ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 18 April, 2011

ಸುಮ್ಮನೆ ನೋಡಿದಾಗ...೨೨

ಹಗಲು ಹೇಗೆ ಓಡಿತೋ ಸಂಜೆ ಹೇಗಾಯ್ತೋ ಗೊತ್ತಾಗಲೇ ಇಲ್ಲ.

ಶ್ರಿಯಾಲಂಕಾರ್- ನಮ್ಮೂರಿನ ದೊಡ್ಡ ಬಟ್ಟೆಯಂಗಡಿ. ಎಷ್ಟೋ ಕಾಲದಿಂದಲೂ ಇದ್ದ ಈ ಅಂಗಡಿಯಲ್ಲೇ ಸರೋಜಾ ಆಂಟಿ, ನಳಿನಿ ಆಂಟಿ, ಸುಮುಖ್ ಅಂಕಲ್ ಯಾವಾಗಲೂ ವ್ಯವಹಾರ ಮಾಡುತ್ತಿದ್ದ ಕಾರಣ ನಮಗೆಲ್ಲ ಭಾರೀ ಸ್ವಾಗತವೇ ಸಿಕ್ಕಿತು. ಹರ್ಷಣ್ಣ ಮತ್ತು ಸುಮುಖ್ ಅಂಕಲ್ ಜೊತೆಯಲ್ಲಿ ನಾವೈದು ಹೆಂಗಸರು. ಅಂಗಡಿ ತುಂಬಾ ನಮ್ಮದೇ ಗೌಜಿ-ಗಲಾಟೆ. ಎಲ್ಲರಿಗೂ ಪರಿಚಯವಿರುವ ಉತ್ಸಾಹ ಸಲುಗೆ ಮಾತುಕತೆಯಲ್ಲಿ ಎದ್ದು ಕಾಣುತ್ತಿತ್ತು. ಅಂಗಡಿ ಮಾಲೀಕ ಸ್ವತಃ ನಮ್ಮ ಮುಂದೆ ನಿಂತಿದ್ದರು, ಸೀರೆಗಳನ್ನು ಬಿಡಿಸಿ ತೋರಿಸಿ ವೈವಿಧ್ಯ ವೈಶಿಷ್ಠ್ಯಗಳನ್ನು ವಿವರಿಸಲು.

ನೇಹಾ ತನಗಾಗಿ ಮೂರು-ನಾಲ್ಕು ಸೀರೆಗಳನ್ನು ಆರಿಸಿಕೊಳ್ಳಬೇಕಾಗಿತ್ತು. ಅವಳಿಗೆ ಮೆಚ್ಚಾದದ್ದು ಅಂಕಲ್ ಮತ್ತು ಹರ್ಷಣ್ಣನನ್ನು ಪೆಚ್ಚಾಗಿಸುತ್ತಿತ್ತು. ಅವರ ಇಷ್ಟ ಇವಳಿಗೆ ಕಷ್ಟವಾಗುತ್ತಿತ್ತು. ಇದೇ ಜಟಾಪಟಿ ನಡೀತಿರುವಾಗ ಅಮ್ಮ ಮತ್ತು ನಳಿನಿ ಆಂಟಿ ತಮ್ಮ ತಮ್ಮ ಕಣ್ಣು ಒಪ್ಪಿದ ಸೀರೆಗಳನ್ನು ಹೆಕ್ಕಿಕೊಂಡು ಸರೋಜ ಆಂಟಿಯ ಸಹಾಯಕ್ಕೆ ನಿಂತಿದ್ದರು. ನಾವಿಬ್ಬರೂ ಸೀರೆಗಳ ಅಟ್ಟಿಗಳ ನಡುವೆ ತಲೆಕೆರೆಯುತ್ತಾ ಪಿಳಿಪಿಳಿ ಮಾಡುತ್ತಾ ಕೂತಿದ್ದಾಗ ಅಂಕಲ್ ಮತ್ತು ಹರ್ಷಣ್ಣ ಒಟ್ಟಾಗಿ ನಾಲ್ಕು ಸೀರೆಗಳನ್ನು ತಂದು ನಮ್ಮ ಮುಂದೆ ಇಟ್ಟರು.

‘ನೇಹಾ, ಇದು ನಿಶ್ಚಿತಾರ್ಥಕ್ಕೆ, ಇದು ಧಾರೆಗೆ, ಇದು ಔತಣಕ್ಕೆ, ಇದು ಶಿಶಿರನಿಗೆ...’ ಅಂಕಲ್ ಕೊನೆಯ ಮಾತೆಂಬಂತೆ ಹೇಳಿದಾಗ ಅವರ ಆಯ್ಕೆಗಳನ್ನು ಮರುಮಾತಿಲ್ಲದೆ ನೇವರಿಸಿದೆವು.
‘ಇಷ್ಟು ಹೊತ್ತು ಈ ಸೀರೆಗಳು ಎಲ್ಲಿ ಅಡಗಿದ್ದವು? ಇವುಗಳನ್ನು ನಮಗೆ ಯಾಕೆ ತೋರಿಸ್ಲಿಲ್ಲ ನೀವು?’ ನೇಹಾ ಅಂಗಡಿ ಹುಡುಗರನ್ನೇ ತರಾಟೆಗೆಳೆದಳು. ಅವರೆಲ್ಲ ಸುಮ್ಮನೇ ಮುಖಮುಖ ನೋಡುವಾಗ, ‘ಇಷ್ಟ ಆಗದಿದ್ರೆ ಬದಲಾಯಿಸುವಾ. ಒತ್ತಾಯ ಏನಿಲ್ಲ’ ಎಂದ ಹರ್ಷಣ್ಣ. ನೇಹಾ ಸುಮ್ಮನೇ ತಲೆಯಾಡಿಸಿ ಸೀರೆಗಳನ್ನು ಮಡಿಲಲ್ಲಿರಿಸಿಕೊಂಡಾಗ, ‘ಬಿಲ್ ಮಾಡಿ ಪ್ಯಾಕ್ ಮಾಡಿ ಕೊಡ್ತೇವಮ್ಮಾ, ಇಲ್ಲಿ ಕೊಡಿ’ ಅಂತ ಕೈ ನೀಡಿದರು ಅಂಗಡಿ ಯಜಮಾನರು. ಕೆನ್ನೆಗಳು ಇನ್ನಷ್ಟು ಕೆಂಪಾದವು.

ಜೂನ್ ಮೂವತ್ತರಂದು ಮದುವೆಯೆಂದು ನಿಶ್ಚಯವಾಯ್ತು. ಔಪಚಾರಿಕವಾಗಿ ನಿಶ್ಚಿತಾರ್ಥವೂ ನಡೆಯಿತು. ಇವೆಲ್ಲದರ ನಡುವೆ ಅಮ್ಮನ ವಿರೋಧವನ್ನೂ ಲೆಕ್ಕಿಸದೆ ಎಮ್.ಎಸ್ಸಿ.ಗೆ ಅರ್ಜಿ ಹಾಕಿದೆ. ಜುಲೈ ಹದಿನೆಂಟರಂದು ವಿ.ವಿ. ಕ್ಯಾಂಪಸ್ಸಿನಲ್ಲಿ ಹಾಜರಾಗಬೇಕೆನ್ನುವ ಆಜ್ಞಾಪತ್ರವೂ ಬಂತು. ಅಮ್ಮನ ರಾಗ ಏರುತ್ತಿತ್ತು. ನೇಹಾಳ ಮದುವೆ ನೆಪದಲ್ಲಿ ಹೆಚ್ಚಾಗಿ ಅಲ್ಲೇ ಇರುವ ಅವಕಾಶ ಹುಡುಕುತ್ತಿದ್ದೆ ನಾನು. ನಮ್ಮ ಮಾತಿನ ನಡುವೆ ಆಗೊಮ್ಮೆ ಈಗೊಮ್ಮೆ ವಸಂತ್ ನುಸುಳುತ್ತಿದ್ದ. ಬಲವಂತವಾಗಿ ನೇಹಾಳ ಬಾಯಿ ಮುಚ್ಚಿಸುವುದಾಗಿತ್ತು. ಸುಮುಖ್ ಅಂಕಲ್ ಅಥವಾ ನಳಿನಿ ಆಂಟಿಯಿಂದ ಈ ಬಗ್ಗೆ ಯಾವುದೇ ಪ್ರಶ್ನೆಗಳು ನೋಟಗಳು ನನ್ನನ್ನು ಎದುರುಗೊಂಡಿಲ್ಲವಾದ್ದರಿಂದ ವಸಂತ್ ವಿಷಯ ಅವರ ಕಿವಿ ಮುಟ್ಟಲಿಲ್ಲವೆನ್ನುವ ಸಮಾಧಾನ ನನಗಿತ್ತು.

ಜೂನ್ ಹನ್ನೆರಡರ ಬೆಳಗ್ಗೆ ನೇಹಾ ಫೋನ್ ಮಾಡಿ ಆದಷ್ಟು ಬೇಗ ಬಾರೆಂದು ಕರೆದಾಗ ಅವಳ ಸ್ವರದಲ್ಲಿ ಯಾವುದೇ ಆತಂಕವಿಲ್ಲದಿದ್ದರೂ ನನ್ನ ಎದೆಬಡಿತ ಮಾತ್ರ ತಾಳ ತಪ್ಪಿ ಏರುಪೇರಾಯ್ತು. ಅವಸರವಸರವಾಗಿ ಹೇಗ್ಹೇಗೋ ತಯಾರಾಗಿ ಅವರ ಮನೆಯ ಮುಂದೆ ಬಂದಾಗ ಜಾಜಿ ಮಂಟಪದಲ್ಲೇ ಐದಾರು ಜನ ನಿಂತಿದ್ದರು. ಗೇಟಿನಿಂದ ಹೆಜ್ಜೆ ಮುಂದೆ ಎತ್ತಿಡುವುದೇ ಕಷ್ಟವೆನಿಸಿ ಅಲ್ಲೇ ನಿಂತೆ, ಜಾಜಿ ಮಂಟಪ ದಿಟ್ಟಿಸುತ್ತಾ.

4 comments:

ಸಾಗರದಾಚೆಯ ಇಂಚರ said...

tumba chennagi barita idira

keep it up

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಗುರುಮೂರ್ತಿ. ನೀವೆಲ್ಲ ಹೀಗೇ ಬಂದು ಓದುತ್ತಿರುವುದೇ ಸ್ಫೂರ್ತಿ. ವಂದನೆಗಳು.

sunaath said...

`ಜಾಜಿ ಮಂಟಪದ ರಹಸ್ಯ’..
(ಮುಂದಿನ ಸಂಚಿಕೆಯಲ್ಲಿ ಓದಲು ಮರೆಯಬೇಡಿ!)

ಸುಪ್ತದೀಪ್ತಿ suptadeepti said...

ಹ್ಮ್, ಹೌದು ಕಾಕಾ. ಜಾಜಿ ಮಂಟಪದ ರಹಸ್ಯ ಮುಂದಿನ ಕಂತಿಗೆ ತಯಾರಾಗುತ್ತಿದೆ. ಅದಕ್ಕೆ ಹಿನ್ನೆಲೆ ಸಂಗೀತದಂಥ ಮುನ್ನುಡಿ ಕೊಟ್ಟದ್ದಕ್ಕೆ ಧನ್ಯವಾದಗಳು.