ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 29 November, 2010

ಸುಮ್ಮನೆ ನೋಡಿದಾಗ...೦೫

ಮರುದಿನ ಹೊಸ ಕಥೆಯನ್ನು ನೇಹಾಳ ಕೈಗೆ ರವಾನಿಸಿದೆ. ಮಧ್ಯಾಹ್ನದ ಊಟ ಮುಗಿಸಿ ಮೈದಾನದ ಮರದಡಿಗೆ ಸಾಗಿದೆವು. ಹೊಸ ಕಥೆಯ ಓದುವಿಕೆಯಲ್ಲಿ ಅಲ್ಲಿನ ಅಳಿಲು ಮತ್ತು ಗುಬ್ಬಚ್ಚಿಗಳೂ ಭಾಗಿಯಾದವು. ಎಲ್ಲೋ ಕಳೆದುಹೋಗಿದ್ದ ಎರಡು ಮನಸ್ಸುಗಳನ್ನು ಅಳಿಲು ಕಿಚಕಿಚ ಕಿರುಚಾಡಿ ಎಚ್ಚರಿಸಿತು. ಮೈದಾನದಲ್ಲಿ ಕ್ರಿಕೆಟ್ ಆಡಲು ಹುಡುಗರ ಗುಂಪು ಬರುತ್ತಿತ್ತು. ಕ್ಲಾಸುಗಳೆಲ್ಲ ಮುಗಿದೇಹೋಗಿದ್ದವು. ಸಂಜೆ ಐದಾಗಿತ್ತು. ಮೊತ್ತ ಮೊದಲ ಬಾರಿಗೆ ನಾವಿಬ್ಬರೂ ತರಗತಿಗಳಿಗೆ ಚಕ್ಕರ್ ಹಾಕಿದ್ದೆವು.

ನೇಹಾ ಕಿಚಾಯಿಸಿದಳು: ‘ನೋಡಿದ್ಯಾ ರೊಮ್ಯಾಂಟಿಕ್ ಲಹರಿ ಹೇಗಿರ್ತದೇಂತ? ಈವರೆಗೂ ಕ್ಲಾಸ್ ತಪ್ಪಿಸದ ನಾವಿಬ್ರೂ ಅದ್ರ ಹೊನಲಲ್ಲಿ ಮುಳುಗಿಹೋಗಿದ್ದೆವು ಅಂದ್ರೆ ಇನ್ನು ಅದೇ ಗುಂಗಿನಲ್ಲಿ ಹಾರಾಡುವವರ ಗತಿಯೇನು? ಗೊತ್ತಾಯ್ತಾ? ಅದ್ಕೇ ಹೇಳಿದ್ದು ರೊಮ್ಯಾಂಟಿಕ್ ಬರೀ ಅಂತ...’ ಸುಮ್ಮನೇ ಕೋಲೇಬಸವನ ಹಾಗೆ ತಲೆಹಾಕಿ ಹೆಜ್ಜೆ ಹಾಕಿದೆ. ನಿಜವಾಗಿಯೂ ನನ್ನ ಒಂದು ಭಾಗವನ್ನು ನಾನು ಕಥೆಯೊಳಗೆ ಕಳೆದುಕೊಂಡಿದ್ದೆ. ಇದನ್ನು ಬರೆದವಳು ನಾನೇನಾ? ನಂಬಿಕೆಯಿರಲೇ ಇಲ್ಲ.

ಯಾವುದೋ ಭ್ರಮಾಲೋಕದಲ್ಲಿ ತೇಲುತ್ತಾ ಮನೆಹೊಕ್ಕಿದವಳಿಗೆ ಮಾಮೂಲು ಸ್ವಾಗತ ಕಾದಿತ್ತು.
‘ಯಾಕಿಷ್ಟು ತಡ? ಎಲ್ಲಿ ಅಲೆದಾಡ್ತಿದ್ದಿ ಇಷ್ಟೊತ್ತು ಬೀದಿ ಬಸವಿ ಥರಾ? ನಿಂಗೇನು ಹೇಳುವವ್ರು ಕೇಳುವವ್ರು ಯಾರೂ ಇಲ್ವಾ? ಮರ್ಯಾದೆಯಿಂದ ಕಾಲೇಜ್ ಬಿಟ್ಟ ಕೂಡ್ಲೇ ಮನೆಗೆ ಬರಬಾರ್ದಾ? ರಸ್ತೆ ಗಸ್ತು ಹೊಡೀಲಿಕ್ಕೆ ಯಾರ್ ಹೇಳಿದ್ರು?...’
ಮುಂದುವರೀತಾ ಇತ್ತು ನಿರರ್ಗಳ ‘ಬೌಗುಳ’. ಅಮ್ಮನಿಗೆ ಹೀಗೆಲ್ಲ ಹೇಳಬಾರದು ಅನ್ನುವ ವಿವೇಚನೆ ಇದ್ದರೂ ಕೆಲವಾರು ವರ್ಷಗಳಿಂದ ಅವರ ಅವ್ಯಾಹತ ಬೌಬೌಬೈಗಳನ್ನು ಕೇಳೀಕೇಳೀ ರೋಸಿಹೋಗಿತ್ತು ಮನಸ್ಸು. ಅದ್ಕೇ ನನ್ನೊಳಗಿನ ಸ್ವತಂತ್ರ ಸ್ವಂತಿಕೆ ಕಥೆಯೊಳಗೆ ಬಿಚ್ಚಿಕೊಂಡಿತ್ತೆನ್ನುವುದು ಹೊಳೆಯಿತು. ‘ಅದಕ್ಕಾಗಿಯಾದರೂ ಅಮ್ಮನಿಗೆ ಥ್ಯಾಂಕ್ಸ್ ಹೇಳ್ಬೇಕು ನೀನು’ ಅಂತ ನೇಹಾ ಹೇಳಬಹುದು ಎನ್ನುವ ಊಹೆಯಿಂದ ನಗುವೇ ಬಂತು. ಬಚ್ಚಲುಮನೆಯಲ್ಲಿ ಕೈಕಾಲು ತೊಳೆಯುತ್ತಿದ್ದ ಕಾರಣ ನನ್ನ ನಗು ಅಮ್ಮನಿಗೆ ಕಾಣಲಿಲ್ಲ. ಇನ್ನೊಂದು ಅವಾಂತರಕ್ಕೆ ಅವಕಾಶವಾಗಲಿಲ್ಲ.

ರಾತ್ರೆಯೆಲ್ಲ ಮತ್ತೆ ಅದೇ ಕನಸು. ಕಥಾನಾಯಕಿಯೇ ನಾನಾದಂತೆ... ಹರ್ಷಣ್ಣ ನನಗಾಗಿ ಗುಲಾಬಿ ರಂಗಿನ ಚಿತ್ತಾರವುಳ್ಳ ಬಿಳೀ ಸಲ್ವಾರ್ ಬಾಂಬೇಯಿಂದ ತಂದಂತೆ... ಅದನ್ನು ಧರಿಸಿ ನಾನು ಮೋಡಗಳಲ್ಲಿ ತೇಲುತ್ತಾ ಸುಂದರ ರಾಜಕುಮಾರನೊಬ್ಬನನ್ನು ಭೇಟಿಯಾದಂತೆ... ಅರೇ... ಅವನು ನನ್ನ ಕ್ಲಾಸ್‍ಮೇಟ್ ಶರತ್‍ನ ಕಸಿನ್ ಅಲ್ವಾ? ಶಿವಮೊಗ್ಗದವನು! ಅವನ ಹೆಸರೇನು?...

‘ಏ ಕತ್ತೆ! ಏಳು. ಮನೆಕೆಲ್ಸ ಮಾಡ್ಲಿಕ್ಕೆ ನಿನ್ನತ್ತೆ ಬರ್ತಾಳಾ? ಏಳು ಮೇಲೆ...’
ಅಮ್ಮನ ಪಾದ ನನ್ನ ಎಡಗೈಯನ್ನು ತಿವಿಯುತ್ತಿತ್ತು. ನೇಹಾ ಮತ್ತು ಶರತ್ ನನ್ನ ಮನಸ್ಸಿನಲ್ಲಿ ಅಡಗಿಕೊಂಡರು. ಅವರಿಬ್ಬರ ಬೆನ್ನ ಹಿಂದೆ ನನ್ನ ರಾಜಕುಮಾರ. ಅವನನ್ನು ಸಂಪರ್ಕಿಸಲೇ? ಹೇಗೆ? ಯಾಕೆ? ನನ್ನ ಭ್ರಾಂತಿಯೊಳಗೆ ಅವನ್ಯಾಕೆ ತೆರೆದುಕೊಂಡ? ಮೊದಲೇ ನನ್ನ ಮನಸ್ಸಿನಲ್ಲಿ ಅವನಿದ್ದನೆ? ಕಳೆದ ವರ್ಷ ಕಾಲೇಜ್ ಡೇ ಸಂದರ್ಭದಲ್ಲಿ ಅವನನ್ನು ನೋಡಿದ್ದೇನೋ ನಿಜ. ಅಲ್ಲಿಗೇ ನಿಂತಿತ್ತು ಅದು. ಮಂಗಳೂರಲ್ಲಿ ಅಲೋಶಿಯಸ್ ಕಾಲೇಜಿನಲ್ಲಿ ಕೆಮಿಸ್ಟ್ರಿ ಲೆಕ್ಚರರ್ ಆತ.

‘ವಸಂತ್’! ಬೆಳಕೊಂದು ಮನದೊಳಗೆ ನುಗ್ಗಿತೆ? ಪಾದಗಳಿಗೆ ಗೆಜ್ಜೆ ಯಾರು ಕಟ್ಟಿದರು? ಖಾಲಿ ಜಡೆಯ ಬುಡದಲ್ಲಿ ಮಲ್ಲಿಗೆಯ ಘಮ ಎಲ್ಲಿಂದ? ಹೊಸಗಾಳಿಯ ಅಲೆಯೇರಿ ಮನೆಗೆಲಸ ಮುಗಿಸಿಕೊಂಡು ಕಾಲೇಜಿಗೆ ಬಂದಾಗ ನೇಹಾ ನನ್ನತ್ತ ನೋಡಿದ ನೋಟಕ್ಕೆ ಏನಾದರೂ ಬೇರೆ ಅರ್ಥವಿದೆಯೆ? ಮಾಮೂಲಿನಂತೆ ಇರುವ ಪ್ರಯತ್ನ ವಿಫಲವಾಗುತ್ತಿತ್ತು. ಶರತ್ ಕಡೆ ಕಣ್ಣು ಹಾಯಿಸಲೂ ಸಾಧ್ಯವಾಗುತ್ತಿಲ್ಲ, ಅವನ ಕಸಿನ್ ನನ್ನೊಳಗೆ ಇರುವುದನ್ನು ಅವನೇ ಕಂಡರೆ?. ನೋಟ್ಸ್ ಕೇಳುತ್ತಾ ನನ್ನೆದುರು ನಿಂತವನಿಗೆ ನನ್ನ ಕೊಡೆ ಕೊಟ್ಟು ನಗೆಗೀಡಾದೆ. ಇವತ್ತು ಶುಕ್ರವಾರ. ಮಧ್ಯಾಹ್ನದ ನಂತ್ರ ನಮಗೆ ಯಾವುದೇ ಕ್ಲಾಸಸ್ ಇಲ್ಲ. ಬೆಳಗಿನ ತರಗತಿಗಳನ್ನು ಮುಗಿಸಿ ನೇಹಾ ಮನೆಗೇ ಹೋಗುವ ಪರಿಪಾಠ. ನಿಟ್ಟುಸಿರು ಬಿಟ್ಟು ಪಾಠಗಳ ಕಡೆ ಗಮನ ಕೊಡಲು ಪ್ರಯತ್ನಿಸಿದೆ. ಒಳಗಿನ ಕಾವು ಉಸಿರುಗಳಲ್ಲಿ ಹೊರಹರಿದು ಕೆನ್ನೆಗಳಿಗೆ ಜ್ವರವೇರುತ್ತಲೇ ಇತ್ತು. ನೇಹಾಳ ಮನೆ ತಲುಪಿದಾಗ ಜಾಜಿ ಮಂಟಪದ ನೆರಳೂ ಉಸಿರ್ಗರೆಯುತ್ತಿತ್ತೆ?

Monday 22 November, 2010

ಸುಮ್ಮನೆ ನೋಡಿದಾಗ...೦೪

ಈ ಬೆಳಗು ನನಗೆ ಎಂದಿನಂತಿಲ್ಲ. ನನ್ನ ಉತ್ಸಾಹಕ್ಕೆ ಕಾರಣ ಹುಡುಕಬೇಕಿರಲಿಲ್ಲ. ಅಮ್ಮನ ವಕ್ರನೋಟ ನನ್ನನ್ನು ತಾಗಲೇ ಇಲ್ಲ. ಕಾಲೇಜಿನ ಕಡೆಗೆ ಕುಣಿಹೆಜ್ಜೆ ಹಾಕಿದೆ. ಪಾದದ ಸುತ್ತ ಇಲ್ಲದ ಗೆಜ್ಜೆಸದ್ದು ಎದೆಯಲ್ಲಿ. ಕಥೆಯ ಹಸ್ತಪ್ರತಿ ಕೈಯಲ್ಲಿ- ಸಸ್ಯಶಾಸ್ತ್ರದ ರೆಕಾರ್ಡ್ ಪುಸ್ತಕದೊಳಗೆ ಅಡಗಿದ್ದ ಹಾಳೆಗಳನ್ನು ಬೇರಾರಿಗೂ ತಿಳಿಯದಂತೆ ನೇಹಾಳ ಕೈಗೆ ಹೇಗೆ ರವಾನಿಸುವುದೆನ್ನುವ ಯೋಜನೆ ಹಾಕುವಷ್ಟರಲ್ಲಿ ಕಾಲೇಜಿನ ಮೆಟ್ಟಲೇರಿದೆ.

ಬೆಳಗಿನ ತರಗತಿಗಳಲ್ಲಿ ನನ್ನ ಗಮನವಿಲ್ಲ. ಜೀವಶಾಸ್ತ್ರದ ಅಧ್ಯಾಪಕರು ಸಮಯ ಮೀರಿ ಪಾಠ ಮಾಡುತ್ತಿದ್ದುದು ವಾಚಿನ ಮೇಲೆ ಸುಮ್ಮನೇ ಬೆರಳಾಡಿಸುತ್ತಿದ್ದ ನನ್ನ ಅರಿವಿಗೆ ಬರಲೇ ಇಲ್ಲ. ನಮ್ಮನ್ನೆಲ್ಲ ತೀಕ್ಷ್ಣವಾಗಿ ನೋಡುತ್ತಾ ಪಾಠ ಮಾಡುವ ಅವರಿಗೆ ಮಾತ್ರ ನನ್ನ ಬೆರಳುಗಳಾಟ ಕಿರಿಕಿರಿಯಾಗಿ, ‘ಹ್ಮ್, ಐ ನೋ! ಐ ನೋ ಮೈ ಟೈಮ್. ಲೆಟ್ ಮಿ ಫ಼ಿನಿಷ್ ದಿಸ್ ಕಾನ್ಸೆಪ್ಟ್ ಮೇಡಮ್!’ ಅಂದರು ಗಂಭೀರವಾಗಿಯೇ. ನನ್ನ ಅದೃಷ್ಟಕ್ಕೆ ಅವರು ಯಾರಿಗಾಗಿ ಈ ಮಾತು ಹೇಳಿದರೆನ್ನುವುದು ಯಾರಿಗೂ ಗೊತ್ತಾಗಲೇ ಇಲ್ಲ. ನನ್ನೊಳಗು ಎಚ್ಚತ್ತುಕೊಂಡಿತು, ಅಷ್ಟೇ.

ಊಟದ ಸಮಯ ಕಥೆ ಬರೆದ ವಿಷಯವನ್ನು ನೇಹಾಳಿಗೆ ಸೂಕ್ಷ್ಮವಾಗಿ ತಿಳಿಸಿದೆ. ಸ್ಫೂರ್ತಿಯಾದ ಸಂದರ್ಭ ಮಾತ್ರ ಸದ್ಯಕ್ಕೆ ನನ್ನಲ್ಲೇ ಇರಲಿ ಅಂದುಕೊಂಡೆ. ಅಪರಾಹ್ನದ ಮೊದಲ ತರಗತಿ ಇರಲಿಲ್ಲವಾದ್ದರಿಂದ ಮೈದಾನದ ಮೂಲೆಯ ಮರದ ನೆರಳಿಗೆ ಸಾಗಿದೆವು. ಕಥೆಯೊಳಗೆ ಇಳಿದುಹೋದವು ಎರಡು ಜೊತೆ ಕಣ್ಣುಗಳು. ಓದಿ ಮುಗಿಸಿದ ನೇಹಾ ಕೆಲವೊಂದು ಸಲಹೆಗಳನ್ನೂ ನೀಡಿದಳು. ಮುಖ್ಯವಾಗಿ ಇದನ್ನು ರಮ್ಯಗಾನದತ್ತ ವಾಲಿಸಬೇಕೆನ್ನುವ ಕೋರಿಕೆಯನ್ನಿತ್ತಳು. ಈಗಿರುವಂತೆ ಸರಳ ನೇರ ಅಣ್ಣ-ತಂಗಿಯ ಸುತ್ತ ಸಾಗುವ ನಿರೂಪಣೆ ನಮ್ಮ ಕಾಲೇಜ್ ವಾರ್ಷಿಕ ಸಂಚಿಕೆಯ ಓದುಗರಿಗೆ ಬೇಕಾಗಿಲ್ಲವೆಂದೂ ರೊಮ್ಯಾಂಟಿಕ್ ಕಥೆಯೇ ಈ ವಯೋಮಾನದ ಉದ್ಯಾನವೆಂದೂ ಬುದ್ಧಿ ಹೇಳಿದಳು. ನಾಜೂಕಾಗಿಯೇ ನಾನೊಬ್ಬ ಮೊದ್ದು ಎಂದಳು. ಇಬ್ಬರೂ ನಕ್ಕೂ ನಕ್ಕೂ ಕಣ್ಣಲ್ಲಿ ನೀರಿಳಿಸಿಕೊಂಡೆವು. ಸಂಜೆಯ ಕ್ಲಾಸುಗಳನ್ನು ಮುಗಿಸಿಕೊಂಡು ಮನೆಗೆ ಬರುತ್ತಾ ಮತ್ತೊಂದಷ್ಟು ಚರ್ಚೆಗಳಾದವು. ಕೊನೆಗೂ ಅವಳಿಗಾಗಿ ಈ ಕಥೆಯನ್ನು ತಿದ್ದಿ ಬರೆಯುವುದಕ್ಕೆ ಒಪ್ಪಿಕೊಂಡು ಮನೆ ಸೇರಿಕೊಂಡೆ.

ಅಮ್ಮನ ಮೂಡ್ ಮತ್ತೆ ಕೆಟ್ಟಿತ್ತು. ನನಗದರ ಬಿಸಿ ತಟ್ಟದಷ್ಟು ನನ್ನ ಹೃದಯ-ಮನಸ್ಸು ಕಥೆಯ ಹೊಸ ಹಂದರದೊಳಗೆ ಹುದುಗಿಹೋಗಿದ್ದವು.

Monday 15 November, 2010

ಸುಮ್ಮನೆ ನೋಡಿದಾಗ...೦೩

ಆಕರ್ಷಕ ಯುವಕನೊಬ್ಬ ಕುರ್ಚಿಯಲ್ಲಿ ಕೂತಿದ್ದ. ನಾನು ಒಳಗೆ ಹೆಜ್ಜೆಯಿಟ್ಟೊಡನೆಯೇ, "ಹಲೋ, ಗುಡ್ ಈವ್‍ನಿಂಗ್ ಯಂಗ್ ಲೇಡಿ" ಅಂದ. ಮಾತಿನಲ್ಲಿನ ಗಾಂಭೀರ್ಯಕ್ಕೆ ಪದಗಳ ನಾಜೂಕಿಗೆ ತಬ್ಬಿಬ್ಬಾದ ನಾನು ಅವನಿಗುತ್ತರಿಸದೆಯೇ ತಲೆ ತಗ್ಗಿಸಿಕೊಂಡು ನೇರವಾಗಿ ನನ್ನ ಕೋಣೆಗೆ ಸಾಗಿದೆ. ಪುಸ್ತಕಗಳನ್ನು ಮೇಜಿನ ಮೇಲಿಟ್ಟು ಬಚ್ಚಲುಮನೆಗೆ ಹೋಗಿ ಮುಖ-ಕೈಕಾಲು ತೊಳೆದುಕೊಂಡು ಅಡುಗೆಮನೆಗೆ ಬರುವಷ್ಟರಲ್ಲಿ ಅವನೂ ಊಟದ ಮೇಜಿನ ಮುಂದಿದ್ದ. ಅಮ್ಮ ಅಡುಗೆಕಟ್ಟೆಯ ಬದಿಯಲ್ಲಿದ್ದಳು. ಒಲೆಯಲ್ಲಿ ಸಾರು ಬಿಸಿಯಾಗುತ್ತಿತ್ತು. ಯಾರಿವನು?

"ಏನಾ, ಗೊತ್ತಾಗಲಿಲ್ವಾ?" ಅವನೇ ಕೇಳಿದ. ಇಲ್ಲವೆನ್ನುವಂತೆ ತಲೆಯಾಡಿಸಿದೆ.

ಅಮ್ಮನೇ ಹೇಳಿದಳು, "ನೀನು ಚಿಕ್ಕವಳಿದ್ದಾಗ ನಾವು ‘ಅಕಳಂಕ’ ಮನೆಯ ಬದಿಯಲ್ಲಿ ಬಾಡಿಗೆಗಿದ್ದೆವಲ್ಲ. ಆಗೆಲ್ಲ ನಿನ್ನನ್ನು ಎತ್ತಿ ಆಡಿಸಿ ಶಾಲೆಗೆ ಹೋಗುತ್ತಿದ್ದ ಆಚೆ ಮನೆಯ ಹರ್ಷ. ಈಗ ಬಾಂಬೆಯಲ್ಲಿ ಕೆಲಸದಲ್ಲಿದ್ದಾನೆ. ನಾವು ಮತ್ತೆ ಇದೇ ಊರಿಗೆ ಬಂದದ್ದು ಗೊತ್ತಾಯ್ತಂತೆ. ನಮ್ಮನ್ನು, ಅದ್ರಲ್ಲೂ ನಿನ್ನನ್ನು ನೋಡ್ಲಿಕ್ಕೇಂತಲೇ ಬಂದಿದ್ದಾನೆ. ನೀನು ಏನೂ ಮಾತಾಡದೇ ಒಳಗೆ ಓಡಿ ಬರುದು ಸರಿಯಾ? ಅತಿಥಿಗೆ ಮರ್ಯಾದೆ ತೋರಿಸ್ಲಿಕ್ಕೂ ಗೊತ್ತಿಲ್ವಾ ನಿಂಗೆ? ಅವನಿಗೆ..."

ಅಮ್ಮನ ಮಾತುಗಳು ಮುಗಿದಿರಲೇ ಇಲ್ಲ, ಹರ್ಷ ನಮ್ಮ ಬದಿಗೇ ಬಂದು ನಿಂತ. ನನ್ನ ತಲೆ ನೇವರಿಸುತ್ತ, "ನನ್ನ ಶಾಲಾ ದಿನಗಳ ಬಣ್ಣದ ಗೊಂಬೆ ಈಗ ಎಷ್ಟು ದೊಡ್ಡೋಳಾಗಿದಾಳೆ ಅಂತ ನೋಡ್ಲಿಕ್ಕೆ ಬಂದದ್ದು ಹೌದು. ಜೊತೆಗೆ ಅವಳ ನಾಚಿಗೆ, ದಾಕ್ಷಿಣ್ಯದ ರೀತಿಯೂ ನೋಡಿದ್ದಾಯ್ತು. ಚಿಕ್ಕತ್ತೆ, ಮಗಳನ್ನು ಚಂದ ಮಾಡಿ ಬೆಳ್ಸಿದ್ದೀರಿ. ಬಾಂಬೆಯ ಬಿಂದಾಸ್ ಹುಡುಗಿಯರನ್ನು ನೋಡೀ ನೋಡೀ ಬೇಜಾರಾಗಿತ್ತು. ಇವಳನ್ನು ನೋಡಿ ಕಣ್ಣು ಮನಸ್ಸು ತಂಪಾಯ್ತು. ಸುಖವಾಗಿರು ಗೊಂಬೇ..." ಹರಸುವಂತೆ ಮತ್ತೆ ತಲೆ ನೇವರಿಸಿದ.

ಹರ್ಷನ ನೆನಪೇ ಇಲ್ಲದ ನನಗೆ ಈ ನಡವಳಿಕೆ ಮತ್ತಷ್ಟು ಮುದುಡುವಂತೆ ಮಾಡಿತು. ಆದರೂ ಆತ ತಂಗಿಯಂತೆ ನನ್ನ ಆದರಿಸಿದ್ದು ಖುಷಿಯೂ ಕೊಟ್ಟಿತು. ಇಂಥ ಸುಂದರ ಸ್ಫುರದ್ರೂಪಿ ಅಣ್ಣನಿಗಾಗಿ ನಾನೆಷ್ಟು ಹಂಬಲಿಸಿಲ್ಲ? ಸಿನಿಮಾಗಳಲ್ಲಿನ ರಾಜ್‍ಕುಮಾರ್, ವಿಷ್ಣುವರ್ಧನ್ ಅವರಂತೆ ಅಣ್ಣಂದಿರು ಇರಬೇಕು ಎನ್ನುತ್ತಿದ್ದ ನನ್ನನ್ನು ನೇಹಾ ಮತ್ತು ಸುಜಾ ಛೇಡಿಸುತ್ತಿದ್ದರು. ಇದೀಗ ಸಿನೆಮಾ ಹೀರೋನಂತಿರುವ ಅಣ್ಣನೊಬ್ಬ ಬಾಂಬೆಯಿಂದ ನನಗಾಗಿ ಬಂದಿಳಿದಿದ್ದಾನೆ. ಇಂದು ಸಂತಸದಿಂದ ನಿದ್ದೆಯೇ ಬಾರದೆಂದು ಅನ್ನಿಸತೊಡಗಿತು. ನೇಹಾಳೊಂದಿಗೆ ಹೇಳಿಕೊಳ್ಳಬೇಕು, ಆದರೆ ಬೆಳಗಿನವರೆಗೆ ಕಾಯಬೇಕಲ್ಲ. ಅಥವಾ... ಇದನ್ನೊಂದು ಕಥೆಯಾಗಿಸಿದರೆ? ಹ್ಮ್! ಅದೇ ಸರಿ. ಇವತ್ತೇ ಕಥೆಯಾಗಿಸುತ್ತೇನೆ. ಹೇಗೂ ಕಾಲೇಜಿನ ಮನೆಗೆಲಸವೇನೂ ಇಲ್ಲ.

ಹರ್ಷನ ಜೊತೆಗೆ ಹರಟುತ್ತಾ ಊಟ ಮುಗಿಸಿ ಯಾವತ್ತಿನ ಹಾಗೆ ಅಡುಗೆಮನೆ ಎಲ್ಲ ಸ್ವಚ್ಛಗೊಳಿಸಿ, ಪಾತ್ರೆ ತೊಳೆದಿಟ್ಟೆ. ತನ್ನ ಮನೆಗೆ ಹೊರಟ ಹರ್ಷನನ್ನು ಗೇಟಿನತನಕ ಕಳಿಸಿಕೊಟ್ಟೆವು. ಅಮ್ಮ ಮಲಗಿದ ಮೇಲೆ ನನ್ನ ಕೋಣೆಯಲ್ಲಿ ತಡರಾತ್ರೆಯವರೆಗೂ ದೀಪವುರಿಯಿತು....

Monday 8 November, 2010

ಸುಮ್ಮನೆ ನೋಡಿದಾಗ...೦೨

ಕಾಲೇಜಿಗೆ ಸಾಗಿದ್ದೇನೋ ಸರಿ, ನಡೆದ ಹಾದಿಯ ನೆನಪೇ ಇಲ್ಲ. ಕಾಲೇಜಲ್ಲೂ ಪಾಠಗಳತ್ತ ಗಮನವಿಲ್ಲ. ಗೆಳತಿ ನೇಹಾ ಏನೇನೆಲ್ಲ ಕಸರತ್ತು ಹೂಡಿದರೂ ನನ್ನ ಅನ್ಯಮನಸ್ಕತೆ ದೂರಾಗಲಿಲ್ಲ. ಸಂಜೆಯ ಹೊತ್ತಿಗೆ ಮನೆಗೆ ಹೋಗುವ ಮೂಡ್ ಇರಲೇ ಇಲ್ಲದ ನನ್ನನ್ನು ತನ್ನ ಮನೆಗೆ ಆಹ್ವಾನಿಸಿದಳು ನೇಹಾ. ನಮ್ಮಮ್ಮ ಅವಳಮ್ಮನ ಗೆಳತಿಯಾದ್ದರಿಂದ ಅದೊಂದು ಮನೆಗೆ ಹೋಗಲು ನನಗೆ ಅಮ್ಮನ ಅನುಮತಿಯಿತ್ತಷ್ಟೇ. ಹೋದೆ. ನಳಿನಿ ಆಂಟಿ ಪ್ರೀತಿಯಿಂದ ಬರಮಾಡಿಕೊಂಡರು. ಅವರು ಕೊಟ್ಟ ಟೀ ಹೀರಿ ಬಿಸ್ಕೆಟ್ ತಿಂದು ನಾವಿಬ್ಬರೂ ಅಂಗಳದ ಮೂಲೆಯ ಜಾಜಿಯ ಚಪ್ಪರದಡಿಗೆ ತಲುಪಿದ್ದಷ್ಟೇ ನೆಪವಾಗಿ ಜಾಜಿಬಳ್ಳಿಯ ಎಲೆಗಳೆಲ್ಲ ನನ್ನ ಬೆರಳುಗಳಲ್ಲಿ ಸೇರಿಕೊಳ್ಳತೊಡಗಿದವು. ಒಂದೊಂದಾಗಿ ಬಿದ್ದ ಸಣ್ಣೆಲೆಗಳನ್ನು ಅಲ್ಲೇ ಅಂಟಿಸಿಡಲು ಮಳೆಯಿಲ್ಲದೆ ಹನಿಗಳು ಇಳಿದು ಬಂದವು. ನೇಹಾ ಜಾಜಿ ಮೊಗ್ಗು ಕೊಯ್ಯುವ ನೆಪದಲ್ಲಿ ಯಾರಾದರೂ ಕಂಡಾರೆನ್ನುವ ಅವಲೋಕನ ಮುಗಿಸಿ ಚಪ್ಪರದ ಇನ್ನೊಂದು ಬದಿಗಿದ್ದ ಬೆಂಚಿನಲ್ಲಿ ನನ್ನನ್ನು ಕುಳ್ಳಿರಿಸಿ ತಾನೂ ಕೂತಳು. ಕರ್ಚೀಫಿಗೇಕೆ ಒದ್ದೆಯಾಗುವ ಶಿಕ್ಷೆಯೆಂದು ಹನಿಗಳು ನೆಲಸೇರುತ್ತಿದ್ದವು. ಸಣ್ಣೆಲೆಗಳು ಅವನ್ನೆಲ್ಲ ಮುತ್ತಿಡುತ್ತಿದ್ದವು.

ನಮ್ಮನೆಯ ಕಥೆ ನೇಹಾಳಿಗೆ ಹೊಸದಲ್ಲ. ನೆಲಕ್ಕೆ ನನ್ನ ಕಣ್ಣೀರೂ ಹೊಸದಲ್ಲ. ಅಮ್ಮನ ಹಾರಾಟ, ರೇಗಾಟ ಕಂಡು ಕೇಳಿದವಳು ನನ್ನ ಒಳಗಿನ ತುಮುಲ ಒಮ್ಮೆ ಹೊರಬಿದ್ದರೆ ಸರಿಯಾಗುತ್ತೇನೆಂದು ಅರಿತವಳು ಸುಮ್ಮನಿದ್ದಳು, ನನ್ನ ಕೈಯನ್ನು ತನ್ನ ಕೈಯಲ್ಲಿ ಬೆಸೆದುಕೊಂಡು. ಅವಳೊಳಗಿನ ಬೆಚ್ಚನೆಯ ಸಾಂತ್ವನ ನನ್ನೊಳಗೆ ಹರಿದು ಬಂದದ್ದನ್ನು ಕಂಡ ಹನಿಗಳು ಹಿಂಜರಿದವು. ಸಣ್ಣೆಲೆಗಳು ಗಾಳಿಯಲ್ಲಿ ಆಡ್ಡಾಡಲು ಜಾರಿಕೊಂಡವು.

ನಿನ್ನೆ ರಾತ್ರೆ ಎಲ್ಲದರಂತಿರಲಿಲ್ಲ ಎನ್ನುವುದನ್ನು ನೇಹಾಳಿಗೆ ಹೇಳಲೇಬೇಕಿತ್ತು. ಪದಗಳಿಗಾಗಿ ಹುಡುಕುತ್ತಿದ್ದೆ. ಸಣ್ಣೆಲೆಯೊಂದು ಹಾರಿ ಬಂದು ಮಡಿಲಲ್ಲಿ ಇಳಿಯಿತು. ಒಂದು ತೊಟ್ಟಿನಲ್ಲಿ ಮೂಡಿದ ಪುಟ್ಟಪುಟ್ಟ ಏಳು ಬಿಲ್ಲೆಗಳಲ್ಲಿ ಒಂದಾಗಿದ್ದಿರಬಹುದಾದ ಪುಟಾಣಿ ಹಸಿರು. ನೇವರಿಸಿದೆ. ನಿನ್ನೆಯ ನೆನಪು ನಿಚ್ಚಳವಾಯ್ತು. ಇದೇ ರೀತಿಯ ಸಣ್ಣೆಲೆಗಳ ಗಿಡವೊಂದನ್ನು ಹರ್ಬೇರಿಯಂಗಾಗಿ ದಿನಪತ್ರಿಕೆಯೊಳಗೆ ಬಿಡಿಸಿಟ್ಟದ್ದನ್ನು ತೆರೆದು ನೋಡಿ ಪತ್ರಿಕೆ ಬದಲಿಸುತ್ತಿದ್ದೆ. ಇದೇ ವರ್ಷದ ಕೊನೆಗೆ ಇಪ್ಪತ್ತಾದರೂ ಹರ್ಬೇರಿಯಂ ತಯಾರಾಗಬೇಕಿತ್ತು. ಒಮ್ಮೆ ಇಡುವಾಗ ಒಂದೇ ಜಾತಿಯ ಗಿಡದ ಐದಾರು ಗೆಲ್ಲುಗಳನ್ನು ಹರ್ಬೇರಿಯಂ ಮಾಡುವುದು ನನ್ನ ಕ್ರಮ. ಇದೂ ಹಾಗೇ. ತನ್ನ ಹಚ್ಚನೆಯನ್ನು ಹದವಾಗಿ ಬಾಡಿಸಿಕೊಂಡು ಮಸುಕು ಹಸಿರಾಗುತ್ತಿದ್ದ ಎಲೆಗಳನ್ನು ನೇವರಿಸಿ ಮಡಿಕೆಗಳನ್ನು ಬಿಡಿಸಿ ಹೂವಿನ ಎಸಳುಗಳ ಮುದುರನ್ನು ಅರಳಿಸಿ ನೇವರಿಸಿ ಅವುಗಳನ್ನು ನನ್ನೊಳಗೆ ಆವಿರ್ಭವಿಸುತ್ತಿದ್ದೆ.

"ಇಷ್ಟೆಲ್ಲ ಒಣಪುರಲು ಯಾರಿಗೆ?" ಅಮ್ಮನ ಪ್ರಶ್ನೆ, ಎಂದಿನಂತೆ. ಗಂಟೆ ಹನ್ನೆರಡೂವರೆ. ಮಾಮೂಲು ಬಾಣಗಳು ಬರುತ್ತವೆಂದು ಮನದ ಸುತ್ತ ಗುರಾಣಿ ಕಟ್ಟಿಕೊಳ್ಳುತ್ತಿದ್ದೆ. ಉತ್ತರಿಸದೇ ಇರಲಾಗದಲ್ಲ.
"ನೇಹಾ, ಅಖೀ, ಸುಜಾ, ರಾಜೀವ್, ಶೇಖರ್, ಇವ್ರೆಲ್ಲ ಬೇಕೂಂತ ಹೇಳಿದ್ದಾರೆ. ಇದು ನಂಗೆ ಮಾತ್ರ ಸಿಕ್ಕಿದ್ದು. ಪೇಟೆಯ ಅವ್ರಿಗೆಲ್ಲ ಗುಡ್ಡೆಯ ಗಿಡ ಸಿಗುದಿಲ್ಲ. ಅದ್ಕೇ..."
"ಅವ್ರಿಗೆಲ್ಲ ನೀನ್ಯಾಕೆ ಮಾಡ್ಕೊಡ್ಬೇಕು? ನಿಂಗೇನು ಸಂಬಂಧ ಅವ್ರ ಹತ್ರ? ನೇಹಾಗೇನಂತೆ ಧಾಡಿ ಮಾಡ್ಕೊಳ್ಳಿಕ್ಕೆ?"
"ಅವ್ಳು ಬೇರೆ ಗಿಡದ ಹರ್ಬೇರಿಯಂ ಮಾಡ್ತಿದ್ದಾಳೆ, ನಮ್ಗೆಲ್ರಿಗೂ..."
"ನಿಮ್ಮಿಬ್ರಿಗೂ ಬೇರೆ ಕೆಲ್ಸ ಇಲ್ವಾ? ಹೇಳಿದ್ದು ಅರ್ಥ ಆಗದ ಕತ್ತೆಗಳು ನೀವು. ಬೀದಿ ನಾಯಿಗಳ ಹಾಗೆ ಹುಡುಗರ ಒಟ್ಟಿಗೆ ಸೇರಿ ಅವ್ರಿಗೆ ಬೇಕಾದ್ದನ್ನು ಮಾಡಿ ಕೊಡ್ತೀರಲ್ಲ. ಅವ್ರೇನು ಆಗ್ಬೇಕು ನಿಮಗೆ?"
"ಅಮ್ಮ...!" ಮುಂದೆ ಮಾತು ಹೊರಟಿರಲಿಲ್ಲ. ಇವಳಿಗೇ ನನ್ನ ಮೇಲೆ ನಂಬಿಕೆಯಿಲ್ಲದಿದ್ದ ಮೇಲೆ ಯಾವ ರೀತಿಯ ಉತ್ತರವೂ ಉಪಯೋಗವಿಲ್ಲ ಎನ್ನುವುದು ನನಗೀಗಾಲೇ ಅರಿವಾಗಿತ್ತು. ಸುಮ್ಮನಿದ್ದೆ.
"ಹೌದು ನಿನ್ನಮ್ಮನೇ ಹೇಳುದು. ಹುಡುಗಿ ಅಂತ ಮುದ್ದು ಮಾಡಿದೆ ನೋಡು, ಅದ್ಕೇ ಈಗ ಬೇಕಾಬಿಟ್ಟಿ ಬೆಳ್ದಿದ್ದೀ. ಯಾರ ಜೊತೆ ಹೇಗಿರ್ಬೇಕು ಅಂತ ಗೊತ್ತಿಲ್ಲ. ಹೇಳಿದ್ರೆ ಕೇಳುದಿಲ್ಲ. ಮಾನ ಮರ್ಯಾದೆ ಇಲ್ಲದ ನಿನಗೆ ಹೇಗೆ ಮದುವೆ ಮಾಡುದೋ ಗೊತ್ತಿಲ್ಲ. ಭಗವಂತಾ, ಇದನ್ನು ನೋಡ್ಲಿಕ್ಕೆ ನನ್ನನ್ನಿನ್ನೂ ಇಟ್ಟಿದ್ದೀಯಲ್ಲಪ್ಪ..." ಕಾಣದ ದೇವರಿಗೆ ಬಯ್ಯುತ್ತಾ ಬಾತ್ರೂಮಿಗೆ ನಡೆದಳು.
ಅವಳು ಹಿಂದೆ ಬರುವಾಗಲೂ ಲೈಟ್ ಇದ್ರೆ ಮತ್ತೆ ಪುರಾಣ ಸುರುವಾಗುವ ಸಂಶಯ ಇದ್ದದ್ದರಿಂದ ದೀಪ ಆರಿಸಿ ತೆಪ್ಪಗೆ ಕೂತೆ. ಅವಳು ರೂಮಿಗೆ ಹೋಗಿ ಮಲಗಿದ ನಂತ್ರ ದೀಪ ಹಾಕಿ ನನ್ನ ಕೆಲಸ ಮುಗಿಸಿ ಒಂದೂವರೆಯ ಸುಮಾರಿಗೆ ಮಲಗಿದ್ದೆ.

ಇದನ್ನೆಲ್ಲ ಕೇಳಿಸಿಕೊಂಡ ನೇಹಾ ನಿಟ್ಟುಸಿರಿಟ್ಟಳು. "ಇನ್ನೊಂದು ಆರು ತಿಂಗಳು. ಫೈನಲ್ ಬಿ.ಎಸ್ಸಿ. ಮುಗಿದ್ರೆ ಮತ್ತೆ ಮನೆಯಲ್ಲಿ ಇರುದಿಲ್ಲ ನೇಹಾ. ನನ್ನ ಕಾಲ ಮೇಲೆ ನಿಂತು ಕೆಲ್ಸ ಸೇರಿ ಒಬ್ಳೇ ಆರಾಮಾಗಿರ್ತೇನೆ ಹೊರ್ತು ಅಮ್ಮನ ಜೊತೆ ಮಾತ್ರ ಇರುದಿಲ್ಲ ಮಾರಾಯ್ತಿ. ಸಾಧ್ಯವೇ ಇಲ್ಲ."
"ಈಗಲಾದ್ರೂ ಯಾಕಲ್ಲಿರ್ತೀ? ನಮ್ಮನೆಗೆ ಬಾ. ನಮ್ಮಮ್ಮ, ಪಪ್ಪ ಎಷ್ಟು ಖುಷಿ ಪಡ್ತಾರೆ ಗೊತ್ತುಂಟಾ? ನಂಗಂತೂ ಸ್ವರ್ಗವೇ ಬಿಡು. ಬಂದ್ಬಿಡು, ಪ್ಲೀಸ್..."
"ಇಲ್ಲಮ್ಮ. ಬರುದಿಲ್ಲ. ಇಪ್ಪತ್ತು ವರ್ಷಗಳೇ ಮುಗಿದಾಯ್ತು. ಇನ್ನಾರು ತಿಂಗಳೇನು ಮಹಾ? ಅಷ್ಟು "ಬೌಗುಳ" ಸಾಲ ತೀರಿಸಿಯೇ ಹೊರಗೆ ಬರ್ತೇನೆ. ಕೆಲ್ಸ ಸಿಕ್ಕಿದ ಮೇಲೆ ನಾವಿಬ್ರೂ ಎಲ್ಲಾದ್ರೂ ಟೂರ್ ಹೋಗಿ ಬರುವಾ, ಆಯ್ತಾ? ಈಗ ಹೊರಡ್ತೇನೆ. ಇಲ್ಲದಿದ್ರೆ ಮನೆಯಲ್ಲಿ ಮಹಾಕಾಳಿ ಅವತಾರ ಆಗಿರ್ತದೆ, ಗೊತ್ತುಂಟಲ್ಲ."

ನಳಿನಿ ಆಂಟಿಗೆ ಹೇಳಿ ಅಲ್ಲಿಂದ ಹೊರಟಾಗ ಮನಸ್ಸು ಒಂದಿಷ್ಟು ಹಗುರಾಗಿದ್ದು ಹೌದು. ಜೊತೆಗೇ ಯೋಚನೆಗಳು... ‘ಅಮ್ಮ ಹೇಳಿದ ಹಾಗೆ ನನ್ನ ಕ್ಲಾಸ್ಮೇಟ್ಸ್ ಪೈಕಿ ಯಾರನ್ನಾದ್ರೂ ಲವ್ ಮಾಡ್ಬಾರ್ದು ಯಾಕೆ? ನಂಗೀವರೆಗೂ ಯೋಚನೆಯೇ ಬಂದಿರ್ಲಿಲ್ಲ. ಅಮ್ಮನೇ ಐಡಿಯಾ ಕೊಟ್ಟಿದ್ದಾಳಲ್ಲ. ಯಾರಾದೀತು? ಅವ್ನು ಬೇಡ. ಇವ್ನು ಆಗುದಿಲ್ಲ. ಅವ ಮೊಂಡ. ಇವ ಒರಟ. ಅವನಿಗೆ ತಲೆಯೇ ಇಲ್ಲ. ಇವನಿಗೆ ತಲೆ ನಿಲ್ಲುದೇ ಇಲ್ಲ. ಇಲ್ಲಪ್ಪ, ನನ್ನ ಪರಿಚಯದಲ್ಲಿ ನನ್ನ ಮೆಚ್ಚುಗೆ ಪಡೆದವ ಯಾರೂ ಇಲ್ಲ. ಹಾಗಾದ್ರೆ? ಸದ್ಯಕ್ಕಂತೂ ಬೇಡ ಯೋಚನೆ...’ ಮನೆಯ ಗೇಟಿನಲ್ಲೇ ನಿಂತಿದ್ದ ಅಮ್ಮ ಮಹಾಕಾಳಿಯಾಗಿರಲಿಲ್ಲ ಅನ್ನುವ ಸಮಾಧಾನದಲ್ಲೇ ಒಳಹೊಕ್ಕಿದವಳಿಗೆ ಅಲ್ಲೇ ಆಶ್ಚರ್ಯ ಕಾದಿತ್ತು.

Monday 1 November, 2010

ಸುಮ್ಮನೆ ನೋಡಿದಾಗ...೦೧

ಬೆಳಗ್ಗೆ ಎದ್ದಾಗಲೇ ಗಂಟೆ ಏಳು. ತಲೆ-ಎದೆ ಭಾರ ಭಾರ. ಶೀತವಾಗುತ್ತದೇನೋ ಅಂದುಕೊಂಡರೆ ಮೂಗು ಗಂಟಲು ಸರಿಯಾಗಿಯೇ ಇವೆ. ಮನಸ್ಸೇಕೋ ಸಹಕರಿಸುತ್ತಿಲ್ಲ. ನಿನ್ನೆ ರಾತ್ರಿಯ ನೆನಪು ಮತ್ತೆ ಮತ್ತೆ ಮೂಡಿ ಕಣ್ಣುಗಳು ಮಂಜಾಗುತ್ತಿವೆ. ಯಾಕೆ ಹಾಗಂದಳು ಅಮ್ಮ? ಅವಳಿಗೆ ನನ್ನ ಮೇಲೆ ಅದೇಕೆ ದ್ವೇಷ? ಕೆಲಸದ ಒತ್ತಡವಿದ್ದಾಗ ತಡರಾತ್ರೆಯವರೆಗೂ ಎದ್ದಿದ್ದರೆ ಅವಳಿಗೇನೋ ಆತಂಕ. ಅದೇ ನೆಪದಲ್ಲಿ ಸದಾ ಸಿಡಿಮಿಡಿ.

ಮೊನ್ನೆಮೊನ್ನೆಯಂತೂ ನಡುರಾತ್ರೆಗೊಮ್ಮೆ ಎದ್ದವಳು ನನ್ನ ಕೋಣೆಯ ದೀಪ ಕಂಡು ಪಡಸಾಲೆಯ ಕಿಟಕಿಯ ಬದಿಯಿಂದಲೇ ಕಿರುಚಾಡಿದಳಲ್ಲ, "ಎಂತದ್ದಾ ನಿನ್ನ ಅವತಾರ. ನಡುರಾತ್ರೆ ಇದೆಂಥ ಕೆಲಸ ನಿಂದು? ಬೇಡಾಂತ ಹೇಳಿದ್ದನ್ನೇ ಮಾಡುವ ನಿಂಗೆ ನಾಚಿಕೆ ಮಾನ ಮರ್ಯಾದೆ ಏನೊಂದೂ ಇಲ್ವಾ? ಏಳು, ಹೋಗಿ ಮಲಕ್ಕೋ. ಈಗಲೇ, ಈ ಕ್ಷಣವೇ. ಹ್ಙೂಂ!"

ಮರುದಿನ ಪಕ್ಕದ ಮನೆಯ ಬೊಂಬಾಯಿ ಆಂಟಿ ಕೇಳೇ ಕೇಳಿದ್ದರು, "ನಿನ್ನೆ ರಾತ್ರೆ ಏನು ಮಾಡ್ತಿದ್ದಿ? ಯಾಕೆ ಅಮ್ಮ ಮಾನ-ಮರ್ಯಾದೆ ಅಂತೆಲ್ಲ ಕೂಗಾಡ್ತಿದ್ದರು? ಅವ್ರು ಗೌರವದಿಂದ ಜೀವನ ಮಾಡಿದವ್ರು, ಆಯ್ತಾ? ಅವ್ರ ಹೆಸರಿಗೆ ಮಸಿ ಬಳೀಬೇಡ ಮಾರಾಯ್ತಿ. ಮೈಮೇಲೆ ಎಚ್ಚರ ಇರ್ಲಿ." ಇದಕ್ಕೆ ಹೇಗೆ ಉತ್ತರಿಸಬೇಕೋ ತಿಳಿಯದೆ ತಬ್ಬಿಬ್ಬಾಗಿ ಕಾಲೇಜಿಗೆ ಸಾಗಿದ್ದೆ.

(ಕಣ್ಣೀರು ತಡೆಯುತ್ತಿದೆ. ಮತ್ತೆ ಬರೀತೇನೆ...)