ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 27 July 2008

ಆರೋಗ್ಯ ಪೂಜೆ

(ದಾಸರ ಕ್ಷಮೆ ಕೋರಿ, `ಅತ್ಯಾಧುನಿಕ'ರ ಗಮನಕ್ಕೆ... ಅಣಕವಾಡು)

ಊಟಕ್ಕೆ ಬನ್ನಿರಿ ನೀವು; -ನಿಮ್ಮ
ಲ್ಯಾಪ್-ಟಾಪು, ಸೆಲ್-ಫೋನುಗಳನಾಚೆಗಿಟ್ಟು --ಊಟಕ್ಕೆ
ಪಿ.ಡಿ.ಎ., ಬ್ಲ್ಯಾಕ್-ಬೆರ್ರಿ ಜೊತೆಗೆ, -ತಮ್ಮ
ಬೀಪರ್ರು, ಬ್ಲೂಟೂಥುಗಳ ಮೇಜಲಿಟ್ಟು --ಊಟಕ್ಕೆ

ಒಂದೇ ಮನೆಯೊಳಗಿದ್ದೂ, -ಮಂದಿ
ಒಬ್ಬೊಬ್ಬರೊಂದೊಂದು ದಿಕ್ಕನ್ನು ಹೊದ್ದು
ಅರೆನಿದ್ರೆ ಹೊತ್ತಲ್ಲಿ ಎದ್ದು, -ಬಂದು
ಮಬ್ಬಲ್ಲಿ ತಿಂದರೆ ಆರೋಗ್ಯಕೆ ಗುದ್ದು --ಊಟಕ್ಕೆ

ಟೀವಿಯ ಮುಂದಿರಬೇಡಿ, -ಒಮ್ಮೆ
ಅಡುಗೆ ಮನೆಯಲ್ಲೊಂದು ಮಣೆ ಹಾಕಿ ಕೂಡಿ
ನಗು ನಗುತಾ ಊಟವ ಮಾಡಿ, -ನಿಮ್ಮ
ಒಡನಾಡಿಗಳ ಜೊತೆಗೆ ಹರಟೆ ಮಾತಾಡಿ --ಊಟಕ್ಕೆ

ಸಿಹಿ-ಖಾರ, ಹುಳಿ-ಉಪ್ಪು ಇರಲಿ, -ಹಾಗೇ
ಶುಚಿಯ ಕಡೆಗೂ ನಿಮ್ಮ ಒಮ್ಮನವು ಹೊರಳಿ
ಮಾಡಿರುವ ಅಡುಗೆಯನು ಹೊಗಳಿ, -ತೇಗಿ
ರುಚಿ ಹಣ್ಣ ಸವಿಯುತ್ತ ಅಂಗಳಕೆ ತೆರಳಿ --ಊಟಕ್ಕೆ

ಆಧುನಿಕ ಸೌಕರ್ಯ ಬೇಕು, -ನಮಗೆ
ಬಾಳುವೆಯ ನಡೆಸಲು ಕೆಲಸವಿರಬೇಕು
ಆಧಾರವೀ ದೇಹ ಎದಕು, -ಅದನೆ
ಕಡೆಗಣಿಸಿ ಬದುಕಿದರೆ ನೋವುಣ್ಣಬೇಕು --ಊಟಕ್ಕೆ

ಹೊತ್ತು ಹೊತ್ತಿಗೆ ಊಟ-ತಿಂಡಿ, -ಹೆಚ್ಚು
ಹಣ್ಣು ತರಕಾರಿಗಳ ಮಿಶ್ರಣದ ಮೋಡಿ
ಬಲುಕಾಲ ಆರೋಗ್ಯ ನೋಡಿ, -ಮೆಚ್ಚು
ತನು-ದೇವರ ಸೇವೆ ಈ ರೀತಿ ಮಾಡಿ --ಊಟಕ್ಕೆ
(೦೨-ಜೂನ್-೨೦೦೮ ರಾತ್ರೆ ೧೦:೩೦)

Sunday, 20 July 2008

ಹೊಸ ಬಾಳು

(ಮನೋ ಮೂರ್ತಿಯವರ ಸಂಗೀತ ನಿರ್ದೇಶನದ "ಭಾವ ಮಾಲಿಕಾ" ಧ್ವನಿಸುರುಳಿಗಾಗಿ ಪದ ಜೋಡಣೆ.
ಹಾಡಿದವರು: ಕೆ.ಎಸ್. ಸುರೇಖಾ.)

ನಂದನದಂತಿದೆ ಈ ಮನೆ ಸ್ವರ್ಗ ಸುಳ್ಳಲ್ಲ
ಸುಂದರವು ನಿನ್ನಿಂದ ನೋಟ ಎಲ್ಲ
ಬಾನಿಗೆ ಚಂದ್ರನ ಚಂದ್ರಿಕೆ ಬಾಳಿಗೆ ಪ್ರೇಮದ ಮುದ್ರಿಕೆ
ನಲ್ಲ... ಇಂದು ನಿನ್ನಿಂದ ನಾ ಕಂಡೆ ಬಾಳಿಗೆ ಅರ್ಥ.

ಮದುವೆಯ ಬಂಧನ ಪವಿತ್ರ,
ಈ ಜೀವದ ದೇವ ನೀನು
ನಿನ್ನೀ ಪ್ರೇಮದ ಹಂದರ...
ಇದು, ನಿನ್ನನು ಪೂಜಿಪ ಮಂದಿರ
ನಿನ್ನ ನನ್ನ ನಂಟು, ಆ ಬ್ರಹ್ಮನು ಹಾಕಿದ ಗಂಟಿದು...
ಭಾವ ಹೊನಲಾಗಿದೆ, ಒಲವು ಒಸರಾಗುತಿದೆ,
ನನ್ನ ಕವಿತೆ ನಿನ್ನಿಂದಲೇನೇ, ನನ್ನಾಣೆ...
ನಲ್ಲ... ನಿನ್ನಿಂದ ನಾ ಕಂಡೆ ಬಾಳಿಗೆ ಅರ್ಥ.

ಕೇಳಿದೋ ಕೋಗಿಲೆ ಹಾಡನು
ಅದು ಹೇಳಿದೆ ಪ್ರೇಮಿಯ ಮಾತನು
ಚೈತ್ರ ಬಂದ ವೇಳೆ...
ಆ ಚಿಗುರೆಲೆ ಹೊರಳಿದವಾಗಲೇ
ಮೊಗ್ಗು ಹೂವಾಗಿದೆ, ಹೂವು ಹಣ್ಣಾಗುತಿದೆ
ಹಿಗ್ಗಿನಿಂದ ಮುದ್ದಾದ ಕಾವ್ಯ ನಾ ತಂದೆ...
ನಲ್ಲ... ನಿನ್ನಿಂದ ನಾ ಕಂಡೆ ಬಾಳಿಗೆ ಅರ್ಥ.
(ಜುಲೈ-೧೯೯೫)