ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 15 November 2010

ಸುಮ್ಮನೆ ನೋಡಿದಾಗ...೦೩

ಆಕರ್ಷಕ ಯುವಕನೊಬ್ಬ ಕುರ್ಚಿಯಲ್ಲಿ ಕೂತಿದ್ದ. ನಾನು ಒಳಗೆ ಹೆಜ್ಜೆಯಿಟ್ಟೊಡನೆಯೇ, "ಹಲೋ, ಗುಡ್ ಈವ್‍ನಿಂಗ್ ಯಂಗ್ ಲೇಡಿ" ಅಂದ. ಮಾತಿನಲ್ಲಿನ ಗಾಂಭೀರ್ಯಕ್ಕೆ ಪದಗಳ ನಾಜೂಕಿಗೆ ತಬ್ಬಿಬ್ಬಾದ ನಾನು ಅವನಿಗುತ್ತರಿಸದೆಯೇ ತಲೆ ತಗ್ಗಿಸಿಕೊಂಡು ನೇರವಾಗಿ ನನ್ನ ಕೋಣೆಗೆ ಸಾಗಿದೆ. ಪುಸ್ತಕಗಳನ್ನು ಮೇಜಿನ ಮೇಲಿಟ್ಟು ಬಚ್ಚಲುಮನೆಗೆ ಹೋಗಿ ಮುಖ-ಕೈಕಾಲು ತೊಳೆದುಕೊಂಡು ಅಡುಗೆಮನೆಗೆ ಬರುವಷ್ಟರಲ್ಲಿ ಅವನೂ ಊಟದ ಮೇಜಿನ ಮುಂದಿದ್ದ. ಅಮ್ಮ ಅಡುಗೆಕಟ್ಟೆಯ ಬದಿಯಲ್ಲಿದ್ದಳು. ಒಲೆಯಲ್ಲಿ ಸಾರು ಬಿಸಿಯಾಗುತ್ತಿತ್ತು. ಯಾರಿವನು?

"ಏನಾ, ಗೊತ್ತಾಗಲಿಲ್ವಾ?" ಅವನೇ ಕೇಳಿದ. ಇಲ್ಲವೆನ್ನುವಂತೆ ತಲೆಯಾಡಿಸಿದೆ.

ಅಮ್ಮನೇ ಹೇಳಿದಳು, "ನೀನು ಚಿಕ್ಕವಳಿದ್ದಾಗ ನಾವು ‘ಅಕಳಂಕ’ ಮನೆಯ ಬದಿಯಲ್ಲಿ ಬಾಡಿಗೆಗಿದ್ದೆವಲ್ಲ. ಆಗೆಲ್ಲ ನಿನ್ನನ್ನು ಎತ್ತಿ ಆಡಿಸಿ ಶಾಲೆಗೆ ಹೋಗುತ್ತಿದ್ದ ಆಚೆ ಮನೆಯ ಹರ್ಷ. ಈಗ ಬಾಂಬೆಯಲ್ಲಿ ಕೆಲಸದಲ್ಲಿದ್ದಾನೆ. ನಾವು ಮತ್ತೆ ಇದೇ ಊರಿಗೆ ಬಂದದ್ದು ಗೊತ್ತಾಯ್ತಂತೆ. ನಮ್ಮನ್ನು, ಅದ್ರಲ್ಲೂ ನಿನ್ನನ್ನು ನೋಡ್ಲಿಕ್ಕೇಂತಲೇ ಬಂದಿದ್ದಾನೆ. ನೀನು ಏನೂ ಮಾತಾಡದೇ ಒಳಗೆ ಓಡಿ ಬರುದು ಸರಿಯಾ? ಅತಿಥಿಗೆ ಮರ್ಯಾದೆ ತೋರಿಸ್ಲಿಕ್ಕೂ ಗೊತ್ತಿಲ್ವಾ ನಿಂಗೆ? ಅವನಿಗೆ..."

ಅಮ್ಮನ ಮಾತುಗಳು ಮುಗಿದಿರಲೇ ಇಲ್ಲ, ಹರ್ಷ ನಮ್ಮ ಬದಿಗೇ ಬಂದು ನಿಂತ. ನನ್ನ ತಲೆ ನೇವರಿಸುತ್ತ, "ನನ್ನ ಶಾಲಾ ದಿನಗಳ ಬಣ್ಣದ ಗೊಂಬೆ ಈಗ ಎಷ್ಟು ದೊಡ್ಡೋಳಾಗಿದಾಳೆ ಅಂತ ನೋಡ್ಲಿಕ್ಕೆ ಬಂದದ್ದು ಹೌದು. ಜೊತೆಗೆ ಅವಳ ನಾಚಿಗೆ, ದಾಕ್ಷಿಣ್ಯದ ರೀತಿಯೂ ನೋಡಿದ್ದಾಯ್ತು. ಚಿಕ್ಕತ್ತೆ, ಮಗಳನ್ನು ಚಂದ ಮಾಡಿ ಬೆಳ್ಸಿದ್ದೀರಿ. ಬಾಂಬೆಯ ಬಿಂದಾಸ್ ಹುಡುಗಿಯರನ್ನು ನೋಡೀ ನೋಡೀ ಬೇಜಾರಾಗಿತ್ತು. ಇವಳನ್ನು ನೋಡಿ ಕಣ್ಣು ಮನಸ್ಸು ತಂಪಾಯ್ತು. ಸುಖವಾಗಿರು ಗೊಂಬೇ..." ಹರಸುವಂತೆ ಮತ್ತೆ ತಲೆ ನೇವರಿಸಿದ.

ಹರ್ಷನ ನೆನಪೇ ಇಲ್ಲದ ನನಗೆ ಈ ನಡವಳಿಕೆ ಮತ್ತಷ್ಟು ಮುದುಡುವಂತೆ ಮಾಡಿತು. ಆದರೂ ಆತ ತಂಗಿಯಂತೆ ನನ್ನ ಆದರಿಸಿದ್ದು ಖುಷಿಯೂ ಕೊಟ್ಟಿತು. ಇಂಥ ಸುಂದರ ಸ್ಫುರದ್ರೂಪಿ ಅಣ್ಣನಿಗಾಗಿ ನಾನೆಷ್ಟು ಹಂಬಲಿಸಿಲ್ಲ? ಸಿನಿಮಾಗಳಲ್ಲಿನ ರಾಜ್‍ಕುಮಾರ್, ವಿಷ್ಣುವರ್ಧನ್ ಅವರಂತೆ ಅಣ್ಣಂದಿರು ಇರಬೇಕು ಎನ್ನುತ್ತಿದ್ದ ನನ್ನನ್ನು ನೇಹಾ ಮತ್ತು ಸುಜಾ ಛೇಡಿಸುತ್ತಿದ್ದರು. ಇದೀಗ ಸಿನೆಮಾ ಹೀರೋನಂತಿರುವ ಅಣ್ಣನೊಬ್ಬ ಬಾಂಬೆಯಿಂದ ನನಗಾಗಿ ಬಂದಿಳಿದಿದ್ದಾನೆ. ಇಂದು ಸಂತಸದಿಂದ ನಿದ್ದೆಯೇ ಬಾರದೆಂದು ಅನ್ನಿಸತೊಡಗಿತು. ನೇಹಾಳೊಂದಿಗೆ ಹೇಳಿಕೊಳ್ಳಬೇಕು, ಆದರೆ ಬೆಳಗಿನವರೆಗೆ ಕಾಯಬೇಕಲ್ಲ. ಅಥವಾ... ಇದನ್ನೊಂದು ಕಥೆಯಾಗಿಸಿದರೆ? ಹ್ಮ್! ಅದೇ ಸರಿ. ಇವತ್ತೇ ಕಥೆಯಾಗಿಸುತ್ತೇನೆ. ಹೇಗೂ ಕಾಲೇಜಿನ ಮನೆಗೆಲಸವೇನೂ ಇಲ್ಲ.

ಹರ್ಷನ ಜೊತೆಗೆ ಹರಟುತ್ತಾ ಊಟ ಮುಗಿಸಿ ಯಾವತ್ತಿನ ಹಾಗೆ ಅಡುಗೆಮನೆ ಎಲ್ಲ ಸ್ವಚ್ಛಗೊಳಿಸಿ, ಪಾತ್ರೆ ತೊಳೆದಿಟ್ಟೆ. ತನ್ನ ಮನೆಗೆ ಹೊರಟ ಹರ್ಷನನ್ನು ಗೇಟಿನತನಕ ಕಳಿಸಿಕೊಟ್ಟೆವು. ಅಮ್ಮ ಮಲಗಿದ ಮೇಲೆ ನನ್ನ ಕೋಣೆಯಲ್ಲಿ ತಡರಾತ್ರೆಯವರೆಗೂ ದೀಪವುರಿಯಿತು....

Monday, 8 November 2010

ಸುಮ್ಮನೆ ನೋಡಿದಾಗ...೦೨

ಕಾಲೇಜಿಗೆ ಸಾಗಿದ್ದೇನೋ ಸರಿ, ನಡೆದ ಹಾದಿಯ ನೆನಪೇ ಇಲ್ಲ. ಕಾಲೇಜಲ್ಲೂ ಪಾಠಗಳತ್ತ ಗಮನವಿಲ್ಲ. ಗೆಳತಿ ನೇಹಾ ಏನೇನೆಲ್ಲ ಕಸರತ್ತು ಹೂಡಿದರೂ ನನ್ನ ಅನ್ಯಮನಸ್ಕತೆ ದೂರಾಗಲಿಲ್ಲ. ಸಂಜೆಯ ಹೊತ್ತಿಗೆ ಮನೆಗೆ ಹೋಗುವ ಮೂಡ್ ಇರಲೇ ಇಲ್ಲದ ನನ್ನನ್ನು ತನ್ನ ಮನೆಗೆ ಆಹ್ವಾನಿಸಿದಳು ನೇಹಾ. ನಮ್ಮಮ್ಮ ಅವಳಮ್ಮನ ಗೆಳತಿಯಾದ್ದರಿಂದ ಅದೊಂದು ಮನೆಗೆ ಹೋಗಲು ನನಗೆ ಅಮ್ಮನ ಅನುಮತಿಯಿತ್ತಷ್ಟೇ. ಹೋದೆ. ನಳಿನಿ ಆಂಟಿ ಪ್ರೀತಿಯಿಂದ ಬರಮಾಡಿಕೊಂಡರು. ಅವರು ಕೊಟ್ಟ ಟೀ ಹೀರಿ ಬಿಸ್ಕೆಟ್ ತಿಂದು ನಾವಿಬ್ಬರೂ ಅಂಗಳದ ಮೂಲೆಯ ಜಾಜಿಯ ಚಪ್ಪರದಡಿಗೆ ತಲುಪಿದ್ದಷ್ಟೇ ನೆಪವಾಗಿ ಜಾಜಿಬಳ್ಳಿಯ ಎಲೆಗಳೆಲ್ಲ ನನ್ನ ಬೆರಳುಗಳಲ್ಲಿ ಸೇರಿಕೊಳ್ಳತೊಡಗಿದವು. ಒಂದೊಂದಾಗಿ ಬಿದ್ದ ಸಣ್ಣೆಲೆಗಳನ್ನು ಅಲ್ಲೇ ಅಂಟಿಸಿಡಲು ಮಳೆಯಿಲ್ಲದೆ ಹನಿಗಳು ಇಳಿದು ಬಂದವು. ನೇಹಾ ಜಾಜಿ ಮೊಗ್ಗು ಕೊಯ್ಯುವ ನೆಪದಲ್ಲಿ ಯಾರಾದರೂ ಕಂಡಾರೆನ್ನುವ ಅವಲೋಕನ ಮುಗಿಸಿ ಚಪ್ಪರದ ಇನ್ನೊಂದು ಬದಿಗಿದ್ದ ಬೆಂಚಿನಲ್ಲಿ ನನ್ನನ್ನು ಕುಳ್ಳಿರಿಸಿ ತಾನೂ ಕೂತಳು. ಕರ್ಚೀಫಿಗೇಕೆ ಒದ್ದೆಯಾಗುವ ಶಿಕ್ಷೆಯೆಂದು ಹನಿಗಳು ನೆಲಸೇರುತ್ತಿದ್ದವು. ಸಣ್ಣೆಲೆಗಳು ಅವನ್ನೆಲ್ಲ ಮುತ್ತಿಡುತ್ತಿದ್ದವು.

ನಮ್ಮನೆಯ ಕಥೆ ನೇಹಾಳಿಗೆ ಹೊಸದಲ್ಲ. ನೆಲಕ್ಕೆ ನನ್ನ ಕಣ್ಣೀರೂ ಹೊಸದಲ್ಲ. ಅಮ್ಮನ ಹಾರಾಟ, ರೇಗಾಟ ಕಂಡು ಕೇಳಿದವಳು ನನ್ನ ಒಳಗಿನ ತುಮುಲ ಒಮ್ಮೆ ಹೊರಬಿದ್ದರೆ ಸರಿಯಾಗುತ್ತೇನೆಂದು ಅರಿತವಳು ಸುಮ್ಮನಿದ್ದಳು, ನನ್ನ ಕೈಯನ್ನು ತನ್ನ ಕೈಯಲ್ಲಿ ಬೆಸೆದುಕೊಂಡು. ಅವಳೊಳಗಿನ ಬೆಚ್ಚನೆಯ ಸಾಂತ್ವನ ನನ್ನೊಳಗೆ ಹರಿದು ಬಂದದ್ದನ್ನು ಕಂಡ ಹನಿಗಳು ಹಿಂಜರಿದವು. ಸಣ್ಣೆಲೆಗಳು ಗಾಳಿಯಲ್ಲಿ ಆಡ್ಡಾಡಲು ಜಾರಿಕೊಂಡವು.

ನಿನ್ನೆ ರಾತ್ರೆ ಎಲ್ಲದರಂತಿರಲಿಲ್ಲ ಎನ್ನುವುದನ್ನು ನೇಹಾಳಿಗೆ ಹೇಳಲೇಬೇಕಿತ್ತು. ಪದಗಳಿಗಾಗಿ ಹುಡುಕುತ್ತಿದ್ದೆ. ಸಣ್ಣೆಲೆಯೊಂದು ಹಾರಿ ಬಂದು ಮಡಿಲಲ್ಲಿ ಇಳಿಯಿತು. ಒಂದು ತೊಟ್ಟಿನಲ್ಲಿ ಮೂಡಿದ ಪುಟ್ಟಪುಟ್ಟ ಏಳು ಬಿಲ್ಲೆಗಳಲ್ಲಿ ಒಂದಾಗಿದ್ದಿರಬಹುದಾದ ಪುಟಾಣಿ ಹಸಿರು. ನೇವರಿಸಿದೆ. ನಿನ್ನೆಯ ನೆನಪು ನಿಚ್ಚಳವಾಯ್ತು. ಇದೇ ರೀತಿಯ ಸಣ್ಣೆಲೆಗಳ ಗಿಡವೊಂದನ್ನು ಹರ್ಬೇರಿಯಂಗಾಗಿ ದಿನಪತ್ರಿಕೆಯೊಳಗೆ ಬಿಡಿಸಿಟ್ಟದ್ದನ್ನು ತೆರೆದು ನೋಡಿ ಪತ್ರಿಕೆ ಬದಲಿಸುತ್ತಿದ್ದೆ. ಇದೇ ವರ್ಷದ ಕೊನೆಗೆ ಇಪ್ಪತ್ತಾದರೂ ಹರ್ಬೇರಿಯಂ ತಯಾರಾಗಬೇಕಿತ್ತು. ಒಮ್ಮೆ ಇಡುವಾಗ ಒಂದೇ ಜಾತಿಯ ಗಿಡದ ಐದಾರು ಗೆಲ್ಲುಗಳನ್ನು ಹರ್ಬೇರಿಯಂ ಮಾಡುವುದು ನನ್ನ ಕ್ರಮ. ಇದೂ ಹಾಗೇ. ತನ್ನ ಹಚ್ಚನೆಯನ್ನು ಹದವಾಗಿ ಬಾಡಿಸಿಕೊಂಡು ಮಸುಕು ಹಸಿರಾಗುತ್ತಿದ್ದ ಎಲೆಗಳನ್ನು ನೇವರಿಸಿ ಮಡಿಕೆಗಳನ್ನು ಬಿಡಿಸಿ ಹೂವಿನ ಎಸಳುಗಳ ಮುದುರನ್ನು ಅರಳಿಸಿ ನೇವರಿಸಿ ಅವುಗಳನ್ನು ನನ್ನೊಳಗೆ ಆವಿರ್ಭವಿಸುತ್ತಿದ್ದೆ.

"ಇಷ್ಟೆಲ್ಲ ಒಣಪುರಲು ಯಾರಿಗೆ?" ಅಮ್ಮನ ಪ್ರಶ್ನೆ, ಎಂದಿನಂತೆ. ಗಂಟೆ ಹನ್ನೆರಡೂವರೆ. ಮಾಮೂಲು ಬಾಣಗಳು ಬರುತ್ತವೆಂದು ಮನದ ಸುತ್ತ ಗುರಾಣಿ ಕಟ್ಟಿಕೊಳ್ಳುತ್ತಿದ್ದೆ. ಉತ್ತರಿಸದೇ ಇರಲಾಗದಲ್ಲ.
"ನೇಹಾ, ಅಖೀ, ಸುಜಾ, ರಾಜೀವ್, ಶೇಖರ್, ಇವ್ರೆಲ್ಲ ಬೇಕೂಂತ ಹೇಳಿದ್ದಾರೆ. ಇದು ನಂಗೆ ಮಾತ್ರ ಸಿಕ್ಕಿದ್ದು. ಪೇಟೆಯ ಅವ್ರಿಗೆಲ್ಲ ಗುಡ್ಡೆಯ ಗಿಡ ಸಿಗುದಿಲ್ಲ. ಅದ್ಕೇ..."
"ಅವ್ರಿಗೆಲ್ಲ ನೀನ್ಯಾಕೆ ಮಾಡ್ಕೊಡ್ಬೇಕು? ನಿಂಗೇನು ಸಂಬಂಧ ಅವ್ರ ಹತ್ರ? ನೇಹಾಗೇನಂತೆ ಧಾಡಿ ಮಾಡ್ಕೊಳ್ಳಿಕ್ಕೆ?"
"ಅವ್ಳು ಬೇರೆ ಗಿಡದ ಹರ್ಬೇರಿಯಂ ಮಾಡ್ತಿದ್ದಾಳೆ, ನಮ್ಗೆಲ್ರಿಗೂ..."
"ನಿಮ್ಮಿಬ್ರಿಗೂ ಬೇರೆ ಕೆಲ್ಸ ಇಲ್ವಾ? ಹೇಳಿದ್ದು ಅರ್ಥ ಆಗದ ಕತ್ತೆಗಳು ನೀವು. ಬೀದಿ ನಾಯಿಗಳ ಹಾಗೆ ಹುಡುಗರ ಒಟ್ಟಿಗೆ ಸೇರಿ ಅವ್ರಿಗೆ ಬೇಕಾದ್ದನ್ನು ಮಾಡಿ ಕೊಡ್ತೀರಲ್ಲ. ಅವ್ರೇನು ಆಗ್ಬೇಕು ನಿಮಗೆ?"
"ಅಮ್ಮ...!" ಮುಂದೆ ಮಾತು ಹೊರಟಿರಲಿಲ್ಲ. ಇವಳಿಗೇ ನನ್ನ ಮೇಲೆ ನಂಬಿಕೆಯಿಲ್ಲದಿದ್ದ ಮೇಲೆ ಯಾವ ರೀತಿಯ ಉತ್ತರವೂ ಉಪಯೋಗವಿಲ್ಲ ಎನ್ನುವುದು ನನಗೀಗಾಲೇ ಅರಿವಾಗಿತ್ತು. ಸುಮ್ಮನಿದ್ದೆ.
"ಹೌದು ನಿನ್ನಮ್ಮನೇ ಹೇಳುದು. ಹುಡುಗಿ ಅಂತ ಮುದ್ದು ಮಾಡಿದೆ ನೋಡು, ಅದ್ಕೇ ಈಗ ಬೇಕಾಬಿಟ್ಟಿ ಬೆಳ್ದಿದ್ದೀ. ಯಾರ ಜೊತೆ ಹೇಗಿರ್ಬೇಕು ಅಂತ ಗೊತ್ತಿಲ್ಲ. ಹೇಳಿದ್ರೆ ಕೇಳುದಿಲ್ಲ. ಮಾನ ಮರ್ಯಾದೆ ಇಲ್ಲದ ನಿನಗೆ ಹೇಗೆ ಮದುವೆ ಮಾಡುದೋ ಗೊತ್ತಿಲ್ಲ. ಭಗವಂತಾ, ಇದನ್ನು ನೋಡ್ಲಿಕ್ಕೆ ನನ್ನನ್ನಿನ್ನೂ ಇಟ್ಟಿದ್ದೀಯಲ್ಲಪ್ಪ..." ಕಾಣದ ದೇವರಿಗೆ ಬಯ್ಯುತ್ತಾ ಬಾತ್ರೂಮಿಗೆ ನಡೆದಳು.
ಅವಳು ಹಿಂದೆ ಬರುವಾಗಲೂ ಲೈಟ್ ಇದ್ರೆ ಮತ್ತೆ ಪುರಾಣ ಸುರುವಾಗುವ ಸಂಶಯ ಇದ್ದದ್ದರಿಂದ ದೀಪ ಆರಿಸಿ ತೆಪ್ಪಗೆ ಕೂತೆ. ಅವಳು ರೂಮಿಗೆ ಹೋಗಿ ಮಲಗಿದ ನಂತ್ರ ದೀಪ ಹಾಕಿ ನನ್ನ ಕೆಲಸ ಮುಗಿಸಿ ಒಂದೂವರೆಯ ಸುಮಾರಿಗೆ ಮಲಗಿದ್ದೆ.

ಇದನ್ನೆಲ್ಲ ಕೇಳಿಸಿಕೊಂಡ ನೇಹಾ ನಿಟ್ಟುಸಿರಿಟ್ಟಳು. "ಇನ್ನೊಂದು ಆರು ತಿಂಗಳು. ಫೈನಲ್ ಬಿ.ಎಸ್ಸಿ. ಮುಗಿದ್ರೆ ಮತ್ತೆ ಮನೆಯಲ್ಲಿ ಇರುದಿಲ್ಲ ನೇಹಾ. ನನ್ನ ಕಾಲ ಮೇಲೆ ನಿಂತು ಕೆಲ್ಸ ಸೇರಿ ಒಬ್ಳೇ ಆರಾಮಾಗಿರ್ತೇನೆ ಹೊರ್ತು ಅಮ್ಮನ ಜೊತೆ ಮಾತ್ರ ಇರುದಿಲ್ಲ ಮಾರಾಯ್ತಿ. ಸಾಧ್ಯವೇ ಇಲ್ಲ."
"ಈಗಲಾದ್ರೂ ಯಾಕಲ್ಲಿರ್ತೀ? ನಮ್ಮನೆಗೆ ಬಾ. ನಮ್ಮಮ್ಮ, ಪಪ್ಪ ಎಷ್ಟು ಖುಷಿ ಪಡ್ತಾರೆ ಗೊತ್ತುಂಟಾ? ನಂಗಂತೂ ಸ್ವರ್ಗವೇ ಬಿಡು. ಬಂದ್ಬಿಡು, ಪ್ಲೀಸ್..."
"ಇಲ್ಲಮ್ಮ. ಬರುದಿಲ್ಲ. ಇಪ್ಪತ್ತು ವರ್ಷಗಳೇ ಮುಗಿದಾಯ್ತು. ಇನ್ನಾರು ತಿಂಗಳೇನು ಮಹಾ? ಅಷ್ಟು "ಬೌಗುಳ" ಸಾಲ ತೀರಿಸಿಯೇ ಹೊರಗೆ ಬರ್ತೇನೆ. ಕೆಲ್ಸ ಸಿಕ್ಕಿದ ಮೇಲೆ ನಾವಿಬ್ರೂ ಎಲ್ಲಾದ್ರೂ ಟೂರ್ ಹೋಗಿ ಬರುವಾ, ಆಯ್ತಾ? ಈಗ ಹೊರಡ್ತೇನೆ. ಇಲ್ಲದಿದ್ರೆ ಮನೆಯಲ್ಲಿ ಮಹಾಕಾಳಿ ಅವತಾರ ಆಗಿರ್ತದೆ, ಗೊತ್ತುಂಟಲ್ಲ."

ನಳಿನಿ ಆಂಟಿಗೆ ಹೇಳಿ ಅಲ್ಲಿಂದ ಹೊರಟಾಗ ಮನಸ್ಸು ಒಂದಿಷ್ಟು ಹಗುರಾಗಿದ್ದು ಹೌದು. ಜೊತೆಗೇ ಯೋಚನೆಗಳು... ‘ಅಮ್ಮ ಹೇಳಿದ ಹಾಗೆ ನನ್ನ ಕ್ಲಾಸ್ಮೇಟ್ಸ್ ಪೈಕಿ ಯಾರನ್ನಾದ್ರೂ ಲವ್ ಮಾಡ್ಬಾರ್ದು ಯಾಕೆ? ನಂಗೀವರೆಗೂ ಯೋಚನೆಯೇ ಬಂದಿರ್ಲಿಲ್ಲ. ಅಮ್ಮನೇ ಐಡಿಯಾ ಕೊಟ್ಟಿದ್ದಾಳಲ್ಲ. ಯಾರಾದೀತು? ಅವ್ನು ಬೇಡ. ಇವ್ನು ಆಗುದಿಲ್ಲ. ಅವ ಮೊಂಡ. ಇವ ಒರಟ. ಅವನಿಗೆ ತಲೆಯೇ ಇಲ್ಲ. ಇವನಿಗೆ ತಲೆ ನಿಲ್ಲುದೇ ಇಲ್ಲ. ಇಲ್ಲಪ್ಪ, ನನ್ನ ಪರಿಚಯದಲ್ಲಿ ನನ್ನ ಮೆಚ್ಚುಗೆ ಪಡೆದವ ಯಾರೂ ಇಲ್ಲ. ಹಾಗಾದ್ರೆ? ಸದ್ಯಕ್ಕಂತೂ ಬೇಡ ಯೋಚನೆ...’ ಮನೆಯ ಗೇಟಿನಲ್ಲೇ ನಿಂತಿದ್ದ ಅಮ್ಮ ಮಹಾಕಾಳಿಯಾಗಿರಲಿಲ್ಲ ಅನ್ನುವ ಸಮಾಧಾನದಲ್ಲೇ ಒಳಹೊಕ್ಕಿದವಳಿಗೆ ಅಲ್ಲೇ ಆಶ್ಚರ್ಯ ಕಾದಿತ್ತು.