ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 19 May 2008

ಮಳೆ

Wednesday, April 4, 2007

ಹನಿ ಹನಿಯು ಹನಿ ಹನಿದು ಸ್ಫಟಿಕ ಮಣಿ ಮಾಲೆ
ಇಣುಕಿ ನೋಡಿದರಲ್ಲಿ ಮುತ್ತು ಮರ ಸಾಲೆ!
ಚಿಲಿಪಿಲಿಯ ದನಿಯಡಗಿ ಚಿಟಿಪಿಟಿಯ ಸದ್ದು
ಉಷ್ಣವಡರಿದ ಭುವಿಗೆ ನಭ ಕೊಡುವ ಮದ್ದು

ಮತ್ತು ಬರಿಸುವ ಹೊತ್ತು ಬಿತ್ತು ಮಳೆ ಮುತ್ತು
ಚಿಣಮಿಣನೆ ಹೊಳೆದಿತ್ತು ಭೂದೇವಿ ನತ್ತು
ಅಬ್ಬರದ ಸಿಡಿಲ ದನಿ, ಬೊಬ್ಬಿಡುವ ಬಾನು
ಹೊಂಚುಹಾಕಿತು ಒಮ್ಮೆ ಬಣ್ಣದ ಕಮಾನು

ಲೋಕವಿದೆ ನೋಡೆಂದು ಹಣಕಿತ್ತು ಬೆಳಕು
ದಿಟ್ಟನೆದೆ ನಡುಗಿಸಲು ಮಿಂಚಿತ್ತು ಛಳಕು
ನಕ್ಕಿತ್ತು ಧರೆ ತಾನು ಮಿಂದೆನಿಂದೆಂದು
ಉಕ್ಕಿತ್ತು ಸಾಗರದ ಎದೆಯುಬ್ಬಿ ಬಂದು

ಹನಿಹನಿಯು ಅಮೃತವು, ಹನಿ-ಸೋನೆ-ಧಾರೆ
ಜೀವ ಉಸಿರಾಡಿಹುದು, ರವಿ-ನೀರೆ ಸೇರೆ
(ಜನವರಿ-೧೯೯೮)

ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:00 PM
Labels:

12 ಪತ್ರೋತ್ತರ:
Shiv said...
ಸುಪ್ತದೀಪ್ತಿಯವರೇ,
ನಿಮ್ಮ ಬ್ಲಾಗ್‍ನಲ್ಲೂ ಮಳೆ ಬರ್ತಾ ಇದೆ :)>ಹೊಂಚಿ ಹಾಕಿತು ಕಮಾನು ಚೆನ್ನಾಗಿ ಅನಿಸ್ತು..
ರವಿ-ನೀರೆ ಸೇರೆ? ತಿಳಿಲಿಲ್ಲ?
April 4, 2007 11:35 PM

suptadeepti said...
@ಶಿವು: ಎಲ್ಲ ಕಡೆ ಮಳೆ ಬರುವಾಗ ನಾನೊಬ್ಳೇ ಹೇಗೆ ನೆನೆಯದೆ ಇರಲಿ? ಅದೂ ಮಳೆ ಇಷ್ಟವಾಗಿರುವಾಗ!! ಅದರಲ್ಲೂ ಇದು ಅಂತಿಂಥಾ ಮಳೆಯಲ್ಲ; ಕರಾವಳಿಯ ಮುಂಗಾರು ಮಳೆ, ಬಿರು ಮಳೆ. ಸಿಡಿಲು, ಗುಡುಗುಗಳ ಅಬ್ಬರದ ಧೋ ಧೋ ಮಳೆ. ಬೆಚ್ಚಗೆ ರಗ್ ಹೊದ್ದು ಕೂತು, ಕಿಟಿಕಿಯಿಂದ ಆಚೆ ನೋಡಿ ಆನಂದಿಸಿ.
"ರವಿ-ನೇರೆ ಸೇರೆ" = ರವಿ (ಸೂರ್ಯ, ಬೆಳಕು, ಗಂಡು) ನೀರೆ (ನೀರು, ಹೆಣ್ಣು) ಸೇರಿದಾಗಲೇ ಜೀವ (ಜಗತ್ತು) ಉಸಿರಾಡುವುದು.
April 5, 2007 12:11 AM

poornima said...
ಮಳೆಯಷ್ಟೇ ಮೋಹಕ ನಿಮ್ಮ ಕವನ.
April 5, 2007 9:12 AM

poornima said...
ಜ್ಯೋತಿಯವರೇ, ಅಂದ ಹಾಗೆ ಯಾಕೋ ಇಂದು ತುಳಸೀವನಕ್ಕೆ ಹೋಗಲು ಆಗುತ್ತಿಲ್ಲವಲ್ಲ !
April 5, 2007 9:17 AM

suptadeepti said...
ಹೌದು ಪೂರ್ಣಿಮಾ, ನಿನ್ನೆ ಸಂಜೆಯಿಂದಲೇ ವನದಲ್ಲಿ ತೊಂದರೆಯಿದೆ. ಏನೋ ಗೊತ್ತಿಲ್ಲ. ಇವತ್ತು ತ್ರಿವೇಣಿಗೆ ಫೋನ್ ಮಾಡಿ ನೋಡ್ತೇನೆ.
April 5, 2007 10:17 AM

Vijendra ( ವಿಜೇಂದ್ರ ರಾವ್ ) said...
ಪುಣೆ ಕುದಿತ ಇದೆ. ಆ ಭಗವಂತ ಯಾವಾಗ ಅಮೃತಧಾರೆ ಹರಿಸ್ತಾನೊ ಗೊತ್ತಿಲ್ಲ ....."ಅಬ್ಬರದ ಸಿಡಿಲ ದನಿ, ಬೊಬ್ಬಿಡುವ ಬಾನು"ನಿಮ್ಮ ವರ್ಣನೆ ಸರಿಯಾಗಿ ಕಾರ್ಕಳದ ಮಳೆಗೆ ಹೋಲಿಕೆಯಾಗ್ತಾ ಉಂಟು !!ಕವನ Superb!!
April 5, 2007 10:35 PM

suptadeepti said...
ಧನ್ಯವಾದ ವಿಜ್. ಪುಣೆ ಏನು, ಊರಲ್ಲೂ ವಿಪರೀತ ಸೆಖೆಯಂತೆ. ಅಲ್ಲಿಗೂ ಈ ವರುಣದೇವನನ್ನು ಕಳಿಸುವನಾ, ಹೇಗೆ?
ಈ ಕವನ ನಾನು ಬರೆದದ್ದು, '೯೮ರ ಜನವರಿಯಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಎಲ್-ನೀನ್ಯೋ ಗಲಾಟೆ ಎಬ್ಬಿಸಿದಾಗ. ಆದರೆ ನಮ್ಮೂರಿನ ಮಳೆಗಾಲಕ್ಕೆ ಇದು ಪ್ರತೀ ವರ್ಷವೂ ಪ್ರಸ್ತುತ.
April 5, 2007 10:45 PM

srinivas said...
ನಿಮ್ಮ ’ಹೀಗೊಂದು ಯೋಚನೆ’ಗೆ ನನ್ನ ಕೆಲವು ಪದಗಳು
ನಾನು ಯಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ? ನನ್ನನ್ನು ನಾನು ಹೇಗೆ ಗುರುತಿಸಿದೆ? ಇದೇನು ಕನಸೇ? ಕನಸಿನಿಂದ ಆಚೆ ಬರುವವರೆವಿಗೆ ಇದು ಕನಸೆಂದು ತಿಳಿಯದು - ಒಮ್ಮೆ ಆಚೆ ಬಂದ ಮೇಲೆ ಮರಳಿ ಅದೇ ಕನಸಿಗೆ ಹೋಗಲಾಗದು - ಎನ್ನುವರಲ್ಲ - ಇದೇನು ಸತ್ಯವೇ? ಸತ್ಯವೆಂದು ಸಾಬೀತು ಪಡಿಸಲು, ಸುಳ್ಳು ಯಾವುದು? ನಾ ಕಾಣುತಿರುವುದೆಲ್ಲಾ ಕೈಗೆ ಎಟಕುವುದೇ? ಅಥವಾ ಅವಿರುವುದು ಕನ್ನಡಿಯೊಳಗೆಯಾ?
April 9, 2007 8:47 PM

parijata said...
ಸುಪ್ತದೀಪ್ತಿಯವರೆ, ಮಳೆಯ ವರ್ಣನೆ ಬಹಳ ಚೆನ್ನಾಗಿ ಮಾಡಿದ್ದೀರಿ. ಸಿಡಿಲ ದನಿಯ ಅಬ್ಬರ, ಬಾನಿನ ಬೊಬ್ಬೆ ಎಂದು ಕೇಳುವುದೋ ಎಂದು ಹಾತೊರೆಯುತ್ತಿದ್ದೇವೆ. ನಿಮ್ಮ ಪದ್ಯ ಓದಿ, ಮಳೆಯಲ್ಲಿ ನೆನೆದಷ್ಟೇ ಸಂತೋಷವಾಯಿತು.
April 9, 2007 9:16 PM
suptadeepti said...
@ಶ್ರೀನಿವಾಸ್: ನಿಮ್ಮ "ಅಂತರ್ಧ್ಯಾನ"ದ ಪದಗಳಿಗೆ ವಂದನೆಗಳು. ಇಂತಹ introspection ಮಾಡಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದೆಂದು ನನ್ನ ನಂಬಿಕೆ, ನೀವೇನಂತೀರಿ?
@ಪಾರಿಜಾತ: ಮೆಚ್ಚುಗೆಗೆ ವಂದನೆಗಳು. ನಾವು ಕರೆದಾಗಲೆಲ್ಲ ಬರಲು ವರುಣ ನಮ್ಮವನಲ್ಲವಲ್ಲ!! ಅವನ ಮನಕ್ಕೆ ತೋಚಿದಾಗ ಬರುವವನು; ಅವನೇ ಕೃಪೆಮಾಡಬೇಕು, ನಾವು ನೆನೆಯಬೇಕು. ಸೇರಿ ಕರೆಯೋಣ, ಬಂದಾನು.
April 9, 2007 10:29 PM

ಮನಸ್ವಿನಿ said...
ಮಳೆ!!!! ಮಳೆ ಅಂದ್ರೆ ನನಗೆ ತುಂಬಾ ಇಷ್ಟ :)
ಹಾಡು ತುಂಬಾ ಚೆನ್ನಾಗಿದೆ
ಹನಿ ಹನಿಯು ಹನಿ ಹನಿದು ಸ್ಫಟಿಕ ಮಣಿ ಮಾಲೆ
ಇಣುಕಿ ನೋಡಿದರಲ್ಲಿ ಮುತ್ತು ಮರ ಸಾಲೆ!
ಶಿರಸಿ ನೆನಪಾಗ್ತ ಇದೆ
April 11, 2007 7:50 PM

suptadeepti said...
@ಮನಸ್ವಿನಿ: ಧನ್ಯವಾದ.
ಮಳೆ ಯಾರಿಗಿಷ್ಟವಿಲ್ಲ ಅಂತ ಮತ ಕೇಳಿದರೆ ಎಷ್ಟು ಸಿಗಬಹುದು ಅನ್ನುವ ಯೋಚನೆ ಹತ್ತಿದೆ!
April 11, 2007 9:25 PM

ನಮನದ ಹನಿಗಳು

Tuesday, April 3, 2007

ಹಿರಿಯ ಚೇತನವೊಂದು ನಮ್ಮನ್ನಗಲಿದೆ. ನನಗೆ ಕೆಲವು ಕ್ಷಣಗಳ ಪರಿಚಯವೂ ಇಲ್ಲದಿದ್ದರೂ ಅತಿ ಹತ್ತಿರದ ಪರಿಚಿತ ಭಾವ, ಗೌರವ ಅವರಲ್ಲಿ. ನಿರ್ಗಮನದ ಸುದ್ದಿ ಕೇಳಿ ಎರಡು ದಿನಗಳಾದರೂ ಮನಸ್ಸು ಸ್ಥಿಮಿತಕ್ಕೆ ಬಂದಿಲ್ಲ. ಜೀವನವೇ ಹಾಗೆ.
ಸಂದ ಆತ್ಮಕ್ಕೆ ಶಾಂತಿ ಕೋರುತ್ತಾ....

(೧)ಬಾಳು ಬಣ್ಣದ ನೋಟ, ತಂಗಾಳಿ ಹೂದೋಟ,
ಕನವರಿಕೆ, ಸಲ್ಲಾಪ, ಬೇಟದಾಟ;
ಮುಂಜಾನೆ ಮಮತೆಯಲಿ, ನಡುಹಗಲು ಮತ್ತಿನಲಿ,
ಮತ್ತೆ ಮುಸ್ಸಂಜೆಯಲಿ ನೆನಪಿನೂಟ.

(೨)ಅಳುವೊಂದು ನೋವಿಗೆ, ನಗುವೊಂದು ಭಾವಕ್ಕೆ,
ಏರಿಳಿತದಲೆಗಳಲಿ ಉಯ್ಯಾಲೆ ಜೀವ;
ಮನದಲ್ಲಿ ಬೆಳಕಿಲ್ಲವಾದಲ್ಲಿ ಬದುಕಿಲ್ಲ,
ಮಂದಿರದ ಬಂಧಿಯಿದು ಆಂತರ್ಯ ಭಾವ.

(೩)ಸಂದವರು ಎದ್ದಂತೆ ನಡೆದು ಹೋದರೆ ಒಳಿತು,
ಇದ್ದವರ ಪಾಡನ್ನು ಕೇಳು, ಓ ಪ್ರಭುವೆ;
ಕಳೆದುದೆಲ್ಲವು ಸುದಿನ, ಬರುವುದನು ಕಾಣೆವು,
ಇರುಳು ಕಳೆದಹನಿಯನು ನಿಶೆ ಅಟ್ಟಿ ಬರದೆ?

(೪)ಸಾವು ಕಾಣದ ಮನೆಯ ಸಾಸಿವೆಯ ಬೇಕೆಂದ
ಗೌತಮಿಗೆ ನೀನಿತ್ತೆ ದಾರಿದೀಪವನು;
ನಿನ್ನನರಸುವ ಮನಕೆ ಹರಸಿ ಹರಿಸೈ ಶಾಂತಿ,
ನೋವಿರದ ಸಾವಿನಲಿ ಮುಗಿಸು ಬಾಳ್ವೆಯನು.
(೨೪-ಫೆಬ್ರವರಿ-೨೦೦೩)

ಅಕ್ಷರ: ಸುಪ್ತದೀಪ್ತಿ suptadeepti ಕಾಲ: 5:34 PM
Labels: ,

7 ಪತ್ರೋತ್ತರ:
mala rao said...
"ಸಂದವರು ಎದ್ದಂತೆ ನಡೆದು ಹೋದರೆ ಒಳಿತು,
ಇದ್ದವರ ಪಾಡನ್ನು ಕೇಳು, ಓ ಪ್ರಭುವೆ"
ಕವನ ಓದಿ ಕಣ್ತುಂಬಿ ಬಂತು... ಇದ್ದವರ ಪಾಡನ್ನು ಕೇಳುವವನು ಸಮಾಧಾನ ಕೊಡಲೀ ಎಂಬುದಷ್ಟೇ ನಮಗೆ ಹೇಳಲುಳಿದಿರುವ ಮಾತು...ಇಲ್ಲಾ... ಮಾತುಗಳೂ ಮೂಕ ಮೂಕ... ಎದ್ದಂತೆ ನಡೆದು ಹೋದವರೇ ಪುಣ್ಯವಂತರು....
April 4, 2007 2:11 AM

sritri said...
" ನೋವಿರದ ಸಾವಿನಲಿ ಮುಗಿಸು ಬಾಳ್ವೆಯನು" ಎಂಬ ಸಾಲು - " Anaayaasena Maranam, Vinaa Dainyena Jeevanam" ಎಂಬ ಸಂಸ್ಕೃತ ಶ್ಲೋಕದ ಸಂಕ್ಷಿಪ್ತ ಭಾವಾನುವಾದಂತೆ, ಸುಂದರವಾಗಿ ಮೂಡಿ ಬಂದಿದೆ!!
ಅಗಲಿದ ವ್ಯಕ್ತಿ ಯಾರೆಂದು ತಿಳಿಸಿ, (ತಿಳಿದು) ನಂತರ ಅವರ ಆತ್ಮಕ್ಕೆ ಶಾಂತಿ ಕೋರುವುದು ಹೆಚ್ಚು ಗೌರವಪೂರ್ಣವೆನ್ನಿಸುತ್ತದೆ.
April 4, 2007 8:44 AM

suptadeepti said...
ಮಾಲಾ, ಶ್ರೀತ್ರೀ, ವಂದನೆಗಳು.
@ಮಾಲಾ: ಹೌದು, ನಡೆದು ಹೋದವರು ಪುಣ್ಯವಂತರು. ಆ ಪುಣ್ಯ ಎಲ್ಲರಿಗೂ ಸಿಗದು.
@ಶ್ರೀತ್ರೀ: ಸಂದವರು ನಡೆದರು. ಯಾರೆಂಬ ಗುರುತು ಈ ಭೌತಿಕದಲ್ಲಿ. ಆ ಆತ್ಮಕ್ಕೆ ಅದ್ಯಾವುದರ ಪರಿವೆ ಇಲ್ಲದಿರುವ ಒಂದು ತಾರ್ಕಿಕ ನೆಲೆಯಲ್ಲಿ ವ್ಯಕ್ತಿಯ ಹೆಸರು, ಗುರುತು ಬರೆದಿಲ್ಲ. ಗೌರವ ಮನದ ಭಾವ, ಪದಗಳಲ್ಲಿ ಮಾತ್ರ ಕಟ್ಟಿಟ್ಟದ್ದಲ್ಲ. ಕ್ಷಮಿಸು.
April 4, 2007 11:23 AM

Satish said...
ನೀವು ಇದನ್ನು ೨೦೦೩ ರಲ್ಲಿ ಬರೆದಿದ್ದು, ಯಾರಪ್ಪಾ ಆ ದೊಡ್ಡ ಮನುಷ್ಯರು ಎಂದು ತಲೆ ಕೆರೆದುಕೊಂಡು ಯಾರ ಹೆಸರೂ ನೆನಪಿಗೆ ಬರಲಿಲ್ಲ! ನನಗೆ "ಮನದಲ್ಲಿ ಬೆಳಕಿಲ್ಲವಾದಲ್ಲಿ ಬದುಕಿಲ್ಲ" ಎಂಬ ಸಾಲು ಇಷ್ಟವಾಯ್ತು, ಆದರೂ ನೀವು "ಬದುಕು" ಅನ್ನೋ ಪದ ಬಳಸಿದ್ದಕ್ಕೆ 'ಅಂತರಂಗ'ಕ್ಕೆ ಕಾಪಿರೈಟ್ ಕೊಡಬೇಕಾಗಿತ್ತು, ಯಾಕಂದ್ರೆ ಅದು ನನ್ನ ಫೇವರೈಟ್ ಪದ. I kind of miss kaaloo, ಅವನಿದ್ದಿದ್ರೆ ಕಾಮೆಂಟು ಬಿಡೋದಕ್ಕೆ ಒಂದು ಹೊಸ ಹುರುಪು ಬಂದಿರೋದು!
April 4, 2007 4:01 PM

suptadeepti said...
@ಸತೀಶ್: "ನೀವು ಇದನ್ನು ೨೦೦೩ ರಲ್ಲಿ ಬರೆದಿದ್ದು, ಯಾರಪ್ಪಾ ಆ ದೊಡ್ಡ ಮನುಷ್ಯರು ಎಂದು ತಲೆ ಕೆರೆದುಕೊಂಡು ಯಾರ ಹೆಸರೂ ನೆನಪಿಗೆ ಬರಲಿಲ್ಲ!"-- ಅಂದು, ೨೦೦೩ರಲ್ಲಿ ಬರೆದಾಗ ಯಾವುದೇ ದೊಡ್ಡ ಮನುಷ್ಯರು ಈ ಹನಿಗಳಿಗೆ ಪಾತ್ರರಾಗಿರಲಿಲ್ಲ. ಮನದೊಳಗಿನಿಂದ ಒದ್ದುಕೊಂಡು ಬಂದ ಭಾವಗಳನ್ನು ಬರೆದದ್ದು ಅಂದು, ಅವುಗಳಿಗೆ ಬ್ಲಾಗ್'ನಲ್ಲಿ ಜಾಗ ನೀಡಿದ್ದು ಈಗ, ಸಕಾರಣವಾಗಿ.
"ಬದುಕು" ಎಲ್ಲರ ಪದ. ಅದಕ್ಕೂ ನೀವು ಕಾಪಿರೈಟ್ ಕೇಳುವ ಹಾಗಿದ್ದರೆ ನೀವು ಆ ಹಣದಲ್ಲಿ ಭೂಗೋಳವನ್ನೇ ಕೊಳ್ಳಬಹುದಿತ್ತು! ಹಾಗೇನಾದ್ರೂ ಆದ್ರೆ, ನಮಗೂ ಒಂದಿಷ್ಟು ಭೂಮಿ ಬೆಂಗಳೂರಲ್ಲಿ ದಾನ ಮಾಡೋ ದಯೆಯಿರಲಿ ಅನ್ನಲೆ?
April 4, 2007 4:27 PM

Shiv said...
ಮುಸ್ಸಂಜೆಯಲಿ ನೆನಪಿನೂಟ.. ಎಂತಹ ಕಟುಸತ್ಯ.. ಲೌಕಿಕ ಜಗತ್ತಿನಲ್ಲಿ ಇಷ್ಟೆಲ್ಲಾ ಮಿಂದ ಮೇಲೆ ಕೊನೆಗೂ ಸಾವೆಂಬ ಸತ್ಯ ಗೊತ್ತಿದ್ದು ಗೊತ್ತಿದ್ದು ಯಾಕೇ ದುಃಖ ತರುತ್ತೆ.. ನೋವಿರದ ಸಾವಿನಲಿ ಮುಗಿಸು ಬಾಳ್ವೆಯನು..ಇದರ ಬಗ್ಗೆ ಎರಡು ಮಾತಿಲ್ಲ
April 4, 2007 11:32 PM

Satish said...
ಇಲ್ಲಿ ಬೇಕಾದರೆ ಒಂದು ೬೦-೪೦ ಸೈಟ್ ಕೊಡುವ ಧೈರ್ಯ ಮಾಡಬಹುದು, ಬೆಂಗಳೂರಿನ ಲೆಕ್ಕಾಚಾರದಲ್ಲಿ ದುರ್ಯೋಧನ ಹೇಳಿದ ಹಾಗೆ ಒಂದು ಸೂಜಿ ಮೊನೆಯಷ್ಟು ಜಾಗೆಯನ್ನೂ ದಾನ ಮಾಡುವುದು ಹಾಗಿರಲಿ, ಕೊಂಡು ಉಳಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ಬಂದಿದೆಯಂತೆ! :-)
April 5, 2007 1:47 AM