ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 3 July 2008

"ಹಾಯ್... ...ಬಾಯ್"ಗಳ ನಡುವೆ...

"ಹಾಯ್ ಗೆಳತಿ, ಹೇಗಿದ್ದೀಯಾ? ಅಡುಗೆ ಏನಿವತ್ತು?"
ಹೀಗೇ ಶುರುವಾಗುವ ಮಾತು ಎತ್ತೆತ್ತಲೋ ಸಾಗುತ್ತಿತ್ತು
"ಅಮ್ಮಾ... ನಂಗೆ ನೀರು... ಕ್ಯಾಂಡಿ..." ನನ್ನ ಮರಿಯ ಗಲಿಬಿಲಿ
"ಅಮ್ಮಾ... ಬಾ... ಅಣ್ಣಾ... ಅಪ್ಪಾ..." ನಿನ್ನ ಸನಿಹ ಚಿಲಿಪಿಲಿ

ಕಂಡರಿಯದ ನಾಡಿನಲ್ಲಿ ಕನ್ನಡ ಮಾತಿನ ಗೆಳತಿ
ಕಹಿ-ಸಿಹಿ ಹಂಚಿಕೊಳಲು ಹುಮ್ಮನಸ್ಸಿನ ಕನ್ನಡತಿ
ಸಮಾನ ಲಕ್ಷ್ಯಗಳು, ರೇಖೆಗಳು, ನಿಲುವುಗಳು
ಸರಾಗವಾಗಿ ಮಾತು ಹರಿಯಲು ಬೇಕಷ್ಟು ವಿಷಯಗಳು

ಎಂದು, ಹೇಗೆ ಈ ಸಖ್ಯ, ಈ ನಂಟು ಬೆಳೆಯಿತು?
ಎಲ್ಲಿಂದ, ಎಲ್ಲಿ ಬಂದು, ಯಾವ ಕಡೆಗೆ ಎಳೆಯಿತು?
ಅರಿಯಲಾರೆ, ವಿಸ್ಮಯವೇ ನನ್ನ ಮನದ ತುಂಬ
ಅಗಲಿಕೆಯ ಸಹಿಸಲಾರೆ, ಇರಲಿ ಸ್ನೇಹ ಬಿಂಬ

ತವರನಗಲಿ ಹೊರಟಾಗಲೂ ಬಾರದ ಕಣ್ಣೀರು
ತಡೆದರೂ ಹಣಕುತ್ತಿದೆ, ಬದುಕು ನಿಲ್ಲದ ನೀರು
ಹರಿಯಬೇಕು, ಹಾಡಬೇಕು, ಹರಡಬೇಕು ಹೊನಲು
ಹತ್ತಿರವನು ದೂರದಿಂದ ಅಳೆಯುವಾಗ ಅಳಲು

ಸ್ವರ್ಗವಿದು, ನರಕವಿದು, ಪರಿಪೂರ್ಣವೆಂಬುದಿಲ್ಲ
ಸ್ವಂತಿಕೆಗೆ ನೆಲವು ಇದು, ಸ್ವಂತವು ಇದಲ್ಲ
ಮರಳಿ ಮನೆಗೆ ಮರಳುವ ಹಂಬಲವು ಬಹಳ
ಮತ್ತೆ ನೋಡುವೆ ನಿನ್ನೆಂಬ ಸಂಭವ ವಿರಳ.
(೦೧-ಅಕ್ಟೋಬರ್-೧೯೯೭)

Sunday, 29 June 2008

ನಲ್ನುಡಿ

ಎರಡು ಮಾತು ಹೇಳುವೆನು
ಕೇಳು ಜಾಣ ಮಗು ನೀನು
ಒಳ್ಳೆ ನಡೆ ನುಡಿಯ ಕಲಿ
ಧೀರನಾಗು ಬಾಳಲಿ

ಗುರುಗಳು ಹಿರಿಯರು ನಿನಗೆ
ಕೆಡುಕನು ಬಯಸುವುದಿಲ್ಲ
ಅರಿವಿನ ಮಾರ್ಗವ ತೋರಿ
ವಿಜಯವ ಹರಸುವರೆಲ್ಲ
ಹೇಳಿದ ಮಾತನು ಕೇಳಿ
ನೂರಾರು ಕಾಲ ಬಾಳಿ
ಯಶವೆಂಬ ಏಣಿಯನೇರು

ವಂಚನೆ ಜಗಳ ಕದನ
ಒಳ್ಳೆಯ ಸಂಸ್ಕೃತಿಯಲ್ಲ
ಸಂಚು ಸುಲಿಗೆಯ ಮಾಡೋ
ಮನುಜ ಸುಸಂಸ್ಕೃತನಲ್ಲ
ಸತ್ಯವ ಬಿಡದೆ ಎಲ್ಲೆಲ್ಲೂ
ಹಿಂಸೆಯ ಎದುರಿಸಿ ನಿಲ್ಲು
ಆದರ್ಶ ಮಾನವನಾಗು

"ದೂರದ ಬೆಟ್ಟವು ಹಸಿರು"
ಗಾದೆಯ ಮಾತಿದು ಕೇಳು
ಸರಿದು ಸನಿಹದೆ ನೋಡು
ತಿಳಿವುದು ಒಳಗಿನ ಪೊಳ್ಳು
ಬಣ್ಣದ ಮೆರುಗಿಗೆ ಸೋತು
ನಿನ್ನತನವನೇ ಮರೆತು
ಸುಳಿಯಲ್ಲಿ ಸಿಲುಕದೆ ಬಾಳು
(ಎಪ್ರಿಲ್-೧೯೯೫)