ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday, 21 August 2013

ಶ್ರಾವಣ - ವರ್ಷನೂತನ

ಶ್ರಾವಣದ ಧಾರೆಯಲಿ ಮಾಧವಗೆ ಬರಿ ತಾಪ
ರಾಧೆಗಾದರೊ ಸೋನೆ ಸುರಿವಬೇಗೆ
ಹಾಡಿ ಹರಿಯುವ ನದಿಗೆ ಕೆನ್ನೀರು ಉಕ್ಕುಕ್ಕಿ
ಕಡಲ ಸೇರುವ ತವಕ ದೌಡು ನಡಿಗೆ  

ಭೋರ್ಗರೆವ ಮೊರೆತದಲಿ ಹುದುಗಿ ಮುರಳಿಯ ಗಾನ
ಒಲವ ಹಸುಕರುಗಳಿಗೆ ಮರೆತ ಮೇವು
ಮುಮ್ಮೇಳದಲ್ಲಿರಲು ಹನಿಹನಿಗಳದೆ ಮಂದ್ರ
ಬಿದುರುಗೊಳವೆಯು ದೇಹ ಉಸಿರೆ ಕಾವು  

ಆಕಾಶರಾಯನಿಗೆ ಹಗುರವಾಗುವ ಭಾವ
ನಾವುನೀವೆಲ್ಲರಿಗೆ ಬೆಳೆವ ಸಮಯ
ನೆಲಸೇರಿ ಸಾಗರಕೆ ಹರಿವ ಒಮ್ಮನದೋಟ
ಗೋಪಾಲ ಪಾದಗಳ ತೊಳೆವಾಲಯ  

ಹೃದಯದುರಿಯನು ತಣಿಸಿ ಮಣಿಸುವನು ಶ್ರಾವಣ
ಮತ್ತ ವಿಭ್ರಾಂತರನು ದಣಿಸುವನು ಶ್ರಾವಣ  

(೧೩-ಆಗಸ್ಟ್-೨೦೧೩)

Wednesday, 14 August 2013

ಜಗದ ಪರಿ


ಮುದುಡದಿರು ಮನವೆ!
ಮುದುಡಿದರೆ ಕಸವೆಂದು ಎಸೆಯುವುದು ನಿನ್ನ

ಬಾಡದಿರು ಮೊಗವೆ!
ಬಾಡಿದರೆ ಬೇಡೆಂದು ಬಿಸುಟುವುದು ನಿನ್ನ

ಕೊರಗದಿರು ಎದೆಯೆ!
ಕೊರಗಿದರೆ ಕೇಡೆಂದು ಕೆರೆಯುವುದು ನಿನ್ನ

ಮರುಗದಿರು ಮಡಿಲೆ!
ಮರುಗಿದರೆ ಹೋಗೆಂದು ಕಳಿಸುವುದು ನಿನ್ನ

ಅಳಲದಿರು ಅರಿವೆ!
ಅಳಲಿದರೆ ಅಳಿಯೆಂದು ಹೊಸಕುವುದು ನಿನ್ನ

ನೋಯದಿರು ಒಲವೆ!
ನೋಯುತಿರೆ ಬೇಯೆಂದು ಉರಿಸುವುದು ನಿನ್ನ

ಅಂಜದಿರು ಛಲವೆ!
ಅಂಜಿದರೆ ನಲುಗೆಂದು ಅಲುಗಿಪುದು ನಿನ್ನ

ಬೆಚ್ಚದಿರು ಬಲವೆ!
ಬೆಚ್ಚಿದರೆ ಬೀಳೆಂದು ಬೆದರಿಪುದು ನಿನ್ನ

ಬೀಳದಿರು ಮತಿಯೆ!
ಬೀಳುತಿರೆ ಕೊಳೆಯೆಂದು ಕೊಚ್ಚುವುದು ನಿನ್ನ

ಸೋಲದಿರು ಧೃತಿಯೆ!
ಸೋಲುತಿರೆ ಸಾಯೆಂದು ಸೋಸುವುದು ನಿನ್ನ

ಪ್ರೀತಿಸುವ ಜೀವ,
ಮುನ್ನೋಟದೀವಟಿಗೆ ಹಿಡಿದು ನಡೆಸೆನ್ನ

ಉಚ್ಚರದ ಭಾವ,
ಮೆಚ್ಚಾಗುವಂದದಲಿ ಎಚ್ಚರಿಸು ಎನ್ನ

(೧-ಆಗಸ್ಟ್-೨೦೧೩)