ಏನೋ ಹುಡುಕುತ ಹೊರಟೆ
ಅವಳು ಎದುರಲಿ ಬಂದು
ತುಂಬು ಕಂಗಳ ತುಂಬ ನಿನದೆ ಬಿಂಬ
ಜಡೆಯೆಳೆದು ಕೈಹಿಡಿದು
ಆಟವಾಡಿದ ನೀನೆ
ಈಗ ಮರೆಯಾಗಿರುವೆ ಏನು ಜಂಭ?
ಸುತ್ತ ಮುತ್ತುವ ಹುಡುಗ
ಬೆನ್ಹಿಂದೆ ಬರುತಿಹನು
ನನ್ನೊಳಗೆ ಅವನಿಗೆ ಸ್ಥಾನವಿಲ್ಲ
ನಿನ್ನ ಧ್ಯಾನವ ಮನದಿ
ತುಂಬಿ ಕಳೆದಂತಿರುವೆ
ನಿನಗೇಕೊ ನನ್ನೆಡೆಗೆ ಗಮನವಿಲ್ಲ
ಅರಸಿ ಬಂದವಳನ್ನು
‘ಅರಸಿ’ ಎನ್ನದೆ ನೀನು
ಅರಗಿಣಿಯ ಅರಸುತ್ತ ಅಲೆಯುತಿರುವೆ
ನಿನ್ನ ಮೋಹನ ಮುರಳಿ
ನನ್ನುಸಿರ ನುಡಿಸಿರಲು
ಸಖ, ನಿನ್ನ ಛಾಯೆಯಲಿ ಬಾಳುತಿರುವೆ.
(೨೬-ಆಗಸ್ಟ್-೨೦೧೩)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday, 29 August 2013
Wednesday, 28 August 2013
ಬೆಣ್ಣೆ ಕಳ್ಳ
ನೆಲುವಿನಲ್ಲಿ ಹಾಲು ಮೊಸರು
ನೆಲದ ಮೇಲೆ ಗೊಲ್ಲ
ಮೆಲ್ಲಬೇಕು ಅಚ್ಚ ಬೆಣ್ಣೆ
ಕೈಗೆ ನಿಲುಕದಲ್ಲ
ಹಾರಿ ಕುಣಿದು ಕಪ್ಪೆ ಜಿಗಿದು
ತೂರಿ ನೋಟದೇಣಿ
ಭಾರಿ ಕಷ್ಟ ಪಟ್ಟರೇನು
ಕೈಗೆ ಸಿಗದು ಭರಣಿ
ಸುತ್ತ ಮುತ್ತ ಕಳ್ಳ ಚಿತ್ತ
ಇತ್ತ ಬಂದರಾರು?
ಮೆತ್ತಗೊಮ್ಮೆ ಇಣುಕಿ ನೋಡೆ
ಕೈಗೆ ಹೆಗಲ ಊರು
ಅಣ್ಣ ಬಂದ ಜೊತೆಗೆ ತಂದ
ತನ್ನ ಭಂಡ ಜೋಡಿ
ಬಣ್ಣವೇರಿ ಬಾನಿನತ್ತ
ಕೈಗೆ ಬಂತು ಜಾಡಿ
ಕಿಲಕಿಲಕಿಲ ಬಳೆಯ ಸದ್ದು
ಚಲನೆ ಪಡೆದ ಕೂಟ
ನೆಲದ ಮೇಲೆ ಹಾಲು ಮೊಸರು
ಕೈಗೆ ಬೆಣ್ಣೆಯೂಟ
(೦೨-ಆಗಸ್ಟ್-೨೦೧೩)
Labels:
Poems,
ಆತ್ಮ ಚಿಂತನ...,
ಕಥನಕಾರಣ,
ಚಿಂತನ-ಮಂಥನ,
ಹೀಗೇ ಸಾಗಲಿ,
ಹೊಚ್ಚ ಹೊಸದು
Subscribe to:
Posts (Atom)