"ರಾಜಾ..." ಜಯರಾಮನ ಕರೆಗೆ ಓಡಿ ಬಂದಳು ರಾಜಶ್ರೀ. ನಲ್ವತ್ತೆರಡು ವರ್ಷಗಳ ಒಡನಾಟ ಬಿಟ್ಟೀತೆ?
"ಏನು ಬೇಕು, ದೊರೆ?"
"ಸ್ವಲ್ಪ ನೀರು..." ಸ್ವರ ಉಡುಗುತ್ತಿತ್ತು.
ಮಗ ಬೇಗ ಬರಬಾರದೆ? ಬರಬೇಕಾಗಿತ್ತು ಈ ಹೊತ್ತಿಗೆ. ಫ್ಲೈಟ್ ಲೇಟೋ ಏನೋ! ಹಂಬಲಿಸುತ್ತಲೇ ಜಯರಾಮನ ಒಣಗುತ್ತಿದ್ದ ತುಟಿಗಳ ನಡುವೆ ಒಂದೆರಡು ಗುಟುಕು ಎಳನೀರು ಹನಿಸಿದಳು. ನಿಧಾನವಾಗಿ ಸವಿದ. ಅಷ್ಟಕ್ಕೇ ಸುಸ್ತಾಗಿ ಹಾಗೇ ದಿಂಬಿಗೆ ಒರಗಿದ. ಒಡಲೆಲ್ಲ ಬಗೆದು ನೋಡಿದರೆ ಏನಿದ್ದೀತು ಒಳಗೆ? ಗೆದ್ದಲು ತಿಂದ ಮರದ ಹಾಗಿರಬಹುದಾ? ರಾಜಶ್ರೀ ಮುಂದೆ ಯೋಚಿಸದೆ ಅಡುಗೆ ಕೆಲಸ ಮುಗಿಸಲು ಹೋದಳು.
ಯೋಚನೆಗಳು ಬೆನ್ನು ಬಿಡವು. ಇರುವ ಒಬ್ಬನೇ ಮಗ ಸಂಸಾರ ಸಮೇತ ಆಸ್ಟ್ರೇಲಿಯಾದಲ್ಲಿ. ಈ ವರ್ಷ, ಮುಂದಿನ ವರ್ಷ ಅನ್ನುತ್ತಾ ಹತ್ತು ವರ್ಷಗಳೇ ಕಳೆದಾಗಿದೆ. ಇನ್ನೂ ಗಂಟು ಮೂಟೆ ಕಟ್ಟಿ ಊರಿಗೆ ಬಂದಿಲ್ಲ. ಇಲ್ಲಿ ಜಯರಾಮನ ಆರೋಗ್ಯ ಗಂಟು ಮೂಟೆ ಕಟ್ಟಲಿಕ್ಕೆ ಶುರು ಮಾಡಿದ್ದು ವರ್ಷದ ಹಿಂದೆ ಗೊತ್ತಾದಾಗ ಗಾಬರಿಯಾದದ್ದು ಅವನಿಗೇ, ಇವಳಿಗಲ್ಲ. ಇತ್ತೀಚೆಗೆ, ಜಯರಾಮ ದಿನಗಣನೆಯ ಮಟ್ಟ ಮುಟ್ಟಿದ ಅಂದಾಗ, ಫೋನಲ್ಲಿ ಹೇಳಿದ್ದ, "ಅಮ್ಮ, ನೀನು ಪಾಸ್ಪೋರ್ಟಿಗೆ ಅಪ್ಲೈ ಮಾಡು. ಮತ್ತೆ ಇಲ್ಲಿಗೇ ಬಂದುಬಿಡು..." ಸುಮ್ಮನೆ ಕರೆ ಕಟ್ ಮಾಡಿದ್ದಳು. ಅವನೇನೋ ಅಪ್ಪನ ಸಾವನ್ನು ಎದುರು ನೋಡುತ್ತಿರಬಹುದು, ಅವನಿಗೆ ಬದುಕು ಎದುರಾಗಿದೆ. ಜಯರಾಮನ ನಂತರ ತನ್ನ ದಾರಿ ಹೇಗೆ? ಪ್ರಶ್ನೆ ಭೂತಾಕಾರ ಮಾತ್ರವೇ ಆಗುತ್ತಿತ್ತು ರಾಜಶ್ರೀಯ ಮನದಲ್ಲಿ.
ಯಾವುದೇ ಘಳಿಗೆಯಲ್ಲಿ ಗಾಡಿ ಮನೆ ಮುಂದೆ ಬರಬಹುದು. ಮಗ, ಸೊಸೆ, ಮತ್ತು ಮೊಮ್ಮಗ ಬಂದುಬಿಡುತ್ತಾರೆ. ವಾರದಿಂದ ಕಾಯುತ್ತಿದ್ದಳವಳು. ಅಡುಗೆ ಮುಗಿಸಿ ಕಟ್ಟೆ ಒರಸಿ ಹಾಗೇ ಗೋಡೆಗೊರಗಿ ದೇವರ ಗೂಡು ನೋಡುತ್ತಾ ಕೂತವಳ ಕಣ್ಣುಗಳಲ್ಲಿ ಧಾರೆ.
"ಭಗವಂತಾ, ಈ ಎರಡು ಜೀವಗಳಿಗೆ ಇನ್ನೆಷ್ಟು ದಿನಗಳ ಯಾತನೆ? ಅವರ ಮೌನ ವೇದನೆ ಸಹಿಸೋದು ಹೇಗೆ ನಾನು? ಆ ನೋವು ನಂಗಾದರೂ ಕೊಡು." ಮನದೊಳಗಿನ ಪರಮಾತ್ಮನೊಡನೆ ಮಾತಾಡುತ್ತಾ ಗೂಡಿನ ಬಿಂಬ ಕಂಗಳಲ್ಲಿ ತುಂಬಿಕೊಂಡು ಕಳೆದುಹೋಗದಂತೆ ಕಣ್ಣು ಮುಚ್ಚಿದಳು. ಆ ಪರಮಾತ್ಮನ ಜೊತೆ ಮತ್ತಷ್ಟು ಮಾತಾಡಿದಳು. ಒಳಗೊಳಗೇ ಇನ್ನೂ ಇನ್ನೂ ಕೊಳೆತಂತೆ ಕರಗಿಕೊಳ್ಳುತ್ತಿರುವ ಜೀವಕೋಶಗಳ ಶಿಥಿಲ ದೇಹದಿಂದ ಆ ವ್ಯಾಧಿಕಣಗಳು ದೇವಕರುಣೆಯ ಶಕ್ತಿಧಾರೆಯಲ್ಲಿ ತೊಳೆದು ಹೋಗುವ ದೃಶ್ಯ ಕಲ್ಪಿಸಿಕೊಂಡಳು. ಅದೂ ಕೂಡಾ ಜಯರಾಮನಿಗೆ ನೋವೇ ಕೊಡಬಹುದಾ? ಉತ್ತರವಿರಲಿಲ್ಲ.
"ಬಿಡುಗಡೆ ಕೊಡು, ದೇವಾ... ಬಿಡುಗಡೆ ಕೊಡು" ಕಂಗೆಟ್ಟು ಮೊರೆಯಿಟ್ಟಳು.
ಗೇಟ್ ತೆರೆದು ಗಾಡಿ ಒಳ ಬಂದು, ಬಾಗಿಲುಗಳ ಸದ್ದಾಗಿ, ಚಪ್ಪಲಿಗಾಲುಗಳು ಮೆಟ್ಟಲೇರಿ ಮುಂಬಾಗಿಲು ದೂಡಿಕೊಂಡು ಒಳಬಂದ ದನಿಗಳಿಗೆ ಪ್ರತಿಯಾಗಿ ಜಯರಾಮ ಇಷ್ಟೇಇಷ್ಟು ಉತ್ಸಾಹ ಕೂಡಿಸಿಕೊಂಡು ಕೂಗಿ ಕರೆದ,
"ರಾಜಾ... ಬಾ... ಮಕ್ಕಳು ಬಂದ್ರು ನೋಡು. ರಾಜಾ..."
ಒಳಮನೆಯಲ್ಲಿ ಸದ್ದಿಲ್ಲ.
(೦೯-ಜುಲೈ-೨೦೧೨)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Wednesday, 8 August 2012
Wednesday, 16 May 2012
ರಜತ-ಸ್ನೇಹ-ಸಮ್ಮಿಲನ
ಅತ್ತ ಮರೆಯುವ ಮುನ್ನ ಮತ್ತೆ ಬೆರೆಯುವ ಚೆನ್ನ
ಅವಕಾಶ ಹೊಂದಿಸುತ ಕರೆಯುತಿರುವೆ
ಬನ್ನಿ ನೀವುಗಳೆಲ್ಲ ಮನದ ಮೂಲೆಯ ಮೆಲ್ಲ
ತಡವುತ್ತ ನೆನಹುಗಳ ಕರೆದುತೆರೆದು
ಸೇರಿ ಕಲೆಯುತ ನಗುವ ಹರುಷ ಹಂಚುತ ನೆನೆವ
ಕಳೆದ ವರುಷಗಳನ್ನು ಗುಣಿಸಿಗಣಿಸಿ
ಇಂದು ತರತಮವಿಲ್ಲ ಸಂದ ದಿನಗಳನೆಲ್ಲ
ಹೊರಳಿ ಕುಲುಕಿಸಿ ಬೆದಕಿ ತೆಗೆವ, ಬನ್ನಿ
ಮೊದಲ ಹೆಜ್ಜೆಯನಿಟ್ಟು ಬಗಲಿನೊಜ್ಜೆಯ ಬಿಟ್ಟು
ಮರಳಿ ಬೆರೆಯುವ ನಿಲುವ ತಳೆವ, ಬನ್ನಿ
ಕೆಚ್ಚುಗುಚ್ಚುಗಳಿರದ ಬೆಚ್ಚನೆಯ ಮಕರಂದ
ತುಂಬುಹೃದಯದಲೆಂದು ಉಳಿಸೆ ಬನ್ನಿ
ಪಡೆದ ಪದವಿಗೆ ರಜತ ನಡೆದ ಹಾದಿಯ ಸವೆತ
ಎಲ್ಲ ಮೆಲ್ಲುತ ಹುರುಪುಗೊಳುವ ಬನ್ನಿ
(೨೨-ಎಪ್ರಿಲ್-೨೦೧೨)
Labels:
ತುಂಟ-ತುಡುಗ-ತರಲೆ-ಮನ,
ಹೀಗೇ ಸಾಗಲಿ,
ಹೊಚ್ಚ ಹೊಸದು
Subscribe to:
Posts (Atom)