ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 7 February 2011

ಸುಮ್ಮನೆ ನೋಡಿದಾಗ...೧೪

‘ಶಿಶಿರಾ, ಮೊನ್ನೆ ನಿನ್ನಪ್ಪ ಸತ್ತೋದ...’
‘ಹ್ಞಾ!?’ ಏನೊಂದೂ ಅರ್ಥವಾಗದೆ ಉದ್ಗರಿಸಿದೆ.
ಕೆಂಪು ಕಣ್ಣುಗಳಲ್ಲಿ ಈಗ ಪಸೆಯಿರಲಿಲ್ಲ, ಉರಿಯಿತ್ತು.
‘ಹೌದು. ನಿನ್ನ ಹುಟ್ಟಿಗೆ, ನನ್ನ ಈ ಸ್ಥಿತಿಗೆ ಕಾರಣನಾದ ಆ ದೊಡ್ಡ ಮನುಷ್ಯ ನಿನ್ನೆ ಪ್ರೋಸ್ಟೇಟ್ ಕ್ಯಾನ್ಸರಿಗೆ ಬಲಿಯಾದ.’
ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಅಮ್ಮನ ಹಿಂದಿನ ಕಥೆ ಗೊತ್ತಿದೆಯೆನ್ನಲೆ? ನನ್ನಪ್ಪ ವಿನ್ಯಾಸ್, ನೇಹಾಳಿಗೂ ಅಪ್ಪ ಅನ್ನುವ ಸತ್ಯ ನಮಗೆ ನಿನ್ನೆಯೇ ತಿಳಿಯಿತೆಂದು ಹೇಳಲೆ? ಅದಕ್ಕಿದು ಸರಿಯಾದ ಸಂದರ್ಭವೆ? ಅವನ (ಅವರ ಅನ್ನಲು ಮನವೊಪ್ಪದು) ಅನಾರೋಗ್ಯವೇ ಅಮ್ಮನ ಸಿಡುಕು ಸ್ವಭಾವಕ್ಕೆ ಕಾರಣವಾಗಿತ್ತೆ? ನೂರು ಪ್ರಶ್ನೆಗಳು ನನ್ನೊಳಗೆ. ನನ್ನ ಮೌನ ಅಮ್ಮನಿಗೆ ಬೇರೇನೋ ಅರ್ಥ ಕೊಟ್ಟಿರಬೇಕು.
‘ನಿಂಗೆ ಈ ಬಗ್ಗೆ ಏನೂ ಹೇಳಿರಲಿಲ್ಲ ಇಲ್ಲಿವರೆಗೆ. ನಾನು ಇಷ್ಟು ವರ್ಷ ಅವ್ನಿದ್ದೂ ವಿಧವೆ ಥರ ಜೀವನ ಮಾಡಿದೆ. ನಿನ್ನೆ, ಬಿಡುಗಡೆ ಆಯ್ತು ಅಂತಲೂ ಅನ್ನಿಸಿತ್ತು, ಎಲ್ಲವೂ ಮುಗೀತು ಅಂತಲೂ ಅನ್ನಿಸಿತ್ತು. ಇವತ್ತು ನಾನು ಕೆಲಸಕ್ಕೆ ಹೋಗುದಿಲ್ಲ. ನೀನು ಕಾಲೇಜಿಗೆ ಹೋಗಿ ಬಾ. ಸಂಜೆ ಎಲ್ಲ ಹೇಳ್ತೇನೆ...’
‘ಅಮ್ಮ, ನೀವ್ಯಾಕೆ ಇವತ್ತು ನಳಿನಿ ಆಂಟಿ ಮನೆಗೆ ಹೋಗ್ಬಾರ್ದು? ನೀವಲ್ಲಿ ಹೋಗದೆ ತುಂಬಾ ದಿನ ಆಯ್ತಲ್ಲ. ನಿಮ್ಮನ್ನು ಅಲ್ಲಿ ಬಿಟ್ಟು ನಾನ್ ಕಾಲೇಜಿಗೆ ಹೋಗ್ತೇನೆ. ನಂಗೂ ಇವತ್ತು ಇಷ್ಟದ ಲ್ಯಾಬ್ ಉಂಟು. ತಪ್ಪಿಸ್ಲಿಕ್ಕೆ ಖುಷಿ ಇಲ್ಲ...’ ನಳಿನಿ ಆಂಟಿ ನಿನ್ನೆ ಅವ್ರ ಮನೆಯಲ್ಲಿ ನಡೆದದ್ದನ್ನು ಅಮ್ಮನಿಗೂ ಹೇಳಿಯಾರು ಅನ್ನುವ ಯೋಚನೆಯಿಂದ ಈ ಮಾತು ಹೇಳಿದೆ.
‘...’
‘ಅಮ್ಮ, ಪ್ಲೀಸ್. ನಿಮ್ಮನ್ನು ಒಬ್ರನ್ನೇ ಬಿಟ್ಟು ಹೋಗ್ಲಿಕ್ಕೆ ನಂಗಾಗುದಿಲ್ಲ. ರೆಡಿಯಾಗಿ.’
ಅವರ ಉತ್ತರಕ್ಕೂ ಕಾಯದೆ ನಾನು ಬಚ್ಚಲಿಗೆ ಹೋದೆ. ಅದೇನನ್ನಿಸಿತ್ತೋ, ನಾನು ಹೊರಡುವ ಹೊತ್ತಿಗೆ ಅಮ್ಮನೂ ತಯಾರಾಗಿದ್ದರು. ಸಾಮಾನ್ಯವಾಗಿ ನಾನು ಹೋಗುವ ದಾರಿ ಬಿಟ್ಟು ಅಮ್ಮನ ಒಟ್ಟಿಗೆ ನಳಿನಿ ಆಂಟಿ ಮನೆಗೆ ಹೋದೆ.

ನೇಹಾ ಗೇಟಿನ ಹತ್ರವೇ ಸಿಕ್ಕಿದಳು. ಬಾಗಿಲಲ್ಲೇ ಇದ್ದ ನಳಿನಿ ಆಂಟಿಯ ಮುಖದಲ್ಲಿ ಖುಷಿಯೂ ಗೊಂದಲವೂ ಕಂಡಿತು. ಅವರ ಮುಖಭಾವದಿಂದ, ನಿನ್ನೆಯ ಇಲ್ಲಿಯ ವಿಷಯ ಅಮ್ಮನಿಗೆ ಗೊತ್ತಾಗಿಯೇ ಅವರೀಗ ಇಲ್ಲಿ ಬಂದಿದ್ದಾರೆನ್ನುವ ಸಂಶಯ ನಳಿನಿ ಆಂಟಿಗಿತ್ತೆಂದು ನನಗೆ ಭಾಸವಾಯ್ತು. ಆಂಟಿಯ ಕಣ್ಣನ್ನೇ ದಿಟ್ಟಿಸಿ ಇಲ್ಲವೆಂಬಂತೆ ತಲೆಯಾಡಿಸಿದೆ. ಸಮಾಧಾನದ ಉಸಿರು ಬಿಟ್ಟು, ‘ಬಾ ಹರಿಣಿ. ಎಷ್ಟು ದಿನ ಆಯ್ತು ಇಲ್ಲಿಗೆ ನೀನು ಬಾರದೆ! ಇವತ್ತು ಕೆಲಸಕ್ಕೆ ರಜೆಯಾ? ಈಗಾದ್ರೂ ಬಂದ್ಯಲ್ಲ. ಬಾ ಒಳಗೆ...’ ಅಂದರು.

ಅವರಿಬ್ಬರೂ ಒಳಗೆ ಹೋದ ಮೇಲೆ ನಾವಿಬ್ಬರೂ ಗೇಟಿಂದ ಹೊರಗೆ ಹೆಜ್ಜೆ ಹಾಕಿದೆವು.
‘ನೇಹಾ, ನಮ್ಮಪ್ಪ -ನಮ್ಮಿಬ್ರ ಅಪ್ಪ, ವಿನ್ಯಾಸ್- ನಿನ್ನೆ ಸತ್ತ ಅಂತ ಅಮ್ಮ ಈಗ ಬೆಳಿಗ್ಗೆ ಹೇಳಿದ್ರು. ತುಂಬಾ ಡಲ್ ಆಗಿದ್ದಾರೆ. ಅದ್ಕೇ ಇಲ್ಲಿಗೆ ಕರ್ಕೊಂಬಂದೆ...’
ಅವಳ ಹೆಜ್ಜೆಗಳು ಗಕ್ಕನೆ ನಿಂತವು. ‘ನಡಿ. ಮನೆಗೇ ಹೋಗುವಾ...’
‘ಅದ್ರ ಅಗತ್ಯ ಇಲ್ಲ. ನಮ್ಮನ್ನು ಒಮ್ಮೆಯಾದ್ರೂ ನೋಡ್ಲಿಕ್ಕೂ ಬಾರದ ಮನುಷ್ಯ, ನಮ್ಮನ್ನು ತನ್ನ ಮಕ್ಕಳೂಂತ ಒಪ್ಪಿಕೊಳ್ಳದ ಮನುಷ್ಯ ಈಗ ಸತ್ತಿದ್ದಾನೆ ಅಂದ್ರೆ ನಮಗ್ಯಾಕೆ ಅದು ನಾಟಬೇಕು? ಅವನ ಜೀನ್ಸ್ ನಮ್ಮಲ್ಲಿದೆ, ಸರಿ. ಅಷ್ಟಕ್ಕೇ ಅವ ನಮ್ಮ ಅಪ್ಪ ಆಗುದಿಲ್ಲ. ಅವನ ಜೀವನದಲ್ಲಿ ನಮಗೆ ಯಾವ ಸ್ಥಾನ ಕೊಟ್ಟಿದ್ದಾನೆ ಅಂತ ನಮ್ಮ ಜೀವನದಲ್ಲಿ ಅವನಿಗೆ ಯಾವುದೇ ಸ್ಥಾನ ಕೊಡ್ಬೇಕು? ಅದೆಲ್ಲ ಬೇಡ... ನಿನಗಂತೂ ಪ್ರೀತಿ ಸುರಿಸುವ ಅಪ್ಪ ಇದ್ದಾರೆ, ಆದ್ರೂ ನಿನಗ್ಯಾಕೆ ಈ ಸೆಳೆತ? ಸರಿಯಲ್ಲ ನೇಹಾ. ಈ ಸೆಂಟಿಮೆಂಟಿನಿಂದ ನಿನ್ನ ಅಪ್ಪ-ಅಮ್ಮನಿಗೆ ಅನ್ಯಾಯ ಮಾಡ್ತೀ ನೀನು. ಅಷ್ಟೇ. ಕಣ್ಣು ತೆರಿ. ಸರಿಯಾಗಿ ಬದುಕನ್ನು ನೋಡು...’

‘ಸೆಂಟಿಮೆಂಟ್ ಅಂತ ನನಗೆ ಪಾಠ ಹೇಳುವವಳು ನೀನ್ಯಾವಾಗ ಇಷ್ಟು ಗಟ್ಟಿ ಆದದ್ದು? ಮೊನ್ನೆಯಷ್ಟೇ ರೊಮ್ಯಾಂಟಿಕ್ ಕಥೆ ಬರ್ದು ಅದ್ರೊಳಗೆ ಮುಳುಗಿದವಳು ಅದೆಷ್ಟು ಹೊತ್ತಿಗೆ ಇಷ್ಟ ಕಟುವಾದದ್ದು?’
‘ರೊಮ್ಯಾಂಟಿಕ್ ಕಥೆಗೂ ರೂಂಮೇಟ್ ಜೀವನಕ್ಕೂ ವ್ಯತ್ಯಾಸ ಗೊತ್ತಾದಾಗ...’
‘ಹ್ಮ್! ಅಂತೂ ನಮ್ಮ ಜೀವನದಲ್ಲಿ ಈ ವ್ಯಕ್ತಿಗೆ, ಈ ಸಾವಿಗೆ ಯಾವುದೇ ಅರ್ಥ ಇಲ್ಲ ಅಂತ ನೀನು ಹೇಳಿದ್ದೀ, ಅಲ್ವಾ?’
‘ಹೌದು. ನಿಜ. ಇಲ್ಲವೇ ಇಲ್ಲ. ಅದರ ಅಗತ್ಯವೇ ಇಲ್ಲ. ನಮ್ಮ ಈ ದೃಢ ನಿರ್ಧಾರ ನಮ್ಮ ಹಿರಿಯರಿಗೂ ಒಳ್ಳೇದೇ.’
‘ಸರಿ ಹಾಗಾದ್ರೆ. ಈಗ ಕಾಲೇಜಿಗೇ ಹೋಗುವ.’
‘ಹೋಗುವ... ಬಾ...’

Tuesday, 1 February 2011

ಸುಮ್ಮನೆ ನೋಡಿದಾಗ...೧೩

ನನ್ನ ಕಣ್ಣುಗಳಲ್ಲಿ ಗಾಬರಿ ಗುರುತಿಸಿ ಸುಮುಖ್ ಅಂಕಲ್ ಹತ್ರ ಬಂದರು.
‘ಯೋಚಿಸ್ಬೇಡ. ಇವತ್ತು ಇಲ್ಲೇ ಊಟ ಮಾಡು. ನಂತ್ರ ನಿನ್ನನ್ನು ನಾನೇ ನಿಮ್ಮನೆಗೆ ಬಿಡ್ತೇನೆ, ಆಯ್ತಾ?’
‘ಬೇಡ ಅಂಕಲ್, ಅಮ್ಮ ಆಗ್ಲೇ ಕಾಯ್ತಿರ್ಬಹುದು. ನಾನು ಈಗ್ಲೇ ಹೋಗ್ತೇನೆ’
‘ಏ, ಇಲ್ಲೇ ಇರು ಇವತ್ತು...' ನೇಹಾ ಕುತ್ತಿಗೆ ಅಡ್ಡ ಹಾಕಿ ನಗುತ್ತಿದ್ದಳು.
ನಳಿನಿ ಆಂಟಿಯ ಕಣ್ಣುಗಳಲ್ಲಿ ಆಗಲೇ ಖುಷಿಯಿತ್ತು. ನನ್ನಮ್ಮನ ಕೋಪದಿಂದ ನನ್ನನ್ನು ಉಳಿಸಿಕೊಳ್ಳುವ ಸಲುವಾಗಿ ಮೂರು ಜೀವಗಳಿಗೆ ನಿರಾಸೆ ಮಾಡುವ ಇಚ್ಛೆಯಾಗಲಿಲ್ಲ, ಒಪ್ಪಿಕೊಂಡೆ. ಎಲ್ಲರೂ ಮನೆಯೊಳಗೆ ಹೋದ ಕೂಡಲೇ ಸುಮುಖ್ ಅಂಕಲ್ ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿ, ‘ನೀವೂ ಇಲ್ಲೇ ಊಟಕ್ಕೆ ಬನ್ನಿ’ ಎಂದರು. ನನ್ನ ನಿರೀಕ್ಷೆಯಂತೆಯೇ ನಿರಾಕರಣೆ ಬಂದಾಗ ಪೆಚ್ಚಾದವಳು ನೇಹಾ.


ಊಟ ಮುಗಿಸಿ ಒಂಬತ್ತು ಗಂಟೆಯ ಸುಮಾರಿಗೆ ಸುಮುಖ್ ಅಂಕಲ್ ನನ್ನನ್ನು ಮನೆಗೆ ಕರೆದುಕೊಂಡು ಹೊರಟಾಗ ನೇಹಾಳೂ ಜೊತೆಯಾದಳು. ನಡೆಯುತ್ತಾ ಸಾಗಿದೆವು. ಕೆಲಕ್ಷಣಗಳ ಮೌನದ ಬಳಿಕ,
‘ಅಂಕಲ್, ನಮ್ಮಮ್ಮ ಯಾವಾಗ ಇಷ್ಟು ಸಿಡುಕಿಯಾದದ್ದು? ಯಾಕೆ? ನಿಮಗೆ ಗೊತ್ತುಂಟಾ?’ ತಡೆಯಲಾರದೆ ಕೇಳಿದೆ.
‘ಹ್ಮ್, ಇದನ್ನು ನಿಮ್ಮಮ್ಮನ ಹತ್ರವೇ ಕೇಳುದು ಒಳ್ಳೇದು ಮಗಳೇ. ನಾನು ಹೇಳಿದ್ರೆ ತಪ್ಪಾದೀತು’
‘ಅಮ್ಮ ಇದಕ್ಕೆ ಉತ್ತರ ಕೊಡುದು ಸಂಶಯ. ಅಲ್ಲದೆ, ಕೇಳಿದ್ರೆ ನಾನಂತೂ ಸರಿಯಾಗಿ ಬೈಸಿಕೊಳ್ಬೇಕು, ಅಷ್ಟೇ’
‘ಒಂದಲ್ಲ ಒಂದಿನ ನಿನಗೆ ಸತ್ಯ ಗೊತ್ತಾಗಿಯೇ ಆಗ್ತದೆ. ಇವತ್ತು ಅರ್ಧ ಕಥೆ ಗೊತ್ತಾಯ್ತಲ್ಲ, ಹಾಗೇ...’
‘ಇವತ್ತು ನಮಗೆ ಅರ್ಧ ಕಥೆ ಗೊತ್ತಾಯ್ತು ಅಂತ ನಿಮಗೆ ಹೇಗೆ ಗೊತ್ತಾಯ್ತು?’
‘ಅದು ನಳಿನಿ ಮತ್ತು ನನ್ನ ನಡುವಿನ ಗುಟ್ಟು. ನಿಮಗೀಗಲೇ ಬೇಡ.’
‘ಪಪ್ಪಾ, ಮುಂದೆ ನಾನೂ ನಿಮ್ಮಿಬ್ಬರ ಹಾಗೇ ಚಂದ ಹೊಂದಾಣಿಕೆಯಿಂದ ಸಂಸಾರ ಮಾಡ್ಬೇಕಾದ್ರೆ ಇಂಥ ಗುಟ್ಟನ್ನೆಲ್ಲ ನಂಗೂ ಹೇಳಿಕೊಡ್ಬೇಕು ನೀವು’ ನೇಹಾಳ ಮಾತಿಗೆ ಅಂಕಲ್ ಅಬ್ಬರದ ನಗು ಹಾರಿಸಿದರು.
ಅಷ್ಟರಲ್ಲಾಗಲೇ ನಮ್ಮ ಗೇಟಿನ ಹತ್ತಿರ ಬಂದಿದ್ದೆವಾದ್ದರಿಂದ ಆ ನಗು ಕೇಳಿಯೇ ಅಮ್ಮ ಬಾಗಿಲು ತೆರೆದರು. ನನ್ನನ್ನು ಮೆಟ್ಟಿಲವರೆಗೆ ತಲುಪಿಸಿ ಹಿಂದೆ ಹೊರಟವರನ್ನು ಅಮ್ಮ ಒಳಗೆ ಕರೆಯಲೇ ಇಲ್ಲ. ಪೆಚ್ಚಾಗುವ ಸರದಿ ನನ್ನದು.

ಒಳಗುದಿಯಿಂದ ಪುಸ್ತಕಗಳನ್ನು ಮೇಜಿನ ಮೇಲಿಟ್ಟು ಬಚ್ಚಲಿಗೆ ಹೋಗಿ ಕೈಕಾಲು ತೊಳೆದುಕೊಂಡು ಬಂದೆ. ಅಮ್ಮನಂತೂ ಮಲಗಲು ಸಿದ್ಧವಾಗಿದ್ದರು. ನನಗೂ ಬೇರೇನೂ ಕೆಲಸಗಳಿರಲಿಲ್ಲ. ತಲೆ ಮಾತ್ರ ಧಿಮ್ಮೆನ್ನುತ್ತಿತ್ತು. ಒಂದು ದಿನಕ್ಕೆ ಗ್ರಹಿಸಲು ಸಾಧ್ಯವಿದ್ದದ್ದಕ್ಕಿಂತ ಹೆಚ್ಚಿನ ಮಾಹಿತಿ ಮನಸ್ಸು ಮೆದುಳನ್ನು ತುಂಬಿಕೊಂಡಿತ್ತು. ಅವನ್ನೆಲ್ಲ ಹೇಗೆ ಸಂಭಾಳಿಸಬೇಕೆಂದು ತಿಳಿಯದೆ ನನ್ನ ಮಂಚದ ಮೇಲೆ ಬೋರಲಾದೆ.

ಬೆಳಿಗ್ಗೆ ಎದ್ದಾಗ ಸೂರ್ಯ ನನ್ನ ಕೆನ್ನೆ ಮುತ್ತಿಕ್ಕುತ್ತಿದ್ದ. ನಿನ್ನೆ ಸಂಜೆಯೆಲ್ಲ ಮನದೊಳಗೆ ಅವಿತಿದ್ದವ ಮತ್ತೆ ಧುತ್ತನೆ ಎದುರು ನಿಂತ. ಜನವರಿ ಮುಂಜಾನೆಯ ಚಳಿಯಲ್ಲಿ ವಸಂತನ ಹೂನಗೆ ಕೋಣೆಯನ್ನೇ ಬೆಚ್ಚಗಾಗಿಸಿತು. ಇವನನ್ನು ಹೇಗೆ ನಿಭಾಯಿಸುವುದೆನ್ನುವ ಹೊಸ ಸಮಸ್ಯೆ ಎದುರಾಯಿತು. ಹೀಗೆ, ಇದ್ದಕ್ಕಿದ್ದ ಹಾಗೆ, ಎಲ್ಲೆಂದರಲ್ಲಿ ಇವ ಎದುರಾದರೆ ನನ್ನ ಕೆಲಸಗಳೆಲ್ಲ ಏರುಪೇರಾದಂತೆಯೇ. ಅಮ್ಮನ ಚಿರತೆ ಕಣ್ಣುಗಳಿಗೆ ಈ ಕಳ್ಳನ ಪತ್ತೆಯಾಗದ ರೀತಿ ಜೋಪಾನ ಮಾಡುದು ಹೇಗೆ?... ಅಲ್ಲ! ನನಗ್ಯಾಕೆ ಅವನ ಉಸಾಬರಿ? ಅವನನ್ನು ಬಚಾಯಿಸಿಕೊಳ್ಳುವ ಯೋಚನೆ-ಯೋಜನೆ ಯಾಕೀಗ? ಅಸಲಿಗೆ, ನನ್ನೊಳಗೆ ಅವನು ಸೇರಿಕೊಂಡದ್ದು ಯಾವಾಗ? ಅಯ್ಯೋ! ಬೆಳಬೆಳಗ್ಗೆಯೇ ಇದೇನಿದು ಗೋಜಲು? ಹೇಗೆ ಇದನ್ನೆಲ್ಲ ಬಿಡಿಸಿಕೊಳ್ಳಲಿ? ಹರ್ಷಣ್ಣ? ನೇಹಾ? ನಳಿನಿ ಆಂಟಿ? ಇಲ್ಲ, ಯಾರೂ ಬೇಡ. ಇದನ್ನು ನಾನೇ ನಾನಾಗಿಯೇ ಪರಿಹರಿಸಿಕೊಳ್ಳಬೇಕು. ನಿರ್ಧಾರದ ಜೊತೆ ಕಿಟಕಿಯ ಪರದೆ ಸರಿಸಿದೆ. ಬೆಚ್ಚನೆಯ ಕಿರಣಗಳಿಗೆ ಮುಖವೊಡ್ದಿದೆ.

ಗಂಟೆ ಏಳಾದರೂ ಅಮ್ಮನ ಸದ್ದಿರಲಿಲ್ಲ. ಎದ್ದಿಲ್ಲವೇನೋ ಅಂದುಕೊಂಡು ಕೋಣೆಗೆ ಹೋಗಿ ನೋಡಿದರೆ ಅಮ್ಮ ಅಲ್ಲಿರಲೇ ಇಲ್ಲ. ಅಡುಗೆಮನೆ, ಬಚ್ಚಲು, ಹಿತ್ತಿಲು ಎಲ್ಲ ನೋಡಿ ಟೆರೇಸಿಗೆ ಹತ್ತಿದೆ. ಸೂರ್ಯನನ್ನೇ ದಿಟ್ಟಿಸುತ್ತಿದ್ದರು. ನನ್ನ ಹೆಜ್ಜೆ ಸದ್ದಿಗೆ ಬೆಚ್ಚಿಬಿದ್ದವರು ಹಾಗೇ ತಿರುಗಿ ಧಡಧಡ ಕೆಳಗೆ ಇಳಿದುಹೋದರು. ಗಲಿಬಿಲಿ, ಕಿರಿಕಿರಿಯೊಳಗೆ ನಾನೂ ಕೆಳಗಿಳಿದೆ.

ಮುಖತೊಳೆದು ಬಂದ ಅಮ್ಮನ ಕಣ್ಣುಗಳು ಅವರು ರಾತ್ರೆಯೆಲ್ಲ ಮಲಗಿರಲಿಲ್ಲ ಎನ್ನುವ ಸಂಶಯ ಕೊಟ್ಟವು.
‘ಅಮ್ಮಾ, ಉಶಾರಿಲ್ವಾ?’ ಆದಷ್ಟೂ ಮೃದುವಾಗಿ ಕೇಳಿದೆ. ಉತ್ತರ ಬರಲಿಲ್ಲ.
‘ತಿಂಡಿ ಏನ್ ಮಾಡ್ಲಿ ಹೇಳಿ, ನಾನೇ ಮಾಡ್ತೇನೆ...’ ಪ್ರತಿಕ್ರಿಯೆ ಇಲ್ಲ.
‘ದೋಸೆ ಬಂದ ಉಂಟಲ್ಲ, ದೋಸೆ ಹಾಕ್ತೇನೆ, ಬನ್ನಿ ಈಚೆ. ಟೇಬಲ್ ಹತ್ರ ಕೂತ್ಕೊಳ್ಳಿ...’ ವ್ಯತ್ಯಾಸವೇ ಇಲ್ಲ.

ಹತ್ತಿರ ಹೋಗಿ ಅವರನ್ನು ಟೇಬಲ್ ಹತ್ತಿರಕ್ಕೆ ದೂಡುನಡಿಗೆಯಲ್ಲಿ ಕರೆತಂದೆ. ಅದೇನೋ ಶೂನ್ಯಭಾವ ಅವರೊಳಗಿಂದ ಆವಿಯಾಗುತ್ತಿತ್ತು. ಅದರ ಝಳ ನನ್ನೊಳಗನ್ನೂ ಸೋಕಿತು.

ದೋಸೆ ಹಾಕಿ, ಉಪ್ಪಿನಕಾಯ್ ಜೊತೆ ಪ್ಲೇಟಲ್ಲಿಟ್ಟು ಟೇಬಲ್ಲಿನಲ್ಲಿಟ್ಟೆ. ಕುದಿಕಾಫಿ ಲೋಟ ಬದಿಯಲ್ಲಿಟ್ಟೆ. ನನಗೂ ದೋಸೆ ಕಾಫಿ ಮಾಡಿಕೊಂಡು ಟೇಬಲ್ ಬದಿಗೆ ಬಂದಾಗ ಅಮ್ಮನ ಕಣ್ಣುಗಳಲ್ಲಿ ಹನಿಗಳು ಉದುರುತ್ತಿದ್ದವು. ಹೊಟ್ಟೆ ತಾಳ ಹಾಕುತ್ತಿದ್ದರೂ ದೋಸೆ ಗಂಟಲಲ್ಲಿ ಇಳಿಯಲಿಲ್ಲ. ಕಾಫಿ ಮಾತ್ರ ಕುಡಿದು ಅಮ್ಮನ ಮುಖ ನೋಡಲಾಗದೆ ಗೋಡೆ, ಕಿಟಕಿ ನೋಡುತ್ತಾ ಅಲ್ಲೇ ಕೂತೇ ಇದ್ದೆ. ಎಷ್ಟು ಹೊತ್ತೋ, ಯಾರಿಗ್ಗೊತ್ತು?