ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 22 May, 2008

ಒಡಲಾಚೆಗೀಚೆ

Thursday, February 21, 2008

(ಮೈಸೂರು ಕೆ.ಆರ್.ನಗರದ "ಗ್ರಾಮಾಂತರ ಬುದ್ಧಿಜೀವಿಗಳ ಬಳಗ" ಕಳೆದ ವರ್ಷ ಏರ್ಪಡಿಸಿದ "ದ.ರಾ.ಬೇಂದ್ರೆ ಸ್ಮರಣಾರ್ಥ ಕಾವ್ಯ ಸ್ಪರ್ಧೆ"ಯಲ್ಲಿ 'ವೈಪರೀತ್ಯ' ಮತ್ತು 'ಒಡಲಾಚೆಗೀಚೆ' ಕವನಗಳು, 'ಹೊರನಾಡ ಕನ್ನಡಿಗರು ವಿಭಾಗ'ದಲ್ಲಿ ಪ್ರಶಸ್ತಿಗೆ ಅರ್ಹವಾದವು. ಇದೇ ಫೆಬ್ರವರಿ ಮೂರರಂದು ಮೈಸೂರಿನಲ್ಲಿ ನಡೆದ, ಆ ಸಂಸ್ಥೆಯ ೨೩ನೇ ವಾರ್ಷಿಕೋತ್ಸವದಲ್ಲಿ ವಿಜೇತ ಕವನಗಳನ್ನು ಒಳಗೊಂಡ ಪುಸ್ತಕ ಬಿಡುಗಡೆ ಮಾಡಲಾಗಿದೆ.)

(ಮತ್ತೊಂದು ವರುಷದ ಕುಸುರಿ, ನಿಮ್ಮ ಮಡಿಲಿಗೆ...)
ಸೂರ್ಯನುದಿಸುವನಲ್ಲಿ, ಈ ಊರು ನಿಶೆಯಲ್ಲಿ
ತಂಗಾಳಿ ತೊಟ್ಟಿಲು ಎರಡು ಬದಿಗೂ
ನಡುಹಗಲು ನಟ್ಟಿರುಳು ತೂಗು ಉಯ್ಯಾಲೆಯಲಿ-
ಲಂಬವಾಗುವ ಬೆಳಕು ಎರಡು ಮುಖಕೂ

ಚೈತನ್ಯಕೊಂದು ಎಳೆ, ನಿರ್ಜೀವಕೊಂದು ನೆಲೆ
ಗೋಳದಲಿ ಬಿಸಿಲಿಹುದು ತಂಪು ಇಹುದು
ಅರಳು ಹೂವಿಗೆ ದುಂಬಿ ಮುತ್ತಿಡುವ ಹೊತ್ತಲ್ಲೆ-
ಮುಗ್ಧ ಕಣ್ಣಲಿ ಮಿನುಗುತಾರೆಯಿಹುದು

ಮುಗಿಯಿತೆನ್ನುವ ಪಯಣ ಒಂದು ಪಾದದ ಕ್ರಮಣ
ಇನ್ನೊಂದು ಹೆಜ್ಜೆಯನು ಎತ್ತಬೇಕು
ನಿಂತ ನೀರಾಗದಿರೆ ಬದುಕ ಸರಸಿಗೆ ಅರುಣ-
ಮತ್ತೆ ಹೊನ್ನಿನ ಕಿರಣ ಮೆತ್ತಬೇಕು
(೨೧-ಫೆಬ್ರವರಿ-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:01 AM
Labels: ,

15 ಪತ್ರೋತ್ತರ:
ಸುಶ್ರುತ ದೊಡ್ಡೇರಿ said...
ಸಖತ್ತಾಗಿದೆ ಕವನ.
February 21, 2008 1:38 AM

ವಿಕ್ರಮ ಹತ್ವಾರ said...
ಮುಗಿಯಿತೆನ್ನುವ ಪಯಣ ಒಂದು ಪಾದದ ಕ್ರಮಣ
ಇನ್ನೊಂದು ಹೆಜ್ಜೆಯನು ಎತ್ತಬೇಕು
emtaha olle saalidu....
February 21, 2008 8:11 AM

ಸುಪ್ತದೀಪ್ತಿ suptadeepti said...
ಸುಶ್, ವಿಕ್ಕಿ: ಧನ್ಯವಾದಗಳು ಇಬ್ಬರಿಗೂ.
February 21, 2008 8:34 AM

ಶಾಂತಲಾ ಭಂಡಿ said...
suptadeeptiಯವರೆ...
"ಸೂರ್ಯನುದಿಸುವನಲ್ಲಿ, ಈ ಊರು ನಿಶೆಯಲ್ಲಿ
ತಂಗಾಳಿ ತೊಟ್ಟಿಲು ಎರಡು ಬದಿಗೂ
ನಡುಹಗಲು ನಟ್ಟಿರುಳು ತೂಗು ಉಯ್ಯಾಲೆಯಲಿ-
ಲಂಬವಾಗುವ ಬೆಳಕು ಎರಡು ಮುಖಕೂ"

ನಿಮ್ಮ ಮಿದುಳಲ್ಲಿ ಕವನ ಹುಟ್ಟಲಿಕ್ಕೆಯೇ ಅಂತ ವಿಶೇಷವಾದ ಭಾಗವೊಂದಿದೆಯಾ ಅಂತ! ಈ ಕವನದ ಬಗ್ಗೆ ಮಾತನಾಡಿದಷ್ಟೂ ಕಮ್ಮಿಯೇ. ಮನಮೋಹಕ, ಅಷ್ಟೆ.
February 21, 2008 9:35 AM

sritri said...
"ನಿಂತ ನೀರಾಗದಿರೆ ಬದುಕ ಸರಸಿಗೆ ಅರುಣ-
ಮತ್ತೆ ಹೊನ್ನಿನ ಕಿರಣ ಮೆತ್ತಬೇಕು"

ಮತ್ತೆ ಮತ್ತೆ ಓದಬೇಕೆನಿಸಿದ ಸಾಲು!
February 21, 2008 10:45 AM

Keshav Kulkarni said...
ತುಂಬ ಸುಂದರ ಕವನ. ಕೆ.ಎಸ್.ನ ನಿಮ್ಮಲ್ಲಿ ಅಡಗಿ ಕೂತು ಈ ಥರ ಬರೆಸುತ್ತೀದ್ದಾರೋ ಹೇಗೆ? ನವ್ಯ, ನವ್ಯೋತ್ತರದ ಹಂಗಿಲ್ಲದೇ, ನವೋದಯದ ನಿತ್ಯ ವಸಂತದ ಸಾಲುಗಳು ಮತ್ತೆ ಮತ್ತೆ ಮೆಲುಕು ಹಾಕಿಸುತ್ತವೆ.
-ಕೇಶವ
(www.kannada-nudi.blogspot.com)
February 21, 2008 12:50 PM

ಸುಪ್ತದೀಪ್ತಿ suptadeepti said...
ಶಾಂತಲಾ: "ನಿಮ್ಮ ಮಿದುಳಲ್ಲಿ ಕವನ ಹುಟ್ಟಲಿಕ್ಕೆಯೇ ಅಂತ ವಿಶೇಷವಾದ ಭಾಗವೊಂದಿದೆಯಾ ಅಂತ!"-- ಹೌದೆನಿಸುತ್ತೆ; ಯಾಕಂದ್ರೆ, ಕವನಗಳನ್ನು ಬರೆದಂತೆಲ್ಲ ನನ್ನ ನೆನಪೂ ಕಡಿಮೆಯಾಗುತ್ತಿದೆ... ಆ ಭಾಗ ನನ್ನ ನೆನಪಿನ ಕೋಶಗಳನ್ನು ಆಕ್ರಮಿಸುತ್ತಿದೆಯಾ ಅಂತ!!

ಧನ್ಯವಾದ ವೇಣಿ.

ಕೇಶವ್: "ನವ್ಯ, ನವ್ಯೋತ್ತರದ ಹಂಗಿಲ್ಲದೇ, ನವೋದಯದ ನಿತ್ಯ ವಸಂತದ ಸಾಲುಗಳು..."-- ಅದೇ ನನ್ನ ಮಿತಿ ಅಂತಲೂ ಬಲ್ಲೆ. "ಬರಹದ ಶೈಲಿ ಸಕಾಲಿಕವಾಗಿಲ್ಲ" ಅನ್ನುವುದು ನನ್ನ ಮೇಲಿನ ಟೀಕೆ. ಒಪ್ಪಿಕೊಳ್ಳುತ್ತೇನೆ.
February 21, 2008 2:40 PM

Keshav Kulkarni said...
ಇದು ಟೀಕೆಯಲ್ಲ, ನವ್ಯ ನವ್ಯೋತ್ತರಗಳನ್ನು ಓದಿ ಬೇಸತ್ತ ನಮಗೆ ನವೋದಯದ ಅಹ್ಲಾದತೆಯನ್ನು ನೆನಪಿಸುವ ನಿಮ್ಮ ಹೊಸ ಕವನಗಳು ಚಿತೋಹಾರಿ ಎಂದು ನಾನು ಹೇಳಲು ಹೊರಟಿದ್ದು.
- ಕೇಶವ
February 21, 2008 3:41 PM

ಸುಪ್ತದೀಪ್ತಿ suptadeepti said...
ಕ್ಷಮಿಸಿ ಕೇಶವ್, ನಿಮ್ಮ ಮಾತು ಟೀಕೆಯಲ್ಲ. ಬೇರೆ ಸಮಕಾಲೀನ ಕವಿ-ಕವಯಿತ್ರಿಯರು ನನ್ನ ಬಗ್ಗೆ ಹೇಳಿರುವ ಮಾತಿದು. ನಿಮ್ಮದಲ್ಲ. ಈ ನನ್ನ ಅಭಿಪ್ರಾಯ ಮೊದಲ ಮಾತಿನಲ್ಲಿ ಸ್ಪಷ್ಟವಿರಲಿಲ್ಲ, ಕ್ಷಮಿಸಿ.
February 21, 2008 3:59 PM

ಮನಸ್ವಿನಿ said...
ನನ್ನ fav ಲಿಸ್ಟಿಗೆ ಈ ಹಾಡನ್ನು ಹಾಕಿಕೊಂಡಿದ್ದೇನೆ. ಸೂಪರ್ ಆಗಿದೆ.
February 22, 2008 5:44 AM

ಸುಪ್ತದೀಪ್ತಿ suptadeepti said...
ಧನ್ಯವಾದ ಸು.
February 22, 2008 10:21 AM

sunaath said...
ಇರುಳು ಕಳೆಯಲೆ ಬೇಕು, ಬೆಳಗು ಮೂಡಲೆ ಬೇಕು, ಪಯಣ ಸಾಗಲೆ ಬೇಕು ಅನಂತದೆಡೆಗೆ!
February 22, 2008 11:27 AM

ಸುಪ್ತದೀಪ್ತಿ suptadeepti said...
ಆ ಅನಂತ ಪಯಣವೇ ಈ ಜೀವನದ ಗುರಿ... ಧನ್ಯವಾದಗಳು.
February 22, 2008 11:31 AM

decemberstud said...
ನವ್ಯ, ನವ್ಯೋದಯದ ಹಂಗಿಲ್ಲದಿದ್ದರೆ, ಅದು ಮಿತಿ ಹೇಗಾದೀತು?
ಸಣ್ಣಕಥೆ ಬರೆಯುವವನು ಕಾದಂಬರಿ ಬರೆಯಲೇಬೇಕಿಲ್ಲವಲ್ಲ. ಭೈರಪ್ಪನವರಿಗೂ ಒಮ್ದು ಮಿತಿ ಇದೆ, ಕೆ.ಎಸ್.ನ ರಿಗೂ ಇದೆ. ಆ ಮಟ್ಟೀಗೆ ಹೇಳುವುದಾದರೆ ನವೋದಯ ನಿಮ್ಮ ಮಿತಿ ಹೌದು. ಆದರೆ, ನನ್ನನ್ನು ಕೇಳಿದರೆ ಅದು ನಿಮ್ಮ ಕವಿತೆಗಳ ಬುನಾದಿ. ಹೆಚ್ಚು ವಾಲುವುದು ಬೇಡ!!!
February 24, 2008 12:37 AM

ಸುಪ್ತದೀಪ್ತಿ suptadeepti said...
ಹೆಚ್ಚು ವಾಲಲಾರೆ ಡಿ.ಎಸ್.... ಬೆನ್ನ ಹಿಂದೆಯೇ ಜೊತೆಕೊಡಲು ನೀನಿದ್ದೀಯಲ್ಲ. ಧನ್ಯವಾದಗಳು.
February 24, 2008 10:23 PM

No comments: