ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 22 May, 2008

ದೇವ ರೂಪ

Thursday, April 10, 2008

ದೇವನೊಬ್ಬ ಶಕ್ತಿ ಸ್ವರೂಪ
ಇತ್ತೆವವಗೆ ನಮ್ಮಕಲ್ಪನೆಯ ರೂಪ
ಎಲ್ಲೋ ಎಷ್ಟೋ ಕೈ-ಕಾಲುಗಳು
ಯಾವ್ಯಾವುದೋ ತಲೆ
ಹೊಟ್ಟೆ, ಶಾಲುಗಳು.

ಗಂಭೀರ ಪ್ರಪಂಚದಲ್ಲಿ
ನಗುವಿಗೆ ಕಾರಣವಿರಲಿ
ಹಾಗೆಂದು ನೀರಾಗಿಸಿ
ಹರಿಸಿ ಬಿಡುವುದೇ
ಅವನ ಜುಟ್ಟನ್ನೆ? ಹೆಬ್ಬೆಟ್ಟನ್ನೆ?
ಒಡೆಯುವುದೇ ಹೊಟ್ಟೆಯನ್ನೆ?
ಆಮೇಲೆ ಅದಕೊಂದು
ಚಂದದ ಬಂಧ
ನಮ್ಮಂತೆಯೇ, ಪಾಪ...
ಅನ್ನುವ ಮರುಕದಿಂದ.

ಒಂದೇ ತಲೆಯ ನೋವಿಗೇ
ಬೆಂಡಾಗುವ ನನಗೆ
ಚತುರ್ಮುಖನ ಪರಿಸ್ಥಿತಿ
ನೆನೆದೇ ಹಾರುತ್ತದೆ ಗುಂಡಿಗೆ.

ಕಮಲನಯನ, ಕಮಲವದನ
ಕಮಲಚರಣನ ಕಮಲಾಕ್ಷಿಗೆ
ಕಮಲ ಬೆಳೆದ ಇವನ ನಾಭಿಯೇ
ಸರಸದ ಸರಸಿಯೆ?

ಮನೆಯೇ ಇಲ್ಲದ ಬೈರಾಗಿ
ಕಾಟ ತಡೆಯದಾಗಿ
ಮದುವೆಯಾದ, ಅವಳಿಗಾಗಿ
ತಾನೇ ಅರ್ಧಶರೀರಿಯಾದ

ಸ್ಯಾಂಪಲ್ ಮಾತ್ರ ಇವು
ಬೇರೇನೇನೋ ಇವೆ,
ಇಲ್ಲಿ ಹೇಳಲಾಗದಷ್ಟು.
ಉಳಿದದ್ದು ಇನ್ನೊಮ್ಮೆ
ಅನ್ನುವುದು ಸುಲಭ
ವಿಶೇಷರೂಪರ ಕೃಪೆಯಿರಲು.
(೦೭-ಎಪ್ರಿಲ್-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 6:20 PM
Labels: ,

12 ಪತ್ರೋತ್ತರ:
ಅರುಣ್ ಮಣಿಪಾಲ್ said...
;-) ...;-)
April 11, 2008 10:56 PM
ಸುಪ್ತದೀಪ್ತಿ suptadeepti said...
ಧನ್ಯವಾದ ಅರುಣ್.
ಆದ್ರೆ... ಹಾಗಂದ್ರೇನು?
April 12, 2008 12:02 AM

sunaath said...
ಗಂಡುದೇವರಗಳ ಮೇಲಿನ ಸಿಟ್ಟಿನಿಂದ ನಾವು ಅವರುಗಳನ್ನು ವಿರೂಪಗೊಳಿಸಿರಬಹುದೆ? ದೇವಿಯರು ಮಾತ್ರ ಚಂದವಾಗಿಯೇ ಇದ್ದಾರಲ್ಲ,ಜ್ಯೋತಿ!
-ಕಾಕಾ
April 12, 2008 8:16 AM

ಸುಪ್ತದೀಪ್ತಿ suptadeepti said...
ದೇವಿಯರ ರೂಪದ ಬಗ್ಗೆ, ಮೂರ್ತಿ-ಪ್ರತಿಮೆಗಳ ಬಗ್ಗೆ, ಅಂದ-ಅಲಂಕಾರಗಳ ಬಗ್ಗೆ, ಇಲ್ಲಿ ಹೇಳಲಾಗದಷ್ಟು ಅಸಂತೋಷವಿದೆ ಕಾಕಾ. ಇದನ್ನು ಮುಖತಃ (ಅಥವಾ ಫೋನಿನಲ್ಲಿ) ಮಾತಾಡುವಾಗ ಹೇಳಬಹುದಷ್ಟೇ ಹೊರತು ಇಲ್ಲಿ ಬರೆಯಲಾರೆ.
April 12, 2008 8:52 PM

ಅರೇಹಳ್ಳಿ ರವಿ Arehalli Ravi said...
ಸುಪ್ತದೀಪ್ತಿಯವರೆ, ಭಾರತಕ್ಕೆ ಬಂದಿರಾ? ಗೊತ್ತಾಗ್ತಿಲ್ಲ.
ವಿಕ್ರಮ್ ಬಂದರೆಂದು ತಿಳಿಯಿತು.
ರವೀ...ಒಂದು ಹೊಸ ಲೇಖನ::ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...
April 14, 2008 5:00 AM

ಸುಪ್ತದೀಪ್ತಿ suptadeepti said...
ರವಿಯವರೇ, ನಾನು ಇದ್ದಲ್ಲೇ ಇದ್ದೇನೆ; ಎಲ್ಲೂ ಹೋಗಿಲ್ಲ-ಬಂದಿಲ್ಲ. ಯಾಕೆ ಹಾಗೆ ಅಂದುಕೊಂಡಿರಿ?
ಲೇಖನದ ಲಿಂಕಿಗೆ ಧನ್ಯವಾದ. ಓದುತ್ತೇನೆ.
April 14, 2008 2:37 PM

srinivas said...
ಸ್ಯಾಂಪಲ್ಲೇ ಇಷ್ಟು ಸೊಗಸಾಗಿರುವಾಗ (ಎಲೆ ಕೊನೆಯಲ್ಲಿ ಬಡಿಸಿರುವುದು), ಇನ್ನು ಪೂರ್ಣ ಪ್ರಮಾಣ ಹೇಗಿರಬೇಕು. ಆತ್ಮವನ್ನು ತೋರಿಸಿ, ಪರಮಾತ್ಮನ ತುಣುಕು ಎಂದಿದ್ದೀರಿ, ಇನ್ನು ಪರಮಾತ್ಮನನ್ನು ತೋರಿಸುವುದು ಯಾವಾಗ :P ಎಷ್ಟೇ ನೀಳವಾಗಿರಲಿ, ಪೂರ್ಣಗೊಳಿಸಿ ನಮ್ಮ ಮುಂದಿಡಬೇಕೆಂದು ಕೋರುವೆ

ನಾ ಕಂಡ ದೈವ ಹೀಗಿದೆ :
ಅಂತರ್ಜಾಲ ನಿಸರ್ಗವೇ?
ನಿಸರ್ಗ ದೇವರೇ?
ಕಣ್ಣಿಗೆ ಕಾಣದು, ಕಿವಿಗೆ ಕೇಳದು,
ಮುಟ್ಟಲಾಗದು ನಿಸರ್ಗ
ಅಂತೆಯೇ ಅಂತರ್ಜಾಲ
ಇಂದ್ರಿಯಗಳಿಗೆ ನಿಲುಕದು
ಯಾರ ಕೈಗೂ ಸಿಲುಕದು
ಆದರೂ ತನ್ನ ಕರಾಮತ್ತು ತೋರುವುದು
ಜಾಲದಿ ಸಿಲುಕಿದವರು ಒಬ್ಬರನೊಬ್ಬರು
ನೋಡದವರು, ಅರಿಯದವರು,
ಆದರೂ ಚಿರಪರಿಚಿತರು
ಚಾಟು ಪದ್ಯ ತಿಳಿಯದ,
ಚಾಟ್ ತಿನ್ನದ ಮಂದಿಯೂ
ಚಾಟಿಸುವವರು ಚಿರಪರಿಚಿತರಂತೆ
April 14, 2008 5:49 PM

ಸುಪ್ತದೀಪ್ತಿ suptadeepti said...
ಶ್ರೀನಿವಾಸರೇ, ಧನ್ಯವಾದಗಳು.
"...ಇನ್ನು ಪರಮಾತ್ಮನನ್ನು ತೋರಿಸುವುದು ಯಾವಾಗ :P"
ಹೀಗಂದರೆ ಹೇಗೆ? ತಲೆತಗ್ಗಿಸಿ ಕ್ಷಮೆ ಕೋರುತ್ತೇನೆ- ಇದು ನನ್ನ ಹದ ಮೀರಿದ ವಿಷಯವೆಂದು. ಮಹಾ ಮಹಾ ಯೋಗಿ, ಜ್ಞಾನಿಗಳೇ ಪರಮಾತ್ಮನನ್ನು "ತೋರಿಸಲು" ಅಶಕ್ಯರಾಗಿರುವಾಗ ತೃಣಮಾತ್ರದ ನಾನ್ಯಾವಳು? ಕ್ಷಮೆಯಿರಲಿ.
ನಿಮ್ಮ ದೈವದ ಬಗ್ಗೆ ಎರಡು ಮಾತಿಲ್ಲ... ಒಳ್ಳೆಯ ಚಿಂತನೆ.
April 14, 2008 6:46 PM

Ravikiran Gopalakrishna said...
Suptadeeptiyavare,
Chennagide. deva - obba purusha annuva kaaranakke avanannu kalpaneyalli swalpa viroopavaagisirabahudu. chaturbujhanirabahudu, chaturmukhanirabahudu, ardhanaariswaranirabahudu atava kamalanaabhiyavanirabahudu. aadare namma kelavu deviyarigoo naavu namma kalpaneyalli ide roopavannu kottidevallave..?! Anyways.... olleya chintane..!
April 15, 2008 1:44 AM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ರವಿಕಿರಣ್. ದೇವಿಯರ ರೂಪ-ಕಲ್ಪನೆಯ ಬಗ್ಗೆ ನನಗಿರುವ ಅಸಂತೋಷವನ್ನು ಇಲ್ಲಿ ಬರೆಯಲಾರೆ... ಅಷ್ಟೂ ಇದೆ.
April 15, 2008 9:04 AM

ಸುಪ್ತದೀಪ್ತಿ suptadeepti said...
ಓದುಗರೇ,
ನಿರ್ಗುಣ, ನಿರಾಕಾರ, ಸಾರ್ವಕಾಲಿಕ, ಸರ್ವಶಕ್ತಿಸ್ವರೂಪ- ಎಂದೆಲ್ಲ ವರ್ಣಿಸಲ್ಪಡುವ, "ದೇವರು" ಎಂದು ಸುಲಭದಲ್ಲಿ ಕರೆಯಲಾಗುವ, ನಮ್ಮೆಲ್ಲರ ಇರುವಿಕೆಯ ಆಧಾರವಾಗಿರುವ, ಅನಂತ-ಅಗಾಧವಾಗಿರುವ- "ಮೂಲ ಶಕ್ತಿ"ಯನ್ನು ನಮ್ಮ ನಮ್ಮ ಕಲ್ಪನೆಯಲ್ಲಿ ಏನೇನೋ ಆಗಿಸಿಕೊಂಡಿದ್ದೇವಲ್ಲ... ಅದರ ಬಗ್ಗೆ ಸಣ್ಣ ಚಟಾಕಿಯಷ್ಟೇ ಇದು. "ದೇವರ" ಬಗ್ಗೆ ನನಗ್ಯಾವ ಅಸಮಾಧಾನವೂ ಇಲ್ಲ. ಆ ಪರಮಾತ್ಮನ ಆರಾಧಕಿಯೇ ನಾನು.
April 15, 2008 9:06 AM


ಅಕ್ಟೋಬರಿನ 4 ಪತ್ರೋತ್ತರ:
ಮನಸ್ವಿನಿ said...
ಒಂದೇ ತಲೆಯ ನೋವಿಗೇ
ಬೆಂಡಾಗುವ ನನಗೆ
ಚತುರ್ಮುಖನ ಪರಿಸ್ಥಿತಿ
ನೆನೆದೇ ಹಾರುತ್ತದೆ ಗುಂಡಿಗೆ.:)
October 2, 2007 7:14 AM

suptadeepti said...
ಧನ್ಯವಾದಗಳು ಮನಸ್ವಿನಿ.
October 2, 2007 3:16 PM

ಸಿಂಧು Sindhu said...
ಜ್ಯೋತಿ,
ಚೆನ್ನಾಗಿದೆ ಕವಿತೆ. ಮೂರ್ತಿರಾಯರ ದೇವರು ನೆನಪಾಯಿತು.
ಇಷ್ಟವಾದ ಸಾಲು
...ನೀರಾಗಿಸಿ ಹರಿಸಿ ಬಿಡುವುದೇ... ಅವನ ಜುಟ್ಟನ್ನೇ, ಹೆಬ್ಬೆಟ್ಟನ್ನೇ? ಒಡೆಯುವುದೆ ಹೊಟ್ಟೆಯನ್ನೇ...

ಅಲ್ವೇ..ಸರಿಯಾಗಿ ಹೇಳಿದ್ರಿ.
October 5, 2007 8:06 AM

suptadeepti said...
ಧನ್ಯವಾದಗಳು ಸಿಂಧು. "ನಿರ್ಗುಣ, ನಿರಾಕಾರ, ಶಕ್ತಿ ಸ್ವರೂಪ" ದೇವರನ್ನು ನಾವು ಏನೇನೆಲ್ಲ ಮಾಡಿ ಕೂರಿಸುತ್ತೇವೆ ಅನ್ನುವ ಬಗ್ಗೆ ನನ್ನ ಅಭಿಪ್ರಾಯದ ತುಣುಕು ಇದು. ನಮ್ಮ ಮನಸ್ಸಿನ ಪ್ರಕೃತಿ-ವಿಕೃತಿಗಳಿಗೆ ಸರಿಯಾಗಿ ದೇವರಿಗೆ ರೂಪ ಕೊಡುವ ನಮಗೆ, ಮಾನವ ಮನಸ್ಸಿನ ಗತಿ-ಸ್ಥಿತಿಗಳು ಅರ್ಥವಾಗುವುದು ಯಾವಾಗ? ಇರಲಿ ಬಿಡಿ, ಇವೂ ಒಳ್ಳೆಯ ಮನೋರಂಜಕಗಳು; ಅಲ್ಲವೆ?
May 12, 2008 10:59 AM

No comments: