ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday, 4 September 2013

ಕಾವ್ಯ ಶ್ರಾವಣಕೆ ಕವನ ಬಾಗಿನ

ಕಾವ್ಯ ಶ್ರಾವಣಕೆಂದು ಕವನ ಬಾಗಿನ ಬರೆವೆ
ಸೋನೆ ಸುರಿಸುರಿದಾಗ ಕೆರೆ ತುಂಬದೆ?
ಅಂಚೆಮೇಲೊಂದಂಚೆ ಮಿಂಚಂಚೆ ಸುರಿದಿರಲು
ಹಲಕೆಲವು ಓಘಗಳ ತೆರೆಹರಿಯದೆ?

ನೇಹಿಗರ ಒಡನಾಟ ಮತ್ತೆ ಸಲುಗೆಯ ಕೂಟ
ಆದ್ಯಂತ ರಸಪಾನ ಈ ಶ್ರಾವಣ
ಕವನ-ಬಾಗಿನ ಕೊಡುವೆ ಕನ್ನಡದ ಮರಿಗಳಿಗೆ
ಓದು-ಸಂಕೋಲೆಯಲಿ ಸೆರೆ ಈ ಮನ!

ಬರೆಸಿ-ಬರೆದವರನ್ನು ಓದಿದವರೆಲ್ಲರನು
ನೆನೆನೆನೆದು ಧಾರೆಯನು ಸವಿದು ನಡೆದೆ
ಒಂದೊಂದು ಎಳೆಯೆಳೆಯು ಅಮಿತಹರ್ಷದ ಹನಿಯು
ಸುಖಸಾರವೆಂದೆನುತ ನಮಿಸಿ ಪಡೆದೆ.

(೨೦-ಆಗಸ್ಟ್-೨೦೧೩)

(ವಿಜಯವಾಣಿ ಪತ್ರಿಕೆಯಲ್ಲಿ ಆಗಸ್ಟ್ ಹದಿನೆಂಟರಂದು ಪ್ರಕಟವಾದ ಗೆಳತಿ ತ್ರಿವೇಣಿಯ ಲೇಖನ- ಕಾವ್ಯ ಶ್ರಾವಣ- ನಮ್ಮ ಕೆಲವು ಸ್ನೇಹಿತರೊಳಗೆ ಹುಟ್ಟು ಹಾಕಿದ ಚರ್ಚೆ-ಸಂವಹನಗಳ ಪತ್ರ-ಸರಪಳಿಗಾಗಿ ಸೇರಿಸಿದ ‘ಕವನ ಬಾಗಿನ’; ಇದೀಗ ಗೌರಿ ಹಬ್ಬದ ನೆಪದಲ್ಲಿ ಅಕ್ಷರಮೋಹಿತರಿಗೆಲ್ಲ ಅರ್ಪಣೆ...)

Thursday, 29 August 2013

ದರ್ಪಣ

ಏನೋ ಹುಡುಕುತ ಹೊರಟೆ
ಅವಳು ಎದುರಲಿ ಬಂದು
ತುಂಬು ಕಂಗಳ ತುಂಬ ನಿನದೆ ಬಿಂಬ
ಜಡೆಯೆಳೆದು ಕೈಹಿಡಿದು
ಆಟವಾಡಿದ ನೀನೆ
ಈಗ ಮರೆಯಾಗಿರುವೆ ಏನು ಜಂಭ?

ಸುತ್ತ ಮುತ್ತುವ ಹುಡುಗ
ಬೆನ್ಹಿಂದೆ ಬರುತಿಹನು
ನನ್ನೊಳಗೆ ಅವನಿಗೆ ಸ್ಥಾನವಿಲ್ಲ
ನಿನ್ನ ಧ್ಯಾನವ ಮನದಿ
ತುಂಬಿ ಕಳೆದಂತಿರುವೆ
ನಿನಗೇಕೊ ನನ್ನೆಡೆಗೆ ಗಮನವಿಲ್ಲ

ಅರಸಿ ಬಂದವಳನ್ನು
‘ಅರಸಿ’ ಎನ್ನದೆ ನೀನು
ಅರಗಿಣಿಯ ಅರಸುತ್ತ ಅಲೆಯುತಿರುವೆ
ನಿನ್ನ ಮೋಹನ ಮುರಳಿ
ನನ್ನುಸಿರ ನುಡಿಸಿರಲು
ಸಖ, ನಿನ್ನ ಛಾಯೆಯಲಿ ಬಾಳುತಿರುವೆ.

(೨೬-ಆಗಸ್ಟ್-೨೦೧೩)