಂದು ಕಿಡಿ ಕೆಂಡ
ಮುಡಿದುಕೊಂಡರೆ ಮಾತ್ರ ಕ್ಷಣದಲ್ಲಿ ದಂಡ

ಇಂಥ ನಾಜೂಕು ಚೆಲುವ ಅಮರಾವತಿ ಹೂವು,
ಇಲ್ಲೆಲ್ಲಿ ಹುಡುಕಲಿ, ಪರದೇಶಿಗಳು ನಾವು
ಆ ಕಂಪು, ಆ ಅಂದ, ಗಂಟೆಗಳ ಆಯುಸ್ಸು
ಕಳೆದುಹೋಗಿದೆ ಈಗ; ಅಂತೆ ಬಾಲ್ಯ ವಯಸ್ಸು

ನಿನ್ನ ಮುತ್ತುಗಳನ್ನು ಆಯುತ್ತಿದ್ದ ಕೈಗಳು
ಪೋಣಿಸಿ ಮಾಲೆಮಾಡಿ ಏರಿಸಿಕೊಂಡ ಹೆರಳು
ದೇವ ಪೂಜೆಗೆ ನಿನ್ನ ತುಂಬಿಟ್ಟ ಹರಿವಾಣ
ಪಾರಿಜಾತ, ನೀನಿಲ್ಲದೂರಲ್ಲಿ ಇವೆಲ್ಲ ಭಣಭಣ
(೧೦-ಜುಲೈ-೧೯೯೮)

Sunday 15 June, 2008

ಖಾಲಿ ಗೂಡಿನ ಹಕ್ಕಿಗಳು

ಜೊತೆಗೊಂದು ಸಂಗಾತಿ ಬೇಕೆಂದು
ಸ್ವರಕ್ಕೆ ಸ್ವರ ಕೂಡಿಸಿ,
ಹಾಡಿ ನಲಿದು ನರ್ತಿಸಿ,
ಗೂಡು ಕಟ್ಟಿ, ಒಲಿಸಿ,
ಮನದೊಳಗೆ ಬಂದ ಮನದನ್ನೆ-
ಇಟ್ಟೆರಡು ಮೊಟ್ಟೆಗಳಿಗೆ ಕಾವಿರಿಸಿ,
ಮಮತೆಯ ಪಾನ ಊಡಿ, ನೋಡಿ,
ಸರದಿಯಲ್ಲಿ ಪುಟ್ಟ ಚುಂಚಗಳಿಗೆ
ಗುಟುಕಿರಿಸಿ, ನೀರುಣಿಸಿ,
ಕಾದಿಟ್ಟ ಚಿಲಿಪಿಲಿಗಳು...
ಕಣ್ಣ ಮುಂದೆ ಬೆಳೆದು, ಬಲಿತು,
ಬಣ್ಣ ರೆಕ್ಕೆ ತುಂಬಿ, ನಲಿದು,
ಬಿದ್ದು-ಎದ್ದು ಹಾರಲು ಕಲಿತು;
ಒಂದು ಮುಂಜಾನೆ...
ಚುಂಚಗಳಿಗೆ ತುತ್ತು ತಂದ ಘಳಿಗೆ
ಮರಳಿದ್ದೆವು ಖಾಲಿ ಗೂಡಿಗೆ.

ಕೂಗಿ ಕರೆದು, ಅಲೆದು ಸಾಕಾಗಿ, ಹುಡುಕಿ ಸುಸ್ತಾಗಿ,
ಎಲ್ಲೋ ಮರದೆಡೆಯಲ್ಲಿ ಮೈಮರೆತಾಗ
ಕಂಡೆವು ಮಗ ರಮಿಸಲೆತ್ನಿಸುತ್ತಿದ್ದ
ಆ ಸುಂದರಿಯನ್ನು.
ಹಾಗೇ ಮಗಳೂ ಅಲ್ಲೆಲ್ಲೋ ಬಿಂಕವಾಡಿ
ಮತ್ತಾರದೋ ಮನ ಸೆಳೆಯುವುದನ್ನು.

ಒಂದು ಗೂಡಿನ ದೀಪಗಳೆರಡು
ಮತ್ತೆರಡು ಹಣತೆಗಳ ಹಚ್ಚುವುದ ಕಂಡು
ಅದಮ್ಯ ತೃಪ್ತಿಯುಂಡು
ಜೊತೆಜೊತೆಯಾಗಿ ಹಾರಿ ಬಂದು
ಗೂಡು ಸೇರಿದೆವು.

ಖಾಲಿಯೆಂದೆನಿಸಿದ್ದ ಈ ಗುಡಿ
ತುಂಬಿ ಬಂದಂತಾಗಿ, ಉಕ್ಕಿದ ಧನ್ಯತೆಯಲಿ
ಮನಸು ಮೇಲೇರಿತ್ತು.
ಕಾಯವಳಿದ ಮಾಯೆ ದೇಹವುಳಿದು
ಛಾಯೆಯಾಗಿ ಆವಿಯಾಯಿತು.
(೧೫-ನವೆಂಬರ್-೨೦೦೧)

(ಆರೂವರೆ ವರ್ಷಗಳ ಹಿಂದೆ ಸ್ನೇಹಿತರೊಬ್ಬರ ಇಬ್ಬರು ಮಕ್ಕಳೂ ಕಾಲೇಜ್ ಅಧ್ಯಯನಕ್ಕೆಂದು ಮನೆಯಿಂದ ಹೊರಬಿದ್ದಾಗ, ಈ ದೇಶದಲ್ಲಿ ಚಾಲ್ತಿಯಲ್ಲಿರುವ ಪದಪುಂಜ- Empty Nest Symdrome- ನನ್ನ ಅರಿವಿಗೆ ಬಂತು. ಅದರ ಚಿಂತನೆಯಲ್ಲಿ ಹೊಮ್ಮಿದ ಲಹರಿ. ಈಗ, ಈ ವರ್ಷ ತಮ್ಮ ಮಕ್ಕಳ ಗ್ರಾಜುಯೇಷನ್ ಗದ್ದಲದಲ್ಲಿರುವ ನನ್ನ ಗೆಳೆಯ-ಗೆಳತಿಯರಿಗಾಗಿ...)

Sunday 8 June, 2008

ಸಂವಾದ

("ಭಾವಮಾಲಿಕಾ" ಧ್ವನಿಸುರುಳಿಗಾಗಿ, ಮನೋಮೂರ್ತಿಯವರ ಸಂಗೀತಕ್ಕೆ ಹೊಂದಿಸಿ ಬರೆದದ್ದು)

ಮಗು: ಹೊರಗೆ ಆಡ ಹೋಗುವೆನು,
ತಂದೆ: ಪಾಠ ಓದಿ ಆಯ್ತೇನು?
ಮಗು: ನಾಳೆ ನಮಗೆ ರಜೆಯಂತೆ,
ತಂದೆ: ಓದು ಬರಹ ಮೊದಲಂತೆ.

ಮಗು: ಗೆಳತಿಯರೆಲ್ಲರ ಜೊತೆಗೆ ನಾನೂ ಆಡಲೇ ಬೇಕು,
ತಂದೆ: ಇಳಿದಿದೆ ಮಾರ್ಕಿನ ಸಂಖ್ಯೆ, ಆಡಿದ್ದೆಲ್ಲವೂ ಸಾಕು;
ಪಾಠದ ಪುಸ್ತಕ ತೆರೆದು ಪ್ರಶ್ನೆಗೆ ಉತ್ತರ ಬರೆದು
ಕಲಿಯಮ್ಮ ನೀ ಸರಿಯಾಗಿ.... ....ಹೊರಗೆ ಆಡ ಹೋಗುವೆನು....

ಮಗು: ಸುಮ್ಮನೆ ಓದಿದ ವಿಷಯ ನೆನಪೇ ಉಳಿಯುವುದಿಲ್ಲ
ತಂದೆ: ಒಮ್ಮೆಲೇ ಬಾನಿಗೆ ಏಣಿ ಇಡುವುದು ತರವಲ್ಲ;
ಶ್ರವಣ-ಪಠಣ-ಮನನ ಕಲಿಕೆಯ ಹಂತಗಳಮ್ಮ
ನಿಜವಾದ ಸಾಧನೆ ಹಾದಿ.... ....ಹೊರಗೆ ಆಡ ಹೋಗುವೆನು....

ಮಗು: ಪಾಠದ ಹಾಗೇ ಆಟ ಬೆಳವಣಿಗೆಯ ಒಂದಂಶ
ತಂದೆ: ಆಟ ಪಾಠದ ಸಮರಸ ವಿಜಯದ ಸಾರಾಂಶ.
ಇಬ್ಬರೂ: ಒಂದರ ಜೊತೆಗಿನ್ನೊಂದು ಚೆನ್ನಾಗಿ ಹೊಂದಿಸಿಕೊಂಡು
ಗೆಲ್ಲೋದೇ ಬಾಳಿನ ಆಟ....

ಇಬ್ಬರೂ: ತಾಯಿ ತಂದೆ ಪ್ರಥಮ ಗುರು, ಜೀವನವೇ ಪರಮ ಗುರು
ನೋಡಿ ತಿಳಿ ಮಾಡಿ ಕಲಿ, ಅನುಭವ ಸ್ಥಿರ ಬಾಳಲಿ.

Sunday 1 June, 2008

ಹುಡುಗೀ... ನಗು

(ಗುರುರಾಜ ಮಾರ್ಪಳ್ಳಿಯವರ ಸಂಗೀತ ನಿರ್ದೇಶನದ "ಹೇಳು ಮನಸೇ" ಧ್ವನಿಮುದ್ರಿಕೆಯಲ್ಲಿದೆ.
ಹಾಡಿದವರು: ಶ್ರೀ ಚಂದ್ರಶೇಖರ ಕೆದಿಲಾಯ)


ಒಮ್ಮೆ ನಗು ನನ್ನ ಹುಡುಗಿ, ಮೆಲ್ಲ ನಗು
ಬಡಿವಾರವ ಬದಿಗಿಟ್ಟು ಬಣ್ಣವೊಸರುವಂದದೊಮ್ಮೆ
ಮೋಡದಂಚ ಮಿಂಚಿನಂತೆ ಛಕ್ಕನೆಂದು ಚಿಕ್ಕ ನಗು.

ಕಣ್ಣಿನಂಚ ಮಣಿಯು ಕರಗಿ ಬಿಂದುವಲ್ಲಿ ಭಾವದುಂಬಿ
ನಿಶೆಯ ನಶೆ ಜಾರದಂತೆ ಉಷೆಯ ನಶೆ ತಿಳಿಯದಂತೆ
ಕೆನ್ನೆಗಲ್ಲ ಒಂದು ಮಾಡಿ, ಅಲ್ಲೆನಗೆ ಜಾಗ ನೀಡಿ, ಮುಗುಳು ನಗು.

ಕಣ್ಣ ಕೊನೆಯ ಸಂಚಿನಂತೆ, ರಾತ್ರೆ ಹೊಳೆವ ಚುಕ್ಕಿಯಂತೆ
ಚಿಕ್ಕದಾಗಿ ಚೊಕ್ಕವಾಗಿ ಮಲ್ಲೆಮಾಲೆ ಅರಳುವಂತೆ
ಕಹಿಯ ತೊಳೆದು ಹೊಳೆಯುವಂತೆ, ಸಿಹಿಯಾಗಿ ನಲ್ಲೆ ನಗು

ಅರಗಿಳಿಯ ಮಾತಿನಂತೆ, ಕಂದಮ್ಮನ ಕೇಕೆಯಂತೆ
ಕಿಲಕಿಲನೆ ಕಲರವಿಸಿ ಗಲಗಲನೆ ಪ್ರತಿಧ್ವನಿಸುವಂತೆ
ಬೇಸರೆಲ್ಲ ಹಾರುವಂತೆ, ನಾವಿಬ್ಬರು ಸೇರುವಂತೆ, ಚೆನ್ನಾಗಿ ಚಿನ್ನ ನಗು.

ಬಾಗಿಲಂಚಿನಿಂದ ಬೆಳೆದು ಮಲ್ಲಿಗೆಯು ಹಬ್ಬುವಂತೆ
ನಕ್ಕುಬಿಡೇ ಬಡನಡುವಿನ ನನ್ನ ಬೆಡಗೀ ಕಿರುನಗು
ಬಾಡಿಗೆಯ ನೀಡುವೆನಿದೋ, ಬಿನ್ನಾಣದ ಕನ್ನೇ, ನಗು... ನಗು.
(ಮಾರ್ಚ್-೧೯೮೬)

Sunday 25 May, 2008

ಮಲಗು ಕಂದ

ಮಲಗು ಮಲಗು ಪುಟ್ಟ ಮಗು
ಮಲಗು ನನ್ನ ಮುದ್ದು ಮಗು
ಅಳದಿರು ನೀನು ಬಿಕ್ಕಳಿಸಿ
ಅಪ್ಪುವೆ ನಿನಗೊಂದು ಮುತ್ತಿರಿಸಿ

ಅತ್ತು ಸುತ್ತಿ ಹೊರಳದಿರು
ಅರಚಿ ಪರಚಿ ಕಿರುಚದಿರು
ನಿದಿರಾದೇವಿ ಬರುತಿಹಳು
ನಿನ್ನಯ ಕಣ್ಣಲೇ ಕೂರುವಳು

ಚಂದಿರ ಮಾಮ ಬಂದಿಳಿವ
ಚಂದದ ಊರಿಗೆ ಕರೆದೊಯ್ಯುವ
ತಾರೆಗಳೊಡನೆ ನೀ ಆಡು
ತಾರೆಯ ತೋಟದಿ ನಲಿದಾಡು

ನಿದಿರೆ ಮುಗಿಸಿ ಎದ್ದಾಗ
ನನ್ನಯ ಅರಸಿ ಬಂದಾಗ
ಚಿನ್ನಾರಿ ಚೆಲುವೆಗೆ ಹಾಲ್ಕೊಡುವೆ
ಚೆನ್ನಾದ ಆಟಿಕೆ ಕೈಲಿಡುವೆ
(ಜೂನ್ ೧೯೯೫)
(ತಂಟೆಕೋರಿ ಹಠಮಾರಿ ಮುದ್ದು ಪೋಕರಿಗೆಂದು ಬರೆದದ್ದು... ಇಂದು ನಂದಗೋಕುಲದಲಿ ನಲಿವ ವರುಷದ ಪೋರನಿಗೆ)

Thursday 22 May, 2008

ಸುರಸುಮಸಮ

ನವಿರುನಿಶೆಯಲಿ ಚಿಮ್ಮಿತ್ತು
ಜೀವ ಚೇತನ ಸ್ಫೂರ್ತಿ
ಯಾವ ಲಾಸ್ಯಕೆ ಒಲಿದಿತ್ತು
ಮೊಗ್ಗಾಗಲಿಹ ಮೂರ್ತಿ

ಹಸಿರು ಹೊದ್ದೇ ಎದ್ದಿದೆ
ಬೆವರು ಮೆದ್ದ ಚಿಗುರು
ಭಾವ ಭಂಗಿಯ ಬಿತ್ತಿದೆ
ಭಿತ್ತಿಯೊಳಗೆ ಉಸಿರು

ಹಿಮಸಿಂಚನ ರೋಮಾಂಚನ
ರಮ್ಯ ರವಿಯ ಸ್ಪರ್ಶ
ಸುರಸುಮವದು ಧರೆಗಿಳಿಯಿತು
ಸೆಳೆದು ಸಕಲಾಕರ್ಷ

ಪಕಳೆಯರಳಿತು ತೆರೆಯಿತು
ಗಂಧ ಚೆಲ್ಲಿ ಮುಗುಳು
ಹಾಸ ಕೋಟಿಯ ಹರಡಿತು
ಬಂಧ ಕಳೆದ ಮರುಳು
(೨೧-ಮೇ-೨೦೦೬)

ಹೃದಯದ ಭಾಷೆ

Wednesday, May 14, 2008

ಕಾರಿರುಳ ಸಾಂದ್ರತೆಯಲ್ಲಿ, ಅಲ್ಲಲ್ಲಿ ಉರಿವ ಚಿತೆಗಳ ಮಂದ ಬೆಳಕಿನಲ್ಲಿ, ಮಿನುಗುವ ಮಂಗಲಸೂತ್ರವನ್ನು ಕಂಡ ಆತ, "ನಿನ್ನ ಆ ತಾಳಿಯನ್ನೇ ಒತ್ತೆಯಿಟ್ಟು ಶವಸಂಸ್ಕಾರಕ್ಕೆ ಶುಲ್ಕ ತಾ" ಎಂದು ಅಬ್ಬರಿಸಿ ಪಟ್ಟು ಹಿಡಿದಾಗಲಷ್ಟೇ ಪತಿಯ ದನಿಯ ಪರಿಚಯವಾಯಿತೇ ಚಂದ್ರಮತಿಗೆ? ಅದುವರೆಗೆ..... "ಶುಲ್ಕ ತೆರದೆ ಸಂಸ್ಕಾರ ಮಾಡುವಂತಿಲ್ಲ" ಎಂದಾತ ತಿಳಿಸಿದಾಗಲಾಗಲೀ, "ನನ್ನ ಪಾಲಿನ ಶುಲ್ಕ ಬಿಟ್ಟುಕೊಡಬಲ್ಲೆ, ಒಡೆಯನಿಗೆ ಸೇರಬೇಕಾದ್ದನ್ನಾದರೂ ನೀನು ತೆರಲೇಬೇಕು" ಎಂದಾಗಲಾಗಲೀ ಅವಳಲ್ಲಿನ ಪತ್ನಿ ಏನಾಗಿದ್ದಳು? ಎಂದೂ ಅಗಲಿರದ ಆದರ್ಶ ಪತ್ನಿ ಅಲ್ಪಕಾಲದ ಕಣ್ಮರೆಯಿಂದ ಪತಿಯ ದನಿಯನ್ನೂ ಗುರುತಿಸದಾದಳೆ? ದುಃಖದ ಮಡುವಿನಲ್ಲಿ ಕರಗಿ ಕಳೆದುಹೋದ ಅವಳ ಮಾತೃಹೃದಯ ತನ್ನ ಪತ್ನಿತ್ವದ ತುಣುಕನ್ನೂ ಕಳೆದುಕೊಂಡಿತ್ತೆ?

"ಧರ್ಮ, ಅರ್ಥ, ಕಾಮ, ಮೋಕ್ಷ- ಈ ಯಾವ ಪುರುಷಾರ್ಥಗಳಲ್ಲೂ ನಿನ್ನನ್ನು ಮೀರಿ ನಡೆಯುವುದಿಲ್ಲ, ನಿನ್ನನ್ನು ಅಗಲಿ ಹೋಗುವುದಿಲ್ಲ, ನಿನ್ನ ಸಾಹಚರ್ಯ ಬಿಡುವುದಿಲ್ಲ." ಎಂದು ಭಾಷೆಕೊಟ್ಟು, ಆತ ತೋರಿದ ಏಳು ಹೆಜ್ಜೆಗಳನ್ನಿಟ್ಟು ಮಡದಿಯಾದವಳು- ಧರ್ಮಪತ್ನಿ. ಪುಣ್ಯಕಲಶಾಭಿಸೇಚನಗಳಿಂದ ಅವನೊಂದಿಗೆ ಮಂಗಳಸ್ನಾತಳಾಗಿ ಸಾಮ್ರಾಜ್ಞಿಯಾದವಳು- ಪಟ್ಟ ಮಹಿಷಿ. ಮಹಾಸಾಮ್ರಾಟನಾಗುವ ಮಗನನ್ನು ಹೆತ್ತವಳು- ರಾಜಮಾತೆ. ಅವಳು ಈಗೆಲ್ಲಿ? ರಘುವಂಶತಿಲಕ, ಧವಳಕೀರ್ತಿಧಾರಕ, ಚಕ್ರವರ್ತಿ ಹರಿಶ್ಚಂದ್ರ ಮಹಾರಾಜನ ಮನೋಮಂದಿರ ಬೆಳಗಿದ ಚಂದ್ರಮತಿ, ಅರಮನೆಯಲ್ಲೇ ಹುಟ್ಟಿ, ಬೆಳೆದು, ಬೇಕಾದ್ದನ್ನು ಉಂಡುಟ್ಟು, ಸೇರಿದ ಮನೆಯ ಕೀರ್ತಿಗೆ ಮಂಗಳದ ತಿಲಕವಿಟ್ಟು, ಕಾಲ ತಿರುಗಿ ಹೊರಳಿದಾಗ ಪಟ್ಟ ಬಿಟ್ಟು, ಚಿಂದಿಯುಟ್ಟು, ಪತಿಯಿಂದಲೇ ಮಾರಲ್ಪಟ್ಟು, ಊಳಿಗದವರನ್ನೂ ಉಳ್ಳವರನ್ನಾಗಿಸುತ್ತಿದ್ದಾಕೆ ತಾನೇ ಊಳಿಗದ ಆಳಾಗಿ, ಮಗನಿಗೆ ತಂಗಳು ಉಣಲಿಟ್ಟು ಕಣ್ಣೀರಿಟ್ಟಳೆ? ಧರ್ಮಕ್ಕೆ ಮೀರದಂತೆ ನಡೆಯುವ ನಿಯಮದಲ್ಲಿ ಬಂಧಿತಳಾಗಿ ಮಗನನ್ನು ಕಳೆದುಕೊಂಡು ದುಃಖದ ತಾಪದಲ್ಲಿ ಧರ್ಮವನ್ನು ಹಳಿದಳೆ?

ಇವೆಲ್ಲ ಉತ್ತರಿಸಲಾರದ ಪ್ರಶ್ನೆಗಳು. "ಚಂದ್ರಮತಿಯ ಪ್ರಲಾಪ" ಎಂಬುದು ಕಾವ್ಯ ವಿಸ್ಮಯ. ಅಲ್ಲಿ ಮಾತೃಹೃದಯದ ವಿಜ್ರಂಭಣೆಯಿದೆ, ಪತ್ನಿಯದ್ದಲ್ಲ. ಮಾತೃತ್ವ ಎಲ್ಲವನ್ನೂ ಮೀರಿದ ನೆಲೆ. ಒಂದು ಜೀವದ ಹುಟ್ಟಿನೊಂದಿಗೆ ಮರುಹುಟ್ಟು ಪಡೆವ ಹಿರಿಯ ಜೀವ- ಮಾತೆ. ಅಲ್ಲಿಂದ ಆ ಹೆಣ್ಣಿನ ಜೀವನದ ಪ್ರಮುಖವಾದೊಂದು ಮುಖ ಅನಾವರಣಗೊಳ್ಳುತ್ತಾ ಹೋಗುತ್ತದೆ. ಅದುವರೆಗೆ ಮಗಳಾಗಿ, ಅಕ್ಕ-ತಂಗಿಯಾಗಿ, ಮಡದಿ-ಸೊಸೆಯಾಗಿ ಇದ್ದಾಕೆ ಮಾತೆಯೂ ಆದಾಗ ಹಲವಾರು ನೆಲೆಗಳಲ್ಲಿ ಆಕೆಯ ದೃಷ್ಟಿಕೋನ ಬದಲಾಗುತ್ತದೆ.

ಮಾತೃಸ್ಥಾನ ಪಡೆದ ಹೆಣ್ಣು ತನ್ನ ತಾಯಿ-ಅತ್ತೆಯರನ್ನು ಇನ್ನೂ ಹೆಚ್ಚಾಗಿ ಗೌರವಿಸಬಲ್ಲಳು. ಅವರ ಭಾವನಾನೆಲೆಯ ಹಲವಾರು ಸೂಕ್ಷ್ಮ ಎಳೆಗಳನ್ನೂ ಅರಿಯಬಲ್ಲಳು. ಪತಿಯ ಕಡೆಗೆ ಒಲವಿನೊಂದಿಗೆ ಮಮತೆಯಿಂದಲೂ ನೋಡಬಲ್ಲಳು. ಜೊತೆಗೆ, ತನಗೀ ಮಾತೃತ್ವವೆಂಬ ಉನ್ನತ ಸ್ಥಾನ ದೊರೆಯಲು ಕಾರಣೀಭೂತನಾದ ಆತನಲ್ಲಿ ಹೆಚ್ಚಿನ ಗೌರವ ಹೊಂದಬಲ್ಲಳು. ಸಾಮಾನ್ಯವಾಗಿ ಹೆಣ್ಣಿನಲ್ಲಿರುವ ಸೂಕ್ಷ್ಮಗ್ರಾಹಿತ್ವಕ್ಕಿಂತಲೂ ಮೇಲ್ಮಟ್ಟದ ಸೂಕ್ಷ್ಮತೆ ಹೊಂದುವಳು. ತನ್ನ ಕಂದನ ಬೇಕು-ಬೇಡಗಳಿಗೆ ಸ್ಪಂದಿಸುವ ಅವಳ ಅಗೋಚರ ಶಕ್ತಿಗೆ ಬೆರಗಾಗದವರುಂಟೆ! ಅವಳ ಈ ಶಕ್ತಿ `ಮಾತೃ ಹೃದಯ'. ಜನ್ಮತಃ ಸಿದ್ಧಿಸಿದ ಈ ಶಕ್ತಿ ಕೆಲವರಲ್ಲಿ ಜಾಗೃತವಾಗುವುದೇ ಇಲ್ಲ. ಇನ್ನು ಕೆಲವರಲ್ಲಿ ಕಾಲಕ್ರಮೇಣ ಬಲಿತರೆ, ಮತ್ತೆ ಕೆಲವರಲ್ಲಿ ಸಮಯ ಸಂದಂತೆ ಸವೆಯುತ್ತದೆ. ಇವು ಲೋಕರೀತಿ. ಮಾತೃಹೃದಯ ಮಾತ್ರ ನಿಗೂಢ, ಅವಿಚ್ಛಿನ್ನ ಶಕ್ತಿ. `ಹೃದಯ ಭಾಷೆ'ಯ ಮೊದಲ ಹೆಜ್ಜೆ ಅಲ್ಲೇ, ಮಾತೆಯ ಮನೋಮಂಟಪದಲ್ಲಿ.

ಅಂಕುರಿಸಿದ ಜೀವದ ಮೊದಲ ಮಿಡಿತ ಅವಳಿಗಲ್ಲದೆ ಇನ್ನಾರಿಗೂ ತಿಳಿಯದಂತಹ ಸಂರಕ್ಷಿತ ಕೋಟೆಯಲ್ಲಿ, ಹಗಲೂ ಇರುಳೂ ತನ್ನ ಇಂದ್ರಿಯಾತೀತ ಸಂವೇದನೆಗಳಿಂದ ಸಂಭಾಷಿಸಿ, `ಕಂದನಿಗಾಗಿಯೇ ತನ್ನ ಜೀವ' ಎಂಬಷ್ಟರ ಮಟ್ಟಿಗೆ ತನ್ಮಯಳಾಗುವಳು, ತಾಯಿಯಾಗುವವಳು. ತುಡಿಯುವ ಜೀವವನ್ನು ಕೂಸಾಗಿಸಿ ಪ್ರೀತಿಯಿಂದ ಪ್ರೀತಿಸುವ ಕೈಗಳಿಗೆ ನೀಡುವಳು. ಕಾತರತೆಯಿಂದ ಕಾಯುವ ಹಿರಿಯ ಜೀವಗಳಿಗೆ `ಅಜ್ಜಿ-ಅಜ್ಜ'ನ ಪಟ್ಟ ದೊರಕಿಸುವಳು. "ಇವೆಲ್ಲ ಎಲ್ಲರಿಗೂ ತಿಳಿದಿರುವ ವಿಷಯವೇ, ಹೊಸತೇನು?" ಎಂದಿರಾ? ಸರಿ! ಈ ಮಾತೃಹೃದಯದ ಒಳಹೊಕ್ಕು ನೋಡಬಲ್ಲವರು ಯಾರು? ಪರಕಾಯಪ್ರವೇಶ ಕಲೆಯನ್ನು ಬಲ್ಲವರು, ಅಜನ ಪ್ರತಿಸ್ಪರ್ಧಿಗಳು, ಭೂಲೋಕದ ಬ್ರಹ್ಮರು; ಕವಿಗಳು. ಅಂಥ ಕವಿ ಪರಂಪರೆಯಲ್ಲಿ ಮಹಾಮಹಿಮರು ಆಗಿಹೋಗಿದ್ದಾರೆ, ಘಟಾನುಘಟಿಗಳು ಸಾಗಿಬಂದಿದ್ದಾರೆ. ಅಂತಹ ಶ್ರೇಷ್ಠ ಕೃತಿಗಳಲ್ಲೊಂದಾದ ರಾಮಾಯಣವನ್ನೂ ವಾಲ್ಮೀಕಿಯನ್ನೂ ಬಲ್ಲದ ಭಾರತೀಯನಿಲ್ಲ. ಆ ಮಹಾಕವಿ ಮಾತೃಹೃದಯದ ಸೂಕ್ಷ್ಮತೆಯ ಚಿತ್ರಣವನ್ನು ನೀಡಿದ ಸಂದರ್ಭಗಳಲ್ಲಿ ಎರಡನ್ನು ಕವಿ ಡಾ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು 1998ರ ಜೂನ್'ನಲ್ಲಿ ಒಮ್ಮೆ ಆಸಕ್ತರಿಗೆ ವಿವರಿಸಿದರು. ಆ ಎರಡು ಸಂದರ್ಭಗಳು ಹೀಗಿವೆ:

ಮೊದಲನೆಯದು, ಶ್ರೀರಾಮನಿಗೆ ಯೌವ್ವರಾಜ್ಯಾಭಿಷೇಕದ ನಿಶ್ಚಯವಾದಂದು. ಈ ಕರ್ಣಾನಂದಕರ ವಾರ್ತೆ ಅರಮನೆಯಲ್ಲೆಲ್ಲ ಹಬ್ಬಿತ್ತು. ಪ್ರಮುಖವಾಗಿ ಕೌಸಲ್ಯೆಯ ಅಂತಃಪುರ ವಿಶೇಷ ಸಡಗರದಲ್ಲಿತ್ತು. ಪಟ್ಟಮಹಿಷಿ ಕೌಸಲ್ಯಾದೇವಿ ರಾಜಮಾತೆಯಾಗುವಳು. ಇದಕ್ಕಿಂತ ಸಂಭ್ರಮ ಬೇಕೆ? ಇಂತಹ ವಾರ್ತೆ ಸುತ್ತೆಲ್ಲ ಹಬ್ಬಿರುವ ಹೊತ್ತು, ಪ್ರಪ್ರಥಮವಾಗಿ ಮಾತೃದೇವತೆಯ ಚರಣ ಘ್ರಾಣಿಸಿ ಆಶೀರ್ವಾದ ಪಡೆಯಲು ಬಂದ ಮರ್ಯಾದಾಪುರುಷೋತ್ತಮ. ಪತ್ನೀಸಹಿತನಾಗಿ ಪೊಡಮಟ್ಟುಕೊಂಡವನನ್ನು ಮೇಲೆತ್ತಿ, ನೆತ್ತಿಸವರಿ, ತುಂಬಿನಿಂತ ಕಂಗಳಲ್ಲಿ ಆತನ ಬಿಂಬಪ್ರತಿಬಿಂಬಗಳನ್ನು ನಿಲ್ಲಿಸಿಕೊಂಡ ಆಕೆ ಮೊದಲಾಗಿ ಕೇಳಿದ್ದೇನು! "ನೀನು ಉಂಡೆಯಾ, ಕಂದ?" ತಾಯಿಯಲ್ಲದೆ ಇನ್ನಾರೂ ಈ ಪ್ರಶ್ನೆ ಕೇಳಲಾರರು, ಅದೂ ಇಂಥಾ ಉನ್ಮತ್ತ ಸಂದರ್ಭದಲ್ಲಿ. ಪಕ್ಕದಲ್ಲಿ ಕೂರಿಸಿಕೊಂಡು ತನ್ನ ಕೈಯಾರ ಮಗ-ಸೊಸೆಗೆ ಉಣಬಡಿಸಿದಳು ಪಟ್ಟದರಸಿ, ಒಬ್ಬ ಮಾತೆಯಾಗಿ. ಆ ಸೂಕ್ಷ್ಮವನ್ನು ಹಿಡಿದ ಕವಿ ಧನ್ಯ.

ಎರಡನೆಯದು, ಜನನಿಬಿಡ ಅಯೋಧ್ಯೆಯನ್ನು ತೊರೆದು ಚಿತ್ರಕೂಟದಲ್ಲಿ ಸೀತಾಸಹಿತ ರಾಮ-ಲಕ್ಷ್ಮಣರು ಕುಟೀರ ಹೂಡಿದ್ದಾಗ.... ಅಣ್ಣನ ನೆಲೆಯನ್ನು ಪತ್ತೆಹಚ್ಚಿದ ಭ್ರಾತೃಪ್ರೇಮಿ ಭರತ ಅಲ್ಲಿಗೆ ಹೊರಟ, ಹಿಂಬಾಲಿಸಿದ ಪರಿವಾರ ಸಹಿತ. ದುಡುಕಿದ ತಮ್ಮನನ್ನು ಸುಮ್ಮನಾಗಿಸಿ, ಚಿಕ್ಕವರನ್ನು ಚೆಂದದಿಂದ ಸ್ವಾಗತಿಸಿ, ಪ್ರೀತಿಯಿಂದ ಆಲಂಗಿಸಿ, ಮಾತೆಯರಿಗೆ ಮಣಿದು, ತಂದೆಯ ಅಗಲಿಕೆಗೆ ನೊಂದು, ಶ್ರಾದ್ಧಕ್ರಿಯೆಗಾಗಿ ವಸಿಷ್ಠರಿಂದ ದೀಕ್ಷಿತನಾದ ಶ್ರೀರಾಮ. ಕ್ರಿಯಾವಿಧಿಗಳನ್ನೆಲ್ಲ ಪೂರೈಸಿ, ಮತ್ತೆ ಮಾತೆಯರ ಚರಣಗಳಿಗೆ ಎರಗಿದವನನ್ನು ಮೇಲೆತ್ತಿ ತಬ್ಬಿದರು, ಆಶೀರ್ವದಿಸಿದರು. ಕೊನೆಯಲ್ಲಿ ನಿಂತಿದ್ದ ಕೌಸಲ್ಯೆಗೆ ಮಗನ ಮುಖ ಕಾಣುತ್ತಿಲ್ಲ, ಕಂಬನಿಯ ಪೊರೆಯಾವರಿಸಿದೆ. ಪಾದಕ್ಕೆರಗಿದವನನ್ನು ಹೇಗೋ ಎತ್ತಿಕೊಂಡಳು, ನೆತ್ತಿ ಸವರಿದಳು, ಹಾರೈಕೆ ಗುಣುಗಿದಳು. ಆಗಲೇ ಅವನ ನಾರುಮಡಿಗೆ ಮೆತ್ತಿದ್ದ ಮಣ್ಣನ್ನು ಕಂಡು ಮೆಲುವಾಗಿ ಕೊಡಹಿದಳು. ನೆರೆದಿದ್ದ ಅಷ್ಟೂ ಮಂದಿಯ ದೃಷ್ಟಿಗೆ ಕಾಣದಿರುವಂತೆ, ಮರೆಯಲ್ಲಿ ನಾಜೂಕಾಗಿ ಸವರಿದಳು. ಮಗನ ಸ್ಥಿತಿಗೆ ತಾಯಿಯ ಹೃದಯ ಚೀರಿರಬೇಕು. ಅರಮನೆಯಲ್ಲಿ ಸಿಂಹಾಸನದ ಮೇಲೆ ಇರಬೇಕಾದವನು ಇಲ್ಲಿ ಕಾನನದ ಕಲ್ಲ ಮೇಲೆ! ಕೃಷ್ಣಾಜಿನದ ಮೇಲೆ ಕುಳಿತು ನಿತ್ಯಕ್ರಿಯಾವಿಧಿಗಳನ್ನು ನಡೆಸಬೇಕಾದವನು, ಇಲ್ಲಿ ಮಣ್ಣಿನಲ್ಲಿ! ಯಾವುದೇ ತಾಯಿಯ ಹೃದಯ ಇದನ್ನು ಸಹಿಸದು, ಆದರೆ ವಿಧಿಯಿಲ್ಲ. ಕಣ್ಣಿಗೆ ಕಂಡ ಮೃತ್ತಿಕೆಯನ್ನು ತೊಡೆಯಬಲ್ಲಳು, ಅಷ್ಟೇ.

ಇಂತಹ ಅನೇಕಾನೇಕ ಉದಾಹರಣೆಗಳನ್ನು ನಮ್ಮ ಮಹಾಕಾವ್ಯಗಳಲ್ಲಿ ಕಾಣಬಹುದು. ಕುಂತಿ ತನ್ನ ಭೀಮನಿಗೆ ವಿಶೇಷವಾಗಿ ತಿಂಡಿ-ತೀರ್ಥಗಳನ್ನು ತಯಾರಿಸಿ ನೀಡುತ್ತಿದ್ದಳು, ಆತ ಎಲ್ಲರಂತಲ್ಲವೆಂದು ಆಕೆಗೊಬ್ಬಳಿಗೇ ಗೊತ್ತು. ಬಕಾಸುರ ಸಂಹಾರಕ್ಕೆ ಭೀಮನನ್ನು ಕಳುಹಲು ಮುಂದಾದಾಗ, ಅವಳದು ತ್ಯಾಗಬುದ್ಧಿಯಲ್ಲ, ಭೀಮನಿಗಾಗಿ ಸ್ವಾರ್ಥ. ಬಕಾಸುರನಿಗಾಗಿ ನೀಡಲ್ಪಡುವ ಅಷ್ಟೂ ಆಹಾರ ತನ್ನ ಭೀಮನ ಹೊಟ್ಟೆಯನ್ನು ಒಮ್ಮೆ ತಂಪಾಗಿಸಬಲ್ಲದೆಂದು ಅವಳ ಹಂಚಿಕೆ, ಜೊತೆಗೆ ಅವನ ಅದಮ್ಯ ಶಕ್ತಿಯಲ್ಲಿನ ನಂಬಿಕೆ. ಕಂದನಿಗಾಗಿ ತಾಯಿ ಏನೂ ಮಾಡಬಲ್ಲಳಲ್ಲವೆ? ಅರ್ಜುನ ದ್ರೌಪದಿಯನ್ನು ಗೆದ್ದು ತಂದು, ತಾನೊಂದು ಅಮೂಲ್ಯ ಭಿಕ್ಷೆ ತಂದಿರುವುದಾಗಿ ಹೇಳಿದಾಗ, `ಎಲ್ಲರೂ ಸಮನಾಗಿ ಹಂಚಿಕೊಳ್ಳಿ' ಎಂದು ನುಡಿದದ್ದೂ ಆ ಹೃದಯವೇ, ನಂತರ ನೊಂದುಕೊಂಡಿದ್ದೂ ಅದೇ. ಆದರೆ ಇದೇ ಹೃದಯ ತನ್ನ ಚೊಚ್ಚಲ ಕಂದನನ್ನು ಹೇಗೆ ದೂರ ಮಾಡಿತು? ಅದು ಕವಿಯ ಕಾವ್ಯನೈಪುಣ್ಯತೆ ಎನ್ನೋಣವೆ? ಬೇಡ, ಈಗಲೂ ನಮ್ಮಲ್ಲೆಷ್ಟು ಹೆಣ್ಣುಮಕ್ಕಳು ತಮ್ಮ ಅನೈತಿಕ ಸಂತಾನವನ್ನು ಸಮಾಜದ ನಿಂದೆಗಳಿಗೆ ಹೆದರಿ ತ್ಯಜಿಸುವುದಿಲ್ಲ! ಇವರಿಗೆಲ್ಲ ಕುಂತಿ ಹಿರಿಯಕ್ಕ ಅನ್ನೋಣವೆ?

ಮಾತೃತ್ವದ ಮಾತು ಬಂದಾಗ ಗಾಂಧಾರಿಯನ್ನು ಹೊರಗುಳಿಸುವಂತಿಲ್ಲ. ಮಹಾಸಾಧ್ವಿ, ಪತಿವ್ರತೆ ಎಂದೆಲ್ಲ ಪಟ್ಟ ಹೊತ್ತ ಆಕೆ ಮಾತೆಯೂ ಹೌದು. ವಿಶ್ಲೇಷಣೆಗಳೇನೇ ಇರಲಿ, ಸುಯೋಧನಾದಿ ನೂರು ಮಂದಿ ಗಂಡುಮಕ್ಕಳ ತಾಯಿ ಎನಿಸಿಕೊಂಡಾಕೆ, ದುಶ್ಯಲೆಯ ಮಾತೆ. ತನ್ನ ಕರುಳಕುಡಿಗಳನ್ನು ಒಮ್ಮೆಯೂ ಕಣ್ಣಿಂದ ನೋಡಲಾರದ ಧರ್ಮಬಂಧನದಲ್ಲಿ ಸಿಲುಕಿದಾಕೆ. ಅವಳ ಮನಸ್ಸು ಅದೆಷ್ಟು ತುಡಿದಿರಬಹುದು! ಆದರೆ, ಅಷ್ಟು ವರ್ಷಗಳ ತನ್ನ ತಾಪಸ ಶಕ್ತಿಯನ್ನೆಲ್ಲ ಒಬ್ಬ ಮಗನಿಗೆ ಧಾರೆಯೆರೆಯಲು ಸಿದ್ಧಳಾಗಿಸಿದ್ದು ಅವಳ ಮಾತೃತ್ವ. ಆತನ ಹಠಸಾಧನೆಗಾಗಿ ಬೆಳೆದುನಿಂತ ಶೂರ-ವೀರ-ಪರಾಕ್ರಮಿಯಾದ ಮಗನನ್ನು ನಿರ್ವಸ್ತ್ರನಾಗಿ ಕಣ್ಣೆದುರು ಬರಹೇಳಿದ್ದಳಾಕೆ. ಶ್ರೀಕೃಷ್ಣನ ಕೈವಾಡದಿಂದ ಮಗನನ್ನು ಸಂಪೂರ್ಣ ವಜ್ರದೇಹಿಯಾಗಿಸಲು ಸಾಧ್ಯವಾಗದೇ ಹೋದಾಗ ನೊಂದುಕೊಂಡಳೆ? ವಿಧಿಯನ್ನು ಹಳಿದಳೆ? ಒಪ್ಪಿಕೊಂಡಳೆ? ಹಾಗೆಯೇ, ವನವಾಸ, ಅಜ್ಞಾತವಾಸಗಳಿಗೆಂದು ತೆರಳಿದ ದ್ರೌಪದಿ ತನ್ನೈದೂ ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟು ಹೊರಟಳಲ್ಲ, ಆಕೆಯಲ್ಲಿನ ತಾಯಿಯನ್ನು ಕವಿ ಗಮನಿಸಲೇ ಇಲ್ಲ. ಸುಭದ್ರೆಗಾದರೋ ತನ್ನ ಅಣ್ಣನ ಆಸರೆಯಿತ್ತು, ಮಗನ ಸಹವಾಸವಿತ್ತು. ದ್ರೌಪದಿಗೆ ಏನಿತ್ತು? ಕೊನೆಯಲ್ಲಿ ಮಗ ಅಭಿಮನ್ಯುವನ್ನು ಕಳೆದುಕೊಂಡ ಅರ್ಜುನ ಗೋಳಿಟ್ಟು ಅತ್ತದ್ದನ್ನು ಕಂಡ ದ್ರೌಪದಿಗೆ ತನ್ನೈದು ಮಕ್ಕಳಿಗಾಗಿ ಭೀಮನ ಹೊರತಾಗಿ ಯಾರೂ ಮರುಗದಾಗ ಹೇಗಾಗಿರಬೇಡ! ಇಲ್ಲೆಲ್ಲ ಕವಿ ಎತ್ತಿ ಹಿಡಿದದ್ದು ಕಲಿತನವನ್ನು, ಧರ್ಮವನ್ನು; ಮಾನವೀಯತೆಗೇ ಸ್ಥಾನವಿರಲಿಲ್ಲ, ಮತ್ತೆ ಮಾತೃತ್ವಕ್ಕೆಲ್ಲಿ!

ಇಂದಿನ ಸಮಾಜದಲ್ಲಿ, ಗಡಿಬಿಡಿಯ ಜೀವನದಲ್ಲಿ, ಎಷ್ಟು ಮಾತೆಯರಿಗೆ ತಮ್ಮ ಕರುಳಕುಡಿಗಳನ್ನು ಮುದ್ದಿಸಲು ಸಮಯವಿರುತ್ತದೆ? ಬೆಳಗ್ಗೆದ್ದು ಅವರನ್ನೂ ಹೊರಡಿಸಿಕೊಂಡು, ಬಹುತೇಕ ಅಟ್ಟಿಕೊಂಡು, ಹೊರನಡೆದರೆ ಸಂಜೆ ಹಿಂದಿರುಗಿದಾಗ ರಾತ್ರೆಯ ಊಟ ಮತ್ತು ಮರುದಿನದ ತಯಾರಿಗಳಿಗೆ ಅವಳ ಸಮಯ ಮೀಸಲು. ಇಂತಹ ಯಾಂತ್ರಿಕತೆಯಲ್ಲಿ ಕಳೆದುಹೋಗುವವರು ಯಾರು? ನಿಮ್ಮ ಹೃದಯದ ಭಾಷೆ ಯಾವುದು? ಎದೆಯ ಕದ ತಟ್ಟಿ ನೋಡಿ.
(ಮೇ-೨೦೦೨)
(ಡೆಟ್ರಾಯಿಟ್ ಪಂಪ ಕನ್ನಡ ಕೂಟದ ಸಹಯೋಗದೊಂದಿಗೆ, ಅಮೆರಿಕಾ ಕನ್ನಡ ಕೂಟಗಳ ಆಗರ- ಅಕ್ಕ -ದ ಎರಡನೇ ವಿಶ್ವಕನ್ನಡ ಸಮ್ಮೇಳನ-೨೦೦೨ರ ಸ್ಮರಣ ಸಂಚಿಕೆ 'ಸ್ಪಂದನ'ದಲ್ಲಿ ನನ್ನೀ ಲೇಖನ ಪ್ರಕಟವಾಗಿತ್ತು.)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 8:45 PM
Labels:

8 ಪತ್ರೋತ್ತರ:
Harish - ಹರೀಶ said...
ಚೆನ್ನಾಗಿ ಬಂದಿದೆ... ಆದರೆ ಒಂದು ವಿಷಯ...
"ಧರ್ಮ, ಅರ್ಥ, ಕಾಮ, ಮೋಕ್ಷ- ಈ ಯಾವ ಪುರುಷಾರ್ಥಗಳಲ್ಲೂ ನಿನ್ನನ್ನು ಮೀರಿ ನಡೆಯುವುದಿಲ್ಲ, ನಿನ್ನನ್ನು ಅಗಲಿ ಹೋಗುವುದಿಲ್ಲ, ನಿನ್ನ ಸಾಹಚರ್ಯ ಬಿಡುವುದಿಲ್ಲ." ಎಂದು ಬರೆದಿದ್ದೀರಿ."ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಾಮಿ" ಎಂದು ಹೇಳಲ್ಪಟ್ಟಿದೆಯೇ ವಿನಹ ಮೋಕ್ಷದ ಬಗ್ಗೆ ಎಲ್ಲೂ ಪ್ರಸ್ತಾಪಿಸಲಾಗಿಲ್ಲ. ಆ ರೀತಿ ಹೇಳುವುದು, ಭಾಷೆ ಕೊಡುವುದು ಅಸಾಧ್ಯ ಕೂಡ.. ಅಲ್ಲವೇ?
May 14, 2008 9:48 PM

ಸುಪ್ತದೀಪ್ತಿ suptadeepti said...
ನಮಸ್ಕಾರ ಹರೀಶ್, ಸ್ವಾಗತ.
ತಾತ್ವಿಕವಾಗಿ ಇದು ಅಸಾಧ್ಯ. ಆದರೆ, ನಮ್ಮ ನಂಬಿಕೆಯಂತೆ- 'ಪತಿ-ಪತ್ನಿ ಸಂಬಂಧ ಏಳೇಳು ಜನ್ಮಗಳದ್ದು ಅಂತಾದಾಗ, ಮೋಕ್ಷದ ದಾರಿಯೂ ಜೊತೆಯಲ್ಲೇ ಸಾಗಬೇಕಾದ ಹಾದಿಯಾಗಿರುವಾಗ, ಮೋಕ್ಷದಲ್ಲೂ ಜೊತೆಯಾಗಿರುವುದು ಯಾಕೆ ಸಾಧ್ಯವಿಲ್ಲ'- ಅನ್ನುವ ತರ್ಕದ ಮೇಲೆ ಹಾಗೆ ಬರೆದೆ. ಮದುವೆಯ ಮಂತ್ರದ ಆಧಾರದ ಮೇಲಲ್ಲ.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.
May 14, 2008 10:13 PM

sunaath said...
ಜ್ಯೋತಿ,
ಮಾತೃಹೃದಯದ ಬಗೆಗೆ ಬಹಳ ಚೆನ್ನಾಗಿ ಬರೆದಿರುವಿ.

ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಅಸಿಸ್ಟಂಟ ಕಮಿಶನರ ಆದಾಗಿನ ಘಟನೆಯೊಂದನ್ನು ನೀನೂ ಓದಿರಬಹುದು. ಅವರು ತಮ್ಮ ಮನೆಯಿಂದ ಕಚೇರಿಗೆ ಹೊರಡುವ ತರಾತುರಿಯಲ್ಲಿದ್ದಾರೆ. ಅವರ ತಾಯಿ "ಅಯ್ಯೊ, ಮಗೂ ಎಲ್ಹೋಯ್ತು? ಸರಿಯಾಗಿ ಊಟಾನೇ ಮಾಡ್ಲಿಲ್ಲ" ಎಂದು ಇವರನ್ನು ಹುಡುಕುತ್ತಿದ್ದರಂತೆ!
-ಸುನಾಥಕಾಕಾ
May 15, 2008 10:27 AM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಕಾಕಾ.
ಮಾಸ್ತಿಯವರ ಅಮ್ಮನ ಬಗ್ಗೆ ಗೊತ್ತಿರಲಿಲ್ಲ. ಆ ತಲೆಮಾರಿನ, ಮತ್ತು ನಂತರದ ಒಂದೆರಡು ತಲೆಮಾರಿನ ಬಹುತೇಕ ಅಮ್ಮಂದಿರು ಇದ್ದದ್ದೇ/ ಇರುವುದೇ ಹಾಗೆ, ಅಲ್ಲವೆ?
May 15, 2008 11:10 AM

ತುರಂಗ said...
ವಾಲ್ಮೀಕಿರಾಮಾಯಣದ ಅಯೋಧ್ಯಾಕಾಂಡದ ಎರಡು ಸಂದರ್ಭಗಳ ಬಗ್ಗೆ ನೀವು ಬರೆದಿರುವುದು ಸ್ವಾರಸ್ಯವಾಗಿದೆ. ಆದರೆ, ನನ್ನ ರಾಮಾಯಣದ ಆವೃತ್ತಿಯಲ್ಲಿ ಇವನ್ನು ಈ ರೀತಿ ಹೇಳಿಲ್ಲ. ಮೊದಲನೆಯ ಸಂದರ್ಭದ ಶ್ಲೋಕಗಳು ಹೀಗಿವೆ -(ಅಯೋಧ್ಯಾಕಾಂಡನ ನಾಲ್ಕನೆಯ ಸರ್ಗದ ಶ್ಲೋಕಗಳು)
ಇತ್ಯುಕ್ತಃ ಸೋಽಭ್ಯನುಜ್ಞಾತಃ ಶ್ವೋಭಾವಿನ್ಯಭಿಷೇಚನೇ
ವ್ರಜೇತಿ ರಾಮಃ ಪಿತರಮಭಿವಾದ್ಯಾಭ್ಯಯಾದ್‍ಗೃಹಮ್
ಪ್ರವಿಶ್ಯ ಚಾತ್ಮನೋ ವೇಶ್ಮ ರಾಜ್ಞೋದ್ದಿಷ್ಟೇಽಭಿಷೇಚನೇ
ತತ್ಕ್ಷಣೇನ ಚ ನಿಷ್ಕ್ರಮ್ಯ ಮಾತುರಂತಃಪುರಂ ಯಯೌ
ತತ್ರ ತಾಂ ಪ್ರವಣಾಮೇವ ಮಾತರಂ ಕ್ಷೌಮವಾಸಿನೀಮ್
ವಾಗ್ಯತಾಂ ದೇವತಾಗಾರೇ ದದರ್ಶಾಯಾಚತೀಂ ಶ್ರಿಯಮ್
ಪ್ರಾಗೇವ ಚಾಗತಾ ತತ್ರ ಸುಮಿತ್ರಾ ಲಕ್ಷ್ಮಣಸ್ತಥಾ
ಸೀತಾ ಚಾನಾಯಿತಾ ಶ್ರುತ್ವಾ ಪ್ರಿಯಂ ರಾಮಾಭಿಷೇಚನಮ್
ತಸ್ಮಿನ್ ಕಾಲೇ ಹಿ ಕೌಸಲ್ಯಾ ತಸ್ಥಾವಾಮೀಲಿತೇಕ್ಷಣಾ
ಸುಮಿತ್ರಯಾನ್ವಾಸ್ಯಮಾಣಾ ಸೀತಯಾ ಲಕ್ಷ್ಮಣೇನ ಚ
ಶ್ರುತ್ವಾ ತು ಪುಷ್ಯೇ ಪುತ್ರಸ್ಯ ಯೌವರಾಜ್ಯಾಭಿಷೇಚನಮ್
ಪ್ರಾಣಾಯಾಮೇನ ಪುರುಷಂ ಧ್ಯಾಯಮಾನಾ ಜನಾರ್ದನಮ್
ತಥಾ ಸನಿಯಮಾಮೇವ ಸೋಽಭಿಗಮ್ಯಾಭಿವಾದ್ಯ ಚ
ಉವಾಚ ವಚನಂ ರಾಮೋ ಹರ್ಷಯಂಸ್ತಾಮನಿಂದಿತಾಮ್
ಅಂಬ ಪಿತ್ರಾ ನಿಯುಕ್ತೋಽಸ್ಮಿ ಪ್ರಜಾಪಾಲನಕರ್ಮಣಿ
ಭವಿತಾ ಶ್ವೋಽಭಿಷೇಕೋಽಯಂ ಯಥಾ ಮೇ ಶಾಸನಂ ಪಿತುಃ
ಸೀತಯಾಪ್ಯುಪವಸ್ತವ್ಯಾ ರಜನೀಯಂ ಮಯಾ ಸಹ
ಏವಮೃತ್ವಿಗುಪಾಧ್ಯಾಯೈಃ ಸಹ ಮಾಮುಕ್ತವಾನ್ ಪಿತಾ
ಯಾನಿ ಯಾನ್ಯತ್ರ ಯೋಗ್ಯಾನಿ ಶ್ವೋಭಾವಿನ್ಯಭಿಷೇಚನೇ
ತಾನಿ ಮೇ ಮಂಗಲಾನ್ಯದ್ಯ ವೈದೇಹ್ಯಾಶ್ಚೈವ ಕಾರಯ
ಏತತ್ಶ್ರುತ್ವಾ ತು ಕೌಸಲ್ಯಾ ...
ಇಲ್ಲಿ ರಾಮ ಬಂದು ಅವನ ತಾಯಿಗೆ, "ಸೀತಯಾಪ್ಯುಪವಸ್ತವ್ಯಾ...", ಅಂದರೆ ಸೀತೆಯೊಡನೆ ಈ ರಾತ್ರೆ ನಾನು ಉಪವಾಸ ಇರಬೇಕು ಎಂದು ಹೇಳುತ್ತಾನೆ. ಕೌಸಲ್ಯೆ ರಾಮ ಸೀತೆಯರನ್ನು ಕೂರಿಸಿ ಉಣಬಡಿಸಿದ ವಿಷಯ ಇಲ್ಲಿಲ್ಲ.

ಎರಡನೆಯ ಸಂದರ್ಭದ ಶ್ಲೋಕಗಳು ಈ ರೀತಿ ಇವೆ -
...
ದದೃಶುಶ್ಚಾಶ್ರಮೇ ರಾಮಂ ಸ್ವರ್ಗಚ್ಯುತಮಿವಾಮರಮ್
ಸರ್ವಭೋಗೈಃ ಪರಿತ್ಯಕ್ತಂ ರಾಮಂ ಸಂಪ್ರೇಕ್ಷ್ಯ ಮಾತರಃ
ಆರ್ತಾ ಮುಮುಚುರಶ್ರೂಣಿ ಸಸ್ವರಂ ಶೋಕಕರ್ಶಿತಾಃ
ತಾಸಾಂ ರಾಮಃ ಸಮುತ್ಥಾಯ ಜಗ್ರಾಹ ಚರಣಾನ್ ಶುಭಾನ್
ಮಾತೄಣಾಂ ಮನುಜವ್ಯಾಘ್ರಃ ಸರ್ವಾಸಾಂ ಸತ್ಯಸಂಗರಃ
ತಾಃ ಪಾಣಿಭಿಃ ಸುಖಸ್ಪರ್ಶೈಃ ಮೃದ್ವಂಗುಲಿತಲೈಃ ಶುಭೈಃ
ಪ್ರಮಮಾರ್ಜೂ ರಜಃ ಪೃಷ್ಟಾದ್ರಾಮಸ್ಯಾಯತಲೋಚನಾಃ

ಇಲ್ಲಿ ರಾಮನ ಧೂಳನ್ನು ಕೊಡವಿದವರು ಮಾತರಃ, ಅಂದರೆ ಬಹುವಚನದ (ದ್ವಿವಚನವೂ ಅಲ್ಲದ!) ತಾಯಂದಿರು! ಅಂದರೆ, ಕೌಸಲ್ಯೆ ಮಾತ್ರ ಅಲ್ಲ, ಕೌಸಲ್ಯೆ ಸುಮಿತ್ರೆಯರೂ ಅಲ್ಲ, ಕೌಸಲ್ಯೆ, ಸುಮಿತ್ರೆ, ಕೈಕೇಯಿಯರು!
ಈ ಸಂದರ್ಭಗಳು ಇಲ್ಲಿ ಕನಿಷ್ಠ ಪಕ್ಷ ನನ್ನ ರಾಮಾಯಣದ ಆವೃತ್ತಿಯಿಂದ ಬೇರೆಯಾಗಿ ಇಳಿದು ಬಂದಿವೆ. ಇವು ಬೇರೆ ಯಾವುದಾದರೂ ರಾಮಾಯಣದವಾಗಿರಬಹುದು.
May 17, 2008 12:24 PM

ಸುಪ್ತದೀಪ್ತಿ suptadeepti said...
ತುರಂಗ, ನಮಸ್ಕಾರ. ಸ್ವಾಗತ.
ನಿಮ್ಮ ವಿವರಣೆಗೆ, ಉದಾಹರಣೆಗೆ ಧನ್ಯವಾದಗಳು.
ನಾನಿಲ್ಲಿ ಬರೆದದ್ದು ಡಾ. ಲಕ್ಷ್ಮೀನಾರಾಯಣ ಭಟ್ಟರ ಭಾಷಣದ ತುಣುಕು. ಯಾವ ರಾಮಾಯಣದಲ್ಲಿ ಈ ಸಂದರ್ಭಗಳು ವರ್ಣಿಸಲ್ಪಟ್ಟಿದ್ದವು ಎಂಬುದು ನಾನರಿಯೆ.
May 17, 2008 1:17 PM

sritri said...
ದುಡಿಮೆಯ ಬೆನ್ನುಹತ್ತಿ ಓಡಬೇಕಾಗಿರುವ ಇಂದಿನ ಮಾತಾಪಿತರಿಗೆ ಹೃದಯದ ಭಾಷೆ ಇರಲಿ, ಮಕ್ಕಳ ಬಾಲಭಾಷೆಯನ್ನೂ ಕೇಳಿಸಿಕೊಳ್ಳಲು ಪುರುಸೊತ್ತಿಲ್ಲವಾಗಿದೆ. ಮಕ್ಕಳನ್ನು ಪ್ರೀತಿಸುವುದು ಎಂದರೆ, ಅವರು ಕೇಳಿದ್ದನ್ನು ಕೊಡಿಸುವುದು ಎಂಬ ಯಾಂತ್ರಿಕ ಯುಗ ಬಂದಿದೆ. ಜ್ಯೋತಿ, ಸುಂದರ ಭಾವನೆಗಳನ್ನು ಹೊರಹೊಮ್ಮಿಸುವ ಸೊಗಸಾದ ಲೇಖನಕ್ಕೆ ಅಭಿನಂದನೆ.
May 18, 2008 10:29 AM

ಸುಪ್ತದೀಪ್ತಿ suptadeepti said...
ಹೌದು ವೇಣಿ. ಯಾಂತ್ರಿಕ ಬದುಕಿನ ವೇಗದೊಂದಿಗೆ ಓಡುತ್ತಿರುವ ಎಲ್ಲ ಹೆತ್ತವರ/ ಪೋಷಕರ ದುಗುಡವೂ ಅದೇ ಇರಬಹುದು... ಕೆಲವರಿಗೆ ಈ ವೇಗದ ಬದುಕು ಅನಿವಾರ್ಯವಾದರೆ ಇನ್ನು ಕೆಲವರಿಗೆ ಪ್ರತಿಷ್ಠೆಯ ಸಂಕೇತವಾಗಿರುವುದು ಮಾತ್ರ ಆಧುನಿಕತೆಯ ದುರಂತ.
ಪ್ರತಿಕ್ರಿಯೆಗೆ ಧನ್ಯವಾದಗಳು.
May 18, 2008 5:29 PM

ಗುರಿ

Sunday, May 11, 2008

ಮತ್ತೆ ಅಮ್ಮನೆಡೆಗೆ, ಜೀವಕೊಟ್ಟ ಉಡಿಗೆ,
ಮಲಗಲೊಮ್ಮೆ ಮಡಿಲಿನೊಳಗೆ, ಮಣಿಯಲವಳ ಅಡಿಗೆ...


ಗುರುತರಿಯದ ಹಾದಿಯಲ್ಲಿ
ನಡೆದ ಒಂದು ಪಯಣದಲ್ಲಿ
ಪಾದ ತಳದ ಗೆರೆಗಳು
ಬಾಳ ದಾರಿ ಅರೆಗಳು

ತಿರುತಿರುಗಿದ ಅಲೆತದಲ್ಲಿ
ಮರಳಿ ಹೊರಳಿ ಮೊರೆತದಲ್ಲಿ
ಕಂಡ ಕನಸಿನೆಳೆಗಳು
ಉಂಡ ಹರುಷದಲೆಗಳು

ತೇಗಿದಾಗ ಎದ್ದು ನಡೆದು
ಬಾಗಿದಾಗ ಮತ್ತೆ ಪಡೆದು
ಬಳಲಿ ಗೆದ್ದ ಕ್ಷಣಗಳು
ಅಳಲ ಮರೆವ ಮನಗಳು

ಮುಂದೆ ಇರುವ ತಿರುವ ನೆನೆದು
ನಡೆಯದಿರುವ ತಿಟ್ಟ ಒಡೆದು
ಸಾಗುವವರು ಕಲಿಗಳು
ಛಲವ ಬಿಡದ ಹುಲಿಗಳು

ಮತ್ತೆ ಮತ್ತೆ ಅಮ್ಮನುಡಿಗೆ
ಸೆಳೆತವಿಹುದು ಮಣ್ಣಿನೆಡೆಗೆ
ಚಿತ್ತ ಒಂದು ದಿಕ್ಕಿಗೆ
ಉಸಿರ ಹಾಸು ಅಲ್ಲಿಗೆ
(೧೮-ಡಿಸೆಂಬರ್-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:01 AM
Labels: ,

13 ಪತ್ರೋತ್ತರ:
ಶ್ರೀವತ್ಸ ಜೋಶಿ said...
ಕವನವೆಂದರೆ ಇದು!ಚೆನ್ನಾಗಿದೆ.
May 11, 2008 4:25 AM

ಮನಸ್ವಿನಿ said...
ಚಂದ ಇದೆ ಈ ಕವನ. ರಾಗ ಸಂಯೋಜನೆಗೆ ರೆಡಿ ಇದ್ದ ಹಾಗಿದೆ.
May 11, 2008 8:35 AM

ಸುಪ್ತದೀಪ್ತಿ suptadeepti said...
ಮೆಚ್ಚುಗೆಗೆ ಧನ್ಯವಾದಗಳು ಶ್ರೀವತ್ಸ ಮತ್ತು ಮನಸ್ವಿನಿ.
ರಾಗ ಸಂಯೋಜಿಸಿ ಹಾಡ್ತಿರು, ಕೇಳೋದಕ್ಕೆ ಬರ್ತೇನೆ, ಸು.
May 11, 2008 7:35 PM

ತೇಜಸ್ವಿನಿ ಹೆಗಡೆ said...
ಅಕ್ಕಾ,
ಸ್ಫೂರ್ತಿ ನೀಡುವ ಕವನ..
ಮುಂದೆ ಇರುವ ತಿರುವ ನೆನೆದು
ನಡೆಯದಿರುವ ತಿಟ್ಟ ಒಡೆದು
ಸಾಗುವವರು ಕಲಿಗಳು
ಛಲವ ಬಿಡದ ಹುಲಿಗಳು

ಈ ಸಾಲುಗಳನ್ನು ಸದಾ ನೆನಪಿಟ್ಟುಕೊಳ್ಳುವೆ.
May 12, 2008 3:23 AM

ಸುಪ್ತದೀಪ್ತಿ suptadeepti said...
ಧನ್ಯವಾದ ತೇಜು. ಬ್ಲಾಗ್ ಲೋಕಕ್ಕೆ ಮರುಸ್ವಾಗತ.
May 12, 2008 10:29 AM

ಶಾಂತಲಾ ಭಂಡಿ said...
ಸುಪ್ತದೀಪ್ತಿಯವರೆ...
ಒಂದೇ ಒಂದು ಸರಳ ಸಾಲಿನ ಹಾಗೆ ಇಡಿಯ ಕವಿತೆ! ಓದಿದರೆ ಸಾಕು, ಸುಮ್ಮನೆ ತನ್ನರ್ಥವ ನನ್ನಂಥವಗೂ ತಿಳಿಸಿಬಿಡುವ ಹಾಗೆ. ಬರೆಯುತ್ತಲಿರಿ. ಓದಿಕೊಂಡಿದ್ದುಬಿಡುತ್ತೇನೆ.
May 12, 2008 11:35 AM

ಸುಪ್ತದೀಪ್ತಿ suptadeepti said...
ಧನ್ಯವಾದ ಶಾಂತಲಾ. ನಾನು ಬರೆಯುತ್ತೇನೆ, ಅದೊಂದು ತೆವಲು. ತಪ್ಪಿಸಿಕೊಳ್ಳಲಾರೆ. ಓದಲು ನೀವೆಲ್ಲ ಇದ್ದೀರಲ್ಲ, ಸಾಕು.
May 12, 2008 1:30 PM

Anonymous said...
cenaagide. eega oodide
-mala
May 12, 2008 5:16 PM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಮಾಲಾ.
May 12, 2008 9:42 PM

Anonymous said...
ಇಲ್ಲಿಯವರೆಗಿನ ಬದುಕನ್ನ ಹೊರಳಿ ನೋಡುತ್ತಲೇ, ಕಾಡುವ ನೆನಪುಗಳೊಂದಿಗೆ ಮುಂದಿನ ದಿನಗಳನ್ನ ಎದುರುಗೊಳ್ಳುವ ಬಗೆಯನ್ನ ಸರಳ ಸಾಲುಗಳಲ್ಲಿ ಬಿಂಬಿಸಿದ್ದೀರಿ.
ಕವನ ತುಂಬಾ ಚೆನ್ನಾಗಿದೆ.
ಶುಭವಾಗಲಿ,
ಮೋಹನ ಬಿಸಲೇಹಳ್ಳಿ
May 13, 2008 8:27 PM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಮೋಹನ್
May 13, 2008 8:28 PM

sunaath said...
ಮನಸ್ಸನ್ನು ಗೆದ್ದುಕೊಳ್ಳುತ್ತಿದೆ ಈ ಕವನ. ಅಭಿನಂದನೆಗಳು, ಜ್ಯೋತಿ.
-ಸುನಾಥ ಕಾಕಾ
May 15, 2008 10:20 AM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಕಾಕಾ. ನೀವೂ ಹೀಗೆ ಹೊಗಳಿದರೆ ನನಗೆ ಕೊಂಬು ಮೂಡಬಹುದು.
May 15, 2008 11:03 AM