ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday 13 February, 2009

ಜೋಡಿ ಗೀತೆಗಳಲ್ಲೊಂದು- ಅಕ್ಕರೆ ಹರಿದಾಗ...



ಸಂಜೀಗಿ ಮಲ್ಲೀಗಿ ಅರಳ್ಯಾವ ಬೆಳ್ಳಾಗೆ
ಈಗೆಲ್ಲಿಗ್ಹೊಂಟ್ಯೋ ನನರಾಯ- ನೋಡಲ್ಲಿ-
ಮಿಣುಕಾಡೊ ಕಣ್ಣು ನಗತಾವ

ಹೀಂಗ್ಹೀಂಗೆ ಬಂದಿದ್ದೆ, ಹಾಂಗ್ಹಾಂಗೇ ಹೊಂಟೆದ್ದೆ
ಬ್ಯಾಸರಿಕೆ ಯಾಕೋ ನನರಾಯ- ಒಂದಾರೆ-
ತೋಳ್ದಿಂಬಿಗೊರಗಿ ನೋಡೆಂದೆ

ದಿನವೆಲ್ಲ ಓಡ್ಯಾಡಿ ದಣಿವಾಗಿ ಬಂದೀಯೆ
ಒಂದೀಟು ಅಡ್ಡಾಗು ನನರಾಯ- ನಿಂಗಿಂಥ-
ಆತುರದ ಕಾರ್ಯ ಬ್ಯಾಡೇಳು

ಕಾಲಿಗೆ ನೀರ್ಕೊಡುವೆ, ಕೈಯೊಳಗೆ ಕೈಯಿಡುವೆ
ಅಕ್ಕರೆ ಮಳೆಗರೆವೆ ನನರಾಯ- ಕಣ್ಣಲ್ಲಿ-
ಕಣ್ಣಿರಿಸಿ ನಗಬಾರೊ ಪ್ರೀತೀಲೆ

ಆಸರಿಗೆ ಎಳನೀರ ಆರಿಸಿ ಅತ್ತಿಡುವೆ
ಇನಿಮಾವು ಉಣಲಿಡುವೆ ನನರಾಯ- ನೀನಿಂದು-
ತಾಂಬೂಲ ರಾಗದ ಸವಿನೋಡೊ

ಗೋಧೂಳಿ ಕೆಂಬಣ್ಣ ಕೆನ್ನೀರ ಮಾಡಿಟ್ಟು
ದಿಟ್ಟಿಯ ತೆಗೆಯುವೆ ನನರಾಯ- ಬಾ ಇಲ್ಲಿ-
ಅತ್ತಿತ್ತ ನೋಡೋ ಹಂಗ್ಯಾಕೋ

ಹಚ್ಚಾನೆ ಹಾಸಿರುವೆ ಹಚ್ಚಾಡ ನಿಂಗಾಗಿ
ಅಚ್ಚು-ಮೆಚ್ಚಿನಲೇ ನನರಾಯ- ನೀನೀಗ-
ಮೆಚ್ಚುಗೆ ಬೀರಿ ಒರಗೊಮ್ಮೆ

ಅರುಣನ ಹೊಂಬಣ್ಣ ರಂಗನ್ನೆ ಹೊದೆಸುವೆ
ತಂಗಾಳಿ ತೊಟ್ಟಿಲಲಿ ನನರಾಯ- ನಿನ್ನನ್ನು-
ಜೋಗುಳ ಹಾಡಿ ಮಲಗಿಸುವೆ

ಮೊಗ್ಗೀಗೆ ಜೀವಾದೆ ಕಣ್ಣೀನ ಹೂವಾದೆ
ಹಸಿರಿಗೆ ನೀ ಉಸಿರು ನನರಾಯ- ಬೆಳಕಾಗಿ-
ಬೇಕಾದೆ ನೀನು ಜಗಕೆಲ್ಲ

ಆ ಶಿವನ ಹಣೆಗಣ್ಣು, ಆ ಹರಿಯ ತಿರುಚಕ್ರ
ನೀನಲ್ಲವೇನೋ ನನರಾಯ- 'ದಿನಪತಿ'ಯೆ
'ಭೂಸತಿ'ಯ ಪ್ರೀತಿ ಒಪ್ಪಿಸಿಕೋ

(೦೬-ಸೆಪ್ಟೆಂಬರ್-೨೦೦೧)

4 comments:

sunaath said...

ಜನಪದದ ತಾಯಿಯಾದ ಧರಣಿ, ಜಾನಪದ ಶೈಲಿಯಲ್ಲಿ ಒಲವನ್ನು ತೋಡಿಕೊಳ್ಳುವದು ಅತ್ಯಂತ ಸಹಜ.ದಿನಪತಿ ಈ ಒಲವನ್ನು ಒಪ್ಪದೆ ಇದ್ದಾನೆ?

ಸುಪ್ತದೀಪ್ತಿ suptadeepti said...

ಕಾಕಾ, ದಿನಪತಿ ಒಪ್ಪಿದ ಪ್ರೀತಿಯಿಂದಲೇ ಧರಣಿಯನ್ನು ನಾವೆಲ್ಲ ಅಮ್ಮಾ ಅನ್ನಬಹುದಾಗಿದೆ, ಅಲ್ಲವೆ?
ಮಗಳಾಗಿ ಅಮ್ಮ-ಅಪ್ಪನನ್ನು ಕಾಡಿಸುವ ಪರಿ ಇದು; ಚೇಷ್ಟೆ ಬುದ್ಧಿ. ಕ್ಷಮೆಗೇ ಹೆಸರಾದ ಧಾರಿಣಿ ನನ್ನನ್ನು ಕ್ಷಮಿಸಿ ಹರಸುತ್ತಾಳೆ ತಾನೆ!

Harisha - ಹರೀಶ said...

ಜನಪದ ಗೀತೆಗಳು ಅಂತ್ಯ ಕಾಣುತ್ತಿರುವ ಈ ಸಮಯದಲ್ಲಿ ಈ ಪದ್ಯ ಅತ್ಯಂತ ಖುಷಿ ಕೊಟ್ಟಿತು... ಎಂತೆಂಥ ಅದ್ಭುತ ಗೀತೆಗಳನ್ನು ಬರೀತೀರಿ ನೀವು! :-)

ಸುಪ್ತದೀಪ್ತಿ suptadeepti said...

ಇದನ್ನು ಅದ್ಭುತ ಅಂದಿದ್ದು ನಿಮಗೆ ಜನಪದ ಗೀತೆಗಳ ಬಗೆಗಿನ ಪ್ರೀತಿ, ಹರೀಶ್. ಇದೇನಂಥ ದೊಡ್ಡ ಗೀತೆಯೇನಲ್ಲ, ಸಾಮಾನ್ಯವಾದ್ದು.

ನಿಮ್ಮ ಖುಷಿಯೇ ನನಗೆ ಖುಷಿ.