ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 1 October 2009

ವಾಯುವಿಹಾರ

ಬರಹೇಳಿದ್ದ ದುಷ್ಯಂತ.
ಮರದ ಕೆಳಗೆ ಕಾದಳು,
ಕಾದೇ ಕಾದಳು ಇವಳು.
ಬೆರಳಲ್ಲಿ ಉಂಗುರ,
ಬಾನಲ್ಲಿ ಚಂದಿರ.

ರಥವಿಲ್ಲದ ಕುದುರೆಯಲ್ಲಿ
ಟಕಟಕಿಸುತ್ತ ಬಂದ ನಲ್ಲ
ಹತ್ತು- ಎಂದ.
ಹಿಂದೆ-ಮುಂದೆ ನೋಡದೆ,
ಕಣ್ವ-ಗೌತಮಿಯರ ನೆನೆಯದೆ,
ಬೆನ್ನಿಗಂಟಿದಳು,
ಕಣ್ಣು ಮುಚ್ಚಿದಳು.

ಗಾಳಿಯ ಸುಗಂಧ ಇವನದೇ.
ಕುದುರೆಯ ವೇಗ ಮನಸಿನದೇ.

ಎಚ್ಚರಾದಾಗ-
ಉಂಗುರ ಮೀನಿನೊಳಗಿತ್ತು.
ಮುದಿಕುದುರೆ ಕುಂಟುತ್ತಿತ್ತು.
ಮರದ ಒಂಟಿ ನೆರಳು
ಕಾದು ಕಾದು... ಕರಟಿತ್ತು.
ಭರತ ನಗುತ್ತಿದ್ದ.
(೧೬-ಸೆಪ್ಟೆಂಬರ್-೨೦೦೬)

Saturday, 26 September 2009

ಕಾಯೇ ಸರಸ್ವತಿ

ಕಾಯೇ ನಮ್ಮನು ಸರಸ್ವತಿ
ಕತ್ತಲ ಹರಿಸಿ ಕೊಡು ನೀ ಸನ್ಮತಿ ||ಪ||

ಹಂಸ ವಾಹಿನಿ, ಸರಸಿಜ ಮೋಹಿನಿ
ಮನಸಿಜನಗ್ರಜನರಸೀ |
ಅಕ್ಷರ ಜನನಿ, ಜ್ಞಾನಪ್ರದಾಯಿನಿ
ಮಂದಹಾಸಿ ಮೃದುಭಾಷೀ ||ಚರಣ-೧||

ಶ್ವೇತವಸನೇ ಶುಕ್ಲಾಭರಣೇ
ಚಂದ್ರ ಕಾಂತಿ ಪ್ರಭಾಸೇ |
ವೀಣಾ ಸ್ಫಟಿಕಮಣಿ ಪುಸ್ತಕ ಪಾಣೀ
ಕಾವ್ಯಗಾಯನ ಪ್ರೀತೇ ||ಚರಣ-೨||

ಹರಸೇ ತಾಯೇ, ಅಂಬುಜಾಸನೇ
ಅಂಬುಜದಳ ನೇತ್ರೇ |
ಸಲಹೇ ತಾಯೇ, ಮಂಗಳದಾಯಿನೀ
ಅಜಪ್ರಿಯೇ ಶುಭ ಗಾತ್ರೇ ||ಚರಣ-೩||
(೫-ಸೆಪ್ಟೆಂಬರ್-೨೦೦೫ - ೪-ಜೂನ್-೨೦೦೮)