ಚದುರಿ ಉಷೆಯ ಕುಂಕುಮ
ನೊಸಲ ತುಂಬ ಸಂಭ್ರಮ
ಹನಿದು ಮುತ್ತು ಹನಿಗಳು
ಬಯಲ ತುಂಬ ಮಣಿಗಳು
ಅರುಣ ಕದವ ತೆರೆಯಲು
ದಿವ್ಯಗಾನ ಹರಿಯಲಿ
ಕಿರಣ ಧಾರೆ ಹೊಳೆಯಲು
ಹೊನ್ನ ಗಾನ ಹೊಳೆಯಲಿ
ತುಂಬಿ ಬೆಳಕ ಬಿಂದಿಗೆ
ಬರಲಿ ಬಳುಕಿ ಮೆಲ್ಲಗೆ
ನೇಸರೇರಿ ನಲಿಯಲಿ
ಕಮಲ ಬಳುಕಿ ಅರಳಲಿ
ಚಿಗುರ ಹಸುರು ಉಸಿರಿಗೆ
ಜಗವು ರವಿಯ ಹೆಸರಿಗೆ
ಉದಯ ಕಾಲ ರಂಗಿಗೆ
ಕಾವ್ಯ ರವಿಯ ಭಂಗಿಗೆ
(೨೦-ಸೆಪ್ಟೆಂಬರ್-೧೯೯೭)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Wednesday, 14 January 2009
Tuesday, 6 January 2009
ಹಿಮಾವೃತ ಪಯಣ
ಎಲ್ಲ ಬೆಳಗುವ ಸೂರ್ಯನ ಸುತ್ತ
ಕಟ್ಟಿದ ಮೋಡದಿಂದ ಬಿದ್ದದ್ದು
ಕೊರೆಯುವ ಛಳಿ ಹಿಡಿಸಿ ನಡುಗಿಸುವ ಹಿಮ
ಕರಗಿ ಹರಿದರೆ ನೀರಾದರೂ ಆದೀತು
ಬೆಟ್ಟದ ತಣ್ಣನೆ ಗಾಳಿಯಲ್ಲಿ ಅದೂ ಸಾಧ್ಯವಿಲ್ಲ
ನೋಟ ಹರಿದಷ್ಟೂ ಬಿಳಿಯ ರಾಶಿ
ದೂರದ ಬೆಟ್ಟ ನುಣ್ಣಗೆ, ಬೆಣ್ಣೆನುಣ್ಣಗೆ
ಎಲ್ಲ ತಗ್ಗು ದಿಣ್ಣೆಗಳನ್ನೂ ಸೇರಿಸಿ
ಆವರಿಸಿ ಹೊದೆಸಿ ಬಿಮ್ಮಗೆ ಕೂತ ಹಿಮ
ರವಿ ಇಣುಕಿದರೆ ಕಣ್ಣಿಗೇ ರಾಚುವ ಬೆಳಕು
ಮಸುಕು ಮಸುಕು, ಮುಸುಕಿದ ಮಂಜು
ಮೈಲರ್ಧದ ಆಚೆಗೇನೂ ಕಾಣದ ಪರದೆ
ತೆಳುವಾಗಿ ಹರಡಿದ ಮಾಯಾ ಜಾಲ
ಪ್ರತಿಫಲನದ ಪ್ರತೀಕ್ಷೆಯಲ್ಲಿಯೇ
ಎಗರಾಡದೆ ನಯವಾಗಿಯೇ ಹರಿಯುವ ಬಂಡಿ
ಎತ್ತರ ಗುಡ್ಡದ ನೆತ್ತಿಯ ಬದಿಯಲ್ಲಿ
ಕಿರುತಿರುವಿನ ರಸ್ತೆಯಂಚಿನ ಬೇಲಿ
ತಡೆಯೇ ತಿಳಿಯದಂತೆ ತೇಲಿಹೋದದ್ದು
ಕನಸೊ? ಕಲ್ಪನೆಯೊ? ಬದುಕೊ?
ಕೊರೆವ ಗಾಳಿಯೊಳಗೆ ಗುರುತುಗಳಿಲ್ಲ
(೦೫-ಜನವರಿ-೨೦೦೯)
Subscribe to:
Posts (Atom)