ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday, 28 August 2013

ಬೆಣ್ಣೆ ಕಳ್ಳ


ನೆಲುವಿನಲ್ಲಿ ಹಾಲು ಮೊಸರು
ನೆಲದ ಮೇಲೆ ಗೊಲ್ಲ
ಮೆಲ್ಲಬೇಕು ಅಚ್ಚ ಬೆಣ್ಣೆ
ಕೈಗೆ ನಿಲುಕದಲ್ಲ

ಹಾರಿ ಕುಣಿದು ಕಪ್ಪೆ ಜಿಗಿದು
ತೂರಿ ನೋಟದೇಣಿ
ಭಾರಿ ಕಷ್ಟ ಪಟ್ಟರೇನು
ಕೈಗೆ ಸಿಗದು ಭರಣಿ

ಸುತ್ತ ಮುತ್ತ ಕಳ್ಳ ಚಿತ್ತ
ಇತ್ತ ಬಂದರಾರು?
ಮೆತ್ತಗೊಮ್ಮೆ ಇಣುಕಿ ನೋಡೆ
ಕೈಗೆ ಹೆಗಲ ಊರು

ಅಣ್ಣ ಬಂದ ಜೊತೆಗೆ ತಂದ
ತನ್ನ ಭಂಡ ಜೋಡಿ
ಬಣ್ಣವೇರಿ ಬಾನಿನತ್ತ
ಕೈಗೆ ಬಂತು ಜಾಡಿ

ಕಿಲಕಿಲಕಿಲ ಬಳೆಯ ಸದ್ದು
ಚಲನೆ ಪಡೆದ ಕೂಟ
ನೆಲದ ಮೇಲೆ ಹಾಲು ಮೊಸರು
ಕೈಗೆ ಬೆಣ್ಣೆಯೂಟ

(೦೨-ಆಗಸ್ಟ್-೨೦೧೩)

Wednesday, 21 August 2013

ಶ್ರಾವಣ - ವರ್ಷನೂತನ

ಶ್ರಾವಣದ ಧಾರೆಯಲಿ ಮಾಧವಗೆ ಬರಿ ತಾಪ
ರಾಧೆಗಾದರೊ ಸೋನೆ ಸುರಿವಬೇಗೆ
ಹಾಡಿ ಹರಿಯುವ ನದಿಗೆ ಕೆನ್ನೀರು ಉಕ್ಕುಕ್ಕಿ
ಕಡಲ ಸೇರುವ ತವಕ ದೌಡು ನಡಿಗೆ  

ಭೋರ್ಗರೆವ ಮೊರೆತದಲಿ ಹುದುಗಿ ಮುರಳಿಯ ಗಾನ
ಒಲವ ಹಸುಕರುಗಳಿಗೆ ಮರೆತ ಮೇವು
ಮುಮ್ಮೇಳದಲ್ಲಿರಲು ಹನಿಹನಿಗಳದೆ ಮಂದ್ರ
ಬಿದುರುಗೊಳವೆಯು ದೇಹ ಉಸಿರೆ ಕಾವು  

ಆಕಾಶರಾಯನಿಗೆ ಹಗುರವಾಗುವ ಭಾವ
ನಾವುನೀವೆಲ್ಲರಿಗೆ ಬೆಳೆವ ಸಮಯ
ನೆಲಸೇರಿ ಸಾಗರಕೆ ಹರಿವ ಒಮ್ಮನದೋಟ
ಗೋಪಾಲ ಪಾದಗಳ ತೊಳೆವಾಲಯ  

ಹೃದಯದುರಿಯನು ತಣಿಸಿ ಮಣಿಸುವನು ಶ್ರಾವಣ
ಮತ್ತ ವಿಭ್ರಾಂತರನು ದಣಿಸುವನು ಶ್ರಾವಣ  

(೧೩-ಆಗಸ್ಟ್-೨೦೧೩)