ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday, 5 September 2008

ಶಿಕ್ಷಕ

ಭಾಗ ೧:-- ಶಿಕ್ಷಕ ಹೀಗಾದರೆ?

ಶಿಕ್ಷಕ ತಕ್ಷಕನಾದರೆ ಮನುಕುಲಕ್ಕೆ-
ಅಮೃತವುಣಿಸುವವರಾರು?
ಶಿಕ್ಷಕ ಭಕ್ಷಕನಾದರೆ ಬೆಳೆವ-
ಸಿರಿಯ ಮೊಳಕೆಗೆ ರಕ್ಷಕರಾರು?

ಶಿಕ್ಷಕ ವಂಚಕನಾದರೆ ನವಯುಗದ-
ಭವಿತವ್ಯದ ಹಿತಚಿಂತಕರಾರು?
ಶಿಕ್ಷಕ ಅಚೇತನನಾದರೆ ಭಾರತಮಾತೆಯ-
ಕೀರ್ತಿಪತಾಕೆಯ ಚೈತನ್ಯವಾರು?

ಭಾಗ ೨:-- ಶಿಕ್ಷಕ ಹೇಗಿರಬೇಕು?

ತಕ್ಷಕನಾಗಿ ಭಕ್ಷಕರನ್ನು ಎದುರಿಸಿ ನಿಲಬೇಕು,
ರಕ್ಷಕನಾಗಿ ನವಯುವಶಕ್ತಿಗೆ ಧೈರ್ಯವ ಕೊಡಬೇಕು.

ಚೇತನವಾಗಿ ಮುಗ್ಧ ಮನಸಿಗೆ ಜಾಗೃತಿ ತರಬೇಕು,
ಚಿಂತನಶೀಲ ತರುಣಗಣಕ್ಕೆ ಪ್ರಣತಿಯಾಗಬೇಕು.

ಮಮತೆ, ಕರುಣೆ, ವಾತ್ಸಲ್ಯಗಳ ಚಿಲುಮೆಯಾಗಬೇಕು,
ಭಾರತಮಾತೆಯ ಕೀರ್ತಿಪತಾಕೆಗೆ ಭದ್ರ ಬುನಾದಿಯಾಗಬೇಕು.
(ಆಗಸ್ಟ್-೧೯೯೨)

(ಬೆಂಗಳೂರಿನ ವಿಜಯಾ ಶಿಕ್ಷಕರ ತರಬೇತಿ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ನನ್ನ ಸಹಪಾಠಿಗಳ ಧೋರಣೆ, ಸುತ್ತಮುತ್ತಲ ಶಾಲೆಗಳಿಗೆ ಕಲಿಕೆ-ಪಾಠಗಳಿಗೆಂದು ಹೋಗುತ್ತಿದ್ದಾಗ ಅಲ್ಲಿನ ಶಿಕ್ಷಕರ ಧೋರಣೆ ಕಂಡು ಬೇಸರದಿಂದಲೂ ಹತ್ತಿರ ಬರುತ್ತಿದ್ದ ಶಿಕ್ಷಕರ ದಿನಾಚರಣೆಯ ಸಂದರ್ಭವೆಂತಲೂ ಗೀಚಿಕೊಂಡದ್ದು. ಈಗ ಮತ್ತೊಮ್ಮೆ, ಈ ಕವನದ ಮೂಲಕ ನಮ್ಮೆಲ್ಲಾ ಶಿಕ್ಷಕವರ್ಗಕ್ಕೆ ವಂದನೆಗಳು.)

Sunday, 27 July 2008

ಆರೋಗ್ಯ ಪೂಜೆ

(ದಾಸರ ಕ್ಷಮೆ ಕೋರಿ, `ಅತ್ಯಾಧುನಿಕ'ರ ಗಮನಕ್ಕೆ... ಅಣಕವಾಡು)

ಊಟಕ್ಕೆ ಬನ್ನಿರಿ ನೀವು; -ನಿಮ್ಮ
ಲ್ಯಾಪ್-ಟಾಪು, ಸೆಲ್-ಫೋನುಗಳನಾಚೆಗಿಟ್ಟು --ಊಟಕ್ಕೆ
ಪಿ.ಡಿ.ಎ., ಬ್ಲ್ಯಾಕ್-ಬೆರ್ರಿ ಜೊತೆಗೆ, -ತಮ್ಮ
ಬೀಪರ್ರು, ಬ್ಲೂಟೂಥುಗಳ ಮೇಜಲಿಟ್ಟು --ಊಟಕ್ಕೆ

ಒಂದೇ ಮನೆಯೊಳಗಿದ್ದೂ, -ಮಂದಿ
ಒಬ್ಬೊಬ್ಬರೊಂದೊಂದು ದಿಕ್ಕನ್ನು ಹೊದ್ದು
ಅರೆನಿದ್ರೆ ಹೊತ್ತಲ್ಲಿ ಎದ್ದು, -ಬಂದು
ಮಬ್ಬಲ್ಲಿ ತಿಂದರೆ ಆರೋಗ್ಯಕೆ ಗುದ್ದು --ಊಟಕ್ಕೆ

ಟೀವಿಯ ಮುಂದಿರಬೇಡಿ, -ಒಮ್ಮೆ
ಅಡುಗೆ ಮನೆಯಲ್ಲೊಂದು ಮಣೆ ಹಾಕಿ ಕೂಡಿ
ನಗು ನಗುತಾ ಊಟವ ಮಾಡಿ, -ನಿಮ್ಮ
ಒಡನಾಡಿಗಳ ಜೊತೆಗೆ ಹರಟೆ ಮಾತಾಡಿ --ಊಟಕ್ಕೆ

ಸಿಹಿ-ಖಾರ, ಹುಳಿ-ಉಪ್ಪು ಇರಲಿ, -ಹಾಗೇ
ಶುಚಿಯ ಕಡೆಗೂ ನಿಮ್ಮ ಒಮ್ಮನವು ಹೊರಳಿ
ಮಾಡಿರುವ ಅಡುಗೆಯನು ಹೊಗಳಿ, -ತೇಗಿ
ರುಚಿ ಹಣ್ಣ ಸವಿಯುತ್ತ ಅಂಗಳಕೆ ತೆರಳಿ --ಊಟಕ್ಕೆ

ಆಧುನಿಕ ಸೌಕರ್ಯ ಬೇಕು, -ನಮಗೆ
ಬಾಳುವೆಯ ನಡೆಸಲು ಕೆಲಸವಿರಬೇಕು
ಆಧಾರವೀ ದೇಹ ಎದಕು, -ಅದನೆ
ಕಡೆಗಣಿಸಿ ಬದುಕಿದರೆ ನೋವುಣ್ಣಬೇಕು --ಊಟಕ್ಕೆ

ಹೊತ್ತು ಹೊತ್ತಿಗೆ ಊಟ-ತಿಂಡಿ, -ಹೆಚ್ಚು
ಹಣ್ಣು ತರಕಾರಿಗಳ ಮಿಶ್ರಣದ ಮೋಡಿ
ಬಲುಕಾಲ ಆರೋಗ್ಯ ನೋಡಿ, -ಮೆಚ್ಚು
ತನು-ದೇವರ ಸೇವೆ ಈ ರೀತಿ ಮಾಡಿ --ಊಟಕ್ಕೆ
(೦೨-ಜೂನ್-೨೦೦೮ ರಾತ್ರೆ ೧೦:೩೦)