ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 24 January, 2011

ಸುಮ್ಮನೆ ನೋಡಿದಾಗ...೧೨

‘ನಳಿನಿ, ನಿನ್ನ ಮತ್ತು ಹರಿಣಿಯ ಸ್ನೇಹ ನನ್ಗೆ ಗೊತ್ತಿರುವ ವಿಷಯವೇ. ಈಗ, ಈ ಮಕ್ಕಳನ್ನು ಹೇಳಿ ನೀವಿಬ್ರೂ ಇನ್ನಷ್ಟು ಹತ್ರ ಆಗಿದ್ದೀರಿ. ನಿಮ್ಮನ್ನು ದೂರ ಮಾಡುವ ಉದ್ದೇಶ ನನ್ನದಲ್ಲ. ಹಾಗಂತ, ಹರಿಣಿಯೂ ಇಲ್ಲೇ ಇದ್ರೆ ಮುಂದೆ ಅಮ್ಮ ಬರುವಾಗ ಖಂಡಿತಾ ತೊಂದ್ರೆ ಆಗ್ತದೆ. ಅದೆಲ್ಲ ಯೋಚನೆ ಮಾಡಿಯೇ ನಮ್ಮ ಹಿಂದಿನ ರಸ್ತೆಯಲ್ಲೇ ಒಂದು ಬಾಡಿಗೆ ಮನೆ ನೋಡಿದ್ದೇನೆ. ಹರಿಣಿ ಮತ್ತು ಲಚ್ಚಮ್ಮ ಅಲ್ಲಿಗೆ ಹೋಗಿರ್ತಾರೆ. ಇನ್ನೂ ಒಂದೆರಡು ತಿಂಗಳಾದ ಮೇಲೆ ಹರಿಣಿಗೆ ಇಲ್ಲಿಯ ಶಾಲೆಯಲ್ಲಿ ಟೀಚರ್ ಆಗಿ ಸೇರುವ ಸಾಧ್ಯತೆ ಉಂಟು. ಮಾತಾಡಿದ್ದೇನೆ. ಅವಳ ಜೀವನಕ್ಕೂ ಒಂದು ದಾರಿ ಆಗ್ತದೆ. ಮೊದಲೇ ಹೇಳಿದ್ರೆ ನೀನು ಕೇಳುವ ಸಾವಿರ ಪ್ರಶ್ನೆಗಳಿಗೆ ಉತ್ರ ಹೇಳಿ ನನ್ನ ತಲೆ ಹುಳ ಹಿಡೀತದೆ, ಅದ್ಕೇ ಹೇಳ್ಲಿಲ್ಲ. ಇನ್ನು... ದೇವರು ಎಲ್ಲವನ್ನೂ ಯೋಚನೆ ಮಾಡಿಯೇ ಮಾಡ್ತಾನೆ. ಹರಿಣಿಗೆ ಅವಳಿಗಳು ಹುಟ್ಟಿದ್ದು ಒಳ್ಳೇದಕ್ಕೇ. ಒಂದು ನಮ್ಗೆ, ಒಂದು ಅವಳಿಗೇನೇ. ಇದನ್ನು ಕೂಡಾ ಮೊನ್ನೆಯೇ ಲಚ್ಚಮ್ಮ, ಹರಿಣಿ ನಿರ್ಧರಿಸಿ ನಂಗೆ ಹೇಳಿದ್ರು. ಇವತ್ತು ಮಕ್ಕಳಿಗೆ ಮೂರು ತುಂಬ್ತದೆ. ಯಾವುದೇ ಪುರೋಹಿತರ ಹಂಗೂ ಇಲ್ಲದೆ ನಾವೇ ನಾಮಕರಣ ಮಾಡುವಾ. ಮಧ್ಯಾಹ್ನ ಹಬ್ಬದೂಟ ಮುಗಿಸಿ ಹರಿಣಿ ಮತ್ತು ಲಚ್ಚಮ್ಮ ಒಂದು ಮಗುವಿನ ಒಟ್ಟಿಗೆ ಆ ಮನೆಗೆ ಹೋಗ್ತಾರೆ. ಸಂಜೆ ಮತ್ತೆ ನಾವೆಲ್ಲ ಒಟ್ಟಿಗೆ ದೇವಸ್ಥಾನಕ್ಕೆ ಹೋಗಿ ಬರುವಾ. ನಾಳೆ ಹೇಗೂ ಎರಡನೇ ಶನಿವಾರ, ನಂಗೆ ಆಫೀಸಿಲ್ಲ. ನಾಡಿದ್ದು ಆದಿತ್ಯವಾರ. ಸೋಮವಾರದ ಹೊತ್ತಿಗೆ ಎಲ್ಲ ಸೆಟ್ ಆಗಿರ್ತದೆ. ಲಚ್ಚಮ್ಮ ನಿಮ್ಮಿಬ್ಬರಿಗೂ ಸಹಾಯ ಮಾಡಿಕೊಂಡು ಇಲ್ಲೇ ಇರ್ತಾರೆ. ಇದಿಷ್ಟು ಪ್ಲಾನ್. ಏನ್ ಹೇಳ್ತೀ?’

ಹರಿಣಿ, ನಾನು ಮುಖ ಮುಖ ನೋಡಿಕೊಳ್ತಿರುವಾಗಲೇ ಲಚ್ಚಮ್ಮನ ಖಡಕ್ ಚಾ ಲೋಟೆಗಳು ಬಂದವು. ತೊಟ್ಟಿಲು ಹೊತ್ತು ತಂದ ಆಳು ಕೆಂಚ, ಜಗಲಿ ಬದಿಯಲ್ಲಿದ್ದವ ಅಲ್ಲಿಂದಲೇ ಬಗ್ಗಿ, ‘ಮಧ್ಯಾಹ್ನ ಊಟ ಮಾಡಿ ಬರ್ತೇನೆ ಅಯ್ಯ. ಆ ಮನೆಗೆ ಸಾಮಾನು ಸಾಗಿಸ್ಲಿಕ್ಕೆ. ಅಮ್ಮ, ನಂಗೊಂದು ಲೋಟ ಪಾಯ್ಸ ಇಡಿ, ಪೂರಾ ಖಾಲಿ ಮಾಡ್ಬೇಡಿ’ ಅಂದ. ‘ನೀನು ಬಂದ್ರೆ ಪಾಯ್ಸ ಗ್ಯಾರಂಟಿ. ಬಾ ಮೊದ್ಲು’ ಅಂದ್ರು ಸುಮುಖ್. ಚಾ ಕುಡಿದು ಅವ ಹೊರಟ. ನಡುಮನೆಯಲ್ಲಿ ಮಾತುಗಳು ಚಹಾ ಲೋಟಗಳೊಳಗೆ ಮುಳುಗಿದ್ದವು.

‘ಹರಿಣಿಯ ಮಗಳು ಶಿಶಿರಾ. ನಳಿನಿಯ ಮಗಳು ನೇಹಾ.’ ಸುಮುಖ್ ದನಿಯಲ್ಲಿ ತಮಾಷೆಯಿರಲಿಲ್ಲ. ನಾವು ಮೂವರೂ ಅವರ ಮುಖ ನೋಡಿದೆವು.
‘ಒಪ್ಪಿಗೆಯಿಲ್ವಾ?’
‘....’ ಮೂರು ತಲೆಗಳು ಸುಮ್ಮನೇ ಮೇಲಿಂದ ಕೆಳಗೆ ಆಡಿದವು.
‘ಮತ್ಯಾಕೆ ಹಾಗೆ ನೋಡ್ತೀರಿ?’
‘....’
‘ಏನಾದ್ರೂ ಮಾತಾಡಿ... ಯಾರಾದ್ರೂ...’
‘....’
‘ಲಚ್ಚಮ್ಮ, ಚಾ ಮಾಡುವಾಗ ಏನಾದ್ರೂ ಮದ್ದು ಹಾಕಿದ್ರಾ ಹೇಗೆ?’
‘....’
‘ಅಯ್ಯೋ ದೇವ್ರೇ... ಮಾತಾಡಿ ಮಾರಾಯ್ತಿಯರೇ... ಇಲ್ಲಿ ಏನೂ ಅವಾಂತರ ಆಗ್ಲಿಲ್ಲ...’
‘....’
‘....’
ಒಂದು ಜೊತೆ ಕಿಸಕ್ ಸದ್ದು ಸೋಫಾವನ್ನೊಮ್ಮೆ ಕಂಪಿಸಿತು. ಅದೇ ಪ್ರತಿಧ್ವನಿಸಿ ನಡುಮನೆ ತುಂಬ ಗಲಗಲವಾಯ್ತು. ನಕ್ಕೂನಕ್ಕೂ ನನ್ನ ಹರಿಣಿಯ ಕಣ್ಣುಗಳಲ್ಲಿ ನೀರಿಳಿಯಲು ಶುರುವಾದಾಗ ಲಚ್ಚಮ್ಮ ಟವೆಲ್ ತಂದುಕೊಟ್ಟರು. ಸುಮುಖ್ ನೇಹಾಳನ್ನು ಎತ್ತಿಕೊಂಡು ಅಲ್ಲಿಂದ ಜಾರಿಕೊಂಡರು. ಅವರ ಹಿಂದೆಯೇ ಲಚ್ಚಮ್ಮ ಶಿಶಿರಳನ್ನು ಮಾತಾಡಿಸುತ್ತಾ ನಡೆದರು. ಮುಂದೆ ಎಲ್ಲವೂ ಸುಮುಖ್ ಯೋಜಿಸಿದ ಹಾಗೇ ನಡೆದುಹೋಯ್ತು. ಮಕ್ಕಳ ಮನೆಯಿಂದ ಹಿಂದೆ ಬಂದ ಅತ್ತೆ ಕೂಡಾ ಖುಷಿಯಾಗಿಯೇ ನೇಹಾಳನ್ನು ಮುದ್ದು ಮಾಡಲು ಶುರುಮಾಡಿದಾಗ ಈ ಮನೆ ನಂದನವೇ ಆಯ್ತು. ಆಮೇಲಾಮೇಲೆ ಲಚ್ಚಮ್ಮ ಇಲ್ಲಿಗೆ ಬರುದನ್ನು ಕಡಿಮೆ ಮಾಡಿದ್ರು. ನಂಗೆ ಸಹಾಯಕ್ಕೆ ಅತ್ತೆ ಇದ್ರಲ್ಲ, ನಂಗೂ ತೊಂದ್ರೆ ಆಗ್ಲಿಲ್ಲ. ನಿಜವಾಗಲೂ ನೆಮ್ಮದಿ ಅನ್ನುದನ್ನು ನಮ್ಮನೆಗೆ ತಂದವಳು ಈ ನೇಹಾ. ಇವಳು ನಿನ್ನ ತಂಗಿ, ಶಿಶಿರಾ. ಆದ್ರೂ ನೀವು ಒಬ್ರ ಹಾಗೆ ಇನ್ನೊಬ್ರಿಲ್ಲ. ಮೊದಲಿಂದಲೂ ನೀವಿಬ್ರೂ ಬೇರೆ ಬೇರೆ ಸ್ವಭಾವದವ್ರೇ. ನಮ್ಮೆಲ್ಲರ ಜೀವನಕ್ಕೆ ಬೆಳಕಾಗಿ ಬಂದವರು ನೀವಿಬ್ರು ಮಕ್ಳೇ. ಎಂದಿಗೂ ಸುಖವಾಗಿರಿ....
*****
ನಳಿನಿ ಆಂಟಿ ಮಾತು ಮುಗಿಸಿದಾಗ ನಮ್ಮಿಬ್ಬರ ಕಣ್ಣುಗಳು ಗೊಂದಲಮಯವಾಗಿಯೇ ಇದ್ದವು. ನನ್ನೊಳಗೆ ನೂರಾರು ಪ್ರಶ್ನೆಗಳು. ಇಷ್ಟು ಹತ್ರ ಇದ್ದ ನಾವುಗಳು ಈ ಊರು ಬಿಟ್ಟು ಹೋದದ್ದು ಯಾಕೆ? ಯಾವಾಗ? ಮತ್ತೊಮ್ಮೆ ಇದೇ ಊರಿಗೆ ಬಂದದ್ದು ಯಾಕೆ? ಲಚ್ಚಮ್ಮ ಈಗೆಲ್ಲಿದ್ದಾರೆ? ಅಮ್ಮ ಯಾಕೆ ಸದಾ ಸಿಡುಕ್ತಾರೆ? ಅದ್ರ ಹಿನ್ನೆಲೆ ಏನು? ಸಿನೆಮಾಗಳಲ್ಲಿ ಆಗುವ ಹಾಗೆ ಧಡಕ್ಕನೆ ಎದ್ದು ಒಬ್ಬರನ್ನೊಬ್ಬರು ತಬ್ಬಿಕೊಳ್ಳಬೇಕು ಅಂತ ನೇಹಾಳಿಗಾಗಲೀ ನನಗಾಗಲೀ ಅನ್ನಿಸಲೇ ಇಲ್ಲ. ಸುಮ್ಮನೇ ಒಬ್ಬರನ್ನೊಬ್ಬರು ನೋಡುತ್ತಾ ಕೂತಿದ್ದೆವು.

ಆಂಟಿಯೇ ನಮ್ಮನ್ನೆಬ್ಬಿಸಿದರು. ಆಗಲೇ ಸುಮುಖ್ ಅಂಕಲ್ ಗೇಟಿನೊಳಗೆ ಬಂದವರು ನಮ್ಮನ್ನು ಜಾಜಿ ಮಂಟಪದಲ್ಲಿ ನೋಡಿ ಅಲ್ಲಿಗೇ ಬಂದ್ರು. ‘ನಮ್ಮ ಜಿಂಕೆಮರಿಗಳು ಹೇಗಿದಾವೆ?’ ಎನ್ನತ್ತಾ ನಮ್ಮಿಬ್ಬರ ಕಡೆ ಮಿಂಚು ನೋಟ ಹರಿಸಿದರು. ಅವರು ಯಾವಾಗಲೂ ಹೇಳುತ್ತಿದ್ದ ಆ ‘ಜಿಂಕೆಮರಿಗಳು’ ಪದಕ್ಕೆ ಇವತ್ತು ವಿಶೇಷ ಅರ್ಥ ಕಂಡಿತು ನಮಗಿಬ್ಬರಿಗೂ. ಅವರ ಕಣ್ಣ ಮಿಂಚು ನಮ್ಮೊಳಗೆ ಹರಿಯಿತು. ಅಚಾನಕ್ ವಾಚಿನತ್ತ ನೋಡಿ ಗಾಬರಿಯಿಂದ ಮೆಟ್ಟಿಬಿದ್ದೆ.

Monday 10 January, 2011

ಸುಮ್ಮನೆ ನೋಡಿದಾಗ...೧೧

ಮರುದಿನ ಯಾವತ್ತಿನ ಹಾಗೆ ಆಫೀಸಿಗೆ ಹೊರಟವರನ್ನು ತಡೆದು ಕೇಳಿದೆ, ‘ನಿನ್ನೆ ಹರಿಣಿ ಹತ್ರ ಏನು ಮಾತಾಡಿದ್ರಿ? ಏನು ಹೇಳಿದ್ಲು?’
ಮತ್ತದೇ ಮಿಂಚಿನ ತುಂಟನಗೆ ಹೊಮ್ಮಿಸಿದರು. ರೇಗಿತು.
‘ಹಾಗೆ ನೆಗಾಡಿದ್ರೆ ನನ್ಗೆ ಉತ್ರ ಸಿಗುದಿಲ್ಲ. ಏನ್ ಕೇಳಿದ್ರಿ? ಏನೂಂತ ಹೇಳಿದ್ಲು?’
‘ನಿನ್ಗೆ ಬೇಕಾದ ಉತ್ರ ಅವ್ಳ ಹತ್ರ ನೀನೇ ಕೇಳಿಕೋ. ನನ್ಗೆ ಬೇಕಾದ್ದು ಕೇಳಿದ್ದೇನೆ, ಕೊಟ್ಟಿದ್ದಾಳೆ. ಈಗ ನಾನ್ ಹೊರಟೆ. ಟಾಟಾ...’
ಕೋಪಶಿಖರದ ತುದಿಯಲ್ಲಿದ್ದವಳನ್ನು ಮತ್ತೆ ಮನೆಯೊಳಗೆ ತಂದವಳು ಹರಿಣಿಯೇ.
ಮುದ್ದುಮುದ್ದಾಗಿದ್ದ ಮಗಳನ್ನು ನನ್ನ ಕೈಯಲ್ಲಿಟ್ಟಳು. ‘ಇವಳನ್ನು ನೋಡಿಕೋ’.
ಇವಳು ಸ್ನಾನಕ್ಕೋ ಮತ್ತೆಂತದಕ್ಕೋ ಹೋಗುವವಳಿದ್ದಾಳೆ. ಲಚ್ಚಮ್ಮ ಇನ್ನೊಂದು ಮುದ್ದಿನ ಮುದ್ದೆಯನ್ನು ಮುತ್ತಿಕ್ಕುತ್ತಿರಬೇಕು. ಇವಳ ಇಬ್ಬರು ಮಕ್ಕಳನ್ನೂ ನಾವೆಲ್ಲ ಸದಾ ನೋಡಿಕೊಳ್ಳಬೇಕು. ಇವಳಿಗೆ ಯಾವ ಕರ್ತವ್ಯ, ಜವಾಬ್ದಾರಿ ಇಲ್ವಾ?- ನನ್ನ ತಲೆಯಲ್ಲಿ ಕುರುಕುರುಕೀಟ ಗುರುಗುಟ್ಟಿತು. ಮಗುವನ್ನು ನಾನು ಕೈಗೆತ್ತಿಕೊಂಡ ಕ್ಷಣವೇ ಹರಿಣಿ ರೂಮಿಗೆ ಹೋಗಿಬಿಟ್ಟಳು.

ಲಚ್ಚಮ್ಮ ಅಡುಗೆಕೋಣೆಯಿಂದ ಬಂದರು, ‘ನಳಿನಿ, ಮಧ್ಯಾಹ್ನಕ್ಕೆ ಅಡುಗೆ ಏನ್ ಮಾಡ್ಲಿ? ತರಕಾರಿ ಏನುಂಟು ಒಳಗೆ?’
ಅವರ ಸ್ವರ ಕೇಳಿದ್ದೇ ಕೈಯಲ್ಲಿದ್ದ ಗೊಂಬೆ ಉಲಿಯೆತ್ತಿತು. ಅವರ ಮಡಿಲಿಗೇ ಮಗುವನ್ನು ಕೊಟ್ಟು ನಾನು ಹರಿಣಿಯ ಕೋಣೆಗೆ ನುಗ್ಗಿದೆ. ತನ್ನ ಬಟ್ಟೆಗಳನ್ನೆಲ್ಲ ಜೋಡಿಸಿಕೊಂಡು ಚೀಲ ತುಂಬಿಸುತ್ತಿದ್ದಳು. ನಿಧಾನವಾಗಿ ನನ್ನೊಳಗಿನ ಮಂಜು ಕರಗಿ ಚಿತ್ರ ಸ್ಪಷ್ಟವಾಯ್ತು. ಬಟ್ಟೆ ಮಡಚಿ ಚೀಲದೊಳಗೆ ಇಡುತ್ತಿದ್ದವಳನ್ನು ಹಾಗೇ ತಬ್ಬಿಕೊಂಡು ಅತ್ತುಬಿಟ್ಟೆ.
‘ಎಲ್ಲೂ ಹೋಗ್ಬೇಡ ಹರಿಣಿ. ಇಲ್ಲೇ ಇದ್ದುಬಿಡು. ನಾವು ಮೂವರೂ ಸೇರಿ ಈ ಇಬ್ಬರನ್ನು ಬೆಳೆಸುವಾ. ನಮ್ಮ ಸ್ನೇಹ ಉರುಳಾಗುದಿಲ್ಲ ನಿನ್ಗೆ, ನೆರಳಾಗ್ತದೆ. ಇಲ್ಲಿಯೇ ಇರು...’
ನಾನು ಮಾತಾಡ್ತ ಇದ್ದ ಹಾಗೆಯೇ ಲಚ್ಚಮ್ಮ ಒಳಗೆ ಬಂದ್ರು.
‘ನಳಿನಿ, ಹರಿಣಿ ಬೇರೆಲ್ಲಿಗೂ ಹೋಗುದಿಲ್ಲ ಮಾರಾಯ್ತಿ. ಇಲ್ಲೇ ಹಿಂದಿನ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ಇರ್ತಾಳೆ. ಇವತ್ತೇ ನಾವಲ್ಲಿಗೆ ಹೋಗುದು ಅಂತ ನಿರ್ಧಾರ ಆಗಿದೆ, ನಿನ್ನೆ ರಾತ್ರೆ...’
‘ಅಂದ್ರೆ... ಇದೆಲ್ಲ ನನ್ಗೆ ಯಾಕೆ ಹೇಳ್ಲಿಲ್ಲ? ಸುಮುಖ್ ಕೂಡಾ ನನ್ನಿಂದ ಗುಟ್ಟು ಮಾಡಿದ್ದು ಯಾಕಂತೆ? ಇದ್ರೊಳಗೆ ಬೇರೇನು ಕಥೆ ಸೇರಿದೆ? ಯಾಕೆ ನಂಗೆ ಹೇಳ್ಲಿಲ್ಲ?’
‘ನಿಂಗೆ ಹೇಳ್ಬಾರ್ದು ಅಂತ ಅವ್ರೇ ನಮ್ಗೆ ತಾಕೀತು ಮಾಡಿ ಹೋಗಿದ್ದಾರೆ. ನಂಗೆ ಮನೆ ನೋಡಿ ಮಾತಾಡಿ ಬಂದದ್ದೇ ಅವ್ರು, ಮೊನ್ನೆಯೇ. ನಿಂಗೆ ಯಾಕೆ ಹೇಳ್ಲಿಲ್ವೋ ಗೊತ್ತಿಲ್ಲ, ಹೇಳ್ಬೇಡಿ ಅಂತಂದ್ರು. ಅದ್ಕೇ ನಾವು ಹೇಳ್ಲಿಲ್ಲ...’
‘ನಿಂಗೆ ಸರ್‌ಪ್ರೈಸ್ ಮಾಡ್ಬೇಕು ಅಂತ ಏನನ್ನೂ ಹೇಳ್ಲಿಲ್ಲ ಮಾರಾಯ್ತಿ...’ ತಲೆಯಲ್ಲೊಂದು ತೊಟ್ಟಿಲು ಹೊತ್ತು ನಿಂತ ಸುಮುಖ್ ನನ್ನೊಳಗೆ ನಗುವನ್ನೂ ಕೋಪವನ್ನೂ ಒಟ್ಟಿಗೇ ಉಕ್ಕಿಸಿದರು. ಅವರ ಹಿಂದೆಯೇ ಇನ್ನೊಂದು ತೊಟ್ಟಿಲು ಹೊತ್ತ ಒಬ್ಬ ಆಳು.

‘ನೀವು ಆಫೀಸಿಗೆ ಹೊರಟದ್ದಲ್ವಾ? ಇದೆಲ್ಲ ಕಿತಾಪತಿ ಯಾಕೆ ಅಂತ? ನಂಗೆ ಹೇಳಿದ್ರೆ ಏನಾಗ್ತಿತ್ತು?’
‘ನಿಂಗೆ ಮೊನ್ನೆಯೇ ಹೇಳಿದ್ರೆ ನೀನು ಮೊನ್ನೆಯಿಂದಲೇ ಅಳ್ತಾ ಇರ್ತಿದ್ದಿ. ಎರಡು ದಿನದ ಕಣ್ಣೀರು ಉಳಿತಾಯ ಆಯ್ತು ಈಗ, ಅಷ್ಟೇ.’ ಮತ್ತೊಂದು ಮಿಂಚುನಗು. ಅದೀಗ ನನ್ನ ಕಣ್ಣಬಿಂದುಗಳಲ್ಲಿ ಪ್ರತಿಫಲಿಸಿತು. ಕೆನ್ನೆಗಳಲ್ಲಿ ಇಳಿಯಿತು. ಹರಿಣಿ ತಬ್ಬಿಕೊಂಡಳು.
‘ಎರಡು ದಿನಗಳಿಂದ ಕಟ್ಟಿಕೊಂಡ ನನ್ನ ದುಃಖದಕಟ್ಟೆ ಇವತ್ತೀಗ ಹರೀತದೆ, ನಳಿನಿ...’
‘ಬಕೆಟ್ ತನ್ನಿ ಲಚ್ಚಮ್ಮ...’
‘ಅಯ್ಯಾ, ಬಕೆಟ್ ಮತ್ತೆ ತರ್ಲಿ, ಈ ತೊಟ್ಟಿಲು ಎಲ್ಲಿಡ್ಲಿ ಹೇಳಿ ಮೊದ್ಲು...’
ಎಲ್ಲರ ನಗುವಿನ ನಡುವೆ ಮಕ್ಕಳೂ ಮೆಲ್ಲ ರಾಗ ಎತ್ತಿದರು. ನಾನು ವಾಸ್ತವಕ್ಕೆ ಬಂದೆ. ಮುಖ ಒರಸಿಕೊಂಡೆ.
‘ಏನಿದೆಲ್ಲ ಒಳಸಂಚು? ಈಗ್ಲಾದ್ರೂ ಹೇಳ್ತೀರಾ? ಸುಮುಖ್, ನೀವೇ ಹೇಳ್ಬೇಕು, ದೊಡ್ಡ ಕಿಲಾಡಿ ಆಗಿದ್ದೀರಿ ನೀವು. ನೀವೇ ತಪ್ಪೊಪ್ಪಿಗೆ ಹೇಳಿಕೆ ಕೊಟ್ರೆ ಕ್ಷಮೆ ಸಿಗ್ಬಹುದು.’
‘ಒಂದೊಳ್ಳೆ ಕಡಕ್ ಚಾ ಸಿಕ್ಕಿದ್ರೆ ತಪ್ಪೊಪ್ಪಿಗೆ ಹೇಳಿಕೆ ಕೊಡುವ ಬಗ್ಗೆ ಯೋಚನೆ ಮಾಡಬಹುದೇನೋ...’
‘ನೀವೆಲ್ಲ ಮಾತಾಡ್ತಾ ಕೂತ್ಕೊಳ್ಳಿ. ಕಡಕ್ ಚಾ ನಾನ್ ಮಾಡಿ ತರ್ತೇನೆ.’ ಲಚ್ಚಮ್ಮ ಒಳಗೆ ಹೋದ್ರು. ನಾವು ಇಬ್ಬರು ಮಕ್ಕಳನ್ನೂ ಎತ್ತಿಕೊಂಡು ನಡುಮನೆಯ ಸೋಫಾಗಳಲ್ಲಿ ಕೂತೆವು. ಎರಡು ಜೋಡಿ ಕಣ್ಣುಗಳು ಸುಮುಖ್ ಮುಖದಲ್ಲಿ ನೆಲೆಯಾದವು.

Monday 3 January, 2011

ಸುಮ್ಮನೆ ನೋಡಿದಾಗ...೧೦

************
ನಲ್ಮೆಯ ಓದುಗರಿಗೆಲ್ಲ ಹೊಸ ವರ್ಷದ ಶುಭಾಶಯಗಳು.
ಹೊಸವರುಷವು ಹೊಸದೆ ಸಂಚಿ ತಂದಿದೆ

ಹೊಸಹೊಸತು ಕನಸು ಕಣ್ಣ ಅಂಚಿನಲ್ಲಿದೆ

ಎಲ್ಲ ಕನಸುಗಳು ಹುರುಪು ತರಲಿ

ಎಲ್ಲ ದಿನಗಳಲೂ ಹರುಷವಿರಲಿ.

************
**ನೀಳ್ಗತೆಯ ಮುಂದಿನ ಭಾಗ**

ನಮ್ಮಿಬ್ಬರ ಸ್ನೇಹ ಗೆಳೆತನವನ್ನೂ ಮೀರಿ ಅಕ್ಕತಂಗಿಯರ ಮಟ್ಟಕ್ಕೆ ಮುಟ್ಟಿತ್ತು ಹರಿಣಿಗೆ ಎಂಟು ತಿಂಗಳಾಗುವಷ್ಟರಲ್ಲಿ. ನಮ್ಮ ಹರಟೆ ಮಾತಿನ ನಡುವೆ ಬಾರದ ವಿಷಯಗಳೇ ಇರಲಿಲ್ಲ. ನೆರೆಕರೆಯಲ್ಲಿ ಈಕೆ ನನ್ನ ತಂಗಿಯೇ. ಇದರಿಂದ ಸಲ್ಲದ ನೂರೆಂಟು ಪ್ರಶ್ನೆಗಳಿಗೆ ಆರಂಭದಲ್ಲೇ ಪೂರ್ಣವಿರಾಮ ಬಿದ್ದಿತ್ತು. ಯಾವಾಗಲಾದರೂ ಸುಮುಖ್ ಟೂರ್ ಹೋದಾಗ ನಾವಿಬ್ಬರೂ ಸಿನೆಮಾ ನೋಡಿ ಹೋಟೇಲಲ್ಲಿ ಊಟ ಮಾಡಿ ಬರುತ್ತಿದ್ದೆವು, ಸುಮುಖ್ ಇದನ್ನು ಛೇಡಿಸಿ ನಮ್ಮನ್ನು ರೇಗಿಸುತ್ತಿದ್ದರು. ಮಾತು ಮಾತಿನ ನಡುವೆ ನಮಗೆ ಮಕ್ಕಳಾಗುವ ಸಾಧ್ಯತೆಯೇ ಇಲ್ಲವೆನ್ನುವ ಕಹಿಸತ್ಯವನ್ನು ಹರಿಣಿಗೆ ಹೇಳಿದ್ದೆ. ಅವಳಿಂದ ಕಣ್ಣೀರು ಪ್ರತಿಕ್ರಿಯೆಯಾಗಿತ್ತು.
‘ಈಗಲೇ ಮಗು ಬೇಕಿಲ್ಲದ, ಅರ್ಹತೆಯಿಲ್ಲದ ನನಗೆ ಈ ಪರಿಸ್ಥಿತಿ ಬಂದಿದೆ. ಬೇಕು ಬೇಕು ಅಂತ ಹಂಬಲಿಸುವ ನಿಮಗೆ ನನ್ನನ್ನು ನೋಡಿಕೊಳ್ಳುವ ಈ ಗತಿ. ಇದ್ಯಾವ ನ್ಯಾಯ ನಳಿನಿ? ಎಲ್ಲಿದ್ದಾನೆ ಆ ನಿನ್ನ ದೇವರು? ನನ್ನೆದುರು ಬಂದ್ರೆ ಕೆನ್ನೆಗೆ ಹೊಡೆದು ಕೇಳ್ತೇನೆ...’

ಇಂಥ ಸನ್ನಿವೇಶಗಳಲ್ಲಿ ಅವಳನ್ನು ಸುಮ್ಮನಿರಿಸುವುದೇ ಕಷ್ಟವಾಗುತ್ತಿತ್ತು. ಆ ದಿನಗಳಲ್ಲೇ ಮನೆಯ ಸುತ್ತಲಿನ ಹಲವಾರು ಗಿಡಗಳನ್ನು ನಾವಿಬ್ಬರೂ ಸೇರಿ ನೆಟ್ಟದ್ದು. ಈ ಜಾಜಿ ಮಂಟಪವೂ ಆಗಿಂದೇ. ನಾವು ನೆಟ್ಟ ಜಾಜಿ ಹಬ್ಬಲಿ ಅಂತ ಸುಮುಖ್ ತಾನೇ ಈ ಮಂಟಪ ಕಟ್ಟಿದ್ರು. ನಮ್ಮ ಮೂವರ ಸ್ನೇಹದ ಪ್ರೀತಿಯ ಹಂದರ ಇದು. ಅದ್ಕೇ ನಮಗೆಲ್ಲ ಮೆಚ್ಚಿನ ಸ್ಥಳವೂ ಇದೇ...

ದಿನ-ವಾರ-ತಿಂಗಳು ದಾಟಿದ್ದವು. ಹರಿಣಿ ಗೆಲುವಾಗಿರುತ್ತಿದ್ದಳು. ಅವಳನ್ನು ನೋಡುತ್ತಿದ್ದ ಡಾಕ್ಟರು ನಮ್ಮ ಹಿಂದಿನ ರಸ್ತೆಯಲ್ಲೇ ಇದ್ದರು. ಅದೂ ವರಪ್ರದವೇ ಆಗಿದ್ದು ಸುಮುಖ್ ಊರಲ್ಲಿ ಇಲ್ಲದ ದಿನವೇ ಹರಿಣಿಗೆ ಹೆರಿಗೆ ನೋವು ಬಂದಾಗ, ಹದಿನೈದು ದಿನ ಮೊದಲೇ. ಗಾಬರಿಯಿಂದ ಸುಮುಖ್ ಇಳಿದುಕೊಂಡಿದ್ದ ಹೋಟೇಲಿಗೇ ಫೋನ್ ಮಾಡಿದ್ದೆ, ನಡುರಾತ್ರೆ ಒಂದೂಕಾಲರ ಸಮಯ. ಅವರೇ ನೆನಪಿಸಿದರು, ಡಾಕ್ಟರ್ ಹಿಂದಿನ ರಸ್ತೆಯಲ್ಲೇ ಇರುವುದನ್ನು. ಆಮೇಲಷ್ಟೇ ಡಾಕ್ಟರ್ ಮನೆಗೆ ಫೋನ್ ಮಾಡಿದೆ. ಇಷ್ಟು ದಿನ ಎಲ್ಲವೂ ಸರಿಯಾಗಿ ನಡೆದಿತ್ತು. ಈಗ ನನ್ನ ಕೈಕಾಲೇ ಆಡುತ್ತಿರಲಿಲ್ಲ. ಗಾಬರಿಯಿಂದ ಉಸಿರು ಗಂಟಲಲ್ಲೇ ಏರಿಳಿಯುತ್ತಿತ್ತು, ಶ್ವಾಸಕೋಶದೊಳಗೆ ಹೋಗುತ್ತಿರಲಿಲ್ಲ. ಹರಿಣಿಯೇ ನನ್ನ ಕೈಗಳನ್ನು ಹಿಡಿದು, ‘ದೀರ್ಘವಾಗಿ ಉಸಿರಾಡು, ನೀಳವಾಗಿ ಉಸಿರು ತಗೋ, ನಿಧಾನವಾಗಿ ಹೊರಗೆ ಬಿಡು... ಹಾಗೇ... ರಿಲ್ಯಾಕ್ಸ್...’ ಅಂತೆಲ್ಲ ಹೇಳುತ್ತಿದ್ದಾಗಲೇ ಬಂದ ಡಾಕ್ಟರ್ ಈ ದೃಶ್ಯ ನೋಡಿ ನಕ್ಕುಬಿಟ್ಟರು. ಆಗಷ್ಟೇ ನನ್ನ ಪರಿಸ್ಥಿತಿ ಸುಧಾರಿಸಿಕೊಂಡಿತು.

ಡಾಕ್ಟರ್ ನಮ್ಮಿಬ್ಬರನ್ನೂ ಹೊರಡಿಸಿಕೊಂಡು ತಮ್ಮ ನರ್ಸಿಂಗ್ ಹೋಮಿಗೆ ತಮ್ಮ ಕಾರಲ್ಲೇ ಕರೆದುಕೊಂಡು ಹೋದರು. ಪದೇ ಪದೇ ಪ್ರತೀ ಕಾಲು ಗಂಟೆಗೊಮ್ಮೆ ‘ಅಮ್ಮಾ....’ ಅಂತ ಹೊಟ್ಟೆ ಹಿಡಿಯುತ್ತಿದ್ದ ಹರಿಣಿಯನ್ನು ಸಮಾಧಾನಿಸುತ್ತಾ, ಅವಳು ನನಗೆ ಮಾಡಿದ್ದ ಪಾಠವನ್ನು ಅವಳಿಗೇ ಕಲಿಸಿದರು. ಕಾಂಟ್ರ್ಯಾಕ್ಷನ್ ಬಂದಾಗ ದೀರ್ಘವಾಗಿ ಉಸಿರಾಡಿ ಬಾಯಿಯ ಮೂಲಕ ನಿಧಾನವಾಗಿ ಉಸಿರು ಬಿಡುತ್ತಾ ಪೂರ್ತಿಯಾಗಿ ರಿಲ್ಯಾಕ್ಸ್ ಆಗುವ ರೀತಿಯನ್ನು ಹೇಳಿಕೊಟ್ಟರು. ಆಮೇಲಾಮೇಲೆ ನೋವು ಪ್ರತೀ ಐದು ನಿಮಿಷಕ್ಕೊಂದು ಬರುವಾಗ ಉಸಿರಾಟವನ್ನೂ ಅದಕ್ಕೆ ಸರಿಯಾಗಿ ಹೊಂದಿಸಲು ಹೇಳಿದರು. ನೋವಿನ ಒಂದೂವರೆ ನಿಮಿಷಗಳ ಕಾಲವೂ ನೀಳವಾಗಿ ಒಳ ಉಸಿರನ್ನೂ ಪುಟ್ಟಪುಟ್ಟ ನಿಶ್ವಾಸನ್ನೂ ಮಾಡಲು ತಿಳಿಸಿದರು. ಮುಂದೆ ಎರಡು ನಿಮಿಷಕ್ಕೊಮ್ಮೆ ತೊಂಭತ್ತು ಸೆಕೆಂಡ್ ಉದ್ದದ ಕಾಂಟ್ರ್ಯಾಕ್ಷನ್ಸ್ ಬಂದಾಗಲಂತೂ ನನ್ನ ದೇಹವೇ ನಡುಗುತ್ತಿತ್ತು.

ಅಂತೂ ಇಂತೂ ಮಧ್ಯಾಹ್ನದ ಹನ್ನೊಂದು ಗಂಟೆಯ ಹೊತ್ತಿಗೆ ಲೇಬರ್ ರೂಮಿಗೆ ಕರೆದೊಯ್ದರು. ಮತ್ತೆ ಹತ್ತೇ ನಿಮಿಷಗಳಲ್ಲಿ ಹಸುಗೂಸಿನ ಹೊಸ ಅಳು ನನ್ನನ್ನು ಯಾವುದೋ ಲೋಕಕ್ಕೆ ಕರೆದೊಯ್ದಿತ್ತು. ಮಗುವನ್ನು ನೋಡುವ ಆತುರದಲ್ಲಿ ಇದ್ದವಳಿಗೆ ಬೆನ್ನ ಹಿಂದೆ ಬಂದು ನಿಂತ ಸುಮುಖ್ ಗಮನಕ್ಕೇ ಬಂದಿರಲಿಲ್ಲ. ಮಗುವನ್ನು ಈಗ ತರುತ್ತಾರೆ, ಇನ್ನೊಂದು ಕ್ಷಣಕ್ಕೆ ತರುತ್ತಾರೆ... ಕಾಯುತ್ತಿದ್ದವರಿಗೆ ಮತ್ತೊಂದು ಹಸುಗೂಸಿನ ಹೊಸ ಅಳು ಕೇಳಿತ್ತು. ನಾನು ಕಂಡ ಹಾಗೆ ಅಂದು ಹರಿಣಿಯೊಬ್ಬಳೇ ಹೆರಿಗೆಗಿದ್ದವಳು. ಅಂದ್ರೆ... ಹರಿಣಿಗೆ ಅವಳಿಗಳೇ...

ನರ್ಸ್ ಒಬ್ಬಳು ಹೊರಗೆ ತಲೆ ಹಾಕಿ, ‘ಟ್ವಿನ್ಸ್ ಹುಡುಗಿಯರು. ಕಂಗ್ರಾಟ್ಸ್’ ಅಂತಂದು ಮತ್ತೆ ತಲೆ ಒಳಗೆ ಎಳೆದುಕೊಂಡಳು. ನಾವು ಪರಸ್ಪರ ಮುಖ ನೋಡಿಕೊಂಡೆವು. ಅವಳಿಜವಳಿ ಹುಡುಗಿಯರು. ಅಪ್ಪಾ, ದೇವರೇ... ಇದೇನು ಆಟವಾ ನಿನ್ನದು? ಒಂದಾದ್ರೂ ಸ್ಯಾಂಕ್ಷನ್ ಮಾಡು ಅಂತ ಬೇಡ್ತಾ ಇದ್ದ ನಮಗೆ ಸೊನ್ನೆ. ಒಂದನ್ನೇ ಏನ್ ಮಾಡ್ಲಿ ಅಂತ ಯೋಚಿಸುವವರಿಗೆ ಡಬಲ್... ಬೋನಸ್. ಎಲ್ಲಿಂದೆಲ್ಲಿಗೆ ಲೆಕ್ಕಾಚಾರ. ದೇವ್ರೇ ನಿಂಗೆ ತಲೆ ಸರಿಯಿಲ್ಲ. ನಿಂಗೆ ಲೆಕ್ಕ ಬರುದೇ ಇಲ್ಲ. ಯೂಸ್ ಲೆಸ್ ಫೆಲೋ ನೀನು...

ನನ್ನ ಮನಸ್ಸಿನೊಳಗೆ ಸಾವಿರಾರು ಅಕ್ಷರ-ಪದ-ವಾಕ್ಯಗಳು ಕಲಸಿಕೊಂಡಿದ್ದವು. ‘ಬ್ಲೀಡಿಂಗ್ ಜಾಸ್ತಿ ಉಂಟು. ಬಿ.ನೆಗೆಟಿವ್ ಬ್ಲಡ್ ತನ್ನಿ’ ಅಂತ ಹೇಳಿದಳು ಇನ್ನೊಂದು ನರ್ಸ್. ನನ್ನದು ಬಿ. ನಾನೇ ಕೊಡ್ತೇನೆ ಅಂತ ಹೊರಟವರು ಹತ್ತು ನಿಮಿಷದಲ್ಲಿ ಚಪ್ಪೆ ಮುಖ ಮಾಡಿ ಹಿಂದೆ ಬಂದರು, ತಾನು ಬಿ.ಪೊಸಿಟಿವ್ ಅಂದರು. ನನ್ನದೂ ಬಿ ಗ್ರೂಪ್ ಅಂತ ನೆನಪಾಯ್ತು. ಹೋದೆ. ಟೆಸ್ಟ್ ಮಾಡಿದಾಗ ನನ್ನದು ಬಿ.ನೆಗೆಟಿವ್. ಹರಿಣಿಯ ಪಕ್ಕದ ಟೇಬಲ್ ಮೇಲೆ ನಾನೂ ಮಲಗಿದೆ. ನನ್ನ ಕೈಯಿಂದ ಅವಳ ಕೈಯೊಳಗೆ ನೇರವಾಗಿ ರಕ್ತ ಹೋಗುವಂತೆ ಹೊಂದಿಸಿದರು. ಅವಳನ್ನೇ ನೋಡುತ್ತಾ ಮಲಗಿದೆ. ಅಕ್ಕ-ತಂಗಿಯರೆಂದು ಹೇಳಿಕೊಂಡದ್ದು ಸಾರ್ಥಕವೆನಿಸಿತ್ತು.

ಎಲ್ಲವೂ ಸುಸೂತ್ರವಾಗಿ ಹರಿಣಿ ಮತ್ತು ಮಕ್ಕಳು ಮನೆಗೆ ಬಂದಾಗ ನಿಜವಾದ ತೊಂದರೆ ಶುರುವಾಯ್ತು. ಎಲ್ಲ ಕೆಲಸಗಳನ್ನೂ ನಿಭಾಯಿಸಿಕೊಂಡು ಬಾಣಂತಿ ಮಕ್ಕಳ ಆರೈಕೆ ನನ್ನಿಂದಾಗದ ಕೆಲಸವೆಂದು ಸಂಜೆಯೊಳಗೇ ಗೊತ್ತಾಯ್ತು. ಆಗ ಸಹಾಯಕ್ಕೆ ಬಂದವರು ಲಚ್ಚಮ್ಮ. ಬಾಲವಿಧವೆ. ನಮ್ಮ ದೂರದ ನೆಂಟರು. ಎಲ್ಲರಿಗೂ ಅವರು ಲಚ್ಚಮ್ಮನೇ. ಭಾರೀ ಜಾಣೆ. ಗಡಸು ವ್ಯಕ್ತಿತ್ವದೊಳಗೆ ಅತ್ಯಂತ ಹೃದಯವಂತ ಮನಸ್ಸು. ಅವರು ಚಕಚಕ ಓಡಾಡುತ್ತಾ ಕೆಲಸ ಮಾಡುತ್ತಿದ್ದರೆ ನಾವೆಲ್ಲ ಆಮೆಗಳ ಹಾಗೆ ಅನ್ನಿಸುತ್ತಿತ್ತು. ಹಗಲೆಲ್ಲ ನನ್ನ ಕೆಲಸಗಳಲ್ಲೂ ಕೈಸಹಾಯ ಮಾಡುತ್ತಾ, ಬಾಣಂತಿ ಮಕ್ಕಳನ್ನು ಸ್ನಾನ ಮಾಡಿಸಿ, ಮಕ್ಕಳ ನೀರು-ಹೊಲಸಿನ ಬಟ್ಟೆ ಒಗೆದುಹಾಕಿ, ಮಧ್ಯಾಹ್ನ ಒಂದಷ್ಟು ಹೂಬತ್ತಿ-ದೀಪದಬತ್ತಿ ಹೊಸೆದು, ಸಂಜೆ ಮಕ್ಕಳಿಗೆ ಬಜೆ ಕೊಟ್ಟು, ರಾತ್ರೆಗೆ ಬಟ್ಟೆಗಳನ್ನೆಲ್ಲ ಹೊಂದಿಸಿಕೊಂಡು ಊಟ ಮುಗಿಸಿ ಬಾಣಂತಿ ಕೋಣೆ ಸೇರಿದರೆ ಅಲ್ಲಿಂದ ಮಕ್ಕಳ ಸ್ವರವೂ ಕೇಳದ ಹಾಗೆ ರಾತ್ರೆಯನ್ನೂ ನಿಭಾಯಿಸುತ್ತಿದ್ದರು. ಒಮ್ಮೊಮ್ಮೆ ಅವರಿಗೆ ವಿಶ್ರಾಂತಿ ಇರಲೀಂತ ನಾನು ರಾತ್ರೆ ಹರಿಣಿ ಜೊತೆ ಮಲಗಿದರೆ ಅವರಿಗೆ ನಡುಮನೆಯಲ್ಲಿ ನಿದ್ದೆಯೇ ಬಾರದು. ನಡುರಾತ್ರೆಯೇ ನನ್ನನ್ನೆಬ್ಬಿಸಿ, ‘ನಳಿನಿ. ನೀ ನಿನ್ನ ಕೋಣೆಗೇ ಹೋಗು. ನನಗಿಲ್ಲೇ ಸರಿ.’ ಅಂತ ನನ್ನನ್ನಟ್ಟುತ್ತಿದ್ದರು. ಅವರ ಚೈತನ್ಯದ ಗುಟ್ಟು ಏನಿರಬಹದೆಂದು ಸುಮುಖ್, ಹರಿಣಿ ಮತ್ತು ನಾನು ಅಚ್ಚರಿಗೊಂಡದ್ದು ಎಷ್ಟುಸಲವೋ!

ಹರಿಣಿಯ ಅವಳಿಗಳಿಗೆ ಮೂರು ತಿಂಗಳಾಗುವಾಗ, ಇಲ್ಲಿಂದ ಹೊರಟುಹೋಗುವ ಮಾತೆತ್ತಿದಳು ನಿರ್ಲಿಪ್ತವಾಗಿ. ಆಗಲೇ ನನಗೆಚ್ಚರವಾಗಿದ್ದು, ಹೋಗುತ್ತಾಳಾದರೂ ಎಲ್ಲಿಗೆ? ಹೇಗೆ? ಮುಂದಿನ ಜೀವನದ ಕತೆಯೇನು? ಯಾರಿದ್ದಾರೆ ಅವಳಿಗೆ ಆಸರೆಯಾಗಿ? ಸುಮುಖ್ ಹೇಳುತ್ತಲೇ ಇದ್ದರೂ ಮಕ್ಕಳನ್ನು ನಮಗಾಗಿ ಇಲ್ಲಿಯೇ ಬಿಟ್ಟು ಹೋಗೆನ್ನುವ ಮಾತು ನನ್ನಿಂದ ಇದುವರೆಗೆ ಬಂದಿರಲಿಲ್ಲ. ಅವಳನ್ನು ಕಳಿಸುವ ಯೋಚನೆಯೇ ನನಗಿರಲಿಲ್ಲ. ಈಗ ಏಕಾಏಕಿ ಹೊರಡುವೆ ಅಂದವಳನ್ನು ಏನೂಂತ ಕೇಳುವುದು? ಹೇಗೆ ನಿಲ್ಲಿಸಿಕೊಳ್ಳುವುದು? ಏನೂ ತೋಚದೆ ಸುಮುಖ್ ಮುಖ ನೋಡಿದೆ, ಏನಾದರೂ ಮಾಡಿರೆನ್ನುವ ಹಾಗೆ. ಸಣ್ಣಗೆ ಸಿಳ್ಳೆ ಹಾಕಿ ನಕ್ಕಾಗ ಕಸಿವಿಸಿಯಾಗಿತ್ತು. ನಗುತ್ತಾ ಹರಿಣಿಯ ಕೋಣೆಗೆ ಹೋದವರ ಮೇಲೆ ಕೋಪ ಬಂದು ಅಡುಗೆಮನೆಗೆ ಹೋಗಿಬಿಟ್ಟೆ.