ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday, 18 May 2011

ಸಂಜ್ಞಾ - ೦೩

ಅದೇ ಬೆಂಕಿ ಸುಂದರನನ್ನು ಎಲ್ಲದರಿಂದಲೂ ವಿಮುಖವಾಗಿಸತೊಡಗಿತು. ಓದಿನಲ್ಲೂ ಗಮನವಿಲ್ಲ. ಸ್ನೇಹಿತರ ಜೊತೆಗೂ ಒಡನಾಟ ಬೇಕಿಲ್ಲ. ಮೈಯೊಳಗಿನ ಬೆಂಕಿಯನ್ನು ಆರಿಸುವುದು ಹೇಗೆಂದೇ ಅವನ ಯೋಚನೆ. ಮನೆಯಲ್ಲೇ ಇದ್ದರೆ ಅವಳತ್ತಲೇ ಗಮನ ಹರಿಯುವುದೆಂಬ ಕಾರಣಕ್ಕೆ ಕೆಲವು ದಿನ ಊರಿನ ಅಜ್ಜನ ಮನೆಗೂ ಹೊರಟ. ಅಲ್ಲಿ ತೋಟದ ಕೆರೆಯಲ್ಲಿ ಒಂದು ಇಡೀ ಬೆಳಗಿನ ಹೊತ್ತು ಕುತ್ತಿಗೆ ವರೆಗಿನ ನೀರಿನಲ್ಲಿ ಕೂತಿದ್ದು ಏನೋ ಒಂದಿಷ್ಟು ಸಮಾಧಾನ ಅನುಭವಿಸಿದ. ಹೀಗೇ ಕೆಲವು ದಿನ ಮಾಡಿದರೆ ಈ ಬೆಂಕಿ ನೀರಿನೊಳಗೆ ತಣ್ಣಗಾಗಬಹುದೆಂಬ ಭರವಸೆಯಿಂದ ಮರುದಿನವೂ ಪುನರಾವರ್ತಿಸಿದ.

ಕೆಳಗಿನ ಮೆಟ್ಟಲಲ್ಲಿ ಕೂತು ಕುತ್ತಿಗೆ ಮಟ್ಟದ ನೀರಿನ ಆಹ್ಲಾದವನ್ನು ಅನುಭವಿಸುತ್ತಿದ್ದವನ ಇಂದ್ರಿಯಗಳು ಒಮ್ಮೆಲೇ ಧಿಗ್ಗನೆದ್ದ ರೀತಿಗೆ ಬೆಚ್ಚಿ ಕಣ್ತೆರೆದಾಗ ಕಂಡದ್ದು ಎದುರಿನ ದಂಡೆಯಲ್ಲಿ ನೀರಿಗೆ ಧುಮುಕಲು ತಯಾರಾಗಿ ನಿಂತವಳು. ಇವನ ನೋಟ ತನ್ನತ್ತ ಬಿದ್ದದ್ದೇ ನೆಪವೆಂಬ ರೀತಿಯಲ್ಲಿ ಕೆರೆಗೆ ಹಾರಿ ನಾಲ್ಕೈದು ಉದ್ದುದ್ದ ಬೀಸುಹೊಡೆತಗಳಲ್ಲಿ ಈ ಬದಿಗೆ ತಲುಪಿ, ನೀರೊಳಗೆ ಮುಳುಗು ಹಾಕಿ ಸುಂದರನ ಪಾದದಿಂದ ಮುತ್ತಿಡುತ್ತಾ ಸೊಂಟದತ್ತ ಏರಿದವಳನ್ನು ಮತ್ತೆ ನೀರಿಗೇ ನೂಕುವ ಯೋಚನೆ ಬಂದರೂ ಬುದ್ಧಿ ಬರಲಿಲ್ಲ. ಕೆರೆದಂಡೆ ಮತ್ತೊಂದು ಬೆಂಕಿಯಂಗಳವಾಯ್ತು.

ಇದರ ನಂತರ ಇಂತಹ ಇನ್ನೂ ಒಂದೆರಡು ಮುಖಾಮುಖಿ. ಸುಂದರನ ಪರಿಸ್ಥಿತಿ ಗಂಭೀರವಾಯ್ತು. ಊಟ ತಿಂಡಿಯ ಪರಿವೆಯಿಲ್ಲ. ಓದಿನ ಕಡೆ ಮೊದಲೇ ಗಮನವಿಲ್ಲ. ಚಾರ್ಟರ್ಡ್ ಅಕೌಂಟೆಂಟ್ ಆಫೀಸಿಗೆ ಹೋದರೂ ಅಲ್ಲಿ ಯಾವ ಹೆಣ್ಣಿನ ಮುಖ ನೋಡಿದರೂ ಅವರಲ್ಲೆಲ್ಲ ಸುಜೇತಾಳೇ ಕಾಣತೊಡಗಿದಳು. ಯಾವ ಹೆಣ್ಣಿನ ದನಿ ಕೇಳಿದರೂ ಅವನೊಳಗೆ ಉದ್ವೇಗದ ಉರಿ ಹತ್ತಿಕೊಳ್ಳುತ್ತಿತ್ತು. ಮೊದಲ ಸಂಯೋಗದ ನಂತರ ಆರು ತಿಂಗಳು ಕಳೆದಿತ್ತು. ಯಾರೊಂದಿಗೂ ಮುಖ ನೋಡಿ ಮಾತನಾಡಲಾರದ ದುಃಸ್ಥಿತಿಗೆ ತಲುಪಿದ್ದ. ಆಗಲೇ ಹಿಪ್ನೋಥೆರಪಿಯ ಬಗ್ಗೆ ಅವನ ಸ್ನೇಹಿತನಿಂದ ತಿಳಿದುಬಂತು. ಅತ್ಯಂತ ಸಂಕೋಚದಿಂದ ಮುಜುಗರ ಪಡುತ್ತಾ ನನ್ನನ್ನು ಭೇಟಿಯಾಗಲು ಕೇಳಿಕೊಂಡ. ಕಾರಣವೇನೆಂದು ಕೇಳಿದಾಗ, "ತುಂಬಾ ಟೆನ್ಶನ್ ಆಗ್ತದೆ. ಓದ್ಲಿಕ್ಕೆ ಆಗುದಿಲ್ಲ. ಯಾವುದ್ರಲ್ಲೂ ಗಮನ ಇಲ್ಲ" ಅಂದ. ಅಪಾಯಿಂಟ್‍ಮೆಂಟ್ ಕೊಟ್ಟೆ, ಸಮಯಕ್ಕೆ ಸರಿಯಾಗಿ ಬರಲು ಸೂಚಿಸಿದೆ.

ಮೊದಲ ಭೇಟಿಯಲ್ಲಿ ಒಂದೊಂದಾಗಿ ವಿವರಗಳನ್ನು ಕೇಳುತ್ತಾ ಹೋದಂತೆ ಕಂಗಾಲಾದ ಕಳೆಗುಂದಿದ ಕಣ್ಣುಗಳ ಹಿಂದಿನ ಅತಂತ್ರ ಸ್ಥಿತಿ ಗೋಚರವಾಯ್ತು. ಒಳಉರಿಯನ್ನು ತೃಪ್ತಿಪಡಿಸಲೂ ಆಗದೆ, ಆರಿಸಲೂ ಆಗದೆ ಒದ್ದಾಡುತ್ತಿದ್ದ. ಸಮ್ಮೋಹನಕ್ಕೆ ಒಳಪಟ್ಟಾಗಲೂ ಉದ್ವೇಗ, ಆತಂಕ. ನಿರಾಳವಾಗುವ ಪರಿಯೇ ಆತನಿಗೆ ಅಸಾಧ್ಯ. ಉಸಿರಾಟದಲ್ಲಿ ತಲ್ಲೀನತೆಯಿಲ್ಲ, ಏಕಾಗ್ರತೆಯಿಲ್ಲ. ಎಲ್ಲವೂ ಏರುಪೇರು. ಏಕತಾನದ ಉಸಿರಾಟವನ್ನು ಅಭ್ಯಸಿಸಲು ತಿಳಿಸಿ ಕಳುಹಿಸಿಕೊಟ್ಟೆ.

ಎರಡನೇ ಮತ್ತು ಮೂರನೇ ಭೇಟಿಗಳಲ್ಲಿ ಆತನಿಗೆ ಪುನಃಪುನಹ ಉಸಿರಾಟದ ಏಕತಾನತೆಯನ್ನೂ ಏಕಾಗ್ರತೆಯನ್ನೂ ಅಭ್ಯಾಸ ಮಾಡಿಸಿ, ನಿರಾಳವಾಗುವುದನ್ನೇ ಹೇಳಿಕೊಡಬೇಕಾಯಿತು. ಆತನ ಮನಸ್ಸು ಸದಾ ಗೊಂದಲಭರಿತ. ತನ್ನ ಹೊರತಾಗಿ ಬೇರೆ ಯಾರಿಗೂ ಗೊತ್ತಿಲ್ಲದ ವಿಷಯ ವಿವರಗಳನ್ನೆಲ್ಲ ಹಂಚಿಕೊಳ್ಳುವಾಗಿನ ಆತಂಕ. ಚಿಕಿತ್ಸಕಿಯಾಗಿ ನನ್ನನ್ನು ಒಪ್ಪಿಕೊಳ್ಳುವಲ್ಲಿ ಸಣ್ಣ ಸಂದೇಹ. ಇವೆಲ್ಲ ಅಡೆತಡೆಗಳನ್ನು ದಾಟಿ ಮುಂದಿನ ಭೇಟಿಗೆ ಬಂದಾಗ ನಿರಾಳವಾಗಿ ಸಮ್ಮೋಹನಕ್ಕೆ ಒಳಗಾಗಿ ಯಾವುದೋ ಜನ್ಮದ ತುಣುಕನ್ನು ಎಳೆದೆಳೆದು ತಂದ.

Monday, 16 May 2011

ಸಂಜ್ಞಾ - ೦೨

ರಾತ್ರೆ ಹತ್ತೂವರೆ ಕಳೆದಿತ್ತು. ಸುಂದರ್ ಅಮ್ಮನೇ ಬಂದಿರಬೇಕೆಂದು ಓದುತ್ತಿದ್ದ ಕಾದಂಬರಿಯನ್ನು ಬದಿಗಿರಿಸಿ ಬಾಗಿಲು ತೆರೆದ.

"ಒಳಗೆ ಬರಬಹುದಾ?" ಕೇಳಿದವಳು ಸುಜೇತಾ.
ಸುಮ್ಮನೇ ಬದಿಗೆ ಸರಿದು ನಿಂತವನನ್ನು ದಾಟಿ ಹೋಗಿ ಕುರ್ಚಿಯಲ್ಲಿ ಕೂತಳು. ಉಪಾಯವಿಲ್ಲದೆ ಮಂಚದ ಮೇಲೆ ಕೂತ ಸುಂದರ್. "ಏನತ್ತಿಗೆ ಈ ಹೊತ್ತಿಗೆ ಬಂದ್ರಿ?"
"ಬರಬಾರ್ದಾ?... ಏನ್ ಓದ್ತಿದ್ದೆ?..."
"ಸಿಡ್ನಿ ಷೆಲ್ಡನ್ ನಾವೆಲ್"
"ಹ್ಮ್. ಅವ್ನ ನಾವೆಲ್ಲಲ್ಲಿ ರೊಮ್ಯಾನ್ಸ್ ಎಷ್ಟು ಚಂದ, ಅಲ್ವಾ?"
"..."
"ಯಾಕೆ ಮಾರಾಯ ನಾಚಿಕೆ? ನಾನೇನು ಹೊರಗಿನವಳಾ? ಹೇಳು, ಚಂದ ಇರ್ತದಲ್ವಾ?"
"ಹ್ಮ್..."

ಅಷ್ಟರಲ್ಲೇ ಕೆಳಗಿನಿಂದ ಅಮ್ಮ ಸುಂದರನನ್ನು ಕರೆದರೆಂದು ಸಿಕ್ಕಿದ ಅವಕಾಶ ಉಪಯೋಗಿಸಿ ಎದ್ದು ಹೋದ. ಮತ್ತೆ ಬಂದಾಗ ಸುಜೇತಾ ಅಲ್ಲಿರಲಿಲ್ಲ. ಓದುತ್ತಿದ್ದ ಕಾದಂಬರಿಯೂ ಇರಲಿಲ್ಲ.

ಮತ್ತೊಂದೆರಡು ದಿನಗಳ ನಂತರ ಇಂಥದೇ ಇನ್ನೊಂದು ಮುಖಾಮುಖಿ. ಅಂದು ಸುಮ್ಮನೇ ಏನೋ ಕಾರಣ ಹುಡುಕಿ ಕೆಳಗೆ ಬಂದಿದ್ದ ಸುಂದರ್. ಹಿಂದಿರುಗಿದಾಗ ಕೋಣೆ ಖಾಲಿ. ಈ ಹೊಸ ಅತ್ತಿಗೆಯ ಈ ವರಸೆ ಆತನಿಗೆ ಒಗಟಾಗಿತ್ತು. ಯಾರಲ್ಲೂ ಹೇಳುವಂತಿರಲಿಲ್ಲ. ಹೀಗೇ ಒಂದೆರಡು ತಿಂಗಳೇ ಕಳೆಯಿತು. ಊಟದ ಮೇಜಿನ ಮುಂದೆಯೂ ಸುಜೇತಾ ಸಿಕ್ಕರೆ ಅವಳ ನೋಟ ತಪ್ಪಿಸುವಂತಾಗುತ್ತಿತ್ತು. ಅದ್ಯಾವುದೋ ಅರಿಯದ ಸೆಳೆತ ಅವಳ ಕಣ್ಣಲ್ಲಿ. ಆತ್ಮೀಯ ಗೆಳೆಯನಲ್ಲಿ ಹೇಳಿಕೊಂಡ. ಅವನೋ, ಸಾರಾಸಗಟಾಗಿ ತೀರ್ಪು ಕೊಟ್ಟ- ಅವಳು ನಿನ್ನನ್ನು ಮೋಹಿಸುತ್ತಿದ್ದಾಳೆ. ಬೇಕಾದರೆ ಉಪಯೋಗಿಸ್ಕೋ. ಇಲ್ಲವಾದ್ರೆ ದೂರಾಗು.

ಏನೇನೋ ಸಬೂಬು ಹೇಳಿ, ಸಿ.ಎ. ಸೇರಲೆಂದು ಬೆಂಗಳೂರಿಗೆ ಹೊರಟವನನ್ನು ಅಪ್ಪ ತಡೆದು ತನ್ನೂರಲ್ಲೇ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಬಳಿ ಆರ್ಟಿಕಲ್‍ಷಿಪ್ಪಿಗೆ ಸೇರಿಸಿದಾಗ ಪೆಚ್ಚಾದವನು ಸುಂದರ್ ಮಾತ್ರ. ಸುಜೇತಾ ಎನ್ನುವ ಮೋಹಿನಿಯಿಂದ ದೂರ ಹೋಗುವ ಪ್ರಯತ್ನ ವಿಫಲವಾಯ್ತು. ಇನ್ನು ಗೆಳೆಯ ಹೇಳಿದಂತೆ ಅದರ ಪ್ರಯೋಜನ ಪಡೆಯಲೆ? ಮನಸ್ಸು ಒಪ್ಪಲೇ ಇಲ್ಲ. ನಿದ್ದೆ ದೂರಾಗಹತ್ತಿತು. ಇಷ್ಟೆಲ್ಲ ಆಗುವಷ್ಟರಲ್ಲಿ ಭಾಸ್ಕರ್ ಸುಜೇತಾ ಈ ಮನೆ ಸೇರಿ ಆರೇಳು ತಿಂಗಳು ಕಳಯಿತು. ಮನೆಯವರೆಲ್ಲ ಚೆನ್ನಾಗಿಯೇ ಹೊಂದಿಕೊಂಡಿದ್ದರು. ಶಂಕರ್ ವ್ಯವಹಾರ ವಿಸ್ತಾರಗೊಳ್ಳುತ್ತಿತ್ತು. ಹೆಸರೂ ಹರಡುತ್ತಿತ್ತು. ಒಂಟಿಯಾಗಿ ಒಳಗೊಳಗೇ ಕೊರಗುತ್ತಿದ್ದವ ಸುಂದರ್ ಮಾತ್ರ.

ಅದೊಂದು ದಿನ ಮಧ್ಯರಾತ್ರೆ, ಮನೆಯೆಲ್ಲ ಮೌನದಲ್ಲಿ ಅದ್ದಿದ್ದ ಒಂದೂವರೆ-ಒಂದೂ ಮುಕ್ಕಾಲರ ಹೊತ್ತು. ಅಕೌಂಟಿಂಗ್ ಪುಸ್ತಕದಲ್ಲಿ ಮುಳುಗಿದ್ದ ಸುಂದರ್ ಬೆನ್ನಮೇಲೆ ಮೃದುವಾಗಿ ಬೆಚ್ಚಗಿನದೇನೋ ಸೋಕಿದಾಗ ಬೆನ್ನಹುರಿಯಲ್ಲೇ ಝುಮ್ಮೆಂದು ನೇರವಾದ. ತಕ್ಷಣವೇ ಆತನ ಕಣ್ಣಮೇಲೆ ಬೆರಳುಗಳು ಆವರಿಸಿಕೊಂಡವು.
"ಸುಜೇತಾ..." ಮನಸ್ಸು ಇಂದ್ರಿಯಗಳೆಲ್ಲ ಕೂಗಿಕೊಂಡವು, ನಾಲಿಗೆಯ ಹೊರತಾಗಿ.
ಮುಂದೆ ನಡೆದುದಕ್ಕೆ ಆತನಲ್ಲಿ ಯಾವುದೇ ಕಾರಣವಿಲ್ಲ, ತರ್ಕವಿಲ್ಲ, ಜಿಗುಪ್ಸೆಯಿಲ್ಲ, ಬೇಸರವೂ ಇಲ್ಲ.
ಇನ್ನಷ್ಟು ಬೇಕೆಂಬ ಆಸೆಯ ಬೆಂಕಿ ಮಾತ್ರ.