ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday 17 October, 2009

ಬೆಳಗಿ ಬರಲಿ

ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು.
ಹರಕೆ-ಹಾರೈಕೆಗಳು ನಮ್ಮೆಲ್ಲರೊಡನೆ ಎಂದೂ ಸಾಗಿ ಬರಲಿ
ಸುಖ, ಸಂತಸ, ನೆಮ್ಮದಿ, ಶಾಂತಿಗಳ ಎಂದೂ ಜೊತೆಗೆ ತರಲಿ.


ಸುತ್ತೆಲ್ಲ ಹಣಕಿಹರು ಆ ಪುಟ್ಟ ಹಣತೆಗಳು -
ಮತ್ತೊಮ್ಮೆ ದೀವಳಿಗೆ ನೆಪವ ಮಾಡಿ;
ಅತ್ತಿತ್ತ ಆಡಿಹರು ಬೆಳಕಿನಾ ಮೂರ್ತಿಗಳು -
‘ಕತ್ತಲೆಗೆ ಬೆದರದಿರಿ’, ಎಂದು ಸಾರಿ.

ತೈಲ ಸಾರವ ಹೀರಿ, ಬತ್ತಿ ಭಾವವ ಮೀರಿ -
ಮೃತ್ತಿಕೆಯ ಮರ್ತ್ಯತನ ದಾಟಿ ಏರಿ,
ನೆಲ-ಜಲದ ಒಲವಿಂದ ಬಲಗೊಂಡ ರೂವಾರಿ -
ಕತ್ತಲೆಯ ನುಂಗಿ, ತೋರುವರು ದಾರಿ.

ಮಣ್ಣಿನಲಿ ಕಂಡವರು, ಮಣ್ಣನ್ನೆ ಉಣುವವರು -
ಸಣ್ಣ ಕುಡಿಯಿಂದಲೇ ಬೆಳೆಯುವವರು,
ಬಣ್ಣಕ್ಕೆ ಬೇಕವರು, ಕಣ್ಣಿಗೆ ಕಾರಣರು -
ತಣ್ಣಗಿನ ಕತ್ತಲಲು ಕರಗದವರು.

ಮರುಕಳಿಸಿ ಬರುವ ನಗೆ ಮರುಅಲೆಯ ತರುವಂತೆ -
ತರಲಿವರು ನಮಗೆಲ್ಲ ಮರಳಿ ಹರುಷ,
ಗುರುತರದ ಹೊಣೆಯನ್ನೆ ಹೊತ್ತಿರುವ ತಮಸಾರಿ -
ಇರಲವರು ನಮ್ಮೊಳಗೆ ಬೆಳಗಿ ಮನಸ.
(೧೨-ನವೆಂಬರ್-೨೦೦೧)

8 comments:

Anonymous said...

ಜ್ಯೋತಿ ಅಕ್ಕಾ,
ನಿಮಗೂ ನಿಮ್ಮ ಮನೆಯವರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಹಾಡು ಓದಿದೆ ತುಂಬಾ ಚೆನ್ನಾಗಿದೆ.
ಭಾರ್ಗವಿ.

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಭಾರ್ಗವಿ. ನಿಮ್ಮೆಲ್ಲರಿಗೂ ಮತ್ತೆ ಹರಕೆ-ಹಾರೈಕೆಗಳು.

ಬಾಳು ಬಂಗಾರವಾಗಲಿ. ನಗುವು ನಿಮ್ಮ ಮನೆ ಮನದ ಅಂಗಳದಲ್ಲೆಲ್ಲ ತುಂಬಿ ಹರಿಯಲಿ.

sunaath said...

ಜ್ಯೋತಿ,
Very wonderful poem!
ನಮ್ಮೆಲ್ಲರ ಮನಸ್ಸಿನಲ್ಲೂ ಆ ಬೆಳಕು ಕಾಣಿಸಲಿ ಎಂದು ನಿನ್ನೊಡನೆ ನಾನೂ ಹಾರೈಸುತ್ತೇನೆ.
ದೀಪಾವಳಿಯ ಹಾರ್ದಿಕ ಶುಭಾಶಯಗಳು.

Ittigecement said...

ಜ್ಯೋತಿಯವರೆ....

ವಾಹ್...!
ಬರೆದರೆ ಇಂಥಹ ಕವಿತೆ ಬರೆಯಬೇಕು...!
ಎಲ್ಲ ಸಾಲುಗಳೂ ಅರ್ಥಪೂರ್ಣವಾಗಿದೆ...!

" ಮಣ್ಣಿನಲಿ ಕಂಡವರು, ಮಣ್ಣನ್ನೆ ಉಣುವವರು -
ಸಣ್ಣ ಕುಡಿಯಿಂದಲೇ ಬೆಳೆಯುವವರು,
ಬಣ್ಣಕ್ಕೆ ಬೇಕವರು, ಕಣ್ಣಿಗೆ ಕಾರಣರು -
ತಣ್ಣಗಿನ ಕತ್ತಲಲು ಕರಗದವರು."

ಬಹಳ ಇಷ್ಟವಾಯಿತು...!

ನಿಮಗೂ..
ನಿಮ್ಮ ಪರಿವಾರದವರಿಗೂ...
ಎಲ್ಲರಿಗೂ
ಬೆಳಕಿನ ಹಬ್ಬದ ಶುಭಾಶಯಗಳು..

ಸುಂದರ ಸಾಲುಗಳನ್ನು ನನ್ನ ಡೈರಿಯಲ್ಲಿ ನೋಟ್ ಮಾಡಿಕೊಂಡಿದ್ದೇನೆ..

ಸುಪ್ತದೀಪ್ತಿ suptadeepti said...

ಕಾಕಾ, ವಂದನೆಗಳು ಮತ್ತು ಧನ್ಯವಾದಗಳ ಜೊತೆಗೆ ಮರುಹಾರೈಕೆಗಳು ನಿಮ್ಮೆಲ್ಲರಿಗೂ ಕೂಡಾ.

ಸುಪ್ತದೀಪ್ತಿ suptadeepti said...

ತಲೆದೂಗಿದ್ದಕ್ಕೆ ವಂದನೆಗಳು ಮತ್ತು ಧನ್ಯವಾದಗಳು ಪ್ರಕಾಶಣ್ಣ.

ನೋಟ್ ಮಾಡಿಕೊಂಡದ್ದು ಸಂತೋಷ. "ಕೋಟ್" ಮಾಡಿದರಂತೂ ಇನ್ನೂ ಸಂತೋಷ.

ಮತ್ತೊಮ್ಮೆ ನಿಮ್ಮೆಲ್ಲರಿಗೂ ದೀವಳಿಗೆಯ ಮಂಗಳಾಕಾಂಕ್ಷೆಗಳು.

ಸೀತಾರಾಮ. ಕೆ. / SITARAM.K said...

chennaagide kavana

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಸೀತಾರಾಮ ಸರ್.