ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 19 May, 2008

ಆವರಣ ಓದಿದೆ....

Thursday, April 19, 2007

ಹೌದು. ಆದ್ದರಿಂದ ಈಗ ಕೆಲವು ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳು ಟೊಳ್ಳೆನಿಸುತ್ತಿವೆ. ಆವರಣ ಒಳಗೊಳ್ಳುವ ವಸ್ತುವಿನ ಬಗ್ಗೆ ನನ್ನದೇ ಆದ ನಿಲುವುಗಳಿದ್ದವು. ಈಗ ಅಡಿಪಾಯವೇ ಅಲುಗಾಡುತ್ತಿದೆ. ಇತಿಹಾಸ, ರಾಜಕೀಯ, ಸಮಾಜ, ವಿದ್ಯಾಸಂಸ್ಥೆಗಳು, ಕಲಾವಿದರು, ಬುದ್ಧಿಜೀವಿಗಳು, ಸಾಮಾನ್ಯ ವ್ಯಕ್ತಿಗಳು.... ಎಲ್ಲಕ್ಕಿಂತ ಮಿಗಿಲಾಗಿ ನಮ್ಮೊಳಗಿನ ಭಾರತೀಯತೆ- ಇವೆಲ್ಲ ಒಂದರೊಳಗೊಂದು ಬೆಸೆದುಕೊಂಡ ಪಾತ್ರಗಳು ಪೊರೆಕಳಚಿದಂತೆ ತೆರೆದುಕೊಳ್ಳುವಾಗ ಓದುಗ ಪ್ರಜ್ಞೆ ಈ ಭೌತಿಕ ಪ್ರಪಂಚ ಬಿಟ್ಟು ಪುಟಗಳೊಳಗಿನ ಅಲೌಕಿಕದಲ್ಲಿ ಲೀನವಾಗಿರುತ್ತದೆ. ಭೈರಪ್ಪನವರ ಕಥನದ ಹೆಚ್ಚುಗಾರಿಕೆ ಇದಾದರೂ ಇಲ್ಲಿಯ ವಿಷಯವೂ ಇದಕ್ಕೆ ಪೂರಕವಾಗಿದೆ ಅನಿಸಿತು.

ಇದಕ್ಕಿಂತ ಹೆಚ್ಚು ಹೇಳಲಾರೆ. ನೀವೇ ಓದಿ.... ಆವರಣದಲ್ಲಿ ಅನಾವರಣಗೊಳ್ಳುವ ಪಾತ್ರಗಳು ನಿಮ್ಮನ್ನು ಆವರಿಸಿಕೊಳ್ಳದಿದ್ದರೆ, ಮತ್ತೆ ಕೇಳಿ!!

"ನನಗೀಗ ಓದಲು ಸಮಯವಿಲ್ಲ, ನೀವು ಓದಿ. ನಾನು ಮತ್ತೆ ಓದುತ್ತೇನೆ" ಅಂತ ಪುಸ್ತಕವನ್ನು ನನಗೆ ತಂದುಕೊಟ್ಟ ಒಬ್ಬ ಸ್ನೇಹಿತರಿಗೆ ಹೃತ್ಪೂರ್ವಕ ವಂದನೆಗಳು. ಇಂಥವರು ಎಷ್ಟು ಜನ ಇರುತ್ತಾರೆ?

ಅಮೆರಿಕದಲ್ಲಿ "ಆವರಣ"ದ ಪ್ರತಿಗಳಿಗಾಗಿ ಸಂಪರ್ಕ:ಶುಭಾ ಯಂಗ್, ಉತ್ತರ ಅಮೆರಿಕ ಸಾಹಿತ್ಯ ಭಂಡಾರ,
E-mail: sahityabna@hotmail.com
http://sahityabna.homestead.com
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 11:30 PM
Labels:

8 ಪತ್ರೋತ್ತರ:
Mahesh Chevar said...
ಎರಡು ದಿನ ಮೊದಲು ಆವರಣ ಖರೀದಿಸಿದ್ದೇನೆ. ಓದು ಇನ್ನೂ ಆರಂಭವಾಗಿಲ್ಲ. ಓದಿದ ನಂತರ ಬರೆಯುತ್ತೇನೆ...
April 22, 2007 11:55 AM

parijata said...
ಭೈರಪ್ಪನವರ ಮಿಕ್ಕ ಕಾದಂಬರಿಗಳಂತೆ ಆವರಣ ಕೂಡ ಬಹಳ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ವಿಷಯ ಮುಂಚೆಯೇ ತಿಳಿದದ್ದಾದರೂ ಕಾದಂಬರಿಯ ರೂಪದಲ್ಲಿ ಇತಿಹಾಸವನ್ನು ಓದಿದ್ದು ಹೊಸದಾದ ಅನುಭವ.
April 24, 2007 10:42 PM

suptadeepti said...
ಮಹೇಶ್, ಪಾರಿಜಾತ, ಧನ್ಯವಾದಗಳು.ಆವರಣದ ಹಿಡಿಸಿತೇ? ವಸ್ತು, ಪಾತ್ರ, ವಿನ್ಯಾಸ... ಎಲ್ಲದ್ರಲ್ಲೂ ಇದು ವಿಭಿನ್ನ ಅಂತ ನನ್ನ ಅಂಬೋಣ, ಒಪ್ಪುವಿರಾ?
April 26, 2007 12:05 AM

parijata said...
ಆವರಣ ವಿನ್ಯಾಸದಲ್ಲಿ ವಿಭಿನ್ನ. ಇಬ್ಬರು ವ್ಯಕ್ತಿಗಳ, ಕಾಲದಲ್ಲಿ ಶತಮಾನಗಳ ವ್ಯತ್ಯಾಸವಿರುವ ಎರಡು ಕಥೆಗಳನ್ನು ಜೋಡಿಸಿ ಒಂದು ಕಥೆಯನ್ನು ಹೆಣೆದಿದ್ದನ್ನು ನಾನು ನೋಡಿದ್ದು ಇದೇ ಮೊದಲು. ಕಥಾವಸ್ತು 'ಸಾರ್ಥ'ದ ಕಥೆಯ ಒಂದು ಬಗೆಗಿನ ಎಳೆಗಳನ್ನು ಮುಂದುವರೆಸಿಕೊಂಡು ಹೋಗುತ್ತದೆಯೆಂದು ನನ್ನ ಭಾವನೆ. ಸಾರ್ಥದಲ್ಲಿ ಬರುವ ದೇವಸ್ಥಾನ-ನಾಶದ ಪ್ರಸಂಗವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿದ್ದೇನೆ. ನೀವೇನಂತೀರಿ?
May 4, 2007 4:46 AM

ಪವ್ವಿ said...
ನನ್ನ ಅನಿಸಿಕೆ ಸ್ವಲ್ಪ ಬಿನ್ನ, ಮೊದಲಿನಿಂದಲೂ ಬೈರಪ್ಪನವರ ಕಾದಂಬರಿಗಳನ್ನು ಓದುತ್ತಿದ್ದ ನನಗೆ ಈ ಪುಸ್ತಕವನ್ನು ಓದು ಅಂತ ಶಿಫಾರಸು ಮಾಡಿದವರು ನನ್ನ ಚಡ್ದಿ ಗೆಳೆಯರು. ಎಂದೂ ಕನ್ನಡ ಪುಸ್ತಕಗಳನ್ನು ಇಷ್ಟು ಅಕ್ಕರೆಯಿಂದ ಓದದವರ ಕೈನಲ್ಲೂ ಈ ಪುಸ್ತಕ ಬಂದ ಕೂಡಲೇ ನನಗೆ ಆಶ್ಚರ್ಯವಾಯಿತು. ಓದಲು ಶುರು ಮಾಡಿದಾಗ ಮೊದಲ ೧೫೦ ಪೇಜ್ ಬೇಗ ಓದಿಸಿಕೊಂಡು ಹೋದರು, ಮುಂದೆ ಅದರ ಸಾರ ಕಮ್ಮಿ ಆಯಿತೆಂದು ನನ್ನ ಭಾವನೆ.ಮುಖ್ಯವಾಗಿ ಆವರಣದಲ್ಲಿ ಬರುವ ಪಾತ್ರಗಳು ಕೆಲವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬರೆದ ಹಾಗೆ ಇದೆ ಎಂದು ಪ್ರತಿಯೊಬ್ಬರಿಗೂ ಅನಿಸುತ್ತದೆ,ಇದೂ ಎಲ್ಲೊ ಅವರ ವೈಯಕ್ತಿಕ ಜೀವನವನ್ನು ತೆರೆದಿಡುವ ಪ್ರಯತ್ನ ಮಾಡುತ್ತಿದೆಯೇ ಎಂಬ್ ಸಂದೇಹ ನನಗೆ ಕಾಡಿದ್ದು ಸಹಜ. ಓಟ್ಟಿನಲ್ಲಿ ಅವರ ಹಿಂದಿನ ಕಾದಂಬರಿಗಳ ಚಾರ್ಮ್ ಇಲ್ಲಾ, ಸರಿಸುಮಾರು ಇದು ಧರ್ಮರ್ಶಿಯ ಮುಂದಿನ ಭಾಗದ ಹಾಗೆ ಇದೆ ಅಷ್ಟೆ. ಅದರಲ್ಲಿನ ಸತ್ಯ ಇದರಲ್ಲಿ ಲಕ್ಸ್ಮಿ ಅಗಿದ್ದಾಳೆ ಆದರೆ ಒಂದು ವ್ಯತ್ಯಾಸವೆಂದರೆ ಇದರಲ್ಲಿ ತಮ್ಮ ಅನಿಸಿಕೆಗಳನ್ನು ಇತಿಹಾಸದ ಪುರಾವೆ ಜೊತೆ ಬೆಂಬಲಿಸಿರುವುದು ಹೆಚ್ಚು ಪ್ರಚಾರ ಪಡೆಯಲು ಕಾರಣ.
May 6, 2007 5:28 AM

suptadeepti said...
ಪಾರಿಜಾತ, ಪವ್ವಿ, ವಂದನೆಗಳು.

ಪವ್ವಿ-- ಲಹರಿಯೊಳಗೆ ಸ್ವಾಗತ. ನಾನು ಭೈರಪ್ಪನವರ ಎಲ್ಲ ಕಾದಂಬರಿಗಳನ್ನು ಓದಿದವಳಲ್ಲ. ಕೆಲವೇ ಕೆಲವನ್ನು ಓದಿದ್ದೇನೆ. ಧರ್ಮಶ್ರೀ, ದೂರಸರಿದವರು, ನಾಯಿನೆರಳು, ತಬ್ಬಲಿಯು..., ಇವನ್ನೆಲ್ಲ ನಾನು ಓದೇ ಇಲ್ಲ, ಆದ್ದರಿಂದ ಇಲ್ಲಿ ಚರ್ಚಿಸಲಾರೆ. ಪರ್ವ, ತಂತು, ಅಂಚು, ಸಾಕ್ಷಿ, ಅನ್ವೇಷಣೆ, ಮಂದ್ರ-- ಅವೆಲ್ಲಕ್ಕಿಂತ ಇದು ಭಿನ್ನ ಅಂತ ನನ್ನ ಅಭಿಪ್ರಾಯ- ವಸ್ತು, ವಿನ್ಯಾಸ, ಗಾತ್ರಗಳಲ್ಲಿ- ಅಷ್ಟೇ.ಭೈರಪ್ಪನವರ ಕಾದಂಬರಿಗಳು ಜೀವನದ ತುಣುಕುಗಳು. ಹಾಗಾಗಿ ಅಲ್ಲಿ, ನಮ್ಮ ಸುತ್ತ-ಮುತ್ತ ಇರುವ ಅವರಿವರು ಕಂಡುಬಂದರೆ ಆಶ್ಚರ್ಯವಿಲ್ಲ. ಹಾಗೆಂದು 'ಅವರನ್ನೇ ಉದ್ದೇಶದಲ್ಲಿಟ್ಟುಕೊಂಡು ಬರೆದದ್ದು' ಎನ್ನುವುದು ಸರಿಯಾದೀತೆ?.
May 6, 2007 4:37 PM

ಪವ್ವಿ said...
ಆವರಣ ಓದಿದಾಗ ನಿಮಗೆ ಶಾಸ್ತ್ರಿ ಪಾತ್ರ ಯಾರನ್ನು ಜ್ಞಾಪಿಸಿತು ಎಂದು ಸ್ವಲ್ಪ ಹೇಳುತ್ತಿರಾ ?. ಕಾದಂಬರಿಯನ್ನು ಬರೆಯುವಾಗ ನಮ್ಮ ಸುತ್ತ-ಮುತ್ತಲಿನ ವ್ಯಕ್ತಿಗಳೇ ಪಾತ್ರಗಳಾಗುವುದು ಸಾಮನ್ಯ. ಆದರೆ ಒಂದು ಕಥೆಯ ಹಂದರಕ್ಕೆ ಒಂದು ಪಾತ್ರವನ್ನು ಸೃಷ್ಟಿಸಿ ಅದಕ್ಕೆ ಒಂದು ವ್ಯಕ್ತಿಯ ಕಥೆಯನ್ನು ತುಂಬುವುದು ಸರಿ ಅಲ್ಲ. ಇದು ಯಾರ ಆವರಣವೋ ಅಥವಾ ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಬರೆದ ಜನರ ವೈಯಕ್ತಿಕ ಜೀವನಗಳ ಅನಾವರಣವೋ ಕಾಣೆ. ಇಂಥಾ ಕಥೆಗಳು ಕೆಲ ವರ್ಗಗಳಿಗೆ ಥ್ರಿಲ್ ಕೊಡಬಹುದು, ಆದರೆ ಆ ಜನಗಳು ಇವರು ಜಾತಿ ಪದ್ಧತಿ ಬಗ್ಗೆ ಬರೆದವನ್ನು ಎಷ್ಟರ ಮಟ್ಟಿಗೆ ಓದಿದ್ದರೆ ಅಂತ ಸಂದೇಹ ಆಗುತ್ತದೆ. ನಿಜಕ್ಕೂ ಮನಸ್ಸಿನಲ್ಲಿ ಅಚ್ಚು ಆಗಿ ಉಳಿಯುವ ಪಾತ್ರಗಳು ಅಂದರೆ ದಾಟುವಿನ ಸತ್ಯ, ಶ್ರೀನಿವಾಸ, ಮೋಹನದಾಸ್ ..
May 7, 2007 6:38 AM

suptadeepti said...
ಆವರಣದ ಶಾಸ್ತ್ರಿಯ ಪಾತ್ರ, ನನಗೆ ಕೆಲವಾರು ವ್ಯಕ್ತಿಗಳನ್ನು ನೆನಪಿಸಿತು, ಒಬ್ಬರನ್ನಷ್ಟೇ ಅಲ್ಲ. ಹಾಗೆಯೇ ಲಕ್ಷ್ಮಿಯ ಪಾತ್ರವೂ ನಮ್ಮೂರಿನ ಒಬ್ಬರನ್ನು ಹೋಲುತ್ತಿದೆ ಅನಿಸಿತು. ಇಂಥದ್ದು ಸಾಮಾನ್ಯ, ಆದ್ದರಿಂದ ಈ ಬಗ್ಗೆ ಚರ್ಚೆ ನನ್ನ ಉದ್ದೇಶವಲ್ಲ.ದಾಟು ನಾನು ಓದಿಲ್ಲ, ಹಾಗಾಗಿ ಅಲ್ಲಿಯೂ ನನಗೇನೂ ಹೇಳಲು ಇಲ್ಲ. ನೀವು ಏನು ಹೇಳಬಯಸಿದ್ದೀರೋ ತಿಳಿಯಲಿಲ್ಲ. ಇರಲಿ ಬಿಡಿ, ಇದು ಯಾವುದೇ ಚರ್ಚಾ ವೇದಿಕೆ ಅಲ್ಲ. ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ.
May 8, 2007 7:48 PM

No comments: