ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 8 July, 2008

ಬಣ್ಣ-ಭಾವ

ಎಲೆ ಹಸಿರು ಗಿಳಿ ಹಸಿರು
ಗಾಳಿ ನಮ್ಮ ಉಸಿರು,
ರಕ್ತ ಕೆಂಪು ನೆರಳು ತಂಪು
ಹೂವುಗಳಿಂದ ಕಂಪು.

ದೊಡ್ಡ ಕಿತ್ತಳೆ ಸಣ್ಣ ನೇರಳೆ
ಯಾವುದು ಬೇಕು ಮಕ್ಕಳೆ?
ಬಾನು ನೀಲ ಭೂಮಿ ಗೋಲ
ಹಿತ ವಸಂತ ಕಾಲ.

ಮೋಡ ಬೂದು ಕಾಂಡ ಕಂದು
ಮಳೆಯ ಹನಿಯು ಬಿಂದು
ಹತ್ತಿ ಬಿಳಿ ಕಾಡಿಗೆ ಕಪ್ಪು
ಬಣ್ಣದಲಿಲ್ಲ ತಪ್ಪು.

ಗಂಡಿಗೆ ನೀಲಿ ಹೆಣ್ಣಿಗೆ ಗುಲಾಲಿ
ಹಳದಿ ಯಾರ ಖಯಾಲಿ?
ವರ್ಣರಂಜಿತ ಚಿತ್ರ ಸುಂದರ
ಭಾವಗಳು ಮೃದು ಮಧುರ.
(ಎಪ್ರಿಲ್-೧೯೯೩)

(ಮೊದಲಬಾರಿಗೆ ಹೊರದೇಶದಲ್ಲಿ ಸಮಾನಾಸಕ್ತರ ಗುಂಪೊಂದನ್ನು ಮಾಡಿಕೊಂಡು, ಸರಿಸುಮಾರು ಒಂದೇ ವಯಸ್ಸಿನ [ಎರಡು ವರ್ಷದ ಆಸುಪಾಸಿನಲ್ಲಿದ್ದ] ಆರು ಮಕ್ಕಳನ್ನು ಆಡಿಸುತ್ತಾ, ಪಾರ್ಕುಗಳಲ್ಲಿ ಓಡಾಡುತ್ತಾ, ಆಗತಾನೇ ಹೊರಬಂದ ವಸಂತದಲ್ಲಿ ಸುಖಿಸುತ್ತಾ, ಗೆಳತಿಯರೊಡನೆ ಹರಟುತ್ತಿದ್ದ ಸಮಯದಲ್ಲಿ ಗುಂಪಿನಲ್ಲಿದ್ದ ನಾಲ್ಕು ಕನ್ನಡದ ಮಕ್ಕಳಿಗಾಗಿ ಹುಟ್ಟಿಕೊಂಡದ್ದು.)

2 comments:

sunaath said...

ಜ್ಯೋತಿ,
ನೀನು ಬರೆದ ಕವನಗಳು ಮಕ್ಕಳ ಕವನಗಳಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಕೊರತೆಯನ್ನು ನೀಗಿಸುತ್ತವೆ.
ಹೊಯಿಸಳ, ಜಿ.ಪಿ.ರಾಜರತ್ನಂ ಹಾಗು ದಿನಕರ ದೇಸಾಯಿ ಬರೆದ ಮಕ್ಕಳ ಕವನಗಳ ಹಾಗೆಯೇ ಇವು ಲಲಿತವಾಗಿವೆ.
-ಸುನಾಥ ಕಾಕಾ

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಕಾಕಾ.
ಇನ್ನೆರಡು ವಾರಗಳಲ್ಲಿ, ಬೆಂಗಳೂರಲ್ಲಿ ಸಿಗೋಣ. ಅರ್ಧ ಹಾದಿ ಬಂದಿದ್ದೇವೆ.