ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday, 1 February 2011

ಸುಮ್ಮನೆ ನೋಡಿದಾಗ...೧೩

ನನ್ನ ಕಣ್ಣುಗಳಲ್ಲಿ ಗಾಬರಿ ಗುರುತಿಸಿ ಸುಮುಖ್ ಅಂಕಲ್ ಹತ್ರ ಬಂದರು.
‘ಯೋಚಿಸ್ಬೇಡ. ಇವತ್ತು ಇಲ್ಲೇ ಊಟ ಮಾಡು. ನಂತ್ರ ನಿನ್ನನ್ನು ನಾನೇ ನಿಮ್ಮನೆಗೆ ಬಿಡ್ತೇನೆ, ಆಯ್ತಾ?’
‘ಬೇಡ ಅಂಕಲ್, ಅಮ್ಮ ಆಗ್ಲೇ ಕಾಯ್ತಿರ್ಬಹುದು. ನಾನು ಈಗ್ಲೇ ಹೋಗ್ತೇನೆ’
‘ಏ, ಇಲ್ಲೇ ಇರು ಇವತ್ತು...' ನೇಹಾ ಕುತ್ತಿಗೆ ಅಡ್ಡ ಹಾಕಿ ನಗುತ್ತಿದ್ದಳು.
ನಳಿನಿ ಆಂಟಿಯ ಕಣ್ಣುಗಳಲ್ಲಿ ಆಗಲೇ ಖುಷಿಯಿತ್ತು. ನನ್ನಮ್ಮನ ಕೋಪದಿಂದ ನನ್ನನ್ನು ಉಳಿಸಿಕೊಳ್ಳುವ ಸಲುವಾಗಿ ಮೂರು ಜೀವಗಳಿಗೆ ನಿರಾಸೆ ಮಾಡುವ ಇಚ್ಛೆಯಾಗಲಿಲ್ಲ, ಒಪ್ಪಿಕೊಂಡೆ. ಎಲ್ಲರೂ ಮನೆಯೊಳಗೆ ಹೋದ ಕೂಡಲೇ ಸುಮುಖ್ ಅಂಕಲ್ ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿ, ‘ನೀವೂ ಇಲ್ಲೇ ಊಟಕ್ಕೆ ಬನ್ನಿ’ ಎಂದರು. ನನ್ನ ನಿರೀಕ್ಷೆಯಂತೆಯೇ ನಿರಾಕರಣೆ ಬಂದಾಗ ಪೆಚ್ಚಾದವಳು ನೇಹಾ.


ಊಟ ಮುಗಿಸಿ ಒಂಬತ್ತು ಗಂಟೆಯ ಸುಮಾರಿಗೆ ಸುಮುಖ್ ಅಂಕಲ್ ನನ್ನನ್ನು ಮನೆಗೆ ಕರೆದುಕೊಂಡು ಹೊರಟಾಗ ನೇಹಾಳೂ ಜೊತೆಯಾದಳು. ನಡೆಯುತ್ತಾ ಸಾಗಿದೆವು. ಕೆಲಕ್ಷಣಗಳ ಮೌನದ ಬಳಿಕ,
‘ಅಂಕಲ್, ನಮ್ಮಮ್ಮ ಯಾವಾಗ ಇಷ್ಟು ಸಿಡುಕಿಯಾದದ್ದು? ಯಾಕೆ? ನಿಮಗೆ ಗೊತ್ತುಂಟಾ?’ ತಡೆಯಲಾರದೆ ಕೇಳಿದೆ.
‘ಹ್ಮ್, ಇದನ್ನು ನಿಮ್ಮಮ್ಮನ ಹತ್ರವೇ ಕೇಳುದು ಒಳ್ಳೇದು ಮಗಳೇ. ನಾನು ಹೇಳಿದ್ರೆ ತಪ್ಪಾದೀತು’
‘ಅಮ್ಮ ಇದಕ್ಕೆ ಉತ್ತರ ಕೊಡುದು ಸಂಶಯ. ಅಲ್ಲದೆ, ಕೇಳಿದ್ರೆ ನಾನಂತೂ ಸರಿಯಾಗಿ ಬೈಸಿಕೊಳ್ಬೇಕು, ಅಷ್ಟೇ’
‘ಒಂದಲ್ಲ ಒಂದಿನ ನಿನಗೆ ಸತ್ಯ ಗೊತ್ತಾಗಿಯೇ ಆಗ್ತದೆ. ಇವತ್ತು ಅರ್ಧ ಕಥೆ ಗೊತ್ತಾಯ್ತಲ್ಲ, ಹಾಗೇ...’
‘ಇವತ್ತು ನಮಗೆ ಅರ್ಧ ಕಥೆ ಗೊತ್ತಾಯ್ತು ಅಂತ ನಿಮಗೆ ಹೇಗೆ ಗೊತ್ತಾಯ್ತು?’
‘ಅದು ನಳಿನಿ ಮತ್ತು ನನ್ನ ನಡುವಿನ ಗುಟ್ಟು. ನಿಮಗೀಗಲೇ ಬೇಡ.’
‘ಪಪ್ಪಾ, ಮುಂದೆ ನಾನೂ ನಿಮ್ಮಿಬ್ಬರ ಹಾಗೇ ಚಂದ ಹೊಂದಾಣಿಕೆಯಿಂದ ಸಂಸಾರ ಮಾಡ್ಬೇಕಾದ್ರೆ ಇಂಥ ಗುಟ್ಟನ್ನೆಲ್ಲ ನಂಗೂ ಹೇಳಿಕೊಡ್ಬೇಕು ನೀವು’ ನೇಹಾಳ ಮಾತಿಗೆ ಅಂಕಲ್ ಅಬ್ಬರದ ನಗು ಹಾರಿಸಿದರು.
ಅಷ್ಟರಲ್ಲಾಗಲೇ ನಮ್ಮ ಗೇಟಿನ ಹತ್ತಿರ ಬಂದಿದ್ದೆವಾದ್ದರಿಂದ ಆ ನಗು ಕೇಳಿಯೇ ಅಮ್ಮ ಬಾಗಿಲು ತೆರೆದರು. ನನ್ನನ್ನು ಮೆಟ್ಟಿಲವರೆಗೆ ತಲುಪಿಸಿ ಹಿಂದೆ ಹೊರಟವರನ್ನು ಅಮ್ಮ ಒಳಗೆ ಕರೆಯಲೇ ಇಲ್ಲ. ಪೆಚ್ಚಾಗುವ ಸರದಿ ನನ್ನದು.

ಒಳಗುದಿಯಿಂದ ಪುಸ್ತಕಗಳನ್ನು ಮೇಜಿನ ಮೇಲಿಟ್ಟು ಬಚ್ಚಲಿಗೆ ಹೋಗಿ ಕೈಕಾಲು ತೊಳೆದುಕೊಂಡು ಬಂದೆ. ಅಮ್ಮನಂತೂ ಮಲಗಲು ಸಿದ್ಧವಾಗಿದ್ದರು. ನನಗೂ ಬೇರೇನೂ ಕೆಲಸಗಳಿರಲಿಲ್ಲ. ತಲೆ ಮಾತ್ರ ಧಿಮ್ಮೆನ್ನುತ್ತಿತ್ತು. ಒಂದು ದಿನಕ್ಕೆ ಗ್ರಹಿಸಲು ಸಾಧ್ಯವಿದ್ದದ್ದಕ್ಕಿಂತ ಹೆಚ್ಚಿನ ಮಾಹಿತಿ ಮನಸ್ಸು ಮೆದುಳನ್ನು ತುಂಬಿಕೊಂಡಿತ್ತು. ಅವನ್ನೆಲ್ಲ ಹೇಗೆ ಸಂಭಾಳಿಸಬೇಕೆಂದು ತಿಳಿಯದೆ ನನ್ನ ಮಂಚದ ಮೇಲೆ ಬೋರಲಾದೆ.

ಬೆಳಿಗ್ಗೆ ಎದ್ದಾಗ ಸೂರ್ಯ ನನ್ನ ಕೆನ್ನೆ ಮುತ್ತಿಕ್ಕುತ್ತಿದ್ದ. ನಿನ್ನೆ ಸಂಜೆಯೆಲ್ಲ ಮನದೊಳಗೆ ಅವಿತಿದ್ದವ ಮತ್ತೆ ಧುತ್ತನೆ ಎದುರು ನಿಂತ. ಜನವರಿ ಮುಂಜಾನೆಯ ಚಳಿಯಲ್ಲಿ ವಸಂತನ ಹೂನಗೆ ಕೋಣೆಯನ್ನೇ ಬೆಚ್ಚಗಾಗಿಸಿತು. ಇವನನ್ನು ಹೇಗೆ ನಿಭಾಯಿಸುವುದೆನ್ನುವ ಹೊಸ ಸಮಸ್ಯೆ ಎದುರಾಯಿತು. ಹೀಗೆ, ಇದ್ದಕ್ಕಿದ್ದ ಹಾಗೆ, ಎಲ್ಲೆಂದರಲ್ಲಿ ಇವ ಎದುರಾದರೆ ನನ್ನ ಕೆಲಸಗಳೆಲ್ಲ ಏರುಪೇರಾದಂತೆಯೇ. ಅಮ್ಮನ ಚಿರತೆ ಕಣ್ಣುಗಳಿಗೆ ಈ ಕಳ್ಳನ ಪತ್ತೆಯಾಗದ ರೀತಿ ಜೋಪಾನ ಮಾಡುದು ಹೇಗೆ?... ಅಲ್ಲ! ನನಗ್ಯಾಕೆ ಅವನ ಉಸಾಬರಿ? ಅವನನ್ನು ಬಚಾಯಿಸಿಕೊಳ್ಳುವ ಯೋಚನೆ-ಯೋಜನೆ ಯಾಕೀಗ? ಅಸಲಿಗೆ, ನನ್ನೊಳಗೆ ಅವನು ಸೇರಿಕೊಂಡದ್ದು ಯಾವಾಗ? ಅಯ್ಯೋ! ಬೆಳಬೆಳಗ್ಗೆಯೇ ಇದೇನಿದು ಗೋಜಲು? ಹೇಗೆ ಇದನ್ನೆಲ್ಲ ಬಿಡಿಸಿಕೊಳ್ಳಲಿ? ಹರ್ಷಣ್ಣ? ನೇಹಾ? ನಳಿನಿ ಆಂಟಿ? ಇಲ್ಲ, ಯಾರೂ ಬೇಡ. ಇದನ್ನು ನಾನೇ ನಾನಾಗಿಯೇ ಪರಿಹರಿಸಿಕೊಳ್ಳಬೇಕು. ನಿರ್ಧಾರದ ಜೊತೆ ಕಿಟಕಿಯ ಪರದೆ ಸರಿಸಿದೆ. ಬೆಚ್ಚನೆಯ ಕಿರಣಗಳಿಗೆ ಮುಖವೊಡ್ದಿದೆ.

ಗಂಟೆ ಏಳಾದರೂ ಅಮ್ಮನ ಸದ್ದಿರಲಿಲ್ಲ. ಎದ್ದಿಲ್ಲವೇನೋ ಅಂದುಕೊಂಡು ಕೋಣೆಗೆ ಹೋಗಿ ನೋಡಿದರೆ ಅಮ್ಮ ಅಲ್ಲಿರಲೇ ಇಲ್ಲ. ಅಡುಗೆಮನೆ, ಬಚ್ಚಲು, ಹಿತ್ತಿಲು ಎಲ್ಲ ನೋಡಿ ಟೆರೇಸಿಗೆ ಹತ್ತಿದೆ. ಸೂರ್ಯನನ್ನೇ ದಿಟ್ಟಿಸುತ್ತಿದ್ದರು. ನನ್ನ ಹೆಜ್ಜೆ ಸದ್ದಿಗೆ ಬೆಚ್ಚಿಬಿದ್ದವರು ಹಾಗೇ ತಿರುಗಿ ಧಡಧಡ ಕೆಳಗೆ ಇಳಿದುಹೋದರು. ಗಲಿಬಿಲಿ, ಕಿರಿಕಿರಿಯೊಳಗೆ ನಾನೂ ಕೆಳಗಿಳಿದೆ.

ಮುಖತೊಳೆದು ಬಂದ ಅಮ್ಮನ ಕಣ್ಣುಗಳು ಅವರು ರಾತ್ರೆಯೆಲ್ಲ ಮಲಗಿರಲಿಲ್ಲ ಎನ್ನುವ ಸಂಶಯ ಕೊಟ್ಟವು.
‘ಅಮ್ಮಾ, ಉಶಾರಿಲ್ವಾ?’ ಆದಷ್ಟೂ ಮೃದುವಾಗಿ ಕೇಳಿದೆ. ಉತ್ತರ ಬರಲಿಲ್ಲ.
‘ತಿಂಡಿ ಏನ್ ಮಾಡ್ಲಿ ಹೇಳಿ, ನಾನೇ ಮಾಡ್ತೇನೆ...’ ಪ್ರತಿಕ್ರಿಯೆ ಇಲ್ಲ.
‘ದೋಸೆ ಬಂದ ಉಂಟಲ್ಲ, ದೋಸೆ ಹಾಕ್ತೇನೆ, ಬನ್ನಿ ಈಚೆ. ಟೇಬಲ್ ಹತ್ರ ಕೂತ್ಕೊಳ್ಳಿ...’ ವ್ಯತ್ಯಾಸವೇ ಇಲ್ಲ.

ಹತ್ತಿರ ಹೋಗಿ ಅವರನ್ನು ಟೇಬಲ್ ಹತ್ತಿರಕ್ಕೆ ದೂಡುನಡಿಗೆಯಲ್ಲಿ ಕರೆತಂದೆ. ಅದೇನೋ ಶೂನ್ಯಭಾವ ಅವರೊಳಗಿಂದ ಆವಿಯಾಗುತ್ತಿತ್ತು. ಅದರ ಝಳ ನನ್ನೊಳಗನ್ನೂ ಸೋಕಿತು.

ದೋಸೆ ಹಾಕಿ, ಉಪ್ಪಿನಕಾಯ್ ಜೊತೆ ಪ್ಲೇಟಲ್ಲಿಟ್ಟು ಟೇಬಲ್ಲಿನಲ್ಲಿಟ್ಟೆ. ಕುದಿಕಾಫಿ ಲೋಟ ಬದಿಯಲ್ಲಿಟ್ಟೆ. ನನಗೂ ದೋಸೆ ಕಾಫಿ ಮಾಡಿಕೊಂಡು ಟೇಬಲ್ ಬದಿಗೆ ಬಂದಾಗ ಅಮ್ಮನ ಕಣ್ಣುಗಳಲ್ಲಿ ಹನಿಗಳು ಉದುರುತ್ತಿದ್ದವು. ಹೊಟ್ಟೆ ತಾಳ ಹಾಕುತ್ತಿದ್ದರೂ ದೋಸೆ ಗಂಟಲಲ್ಲಿ ಇಳಿಯಲಿಲ್ಲ. ಕಾಫಿ ಮಾತ್ರ ಕುಡಿದು ಅಮ್ಮನ ಮುಖ ನೋಡಲಾಗದೆ ಗೋಡೆ, ಕಿಟಕಿ ನೋಡುತ್ತಾ ಅಲ್ಲೇ ಕೂತೇ ಇದ್ದೆ. ಎಷ್ಟು ಹೊತ್ತೋ, ಯಾರಿಗ್ಗೊತ್ತು?

Monday, 24 January 2011

ಸುಮ್ಮನೆ ನೋಡಿದಾಗ...೧೨

‘ನಳಿನಿ, ನಿನ್ನ ಮತ್ತು ಹರಿಣಿಯ ಸ್ನೇಹ ನನ್ಗೆ ಗೊತ್ತಿರುವ ವಿಷಯವೇ. ಈಗ, ಈ ಮಕ್ಕಳನ್ನು ಹೇಳಿ ನೀವಿಬ್ರೂ ಇನ್ನಷ್ಟು ಹತ್ರ ಆಗಿದ್ದೀರಿ. ನಿಮ್ಮನ್ನು ದೂರ ಮಾಡುವ ಉದ್ದೇಶ ನನ್ನದಲ್ಲ. ಹಾಗಂತ, ಹರಿಣಿಯೂ ಇಲ್ಲೇ ಇದ್ರೆ ಮುಂದೆ ಅಮ್ಮ ಬರುವಾಗ ಖಂಡಿತಾ ತೊಂದ್ರೆ ಆಗ್ತದೆ. ಅದೆಲ್ಲ ಯೋಚನೆ ಮಾಡಿಯೇ ನಮ್ಮ ಹಿಂದಿನ ರಸ್ತೆಯಲ್ಲೇ ಒಂದು ಬಾಡಿಗೆ ಮನೆ ನೋಡಿದ್ದೇನೆ. ಹರಿಣಿ ಮತ್ತು ಲಚ್ಚಮ್ಮ ಅಲ್ಲಿಗೆ ಹೋಗಿರ್ತಾರೆ. ಇನ್ನೂ ಒಂದೆರಡು ತಿಂಗಳಾದ ಮೇಲೆ ಹರಿಣಿಗೆ ಇಲ್ಲಿಯ ಶಾಲೆಯಲ್ಲಿ ಟೀಚರ್ ಆಗಿ ಸೇರುವ ಸಾಧ್ಯತೆ ಉಂಟು. ಮಾತಾಡಿದ್ದೇನೆ. ಅವಳ ಜೀವನಕ್ಕೂ ಒಂದು ದಾರಿ ಆಗ್ತದೆ. ಮೊದಲೇ ಹೇಳಿದ್ರೆ ನೀನು ಕೇಳುವ ಸಾವಿರ ಪ್ರಶ್ನೆಗಳಿಗೆ ಉತ್ರ ಹೇಳಿ ನನ್ನ ತಲೆ ಹುಳ ಹಿಡೀತದೆ, ಅದ್ಕೇ ಹೇಳ್ಲಿಲ್ಲ. ಇನ್ನು... ದೇವರು ಎಲ್ಲವನ್ನೂ ಯೋಚನೆ ಮಾಡಿಯೇ ಮಾಡ್ತಾನೆ. ಹರಿಣಿಗೆ ಅವಳಿಗಳು ಹುಟ್ಟಿದ್ದು ಒಳ್ಳೇದಕ್ಕೇ. ಒಂದು ನಮ್ಗೆ, ಒಂದು ಅವಳಿಗೇನೇ. ಇದನ್ನು ಕೂಡಾ ಮೊನ್ನೆಯೇ ಲಚ್ಚಮ್ಮ, ಹರಿಣಿ ನಿರ್ಧರಿಸಿ ನಂಗೆ ಹೇಳಿದ್ರು. ಇವತ್ತು ಮಕ್ಕಳಿಗೆ ಮೂರು ತುಂಬ್ತದೆ. ಯಾವುದೇ ಪುರೋಹಿತರ ಹಂಗೂ ಇಲ್ಲದೆ ನಾವೇ ನಾಮಕರಣ ಮಾಡುವಾ. ಮಧ್ಯಾಹ್ನ ಹಬ್ಬದೂಟ ಮುಗಿಸಿ ಹರಿಣಿ ಮತ್ತು ಲಚ್ಚಮ್ಮ ಒಂದು ಮಗುವಿನ ಒಟ್ಟಿಗೆ ಆ ಮನೆಗೆ ಹೋಗ್ತಾರೆ. ಸಂಜೆ ಮತ್ತೆ ನಾವೆಲ್ಲ ಒಟ್ಟಿಗೆ ದೇವಸ್ಥಾನಕ್ಕೆ ಹೋಗಿ ಬರುವಾ. ನಾಳೆ ಹೇಗೂ ಎರಡನೇ ಶನಿವಾರ, ನಂಗೆ ಆಫೀಸಿಲ್ಲ. ನಾಡಿದ್ದು ಆದಿತ್ಯವಾರ. ಸೋಮವಾರದ ಹೊತ್ತಿಗೆ ಎಲ್ಲ ಸೆಟ್ ಆಗಿರ್ತದೆ. ಲಚ್ಚಮ್ಮ ನಿಮ್ಮಿಬ್ಬರಿಗೂ ಸಹಾಯ ಮಾಡಿಕೊಂಡು ಇಲ್ಲೇ ಇರ್ತಾರೆ. ಇದಿಷ್ಟು ಪ್ಲಾನ್. ಏನ್ ಹೇಳ್ತೀ?’

ಹರಿಣಿ, ನಾನು ಮುಖ ಮುಖ ನೋಡಿಕೊಳ್ತಿರುವಾಗಲೇ ಲಚ್ಚಮ್ಮನ ಖಡಕ್ ಚಾ ಲೋಟೆಗಳು ಬಂದವು. ತೊಟ್ಟಿಲು ಹೊತ್ತು ತಂದ ಆಳು ಕೆಂಚ, ಜಗಲಿ ಬದಿಯಲ್ಲಿದ್ದವ ಅಲ್ಲಿಂದಲೇ ಬಗ್ಗಿ, ‘ಮಧ್ಯಾಹ್ನ ಊಟ ಮಾಡಿ ಬರ್ತೇನೆ ಅಯ್ಯ. ಆ ಮನೆಗೆ ಸಾಮಾನು ಸಾಗಿಸ್ಲಿಕ್ಕೆ. ಅಮ್ಮ, ನಂಗೊಂದು ಲೋಟ ಪಾಯ್ಸ ಇಡಿ, ಪೂರಾ ಖಾಲಿ ಮಾಡ್ಬೇಡಿ’ ಅಂದ. ‘ನೀನು ಬಂದ್ರೆ ಪಾಯ್ಸ ಗ್ಯಾರಂಟಿ. ಬಾ ಮೊದ್ಲು’ ಅಂದ್ರು ಸುಮುಖ್. ಚಾ ಕುಡಿದು ಅವ ಹೊರಟ. ನಡುಮನೆಯಲ್ಲಿ ಮಾತುಗಳು ಚಹಾ ಲೋಟಗಳೊಳಗೆ ಮುಳುಗಿದ್ದವು.

‘ಹರಿಣಿಯ ಮಗಳು ಶಿಶಿರಾ. ನಳಿನಿಯ ಮಗಳು ನೇಹಾ.’ ಸುಮುಖ್ ದನಿಯಲ್ಲಿ ತಮಾಷೆಯಿರಲಿಲ್ಲ. ನಾವು ಮೂವರೂ ಅವರ ಮುಖ ನೋಡಿದೆವು.
‘ಒಪ್ಪಿಗೆಯಿಲ್ವಾ?’
‘....’ ಮೂರು ತಲೆಗಳು ಸುಮ್ಮನೇ ಮೇಲಿಂದ ಕೆಳಗೆ ಆಡಿದವು.
‘ಮತ್ಯಾಕೆ ಹಾಗೆ ನೋಡ್ತೀರಿ?’
‘....’
‘ಏನಾದ್ರೂ ಮಾತಾಡಿ... ಯಾರಾದ್ರೂ...’
‘....’
‘ಲಚ್ಚಮ್ಮ, ಚಾ ಮಾಡುವಾಗ ಏನಾದ್ರೂ ಮದ್ದು ಹಾಕಿದ್ರಾ ಹೇಗೆ?’
‘....’
‘ಅಯ್ಯೋ ದೇವ್ರೇ... ಮಾತಾಡಿ ಮಾರಾಯ್ತಿಯರೇ... ಇಲ್ಲಿ ಏನೂ ಅವಾಂತರ ಆಗ್ಲಿಲ್ಲ...’
‘....’
‘....’
ಒಂದು ಜೊತೆ ಕಿಸಕ್ ಸದ್ದು ಸೋಫಾವನ್ನೊಮ್ಮೆ ಕಂಪಿಸಿತು. ಅದೇ ಪ್ರತಿಧ್ವನಿಸಿ ನಡುಮನೆ ತುಂಬ ಗಲಗಲವಾಯ್ತು. ನಕ್ಕೂನಕ್ಕೂ ನನ್ನ ಹರಿಣಿಯ ಕಣ್ಣುಗಳಲ್ಲಿ ನೀರಿಳಿಯಲು ಶುರುವಾದಾಗ ಲಚ್ಚಮ್ಮ ಟವೆಲ್ ತಂದುಕೊಟ್ಟರು. ಸುಮುಖ್ ನೇಹಾಳನ್ನು ಎತ್ತಿಕೊಂಡು ಅಲ್ಲಿಂದ ಜಾರಿಕೊಂಡರು. ಅವರ ಹಿಂದೆಯೇ ಲಚ್ಚಮ್ಮ ಶಿಶಿರಳನ್ನು ಮಾತಾಡಿಸುತ್ತಾ ನಡೆದರು. ಮುಂದೆ ಎಲ್ಲವೂ ಸುಮುಖ್ ಯೋಜಿಸಿದ ಹಾಗೇ ನಡೆದುಹೋಯ್ತು. ಮಕ್ಕಳ ಮನೆಯಿಂದ ಹಿಂದೆ ಬಂದ ಅತ್ತೆ ಕೂಡಾ ಖುಷಿಯಾಗಿಯೇ ನೇಹಾಳನ್ನು ಮುದ್ದು ಮಾಡಲು ಶುರುಮಾಡಿದಾಗ ಈ ಮನೆ ನಂದನವೇ ಆಯ್ತು. ಆಮೇಲಾಮೇಲೆ ಲಚ್ಚಮ್ಮ ಇಲ್ಲಿಗೆ ಬರುದನ್ನು ಕಡಿಮೆ ಮಾಡಿದ್ರು. ನಂಗೆ ಸಹಾಯಕ್ಕೆ ಅತ್ತೆ ಇದ್ರಲ್ಲ, ನಂಗೂ ತೊಂದ್ರೆ ಆಗ್ಲಿಲ್ಲ. ನಿಜವಾಗಲೂ ನೆಮ್ಮದಿ ಅನ್ನುದನ್ನು ನಮ್ಮನೆಗೆ ತಂದವಳು ಈ ನೇಹಾ. ಇವಳು ನಿನ್ನ ತಂಗಿ, ಶಿಶಿರಾ. ಆದ್ರೂ ನೀವು ಒಬ್ರ ಹಾಗೆ ಇನ್ನೊಬ್ರಿಲ್ಲ. ಮೊದಲಿಂದಲೂ ನೀವಿಬ್ರೂ ಬೇರೆ ಬೇರೆ ಸ್ವಭಾವದವ್ರೇ. ನಮ್ಮೆಲ್ಲರ ಜೀವನಕ್ಕೆ ಬೆಳಕಾಗಿ ಬಂದವರು ನೀವಿಬ್ರು ಮಕ್ಳೇ. ಎಂದಿಗೂ ಸುಖವಾಗಿರಿ....
*****
ನಳಿನಿ ಆಂಟಿ ಮಾತು ಮುಗಿಸಿದಾಗ ನಮ್ಮಿಬ್ಬರ ಕಣ್ಣುಗಳು ಗೊಂದಲಮಯವಾಗಿಯೇ ಇದ್ದವು. ನನ್ನೊಳಗೆ ನೂರಾರು ಪ್ರಶ್ನೆಗಳು. ಇಷ್ಟು ಹತ್ರ ಇದ್ದ ನಾವುಗಳು ಈ ಊರು ಬಿಟ್ಟು ಹೋದದ್ದು ಯಾಕೆ? ಯಾವಾಗ? ಮತ್ತೊಮ್ಮೆ ಇದೇ ಊರಿಗೆ ಬಂದದ್ದು ಯಾಕೆ? ಲಚ್ಚಮ್ಮ ಈಗೆಲ್ಲಿದ್ದಾರೆ? ಅಮ್ಮ ಯಾಕೆ ಸದಾ ಸಿಡುಕ್ತಾರೆ? ಅದ್ರ ಹಿನ್ನೆಲೆ ಏನು? ಸಿನೆಮಾಗಳಲ್ಲಿ ಆಗುವ ಹಾಗೆ ಧಡಕ್ಕನೆ ಎದ್ದು ಒಬ್ಬರನ್ನೊಬ್ಬರು ತಬ್ಬಿಕೊಳ್ಳಬೇಕು ಅಂತ ನೇಹಾಳಿಗಾಗಲೀ ನನಗಾಗಲೀ ಅನ್ನಿಸಲೇ ಇಲ್ಲ. ಸುಮ್ಮನೇ ಒಬ್ಬರನ್ನೊಬ್ಬರು ನೋಡುತ್ತಾ ಕೂತಿದ್ದೆವು.

ಆಂಟಿಯೇ ನಮ್ಮನ್ನೆಬ್ಬಿಸಿದರು. ಆಗಲೇ ಸುಮುಖ್ ಅಂಕಲ್ ಗೇಟಿನೊಳಗೆ ಬಂದವರು ನಮ್ಮನ್ನು ಜಾಜಿ ಮಂಟಪದಲ್ಲಿ ನೋಡಿ ಅಲ್ಲಿಗೇ ಬಂದ್ರು. ‘ನಮ್ಮ ಜಿಂಕೆಮರಿಗಳು ಹೇಗಿದಾವೆ?’ ಎನ್ನತ್ತಾ ನಮ್ಮಿಬ್ಬರ ಕಡೆ ಮಿಂಚು ನೋಟ ಹರಿಸಿದರು. ಅವರು ಯಾವಾಗಲೂ ಹೇಳುತ್ತಿದ್ದ ಆ ‘ಜಿಂಕೆಮರಿಗಳು’ ಪದಕ್ಕೆ ಇವತ್ತು ವಿಶೇಷ ಅರ್ಥ ಕಂಡಿತು ನಮಗಿಬ್ಬರಿಗೂ. ಅವರ ಕಣ್ಣ ಮಿಂಚು ನಮ್ಮೊಳಗೆ ಹರಿಯಿತು. ಅಚಾನಕ್ ವಾಚಿನತ್ತ ನೋಡಿ ಗಾಬರಿಯಿಂದ ಮೆಟ್ಟಿಬಿದ್ದೆ.