ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 2 August 2009

ಶಿವೋಹಂ

ಜ್ಞಾನ ಮುದ್ರಾಂಕಿತ ಧ್ಯಾನಯೋಗಿಯ
ಅರ್ಧನಿಮೀಲಿತ ರೆಪ್ಪೆಗಳ ಕೆಳಗೆ
ಸಿಡುಕು ಮೂಗಿನ ನೇರದೊಳಗೆ
ಅರೆ-ಬರೆಯಾಗಿ ಕಂಡದ್ದು-
ಅಂತಃಪುರದ ಹಂಸತಲ್ಪದಡಿಯಲ್ಲಿ
ಕುರುಡುಗತ್ತಲ ಮೂಲೆಯಲ್ಲಿ
ಮೂಷಿಕ ಸವಾರಿ ಹೊರಟ
ಮುದ್ದಿನ ಕುವರ.

ಲೋಕ ಸುಟ್ಟರೂ ತೊಂದರೆಯಿಲ್ಲ
ಕೆಂಡಗಣ್ಣನ ಕೋಪ
ಆರದೆ ವಿಧಿಯಿಲ್ಲ
ಬಲಿಯಾಗಲೇಬೇಕು;
ತಲೆಕೊಡಲು ಯಾರಿದ್ದೀರಿ
ಕಂದನ ಮುಂಡಕ್ಕೆ?
(೦೮-ಸೆಪ್ಟೆಂಬರ್-೨೦೦೬)

Saturday, 25 July 2009

ಮನೋಹಯಕೆ ಮೂಗುದಾರ

ಮನಸ್ಸು ಪತಂಗ
ಮನಸ್ಸು ಮರ್ಕಟ
ಮನಸ್ಸು ಕುದುರೆ
.... .... .... ....
ಇನ್ನೂ ಏನೇನೋ ಆಗಿರುವ
ಆಗುತ್ತಿರುವ ಈ ಮನವನ್ನು
ಹಿಡಿದೆಳೆದು
ಕಾಲುಕಟ್ಟಿ, ಅಡ್ಡಹಾಕಿ
ಮೂಗು ಚುಚ್ಚಿ, ದಾರ ಪೋಣಿಸಿ
ಗೊರಸಿಗೆ ಲಾಳ ಹೊಡೆದು
ಬೆನ್ನಿಗೆ ಜೀನು ಬಿಗಿದು
ಕಣ್ಣ ಬದಿಗೆ ಪಟ್ಟಿ ಏರಿಸಿ
ಕಡಿವಾಣ ಹಾಕಿ, ಚಾಟಿ ಹಿಡಿದು
ಸವಾರಿ ಹೊರಟರೆ
ಚೇತನ ಸರದಾರ;
ಇಲ್ಲದಿರೆ ನಿಸ್ಸಾರ.
(೩೧-ಆಗಸ್ಟ್-೨೦೦೬)