ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday 14 August, 2013

ಜಗದ ಪರಿ


ಮುದುಡದಿರು ಮನವೆ!
ಮುದುಡಿದರೆ ಕಸವೆಂದು ಎಸೆಯುವುದು ನಿನ್ನ

ಬಾಡದಿರು ಮೊಗವೆ!
ಬಾಡಿದರೆ ಬೇಡೆಂದು ಬಿಸುಟುವುದು ನಿನ್ನ

ಕೊರಗದಿರು ಎದೆಯೆ!
ಕೊರಗಿದರೆ ಕೇಡೆಂದು ಕೆರೆಯುವುದು ನಿನ್ನ

ಮರುಗದಿರು ಮಡಿಲೆ!
ಮರುಗಿದರೆ ಹೋಗೆಂದು ಕಳಿಸುವುದು ನಿನ್ನ

ಅಳಲದಿರು ಅರಿವೆ!
ಅಳಲಿದರೆ ಅಳಿಯೆಂದು ಹೊಸಕುವುದು ನಿನ್ನ

ನೋಯದಿರು ಒಲವೆ!
ನೋಯುತಿರೆ ಬೇಯೆಂದು ಉರಿಸುವುದು ನಿನ್ನ

ಅಂಜದಿರು ಛಲವೆ!
ಅಂಜಿದರೆ ನಲುಗೆಂದು ಅಲುಗಿಪುದು ನಿನ್ನ

ಬೆಚ್ಚದಿರು ಬಲವೆ!
ಬೆಚ್ಚಿದರೆ ಬೀಳೆಂದು ಬೆದರಿಪುದು ನಿನ್ನ

ಬೀಳದಿರು ಮತಿಯೆ!
ಬೀಳುತಿರೆ ಕೊಳೆಯೆಂದು ಕೊಚ್ಚುವುದು ನಿನ್ನ

ಸೋಲದಿರು ಧೃತಿಯೆ!
ಸೋಲುತಿರೆ ಸಾಯೆಂದು ಸೋಸುವುದು ನಿನ್ನ

ಪ್ರೀತಿಸುವ ಜೀವ,
ಮುನ್ನೋಟದೀವಟಿಗೆ ಹಿಡಿದು ನಡೆಸೆನ್ನ

ಉಚ್ಚರದ ಭಾವ,
ಮೆಚ್ಚಾಗುವಂದದಲಿ ಎಚ್ಚರಿಸು ಎನ್ನ

(೧-ಆಗಸ್ಟ್-೨೦೧೩)

10 comments:

ಈಶ್ವರ said...

ಒಪ್ಪುವ ಪ್ರಾರ್ಥನೆ. ತಥಾಸ್ತು ಎಂದೀತು ದೈವ.

ಜ್ಯೋತಿ ಅಕ್ಕ..

ಸುಪ್ತದೀಪ್ತಿ suptadeepti said...

ಆ ಈಶ್ವರ ಮೆಚ್ಚಿದರೆ ತಥಾಸ್ತು ಅಂದಂತೆಯೇ ಸರಿ!
ಒಪ್ಪವಾದ ಮಾತಾಡಿದ್ದಕ್ಕೆ ಧನ್ಯವಾದಗಳು ತಮ್ಮಯ್ಯ.

ತೇಜಸ್ವಿನಿ ಹೆಗಡೆ said...

nice poem akka.. liked it...

ಸುಪ್ತದೀಪ್ತಿ suptadeepti said...

ನಿನಗಿಷ್ಟವಾಗಿದ್ದು ಸಂತೋಷವೇ, ತೇಜು. ಮೆಚ್ಚುನುಡಿಗೆ ಬೆಚ್ಚನೆಯ ಪ್ರೀತಿ.

Badarinath Palavalli said...

ಇಂತಹ ಸ್ಪೂರ್ತಿ ಮತ್ತು ಉತ್ಸುಕತೆ ತುಂಬುವ ಕವನಗಳಿಗೆ. ಮನಃಪೂರ್ವಕ ಸ್ವಾಗತಗಳು.

ಸುಪ್ತದೀಪ್ತಿ suptadeepti said...

ಧನ್ಯವಾದಗಳು, ಬದರಿ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನನಗೆ ಸ್ಫೂರ್ತಿ.

sunaath said...

ಅಬ್ಬಬ್ಬಾ, ಎಷ್ಟೆಲ್ಲ ಸೂಚನೆಗಳು ಒಂದು ಬಡಪಾಯಿ ಮನಸ್ಸಿಗೆ! ಕವಿ & ಮನೋವಿಜ್ಞಾನಿ & ತತ್ವಜ್ಞಾನಿಗೆ ಇದು ಸಹಜವೇ. ಇರಲಿ, ಈ ಸೂಚನೆಗಳನ್ನು ನಾನಂತೂ ಸಂತೋಷದಿಂದ ಸ್ವೀಕರಿಸುತ್ತೇನೆ.

ಶ್ರೀವತ್ಸ ಜೋಶಿ said...

ಏನ್‌ ಕರೇಜು!!

ಚೆನ್ನಾಗಿದೆ. ಅರ್ಥ ಆಗ್ತದೆ.

ಸುಪ್ತದೀಪ್ತಿ suptadeepti said...

ಧನ್ಯವಾದಗಳು ವತ್ಸ. ಈಗಿನ ದಿನಗಳಲ್ಲಿ ಬೇಕೇಬೇಕಾಗಿರುವ ಕರೇಜಿಗೂ ಏನ್‌ಕರೇಜ್‌ಮೆಂಟ್ ಕೊಡಬೇಕಾಗಿದೆ. ನಿಮ್ಮ ಪ್ರೋತ್ಸಾಹ ಸಿಗದೆ ಬಹಳ ದಿನಗಳಾಗಿದ್ದವು. ಥ್ಯಾಂಕ್ಸ್.

ಸುಪ್ತದೀಪ್ತಿ suptadeepti said...

ಕಾಕಾ, ಮನಸ್ಸು ಅನ್ನೋ ಮರ್ಕಟಕ್ಕೆ ಎಷ್ಟೆಷ್ಟು ಸಮಝಾಯಿಶಿ ಕೊಟ್ಟರೂ ಒಮ್ಮೊಮ್ಮೆ ಸಾಕಾಗೋಲ್ಲ ಅನ್ನುತ್ತೆ, ನೋಡಿ ಮತ್ತೆ. ಅದ್ಕೇ ಒಂದೇ ಸಲಕ್ಕೆ ಬರೋಬ್ಬರಿ ಹತ್ತು ಬಾರಿ ಏನು ಮಾಡಬಾರದು, ಯಾಕೆ ಮಾಡಬಾರದು ಎನ್ನುವುದನ್ನೂ, ಎರಡೇ ಎರಡು ಕೋರಿಕೆಗಳನ್ನೂ ಮುಂದಿರಿಸಿದ್ದು. ಇನ್ನಾದರೂ ಸರಿಯಾಗಿರು ಅಂತ! ನೋಡೋಣ.