ಎಷ್ಟೋ ಹೊತ್ತಿನ ನಂತ್ರ ಸುಮುಖ್ ಮಿಂಚಿನ ಹಾಗೆ ನಕ್ಕರು. ಹುಬ್ಬು ಹಾರಿಸಿ ಸಿಳ್ಳೆ ಹಾಕಿದರು.
‘ಏನು? ಇಷ್ಟು ಖುಷಿಯಾಗುವಂಥಾದ್ದು ಏನಾಯ್ತೀಗ?’
‘ಅಮ್ಮ ಹೇಗೂ ಇನ್ನು ಒಂದು ವರ್ಷ ಇಲ್ಲಿಗೆ ಬರೋದಿಲ್ಲ...’
‘ಅದ್ಕೇ...?!’
‘ಅದ್ಕೇ, ಹರಿಣಿ ಇಲ್ಲೇ ಇರ್ಲಿ...’ ಈಗ ಮಿಂಚು ನನ್ನ ಕಣ್ಣಲ್ಲಿ, ಮನದಲ್ಲಿ. ‘ನಾನೂ ಇದನ್ನೇ ನಿರ್ಧರಿಸಿದ್ದೆ’ ಎಂದೆ.
‘ಅಷ್ಟೇ ಅಲ್ಲ ಮಾರಾಯ್ತಿ. ಅವಳಿಲ್ಲೇ ಇದ್ದುಕೊಂಡು ಮಗು ಹೆರಲಿ. ಆಮೇಲೆ... ಅವಳಿಗೆ ಮಗು ಬೇಡವಾಗಿದ್ರೆ...’
‘...ನಮಗಿರಲಿ...’
‘ಹೇಗೂ ಅವ್ಳು ನಿನ್ನ ಪ್ರಾಣಸ್ನೇಹಿತೆ. ಸಮಯ ನೋಡಿ ಹೇಳಿದನ್ನು ಅವಳಿಗೆ. ನಮಗೇನು? ಅಮ್ಮ ಮತ್ತೆ ಇಲ್ಲಿ ಬರುವ ಹೊತ್ತಿಗೆ ಒಂದು ಮಗು ಇದ್ರೆ ಖುಷಿಯಾಗ್ತಾಳೆ. ನಿನ್ನ ಮೇಲೆ ರೇಗಾಡುದೂ ನಿಲ್ತದೆ. ಆಗ್ದಾ?’
‘ಹಾಗಲ್ಲ ಸುಮುಖ್, ಇದೆಲ್ಲ ನಾವು ಅಂದುಕೊಳ್ಳುವಷ್ಟು ಸರಳ ಅಲ್ಲ. ಯಾವುದಕ್ಕೂ ನಾನು ಹರಿಣಿ ಹತ್ರ ಮಾತಾಡ್ತೇನೆ. ನೋಡುವಾ. ನೀವು ಹೇಳಿದ ವಿಚಾರ ಆಗ್ಲೇ ನನ್ನ ತಲೆಯಲ್ಲಿ ಬಂದಿತ್ತು. ನಿಮಗೆ ಹೇಳ್ಲಿಲ್ಲ, ನೀವೇನು ಅಂದ್ಕೊಳ್ತೀರೋಂತ....’
‘ನೋಡಿದ್ಯಾ? ನಮ್ಮಿಬ್ರ ಯೋಚನೆಯೂ ಒಂದೇ ಅಂತಾಯ್ತು. ಚಿಂತಿಸ್ಬೇಡ, ಆಯ್ತಾ? ಎಲ್ಲ ಸರಿಯಾಗ್ತದೆ. ಎಲ್ಲ ಸುಸೂತ್ರ ಆಗ್ತದೆ. ಹಾಗಂತ ನನ್ ಮನಸ್ಸು ಹೇಳ್ತಾ ಉಂಟು. ಈಗ ನಾನು ಒಂದು ಸಣ್ಣ ನಿದ್ದೆ ಮಾಡ್ಬಹುದಾ...’
‘ಮಾಡಿ ಮಾರಾಯ್ರೆ. ಸಣ್ಣದ್ಯಾಕೆ, ದೊಡ್ಡ ನಿದ್ದೆಯೇ ಮಾಡಿ. ಸಂಜೆ ಟೀ ಮಾಡಿ ಎಬ್ಬಿಸ್ತೇನೆ. ಮಲಗಿ.’
ಹರಿಣಿ ಹೇಳಿದ ಪ್ರಕಾರ ಅವಳಿಗೀಗ ಎರಡು ತಿಂಗಳಷ್ಟೇ. ಆಗಲೇ ಎಲ್ಲ ನಿರ್ಧಾರ ಮಾಡಿ ಬಂದಿದ್ದಾಳೆ. ಇನ್ನು ಆರೇಳು ತಿಂಗಳು ಹೆರಿಗೆಗೆ, ಮತ್ತೆ ಮೂರ್ನಾಲ್ಕು ತಿಂಗಳು ಬಾಣಂತನ. ಅಂತೂ ಅತ್ತೆ ಎಲ್ಲ ಮಕ್ಕಳ ಮನೆ ಟೂರ್ ಮುಗಿಸಿ ಬರುವ ಹೊತ್ತಿಗೆ ಮನೆಗೊಂದು ಪುಟ್ಟ ಕಂದಮ್ಮ ಬಂದಿರ್ತದೆ. ಆದ್ರೆ... ಹರಿಣಿಗೆ ಇದನ್ನು ಹೇಳುದು ಹೇಗೆ? ಹೆತ್ತ ತಾಯಿಯ ಹತ್ರ ನಿನ್ನ ಮಗುವನ್ನು ನನಗೆ ಕೊಡು ಅಂತ ಕೇಳುದು ಹೇಗೆ? ಇನ್ನೂ ಸಮಯ ಉಂಟಲ್ಲ. ನೋಡಿದ್ರಾಯ್ತು... ಲೆಕ್ಕಾಚಾರ ಹಾಕ್ತಿದ್ದೆ. ಅದೇ ಹೊತ್ತಿಗೆ ತನ್ನ ನಿದ್ದೆ ಮುಗಿಸಿ ಹರಿಣಿ ನಡುಮನೆಗೆ, ಊಟದ ಟೇಬಲ್ ಹತ್ರ ಬಂದು ನಿಂತಳು, ಏನೋ ಹೇಳುವವಳ ಹಾಗೆ.
‘ಕಾಫಿ ಮಾಡ್ಲಾ ಟೀ ಆದೀತಾ?’ ಕೇಳಿದೆ.
‘ಯಾವುದಾದ್ರೂ ಸರಿ. ನಿನ್ನ ಸ್ವರ ಯಾಕೆ ಹಾಗುಂಟು? ಸುಮುಖ್ ಹತ್ರ ಜಗಳಾಡಿದ್ಯಾ ನನ್ನ ವಿಷ್ಯ? ನಿಮಗೆ ಕಷ್ಟ ಆಗ್ಬಹುದಲ್ವಾ? ನಾನು ನಾಳೆಯೇ ಇಲ್ಲಿಂದ ಹೋಗ್ತೇನೆ. ಯೋಚಿಸ್ಬೇಡ...’ ಬಡಬಡಾಯಿಸಿದಳು.
ಅವಳನ್ನು ಕೈ ಹಿಡಿದು ಎಳೆದು ನನ್ನ ಬದಿಯ ಕುರ್ಚಿಯಲ್ಲಿ ಕುಳ್ಳಿರಿಸಿದೆ. ‘ಹಾಗೇನೂ ಇಲ್ಲ ಮಾರಾಯ್ತೀ. ಜಗಳವೂ ಇಲ್ಲ ಏನೂ ಇಲ್ಲ. ನೀನು ಇಲ್ಲೇ ಇರೂಂತ ಅವರೂ ಹೇಳಿದ್ರು.’
‘ನಿನ್ನತ್ತೆ...?!’
‘ಅತ್ತೆ ಎಲ್ಲ ಮಕ್ಕಳ ಮನೆಗಳಿಗೆ ಟೂರ್ ಹೊರಟಿದ್ದಾರೆ. ಎಲ್ಲಾ ಕಡೆ ಸುತ್ತಾಡಿ ಇಲ್ಲಿ ಬರುವಾಗ ಒಂದು ವರ್ಷವೇ ಆಗ್ತದೆ. ಅಷ್ಟೊತ್ತಿಗೆ ನಿನ್ನ ಹೆರಿಗೆ ಆಗಿ ಮೂರ್ನಾಲ್ಕು ತಿಂಗಳೂ ಆಗಿರ್ತದೆ, ಅಲ್ವಾ? ನೀನೇನೂ ಚಿಂತೆ ಮಾಡುದೇ ಬೇಡ. ಎಲ್ಲ ಇಲ್ಲಿಯೇ ಆಗ್ಲಿ. ಇಲ್ಲೇ ಇರು ನೀನು.’
ದೀರ್ಘವಾದ ನಿಟ್ಟುಸಿರು ಬಿಟ್ಟು ಕುರ್ಚಿಯಲ್ಲಿ ಆರಾಮವಾಗಿ ಕೂತಳು ಹರಿಣಿ.
ನಾನು ಟೀ ಮಾಡಿ ತಂದು ಇವರನ್ನು ಎಬ್ಬಿಸಿದೆ. ಮೂವರೂ ಜೊತೆಯಾಗಿ ಟೀ ಹೀರುತ್ತಿರುವಾಗ ಸುಮುಖ್ ನೇರವಾಗಿ ಅವಳನ್ನೇ ನೋಡಿ, ‘ಹರಿಣಿ, ನಿಮ್ಮನ್ನು ನನ್ನ ಸ್ನೇಹಿತೆ ಅಂತಲೂ ತಿಳಿದಿದ್ದೇನೆ. ನಮ್ಮಿಬ್ಬರ ಸ್ನೇಹ ನಿಮಗೆ ಕಹಿ ಆಗಲಾರದು. ಹೊರೆ ಆಗಲಾರದು ಅಂದುಕೊಳ್ತೇನೆ. ನೀವಿಲ್ಲೇ ಇರಿ ಅಂತ ನಮ್ಮಾಸೆ. ಇಲ್ಲ ಅಂತ ಹಠಕ್ಕೆ ಬೀಳ್ಬೇಡಿ. ಮೂರು ಜೀವಗಳಿಗೆ ನೋವಾಗ್ತದೆ. ಇದಕ್ಕಿಂತ ಹೆಚ್ಚಾಗಿ, ನಿಮ್ಮ ಅಮ್ಮನ ಮನೆಗೇ ಹೋಗುವ ಹಾಗಿದ್ರೆ ನನ್ನ ಅಭ್ಯಂತರ ಇಲ್ಲ. ಯೋಚನೆ ಮಾಡಿ.’ ಅಂದರು.
ಟೀ ಲೋಟದ ಹೊಗೆ ಸುರುಳಿಯೊಳಗೆ ಏನನ್ನೋ ಹುಡುಕುತ್ತಿದ್ದಳು ಹರಿಣಿ.
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Monday, 27 December 2010
Monday, 20 December 2010
ಸುಮ್ಮನೆ ನೋಡಿದಾಗ...೦೮
ಮಧ್ಯಾಹ್ನದ ಊಟ ಮುಗಿಸಿ ಹರಿಣಿ ನಿದ್ದೆಗೆ ಜಾರಿದಳು. ತಂಗಿ ಶಂಕರಿಯ ಮನೆಯಲ್ಲಿ ಅಮ್ಮನನ್ನು ಬಿಟ್ಟು ಬಂದಿದ್ದ ಸುಮುಖ್ ಹರಿಣಿಯನ್ನು ಇಲ್ಲಿ ನೋಡಿ ಹುಬ್ಬೇರಿಸಿದ್ದರು, ಅಷ್ಟೇ. ಕುರ್ಚಿಯಲ್ಲೇ ನಡುಹಗಲಿನ ಸಿಹಿನಿದ್ದೆಗೆ ಜಾರಬೇಕೂಂತ ಅಂದಾಜು ಮಾಡ್ತಾ ಪೇಪರ್ ಹಿಡಿದವರನ್ನು ರೂಮಿಗೆ ಕರೆದೆ. ಮತ್ತೊಮ್ಮೆ ಹುಬ್ಬು ಹಾರಿಸುತ್ತಾ ಕಳ್ಳ ನಗುವಿನ ಒಟ್ಟಿಗೆ ಸಣ್ಣಗೆ ಸಿಳ್ಳೆ ಹಾಕುತ್ತಾ ಒಳಗೆ ಬಂದವರ ಬೆನ್ನಿಗೊಂದು ಗುದ್ದಿ ಹೇಳಿದೆ, ‘ಸರಸಕ್ಕೆ ಕರ್ದದ್ದೇ ಅಲ್ಲ ನಾನು. ವಿಷಯ ಗಂಭೀರವಾಗಿದೆ. ಸ್ವಲ್ಪ ಗಮನ ಇಟ್ಟು ಕೇಳಿ, ಆಯ್ತಾ?’
ನನ್ನ ಸೀರಿಯಸ್ ಸ್ವರ ಅವರ ರೋಮಿಯೋನನ್ನು ಓಡಿಸಿತ್ತು. ಮಕ್ಕಳೇ, ನಿಮ್ಮ ಮುಂದೆ ಇದೆಲ್ಲ ಹೇಳ್ಲಿಕ್ಕೆ ನಂಗೇನೂ ತೊಂದ್ರೆ ಇಲ್ಲ. ಯಾಕಂದ್ರೆ, ನಾಳೆ ನಾಳೆ ಅನ್ನುವಾಗ ನೀವೂ ಇದೇ ದಾರಿಯಲ್ಲಿ ಬರುವವರು. ಆದ್ರಿಂದ ನಂಗೇನೂ ನಾಚಿಕೆ ಇಲ್ಲ, ಇದನ್ನೆಲ್ಲ ಬಿಚ್ಚಿಡ್ಲಿಕ್ಕೆ. ಕೇಳಿ. ನನ್ನ ಸೀರಿಯಸ್ ಸ್ವರ ಕೇಳಿ, ಅವರೂ ಗಂಭೀರವಾದರು. ಹರಿಣಿ ಹಿಂದಿನ ರಾತ್ರೆಯೆಲ್ಲ ನಿರೂಪಿಸಿದ ಅವಳ ಐದು ವರ್ಷದ ಜೀವನವನ್ನು ಸುಮುಖ್ ಮುಂದೆ ಬಿಚ್ಚಿಟ್ಟೆ.
“ಚಿನ್ಮಯ್ ಕನ್ಸಲ್ಟೆನ್ಸಿಯ ಮ್ಯಾನೇಜರ್, ಹರಿಣಿಯ ಮಾವನ ಪರಿಚಯಸ್ಥ ಚಿದಾನಂದ. ಇವಳನ್ನು ಪಿ.ಎ. ಆಗಿ ನೇಮಿಸಿಕೊಂಡಿದ್ದ. ಮೊದಮೊದಲು ಎಲ್ಲವೂ ಸುಸೂತ್ರವಾಗಿಯೇ ಇತ್ತು. ಏಳೆಂಟು ತಿಂಗಳು ಕಳೆಯುವಾಗ ಆಫೀಸಿನ ಎಲ್ಲರ ಸ್ನೇಹ ಗಳಿಸಿಕೊಂಡಿದ್ದಳು. ಅಲ್ಲೇ ಇನ್ನೊಬ್ಬ ಮ್ಯಾನೇಜರ್ ವಿನ್ಯಾಸ್. ಇವಳ ಬಗ್ಗೆ ವಿಶೇಷ ಅಕ್ಕರೆ ತೋರಿಸ್ತಿದ್ದ. ಸುಮಾರು ಒಂದು ವರ್ಷದ ವರೆಗೂ ಇವಳಿಗದು ಗಮನಕ್ಕೇ ಬಂದಿರಲಿಲ್ಲ. ಒಂದು ದಿನ ಚಿದಾನಂದ್ ನೇರವಾಗಿ ಹರಿಣಿಯನ್ನು ಕರೆದು ವಿನ್ಯಾಸ್ ಅವಳನ್ನು ಇಷ್ಟ ಪಟ್ಟಿರುವುದಾಗಿ ತಿಳಿಸಿದ. ಬಾಸ್ ಬಾಯಿಂದ ಇಂಥ ಅನಿರೀಕ್ಷಿತ ಸುದ್ದಿ, ಇವಳ ದೃಢ ಮನಸ್ಸನ್ನು ಕದಡಿತು. ಸಮಯಾವಕಾಶ ಕೇಳಿ ರಜೆ ಹಾಕಿ ಊರಿಗೆ ಹೋದಳು. ಅಮ್ಮ, ಅಜ್ಜಿ, ಮಾವ, ಅತ್ತೆ- ಎಲ್ಲರ ಅಭಿಪ್ರಾಯವೂ ಒಂದೇ. ಒಂದು ವಾರ ಊರಲ್ಲಿದ್ದು, ತಲೆ ಕೆಡಿಸಿಕೊಂಡು ಮತ್ತೆ ಬೆಂಗಳೂರಿಗೆ ಬಂದಾಗ ಅಚ್ಚರಿ ಕಾದಿತ್ತು. ಅವಳು ಊರಿಗೆ ಹೋಗುವ ಮೊದಲೇ ವಿನ್ಯಾಸ್ ತನ್ನ ಮುಖಾಂತರ ಊರಿಗೆ ಪತ್ರ ಬರೆಸಿದ ವಿಷಯ ಚಿದಾನಂದ್ ತಿಳಿಸಿದರು. ಅದಕ್ಕೇ ಅವರೆಲ್ಲರೂ ಒಮ್ಮತದಲ್ಲಿದ್ದರು ಎನ್ನುವುದು ಅವಳಿಗೆ ಹೊಳೆಯಿತು. ಅರೆಮನಸ್ಸಿನಿಂದಲೇ ವಿನ್ಯಾಸ್ ಜೊತೆ ಮದುವೆಗೆ ಒಪ್ಪಿಕೊಂಡಳು.
ಒಪ್ಪಿಗೆ ಕೊಟ್ಟದ್ದೇ ಸಾಕೆನ್ನುವ ಹಾಗೆ ವಿನ್ಯಾಸ್ ಆಕೆಯನ್ನು ಓಲೈಸತೊಡಗಿದ. ಅವನ ಮೃದು ಮಾತು, ನಾಜೂಕು ನಡವಳಿಕೆ, ಪ್ರೀತಿ ಪ್ರವಾಹ, ಔಟಿಂಗ್ ಔತಣ, ರೊಮ್ಯಾಂಟಿಕ್ ರೋಮಾಂಚನ... ಎಲ್ಲದರ ಹೊನಲಲ್ಲಿ ತೇಲಿ ಮುಳುಗಿ ಕಳೆದೇ ಹೋದಳು ಸಿಡಿಗುಂಡು ಹರಿಣಿ. ಅವಳ ಕೋಪಾಟೋಪ ಎಲ್ಲವೂ ಶಾಂತಸಾಗರದಲ್ಲಿ ಲೀನ. ತನ್ನ ಹಿರಿಯರನ್ನು ಒಪ್ಪಿಸಿಯೇ ತಾನು ಮದುವೆಯಾಗುವುದು ಅಂತಲೇ ಮದುವೆಯ ಮಾತನ್ನು ಮುಂದೂಡುತ್ತಾ ಬಂದವನ ಕಣ್ಣಲ್ಲಿ ಕಣ್ಣಿಟ್ಟು ತನ್ನ ನೋಟದ ಗುರಿ ತಪ್ಪಿಸಿಕೊಂಡಳು. ಹೀಗೇ ಎರಡು ವರ್ಷಗಳೇ ಕಳೆದವು. ಇಷ್ಟಾದರೂ ಇವಳ ಅಮ್ಮ, ಅಜ್ಜಿ, ಮಾವನಾಗಲೀ ವಿನ್ಯಾಸನ ಮನೆಯವರಾಗಲೀ ಮದುವೆಯ ಬಗ್ಗೆ ಯಾವುದೇ ಮಾತೆತ್ತಲಿಲ್ಲ. ಪ್ರೇಮದಲ್ಲಿ ಈಜುತ್ತಿದ್ದವಳಿಗೆ ತಾನೆಲ್ಲಿದ್ದೇನೆನ್ನುವ ಅರಿವು ಇರಲಿಲ್ಲ. ಎತ್ತ ಸಾಗುತ್ತಿದ್ದೇನೆನ್ನುವುದು ಗಮನಕ್ಕೇ ಬರಲಿಲ್ಲ. ತನ್ನ ರೂಮ್ ಖಾಲಿಮಾಡಿ ಆತನ ಜೊತೆಯಾಗಿ ಬಾಡಿಗೆ ಮನೆಯನ್ನೂ ಮಾಡಿದ್ದಾಯ್ತು.
ಒಂದೇ ಮನೆಯಿಂದ ಒಂದೇ ಆಫೀಸಿಗೆ ಅವನ ಬೈಕಿನಲ್ಲಿ ಹೋಗಿಬರುವ ಯಾವುದೋ ಘಳಿಗೆಯಲ್ಲಿ ವಿನ್ಯಾಸ್ ತನ್ನವನು ಅನ್ನಿಸಿತ್ತು ಹರಿಣಿಗೆ. ತಾನೂ ಅವನವಳಾಗುವ ಹಂಬಲ ಚಿಮ್ಮಿತು. ಬಯಕೆಯ ಕೋಡಿ ಒಡೆಯಲು ಅಷ್ಟೇ ಸಾಕಾಗಿತ್ತು. ಇಬ್ಬರಿಗೂ ಅದೇ ಬೇಕಾಗಿತ್ತು; ಬೆರೆತರು. ಬಂಧವಿಲ್ಲದ ಬಂಧನದಲ್ಲಿ ಸೆರೆಯಾದರು. ಸಮಯ ಯಾರನ್ನೂ ಕೇಳಲಿಲ್ಲ, ಕಾಯಲಿಲ್ಲ. ಪ್ರಕೃತಿ ತನ್ನ ಕೆಲಸ ಮುರಿಯಲಿಲ್ಲ. ಮುಂಜಾಗರೂಕತೆ ಮಾಡಿಯೂ ಹರಿಣಿಯ ಲೆಕ್ಕ ನೆಲೆ ತಪ್ಪಿತ್ತು. ಅಮ್ಮನಿಗೆ ಫೋನ್ ಮಾಡಿದಳು. ‘ಹಾದಿ ತಪ್ಪಿದ ನೀನು ನನ್ನ ಮಗಳೇ ಅಲ್ಲ. ನೀನಿಲ್ಲಿಗೆ ಬಂದು ನನ್ನ ತೌರಲ್ಲಿ ನನ್ನ ಮರ್ಯಾದೆ ತೆಗೀಬೇಡ’ ಅಂದುಬಿಟ್ಟರು ಆ ಮಹಾತಾಯಿ. ಅಮ್ಮನೇ ಹಾಗಂದಮೇಲೆ ಇನ್ನು ಯಾರನ್ನೂ ನೆಚ್ಚಿಕೊಂಡು ಫಲವಿಲ್ಲ ಅನ್ನಿಸಿ ವಿನ್ಯಾಸ್ ಜೊತೆಗೇ ಮಾತೆತ್ತಿದಳು. ನಿನ್ನ ಹಿರಿಯರು ಒಪ್ಪುವ ಹೊತ್ತಿಗೆ ನಾವಿಬ್ರೂ ಅಜ್ಜ-ಅಜ್ಜಿ ಆಗಿರ್ತೀವೇನೋ. ಈಗ್ಲಾದ್ರೂ ದೇವಸ್ಥಾನದಲ್ಲಿ ಮದುವೆ ಆಗೋಣ ಅಂದಳು. ಸಾಧ್ಯವೇ ಇಲ್ಲ. ಹೀಗೇ ಮುಂದುವರಿಯೋದಕ್ಕೂ ಸಾಧ್ಯವಿಲ್ಲ. ತೆಗೆಸಿಕೋ ಅಂದುಬಿಟ್ಟ. ಚಿದಾನಂದ್ ಕೈಚೆಲ್ಲಿದ. ನಿಮ್ಮ ಸಮಸ್ಯೆಯಲ್ಲಿ ನನ್ನದೇನು ಸಾರಥ್ಯ ಅಂತ ಚಾಟಿಯೆತ್ತಿದ. ವಿನ್ಯಾಸ್ ಜೊತೆಯಾಗಿ ಇನ್ನು ಬದುಕುವುದರಲ್ಲಿ ಅರ್ಥವಿಲ್ಲ ಅಂತನ್ನಿಸಿ ಸೀದಾ ನಮ್ಮನೆಗೇ ಬಂದಿದ್ದಾಳೆ. ಈಗೇನ್ ಮಾಡೋದು ಹೇಳಿ...’’ ದೀರ್ಘ ಮೌನ ನಮ್ಮಿಬ್ಬರ ನಡುವೆ ಹಬ್ಬಿಕೊಂಡಿತು.
ನನ್ನ ಸೀರಿಯಸ್ ಸ್ವರ ಅವರ ರೋಮಿಯೋನನ್ನು ಓಡಿಸಿತ್ತು. ಮಕ್ಕಳೇ, ನಿಮ್ಮ ಮುಂದೆ ಇದೆಲ್ಲ ಹೇಳ್ಲಿಕ್ಕೆ ನಂಗೇನೂ ತೊಂದ್ರೆ ಇಲ್ಲ. ಯಾಕಂದ್ರೆ, ನಾಳೆ ನಾಳೆ ಅನ್ನುವಾಗ ನೀವೂ ಇದೇ ದಾರಿಯಲ್ಲಿ ಬರುವವರು. ಆದ್ರಿಂದ ನಂಗೇನೂ ನಾಚಿಕೆ ಇಲ್ಲ, ಇದನ್ನೆಲ್ಲ ಬಿಚ್ಚಿಡ್ಲಿಕ್ಕೆ. ಕೇಳಿ. ನನ್ನ ಸೀರಿಯಸ್ ಸ್ವರ ಕೇಳಿ, ಅವರೂ ಗಂಭೀರವಾದರು. ಹರಿಣಿ ಹಿಂದಿನ ರಾತ್ರೆಯೆಲ್ಲ ನಿರೂಪಿಸಿದ ಅವಳ ಐದು ವರ್ಷದ ಜೀವನವನ್ನು ಸುಮುಖ್ ಮುಂದೆ ಬಿಚ್ಚಿಟ್ಟೆ.
“ಚಿನ್ಮಯ್ ಕನ್ಸಲ್ಟೆನ್ಸಿಯ ಮ್ಯಾನೇಜರ್, ಹರಿಣಿಯ ಮಾವನ ಪರಿಚಯಸ್ಥ ಚಿದಾನಂದ. ಇವಳನ್ನು ಪಿ.ಎ. ಆಗಿ ನೇಮಿಸಿಕೊಂಡಿದ್ದ. ಮೊದಮೊದಲು ಎಲ್ಲವೂ ಸುಸೂತ್ರವಾಗಿಯೇ ಇತ್ತು. ಏಳೆಂಟು ತಿಂಗಳು ಕಳೆಯುವಾಗ ಆಫೀಸಿನ ಎಲ್ಲರ ಸ್ನೇಹ ಗಳಿಸಿಕೊಂಡಿದ್ದಳು. ಅಲ್ಲೇ ಇನ್ನೊಬ್ಬ ಮ್ಯಾನೇಜರ್ ವಿನ್ಯಾಸ್. ಇವಳ ಬಗ್ಗೆ ವಿಶೇಷ ಅಕ್ಕರೆ ತೋರಿಸ್ತಿದ್ದ. ಸುಮಾರು ಒಂದು ವರ್ಷದ ವರೆಗೂ ಇವಳಿಗದು ಗಮನಕ್ಕೇ ಬಂದಿರಲಿಲ್ಲ. ಒಂದು ದಿನ ಚಿದಾನಂದ್ ನೇರವಾಗಿ ಹರಿಣಿಯನ್ನು ಕರೆದು ವಿನ್ಯಾಸ್ ಅವಳನ್ನು ಇಷ್ಟ ಪಟ್ಟಿರುವುದಾಗಿ ತಿಳಿಸಿದ. ಬಾಸ್ ಬಾಯಿಂದ ಇಂಥ ಅನಿರೀಕ್ಷಿತ ಸುದ್ದಿ, ಇವಳ ದೃಢ ಮನಸ್ಸನ್ನು ಕದಡಿತು. ಸಮಯಾವಕಾಶ ಕೇಳಿ ರಜೆ ಹಾಕಿ ಊರಿಗೆ ಹೋದಳು. ಅಮ್ಮ, ಅಜ್ಜಿ, ಮಾವ, ಅತ್ತೆ- ಎಲ್ಲರ ಅಭಿಪ್ರಾಯವೂ ಒಂದೇ. ಒಂದು ವಾರ ಊರಲ್ಲಿದ್ದು, ತಲೆ ಕೆಡಿಸಿಕೊಂಡು ಮತ್ತೆ ಬೆಂಗಳೂರಿಗೆ ಬಂದಾಗ ಅಚ್ಚರಿ ಕಾದಿತ್ತು. ಅವಳು ಊರಿಗೆ ಹೋಗುವ ಮೊದಲೇ ವಿನ್ಯಾಸ್ ತನ್ನ ಮುಖಾಂತರ ಊರಿಗೆ ಪತ್ರ ಬರೆಸಿದ ವಿಷಯ ಚಿದಾನಂದ್ ತಿಳಿಸಿದರು. ಅದಕ್ಕೇ ಅವರೆಲ್ಲರೂ ಒಮ್ಮತದಲ್ಲಿದ್ದರು ಎನ್ನುವುದು ಅವಳಿಗೆ ಹೊಳೆಯಿತು. ಅರೆಮನಸ್ಸಿನಿಂದಲೇ ವಿನ್ಯಾಸ್ ಜೊತೆ ಮದುವೆಗೆ ಒಪ್ಪಿಕೊಂಡಳು.
ಒಪ್ಪಿಗೆ ಕೊಟ್ಟದ್ದೇ ಸಾಕೆನ್ನುವ ಹಾಗೆ ವಿನ್ಯಾಸ್ ಆಕೆಯನ್ನು ಓಲೈಸತೊಡಗಿದ. ಅವನ ಮೃದು ಮಾತು, ನಾಜೂಕು ನಡವಳಿಕೆ, ಪ್ರೀತಿ ಪ್ರವಾಹ, ಔಟಿಂಗ್ ಔತಣ, ರೊಮ್ಯಾಂಟಿಕ್ ರೋಮಾಂಚನ... ಎಲ್ಲದರ ಹೊನಲಲ್ಲಿ ತೇಲಿ ಮುಳುಗಿ ಕಳೆದೇ ಹೋದಳು ಸಿಡಿಗುಂಡು ಹರಿಣಿ. ಅವಳ ಕೋಪಾಟೋಪ ಎಲ್ಲವೂ ಶಾಂತಸಾಗರದಲ್ಲಿ ಲೀನ. ತನ್ನ ಹಿರಿಯರನ್ನು ಒಪ್ಪಿಸಿಯೇ ತಾನು ಮದುವೆಯಾಗುವುದು ಅಂತಲೇ ಮದುವೆಯ ಮಾತನ್ನು ಮುಂದೂಡುತ್ತಾ ಬಂದವನ ಕಣ್ಣಲ್ಲಿ ಕಣ್ಣಿಟ್ಟು ತನ್ನ ನೋಟದ ಗುರಿ ತಪ್ಪಿಸಿಕೊಂಡಳು. ಹೀಗೇ ಎರಡು ವರ್ಷಗಳೇ ಕಳೆದವು. ಇಷ್ಟಾದರೂ ಇವಳ ಅಮ್ಮ, ಅಜ್ಜಿ, ಮಾವನಾಗಲೀ ವಿನ್ಯಾಸನ ಮನೆಯವರಾಗಲೀ ಮದುವೆಯ ಬಗ್ಗೆ ಯಾವುದೇ ಮಾತೆತ್ತಲಿಲ್ಲ. ಪ್ರೇಮದಲ್ಲಿ ಈಜುತ್ತಿದ್ದವಳಿಗೆ ತಾನೆಲ್ಲಿದ್ದೇನೆನ್ನುವ ಅರಿವು ಇರಲಿಲ್ಲ. ಎತ್ತ ಸಾಗುತ್ತಿದ್ದೇನೆನ್ನುವುದು ಗಮನಕ್ಕೇ ಬರಲಿಲ್ಲ. ತನ್ನ ರೂಮ್ ಖಾಲಿಮಾಡಿ ಆತನ ಜೊತೆಯಾಗಿ ಬಾಡಿಗೆ ಮನೆಯನ್ನೂ ಮಾಡಿದ್ದಾಯ್ತು.
ಒಂದೇ ಮನೆಯಿಂದ ಒಂದೇ ಆಫೀಸಿಗೆ ಅವನ ಬೈಕಿನಲ್ಲಿ ಹೋಗಿಬರುವ ಯಾವುದೋ ಘಳಿಗೆಯಲ್ಲಿ ವಿನ್ಯಾಸ್ ತನ್ನವನು ಅನ್ನಿಸಿತ್ತು ಹರಿಣಿಗೆ. ತಾನೂ ಅವನವಳಾಗುವ ಹಂಬಲ ಚಿಮ್ಮಿತು. ಬಯಕೆಯ ಕೋಡಿ ಒಡೆಯಲು ಅಷ್ಟೇ ಸಾಕಾಗಿತ್ತು. ಇಬ್ಬರಿಗೂ ಅದೇ ಬೇಕಾಗಿತ್ತು; ಬೆರೆತರು. ಬಂಧವಿಲ್ಲದ ಬಂಧನದಲ್ಲಿ ಸೆರೆಯಾದರು. ಸಮಯ ಯಾರನ್ನೂ ಕೇಳಲಿಲ್ಲ, ಕಾಯಲಿಲ್ಲ. ಪ್ರಕೃತಿ ತನ್ನ ಕೆಲಸ ಮುರಿಯಲಿಲ್ಲ. ಮುಂಜಾಗರೂಕತೆ ಮಾಡಿಯೂ ಹರಿಣಿಯ ಲೆಕ್ಕ ನೆಲೆ ತಪ್ಪಿತ್ತು. ಅಮ್ಮನಿಗೆ ಫೋನ್ ಮಾಡಿದಳು. ‘ಹಾದಿ ತಪ್ಪಿದ ನೀನು ನನ್ನ ಮಗಳೇ ಅಲ್ಲ. ನೀನಿಲ್ಲಿಗೆ ಬಂದು ನನ್ನ ತೌರಲ್ಲಿ ನನ್ನ ಮರ್ಯಾದೆ ತೆಗೀಬೇಡ’ ಅಂದುಬಿಟ್ಟರು ಆ ಮಹಾತಾಯಿ. ಅಮ್ಮನೇ ಹಾಗಂದಮೇಲೆ ಇನ್ನು ಯಾರನ್ನೂ ನೆಚ್ಚಿಕೊಂಡು ಫಲವಿಲ್ಲ ಅನ್ನಿಸಿ ವಿನ್ಯಾಸ್ ಜೊತೆಗೇ ಮಾತೆತ್ತಿದಳು. ನಿನ್ನ ಹಿರಿಯರು ಒಪ್ಪುವ ಹೊತ್ತಿಗೆ ನಾವಿಬ್ರೂ ಅಜ್ಜ-ಅಜ್ಜಿ ಆಗಿರ್ತೀವೇನೋ. ಈಗ್ಲಾದ್ರೂ ದೇವಸ್ಥಾನದಲ್ಲಿ ಮದುವೆ ಆಗೋಣ ಅಂದಳು. ಸಾಧ್ಯವೇ ಇಲ್ಲ. ಹೀಗೇ ಮುಂದುವರಿಯೋದಕ್ಕೂ ಸಾಧ್ಯವಿಲ್ಲ. ತೆಗೆಸಿಕೋ ಅಂದುಬಿಟ್ಟ. ಚಿದಾನಂದ್ ಕೈಚೆಲ್ಲಿದ. ನಿಮ್ಮ ಸಮಸ್ಯೆಯಲ್ಲಿ ನನ್ನದೇನು ಸಾರಥ್ಯ ಅಂತ ಚಾಟಿಯೆತ್ತಿದ. ವಿನ್ಯಾಸ್ ಜೊತೆಯಾಗಿ ಇನ್ನು ಬದುಕುವುದರಲ್ಲಿ ಅರ್ಥವಿಲ್ಲ ಅಂತನ್ನಿಸಿ ಸೀದಾ ನಮ್ಮನೆಗೇ ಬಂದಿದ್ದಾಳೆ. ಈಗೇನ್ ಮಾಡೋದು ಹೇಳಿ...’’ ದೀರ್ಘ ಮೌನ ನಮ್ಮಿಬ್ಬರ ನಡುವೆ ಹಬ್ಬಿಕೊಂಡಿತು.
Labels:
ಕಥನಕಾರಣ,
ತುಂಟ-ತುಡುಗ-ತರಲೆ-ಮನ,
ನೀಳ್ಗತೆ
Subscribe to:
Posts (Atom)