ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 16 March, 2010

ಲಭ್ಯ

ಹೇಳಬೇಕೆಂದುಕೊಂಡದ್ದು ಒಂದು
ಬಿಸಿಯುಸಿರಿನ ಒತ್ತಡಕ್ಕೆ ಪಕ್ಕಾಗಿ
ಮುತ್ತು ಮುತ್ತಾಗಿ ಚಿಮ್ಮಿ ಉದುರಿ
ತೋಟದೆಡೆಯಲ್ಲಿ ಬಿತ್ತಿದ್ದು ಮೊಳಕೆಯೊಡೆದು
ಅಕ್ಷರಕ್ಷರ ಪದಪದ ಸಾಲುಗಳೆಲ್ಲ
ಒಂದಕ್ಕೊಂದು ಬೆಸೆದು ಗೋಜಲು ಗೋಜಲು
ಬಿಸಿಲಿಗೆ ಹಚ್ಚನೆ ಹರಡಿ ಬೆಳೆದು
ಹಿತ್ತಿಲ ತುಂಬೆಲ್ಲ ಕಣ್ಣಿಗೆ ತಂಪು
ಕಾಲ್ತೊಡಕುವ ಕುಂಬಳ ಬಳ್ಳಿ
ದಟ್ಟ ಬಣ್ಣ ನಳನಳಿಸುವ ದೊರಗು
ಎಲೆಗಳ ನಡುವೆ ಹೂವಾಗಿದ್ದೂ ಕಾಣದೆ
ಕಿರುಕಾಯಾಗಿ ಎಳಸು ಮಾಗಿ
ಪಕ್ವವಾದಾಗ ಹಸುರಿನ ಮರೆಯಲ್ಲಿ
ಬೂದುಬಿಳುಪೋ ಚೆಂದಗೆಂಪೋ, ಅಂತೂ
ಬಳ್ಳಿಗೆ ನಿಸ್ವಾರ್ಥ ಸಫಲ ಧರ್ಮ
ಮಾಲಿಗೆ ಅಧಿಕಾರವಿಲ್ಲದ ಕರ್ಮ

(೨೪-ಜೂನ್-೨೦೦೯)

(09-08-09ರಂದು ಕನ್ನಡ ಪ್ರಭ ಸಾಪ್ತಾಹಿಕದಲ್ಲಿ ಪ್ರಕಟಿತ. ಸಂಪಾದಕರಿಗೆ ವಂದನೆಗಳೊಂದಿಗೆ ಧನ್ಯವಾದಗಳು. ಡಾ. ವಸಂತಕುಮಾರ್ ಪೆರ್ಲ ಅವರು ಸಂಪಾದಿಸುತ್ತಿರುವ "ಕಾವ್ಯ ೨೦೦೯"ರಲ್ಲಿಯೂ ಸೇರ್ಪಡೆಯಾಗುತ್ತಿದೆ; ಅವರಿಗೂ ಸಸ್ನೇಹ ನಮನಗಳು.)

6 comments:

sunaath said...

ಮುತ್ತು ಮುತ್ತಾಗಿ ಚೆದರಿ ಬಿದ್ದದ್ದೆಲ್ಲ ಮುತ್ತಿನಂತಹ ಬೆಳೆಯನ್ನೇ ನೀಡಿದೆ. ಬಳ್ಳಿ ಪಡೆದದ್ದೆಲ್ಲ ಸುಂದರ ಹೂವುಗಳನ್ನು ಹಾಗು ಸುಮಧುರ ಫಲಗಳನ್ನು ಎಂದು ನಿರಾಳವಾಗಿ ಹೇಳಬಹುದು. ಅಭಿನಂದನೆಗಳು.

ಸುಪ್ತದೀಪ್ತಿ suptadeepti said...

ಕಾಕಾ, ಧನ್ಯವಾದಗಳು. ನಿಮಗೆಲ್ಲರಿಗೆ ಯುಗಾದಿಯ ಶುಭಾಶಯಗಳು.

ದಟ್ಟ ಹಸಿರಿನ ನಡುವೆಯೂ ಅರಳಿದ ಹೂಗಳನ್ನೂ ಸುಮಧುರ ಹಣ್ಣುಗಳನ್ನೂ ಕಂಡ ನಿಮ್ಮ ಮಮತೆಯ ನೋಟಕ್ಕೆ ಆಭಾರಿ.

ಸೀತಾರಾಮ. ಕೆ. / SITARAM.K said...

ಚೆ೦ದದ ಕವನ

ಸುಪ್ತದೀಪ್ತಿ suptadeepti said...

ವಂದನೆಗಳು ಸೀತಾರಾಮ್ ಸರ್.

ಸಾಗರದಾಚೆಯ ಇಂಚರ said...

ಸುಂದರ ಕವನ

ಸುಪ್ತದೀಪ್ತಿ suptadeepti said...

ಸಾಗರದಾಚೆಯ ಇಂಚರ ನನ್ನ ಅಂಗಳದಲ್ಲಿ ಕಲರವಿಸಿದ್ದಕ್ಕೆ ಧನ್ಯವಾದಗಳು.