ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 20 May, 2008

ಹೃಶಿ (ಋಷಿ)ಕೇಶದಲ್ಲಿ ಗಂಗೆ

Sunday, October 7, 2007

ಹರಿದಳು, ನೊರೆ ಮೊರೆದು, ಝರಿ ಇಳಿದು,
ಹಾರಿ ಬಿದ್ದು ಬಂದವಳು;
ಪ್ರಶಾಂತ ಸಮಸ್ಥರದಲ್ಲಿ ಸ್ಥಾಯಿಯಂತೆ,
ಧಾವಂತವಿಲ್ಲದವಳು.

ಕಳೆದ ಏರು-ಪೇರುಗಳ ನೆನಪಿಲ್ಲದೆ,
ಇಹದ ಚಿಂತೆಯಿಲ್ಲದವಳು;
ಮುಂದಿನ ಹೊಲಸು-ನೋವುಗಳ ಅರಿವಿಲ್ಲದೆ,
ಪರದ ಗೊಂದಲವಿಲ್ಲದವಳು.

ಪಟಿಕ-ಶುದ್ಧ ಉದ್ಬುದ್ಧಳಾಗಿ ಬಂದು-
ಪವಿತ್ರ ನೀರೆಯಾದವಳು;
ಪಾಪ-ಪುಣ್ಯಗಳಾಚೆಯೆಲ್ಲವ ತೊಳೆದು-
ಪಾವಿತ್ರ್ಯದ ಪ್ರತೀಕವಾದವಳು.

ರಾಮ-ಲಕ್ಷ್ಮಣರ ಹೆಸರ ಹಿಡಿದ-
ತೂಗುಯ್ಯಾಲೆ ತೂಗುವವಳು,
ಗುಹನ ಪುಟ್ಟ ತೆಪ್ಪ ತೇಲಿಸಿ, ದಾಟಿಸಿ,
ನಿರೀಕ್ಷೆಗಳ ಮೀರಿದವಳು.

ಹಚ್ಚಿ ಬಿಟ್ಟ ಪುಟ್ಟ ಪುಟ್ಟ ಹಣತೆಗಳಲಿ-
ಭರವಸೆಗಳ ಬೆಳಗುವವಳು;
ಹಾದಿಯುದ್ದ ಹರಿದುಹೋದ ಸೆರಗಂಚಲಿ-
ವಿಶ್ವಾಸದ ಸೆಲೆ ಹರಿಸುವವಳು.
(೨೬-ಜೂನ್-೨೦೦೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 10:52 PM
Labels:

2 ಪತ್ರೋತ್ತರ:
ಅರ್ಚನಾ said...
hariva lahari bahaLa chennagi pravahiside..good work..keep it up!!cheers,archana
October 8, 2007 3:29 AM
suptadeepti said...
ಧನ್ಯವಾದಗಳು, ಅರ್ಚನಾ. ನೀವೆಲ್ಲ ಹೀಗೆ ಬಂದು, ಓದಿ, ಆನಂದಿಸುತ್ತಿದ್ದರೆ ಯಾವ ಲಹರಿಗೆ ಖುಷಿಯಾಗದು?
October 8, 2007 1:57 PM

No comments: