ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday, 23 July 2010

ಗುರುವಂದನ

ಈಗ ಸುಮಾರು ಒಂದೂವರೆ ಗಂಟೆಯ ಹಿಂದಷ್ಟೇ ನಮ್ಮನ್ನಗಲಿದ ಹಿರಿಯ ಚೇತನ ಶ್ರೀ ಹರಿಹರೇಶ್ವರ ಅವರ ಕನ್ನಡಾತ್ಮಕ್ಕೆ ಶಾಂತಿ ಕೋರುತ್ತಾ... ಎಂಟು ವರ್ಷಗಳ ಹಿಂದೆ ಶ್ರೀ ಹರಿಹರೇಶ್ವರ-ನಾಗಲಕ್ಷ್ಮಿ ದಂಪತಿ ಅಮೆರಿಕೆಯನ್ನು ತೊರೆದು ಮೈಸೂರಿಗೆ ಹೊರಟು ನಿಂತಾಗ ಬರೆದಿದ್ದ ವಂದನಗೀತ...

ವಯೋವೃದ್ಧ ಜ್ಞಾನವೃದ್ಧ ಪ್ರೀತಿಬದ್ಧರು
ಕಣ್ಣ ಬೆಳಕ ಹೃದಯದೊಳಗೆ ಇಳಿಸಿಬಿಡುವರು

ಮಾತೆ-ಮಮತೆ, ಅನ್ನಪೂರ್ಣೆ, ಒಲವ ಕೊಡುವರು
ತಂದೆ-ಶಿಸ್ತು, ಮಾರ್ಗದರ್ಶಿ, ಬಲವ ಬೆಳೆವರು

ಕೈಯ ಹಿಡಿದು ಹೆಜ್ಜೆಯಿರಿಸಿ ಗುರಿಯ ತೋರ್ವರು
ಸಾಧನೆಯಲಿ ಸಂಗ ನೀಡಿ ಗರಿಯನೀವರು

ಅಂತರಂಗ ಸಖ್ಯಕೊಂದು ಅರ್ಥವಿತ್ತರು
ಆತ್ಮದೌನ್ನತ್ಯದಾ ದಾರಿ ತೆರೆದರು

ಕನ್ನಡತನ ಕನ್ನಡಮನ ಕನ್ನಡವುಸಿರು
ಕಂಡವರಿಗೆ ಸುಜ್ಞಾನವ ಉಣಿಸುವ ಬೇರು

ಬಿಟ್ಟರಿಲ್ಲ ಇವರಿಗೆ ಸಮ, ಯಾವ ದೇಶ ಊರು
ನಂದಿನಿ ಮಿಗೆ ಸುಮನೆಯರಿಗೆ ಹನಾಸುನಂ ತೌರು

ಹರಿಗೆ ಲಕ್ಷ್ಮಿ, ಹರಗೆ ನಾಗ, ಈಶ ಪಂಡಿತ
ನಮನಯೋಗ್ಯರಿವರು- ಜೋಡು ಶಾರದಾಂಕಿತ
(೧೦-೧೦-೨೦೦೨)

Thursday, 15 July 2010

ಪುನರ್ಜೀವ

ಎಲ್ಲಿ ಏನು ಹೇಳಬೇಕೆ ಕೃಷ್ಣ ರಾಧೆಗೆ
ಬರಿಗಾಲಿನಲ್ಲೆ ಓಡಿ ಬಂದೆ ಯಮುನೆ ತೀರಕೆ

ಸಲುಗೆ ಸ್ನೇಹ ಬೆಳೆದ ಪ್ರೀತಿ
ಬೆಸೆದ ಮನದ ರೀತಿಯು
ನಿನ್ನ ನನ್ನ ಭೇದ ಮರೆತು
ಒಂದೆ ಭಾವ ನೀತಿಯು
ಜೀವ ಮುರಳಿಯೂದಲು ಜಗವೇ ನಲಿವುದು
ನಾನೇ ಗೋಪಿಕೆ... ನೀನೆ ನನ್ನ ಗಿರಿಧರ...

ಬೇರೆ ಮಣ್ಣಿನಲ್ಲಿ ನಮ್ಮ
ಬೇರು ನೆಲೆಸಬೇಕಿದೆ
ದಾರಿ ಯಾವುದೆಂದು ಹುಡುಕಿ
ಮನೆಯ ಸೇರಬೇಕಿದೆ
ಒಲವ ತಂತಿ ಮೀಟಲು ನೆಲವೇ ಮಿಡಿವುದು
ನೀನೇ ವನಮಾಲಿ... ನಾನೇ ನಿನ್ನ ಪ್ರೇಮಿಕೆ...
(೧೦-ಜುಲೈ-೧೯೯೮)