ಅತಿಥಿಯೇ ನೀನು?
ಕರೆಯದೇ ಬಂದವ; ಅಭ್ಯಾಗತ!
ಬಯಸಿ ಬಯಸಿ ಕೂಗಿ ಕರೆದು
ಕರೆಯೋಲೆ ನೀಡಿದರೂ...
ಬಾರದೇ ಇರಬಲ್ಲ ಕಟುಹೃದಯಿ ನೆಂಟ;
ಅಗೋ ಬಂದೆಯಲ್ಲ,
ಯಾರೂ ನೋಡದ ಹೊತ್ತು,
ಯಾರಿಗೂ ನೀನು ಬೇಡದ ಹೊತ್ತು.
ಮತ್ತೆ, ಹೊತ್ತು-ಗೊತ್ತಿಲ್ಲದೆ
ಹೊತ್ತುಕೊಂಡು ಹೋಗಬೇಕಾದ ಕರ್ಮ
ನಮ್ಮ ತಲೆಗೆ ಕಟ್ಟಿಟ್ಟು-
ಮೌನವಾಗಿ ಬಿಡುತ್ತೀ!
ನಿನ್ನ ಮೌನದಲ್ಲೂ ಭೀಕರ ಗದ್ದಲ;
ಯಾರೂ ಕಾಣದಂತೆ
ಎಲ್ಲರೆದುರಿಗೇ ಕೀಳುತ್ತಿರುತ್ತಿ-
ಅರಿಯದ ಕರುಳನ್ನು,
ತಿಳಿಯದ ಕುರುಳನ್ನು,
ಮರೆಯದ ಮನವನ್ನು,
ತೊರೆಯಲಾರದ ಮನೆಯನ್ನು!
ಮುರಿಯುವ, ತುಳಿಯುವ, ಅಳಿ-
-ಸುವ ಕೆಲಸದ ನಿನಗೆ
ಸಮಾಧಾನ ನೆಮ್ಮದಿ ಕೊಡಿಸುವ
ಬಯಕೆ ಬರುವುದೇಕೆ ವಿರಳ?
ಆಹ್ವಾನಗಳಿಗೆ ಬಿಡುವಿಲ್ಲದ ಕ್ರೂರಿ ನೀನು!
ಒಂಟರಬಡುಕ ಸುಂಟರಗಾಳಿ
ನಿನಗೆ ಯಾರೂ ಜತೆಗಾರರಿಲ್ಲ,
ನೀನು ಯಾರಿಗೂ ಜೊತೆಗಾರ-
ನಲ್ಲ; ಧುತ್ತೆಂದು ಬಂದು-
ಥಟ್ಟನೆ ತಬ್ಬಿ
ಅಲ್ಲೇ ಇಲ್ಲವಾಗುವ ನಿನಗೆ
ಭಾವನೆಗಳ ಪರಿಚಯವಿಲ್ಲ,
ಕಾಮನೆಗಳು ಬೇಕಾಗಿಲ್ಲ,
ಸಂಬಂಧ, ವಾವೆ-ವರಸೆಗಳ
ಅರಿವು ಸುಳಿವು ಇಲ್ಲವೇ ಇಲ್ಲ.
ಎಂದಾದರೂ ಇನ್ನೊಬ್ಬರ ಜವಾಬ್ದಾರಿಯ-
ಹೊರೆ ಹೊತ್ತು ನೋಡಿದ್ದೀಯ?
ಯಾವಾಗ ಯಾರ ಮೇಲಾದರೂ ಅದನ್ನು
ಹೇರಿಸುತ್ತೀಯಲ್ಲ; ಭಾರ ಎತ್ತಿದ್ದೀಯ?
ಎತ್ತದ ಕತ್ತಿನ ರಣಭಾರದಿ ಅತ್ತಿದ್ದೀಯ?
ಬಾಳಿ, ಬದುಕಿನ ಬವಣೆ ಅರಿತಿದ್ದೀಯ?
ನ್ಯಾಯಾನ್ಯಾಯಗಳ ಫಲ ಉಂಡಿದ್ದೀಯ?
ಇಲ್ಲೇ ನಮ್ಮ ಸುತ್ತ ಮುತ್ತಲೇ
ಸುಳಿದಾಡುತ್ತಿರುತ್ೀ, ಆದರದರ
ಅರಿವು ಕೂಡ ನಮಗಾಗದಂತೆ;
ಎಲ್ಲೋ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗುತ್ತೀ,
ನಿನ್ನನ್ನು ಮರೆತುಬಿಡದಂತೆ!
ಯಾರಯ್ಯ, ಯಾರು ನೀನು?
ಎಲ್ಲೆಲ್ಲೋ ಬಲೆಬೀಸಿ ಬೇಟೆ-
ಯಾಡುವ ಕರಾಳ ಭಯಾನಕ-
ಕಿರಾತಕನೆ? ಕಂಡವರಿಲ್ಲ ನಿನ್ನ.
ಆದರೂ ಕೇಳಯ್ಯ ಒಂದು ಮಾತು-
ನೀನೇ ಭೀಷಣ ಪಾಷಾಣ ಹೃದಯಿ
ಅಂದುಕೊಳ್ಳಬೇಡ; ನೋಡಲ್ಲೇ-
ನಿನ್ನ ದಪ್ಪ ಮೂಗಿನಡಿಯ ಕಪ್ಪು
ದಟ್ಟ ಮೀಸೆಯೆಡೆಯಲ್ಲೇ(?)
ಅಡಗಿರುವರು ನರಕುಲಾಂತಕ ನರರು!
ಏಕಚಕ್ರಾಧಿಪತಿ ನೀನೆಂದು-
ಕೊಂಡೆಯ? ನಿನಗದು ಸಲ್ಲ!
ಯಾರಿಗೆ ಹೊಂಚು ಹಾಕುತ್ತಿರುವೆಯೀಗ?
ಬೇಗ ಯಾರಾದರೂ ಬೇಕೆಂದಿದ್ದರೆ-
ಕದಲು ಇಲ್ಲಿಂದ, ಆ ಕಡೆಗೆ
ಅಲ್ಲಿ ಕಾದಿದೆ ನಿನ್ನ ‘ಕಾಯ’ದ ಕದನ,
ಅದೇ ಅನಿವಾರ್ಯವೀಗ, ಹೋಗಲ್ಲಿ.
ಅವಿರತ ನಿನ್ನ ಭಯದಲ್ಲಿ,
ನಿನ್ನ ತೊಲಗಿಸಲರಿಯದೆ
ಬಾಗಿ ಕಾದು ಕದ್ದು
ಅವಿತಿರುವುದನರಿತೂ ನೀ
ಮತ್ತೆ ಇತ್ತ ಮುತ್ತಿಕ್ಕ ಬಂದರೆ
ನಾನೆನ್ನಬಹುದು-
‘ತೊಲಗಾಚೆ’! ಅಷ್ಟೇ!
(೦೨-ಡಿಸೆಂಬರ್-೧೯೯೯)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Saturday, 15 May 2010
Thursday, 15 April 2010
ವೇಷ
ದೇವಸ್ಥಾನದೆದುರಿನ ಖಾಲಿ ಗದ್ದೆಯಲ್ಲಿ
ಯಕ್ಷಗಾನ ಬಯಲಾಟದ ಬಣ್ಣ
ದೊಡ್ಡ ವೇದಿಕೆ, ರಂಗಿನ ದೀಪ
ಊರಿನವರಿಗೆ ಏನೋ ಖುಷಿಯಣ್ಣ
ಸಂಜೆಯ ಪೂಜೆಗೆ ವಿಶೇಷ ದಕ್ಷತೆ
ಊರ ಹಿರಿಯಗೆ ಮೊದಲ ಪ್ರಸಾದ
ನಮ್ಮಜ್ಜನಿಗೇ ಇಲ್ಲಿ ಆದ್ಯತೆ
ಅವನಿಲ್ಲದೆ ಊರಲಿ ನಡೆಯದಾರ ಪಾದ.
ಉತ್ಸವದ ದಿನ ಬೆಳಗು ಎದ್ದುಬಂದ
ಎಂದಿನಂತಲ್ಲ; ಗೊಣಗಿಗೂ ಉತ್ಸಾಹ
ಮನೆಮಕ್ಕಳಿಗಾಯ್ತು ಅಪ್ಪಣೆಯ ವರದಾನ
ಹೆಂಗಳೆಯರ ಕೆಲಸ ಇನ್ನೂ ದುಸ್ಸಹ
ಅದಾಗಬೇಕು, ಇದಾಗಬೇಕು, ಹಾಗಿರಬೇಕು, ಹೀಗಿರಬೇಕು
ಏನಿಲ್ಲ ಏನುಂಟು ಅವನ ಪಟ್ಟಿಯಲ್ಲಿ
ಅಜ್ಜಿಯಿಲ್ಲದ ನೆನಪು ಅವನ ಕಾಡಲೇ ಇಲ್ಲ
ನಮಗಿತ್ತು ಹೊದಿಕೆ ಅವಳ ನಗುವಿನಲ್ಲಿ
ಕಳೆದ ಇರುಳುಗಳಿಗೆ ಬೆನ್ನಿತ್ತು ನಡೆದವನು
ಇಂದಿಗೆ ಮುಖತೋರಿ ನಿಂತಿದ್ದಾನೆ
ನಿನ್ನೆಗಳ ಹಂಗಿನಲಿ ಗೀರುಗಳ ಹೊತ್ತವನು
ಮತ್ತೊಮ್ಮೆ ಹೆಗಲೊರಸಿಕೊಂಡಿದ್ದಾನೆ
ಮನೆಯೊಳಗೆ ಅಧಿಕಾರ, ಮೂರಾಬಟ್ಟೆ ಸರಕಾರ
ಊರಬೀದಿಗೆ ಮಾತ್ರ ರಾಜತಂತ್ರ
ಅವರಿವರ ಹೊಗಳಿಕೆಗೆ ಕಿವಿಯಾಗುವವನಿಗೆ
ಮನೆಯ ಮಕ್ಕಳ ಪ್ರೀತಿ ಬರೀ ಕುತಂತ್ರ
ಎಲ್ಲವನು ತನ್ನದೇ ಕೈಯಲಿರಿಸುವ ಛಲ
ಬೇಡವಗೆ ತನ್ನವರ ಆಸೆಗಳ ನೆರಳು
ಅವನ ಛಾಯೆಯ ಕೆಳಗೆ ಬೆಳೆಯದಾಗಿದೆ ಹುಲ್ಲು
ಊರೊಳಗೆ ಅವನಿಗೇ ಹೆಸರು, ಮಖಮಲ್ಲು
ಯಕ್ಷಗಾನದ ಬಯಲ ರಂಗಮಂಟಪದಲ್ಲಿ
ಅವನನ್ನು ಕೂರಿಸಿ ಆಡಿದರು ನೂರು
ಇನ್ನೇನು ಶತಕವನೆ ಕಾಣುವ ತಾತನನು
ಶಾಲು-ಹಾರಗಳಲ್ಲಿ ಮೆರೆಸಿದರು ಅವರು
ಬಯಲಾಟ ಮುಗಿದಾಗ ಬರಿದಾದ ಗದ್ದೆಯಲಿ
ನಡೆದಿದ್ದೆ ಸುಮ್ಮನೇ ನೋಟ ಹರಿಸುತ್ತಾ
ಖಾಲಿ ಗದ್ದೆಯಲಿದ್ದ ಖಾಲಿ ಬಿರುಕುಗಳಲ್ಲಿ
ತಿಂದು ಬಿಸುಟೆದ್ದವರ ಖಾಲಿ ಮೊತ್ತ
ಮನೆಗೆ ಬರಲಾಗದೆ ದೇವಳದ ಎದುರಿನಲಿ
ಗರುಡಗಂಬದ ಕಡೆಗೆ ಕಣ್ಣು ನೆಟ್ಟೆ
ಏರಿ ತೊನೆಯುತ್ತಿದ್ದ ಗರುಡಪಟ ಗಾಳಿಯಲಿ
ಅತಂತ್ರ ನೆನಪಿಸಿದ, ಮನೆಗೆ ಹೊರಟೆ.
ದೇವ ವಾಹನನಾದ ಗರುಡನೇ ತೂಗಿರಲು
ನನ್ನದೇನಿದೆ ಅಂಥ ಘನ ಜೀವನ?
ಅಜ್ಜನ ಆಳ್ವಿಕೆಯ ಕೆಲವಾರು ದಿನಗಳನು
ಕಳೆದ ಮೇಲೆನಗೆ ನಿಜ ವಿಮೋಚನ
ಬದುಕಿದ್ದ ದಿನಗಳಲಿ ಅಜ್ಜ ಬಾಳಿದ್ದನ್ನು
ಇಂದು ನೆನೆದರೆ ಸಾಕು, ಪಾಠ ನನಗೆ
ಹೇಗೆ-ಹೇಗಿರಬೇಕು ಎನುವ ಮೌಲ್ಯಕ್ಕಿಂತ
ಮಾಡಬಾರದ್ದನ್ನು ಅರಿತೆ ಒಳಗೆ
(೧೦-ಎಪ್ರಿಲ್-೨೦೦೮)
ಯಕ್ಷಗಾನ ಬಯಲಾಟದ ಬಣ್ಣ
ದೊಡ್ಡ ವೇದಿಕೆ, ರಂಗಿನ ದೀಪ
ಊರಿನವರಿಗೆ ಏನೋ ಖುಷಿಯಣ್ಣ
ಸಂಜೆಯ ಪೂಜೆಗೆ ವಿಶೇಷ ದಕ್ಷತೆ
ಊರ ಹಿರಿಯಗೆ ಮೊದಲ ಪ್ರಸಾದ
ನಮ್ಮಜ್ಜನಿಗೇ ಇಲ್ಲಿ ಆದ್ಯತೆ
ಅವನಿಲ್ಲದೆ ಊರಲಿ ನಡೆಯದಾರ ಪಾದ.
ಉತ್ಸವದ ದಿನ ಬೆಳಗು ಎದ್ದುಬಂದ
ಎಂದಿನಂತಲ್ಲ; ಗೊಣಗಿಗೂ ಉತ್ಸಾಹ
ಮನೆಮಕ್ಕಳಿಗಾಯ್ತು ಅಪ್ಪಣೆಯ ವರದಾನ
ಹೆಂಗಳೆಯರ ಕೆಲಸ ಇನ್ನೂ ದುಸ್ಸಹ
ಅದಾಗಬೇಕು, ಇದಾಗಬೇಕು, ಹಾಗಿರಬೇಕು, ಹೀಗಿರಬೇಕು
ಏನಿಲ್ಲ ಏನುಂಟು ಅವನ ಪಟ್ಟಿಯಲ್ಲಿ
ಅಜ್ಜಿಯಿಲ್ಲದ ನೆನಪು ಅವನ ಕಾಡಲೇ ಇಲ್ಲ
ನಮಗಿತ್ತು ಹೊದಿಕೆ ಅವಳ ನಗುವಿನಲ್ಲಿ
ಕಳೆದ ಇರುಳುಗಳಿಗೆ ಬೆನ್ನಿತ್ತು ನಡೆದವನು
ಇಂದಿಗೆ ಮುಖತೋರಿ ನಿಂತಿದ್ದಾನೆ
ನಿನ್ನೆಗಳ ಹಂಗಿನಲಿ ಗೀರುಗಳ ಹೊತ್ತವನು
ಮತ್ತೊಮ್ಮೆ ಹೆಗಲೊರಸಿಕೊಂಡಿದ್ದಾನೆ
ಮನೆಯೊಳಗೆ ಅಧಿಕಾರ, ಮೂರಾಬಟ್ಟೆ ಸರಕಾರ
ಊರಬೀದಿಗೆ ಮಾತ್ರ ರಾಜತಂತ್ರ
ಅವರಿವರ ಹೊಗಳಿಕೆಗೆ ಕಿವಿಯಾಗುವವನಿಗೆ
ಮನೆಯ ಮಕ್ಕಳ ಪ್ರೀತಿ ಬರೀ ಕುತಂತ್ರ
ಎಲ್ಲವನು ತನ್ನದೇ ಕೈಯಲಿರಿಸುವ ಛಲ
ಬೇಡವಗೆ ತನ್ನವರ ಆಸೆಗಳ ನೆರಳು
ಅವನ ಛಾಯೆಯ ಕೆಳಗೆ ಬೆಳೆಯದಾಗಿದೆ ಹುಲ್ಲು
ಊರೊಳಗೆ ಅವನಿಗೇ ಹೆಸರು, ಮಖಮಲ್ಲು
ಯಕ್ಷಗಾನದ ಬಯಲ ರಂಗಮಂಟಪದಲ್ಲಿ
ಅವನನ್ನು ಕೂರಿಸಿ ಆಡಿದರು ನೂರು
ಇನ್ನೇನು ಶತಕವನೆ ಕಾಣುವ ತಾತನನು
ಶಾಲು-ಹಾರಗಳಲ್ಲಿ ಮೆರೆಸಿದರು ಅವರು
ಬಯಲಾಟ ಮುಗಿದಾಗ ಬರಿದಾದ ಗದ್ದೆಯಲಿ
ನಡೆದಿದ್ದೆ ಸುಮ್ಮನೇ ನೋಟ ಹರಿಸುತ್ತಾ
ಖಾಲಿ ಗದ್ದೆಯಲಿದ್ದ ಖಾಲಿ ಬಿರುಕುಗಳಲ್ಲಿ
ತಿಂದು ಬಿಸುಟೆದ್ದವರ ಖಾಲಿ ಮೊತ್ತ
ಮನೆಗೆ ಬರಲಾಗದೆ ದೇವಳದ ಎದುರಿನಲಿ
ಗರುಡಗಂಬದ ಕಡೆಗೆ ಕಣ್ಣು ನೆಟ್ಟೆ
ಏರಿ ತೊನೆಯುತ್ತಿದ್ದ ಗರುಡಪಟ ಗಾಳಿಯಲಿ
ಅತಂತ್ರ ನೆನಪಿಸಿದ, ಮನೆಗೆ ಹೊರಟೆ.
ದೇವ ವಾಹನನಾದ ಗರುಡನೇ ತೂಗಿರಲು
ನನ್ನದೇನಿದೆ ಅಂಥ ಘನ ಜೀವನ?
ಅಜ್ಜನ ಆಳ್ವಿಕೆಯ ಕೆಲವಾರು ದಿನಗಳನು
ಕಳೆದ ಮೇಲೆನಗೆ ನಿಜ ವಿಮೋಚನ
ಬದುಕಿದ್ದ ದಿನಗಳಲಿ ಅಜ್ಜ ಬಾಳಿದ್ದನ್ನು
ಇಂದು ನೆನೆದರೆ ಸಾಕು, ಪಾಠ ನನಗೆ
ಹೇಗೆ-ಹೇಗಿರಬೇಕು ಎನುವ ಮೌಲ್ಯಕ್ಕಿಂತ
ಮಾಡಬಾರದ್ದನ್ನು ಅರಿತೆ ಒಳಗೆ
(೧೦-ಎಪ್ರಿಲ್-೨೦೦೮)
Subscribe to:
Posts (Atom)