ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday, 21 October 2009

ಕಾರ್ಯ-ಕಾರಣ

ನಮ್ಮ ಬೆವರು, ನಿಮ್ಮ ನೆತ್ತರು,
ಮತ್ತಿನ್ನಾರದೋ ಕಾಲ,
ಯಾರ ಸುತ್ತಲೋ ಬೇಲಿ ಕಟ್ಟಲು
ಸಾವಿರ ಮಕ್ಕಳ ತೋಳ್ಬಲ;
ಯಾರ ಸಂಚಿಗೆ ಯಾರ ಮೆಚ್ಚುಗೆ?
ಯಾರ ಕತ್ತು ಯಾರ ಮಚ್ಚಿಗೆ?
ಯಾರಿಗೆ ಗೋರಿ, ಯಾರಿಗೆ ಗದ್ದುಗೆ?
ಯಾರ‍್ಯಾರಿಗೋ ಯಾಕೀ ಛಲ?

ಇವನು ಹೆತ್ತದ್ದಲ್ಲ, ಅವನು ಸಾಕಿದ್ದಲ್ಲ,
ಅಮಾಯಕರ ಹೆಣರಾಶಿ ಅಲ್ಲಿ,
ಇವನು ದೇವರಲ್ಲ, ಅವನು ದೆವ್ವವಲ್ಲ,
ಅಮೂರ್ತಗಳ ಭೂತ ಇಲ್ಲಿ;
ನೆಲವೆಲ್ಲ ಇವನ ಗುತ್ತಿಗೆಯೇನು?
ಜಗಕೆಲ್ಲ ಅವನೇ ಒಡೆಯನೇನು?
ಗೆದ್ದವರೇನು, ಬಿದ್ದವರೇನು?
ಕರುಳ ಕಣ್ಣೀರಿಗೆ ಯಾವ ಫಲ?

(‘ಇರಾಕ್ ಮೇಲೆ ಅಮೆರಿಕಾ ಯುದ್ಧ’ ಯಾವುದೇ ನೆಲೆಗಾಣದೇ ಅಯೋಮಯವಾಗಿ ಸಾಗುತ್ತಿರುವ ಸಮಯದಲ್ಲಿ....)
(೧೯-ಅಕ್ಟೋಬರ್-೨೦೦೬)

Saturday, 17 October 2009

ಬೆಳಗಿ ಬರಲಿ

ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು.
ಹರಕೆ-ಹಾರೈಕೆಗಳು ನಮ್ಮೆಲ್ಲರೊಡನೆ ಎಂದೂ ಸಾಗಿ ಬರಲಿ
ಸುಖ, ಸಂತಸ, ನೆಮ್ಮದಿ, ಶಾಂತಿಗಳ ಎಂದೂ ಜೊತೆಗೆ ತರಲಿ.


ಸುತ್ತೆಲ್ಲ ಹಣಕಿಹರು ಆ ಪುಟ್ಟ ಹಣತೆಗಳು -
ಮತ್ತೊಮ್ಮೆ ದೀವಳಿಗೆ ನೆಪವ ಮಾಡಿ;
ಅತ್ತಿತ್ತ ಆಡಿಹರು ಬೆಳಕಿನಾ ಮೂರ್ತಿಗಳು -
‘ಕತ್ತಲೆಗೆ ಬೆದರದಿರಿ’, ಎಂದು ಸಾರಿ.

ತೈಲ ಸಾರವ ಹೀರಿ, ಬತ್ತಿ ಭಾವವ ಮೀರಿ -
ಮೃತ್ತಿಕೆಯ ಮರ್ತ್ಯತನ ದಾಟಿ ಏರಿ,
ನೆಲ-ಜಲದ ಒಲವಿಂದ ಬಲಗೊಂಡ ರೂವಾರಿ -
ಕತ್ತಲೆಯ ನುಂಗಿ, ತೋರುವರು ದಾರಿ.

ಮಣ್ಣಿನಲಿ ಕಂಡವರು, ಮಣ್ಣನ್ನೆ ಉಣುವವರು -
ಸಣ್ಣ ಕುಡಿಯಿಂದಲೇ ಬೆಳೆಯುವವರು,
ಬಣ್ಣಕ್ಕೆ ಬೇಕವರು, ಕಣ್ಣಿಗೆ ಕಾರಣರು -
ತಣ್ಣಗಿನ ಕತ್ತಲಲು ಕರಗದವರು.

ಮರುಕಳಿಸಿ ಬರುವ ನಗೆ ಮರುಅಲೆಯ ತರುವಂತೆ -
ತರಲಿವರು ನಮಗೆಲ್ಲ ಮರಳಿ ಹರುಷ,
ಗುರುತರದ ಹೊಣೆಯನ್ನೆ ಹೊತ್ತಿರುವ ತಮಸಾರಿ -
ಇರಲವರು ನಮ್ಮೊಳಗೆ ಬೆಳಗಿ ಮನಸ.
(೧೨-ನವೆಂಬರ್-೨೦೦೧)