ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 11 May 2014

ಅಮ್ಮ ಸಂಕಟ

ಯಾರು ಮಂತ್ರ ಮಾಡಿದರೋ ರಂಗ ಅಳುತಿರುವ
ಯಾರ ಕಣ್ಣು ನಾಟಿದೆಯೋ ಕೃಷ್ಣ ಕನಲಿರುವ
ಯಾವ ಗಾಳಿ ಸೋಕಿತೇನೊ ಚೆನ್ನ ಬೆಂದಿರುವ
ಯಾಕೆ ಹೀಗೆ ಮನವ ಹಿಂಡಿ ಚೆಲುವ ನೊಂದಿರುವ

ಏನ ತಿನ್ನಲಿಕ್ಕಿದರೋ ಗೋಪಕನ್ನೆಯರು
ಎಲ್ಲಿ ಆಟಕೆಳೆದಿಹರೋ ಗೊಲ್ಲಬಾಲರು
ಎಂಥ ಮರದ ಕೆಳಗೆ ಓಡಿಯೋಡಿಬಂದನೋ
ಏಳಲೊಲ್ಲ ಮುದ್ದುಮಲ್ಲ, ನಲುಗಿ ಕೊರಗುವ

ಏನ ಕಂಡು ಬೆದರಿ ಬಂದು ನಡುಗುತಿರುವನೋ
ಎಲ್ಲಿ ನಗುವ ಕಳೆದುಕೊಂಡು ಮುದುರುತಿರುವನೋ
ಎಂಥ ಹೊಳೆಯ ಸುಳಿಯ ಒಳಗೆ ಸೆಳೆಗೆ ಸಿಲುಕಿದ
ಏರುತಿಹುದು ತಾಪ, ರವಿಯೆ ಹಣೆಯಲಿಳಿದನೋ

ಕಾಡಿಬೇಡಿ ಬೆಣ್ಣೆ ಮೊಸರು ಕೇಳುತಿದ್ದವ
ಕಾಣದಂತೆ ಕಣ್ಣ ಹಿಂದೆ ಕದ್ದು ಮೆದ್ದವ
ನೋಡು ಈಗ, ಬೇಡವೆಂದು ಮೊಗವ ತಿರುವಿದ
ನೋಟವೆಲ್ಲೊ, ಮುರಳಿಯೆಲ್ಲೊ, ಮನವ ಕಳೆದವ

ಅಣ್ಣರಾಮ ಹೇಳಿದಂಥ ಮಾತು ಸತ್ಯವೆ?
ಬಣ್ಣ ಎರಚಿ ಮಾಯಗಾತಿ ಮರುಳು ಗೈದಳೆ?
ಮೋಹನಾಂಗ ನನ್ನ ಕುವರ ಅವಳ ಒಲಿದನೆ?
ಮೋಹದಲ್ಲಿ ಮುಳುಗಿ ಮರೆತು ಮೋದ ತೊರೆದನೆ?
(೨೪-ಎಪ್ರಿಲ್-೨೦೧೪)

Tuesday, 18 March 2014

ಮತ್ತೆ ದ್ರೌಪದಿ...

 ಹಿಮಾಗ್ನಿ

ಧರ್ಮಧ್ಯಾನಕೆ ನೀನು ಪದರಶಾಂತಿಯ ಧರಣಿ
ಇಂಗದ ಹಸಿವಿಗೆ ಪರಿಪೂರ್ಣಮಾತೆ
ರಸಿಕನಾಲಂಬನಕೆ ಶೃಂಗಾರ ರಂಭೆಯೇ
ಸೌಂದರ್ಯಮೂರ್ತಿಗೆ ಸದ್ರೂಪಲಕ್ಷ್ಮಿ
ಬಲುರಾಜತಂತ್ರಿಗೆ ಸೂಕ್ತಮಂತ್ರಿಯ ನೆರಳು
ಸಾಮ್ರಾಜ್ಯ ಛತ್ರದ ಅಭಿಷಿಕ್ತ ದಾಸಿ  

ನೀತಿಸಂಹಿತೆಗಳಿಗೆ ಭೂಮಿಕೆಯು ನೀನಾದೆ
ವಾಯುವೇಗಕೆ ಇತ್ತೆ ಮತ್ತೆ ಉತ್ಕರ್ಷ
ಶೌರ್ಯೋತ್ತುಂಗಕ್ಕೆ ಸ್ವಯಂ ಬಹುಮಾನ
ಆತ್ಮಗೌರವಕಾದೆ ಸೆಳೆವಶ್ವಶಕ್ತಿ
ಅಸಮ ಬುದ್ಧಿಯ ಬಲಕೆ ಪುಷ್ಠಿ ಸುರಭಿಯು ನೀನು
ಕರ್ಷಣಾಕೇಂದ್ರವೇ ನೀನಂತರ್ಬಿಂದು

ಋಜುಮಾರ್ಗ ಸತ್ವಕ್ಕೆ ನಿಜಬಟ್ಟೆಯಾಗಿದ್ದೆ
ಮಿಡಿಯುವೆದೆಯೊಳಗಿನ ತಿದಿಯೊತ್ತು ನೀನೇ
ಲೋಕೈಕ ಬಿಂಕಕ್ಕೆ ಕಡಿವಾಣದಂಕುಶವು
ಚತುರಚಿತ್ತದಸುತ್ತ ದಿವ್ಯಚೇತನವು
ಸುಕುಮಾರಸಹನೆಗೆ ಚಪ್ಪರದ ಮಲ್ಲಿಗೆಯು
ಪಂಚತತ್ವದ ಸುತ್ತ ಪ್ರಭೆಯ ದಿವ್ಯಾಗ್ನಿ

"ಷಟ್ಕರ್ಮಯುಕ್ತಾ ಕುಲಧರ್ಮಪತ್ನೀ"
ನೀನಾದೆ ಈ ಆರು ಗುಣಕೊಂದೆ ನಿಕಷ
ಧರ್ಮಪತ್ನಿಯ ಪಟ್ಟ ಚೌಕಟ್ಟು ನೆಲೆಯಿತ್ತು
ಕಟ್ಟಿದರು ನಿನ್ನೊಳಗ ಅಗ್ನಿಕನ್ನೆಯನು
ಮೆಟ್ಟದೆಯೆ ಕೊಚ್ಚದೆಯೆ ನಿನ್ನ ರೊಚ್ಚಿನ ಸಿರಿಯ
ಒರೆಗಿರಿಸಿ ದಮನಿಸಿದೆ ಕುಲಾಂತಶತಕ

ಸಾಹಸದ ಗಾಥೆಯಲಿ ನಿನಗೆಲ್ಲಿ ಸಂಗಾತ
ಅಂಗಾತ ಒರಗಿದರು ತನುಜಾತರೆಲ್ಲ
ಸಹಿಸುತ್ತ ದಹಿಸುವಿಕೆ ದಹಿಸುತ್ತ ಸಹಿಸುವಿಕೆ
ಬಿರುಗಾಳಿಗೊಡ್ಡಿದ್ದೆ ಸಿರಿತುರುಬುಸೆರಗ
ಐಮನೆಯ ಥರಥರದ ನಿಯಮಪರದೆಗಳೊಳಗೆ
ಸ್ವಂತಿಕೆಯ ಸಹಿಬರೆದ ಹಿಮಾಗ್ನಿರಮಣಿ
*ಸುಪ್ತದೀಪ್ತಿ
[(೧೦-೨೧)-ಫೆಬ್ರವರಿ-೨೦೧೪]